Homeಅಂಕಣಗಳುಮಾನವೀಯ ಭಾರತದ ಸುತ್ತ......

ಮಾನವೀಯ ಭಾರತದ ಸುತ್ತ……

- Advertisement -
- Advertisement -

ಮುದ್ದು ಕಂದಮ್ಮಗಳ ಮೇಲಿನ ಅತ್ಯಾಚಾರ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಅದರ ವೀಡಿಯೋ ಮಾಡುವುದು, ಬಯಲು ಶೌಚ ಮಾಡಿದ ಪುಟ್ಟ ಮಗುವನ್ನು ಕೊಲ್ಲುವುದು, ಆಸ್ಪತ್ರೆಗಳು ಆಂಬುಲೆನ್ಸ್ ನೀಡದೆ ಶವವನ್ನು ಹೊತ್ತುಕೊಂಡು ನಡೆಯುವುದು.. ಇಂಥ ಅಮಾನವೀಯ ಕೃತ್ಯಗಳು ಒಂದೇ ಎರಡೇ? ಇದು ಮಕ್ಕಳಲ್ಲಿ ಯಾವ ರೀತಿಯ ಪರಿಣಾಮವನ್ನುಂಟು ಮಾಡೀತು?

ದ.ಕ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟ ಮೇಲೆ ಮೊದಲ ಬಾರಿಗೆ ಮಂಗಳೂರಿನಲ್ಲಿ ಕಾಣಿಸಿಕೊಂಡಾಗ ನಡೆಸಿದ ಸಂದರ್ಶನದಲ್ಲಿ ‘ರಾಷ್ಟ್ರೀಯವಾದ ಎಂದರೇನು?” ಎಂಬ ಪ್ರಶ್ನೆಯನ್ನು ಕೇಳಲಾಯಿತು.ಅದಕ್ಕವರು ‘ಮಾನವೀಯತೆಯೇ’ ರಾಷ್ಟ್ರೀಯವಾದ ಎಂದರು. ರಕ್ತದ ಹೊಳೆ ಹರಿಸುತ್ತಾ, ಪರಸ್ಪರ ದ್ವೇಷಿಸುತ್ತಾ, ದೇಶದ್ರೋಹಿಗಳನ್ನು ದೇಶಪ್ರೇಮಿಗಳನ್ನು ಅದಲು ಬದಲುಗೊಳಿಸಿ, ಅಲ್ಪ ಸಂಖ್ಯಾತರ ಉಚ್ವಾಸ ನಿಶ್ವಾಸಕ್ಕೂ ದೇಶಪ್ರೇಮದ ಪ್ರಮಾಣಪತ್ರ ತೋರಿಸಬೇಕೆಂಬುವುದೇ ರಾಷ್ಟ್ರೀಯವಾದವೆನ್ನುವ ಈ ವಿಷಮ ಕಾಲಘಟ್ಟದಲ್ಲಿ ‘ಮಾನವೀಯತೆಯೇ’ ರಾಷ್ಟ್ರೀಯವಾದ ಎಂಬುದು ಎಂಥ ಸುಂದರ ಪರಿಕಲ್ಪನೆ.

ದಯೆ, ಮಾನವೀಯತೆಯೆಂಬುದು ಒಂದಕ್ಕೊಂದು ಅಂತರ್‍ಸಂಬಂಧವುಳ್ಳದ್ದು. ಪವಿತ್ರ ಖುರಾನ್ ಹೀಗೆ ಬೋಧಿಸುತ್ತದೆ, “ಭೂಮಿಯಲ್ಲಿರುವವರ ಮೇಲೆ ನೀವು ಕರುಣೆ ತೋರಿರಿ. ಆಕಾಶದಲ್ಲಿರುವವನು ನಿಮ್ಮ ಮೇಲೆ ಕರುಣೆ ತೋರುವನು.” ಇನ್ನೊಂದು ಕಡೆ ಬಸವಣ್ಣನವರು, “ದಯವಿಲ್ಲದ ಧರ್ಮವಾವುದಯ್ಯ ದಯೆಯೇ ಧರ್ಮದ ಮೂಲವಯ್ಯ” ಎನ್ನುತ್ತಾರೆ. ಇನ್ನೊಂದೆಡೆ “ಕುಲ ಕುಲ ಕುಲವೆಂದು ಹೊಡೆದಾಡದಿರಿ. ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?” ಎಂದು ಕನಕದಾಸರು ಪ್ರಶ್ನಿಸುತ್ತಾರೆ. ಬ್ರಾಹ್ಮಣರ ಅಗ್ರಹಾರದಿಂದ ಹೊರನಡೆದ ಕನ್ನಡದ ಆದಿ ಕವಿ ಪಂಪ “ಮಾನವ ಕುಲಂ ತಾನೊಂದೆ ವಲಂ” ಎನ್ನುತ್ತಾರೆ. ಭಾರತದ ಇಂದಿನ ಸ್ಥಿತಿಗತಿಯು ಇವೆಲ್ಲವನ್ನೂ ಅಪಹಾಸ್ಯ ಮಾಡುವಂತಿದೆ.

