Homeಕರ್ನಾಟಕಭಾರತ್ ಜೋಡೋ ಯಾತ್ರೆ: ದ್ವೇಷ ರಾಜಕಾರಣಕ್ಕೆ ಎದುರಾಗಿ ಬಿರುಸಿನ ನಡಿಗೆ

ಭಾರತ್ ಜೋಡೋ ಯಾತ್ರೆ: ದ್ವೇಷ ರಾಜಕಾರಣಕ್ಕೆ ಎದುರಾಗಿ ಬಿರುಸಿನ ನಡಿಗೆ

- Advertisement -
- Advertisement -

ಭಾರತದ ರಾಜಕಾರಣದ ಒಂದು ವಿಶೇಷವಾದ ವಿದ್ಯಮಾನ ನಮ್ಮ ಕಣ್ಣೆದುರಿನಲ್ಲೇ ಘಟಿಸುತ್ತಿದೆ. ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3570 ಕಿಲೋಮೀಟರ್ ಉದ್ದದ ಹಾದಿಯನ್ನು ಐದು ತಿಂಗಳ ಅವಧಿಯಲ್ಲಿ, ಕಾಲ್ನಡಿಗೆಯಲ್ಲಿ ಕ್ರಮಿಸುತ್ತಿದ್ದಾರೆ. ಸೆಪ್ಟೆಂಬರ್ 7ನೇ ತಾರೀಕು ಕನ್ಯಾಕುಮಾರಿಯಲ್ಲಿ ಆರಂಭವಾದ ಈ ಪಾದಯಾತ್ರೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಸಾಗಿ ಇದೀಗ ತೆಲಂಗಾಣದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಈಗಾಗಲೇ ಒಟ್ಟು ಸುಮಾರು 1200 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಕ್ರಮಿಸಿದ್ದಾರೆ.

ಪಾದಯಾತ್ರೆ ಎಂಬುದು ಭಾರತದ ಪರಂಪರೆಯಲ್ಲಿ ಹೊಸದೇನಲ್ಲ. ಹರಕೆ ತೀರಿಸಲು ತೀರ್ಥಕ್ಷೇತ್ರಗಳಿಗೆ ಕಾಲ್ನಡಿಗೆಯಲ್ಲಿ ನಡೆಯುವ ಸಂಪ್ರದಾಯ ಬಹಳ ಹಳೆಯದು. ಧಾರ್ಮಿಕ ಪಾದಯಾತ್ರೆಗಳಲ್ಲದೆ ಸಾಮಾಜಿಕ, ರಾಜಕೀಯ ಉದ್ದೇಶಗಳಿಗಾಗಿ ಸಾಕಷ್ಟು ಪಾದಯಾತ್ರೆಗಳು ನಡೆದಿವೆ. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಗಾಂಧೀಜಿ 1930ರಲ್ಲಿ ನಡೆಸಿದ ದಂಡಿಯಾತ್ರೆ, ನಂತರ 1934ರಲ್ಲಿ ನಡೆಸಿದ ಅಸ್ಪೃಶ್ಯತಾ ವಿರೋಧಿ ಪಾದಯಾತ್ರೆಗಳು ಕೋಟ್ಯಂತರ ಜನರಲ್ಲಿ ಸಂಚಲನ ಮೂಡಿಸಿದ ಇತಿಹಾಸವಿದೆ. ಸ್ವಾತಂತ್ರ್ಯಾ ನಂತರದಲ್ಲಿ, 1951ರಲ್ಲಿ ವಿನೋಬಾ ಭಾವೆ ಅವರು ಭೂದಾನ ಚಳವಳಿಯ ಭಾಗವಾಗಿ ಪಾದಯಾತ್ರೆ ನಡೆಸಿದ್ದರು. 1983ರಲ್ಲಿ ಜನತಾ ಪರಿವಾರದ ನಾಯಕ ಚಂದ್ರಶೇಖರ್ ಅವರು ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಸುಮಾರು ಐದೂವರೆ ತಿಂಗಳ ಕಾಲ ಸುದೀರ್ಘ ಪಾದಯಾತ್ರೆ ನಡೆಸಿದ್ದು ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ.

ಈಗಿನ ರಾಹುಲ್ ಗಾಂಧಿಯ ’ಭಾರತ್ ಜೋಡೋ’ ಪಾದಯಾತ್ರೆ ಕೂಡ ಇದೇ ಸಾಲಿನಲ್ಲಿ ಇತಿಹಾಸದ ಪುಟಗಳಲ್ಲಿ ದಾಖಲಾಗುವುದು ನಿಚ್ಚಳವಾಗಿದೆ.

