Homeರಾಜಕೀಯಹೆಚ್ಚಾಗುತ್ತಿದೆ ಬಿಜೆಪಿಯ ಆತಂಕ; ಕುಗ್ಗುತ್ತಿದೆ ಅದರ ಅಂಕಗಣಿತ

ಹೆಚ್ಚಾಗುತ್ತಿದೆ ಬಿಜೆಪಿಯ ಆತಂಕ; ಕುಗ್ಗುತ್ತಿದೆ ಅದರ ಅಂಕಗಣಿತ

- Advertisement -
- Advertisement -

 ಶ್ರೀನಿವಾಸ ಕಾರ್ಕಳ |

‘ಕೆಳಗಿನ ನೆಲ ಕುಸಿದಾಗ ಅದರ ಮೇಲೆ ನಿಂತ ಅತಿ ಎತ್ತರದ ವ್ಯಕ್ತಿ ಮೊದಲು ಉರುಳುತ್ತಾರೆ’ ಎಂಬ ಒಂದು ಮಾತಿದೆ. ಒಂದು ಕಾಲದಲ್ಲಿ ಇಂದಿರಾ ಗಾಂಧಿಯವರನ್ನು, ರಾಜೀವ ಗಾಂಧಿಯವರನ್ನು, ವಾಜಪೇಯಿಯವರನ್ನು ಸೋಲಿಸುವುದು ಸಾಧ್ಯವೇ ಇಲ್ಲ ಎಂಬಂತಹ ಒಂದು ವಾತಾವರಣವಿತ್ತು. ಆದರೆ ಈ ದೇಶದ ಸಾಮಾನ್ಯ ಮತದಾರರ ನಿರ್ಧಾರ ಹೇಗೆ ಅವರನ್ನೆಲ್ಲ ಗಾದಿಯಿಂದ ಉರುಳಿಸಿತ್ತು ಎನ್ನುವುದನ್ನು ನಾವು ನೋಡಿಯೇ ಇದ್ದೇವೆ. ಅಂತಹ ಒಂದು ಸಂದರ್ಭದ ಹೊಸ್ತಿಲಿನಲ್ಲಿ ಭಾರತ ಮತ್ತೆ ಬಂದು ನಿಂತಿದೆಯೇ? ಮೊನ್ನೆ ನಡೆದ ಐದು ರಾಜ್ಯಗಳ ಫಲಿತಾಂಶ ಅಂತಹ ಒಂದು ಸಣ್ಣದಾದರೂ ಸೂಚನೆಯನ್ನು ನೀಡುತ್ತಿರುವಂತೆ ಭಾಸವಾಗುತ್ತಿದೆ.

ನಮಗೆಲ್ಲ ಈಗಾಗಲೇ ಗೊತ್ತಿರುವ ಹಾಗೆ ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ತೆಲಂಗಾಣವನ್ನು ಟಿ.ಆರ್.ಎಸ್, ಮಿಜೊರಂ ಅನ್ನು ಎಮ್.ಎನ್.ಎಫ್ ವಶಕ್ಕೆ ತೆಗೆದುಕೊಂಡರೆ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ತನ್ನದು ಜಗತ್ತಿನಲ್ಲಿಯೇ ಅತಿದೊಡ್ಡ ರಾಜಕೀಯ ಪಕ್ಷ, ಚುನಾವಣೆ ಗೆಲ್ಲುವುದು ತನಗೆ ಒಂದು ಸವಾಲೇ ಅಲ್ಲ ಎಂದು ಬೀಗುತ್ತಾ ಕಾಂಗ್ರೆಸ್-ಮುಕ್ತ, ವಿಪಕ್ಷ-ಮುಕ್ತ, 50 ವರ್ಷಗಳವರೆಗೆ ತಮ್ಮದೇ ರಾಜ್ಯಭಾರ ಎಂದು ಹಾರಾಡುತ್ತಿದ್ದ ಬಿಜೆಪಿ ಹೊಸ ರಾಜ್ಯವನ್ನು ಗೆಲ್ಲುವ ಮಾತಂತಿರಲಿ, ಇದ್ದ ಮೂರು ರಾಜ್ಯಗಳನ್ನೂ ಕಳೆದುಕೊಂಡಿದೆ. ಅದೂ ನಗಣ್ಯವೆನಿಸುವ ರಾಜ್ಯಗಳಲ್ಲ; ಹಿಂದಿ ಹೃದಯ ಭಾಗಗಳು, ಹಿಂದೂಗಳು ಬಹುಸಂಖ್ಯಾತರಾಗಿರುವ ರಾಜ್ಯಗಳು. ಈ ಭಾಗದ ಸೋಲು ಸರಿಸುಮಾರು 44 ಲೋಕಸಭಾ ಸ್ಥಾನಗಳ ಬಗ್ಗೆ ಬಿಜೆಪಿಗೆ ಚಿಂತೆಯುಂಟು ಮಾಡುವ ಸಂಗತಿಯಿದು ಎನ್ನುತ್ತಿದ್ದಾರೆ ವಿಶ್ಲೇಷಕರು.