ಎಲ್ಲಿ ಮಾನವೀಯತೆ ಇರುತ್ತದೆಯೋ ಅಲ್ಲಿ ಸೌಹಾರ್ದ ತನ್ನಿಂತಾನಾಗಿಯೇ ನೆಲೆಗೊಳ್ಳುತ್ತದೆ. ತನ್ಮೂಲಕ ಸುಂದರ ದೇಶ ನಿರ್ಮಾಣವಾಗುತ್ತದೆ. 2014ರ ಡಿಸೆಂಬರ್ ತಿಂಗಳಲ್ಲಿ ನಾನು ನನ್ನವರು ಮತ್ತು ನಮ್ಮ ಆತ್ಮೀಯರಾದ ಭೂಮಿಗೌಡ ಸರ್ ಮತ್ತು ಸಬೀಹಾ ಮೇಡಂ ಜೊತೆಯಾಗಿ ಯಾದಗಿರಿ ಜಿಲ್ಲೆಯ ತಿಂಥಣಿ ಎಂಬ ಪುಟ್ಟ ಹಳ್ಳಿಗೆ ಭೇಟಿ ನೀಡಿದ್ದೆವು. ಕೃಷ್ಣಾ ನದಿಯ ತಟದಲ್ಲಿರುವ ಈ ತಿಂಥಣಿ ಮುಈನುದ್ದೀನ್- ಮೋನಪ್ಪಯ್ಯ ಎಂಬ ಸೂಫಿ-ಶರಣರ ಸಂಗಮ ಕ್ಷೇತ್ರವಿರುವ ಕುಗ್ರಾಮ. ಜಾತಿ ಧರ್ಮದ ಕೆಸರಿನಲ್ಲಿ ಅದ್ದಿ ತೆಗೆಯದ ಶುದ್ಧ, ಮುಗ್ಧ ಮನಸ್ಸುಗಳನ್ನು ನಾನಲ್ಲಿ ಕಂಡೆ. ಅಲ್ಲಿದ್ದ ವ್ಯಕ್ತಿಯೊಬ್ಬರಲ್ಲಿ ತಮಾಷೆಗೆಂದು “ಮಂಗಳೂರಿಗೆ ಬರ್ತೀರೇನ್ರಿ?” ಎಂದು ಕೇಳಿದೆ. ಅದಕ್ಕವರು “ಬರಕ್ಕಿಲ್ಲಾರಿ, ವಾಲದ್ಮನಿ(ಹೊಲದ) ಕೆಲಸ ಐತ್ರಿ” ಅಂದರು.

ಅವರಿಗೆ ಅವರ ದನ-ಕರು-ಆಡು-ಕುರಿ-ದುಡಿಮೆ ಬಿಟ್ಟರೆ ಬೇರೆ ಪ್ರಪಂಚವೊಂದಿದೆಯೆಂದು ಗೊತ್ತಿರದಷ್ಟು ಆ ಹಳ್ಳಿ ಜನ ಮುಗ್ಧರಾಗಿದ್ದರು.

ತಾವಾಯಿತು ತಮ್ಮ ಪಾಡಾಯಿತು ಎಂದು ತಮ್ಮ ಪಾಡಿಗೆ ದುಡಿಯುತ್ತಿದ್ದ ಅಲ್ಲಿನ ಮನುಜರಲ್ಲಿ ನಾನು ಸುಂದರ ಭಾರತವನ್ನು ಕಂಡೆ.

