Homeರಾಜಕೀಯಹೆಚ್ಚಾಗುತ್ತಿದೆ ಬಿಜೆಪಿಯ ಆತಂಕ; ಕುಗ್ಗುತ್ತಿದೆ ಅದರ ಅಂಕಗಣಿತ

ಹೆಚ್ಚಾಗುತ್ತಿದೆ ಬಿಜೆಪಿಯ ಆತಂಕ; ಕುಗ್ಗುತ್ತಿದೆ ಅದರ ಅಂಕಗಣಿತ

- Advertisement -
- Advertisement -

 ಶ್ರೀನಿವಾಸ ಕಾರ್ಕಳ |

‘ಕೆಳಗಿನ ನೆಲ ಕುಸಿದಾಗ ಅದರ ಮೇಲೆ ನಿಂತ ಅತಿ ಎತ್ತರದ ವ್ಯಕ್ತಿ ಮೊದಲು ಉರುಳುತ್ತಾರೆ’ ಎಂಬ ಒಂದು ಮಾತಿದೆ. ಒಂದು ಕಾಲದಲ್ಲಿ ಇಂದಿರಾ ಗಾಂಧಿಯವರನ್ನು, ರಾಜೀವ ಗಾಂಧಿಯವರನ್ನು, ವಾಜಪೇಯಿಯವರನ್ನು ಸೋಲಿಸುವುದು ಸಾಧ್ಯವೇ ಇಲ್ಲ ಎಂಬಂತಹ ಒಂದು ವಾತಾವರಣವಿತ್ತು. ಆದರೆ ಈ ದೇಶದ ಸಾಮಾನ್ಯ ಮತದಾರರ ನಿರ್ಧಾರ ಹೇಗೆ ಅವರನ್ನೆಲ್ಲ ಗಾದಿಯಿಂದ ಉರುಳಿಸಿತ್ತು ಎನ್ನುವುದನ್ನು ನಾವು ನೋಡಿಯೇ ಇದ್ದೇವೆ. ಅಂತಹ ಒಂದು ಸಂದರ್ಭದ ಹೊಸ್ತಿಲಿನಲ್ಲಿ ಭಾರತ ಮತ್ತೆ ಬಂದು ನಿಂತಿದೆಯೇ? ಮೊನ್ನೆ ನಡೆದ ಐದು ರಾಜ್ಯಗಳ ಫಲಿತಾಂಶ ಅಂತಹ ಒಂದು ಸಣ್ಣದಾದರೂ ಸೂಚನೆಯನ್ನು ನೀಡುತ್ತಿರುವಂತೆ ಭಾಸವಾಗುತ್ತಿದೆ.

ನಮಗೆಲ್ಲ ಈಗಾಗಲೇ ಗೊತ್ತಿರುವ ಹಾಗೆ ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ತೆಲಂಗಾಣವನ್ನು ಟಿ.ಆರ್.ಎಸ್, ಮಿಜೊರಂ ಅನ್ನು ಎಮ್.ಎನ್.ಎಫ್ ವಶಕ್ಕೆ ತೆಗೆದುಕೊಂಡರೆ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ತನ್ನದು ಜಗತ್ತಿನಲ್ಲಿಯೇ ಅತಿದೊಡ್ಡ ರಾಜಕೀಯ ಪಕ್ಷ, ಚುನಾವಣೆ ಗೆಲ್ಲುವುದು ತನಗೆ ಒಂದು ಸವಾಲೇ ಅಲ್ಲ ಎಂದು ಬೀಗುತ್ತಾ ಕಾಂಗ್ರೆಸ್-ಮುಕ್ತ, ವಿಪಕ್ಷ-ಮುಕ್ತ, 50 ವರ್ಷಗಳವರೆಗೆ ತಮ್ಮದೇ ರಾಜ್ಯಭಾರ ಎಂದು ಹಾರಾಡುತ್ತಿದ್ದ ಬಿಜೆಪಿ ಹೊಸ ರಾಜ್ಯವನ್ನು ಗೆಲ್ಲುವ ಮಾತಂತಿರಲಿ, ಇದ್ದ ಮೂರು ರಾಜ್ಯಗಳನ್ನೂ ಕಳೆದುಕೊಂಡಿದೆ. ಅದೂ ನಗಣ್ಯವೆನಿಸುವ ರಾಜ್ಯಗಳಲ್ಲ; ಹಿಂದಿ ಹೃದಯ ಭಾಗಗಳು, ಹಿಂದೂಗಳು ಬಹುಸಂಖ್ಯಾತರಾಗಿರುವ ರಾಜ್ಯಗಳು. ಈ ಭಾಗದ ಸೋಲು ಸರಿಸುಮಾರು 44 ಲೋಕಸಭಾ ಸ್ಥಾನಗಳ ಬಗ್ಗೆ ಬಿಜೆಪಿಗೆ ಚಿಂತೆಯುಂಟು ಮಾಡುವ ಸಂಗತಿಯಿದು ಎನ್ನುತ್ತಿದ್ದಾರೆ ವಿಶ್ಲೇಷಕರು.