ಕಳೆದ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಈ ಪಾದಯಾತ್ರೆ ಆರಂಭವಾದಾಗಲೂ ಇದರ ಪರಿಣಾಮದ ಕುರಿತು ಮಾಧ್ಯಮದವರಿಗಿರಲಿ, ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರಿಗೇ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಮಾತ್ರವಲ್ಲ, ನಿಜಕ್ಕೂ ರಾಹುಲ್ ಗಾಂಧಿ ಸಾವಿರಾರು ಕಿಲೋಮೀಟರ್ ದೂರ ನಡೆಯುತ್ತಾರಾ ಎಂಬ ಅನುಮಾನ ವ್ಯಕ್ತಪಡಿಸಿದವರೇ ಹೆಚ್ಚು. ಆದರೆ ಆಶ್ಚರ್ಯಕರ ರೀತಿಯಲ್ಲಿ ಭಾರತ್ ಜೋಡೋ ಯಾತ್ರೆಗೆ ಅಭೂತಪೂರ್ವ ಜನ ಬೆಂಬಲ ಸಿಕ್ಕಿ ಸಾಗುತ್ತಿದೆ.

ದಾರಿಯುದ್ದಕ್ಕೂ ಸಾವಿರಾರು ಜನರು ಪಾದಯಾತ್ರೆಯೊಂದಿಗೆ ಸೇರಿಕೊಂಡು ಹೆಜ್ಜೆ ಹಾಕುತ್ತಿದ್ದಾರೆ. ರಾಹುಲ್ ಗಾಂಧಿಯನ್ನು ನೋಡಲಿಕ್ಕೆಂದು ಮಹಿಳೆಯರು, ಮಕ್ಕಳನ್ನೂ ಒಳಗೊಂಡು ಉರಿಬಿಸಿಲನ್ನೂ ಲೆಕ್ಕಿಸದೆ ತಾಸುಗಟ್ಟಲೆ ರಸ್ತೆಯಲ್ಲಿ ಕಾಯುತ್ತಾ ನಿಲ್ಲುತ್ತಿದ್ದಾರೆಂದರೆ ನಂಬುವುದು ಕಷ್ಟ. ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವವರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಯುವಕ-ಯುವತಿಯರು ಎಂಬುದು ಗಮನಾರ್ಹ. ಮತ್ತೊಂದು ವಿಶೇಷವೆಂದರೆ ಈ ಪಾದಯಾತ್ರೆಗೆ ಸಮಾಜಮುಖಿ ಚಿಂತಕರು, ಸಂಘಟನೆಗಳನ್ನೂ ಒಳಗೊಂಡ ನಾಗರಿಕ ಸಮಾಜದ ಸಕ್ರಿಯ ಬೆಂಬಲ ವ್ಯಕ್ತವಾಗಿರುವುದು.

ರಾಜಕೀಯ ಪಕ್ಷವೊಂದರ ಈ ಪಾದಯಾತ್ರೆಯಲ್ಲಿ ಸಿವಿಲ್ ಸೊಸೈಟಿ ಯಾಕೆ ಭಾಗವಹಿಸಬೇಕು?

ಈ ಪ್ರಶ್ನೆಗೆ ಉತ್ತರ ಇಂದಿನ ಸಾಮಾಜಿಕ, ರಾಜಕೀಯ ಸನ್ನಿವೇಶದಲ್ಲಿದೆ. ದೇಶದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ವಲಯಗಳಲ್ಲಿ ಹಿಂದುತ್ವದ ಹೆಸರಿನಲ್ಲಿ ದಾಂಧಲೆ ಎಬ್ಬಿಸುತ್ತಿರುವ ಶಕ್ತಿಗಳ ಆಟಾಟೋಪ ಎಲ್ಲ ಎಲ್ಲೆಗಳನ್ನೂ ಮೀರಿ, ನಮ್ಮ ಪ್ರಜಾತಂತ್ರದ ಬುನಾದಿಯನ್ನೇ ಅಲುಗಾಡುತ್ತಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ನಾವು ಬದುಕುತ್ತಿದ್ದೇವೆ. ಎಲ್ಲ ಕಾನೂನುಗಳನ್ನು ಗಾಳಿಗೆ ತೂರಿ, ಸಂವಿಧಾನಿಕ ಸಂಸ್ಥೆಗಳನ್ನು ಧ್ವಂಸಗೊಳಿಸಲಾಗಿದೆ. ಹಿಂದುತ್ವ, ಹಿಂದೂ ರಾಷ್ಟ್ರದ ಹೆಸರಿನಲ್ಲಿ ಹಿಟ್ಲರ್‌ಶಾಹಿ ಫ್ಯಾಸಿಸ್ಟ್ ಆಡಳಿತವನ್ನ ಹೇರಲು ಆರೆಸ್ಸೆಸ್-ಬಿಜೆಪಿಗಳು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿರುವ ಕರಾಳ ಸನ್ನಿವೇಶಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಪ್ರಜಾತಾಂತ್ರಿಕ ಆಳ್ವಿಕೆಗೆ ತಳಹದಿಯಾಗಿರುವ ಭಿನ್ನಮತ ಹಾಗೂ ವಿರೋಧ ಪಕ್ಷಗಳನ್ನು ನಿರ್ಮೂಲನೆ ಮಾಡುವ ಯೋಜನೆ ತೀವ್ರಗತಿಯಲ್ಲಿ ಸಾಗುತ್ತಿದೆ.