ಮಂಗಳೂರನ್ನು ಕೋಮು ಸೂಕ್ಷ್ಮ ಪ್ರದೇಶ ಎನ್ನುತ್ತಾರೆ. ಅಂಧ ವೃದ್ಧೆ ಮುಸ್ಲಿಮ್ ತಾಯಿಯನ್ನು ಹಿಂದೂ ಯುವಕನೋರ್ವ ಕೈಹಿಡಿದು ರಸ್ತೆ ದಾಟಿಸುವುದನ್ನು ನಾನು ಪ್ರತ್ಯಕ್ಷ ಕಂಡಿದ್ದೇನೆ. ನನ್ನವರ ಕ್ಲಿನಿಕಿಗೆ ನಡೆದಾಡಲು ಸಾಧ್ಯವಾಗದ ವೃದ್ಧ ಹಿಂದೂ ಮಾತೆಯರನ್ನು ಎತ್ತಿಕೊಂಡು ತರುವ ಮುಸ್ಲಿಂ ಆಟೋ ಚಾಲಕರನ್ನೂ ಕಂಡಿದ್ದೇನೆ. ಇಲ್ಲಿ ಮಾನವೀಯ ಮೌಲ್ಯಗಳ ಮೂಲಕ ಸಹೋದರತೆ ಕೈಜೋಡಿಸಿದಾಗ ನನಗೆ ಭಾರತ ಸುಂದರವಾಗಿ ಗೋಚರಿಸಿತು.

ನಾನು ಹೈಸ್ಕೂಲ್ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಪಡೆದದ್ದು ಕನ್ಯಾನ ಸರಕಾರಿ ಕಾಲೇಜಿನಲ್ಲಿ. ನನ್ನೂರು ಕುಳಾಲು ಎಂಬ ಪುಟ್ಟ ಹಳ್ಳಿ. ಈ ಹಳ್ಳಿಯಿಂದ ನಾವು ಸುಮಾರು ಮೂರು ನಾಲ್ಕು ಮೈಲಿ ನಡೆದು ಕಲೆಂಜಿಮಲೆ ಕಾಡನ್ನು ದಾಟಿ ಕನ್ಯಾನ ಸೇರುತ್ತಿದ್ದೆವು. ನನ್ನೊಡನೆ ವಿಭಿನ್ನ ಜಾತಿ ಧರ್ಮಗಳ ಏಳೆಂಟು ಮಂದಿ ಗೆಳೆಯ- ಗೆಳತಿಯರ ದಂಡಿತ್ತು. ನಾವೆಲ್ಲಾ ಸಮಾನ ವಯಸ್ಕರು, ಸಮಾನ ದುಃಖಿಗಳಾಗಿದ್ದೆವು. ಅದರಲ್ಲಿ ಒಬ್ಬಳು ತೀರಾ ಬಡತನದಲ್ಲಿದ್ದಳು. ಮಧ್ಯಾಹ್ನದ ಊಟಕ್ಕೆ ಅವಳಲ್ಲಿ ಏನೂ ಇರುತ್ತಿರಲಿಲ್ಲ. ಆಗೆಲ್ಲಾ ನಾವು ಮಧ್ಯಾಹ್ನವಾಗುತ್ತಲೇ ನಮ್ಮ ಬುತ್ತಿ ತೆರೆದು ಅವಳಿಗೂ ಉಣಿಸುತ್ತಿದ್ದೆವು. ಇದನ್ನು ನಮಗ್ಯಾರೂ ಹೇಳಿಕೊಟ್ಟಿರಲಿಲ್ಲ. ನಾವು ಬೆಳೆದ ಪರಿಸರವೇ ಹಾಗಿತ್ತು. ಈಗ ಅವಳು ಮೊದಲಿನಂತಿಲ್ಲ. ಮಾತಾಡುತ್ತಿಲ್ಲವೆಂದಲ್ಲ ಹಿಂದಿನ ಆ ಆತ್ಮೀಯತೆ ಇಲ್ಲ. ಇದನ್ನು ಕಂಡಾಗ ಇದು ನನ್ನ ಭಾರತವಲ್ಲವೆಂದು ಮನಸ್ಸು ಜೋರಾಗಿ ಚೀರತೊಡಗುತ್ತದೆ.