shivaraja chowhvan

ಸದ್ಯ ದಕ್ಷಿಣದಲ್ಲಿ ಬಿಜೆಪಿಯ ಭವಿಷ್ಯ ಏನೇನೂ ಚೆನ್ನಾಗಿಲ್ಲ. ಕೇರಳದಲ್ಲಿ ಎಡಪಕ್ಷ ಮತ್ತು ಕಾಂಗ್ರೆಸ್ ಸಮಬಲದಲ್ಲಿದ್ದು, ಅಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕೈಜೋಡಿಸಿದರೆ ಬಿಜೆಪಿಗೆ ಒಂದಷ್ಟು ಹಾನಿಯಾಗಲಿದೆ. ಆಂಧ್ರದಲ್ಲಿ ಕಾಂಗ್ರೆಸ್ ಮತ್ತು ಟಿಡಿಪಿ ಒಂದಾಗಿವೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಗೆಳೆಯರು. ಮಹಾರಾಷ್ಟ್ರ, ಗುಜರಾತ್‍ಗಳಲ್ಲಿ ಕಾಂಗ್ರೆಸ್ ಸಮಬಲದಲ್ಲಿದೆ. ಒಡಿಶಾದಲ್ಲಿ ಬಿಜೆಡಿ ಪ್ರಬಲವಾಗಿದೆ. ಪ.ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಕ್ತಿಶಾಲಿಯಾಗಿದ್ದು ಅಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ. ಬಿಹಾರದಲ್ಲಿ ಬಿಜೆಪಿಯು ಸ್ಥಾನಗಳನ್ನು ಜೆಡಿಯು ಜತೆಗೆ ಹಂಚಿಕೊಳ್ಳುವ ಅನಿವಾರ್ಯತೆ ಇದೆಯಲ್ಲದೆ, ಅಲ್ಲಿ ಆರ್.ಜೆ.ಡಿ ಶಕ್ತಿಶಾಲಿಯಾಗಿದೆ. 80 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷ ಕೈ ಜೋಡಿಸಿದರೆ ಬಿಜೆಪಿಗೆ ಮಾರಕ ಹೊಡೆತವಾಗಲಿದೆ. ಅಂದಮೇಲೆ ಮತ್ತೆ ತಮ್ಮದೇ ಸರಕಾರ ಎಂದು ಹೇಳಿಕೊಳ್ಳುವ ಬಿಜೆಪಿಗೆ ಅಷ್ಟು ಸ್ಥಾನಗಳು ಎಲ್ಲಿಂದ ಸಿಗಬೇಕು?! ಈ ವಾಸ್ತವದ ಅರಿವಿದ್ದೇ, ‘ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷವೂ 200ರ ಗಡಿ ದಾಟುವುದಿಲ್ಲ’ ಎಂದು ಅಕಾಲಿ ದಳದ ನಾಯಕ ನರೇಶ್ ಗುಜ್ರಾಲ್ ಅವರು ಬಿಜೆಪಿಯನ್ನು ಗಮನದಲ್ಲಿರಿಸಿಕೊಂಡು ಹೇಳಿದ್ದಾರೆ.