ಇದನ್ನೂ ಓದಿ: ಭಾರತ್ ಜೋಡೋ ಜೊತೆಗೆ ದಲಿತರನ್ನೂ ಬೆಸೆಯಬಹುದೇ ಕಾಂಗ್ರೆಸ್ ?

ಕೆಲವೇ ಕ್ರೋನಿ ಕಂಪನಿಗಳು ಹಾಗೂ ಗದ್ದುಗೆಯಲ್ಲಿರುವ ಸರ್ಕಾರ ಜಂಟಿಯಾಗಿ ನಡೆಸುತ್ತಿರುವ ಎಗ್ಗುಸಿಗ್ಗೂ ಇಲ್ಲದ ಲೂಟಿಯಿಂದಾಗಿ ಆರ್ಥಿಕತೆ ನೆಲಕಚ್ಚಿದೆ, ನಿರುದ್ಯೋಗ ತಾರಕಕ್ಕೇರಿದೆ, ಬೆಲೆಯೇರಿಕೆ ಸುಡುತ್ತಿದೆ, ದೇಶದಲ್ಲಿ ಬಡತನ ದಾಖಲೆ ಪ್ರಮಾಣಕ್ಕೇರಿದೆ. ಇಂತಹ ದುರಾಡಳಿತ ಹಾಗೂ ಲೂಟಿಯನ್ನು ಮರೆಮಾಚಲು ಧರ್ಮ ಧರ್ಮಗಳ ನಡುವೆ, ಜಾತಿಜಾತಿಗಳ ನಡುವೆ ದ್ವೇಷವನ್ನು ಬೆಳೆಸಿ ಹಿಂಸಾಚಾರವನ್ನು ಪ್ರಾಯೋಜಿಸುವ/ ಪ್ರಚೋದಿಸುವ ಹಿಟ್ಲರ್ ಮಾದರಿ ರಾಜಕಾರಣ ಗದ್ದುಗೆಯೇರಿ ಭದ್ರವಾಗಿ ನೆಲೆಯೂರಿದೆ.

ರಾಹುಲ್ ಗಾಂಧಿ ನೇತೃತ್ವದ ’ಭಾರತ್ ಜೋಡೋ ಯಾತ್ರೆ’ಯು ನಡೆಯುತ್ತಿರುವುದು ಕರಾಳ ಕಾರ್ಮೋಡಗಳು ಕವಿದಿರುವ ಚಾರಿತ್ರಿಕ ಸನ್ನಿವೇಶದಲ್ಲಿ ಎಂಬುದನ್ನು ನಾವು ಮರೆಯುವಂತಿಲ್ಲ. ರಾಜಕೀಯ ಪಕ್ಷವೊಂದಕ್ಕೆ ಅದರದೇ ಆದ ರಾಜಕೀಯ ಲೆಕ್ಕಾಚಾರ ಇದ್ದೇ ಇರುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ, ನಿಜ. ಆದರೆ ಈ ಪಾದಯಾತ್ರೆ ಎತ್ತಿರುವ ಪ್ರಮುಖ ನಾಲ್ಕು ಪ್ರಶ್ನೆಗಳು ಇಂದು ಭಾರತ ಎದುರಿಸುತ್ತಿರುವ ಅತ್ಯಂತ ಗಂಭೀರ ಸವಾಲುಗಳಾಗಿವೆ. 1) ಬೆಲೆಯೇರಿಕೆ 2)ನಿರುದ್ಯೋಗ 3)ಭ್ರಷ್ಟಾಚಾರ ಮತ್ತು 4) ಪ್ರಜೆಗಳ ನಡುವೆ ದ್ವೇಷ, ಹಿಂಸೆಗಳನ್ನು ಬೆಳೆಸುವ ರಾಜಕಾರಣ.