ಅದೇ ಕನ್ಯಾನದಲ್ಲಿ ನಾರಾಯಣಣ್ಣನೆಂಬ ಒಬ್ಬ ಮುಗ್ಧ ಹಳ್ಳಿಗ ಒಂದು ಪುಟ್ಟ ಕಿರಾಣಿ ಅಂಗಡಿಯಿಟ್ಟುಕೊಂಡಿದ್ದರು. ಅವರಿಗೆ ಕಲೆಂಜಿಮಲೆ ದಾಟಿ ಬರುವ ನಮ್ಮ ಈ ಸೇನೆಯನ್ನು ಕಂಡರೆ ತುಂಬಾ ಅಕ್ಕರೆ. ಅವರು ಶಾಲಾ ಮಕ್ಕಳಿಗಾಗಿ ಕುಡಿಯಲೆಂದು ಮಣ್ಣಿನ ಮಡಕೆಯಲ್ಲಿ ತುಂಬಿಸಿಡುತ್ತಿದ್ದ ನೀರನ್ನು ಕುಡಿಯದೆ, ಒಂದಿಷ್ಟು ಹೊತ್ತು ಹರಟದೆ ನಾವು ಕಾಡು ದಾಟಿದ್ದಿಲ್ಲ. ಶನಿವಾರ ಶಾಲೆ ಬಿಡುವುದು ಮಧ್ಯಾಹ್ನವಾದದ್ದರಿಂದ ಆ ಉರಿಬಿಸಿಲಿಗೆ ಬೆಟ್ಟ ಸದೃಶ ಕಾಡು ದಾಟುವುದು ತ್ರಾಸವಾಗುತ್ತಿತ್ತು. ಇದನ್ನರಿತ ಅವರು ಒಂದು ದೊಡ್ಡ ಬಾಟಲಿಯಲ್ಲಿ ನೀರು ಮತ್ತು ಒಂದಿಷ್ಟು ತಿನಿಸುಗಳನ್ನೂ ಕಟ್ಟಿಟ್ಟು ನಮಗಾಗಿ ಕಾಯುತ್ತಿದ್ದರು. ಅದಕ್ಕಾಗಿ ಅವರು ಒಂದು ರೂಪಾಯಿಯೂ ತೆಗೆದುಕೊಳ್ಳುತ್ತಿರಲಿಲ್ಲ. ಮನುಷ್ಯತ್ವಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕೆನಿಸದು.

ಪಿ.ಯು.ಸಿ ಮುಗಿಸಿದಮೇಲೆ ನಾನು ಆ ಕಡೆ ತಲೆಹಾಕಿರಲೇ ಇಲ್ಲ. ಇತ್ತೀಚೆಗೆ ಅವರ ನೆನಪು ತುಂಬಾ ಕಾಡತೊಡಗಿದಾಗ ನನ್ನವರಲ್ಲಿ “ರೀ, ನಾರಾಯಣಣ್ಣನನ್ನು ನೋಡಿ ಬರೋಣವೇ?” ಎಂದು ಕೇಳಿದೆ. ಅದಕ್ಕೊಪ್ಪಿದ ಅವರು ನನ್ನನ್ನು ಕನ್ಯಾನಕ್ಕೆ ನಾನು ನಡೆದು ಹೋಗುತ್ತಿದ್ದ ದಾರಿಯಾಗಿಯೇ ಕರೆದೊಯ್ದರು. ದಾರಿಯುದ್ದಕ್ಕೂ ಎಲ್ಲವೂ ಬದಲಾಗಿರುವುದನ್ನು ನಾನು ಗಮನಿಸಿದೆ. ಹಳೇ ಕಾಡ ನಡುವಿನ ಕಾಲುದಾರಿಗೆ ಕಾಂಕ್ರೀಟು ಬಂದಿತ್ತು.

