Homeರಾಜಕೀಯಹೆಚ್ಚಾಗುತ್ತಿದೆ ಬಿಜೆಪಿಯ ಆತಂಕ; ಕುಗ್ಗುತ್ತಿದೆ ಅದರ ಅಂಕಗಣಿತ

ಹೆಚ್ಚಾಗುತ್ತಿದೆ ಬಿಜೆಪಿಯ ಆತಂಕ; ಕುಗ್ಗುತ್ತಿದೆ ಅದರ ಅಂಕಗಣಿತ

- Advertisement -
- Advertisement -

 ಶ್ರೀನಿವಾಸ ಕಾರ್ಕಳ |

‘ಕೆಳಗಿನ ನೆಲ ಕುಸಿದಾಗ ಅದರ ಮೇಲೆ ನಿಂತ ಅತಿ ಎತ್ತರದ ವ್ಯಕ್ತಿ ಮೊದಲು ಉರುಳುತ್ತಾರೆ’ ಎಂಬ ಒಂದು ಮಾತಿದೆ. ಒಂದು ಕಾಲದಲ್ಲಿ ಇಂದಿರಾ ಗಾಂಧಿಯವರನ್ನು, ರಾಜೀವ ಗಾಂಧಿಯವರನ್ನು, ವಾಜಪೇಯಿಯವರನ್ನು ಸೋಲಿಸುವುದು ಸಾಧ್ಯವೇ ಇಲ್ಲ ಎಂಬಂತಹ ಒಂದು ವಾತಾವರಣವಿತ್ತು. ಆದರೆ ಈ ದೇಶದ ಸಾಮಾನ್ಯ ಮತದಾರರ ನಿರ್ಧಾರ ಹೇಗೆ ಅವರನ್ನೆಲ್ಲ ಗಾದಿಯಿಂದ ಉರುಳಿಸಿತ್ತು ಎನ್ನುವುದನ್ನು ನಾವು ನೋಡಿಯೇ ಇದ್ದೇವೆ. ಅಂತಹ ಒಂದು ಸಂದರ್ಭದ ಹೊಸ್ತಿಲಿನಲ್ಲಿ ಭಾರತ ಮತ್ತೆ ಬಂದು ನಿಂತಿದೆಯೇ? ಮೊನ್ನೆ ನಡೆದ ಐದು ರಾಜ್ಯಗಳ ಫಲಿತಾಂಶ ಅಂತಹ ಒಂದು ಸಣ್ಣದಾದರೂ ಸೂಚನೆಯನ್ನು ನೀಡುತ್ತಿರುವಂತೆ ಭಾಸವಾಗುತ್ತಿದೆ.

ನಮಗೆಲ್ಲ ಈಗಾಗಲೇ ಗೊತ್ತಿರುವ ಹಾಗೆ ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ತೆಲಂಗಾಣವನ್ನು ಟಿ.ಆರ್.ಎಸ್, ಮಿಜೊರಂ ಅನ್ನು ಎಮ್.ಎನ್.ಎಫ್ ವಶಕ್ಕೆ ತೆಗೆದುಕೊಂಡರೆ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ತನ್ನದು ಜಗತ್ತಿನಲ್ಲಿಯೇ ಅತಿದೊಡ್ಡ ರಾಜಕೀಯ ಪಕ್ಷ, ಚುನಾವಣೆ ಗೆಲ್ಲುವುದು ತನಗೆ ಒಂದು ಸವಾಲೇ ಅಲ್ಲ ಎಂದು ಬೀಗುತ್ತಾ ಕಾಂಗ್ರೆಸ್-ಮುಕ್ತ, ವಿಪಕ್ಷ-ಮುಕ್ತ, 50 ವರ್ಷಗಳವರೆಗೆ ತಮ್ಮದೇ ರಾಜ್ಯಭಾರ ಎಂದು ಹಾರಾಡುತ್ತಿದ್ದ ಬಿಜೆಪಿ ಹೊಸ ರಾಜ್ಯವನ್ನು ಗೆಲ್ಲುವ ಮಾತಂತಿರಲಿ, ಇದ್ದ ಮೂರು ರಾಜ್ಯಗಳನ್ನೂ ಕಳೆದುಕೊಂಡಿದೆ. ಅದೂ ನಗಣ್ಯವೆನಿಸುವ ರಾಜ್ಯಗಳಲ್ಲ; ಹಿಂದಿ ಹೃದಯ ಭಾಗಗಳು, ಹಿಂದೂಗಳು ಬಹುಸಂಖ್ಯಾತರಾಗಿರುವ ರಾಜ್ಯಗಳು. ಈ ಭಾಗದ ಸೋಲು ಸರಿಸುಮಾರು 44 ಲೋಕಸಭಾ ಸ್ಥಾನಗಳ ಬಗ್ಗೆ ಬಿಜೆಪಿಗೆ ಚಿಂತೆಯುಂಟು ಮಾಡುವ ಸಂಗತಿಯಿದು ಎನ್ನುತ್ತಿದ್ದಾರೆ ವಿಶ್ಲೇಷಕರು.