shivaraja chowhvan

ಸದ್ಯ ದಕ್ಷಿಣದಲ್ಲಿ ಬಿಜೆಪಿಯ ಭವಿಷ್ಯ ಏನೇನೂ ಚೆನ್ನಾಗಿಲ್ಲ. ಕೇರಳದಲ್ಲಿ ಎಡಪಕ್ಷ ಮತ್ತು ಕಾಂಗ್ರೆಸ್ ಸಮಬಲದಲ್ಲಿದ್ದು, ಅಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕೈಜೋಡಿಸಿದರೆ ಬಿಜೆಪಿಗೆ ಒಂದಷ್ಟು ಹಾನಿಯಾಗಲಿದೆ. ಆಂಧ್ರದಲ್ಲಿ ಕಾಂಗ್ರೆಸ್ ಮತ್ತು ಟಿಡಿಪಿ ಒಂದಾಗಿವೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಗೆಳೆಯರು. ಮಹಾರಾಷ್ಟ್ರ, ಗುಜರಾತ್‍ಗಳಲ್ಲಿ ಕಾಂಗ್ರೆಸ್ ಸಮಬಲದಲ್ಲಿದೆ. ಒಡಿಶಾದಲ್ಲಿ ಬಿಜೆಡಿ ಪ್ರಬಲವಾಗಿದೆ. ಪ.ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಕ್ತಿಶಾಲಿಯಾಗಿದ್ದು ಅಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ. ಬಿಹಾರದಲ್ಲಿ ಬಿಜೆಪಿಯು ಸ್ಥಾನಗಳನ್ನು ಜೆಡಿಯು ಜತೆಗೆ ಹಂಚಿಕೊಳ್ಳುವ ಅನಿವಾರ್ಯತೆ ಇದೆಯಲ್ಲದೆ, ಅಲ್ಲಿ ಆರ್.ಜೆ.ಡಿ ಶಕ್ತಿಶಾಲಿಯಾಗಿದೆ. 80 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷ ಕೈ ಜೋಡಿಸಿದರೆ ಬಿಜೆಪಿಗೆ ಮಾರಕ ಹೊಡೆತವಾಗಲಿದೆ. ಅಂದಮೇಲೆ ಮತ್ತೆ ತಮ್ಮದೇ ಸರಕಾರ ಎಂದು ಹೇಳಿಕೊಳ್ಳುವ ಬಿಜೆಪಿಗೆ ಅಷ್ಟು ಸ್ಥಾನಗಳು ಎಲ್ಲಿಂದ ಸಿಗಬೇಕು?! ಈ ವಾಸ್ತವದ ಅರಿವಿದ್ದೇ, ‘ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷವೂ 200ರ ಗಡಿ ದಾಟುವುದಿಲ್ಲ’ ಎಂದು ಅಕಾಲಿ ದಳದ ನಾಯಕ ನರೇಶ್ ಗುಜ್ರಾಲ್ ಅವರು ಬಿಜೆಪಿಯನ್ನು ಗಮನದಲ್ಲಿರಿಸಿಕೊಂಡು ಹೇಳಿದ್ದಾರೆ.