ನಮ್ಮ ನಾರಾಯಣಣ್ಣನೂ ಬದಲಾಗಿರಬಹುದೇ ಎಂಬ ಆತಂಕ ನನ್ನೊಳಗಿತ್ತು. ಕನ್ಯಾನ ಪೇಟೆ ತಲುಪಿದೊಡನೆ ರಸ್ತೆ ಬದಿಯಲ್ಲಿ ಮಾವಿನ ಕಾಯಿ ಹೆಕ್ಕುತ್ತಾ ನಿಂತಿದ್ದ ನಾರಾಯಣಣ್ಣನನ್ನು ಕಂಡೆ. ಅದು ರಸ್ತೆ ಎಂಬುದನ್ನೂ ನೋಡದೆ ‘ನಾರಾಯಣಣ್ಣಾ…” ಎಂದು ಕೂಗಿದೆ. ಕತ್ತು ತಿರುಗಿಸಿ ನೋಡಿದ ಅವರು “ಏರ್,ಮಿಸ್ರಿಯನಾ?” (ಯಾರು ಮಿಸ್ರಿಯನಾ?) ಎಂದು ತುಳುವಿನಲ್ಲಿ ಕೇಳಿದರು. ಏನಾಶ್ಚರ್ಯ! ಅವರು ನನ್ನ ಧ್ವನಿಯಿಂದಲೇ ನನ್ನನ್ನು ಗುರುತಿಸಿಬಿಟ್ಟಿದ್ದರು. ಅಷ್ಟು ವರ್ಷಗಳೇ ಕಳೆದರೂ ಅವರು ನಮ್ಮನ್ನು ಮರೆತಿರಲಿಲ್ಲ. ನೇರ ಅವರ ಅಂಗಡಿಗೆ ಕರೆದೊಯ್ದು ನನ್ನ ಜೊತೆಗಿರುತ್ತಿದ್ದ ಗೆಳೆಯ ಗೆಳತಿಯರ ಹೆಸರನ್ನೆಲ್ಲಾ ಒಂದೇ ಉಸಿರಿಗೆ ಹೇಳಿ ಅವರ ಕುರಿತೆಲ್ಲಾ ವಿಚಾರಿಸಿದರು. ಅವರ ಸ್ಮರಣ ಶಕ್ತಿ ಅದೆಷ್ಟು ಅದ್ಭುತವಾಗಿತ್ತೆಂದರೆ ನನ್ನ ಇಷ್ಟದ ತಿಂಡಿ ಯಾವುದೆಂದು ನೆನಪಿಟ್ಟಿದ್ದ ಅವರು ಭರಣಿಯಿಂದ ನೆಲಗಡಲೆ ಚಿಕ್ಕಿಗಳನ್ನು ತೆಗೆದು ನನಗೆ, ನನ್ನವರಿಗೆ ಮತ್ತು ನಮ್ಮ ಮಗಳಿಗೆ ಕೊಟ್ಟು ಕೇಳಿದರು “ಇದು ಬಾಲ್ಯದಲ್ಲಿ ನಿನ್ನ ಇಷ್ಟದ ತಿಂಡಿಯಲ್ವಾ..?”

ಹಿಂದಿನ ಅದೇ ಆತಿಥ್ಯ ಆ ದಿನವೂ ನಮಗೆ ದೊರಕಿತು. ಅವರು ಸ್ವತಃ ಚಹಾ ಮಾಡಿಕೊಟ್ಟು, ತಿಂಡಿ ತಿನಿಸು ಮತ್ತು ಮಾವಿನ ಹಣ್ಣುಗಳನ್ನು ನಮಗೆ ತಿನ್ನಲು ಕೊಟ್ಟರು. ಹಾಗೆ ನೋಡನೋಡುತ್ತಲೇ ಮಕ್ಕಳ ದಂಡೊಂದು ಬಂದು ನಾವು ಹಿಂದೆ ಕುಡಿಯುತ್ತಿದ್ದ ಅದೇ ಮಣ್ಣಿನ ಮಡಕೆಯಿಂದ ನೀರು ಕುಡಿಯತೊಡಗಿದರು.