ಮೊನ್ನೆಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ 61 ಲಕ್ಷಕ್ಕೂ ಅಧಿಕ ಮತಗಳನ್ನು ಕಳೆದುಕೊಂಡರೆ, ಕಾಂಗ್ರೆಸ್‍ಗೆ 1 ಕೋಟಿ 25 ಲಕ್ಷಕ್ಕಿಂತಲೂ ಅಧಿಕ ಮತಗಳ ಲಾಭವಾಗಿದೆ. ಇದು ಬಿಜೆಪಿಗೆ ಎಚ್ಚರಿಕೆಯ ಗಂಟೆಯಾದರೆ ಕಾಂಗ್ರೆಸ್‍ಗೆ ಉತ್ಸಾಹ ಮೂಡಿಸುವ ಸಂಗತಿ. ಪಂಜಾಬ್ ಈಗಾಗಲೇ ಕಾಂಗ್ರೆಸ್ ವಶದಲ್ಲಿದ್ದು, ಇದೀಗ ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್‍ಗಢ ಹೀಗೆ ಹಿಂದಿ ಬೆಲ್ಟ್ ಎಂದು ಕರೆಯಲಾಗುವ ಪ್ರದೇಶವೂ ಅದರ ತೆಕ್ಕೆಗೆ ಬಿದ್ದುದರಿಂದ ಅಲ್ಲಿ ಕಾಂಗ್ರೆಸ್‍ಗೆ ಅನುಕೂಲಕರ ಸ್ಥಿತಿ ನಿರ್ಮಾಣವಾಗಲಿದೆ. ಚುನಾವಣೆ ಎದುರಿಸಲು ಅಗತ್ಯ ಸಂಪನ್ಮೂಲ, ಹಾಗೆಯೇ ಕಾರ್ಯಕರ್ತರ ಮನೋಬಲವೂ ಹೆಚ್ಚಲಿದೆ. ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಅಲ್ಲಿ ಆಡಳಿತ ವಿರೋಧಿ ಅಲೆ ಏಳುವ ಸಾಧ್ಯತೆಯೇ ಇಲ್ಲದಿರುವುದರಿಂದ ಅಲ್ಲೂ ಬಿಜೆಪಿ ತೀವ್ರ ಸವಾಲು ಎದುರಿಸಬೇಕಾಗುತ್ತದೆ.

ಗ್ರಾಮೀಣ ಭಾಗದಲ್ಲಿ ಜನರು ಆಕ್ರೋಶಿತರಾಗಿದ್ದು ಅವರು ದೊಡ್ಡ ಪ್ರಮಾಣದಲ್ಲಿ ಬಿಜೆಪಿಯ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ಹಿರಿಯ ಪತ್ರಕರ್ತೆ ಸಭಾ ನಕ್ವಿ ಹೇಳಿದ್ದಾರೆ. ಇದನ್ನು ಪುಷ್ಟೀಕರಿಸುವಂತೆ ಮೂರು ರಾಜ್ಯಗಳ ಗ್ರಾಮೀಣ ಸ್ಥಾನಗಳಲ್ಲಿ ಬಿಜೆಪಿಗೆ ಬಿದ್ದ ಹೊಡೆತ ಮಾರಕವಾಗಿದೆ. ಅದಕ್ಕೆ ಛತ್ತೀಸ್‍ಗಢದಲ್ಲಿ 34% ಗ್ರಾಮೀಣ ಸೀಟುಗಳು, ಮಧ್ಯಪ್ರದೇಶದಲ್ಲಿ 30% ಸೀಟುಗಳು, ರಾಜಸ್ತಾನದಲ್ಲಿ 49% ಸ್ಥಾನ ನಷ್ಟವಾಗಿದೆ.

ದೇಶದ ರೈತರು ಹಿಂದೆಂದೂ ಕಂಡಿರದ ಸಂಕಷ್ಟದಲ್ಲಿದ್ದಾರೆ. ತಮ್ಮ ಹಕ್ಕೊತ್ತಾಯ ಆಗ್ರಹಿಸಿ ಪ್ರತಿಭಟನೆ ನಡೆಸಿದರೆ ಅವರ ಮೇಲೆ ಸರಕಾರ ಗುಂಡು ಹಾರಿಸಿ ಕೊಂದು ಹಾಕುತ್ತದೆ. ದೇಶದ ಉದ್ದಗಲದಿಂದ ತಮ್ಮ ದೂರು ಹೇಳಿಕೊಂಡು ದಿಲ್ಲಿಗೆ ಬಂದರೆ ಅವರನ್ನು ಕನಿಷ್ಠ ಕಂಡು ಅವರ ಅಳಲು ಆಲಿಸುವ ಸೌಜನ್ಯವನ್ನೂ ಆಳುವವರು ತೋರುವುದಿಲ್ಲ. ಹಾಗಾಗಿ ಸರಕಾರದ ನೀತಿಯಿಂದ ಅಸಮಾಧಾನಗೊಂಡ ರೈತರೂ ಬಿಜೆಪಿಯ ವಿರುದ್ಧ ಮತ ಚಲಾಯಿಸಿದ್ದಾರೆ. ಬಿಜೆಪಿಯ ವಿರುದ್ಧ ಮತ ಚಲಾಯಿಸಿದ್ದು ಗ್ರಾಮೀಣ ಭಾಗದವರು ಮಾತ್ರವೇ? ಅಲ್ಲ. ಅಚ್ಚರಿಯೆಂಬಂತೆ ನಗರ ಪ್ರದೇಶಗಳಲ್ಲೂ ಜನ ದೊಡ್ಡ ಪ್ರಮಾಣದಲ್ಲಿ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂಬುದನ್ನು ದಿ ಹಿಂದೂ ಪತ್ರಿಕೆಯ ವರದಿಯೊಂದು ಅಂಕಿಅಂಶ ಸಹಿತ ಬೆಟ್ಟು ಮಾಡಿದೆ. ನಗರದ ಜನ ತಿರಸ್ಕರಿಸಿದ್ದಾರೆ ಎಂಬುದು ಬಿಜೆಪಿಯನ್ನು ಖಂಡಿತವಾಗಿಯೂ ಕಂಗಾಲು ಮಾಡುವ ಸಂಗತಿ.

ನಮ್ಮದು ಬಹುಸಂಸ್ಕøತಿಯ ಬಹುಭಾಷೆಯ, ಬಹು ಧರ್ಮಗಳ ದೇಶ. ನೈಜ ಸಮಸ್ಯೆಗಳನ್ನು ಕಡೆಗಣಿಸಿ ಮತಧರ್ಮದಂತಹ ಭಾವನಾತ್ಮಕ ವಿಷಯಗಳ ಮೇಲೆ ಆಡಳಿತ ನಡೆಸಲು ಬಯಸಿದವರನ್ನು ಈ ದೇಶದ ಜನರು ಪುರಸ್ಕರಿಸಿದ್ದು ಕಡಿಮೆ. ಒಂದುವೇಳೆ ಅದರಿಂದ ಲಾಭವಾದರೂ ಅದು ತಾತ್ಕಾಲಿಕ. ಗುಜರಾತಿನಂತಹ ಗುಜರಾತಿನಲ್ಲಿಯೇ ಈ ಬಾರಿ ಬಿಜೆಪಿಗೆ 99ರ ಗಡಿಯನ್ನು ದಾಟಲಾಗಲಿಲ್ಲ. ಸ್ವತಃ ಪ್ರಧಾನಿಗಳೇ 21 ರ್ಯಾಲಿ ಮಾಡಿದರೂ ಕರ್ನಾಟಕ ಅವರಿಗೆ ಮಣೆ ಹಾಕಲಿಲ್ಲ. ಧರ್ಮದ ಮೇಲೆ ಮತ ಕೇಳಿದವರನ್ನು, ಅಧಿಕಾರಕ್ಕೆ ಬಂದರೆ ಊರಿನ ಹೆಸರು ಬದಲಾವಣೆ ಮಾಡುತ್ತೇವೆ ಅಂದವರನ್ನು ಮೊನ್ನೆಯ ಚುನಾವಣೆಯಲ್ಲಿ ಮತದಾರರು ಗುಡಿಸಿ ಹಾಕಿದ್ದಾರೆ. ಇದು ಮೋದಿ ಮತ್ತವರ ಬಳಗಕ್ಕೆ ಅರ್ಥವಾಗದ ವಿಷಯವೇನಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಅವರು ಬೇರೆಯೇ ತಂತ್ರಗಳನ್ನು ಹೂಡಲೂಬಹುದು ಮತ್ತು ಆ ತಂತ್ರ ದೇಶದ ಒಟ್ಟಾರೆ ಹಿತದೃಷ್ಟಿಯಿಂದ ಅತ್ಯಂತ ಮಾರಕವಾಗಿರಲೂಬಹುದು. ಯಾಕೆಂದರೆ ಸರ್ವಾಧಿಕಾರಿಗಳು ಅಷ್ಟು ಸುಲಭದಲ್ಲಿ ಅಧಿಕಾರ ತ್ಯಾಗ ಮಾಡಿದ ಉದಾಹರಣೆ ಜಗತ್ತಿನಲ್ಲಿ ತುಂಬ ಕಡಿಮೆ.

vasumdaraje sindhya

ಈ ಚುನಾವಣೆ ಪ್ರಧಾನಿ ಮೋದಿಯವರ ಸಾಧನೆಯನ್ನು ಪರೀಕ್ಷೆಗಿಡುವ ಚುನಾವಣೆಯಲ್ಲ, ಇದು ರಾಜ್ಯಗಳ ಲೋಕಲ್ ಇಶ್ಯೂಗಳನ್ನು ಆಧರಿಸಿದ ಚುನಾವಣೆ ಬಿಜೆಪಿ ಸೋಲಿನ ಹೊಣೆಯನ್ನು ಆ ಮೂರು ರಾಜ್ಯಗಳ ಮುಖ್ಯಮಂತ್ರಿಗಳೇ ಹೊರಬೇಕು ಎಂದು ಮೋದಿಯವರನ್ನು ಪಾರು ಮಾಡುವ ವಿಫಲ ಯತ್ನ ನಡೆದಿದೆ. ಇದಕ್ಕೆ ಬಿಜೆಪಿಯ ತುತ್ತೂರಿ ಮಾಧ್ಯಮಗಳೂ ಇನ್ನಿಲ್ಲದ ಯತ್ನ ಮಾಡುತ್ತಿವೆÉ. ಸೋಲಿಗೆ ತಾವೇ ಕಾರಣ ಎಂದು ಈಗಾಗಲೇ ಆ ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಹೇಳಿಕೆ ಕೊಡಿಸಲಾಗಿದೆ ಕೂಡಾ. ಆದರೆ ಈವತ್ತು ದೇಶದ ಜನರನ್ನು ತೀವ್ರವಾಗಿ ಬಾಧಿಸಿರುವುದು ಕೃಷಿ, ಆರ್ಥಿಕತೆ ಇತ್ಯಾದಿಗಳನ್ನು ಕುರಿತ ಕೇಂದ್ರ ಸರಕಾರದ ಜನವಿರೋಧಿ ನೀತಿಗಳು. ಸಾಧನೆಯ ಕೀರ್ತಿಯೆಲ್ಲ ತನ್ನದೇ ಎನ್ನುವವರು ಸಹಜವಾಗಿಯೇ ಸೋಲಿನ ಹೊಣೆಯನ್ನೂ ಹೊರಲೇಬೇಕಾಗುತ್ತದೆ ಅಲ್ಲವೇ? ಅಲ್ಲದೆ ಪ್ರಧಾನಿಗಳು ಪ್ರಚಾರದಿಂದಲೇ ದೂರ ನಿಂತಿದ್ದರೆ ಬೇರೆ ವಿಚಾರ. ಆದರೆ ಈ ಎಲ್ಲ ರಾಜ್ಯಗಳಲ್ಲೂ ಅವರು ವ್ಯಾಪಕವಾಗಿ ತಿರುಗಾಡಿ ಪ್ರಚಾರ ಭಾಷಣ ಮಾಡಿದ್ದಾರೆ. ಪಕ್ಷವನ್ನು ಗೆಲ್ಲಿಸುವ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದರು. ಹಾಗಾಗಿ ಈಗ ಏನೇ ಸಬೂಬುಗಳನ್ನು ಹೇಳಿಕೊಳ್ಳಬಹುದಾದರು ಆಂತರ್ಯದಲ್ಲಿ ಬಿಜೆಪಿ ಮತ್ತು ಮೋದಿ, ಕುಸಿದುಹೋಗಿದ್ದಾರೆ. ಅಧಿಕಾರ ಉಳಿಸಿಕೊಳ್ಳುವ ಆತಂಕ ಅವರಿಗೆ ಶುರುವಾಗಿದೆ. ನಿವೃತ್ತ ನ್ಯಾಯಮೂರ್ತಿ ಮತ್ತು ಭಾರತೀಯ ಪ್ರೆಸ್ ಕೌನ್ಸಿಲ್‍ನ ಮಾಜಿ ಅಧ್ಯಕ್ಷರೂ ಆದ ಮಾರ್ಕಂಡೇಯ ಖಟ್ಜು ಹೇಳಿರುವಂತೆ ಬಿಜೆಪಿ ದೇಶದ ಮೇಲೆ ಆಘಾತಕಾರಿ ಪ್ರಯೋಗಗಳನ್ನು ನಡೆಸಿದರೂ ಅಚ್ಚರಿಯಿಲ್ಲ.

