ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಿಗೆ ಆಯ್ಕೆಗೊಂಡಿರುವ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯನ್ನು, ಆರ್ಥಿಕ ಸಂಕಷ್ಟ ಕಾರಣ ನೀಡಿ ಸರ್ಕಾರ ತಡೆಹಿಡಿದಿದ್ದು, ಇದನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಆಯ್ಕೆಗೊಂಡಿರುವ ಪ್ರಾಧ್ಯಾಪಕರು ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯಕಚೇರಿಯ ಮುಂಬಾಗದಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ನೀಡಿದ್ದ ಆದೇಶದಂತೆ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿತ್ತು. ಅದರಂತೆ ಸಹಾಯಕ ಪ್ರಾಧ್ಯಾಪಕರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಕೊರೊನಾ ಆರ್ಥಿಕ ಸಂಕಷ್ಟದ ಹೆಸರಲ್ಲಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿರುವ ಸುಮಾರು 300ಕ್ಕೂ ಹೆಚ್ಚು ಅಭ್ಯರ್ಥಿಗಳ ನೇಮಕಾತಿಯನ್ನು 2020-21 ನೇ ಸಾಲಿನಲ್ಲಿ ತಡೆಹಿಡಿಯಲಾಗಿದೆ.
ಇದನ್ನೂ ಓದಿ: ಸಂಬಳ ಕೊಡದೆ ’ಕೊರೊನಾ ವಾರಿಯರ್ಸ್’ಗಳನ್ನು ದುಡಿಸುತ್ತಿರುವ ರಾಜ್ಯ ಸರ್ಕಾರ!

ನಾನುಗೌರಿ.ಕಾಮ್ ಜೊತೆ ಮಾತನಾಡಿದ ಪ್ರಾಧ್ಯಾಪಕರೊಬ್ಬರು, “ಕಳೆದ ಹಲವು ವರ್ಷಗಳಿಂದ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದೆವು, ಈಗ ಅನುದಾನಿತ ಪದವಿ ಕಾಲೇಜುಗಳಲ್ಲಿ ಆಯ್ಕೆಗೊಂಡಿದ್ದೇವೆ. ಈಗಾಗಲೇ ನಮ್ಮ ವಯೋಮಿತಿಯು ಮೀರುತ್ತಿದ್ದು, ನೇಮಕಾತಿ ಆದೇಶ ಪತ್ರದ ನಿರೀಕ್ಷೆಯಲ್ಲಿರುವಾಗಲೇ ಆರ್ಥಿಕ ಇಲಾಖೆಯಿಂದ ಹೊರಬಂದ ಸುತ್ತೋಲೆಯಿಂದ ದಿಕ್ಕು ತೋಚದಂತಾಗಿದೆ. ಪಿಯುಸಿ ಉಪನ್ಯಾಸಕರನ್ನು ಸರ್ಕಾರ ಈಗಾಗಲೆ ನೇಮಿಸಿಕೊಂಡಿದೆ ಆದರೆ ನಮ್ಮ ನೇಮಕಾತಿಯನ್ನು ತಡೆಹಿಡಿದು ನಮಗೆ ಅನ್ಯಾಯ ಎಸಗುತ್ತಿದೆ. ನಮಗೆ ನ್ಯಾಯ ಸಿಗುವವರೆಗೂ ಇಲ್ಲಿಂದ ಕದಲುವುದಿಲ್ಲ” ಎಂದು ಹೇಳಿದರು.
ಇದನ್ನೂ ಓದಿ:ನರ್ಸಿಂಗ್ ಎಂದರೆ ಹೆಚ್ಚು ಕೌಶಲದ, ಕಡಿಮೆ ಸಂಬಳದ ಕೆಲಸ: ಪಾಂಚಾಲಿ ರೇ

“ಈ ಹಿಂದೆಯೆ ಪ್ರೀಡಂ ಪಾರ್ಕ್ನಲ್ಲಿ ಧರಣಿ ಮಾಡಲು ಅವಕಾಶ ನೀಡುವಂತೆ ಪೊಲೀಸರೊಂದಿಗೆ ಕೇಳಿಕೊಂಡಿದ್ದೆವು. ಆದರೆ ಅವರು ’ಸಂಘಟನೆ’ ಇಲ್ಲ ಎಂಬ ಕಾರಣ ನೀಡಿ ಅವಕಾಶ ಕೊಟ್ಟಿರಲಿಲ್ಲ. ಆದ್ದರಿಂದ ಯಾವುದೆ ದಾರಿ ಕಾಣದೆ ಇಂದು ಬೆಳಿಗ್ಗೆಯಿಂದ ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯಕಚೇರಿಯ ಮುಂಬಾಗ ಧರಣಿ ಮಾಡುತ್ತಿದ್ದೇವೆ. ಇಲಾಖೆಯ ಕಮೀಷನರ್ ಬಂದು ಇಲ್ಲಿ ಧರಣಿ ಮಾಡದಂತೆ ಹೇಳಿಹೋಗಿದ್ದಾರೆ ವಿನಃ ನಮ್ಮ ಸಂಕಷ್ಟಗಳಿಗೆ ಪರಿಹಾರದ ಬಗ್ಗೆ ಮಾತನಾಡಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದರು.
“ಇದೀಗ ಪೊಲೀಸರು ಬಂದು ಪ್ರತಿಭಟನೆಗೆ ಅನುಮತಿ ಪಡೆದಿಲ್ಲ ಎಂದು ಹೇಳಿ ನಮ್ಮನ್ನು ಹೊರಕಳುಹಿಸಲು ನೋಡುತ್ತಿದ್ದಾರೆ. ಇಲ್ಲಿಂದ ಹೊರಗಡೆ ಹೊರ ಕಳುಹಿಸಿದರೂ ಸರಿ, ನಮ್ಮ ಪ್ರತಿಭಟನೆಯನ್ನು ಬೀದಿಯಲ್ಲಿ ಕೂತು ಮುಂದುವರೆಸುತ್ತೇವೆ. ಆರ್ಥಿಕ ಇಲಾಖೆಯ ಈ ಹಿಂದಿನ ಸುತ್ತೋಲೆಯನ್ನು ಹಿಂಪಡೆದು, ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವವರೆಗೂ ನಮ್ಮ ಪ್ರತಿಭಟನೆ ಮುಂದುವರೆಯುತ್ತದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಬಾಕಿ ಸಂಬಳ ಹಾಗೂ ಇತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ


