ಬಿಹಾರ ಚುನಾವಣೆಯ ಮಹಾಘಟಬಂಧನ್ನ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಭಾರತೀಯ ಜನತಾ ಪಕ್ಷದ(ಬಿಜೆಪಿ) ಹೇಳಿಕೆಗೆ ತಿರುಗೇಟು ನೀಡಿದ್ದು, “ನಾನು ಅನುಭವಶಾಲಿಯಲ್ಲದಿದ್ದರೆ ನನ್ನ ವಿರುದ್ಧ ವಿಶ್ವದ ಅತಿದೊಡ್ಡ ಪಕ್ಷ ತನ್ನೆಲ್ಲಾ ಬಲವನ್ನು ಏಕೆ ಪ್ರಯೋಗಿಸುತ್ತಿದೆ” ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ನನಗೆ ಅನುಭವವಿಲ್ಲದಿದ್ದರೆ, ಬಿಜೆಪಿ ತನ್ನ ಸಂಪೂರ್ಣ ಬಲವನ್ನು ಏಕೆ ಪ್ರಯೋಗಿಸುತ್ತಿದೆ. ಇದು ಅವರ ಹತಾಶೆಯನ್ನು ತೋರಿಸುತ್ತಿದೆ. ಯಾಕೆ ನಿತೀಶ್ ಕುಮಾರ್ ಅವರ ಮುಖ ಕೆಲಸ ಮಾಡುತ್ತಿಲ್ಲವೇ? ಬಿಜೆಪಿ ಅತಿದೊಡ್ಡ ಪಕ್ಷ ಸರಿ, ಆದರೆ ಅವರಿಗೆ ಮುಖ್ಯಮಂತ್ರಿ ಅಭ್ಯರ್ಥಿಯ ಕೊರತೆಯಿದೆ” ಎಂದು ಹೇಳಿದ್ದಾರೆ.
“ಅವರು ನನ್ನ ವಿರುದ್ಧ ತಮ್ಮ ಸಂಪೂರ್ಣ ಬಲವನ್ನು ಬಳಸುತ್ತಿದ್ದಾರೆ. ಆದರೆ ನಾನು ಮಾತ್ರ ಒಬ್ಬನೆ. ಅವರು ನನ್ನನ್ನು ಅನುಭವವಿಲ್ಲದವನು ಎಂದು ಕರೆಯುತ್ತಾರೆ. ಆದರೆ ನಾನು ಶಾಸಕ, ಪ್ರತಿಪಕ್ಷದ ನಾಯಕ ಮತ್ತು ಉಪ ಮುಖ್ಯಮಂತ್ರಿ ಹುದ್ದೆಯಲ್ಲಿದ್ದವನು. ನನ್ನ 5 ವರ್ಷಗಳ ಅನುಭವವು 50 ವರ್ಷಗಳ ಅನುಭವಕ್ಕೆ ಸಮಾನವಾಗಿದೆ. ಜನರು ರಾಜ್ಯ ಸರ್ಕಾರದ ಮೇಲೆ ತೀವ್ರ ಕೋಪಗೊಂಡಿದ್ದು, ಮಹಾ ಘಟಬಂಧನ್ ಸ್ಪಷ್ಟ ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಬಿಹಾರ ಚುನಾವಣೆ: ಚಿರಾಗ್ ಪಾಸ್ವಾನ್ ಪರ ನಿಂತ ತೇಜಸ್ವಿ ಯಾದವ್ – ನಿತೀಶ್ ಕುಮಾರ್ಗೆ ತಲೆನೋವು!
ನಿನ್ನೆ, “ಸರ್ಕಾರದ ಮುಖ್ಯಸ್ಥರಾಗಿ ಕಳೆದ 15 ವರ್ಷಗಳಲ್ಲಿ ಅವರು ಮಾಡಿದ ಸಾಧನೆಗಳು ಮತ್ತು ಅಭಿವೃದ್ಧಿಯ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲು ಯಾವುದೇ ಸಮಯ ಮತ್ತು ಸ್ಥಳವನ್ನು ಆಯ್ಕೆ ಮಾಡಬಹುದು. ಬಿಹಾರದ ವೈಶಾಲಿಯಲ್ಲಿ ಮೊದಲ ಬಾರಿಗೆ ಪ್ರಜಾಪ್ರಭುತ್ವ ಸ್ಥಾಪನೆಯಾದ ಕಾರಣ, ಇಲ್ಲಿ ನಾವು ಮುಖ್ಯಮಂತ್ರಿ ಅಭ್ಯರ್ಥಿಗಳ ನಡುವೆ ನೇರ ಚರ್ಚೆ ನಡೆಯಬೇಕು ಎನ್ನುವ ಈ ಸಂಪ್ರದಾಯವನ್ನು ಪ್ರಾರಂಭಿಸೋಣ” ಎಂದು ಸವಾಲು ಹಾಕಿದ್ದರು.
ಈ ಸವಾಲಿಗೆ ಪ್ರತಿಕ್ರಿಯಿಸಿದ ಬಿಹಾರದ ಮಾಜಿ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ನಿತ್ಯಾನಂದ್ ರೈ, “ಅಭಿವೃದ್ಧಿಯ ವಿಷಯದಲ್ಲಿ ಎಲ್ಲಿಯಾದರೂ ಚರ್ಚಿಸಲು ಅವರು ಸಿದ್ಧರಾಗಿದ್ದಾರೆ. ಆದರೆ ಈಗ ನಿತೀಶ್ ಕುಮಾರ್ ಎನ್ಡಿಎ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ” ಎಂದಿದ್ದರು.
ಬಿಹಾರದಲ್ಲಿ, 243 ಸದಸ್ಯರ ವಿಧಾನಸಭಾ ಚುನಾವಣೆಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್ 28, ನವೆಂಬರ್ 3 ಮತ್ತು ನವೆಂಬರ್ 7 ರಂದು ಮತದಾನ ನಡೆಯಲಿದೆ. ನವೆಂಬರ್ 10 ರಂದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಬಿಹಾರ ಚುನಾವಣೆಗಾಗಿ ಪ್ರಿಯಾಂಕಾ ಇಂದಿರಾ ಗಾಂಧಿಯವರ ಸೀರೆ ಧರಿಸಿದ್ದಾರೆಯೇ?