ಸುತ್ತ ಮುತ್ತಲಿನವರೆಲ್ಲಾ ನಮ್ಮನ್ನೇ ಗಮನಿಸುತ್ತಿದ್ದರೂ ನಾವು ನಮ್ಮದೇ ಲೋಕದಲ್ಲಿ ಸುಮಾರು ಒಂದು ಘಂಟೆ ಕಾಲ ಹರಟಿದೆವು. ಮಾತನಾಡುತ್ತಲೇ ಒಂದು ಪುಟ್ಟ ಪ್ಲಾಸ್ಟಿಕ್ ಲಕೋಟೆಯಿಂದ ಫೋಟೊವೊಂದನ್ನು ಹೊರತೆಗೆದು ನನಗೆ ತೋರಿಸಿದರು. ಅದು ಅವರ ಹೆಂಡತಿ ಮತ್ತು ಪುಟ್ಟ ಕಂದನ ಭಾವ ಚಿತ್ರವಾಗಿತ್ತು. ಅದು ‘ಸುಕನ್ಯಾ’ ಯೋಜನೆಗಾಗಿ ತೆಗೆಸಿದ್ದೆಂದೂ ಹೇಳಿಕೊಂಡರು. ಅದೇ ಆತ್ಮೀಯತೆ, ಅದೇ ಮುಗ್ಧತೆ ಒಂದಿನಿತೂ ಮಾಸಿರಲಿಲ್ಲ. ಕೊನೆಗೆ ಹೊರಡಲನುವಾದಾಗ ಅವರ ಕಣ್ಣಂಚು ತೇವಗೊಂಡಿತು. ಜೊತೆಗೆ ನನ್ನದೂ. ಹಿಂದಿರುಗುತ್ತಲೇ ನಾನಂದೆ ‘ರೀ, ನನ್ನ ಭಾರತ ಬದಲಾಗಲಿಲ್ಲ. ಇದು ನನ್ನ ಭಾರತ.”

ನನಗಿನ್ನೂ ಸರಿಯಾಗಿ ನೆನಪಿದೆ. ನಮ್ಮೂರಿನಲ್ಲಿ ದಲಿತ ಸಮುದಾಯದ “ಪೂವಮ್ಮ” ಎಂಬ ಹೆಸರಿನ ಅಜ್ಜಿಯೊಬ್ಬರಿದ್ದಾರೆ. ಆಕೆ ನನಗೆ ಉದ್ದ ತಲೆಕೂದಲಿಗಾಗಿ ಕಾಡಿನಿಂದ ಕೆಲವು ಬೇರು ಮತ್ತು ಸೊಪ್ಪುಗಳನ್ನು ತಂದು ಕಡೆದು ಎಣ್ಣೆ ಮಾಡಿ ಕೊಡುತ್ತಿದ್ದರು. ಈಗ ಆಕೆಗೆ ತೀರಾ ಕಣ್ಣು ಕಾಣಿಸುವುದಿಲ್ಲ. ಆಕೆ ಈಗಲೂ ನನ್ನ ಧ್ವನಿ ಕೇಳಿ ನನ್ನನ್ನು ಗುರುತಿಸುತ್ತಾಳೆ. ಹತ್ತಿರ ಕೂರಿಸಿ ತಲೆ ನೇವರಿಸುತ್ತಾಳೆ. ನಮ್ಮಲ್ಲಿ ಕೆಲ ದಲಿತ ಹುಡುಗರು ಭಜರಂಗಿಗಳಾದರೆ ಇಂತಹ ಅಪ್ಪಟ ಮಾನವ ಪ್ರೇಮಿ ಅಜ್ಜಿಯನ್ನು ಕಂಡು ಆಕೆಯ ಪ್ರೀತಿ ಅನುಭವಿಸಿದ ನಾನೆಂತು ಒಂದಿಡೀ ಸಮುದಾಯವನ್ನು ದ್ವೇಷಿಸಲಿ…?