ಮೊನ್ನೆಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ 61 ಲಕ್ಷಕ್ಕೂ ಅಧಿಕ ಮತಗಳನ್ನು ಕಳೆದುಕೊಂಡರೆ, ಕಾಂಗ್ರೆಸ್‍ಗೆ 1 ಕೋಟಿ 25 ಲಕ್ಷಕ್ಕಿಂತಲೂ ಅಧಿಕ ಮತಗಳ ಲಾಭವಾಗಿದೆ. ಇದು ಬಿಜೆಪಿಗೆ ಎಚ್ಚರಿಕೆಯ ಗಂಟೆಯಾದರೆ ಕಾಂಗ್ರೆಸ್‍ಗೆ ಉತ್ಸಾಹ ಮೂಡಿಸುವ ಸಂಗತಿ. ಪಂಜಾಬ್ ಈಗಾಗಲೇ ಕಾಂಗ್ರೆಸ್ ವಶದಲ್ಲಿದ್ದು, ಇದೀಗ ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್‍ಗಢ ಹೀಗೆ ಹಿಂದಿ ಬೆಲ್ಟ್ ಎಂದು ಕರೆಯಲಾಗುವ ಪ್ರದೇಶವೂ ಅದರ ತೆಕ್ಕೆಗೆ ಬಿದ್ದುದರಿಂದ ಅಲ್ಲಿ ಕಾಂಗ್ರೆಸ್‍ಗೆ ಅನುಕೂಲಕರ ಸ್ಥಿತಿ ನಿರ್ಮಾಣವಾಗಲಿದೆ. ಚುನಾವಣೆ ಎದುರಿಸಲು ಅಗತ್ಯ ಸಂಪನ್ಮೂಲ, ಹಾಗೆಯೇ ಕಾರ್ಯಕರ್ತರ ಮನೋಬಲವೂ ಹೆಚ್ಚಲಿದೆ. ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಅಲ್ಲಿ ಆಡಳಿತ ವಿರೋಧಿ ಅಲೆ ಏಳುವ ಸಾಧ್ಯತೆಯೇ ಇಲ್ಲದಿರುವುದರಿಂದ ಅಲ್ಲೂ ಬಿಜೆಪಿ ತೀವ್ರ ಸವಾಲು ಎದುರಿಸಬೇಕಾಗುತ್ತದೆ.

ಗ್ರಾಮೀಣ ಭಾಗದಲ್ಲಿ ಜನರು ಆಕ್ರೋಶಿತರಾಗಿದ್ದು ಅವರು ದೊಡ್ಡ ಪ್ರಮಾಣದಲ್ಲಿ ಬಿಜೆಪಿಯ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ಹಿರಿಯ ಪತ್ರಕರ್ತೆ ಸಭಾ ನಕ್ವಿ ಹೇಳಿದ್ದಾರೆ. ಇದನ್ನು ಪುಷ್ಟೀಕರಿಸುವಂತೆ ಮೂರು ರಾಜ್ಯಗಳ ಗ್ರಾಮೀಣ ಸ್ಥಾನಗಳಲ್ಲಿ ಬಿಜೆಪಿಗೆ ಬಿದ್ದ ಹೊಡೆತ ಮಾರಕವಾಗಿದೆ. ಅದಕ್ಕೆ ಛತ್ತೀಸ್‍ಗಢದಲ್ಲಿ 34% ಗ್ರಾಮೀಣ ಸೀಟುಗಳು, ಮಧ್ಯಪ್ರದೇಶದಲ್ಲಿ 30% ಸೀಟುಗಳು, ರಾಜಸ್ತಾನದಲ್ಲಿ 49% ಸ್ಥಾನ ನಷ್ಟವಾಗಿದೆ.

ದೇಶದ ರೈತರು ಹಿಂದೆಂದೂ ಕಂಡಿರದ ಸಂಕಷ್ಟದಲ್ಲಿದ್ದಾರೆ. ತಮ್ಮ ಹಕ್ಕೊತ್ತಾಯ ಆಗ್ರಹಿಸಿ ಪ್ರತಿಭಟನೆ ನಡೆಸಿದರೆ ಅವರ ಮೇಲೆ ಸರಕಾರ ಗುಂಡು ಹಾರಿಸಿ ಕೊಂದು ಹಾಕುತ್ತದೆ. ದೇಶದ ಉದ್ದಗಲದಿಂದ ತಮ್ಮ ದೂರು ಹೇಳಿಕೊಂಡು ದಿಲ್ಲಿಗೆ ಬಂದರೆ ಅವರನ್ನು ಕನಿಷ್ಠ ಕಂಡು ಅವರ ಅಳಲು ಆಲಿಸುವ ಸೌಜನ್ಯವನ್ನೂ ಆಳುವವರು ತೋರುವುದಿಲ್ಲ. ಹಾಗಾಗಿ ಸರಕಾರದ ನೀತಿಯಿಂದ ಅಸಮಾಧಾನಗೊಂಡ ರೈತರೂ ಬಿಜೆಪಿಯ ವಿರುದ್ಧ ಮತ ಚಲಾಯಿಸಿದ್ದಾರೆ. ಬಿಜೆಪಿಯ ವಿರುದ್ಧ ಮತ ಚಲಾಯಿಸಿದ್ದು ಗ್ರಾಮೀಣ ಭಾಗದವರು ಮಾತ್ರವೇ? ಅಲ್ಲ. ಅಚ್ಚರಿಯೆಂಬಂತೆ ನಗರ ಪ್ರದೇಶಗಳಲ್ಲೂ ಜನ ದೊಡ್ಡ ಪ್ರಮಾಣದಲ್ಲಿ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂಬುದನ್ನು ದಿ ಹಿಂದೂ ಪತ್ರಿಕೆಯ ವರದಿಯೊಂದು ಅಂಕಿಅಂಶ ಸಹಿತ ಬೆಟ್ಟು ಮಾಡಿದೆ. ನಗರದ ಜನ ತಿರಸ್ಕರಿಸಿದ್ದಾರೆ ಎಂಬುದು ಬಿಜೆಪಿಯನ್ನು ಖಂಡಿತವಾಗಿಯೂ ಕಂಗಾಲು ಮಾಡುವ ಸಂಗತಿ.