ಎಲ್ಲ ಪ್ರಜಾತಾಂತ್ರಿಕ ಶಕ್ತಿಗಳು ಈ ಅಂಶಗಳ ಬಗ್ಗೆ ಒಗ್ಗೂಡಿ ಹೋರಾಡಬೇಕಿರುವ ಈ ಸಂದರ್ಭದಲ್ಲಿ ಪ್ರಮುಖ ವಿರೋಧ ಪಕ್ಷವೊಂದು ಹೋರಾಟಕ್ಕೆ ಇಳಿದಿರುವುದು ಬಹಳ ಸಕಾರಾತ್ಮಕ ಬೆಳವಣಿಗೆ. ಇದೇ ವಿಚಾರಗಳನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಸಂಸತ್ತಿನೊಳಗೆ ಮತ್ತು ಹೊರಗೆ ನಿರಂತರ ದನಿಯೆತ್ತುತ್ತಾ ಬಂದಿರುವುದನ್ನು ಕಾಣಬಹುದು. ಈ ಹಿನ್ನೆಲೆಯಲ್ಲಿ ನಾಗರಿಕ ಸಮಾಜ ಈ ಪಾದಯಾತ್ರೆಯೊಂದಿಗೆ ಜೊತೆಗೂಡಿ ಹೆಜ್ಜೆಹಾಕಲು ತೀರ್ಮಾನಿಸಿರುವುದು ಸ್ವಾಗತಾರ್ಹ ಬೆಳವಣಿಗೆ.

ಭಾರತ್ ಜೋಡೋ ಯಾತ್ರೆ ಆರಂಭವಾಗುವ ಕೆಲವು ವಾರಗಳ ಮೊದಲೇ ನಾಗರಿಕ ಸಮಾಜದ ಹಲವು ಗಣ್ಯರು ತಮ್ಮ ಬೆಂಬಲ ಘೋಷಿಸಿದ್ದರು. ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯ ಅರುಣಾ ರಾಯ್, ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್, ಚಿಂತಕ-ಲೇಖಕ ದೇವನೂರ ಮಹಾದೇವ, ಸಫಾಯಿ ಕರ್ಮಚಾರಿ ಆಂದೋಲನದ ಬೇಜ್ವಾಡಾ ವಿಲ್ಸನ್, ಖ್ಯಾತ ಮಾಹಿತಿ ಹಕ್ಕು ಕಾರ್ಯಕರ್ತೆ ಅಂಜಲಿ ಭಾರದ್ವಾಜ್, ಹಿರಿಯ ಪತ್ರಕರ್ತ ಮೃಣಾಲ್ ಪಾಂಡೆ, ಮಾಜಿ ಸಂಸದ ಧರ್ಮವೀರ ಗಾಂಧಿ, ಭಾಷಾ ತಜ್ಞ ಗಣೇಶ್ ದೇವಿ, ಯೋಜನಾ ಆಯೋಗದ ಮಾಜಿ ಸದಸ್ಯೆ ಸಯೀದಾ ಹಮೀದ್, ನಿವೃತ್ತ ನ್ಯಾಯಾಧೀಶ ಕೋಲ್ಸೆ ಪಾಟೀಲರಂತಹ ಗಣ್ಯರು ಮಾತ್ರವಲ್ಲದೆ ಕಾರ್ಮಿಕ, ದಲಿತ, ರೈತ, ಪರಿಸರ, ಮಾನವ ಹಕ್ಕು ಹೋರಾಟಗಳ ಹತ್ತು ಹಲವು ಸಂಘಟನೆಗಳು ಸಕ್ರಿಯ ಬೆಂಬಲ ನೀಡಿವೆ.

ಈ ಭಾರತ್ ಜೋಡೋ ಯಾತ್ರೆ ಮಾಮೂಲಿ ರಾಜಕೀಯ ಗಿಮಿಕ್ ಮಾತ್ರವೆ?