ಇಷ್ಟಾದರೂ ಮೋದಿಯವರು ನೆಹರೂ ವಂಶದ ಮೇಲಿನ ವಾಗ್ದಾಳಿಯನ್ನು ಈಗಲೂ ಮುಂದುವರಿಸಿದ್ದಾರೆ. ಅವರಿಗೆ ತಾನು ದೇಶದ ಪ್ರಧಾನಿ ಹಾಗಾಗಿ ಪ್ರಧಾನಿ ಸ್ಥಾನದ ಘನತೆ ಕಾಪಾಡಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲ. ಸಾಲದೆಂಬಂತೆ ಇದೀಗ ರಾಮ ಮಂದಿರ ವಿಷಯವನ್ನು ಮುಂದಿಡಲಾಗುತ್ತಿದೆ. ಅಮಿತ್ ಶಾ ಈ ದೇಶದ ಅಕ್ರಮ ವಲಸಿಗರನ್ನು ಹೊರ ಹಾಕುವ ಮಾತು ಆಡುತ್ತಿದ್ದಾರೆ. ದೇಶಪ್ರೇಮವನ್ನು, ಪಾಕಿಸ್ತಾನವನ್ನು ಮತ್ತೆ ಮತ್ತೆ ಪ್ರಸ್ತಾವಿಸಲಾಗುತ್ತಿದೆ. ಇನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಜಯ್ ಬಿಶ್ತ್ (ಯೋಗಿ ಆದಿತ್ಯನಾಥ) ಅವರಂತೂ ಹೋದಲ್ಲಿ ಬಂದಲ್ಲಿ ಹಿಂದೂ ಮುಸ್ಲಿಂ ವಿಭಜನೆಯ ರಾಜಕಾರಣ ಮಾಡುತ್ತಿದ್ದಾರೆ. ‘ಅಲಿ ನಿಮಗಿರಲಿ ನಮಗೆ ಭಜರಂಗಬಲಿ ಸಾಕು’ ಎಂದು ಬಹಿರಂಗವಾಗಿಯೇ ಕೋಮುವಾದಿ ಹೇಳಿಕೆ ನೀಡುತ್ತಿದ್ದಾರೆ. ಅಧಿಕಾರಕ್ಕೆ ಬಂದರೆ ನಿಮಗೆ ಅನ್ನ, ಆರೋಗ್ಯ, ವಸತಿ, ಉದ್ಯೋಗ ನೀಡುತ್ತೇವೆ ಎನ್ನುವ ಬದಲಿಗೆ ನಿಮ್ಮೂರಿನ ಹೆಸರು ಬದಲಾಯಿಸುತ್ತೇವೆ ಅನ್ನುತ್ತಿದ್ದಾರೆ. ಹನುಮಂತನನ್ನೂ ದಲಿತನನ್ನಾಗಿಸುತ್ತಾರೆ. ಆದರೆ ಚುನಾವಣಾ ಫಲಿತಾಂಶಗಳು ಹೇಳುವ ಪ್ರಕಾರ ಜನರಿಗೆ ಇದೆಲ್ಲ ಬೇಕಾಗಿಲ್ಲ. ಅವರಿಗೆ ಅವರ ನಿತ್ಯ ಬದುಕಿನ ಸಮಸ್ಯೆಗಳು ನೀಗಬೇಕು. ಉಣ್ಣಲು ಇಲ್ಲದವರಿಗೆ ಉಣ್ಣಲು ಬೇಕು, ಮನೆಯಿಲ್ಲದವರಿಗೆ ಮನೆ ಬೇಕು, ರೈತರಿಗೆ ತಮ್ಮ ಫಸಲಿಗೆ ಸೂಕ್ತ ಬೆಲೆ ಬೇಕು, ಯುವಕರಿಗೆ ಉದ್ಯೋಗ ಬೇಕು.
ಅಂದಹಾಗೆ, ದೇಶದ ಮೊದಲ ಗೋ ಕಲ್ಯಾಣಮಂತ್ರಿ ಬಿಜೆಪಿಯ ಓತಾ ರಾಮ್ ದೇವಸಿ ರಾಜಸ್ತಾನದ ಸಿರೋಹಿ ಜಿಲ್ಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯ ವಿರುದ್ಧ ಮೊನ್ನೆ ಚುನಾವಣೆ ಸೋತರು. ಇದನ್ನು ಧರ್ಮ, ದೇವರು, ದನ ಎಂದು ಭಾವನಾತ್ಮಕ ವಿಷಯಗಳನ್ನು ಬಳಸಿಕೊಂಡು ಅಧಿಕಾರ ಹಿಡಿಯಲು ಯತ್ನಿಸುವವರಿಗೆ ಭಾರತೀಯ ಮತದಾರರು ರವಾನಿಸಿದ ಎಚ್ಚರಿಕೆಯ ಸಂದೇಶವೆಂದೂ ಪರಿಗಣಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...