ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ)ದ ಸಮನ್ಸ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ.
ಇಡಿಯ 8ನೇ ಸಮನ್ಸ್ಗೆ ಉತ್ತರ ನೀಡಿರುವ ಕೇಜ್ರಿವಾಲ್, “ಸಮನ್ಸ್ ಕಾನೂನು ಬಾಹಿರ. ಆದರೂ, ವಿಡಿಯೋ ಕಾನ್ಪರೆನ್ಸ್ ಮೂಲಕ ಮಾರ್ಚ್ 12ರಂದು ವಿಚಾರಣೆ ಎದುರಿಸಲು ಸಿದ್ದನಿದ್ದೇನೆ ಎಂದಿದ್ದಾರೆ. ಆದರೆ, ಕೇಜ್ರಿವಾಲ್ ಅವರನ್ನು ನೇರವಾಗಿ ವಿಚಾರಣೆ ನಡೆಸಲು ಇಡಿ ಪಟ್ಟು ಹಿಡಿದಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಅವಕಾಶವಿಲ್ಲ” ಎಂದಿದೆ.
ಫೆಬ್ರವರಿ 27 ರಂದು 8ನೇ ಸಮನ್ಸ್ ನೀಡಿರುವ ಇಡಿ, ಮಾರ್ಚ್ 4ರಂದು(ಇಂದು) ತನ್ನ ಪ್ರಧಾನ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಇಂದು ವಿಚಾರಣೆಗೆ ಕೇಜ್ರಿವಾಲ್ ಗೈರಾಗಿದ್ದಾರೆ.
ದೆಹಲಿ ಅಬಕಾರಿ ನೀತಿ (2021-22)ಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳ ಆರೋಪಕ್ಕೆ ಸಂಬಂಧಪಟ್ಟ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯನ್ನು ಇಡಿ ನಡೆಸುತ್ತಿದೆ. ಉದ್ಯಮಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅಬಕಾರಿ ನೀತಿ ರೂಪಿಸಲು ಲಂಚ ಪಡೆದಿರುವ ಆರೋಪ ಎಎಪಿ ನಾಯಕರ ವಿರುದ್ದ ಕೇಳಿ ಬಂದಿದೆ.
ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಇದುವರೆಗೆ ಅರವಿಂದ್ ಕೇಜ್ರಿವಾಲ್ ಇಡಿ ಏಳು ಸಮನ್ಸ್ಗಳನ್ನು ನೀಡಿದೆ. ಅವೆಲ್ಲವನ್ನೂ ಕಾನೂನು ಬಾಹಿರ ಎಂದಿರುವ ಕೇಜ್ರಿವಾಲ್ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ. ಈ ಸಂಬಂಧ ಕೇಜ್ರಿವಾಲ್ ವಿರುದ್ದ ಇಡಿ ಕೋರ್ಟ್ ಮೆಟ್ಟಿಲೇರಿದೆ. ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸಿರುವ ಕೋರ್ಟ್ ಆದೇಶ ಕಾಯ್ದಿರಿಸಿದೆ.
ಅಬಕಾರಿ ನೀತಿ ಹಗರಣ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಪಟ್ಟಂತೆ ಎಎಪಿ ನಾಯಕಾರದ ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಈಗಾಗಲೇ ಜೈಲು ಸೇರಿದ್ದಾರೆ.
ಇದನ್ನೂ ಓದಿ: ಶಿಕ್ಷಣಕ್ಕಾಗಿ ₹16,396 ಕೋಟಿ ಮೀಸಲಿಟ್ಟ ಕೇಜ್ರಿವಾಲ್ ಸರ್ಕಾರ; ಗುಣಮಟ್ಟದ ಶಿಕ್ಷಣ ನಮ್ಮ ಆದ್ಯತೆ ಎಂದ ಸಚಿವೆ ಆತಿಶಿ