ನಮ್ಮದು ಬಹುಸಂಸ್ಕøತಿಯ ಬಹುಭಾಷೆಯ, ಬಹು ಧರ್ಮಗಳ ದೇಶ. ನೈಜ ಸಮಸ್ಯೆಗಳನ್ನು ಕಡೆಗಣಿಸಿ ಮತಧರ್ಮದಂತಹ ಭಾವನಾತ್ಮಕ ವಿಷಯಗಳ ಮೇಲೆ ಆಡಳಿತ ನಡೆಸಲು ಬಯಸಿದವರನ್ನು ಈ ದೇಶದ ಜನರು ಪುರಸ್ಕರಿಸಿದ್ದು ಕಡಿಮೆ. ಒಂದುವೇಳೆ ಅದರಿಂದ ಲಾಭವಾದರೂ ಅದು ತಾತ್ಕಾಲಿಕ. ಗುಜರಾತಿನಂತಹ ಗುಜರಾತಿನಲ್ಲಿಯೇ ಈ ಬಾರಿ ಬಿಜೆಪಿಗೆ 99ರ ಗಡಿಯನ್ನು ದಾಟಲಾಗಲಿಲ್ಲ. ಸ್ವತಃ ಪ್ರಧಾನಿಗಳೇ 21 ರ್ಯಾಲಿ ಮಾಡಿದರೂ ಕರ್ನಾಟಕ ಅವರಿಗೆ ಮಣೆ ಹಾಕಲಿಲ್ಲ. ಧರ್ಮದ ಮೇಲೆ ಮತ ಕೇಳಿದವರನ್ನು, ಅಧಿಕಾರಕ್ಕೆ ಬಂದರೆ ಊರಿನ ಹೆಸರು ಬದಲಾವಣೆ ಮಾಡುತ್ತೇವೆ ಅಂದವರನ್ನು ಮೊನ್ನೆಯ ಚುನಾವಣೆಯಲ್ಲಿ ಮತದಾರರು ಗುಡಿಸಿ ಹಾಕಿದ್ದಾರೆ. ಇದು ಮೋದಿ ಮತ್ತವರ ಬಳಗಕ್ಕೆ ಅರ್ಥವಾಗದ ವಿಷಯವೇನಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಅವರು ಬೇರೆಯೇ ತಂತ್ರಗಳನ್ನು ಹೂಡಲೂಬಹುದು ಮತ್ತು ಆ ತಂತ್ರ ದೇಶದ ಒಟ್ಟಾರೆ ಹಿತದೃಷ್ಟಿಯಿಂದ ಅತ್ಯಂತ ಮಾರಕವಾಗಿರಲೂಬಹುದು. ಯಾಕೆಂದರೆ ಸರ್ವಾಧಿಕಾರಿಗಳು ಅಷ್ಟು ಸುಲಭದಲ್ಲಿ ಅಧಿಕಾರ ತ್ಯಾಗ ಮಾಡಿದ ಉದಾಹರಣೆ ಜಗತ್ತಿನಲ್ಲಿ ತುಂಬ ಕಡಿಮೆ.