ನನ್ನ ನೆರೆಮನೆಯ ವ್ಯಕ್ತಿಯೊಬ್ಬನಿಗೆ ಮುಸ್ಲಿಮರನ್ನು ಕಂಡರೆ ಅಷ್ಟಕ್ಕಷ್ಟೇ. ಆತನ ಆ ಧೋರಣೆಗೆ ಕಾರಣ ಆತನ ರಾಜಕೀಯ ಹಿನ್ನೆಲೆ. ಆದರೆ ಅವನೊಳಗೂ ಒಂದು ಮನುಷ್ಯ ಹೃದಯವಿದೆ. ಪ್ರತೀ ವರ್ಷ ಬೇಸಿಗೆಯಲ್ಲಿ ನಮ್ಮನೆ ಬಾವಿಯ ನೀರು ಬತ್ತಿದಾಗಲೆಲ್ಲಾ ನಮಗೆ ನೀರು ಕೊಡುವವನು ಇದೇ ವ್ಯಕ್ತಿ. ಇದಕ್ಕೆ ಕಾರಣವೂ ಅಷ್ಟೇ ಸ್ಪಷ್ಟ. ಆತ ರಾಜಕೀಯವಾಗಿ ಮುಸ್ಲಿಂ ದ್ವೇಷಿಯಾಗಿದ್ದರೂ ಬಾಲ್ಯದಲ್ಲಿ ಆತ ಕಂಡ ಮಾನವೀಯ ಮೌಲ್ಯಗಳು, ಸೌಹಾರ್ದದ ಚೌಕಟ್ಟು ಆತನನ್ನು ಅದರಾಚೆ ದಾಟಲು ಬಿಡುವುದೇ ಇಲ್ಲ. ನಾವು ಬೆಳೆಯುವ ವಾತಾವರಣ ಯಾವ ರೀತಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ಆತ ಒಳ್ಳೆಯ ನಿದರ್ಶನ. ಎಳೆಯ ಮಕ್ಕಳ ಮನಸ್ಸು ಹಸಿ ಮಣ್ಣಿನಂತೆ. ಯಾವ ರೂಪ ಕೊಡುತ್ತೇವೆಯೋ ಅದೇ ರೀತಿ ರೂಪ ಪಡೆದುಕೊಳ್ಳುತ್ತದೆ. ಹಿಂದೆಲ್ಲಾ ಹಿರೀಕರು ಬಾಳಿದ್ದು ಸಹಜ ಬದುಕು. ಅಲ್ಲಿ ಮನುಷ್ಯತ್ವ, ಪ್ರೀತಿ, ಸಹೋದರತೆ ಇತ್ತು. ಈಗೆಲ್ಲಾ ದಿನಪತ್ರಿಕೆ, ನ್ಯೂಸ್ ಚಾನೆಲ್, ಸಾಮಾಜಿಕ ಜಾಲತಾಣಗಳನ್ನು ತೆರೆದು ನೋಡಿದೊಡನೆ ಕಾಣ ಸಿಗುವುದು ಮಾನವೀಯತೆಯ ಸಮಾಧಿಯ ಮೇಲೆ ನಿಂತು ಆರ್ಭಟಿಸುತ್ತಿರುವ ಕ್ರೌರ್ಯ. ಮುದ್ದು ಕಂದಮ್ಮಗಳ ಮೇಲಿನ ಅತ್ಯಾಚಾರ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಅದರ ವೀಡಿಯೋ ಮಾಡುವುದು, ಬಯಲು ಶೌಚ ಮಾಡಿದ ಪುಟ್ಟ ಮಗುವನ್ನು ಕೊಲ್ಲುವುದು, ಆಸ್ಪತ್ರೆಗಳು ಆಂಬುಲೆನ್ಸ್ ನೀಡದೆ ಶವವನ್ನು ಹೊತ್ತುಕೊಂಡು ನಡೆಯುವುದು.. ಇಂಥ ಅಮಾನವೀಯ ಕೃತ್ಯಗಳು ಒಂದೇ ಎರಡೇ? ಇದು ಮಕ್ಕಳಲ್ಲಿ ಯಾವ ರೀತಿಯ ಪರಿಣಾಮವನ್ನುಂಟು ಮಾಡೀತು?

ಇಂತಹ ಅಪ್ಪಟ ಮನುಷ್ಯ ಪ್ರೇಮಿ ಮನಸ್ಸುಗಳು ಇಂದಿಗೂ ಇವೆ.. ಆದರೆ ನಮ್ಮ ನಡುವೆ ಸೃಷ್ಟಿಸಲಾದ ಕಂದರ ಇವೆಲ್ಲವನ್ನೂ ಸಂಶಯದಿಂದ ನೋಡುವಂತೆ ಮಾಡುತ್ತಿದೆ. ಭಾರತವೆಂದರೆ ಬರಿಯ ಭೌಗೋಳಿಕ ಪ್ರದೇಶವಲ್ಲ. ದೇಶವೆಂದರೆ ಇಲ್ಲಿನ ಜನತೆ. ಮನಸ್ಸುಗಳನ್ನು ಬೆಸೆಯುವುದರಿಂದ ಮಾತ್ರ ಸುಂದರ ಭಾರತ ನಿರ್ಮಾಣ ಸಾಧ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...