ಬಾಲಿವುಡ್ ಡ್ರಗ್ಸ್ ಪ್ರಕರಣದ ಬೆನ್ನತ್ತಿರುವ ಎನ್ಸಿಬಿ ಅಧಿಕಾರಿಗಳು ಮುಂಬೈನ ಡ್ರಗ್ಸ್ ಪೆಡ್ಲರ್ಗಳಿದ್ದ ಸ್ಥಳಕ್ಕೆ ದಾಳಿ ನಡೆಸಲು ತೆರಳಿದ್ದ ಸಂದರ್ಭದಲ್ಲಿ ಸ್ಥಳೀಯ ಜನರ ಗುಂಪೊಂದು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದೆ.
ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಪೊಲೀಸ್ ವರಿಷ್ಠಾಧಿಕಾರಿ ವಿಶ್ವ ವಿಜಯ್ ಸಿಂಗ್ ಒಳಗೊಂಡ ಐವರು ಸದಸ್ಯರ ತಂಡವು ದಾಳಿ ನಡೆಸಲು ತೆರಳಿದ್ದರು. ಘಟನೆಯಲ್ಲಿ ಇಬ್ಬರು ಅಧಿಕಾರಿಗಳಿಗೆ ಗಾಯಗಳಾಗಿವೆ, ಘಟನೆ ಸಂಬಂಧ ಮೂವರನ್ನು ಬಂಧಿಲಾಗಿದೆ ಎಂದು ಎನ್ಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಮೂವರು ಆರೋಪಿಗಳನ್ನು ಸ್ಥಳೀಯ ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ಹಾಸ್ಯ ಕಲಾವಿದೆ ಭಾರತಿ ಸಿಂಗ್ ದಂಪತಿಗೆ ಜಾಮೀನು!
“ಖಚಿತ ಮಾಹಿತಿಯ ಆಧಾರದ ಮೇಲೆ, ನಾವು ಭಗತ್ ಸಿಂಗ್ ನಗರದಲ್ಲಿ ದಾಳಿ ನಡೆಸಿ ಒಬ್ಬ ಡ್ರಗ್ಸ್ ಪೆಡ್ಲರ್ ಅನ್ನು ವಶಕ್ಕೆ ಪಡೆದಿದ್ದೇವೆ. ಆದರೆ, ಕೆಲವು ಸ್ಥಳೀಯ ನಿವಾಸಿಗಳು ನಮ್ಮ ಕರ್ತವ್ಯಕ್ಕೆ ಅಡ್ಡ ಬಂದು, ಗುಂಪುಗೂಡಿಸಿ ಹಲ್ಲೆ ಮಾಡಿದ್ದಾರೆ. ನಮ್ಮ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ” ಎಂದು ಹಿರಿಯ ಎನ್ಸಿಬಿ ಅಧಿಕಾರಿ ತಿಳಿಸಿದ್ದಾರೆ.
ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ’ಭಗತ್ ಸಿಂಗ್ ನಗರದ ಪರಿಸ್ಥಿತಿಯ ಬಗ್ಗೆ ಕಂಟ್ರೋಲ್ ರೂಮ್ನಿಂದ ಕರೆ ಬಂದ ತಕ್ಷಣ ನಾವು ಘಟನಾ ಸ್ಥಳಕ್ಕೆ ತಲುಪಿದೆವು. ಅಲ್ಲಿಗೆ ಹೋದಾಗ, ಎನ್ಸಿಬಿ ಸಿಬ್ಬಂದಿಯ ಸುತ್ತ ಮೂರು ಮಂದಿಯ ಗುಂಪು ಸುತ್ತುವರೆದಿತ್ತು. ಮೂವರನ್ನು ಕೂಡಲೇ ವಶಕ್ಕೆ ತೆಗೆದುಕೊಳ್ಳಲಾಗಿದೆ” ಎಂದು ಗೋರೆಗಾಂವ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.