vasumdaraje sindhya

ಈ ಚುನಾವಣೆ ಪ್ರಧಾನಿ ಮೋದಿಯವರ ಸಾಧನೆಯನ್ನು ಪರೀಕ್ಷೆಗಿಡುವ ಚುನಾವಣೆಯಲ್ಲ, ಇದು ರಾಜ್ಯಗಳ ಲೋಕಲ್ ಇಶ್ಯೂಗಳನ್ನು ಆಧರಿಸಿದ ಚುನಾವಣೆ ಬಿಜೆಪಿ ಸೋಲಿನ ಹೊಣೆಯನ್ನು ಆ ಮೂರು ರಾಜ್ಯಗಳ ಮುಖ್ಯಮಂತ್ರಿಗಳೇ ಹೊರಬೇಕು ಎಂದು ಮೋದಿಯವರನ್ನು ಪಾರು ಮಾಡುವ ವಿಫಲ ಯತ್ನ ನಡೆದಿದೆ. ಇದಕ್ಕೆ ಬಿಜೆಪಿಯ ತುತ್ತೂರಿ ಮಾಧ್ಯಮಗಳೂ ಇನ್ನಿಲ್ಲದ ಯತ್ನ ಮಾಡುತ್ತಿವೆÉ. ಸೋಲಿಗೆ ತಾವೇ ಕಾರಣ ಎಂದು ಈಗಾಗಲೇ ಆ ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಹೇಳಿಕೆ ಕೊಡಿಸಲಾಗಿದೆ ಕೂಡಾ. ಆದರೆ ಈವತ್ತು ದೇಶದ ಜನರನ್ನು ತೀವ್ರವಾಗಿ ಬಾಧಿಸಿರುವುದು ಕೃಷಿ, ಆರ್ಥಿಕತೆ ಇತ್ಯಾದಿಗಳನ್ನು ಕುರಿತ ಕೇಂದ್ರ ಸರಕಾರದ ಜನವಿರೋಧಿ ನೀತಿಗಳು. ಸಾಧನೆಯ ಕೀರ್ತಿಯೆಲ್ಲ ತನ್ನದೇ ಎನ್ನುವವರು ಸಹಜವಾಗಿಯೇ ಸೋಲಿನ ಹೊಣೆಯನ್ನೂ ಹೊರಲೇಬೇಕಾಗುತ್ತದೆ ಅಲ್ಲವೇ? ಅಲ್ಲದೆ ಪ್ರಧಾನಿಗಳು ಪ್ರಚಾರದಿಂದಲೇ ದೂರ ನಿಂತಿದ್ದರೆ ಬೇರೆ ವಿಚಾರ. ಆದರೆ ಈ ಎಲ್ಲ ರಾಜ್ಯಗಳಲ್ಲೂ ಅವರು ವ್ಯಾಪಕವಾಗಿ ತಿರುಗಾಡಿ ಪ್ರಚಾರ ಭಾಷಣ ಮಾಡಿದ್ದಾರೆ. ಪಕ್ಷವನ್ನು ಗೆಲ್ಲಿಸುವ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದರು. ಹಾಗಾಗಿ ಈಗ ಏನೇ ಸಬೂಬುಗಳನ್ನು ಹೇಳಿಕೊಳ್ಳಬಹುದಾದರು ಆಂತರ್ಯದಲ್ಲಿ ಬಿಜೆಪಿ ಮತ್ತು ಮೋದಿ, ಕುಸಿದುಹೋಗಿದ್ದಾರೆ. ಅಧಿಕಾರ ಉಳಿಸಿಕೊಳ್ಳುವ ಆತಂಕ ಅವರಿಗೆ ಶುರುವಾಗಿದೆ. ನಿವೃತ್ತ ನ್ಯಾಯಮೂರ್ತಿ ಮತ್ತು ಭಾರತೀಯ ಪ್ರೆಸ್ ಕೌನ್ಸಿಲ್‍ನ ಮಾಜಿ ಅಧ್ಯಕ್ಷರೂ ಆದ ಮಾರ್ಕಂಡೇಯ ಖಟ್ಜು ಹೇಳಿರುವಂತೆ ಬಿಜೆಪಿ ದೇಶದ ಮೇಲೆ ಆಘಾತಕಾರಿ ಪ್ರಯೋಗಗಳನ್ನು ನಡೆಸಿದರೂ ಅಚ್ಚರಿಯಿಲ್ಲ.