ಮೊದಲಿಗೆ ಈ ಪಾದಯಾತ್ರೆಯ ರಾಜಕೀಯ, ಸಾಮಾಜಿಕ/ರಾಜಕೀಯ ಆಯಾಮಗಳನ್ನು ನೋಡೋಣ. ಪ್ರಜಾತಂತ್ರದ ಕಾವಲು ನಾಯಿ ಎನಿಸಿಕೊಂಡ ಮಾಧ್ಯಮಗಳು ಆಳುವವರ ಪರವಾಗಿ ಬೇಟೆ ನಾಯಿಗಳಂತೆ ವರ್ತಿಸುತ್ತಿರುವ, ಪ್ರಜಾತಂತ್ರವನ್ನು ಜೀವಂತವಾಗಿರಿಸಬೇಕಾದ ಸಂಸತ್ತು, ನ್ಯಾಯಾಲಯ ಮತ್ತಿತರೆ ಸಂಸ್ಥೆಗಳು ತಮ್ಮ ಕರ್ತವ್ಯದಲ್ಲಿ ವಿಫಲವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಬೀದಿಯಲ್ಲಿ ಜನರೊಡನೆ ಸಂಭಾಷಿಸುತ್ತಾ ಹೆಜ್ಜೆಹಾಕುವ ಕ್ರಿಯೆ ಅನಿವಾರ್ಯ ಮಾತ್ರವಲ್ಲ, ಬಹಳ ಪ್ರಭಾವಶಾಲಿಯೂ ಹೌದು.

ದ್ವೇಷ ರಾಜಕಾರಣವನ್ನೇ ಆಯುಧವನ್ನಾಗಿಸಿಕೊಂಡು ತಮಗೆ ಎದುರಾಳಿಗಳೇ ಇಲ್ಲವೆಂಬಂತೆ ಮೆರೆಯುತ್ತಿರುವ ಫ್ಯಾಸಿವಾದಕ್ಕೆ, ಸಾವಿರಾರು ಜನರು ಜೊತೆಗೂಡಿ ಹೆಜ್ಜೆಹಾಕುವ ಕ್ರಿಯೆಯು ಒಂದು ಸ್ಪಷ್ಟ ಪ್ರತಿರೋಧ. ದಶಕಗಳಿಂದಲೂ ಸಾಮಾನ್ಯವಾಗಿ ಸೆಮಿನಾರ್ ಹಾಲ್‌ಗಳಿಗೆ ಸೀಮಿತವಾಗಿರುವ ಕೋಮುವಾದಿ-ಫ್ಯಾಸಿಸ್ಟ್ ವಿರೋಧಿ ದನಿ ಸಾವಿರಾರು ಮೈಲುಗಳುದ್ದ ದೇಶದ ಬೀದಿಗಳಲ್ಲಿ ಲಕ್ಷಾಂತರ ದನಿಗಳಾಗಿ ಮಾರ್ದನಿಸುವುದರ ಪ್ರಾಮುಖ್ಯತೆಯನ್ನು ನಾವು ಮನಗಾಣಬೇಕು.

ಭಾರತ್ ಜೋಡೋ ಪ್ರತಿಪಾದಿಸುತ್ತಿರುವ ಸಂದೇಶವನ್ನು ಮುಂದಿಟ್ಟುಕೊಂಡು ಯಾವುದೇ ರಾಜಕೀಯ ಪಕ್ಷ ತನ್ನ ಬೆಂಬಲಿಗರನ್ನು ಮೊಬಿಲೈಸ್ ಮಾಡಿ ಕರೆತರುವುದು ಒಳ್ಳೆಯ ಬೆಳವಣಿಗೆಯೇ. ಆದರೆ ಈ ಯಾತ್ರೆಯಲ್ಲಿ ಸ್ವಯಂಪ್ರೇರಿತರಾಗಿ ಜನರು ಹರಿದು ಬರುತ್ತಿರುವುದು ಗಮನಿಸಲೇಬೇಕಾದ ಮತ್ತೊಂದು ಪ್ರಮುಖ ಅಂಶ.

ಫ್ಯಾಸಿಸಂ ವಿರುದ್ಧದ ದನಿಯಲ್ಲಿ ಸೆಕ್ಯುಲರಿಸಂ ಪರ ವಾದಗಳು ಅಥವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಎಂಬ ರೂಢಿಗತ ನರೆಟಿವ್‌ಗಳ ಬದಲಿಗೆ ವಿಶಾಲ ಜನಸಮುದಾಯಗಳ ದೈನಂದಿನ ಸಮಸ್ಯೆಗಳನ್ನು ಯಶಸ್ವಿಯಾಗಿ ಮುಂದೆ ತಂದಿರುವುದು ಇದರ ಸಾಧನೆ ಎನ್ನಲೇಬೇಕು. ಎಡ, ಪ್ರಗತಿಪರ ಶಕ್ತಿಗಳು ಈ ಅಂಶಗಳ ಬಗ್ಗೆ ಖಚಿತ ನಿಲುವನ್ನು ಹೊಂದಿದ್ದರೂ ಜನಪ್ರಿಯ ಮಾದರಿಗಳನ್ನು ಅನ್ವೇಷಿಸಿ, ಬೀದಿಯಲ್ಲಿ ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಾಗಿಲ್ಲ ಎಂಬ ವಾಸ್ತವವನ್ನು ಆತ್ಮವಿಮರ್ಶಾತ್ಮಕವಾಗಿ ಸ್ವೀಕರಿಸಬೇಕು.

ಈ ಹಿನ್ನೆಲೆಯಲ್ಲಿ ಭಾರತ್ ಜೋಡೊ ಯಾತ್ರೆ ಬಹುಮಟ್ಟಿಗೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ಯಾತ್ರೆಯಾಗಿದ್ದರೂ ಹಲವು ಜನಪರ ಚಳವಳಿಗಳು, ಚಿಂತಕರು, ಗಣ್ಯರನ್ನೂ ಒಳಗೊಂಡ ಒಟ್ಟಾರೆ ನಾಗರಿಕ ಸಮಾಜದ ದನಿಯಾಗಿದೆ ಎಂದರೆ ತಪ್ಪಾಗಲಾರದು.

ಪಾದಯಾತ್ರೆಯ ಪರಿಣಾಮಗಳೇನು?

ಆರೆಸ್ಸೆಸ್-ಬಿಜೆಪಿಗಳು ಸೃಷ್ಟಿಸುವ ಭ್ರಮಾತ್ಮಕ, ಭಾವನಾತ್ಮಕ ಸಮಸ್ಯೆಗಳಿಗೆ ನಾಗರಿಕ ಸಮಾಜ ಹಾಗೂ ರಾಜಕೀಯ ಪಕ್ಷಗಳು ಪ್ರತಿಕ್ರಿಯಾತ್ಮಕ ಕ್ರಿಯೆಗಳಲ್ಲೇ ಮುಳುಗಿಹೋಗುವುದು ಅನೂಚಾನವಾಗಿ ನಡೆದು ಬಂದ ದುರದೃಷ್ಟಕರ ವಿದ್ಯಮಾನ. ಆದರೆ ಈ ಯಾತ್ರೆ ಬಹಳ ಸಕಾರಾತ್ಮಕವಾದ, ಪ್ರೊಆಕ್ಟಿವ್ ಆದ ಕ್ರಿಯೆಯಾಗಿದ್ದು ಪ್ರತಿಕ್ರಿಯಿಸಬೇಕಾದ ಅನಿವಾರ್ಯತೆ ಆರೆಸ್ಸೆಸ್-ಬಿಜೆಪಿಗಳಿಗೆ ಬಂದೊದಗಿದೆ. ಆದರೆ ಪಾದಯಾತ್ರೆಗೆ ಅಭೂತಪೂರ್ವ ಜನಮನ್ನಣೆ, ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಯಾವರೀತಿ ಪ್ರತಿಕ್ರಿಯಿಸಬೇಕು ಎಂಬುದು ತೋಚದೆ ದಿಕ್ಕೆಟ್ಟ ಸ್ಥಿತಿಯಲ್ಲಿರುವುದು ನಿಚ್ಚಳವಾಗಿ ಕಾಣುತ್ತಿದೆ. ಎಂದಿನಂತೆ ಅಗ್ಗದ-ಕೀಳುಮಟ್ಟದ ಅಪಪ್ರಚಾರಕ್ಕಿಳಿದಿದ್ದು, ಅವು ತಿರುಗುಬಾಣವಾಗಿ ಅವರ ತಲೆನೋವನ್ನು ಹೆಚ್ಚಿಸಿದೆ. ರಾಹುಲ್ ಗಾಂಧಿಯ ಟಿ ಶರ್ಟ್ ಬೆಲೆಯ ಬಗ್ಗೆ ಪ್ರಶ್ನೆಯೆತ್ತಿದರೆ ಮೋದಿಯ ದಶಲಕ್ಷ ಬೆಲೆಯ ಸೂಟ್ ಸಂಗತಿ ತಿರುಗುಬಾಣವಾಯ್ತು. ವಿವೇಕಾನಂದರ ಪ್ರತಿಮೆಗೆ ಗೌರವ ಸಲ್ಲಿಸಿಲ್ಲವೆಂಬ ಹಸಿ ಸುಳ್ಳು, ಸಿನಿಮಾ ನಟಿಯೊಬ್ಬರ ಕೈಹಿಡಿದು ನಡೆದ ಬಗ್ಗೆ ಕೀಳು ಪ್ರಚಾರ ಇತ್ಯಾದಿಗಳು ಬಿಜೆಪಿಗರಿಗೆ ಮುಖಭಂಗವಾಗಿ ಪರಿಣಮಿಸಿವೆ.

ನಾಗಪುರದ ಪಂಡಿತರು ಇನ್ನು ಯಾವ ರೀತಿಯ ಹೊಸ ಅಸ್ತ್ರವನ್ನು ಸಂಶೋಧಿಸಿ ತರುತ್ತಾರೆ ಎಂಬುದನ್ನು ಕಾದುನೋಡಬೇಕು.

ದಶದಿಕ್ಕುಗಳಿಂದಲೂ ಆವರಿಸಿಕೊಳ್ಳುತ್ತಿರುವ ಹಿಟ್ಲರ್‌ಶಾಹಿ ಶಕ್ತಿಗಳ ಅಟ್ಟಹಾಸವನ್ನು ಕಂಡು ಆತಂಕದಲ್ಲಿ, ಅನಾಥಪ್ರಜ್ಞೆಯಲ್ಲಿದ್ದ ದಮನಿತ, ಅಲ್ಪಸಂಖ್ಯಾತ ಸಮುದಾಯಗಳಿಗೆ, ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯಕ್ಕೆ ಭಾರತ್ ಜೋಡೋ ಯಾತ್ರೆ ಒಂದು ಮಟ್ಟದ ಭರವಸೆಯನ್ನು ಮೂಡಿಸಿದೆ.ಈ ಸಮುದಾಯಗಳಿಗೆ ರಾಹುಲ್ ಗಾಂಧಿ ಒಂದು ಸಾಂತ್ವನದ ದನಿಯಂತೆ ತೋರುತ್ತಿದ್ದಾರೆ. ರಾಹುಲ್ ಗಾಂಧಿಯ ಸರಳ ನಡೆ ನುಡಿ, ಜನಸಾಮಾನ್ಯರೊಂದಿಗೆ ಯಾವುದೇ ಕೃತ್ರಿಮತೆಯಿಲ್ಲದೆ ಬೆರೆಯುವ ಸ್ವಭಾವ, ಸಮಸ್ಯೆಗಳನ್ನು ಆಲಿಸುವ, ಕಷ್ಟಗಳಿಗೆ ಮರುಗುವ ಹೃದಯವಂತಿಕೆ ಯಾತ್ರೆಯುದ್ದಕ್ಕೂ ಅನಾವರಣಗೊಳ್ಳುತ್ತಿದೆ.

ರಾಹುಲ್ ಗಾಂಧಿ ಜನಪ್ರಿಯ ರಾಜಕಾರಣಿಯಾಗಿ ನೆಲೆಗೊಂಡಿದ್ದು ಈ ಯಾತ್ರೆಯ ಪ್ರಮುಖ ಪರಿಣಾಮಗಳಲ್ಲೊಂದು. ರಾಹುಲ್ ಗಾಂಧಿಯನ್ನು ’ನಾಲಾಯಕ್ ವ್ಯಕ್ತಿ’, ’ಪಪ್ಪು’ ಎಂದು ಮಾಧ್ಯಮಗಳ ಮೂಲಕ, ಸಾಮಾಜಿಕ ಮಾಧ್ಯಮಗಳ ಮೂಲಕ ಬಿಂಬಿಸಲು ಕಳೆದೊಂದು ದಶಕದಿಂದ ನೂರಾರು ಕೋಟಿಗಳನ್ನು ಸುರಿದು ಯಶಸ್ವಿಯಾಗಿದ್ದ ಗೋಬೆಲ್ಸ್ ಸಂತತಿಯ ಹೀನ ತಂತ್ರವನ್ನು ಈ ಪಾದಯಾತ್ರೆ ಮಕಾಡೆ ಕೆಡವಿದೆ. ಯಾತ್ರೆ ಸಾಗಿದಂತೆಲ್ಲ ದಿನೇದಿನೇ ರಾಹುಲ್ ಗಾಂಧಿಯ ವ್ಯಕ್ತಿತ್ವ ಜನರ ದೃಷ್ಟಿಯಲ್ಲಿ ಎತ್ತರಕ್ಕೆ ಬೆಳೆಯುತ್ತಿದೆ.

ಅಷ್ಟು ಮಾತ್ರವಲ್ಲದೆ, ಜನರನ್ನು ಸೆಳೆಯುವ ನಾಯಕನಾಗಿ ಹೊರಹೊಮ್ಮಿರುವ ರಾಹುಲ್ ತಮ್ಮದೇ ಕಾಂಗ್ರೆಸ್ ಪಕ್ಷದೊಳಗೆ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದಾರೆ. ರಾಹುಲ್ ಗಾಂಧಿಯ ನಾಯಕತ್ವವನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದ ಭಿನ್ನಮತೀಯ ಬಣದ ಬಾಯಿಗೆ ಸದ್ಯ ಬೀಗ ಬಿದ್ದಂತೆಯೂ ಆಗಿದೆ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ; ಭಾರತದ ಬಹುತ್ವದ ಉಳಿವಿಗೆ ದಾರಿ ಮಾಡಿಕೊಡಬಲ್ಲುದೇ?