ಇಷ್ಟಾದರೂ ಮೋದಿಯವರು ನೆಹರೂ ವಂಶದ ಮೇಲಿನ ವಾಗ್ದಾಳಿಯನ್ನು ಈಗಲೂ ಮುಂದುವರಿಸಿದ್ದಾರೆ. ಅವರಿಗೆ ತಾನು ದೇಶದ ಪ್ರಧಾನಿ ಹಾಗಾಗಿ ಪ್ರಧಾನಿ ಸ್ಥಾನದ ಘನತೆ ಕಾಪಾಡಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲ. ಸಾಲದೆಂಬಂತೆ ಇದೀಗ ರಾಮ ಮಂದಿರ ವಿಷಯವನ್ನು ಮುಂದಿಡಲಾಗುತ್ತಿದೆ. ಅಮಿತ್ ಶಾ ಈ ದೇಶದ ಅಕ್ರಮ ವಲಸಿಗರನ್ನು ಹೊರ ಹಾಕುವ ಮಾತು ಆಡುತ್ತಿದ್ದಾರೆ. ದೇಶಪ್ರೇಮವನ್ನು, ಪಾಕಿಸ್ತಾನವನ್ನು ಮತ್ತೆ ಮತ್ತೆ ಪ್ರಸ್ತಾವಿಸಲಾಗುತ್ತಿದೆ. ಇನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಜಯ್ ಬಿಶ್ತ್ (ಯೋಗಿ ಆದಿತ್ಯನಾಥ) ಅವರಂತೂ ಹೋದಲ್ಲಿ ಬಂದಲ್ಲಿ ಹಿಂದೂ ಮುಸ್ಲಿಂ ವಿಭಜನೆಯ ರಾಜಕಾರಣ ಮಾಡುತ್ತಿದ್ದಾರೆ. ‘ಅಲಿ ನಿಮಗಿರಲಿ ನಮಗೆ ಭಜರಂಗಬಲಿ ಸಾಕು’ ಎಂದು ಬಹಿರಂಗವಾಗಿಯೇ ಕೋಮುವಾದಿ ಹೇಳಿಕೆ ನೀಡುತ್ತಿದ್ದಾರೆ. ಅಧಿಕಾರಕ್ಕೆ ಬಂದರೆ ನಿಮಗೆ ಅನ್ನ, ಆರೋಗ್ಯ, ವಸತಿ, ಉದ್ಯೋಗ ನೀಡುತ್ತೇವೆ ಎನ್ನುವ ಬದಲಿಗೆ ನಿಮ್ಮೂರಿನ ಹೆಸರು ಬದಲಾಯಿಸುತ್ತೇವೆ ಅನ್ನುತ್ತಿದ್ದಾರೆ. ಹನುಮಂತನನ್ನೂ ದಲಿತನನ್ನಾಗಿಸುತ್ತಾರೆ. ಆದರೆ ಚುನಾವಣಾ ಫಲಿತಾಂಶಗಳು ಹೇಳುವ ಪ್ರಕಾರ ಜನರಿಗೆ ಇದೆಲ್ಲ ಬೇಕಾಗಿಲ್ಲ. ಅವರಿಗೆ ಅವರ ನಿತ್ಯ ಬದುಕಿನ ಸಮಸ್ಯೆಗಳು ನೀಗಬೇಕು. ಉಣ್ಣಲು ಇಲ್ಲದವರಿಗೆ ಉಣ್ಣಲು ಬೇಕು, ಮನೆಯಿಲ್ಲದವರಿಗೆ ಮನೆ ಬೇಕು, ರೈತರಿಗೆ ತಮ್ಮ ಫಸಲಿಗೆ ಸೂಕ್ತ ಬೆಲೆ ಬೇಕು, ಯುವಕರಿಗೆ ಉದ್ಯೋಗ ಬೇಕು.
ಅಂದಹಾಗೆ, ದೇಶದ ಮೊದಲ ಗೋ ಕಲ್ಯಾಣಮಂತ್ರಿ ಬಿಜೆಪಿಯ ಓತಾ ರಾಮ್ ದೇವಸಿ ರಾಜಸ್ತಾನದ ಸಿರೋಹಿ ಜಿಲ್ಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯ ವಿರುದ್ಧ ಮೊನ್ನೆ ಚುನಾವಣೆ ಸೋತರು. ಇದನ್ನು ಧರ್ಮ, ದೇವರು, ದನ ಎಂದು ಭಾವನಾತ್ಮಕ ವಿಷಯಗಳನ್ನು ಬಳಸಿಕೊಂಡು ಅಧಿಕಾರ ಹಿಡಿಯಲು ಯತ್ನಿಸುವವರಿಗೆ ಭಾರತೀಯ ಮತದಾರರು ರವಾನಿಸಿದ ಎಚ್ಚರಿಕೆಯ ಸಂದೇಶವೆಂದೂ ಪರಿಗಣಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...