ಎಲ್ಲಕ್ಕಿಂತ ಮುಖ್ಯವಾಗಿ ಸುದೀರ್ಘ ನಿದ್ರೆಯಲ್ಲಿದ್ದ ಕಾಂಗ್ರೆಸ್ ಪಕ್ಷದ ನಾಯಕ ಗಣಕ್ಕೆ ಪಾದಯಾತ್ರೆಯ ಮೂಲಕ ಚಾಟಿಯೇಟು ಕೊಟ್ಟು ಎಬ್ಬಿಸಿರುವುದು ರಾಹುಲ್ ಗಾಂಧಿಯ ಸಾಧನೆ ಎನ್ನಲೇಬೇಕು. ಅನಿವಾರ್ಯ ಕರ್ಮವೆಂಬಂತೆ ಅರೆಮನಸ್ಸಿನಿಂದ ಕ್ರಿಯೆಗಿಳಿದಿದ್ದ ಕೆಲವು ನಾಯಕರೂ ಕೂಡ ಯಾತ್ರೆಗೆ ಸಿಕ್ಕ ಜನಸ್ಪಂದನೆ, ಯಶಸ್ಸು ಕಂಡು ನಂತರದ ದಿನಗಳಲ್ಲಿ ಉತ್ಸಾಹದಿಂದಲೇ ತೊಡಗಿಸಿಕೊಂಡಿದ್ದನ್ನು ಕಾಣಬಹುದು. ಈ ಒಟ್ಟಾರೆ ಪ್ರಕ್ರಿಯೆಯಲ್ಲಿ ಆಶ್ಚರ್ಯವೆಂಬಂತೆ ಯುವ ಕಾರ್ಯಕರ್ತರು ತೊಡಗಿಸಿಕೊಂಡಿದ್ದು ಮುದಿಯಾಗಿದ್ದ ಕಾಂಗ್ರೆಸ್ ಪಕ್ಷದಲ್ಲಿ ವಿಶೇಷ ಬೆಳವಣಿಗೆ ಎನ್ನಲೇಬೇಕು. ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಖರ್ಗೆಯವರು ಪಕ್ಷದ ಎಲ್ಲ ಸ್ಥರಗಳಲ್ಲಿ ಯುವಕರಿಗೆ ಶೇಕಡ 50%ರಷ್ಟು ಸ್ಥಾನಗಳನ್ನು ಒದಗಿಸುವುದಾಗಿ ಘೋಷಿಸಿದ್ದಾರೆ. ಆದರೆ ರೂಢಿಗತ ರಾಜಕಾರಣದ ಶೈಲಿಗೆ ಒಗ್ಗಿಹೋಗಿರುವ ಕಾಂಗ್ರೆಸ್ ಪಕ್ಷಕ್ಕೆ ಒದಗಿಬಂದಿರುವ ಈ ಹೊಸ ಅವಕಾಶವನ್ನು ಬಳಸಿಕೊಂಡು ತಳಮಟ್ಟದಲ್ಲಿ ಪಕ್ಷದ ಬೇರುಗಳನ್ನು ಗಟ್ಟಿಗೊಳಿಸಿದರೆ ಮಾತ್ರ ಚುನಾವಣಾ ರಾಜಕೀಯದಲ್ಲಿ ಬಿಜೆಪಿಗೆ ಸವಾಲೊಡ್ಡಬಹುದು.

ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ ಗಾದೆ ಮಾತನ್ನು ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಸೂಕ್ತ.

“ಬಕ್ರೀದ್ ಮೆ ಬಚೇಂಗೆ ತೊ ಮೊಹರಂ ಮೆ ನಾಚೇಂಗೆ” ಅಂದರೆ ಬಕ್ರೀದ್‌ನಲ್ಲಿ ಬದುಕುಳಿದರೆ ಮೊಹರಂನಲ್ಲಿ ಕುಣಿಯಬಹುದು ಅಂತ. ಈ ಗಾದೆ ಮಾತಿನ ತಥ್ಯವನ್ನು ನಾವೆಲ್ಲ ಮನದಟ್ಟು ಮಾಡಿಕೊಳ್ಳುವುದು ಯಾವಾಗ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...