shivaraja chowhvan

ಸದ್ಯ ದಕ್ಷಿಣದಲ್ಲಿ ಬಿಜೆಪಿಯ ಭವಿಷ್ಯ ಏನೇನೂ ಚೆನ್ನಾಗಿಲ್ಲ. ಕೇರಳದಲ್ಲಿ ಎಡಪಕ್ಷ ಮತ್ತು ಕಾಂಗ್ರೆಸ್ ಸಮಬಲದಲ್ಲಿದ್ದು, ಅಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕೈಜೋಡಿಸಿದರೆ ಬಿಜೆಪಿಗೆ ಒಂದಷ್ಟು ಹಾನಿಯಾಗಲಿದೆ. ಆಂಧ್ರದಲ್ಲಿ ಕಾಂಗ್ರೆಸ್ ಮತ್ತು ಟಿಡಿಪಿ ಒಂದಾಗಿವೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಗೆಳೆಯರು. ಮಹಾರಾಷ್ಟ್ರ, ಗುಜರಾತ್‍ಗಳಲ್ಲಿ ಕಾಂಗ್ರೆಸ್ ಸಮಬಲದಲ್ಲಿದೆ. ಒಡಿಶಾದಲ್ಲಿ ಬಿಜೆಡಿ ಪ್ರಬಲವಾಗಿದೆ. ಪ.ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಕ್ತಿಶಾಲಿಯಾಗಿದ್ದು ಅಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ. ಬಿಹಾರದಲ್ಲಿ ಬಿಜೆಪಿಯು ಸ್ಥಾನಗಳನ್ನು ಜೆಡಿಯು ಜತೆಗೆ ಹಂಚಿಕೊಳ್ಳುವ ಅನಿವಾರ್ಯತೆ ಇದೆಯಲ್ಲದೆ, ಅಲ್ಲಿ ಆರ್.ಜೆ.ಡಿ ಶಕ್ತಿಶಾಲಿಯಾಗಿದೆ. 80 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷ ಕೈ ಜೋಡಿಸಿದರೆ ಬಿಜೆಪಿಗೆ ಮಾರಕ ಹೊಡೆತವಾಗಲಿದೆ. ಅಂದಮೇಲೆ ಮತ್ತೆ ತಮ್ಮದೇ ಸರಕಾರ ಎಂದು ಹೇಳಿಕೊಳ್ಳುವ ಬಿಜೆಪಿಗೆ ಅಷ್ಟು ಸ್ಥಾನಗಳು ಎಲ್ಲಿಂದ ಸಿಗಬೇಕು?! ಈ ವಾಸ್ತವದ ಅರಿವಿದ್ದೇ, ‘ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷವೂ 200ರ ಗಡಿ ದಾಟುವುದಿಲ್ಲ’ ಎಂದು ಅಕಾಲಿ ದಳದ ನಾಯಕ ನರೇಶ್ ಗುಜ್ರಾಲ್ ಅವರು ಬಿಜೆಪಿಯನ್ನು ಗಮನದಲ್ಲಿರಿಸಿಕೊಂಡು ಹೇಳಿದ್ದಾರೆ.

ಮೊನ್ನೆಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ 61 ಲಕ್ಷಕ್ಕೂ ಅಧಿಕ ಮತಗಳನ್ನು ಕಳೆದುಕೊಂಡರೆ, ಕಾಂಗ್ರೆಸ್‍ಗೆ 1 ಕೋಟಿ 25 ಲಕ್ಷಕ್ಕಿಂತಲೂ ಅಧಿಕ ಮತಗಳ ಲಾಭವಾಗಿದೆ. ಇದು ಬಿಜೆಪಿಗೆ ಎಚ್ಚರಿಕೆಯ ಗಂಟೆಯಾದರೆ ಕಾಂಗ್ರೆಸ್‍ಗೆ ಉತ್ಸಾಹ ಮೂಡಿಸುವ ಸಂಗತಿ. ಪಂಜಾಬ್ ಈಗಾಗಲೇ ಕಾಂಗ್ರೆಸ್ ವಶದಲ್ಲಿದ್ದು, ಇದೀಗ ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್‍ಗಢ ಹೀಗೆ ಹಿಂದಿ ಬೆಲ್ಟ್ ಎಂದು ಕರೆಯಲಾಗುವ ಪ್ರದೇಶವೂ ಅದರ ತೆಕ್ಕೆಗೆ ಬಿದ್ದುದರಿಂದ ಅಲ್ಲಿ ಕಾಂಗ್ರೆಸ್‍ಗೆ ಅನುಕೂಲಕರ ಸ್ಥಿತಿ ನಿರ್ಮಾಣವಾಗಲಿದೆ. ಚುನಾವಣೆ ಎದುರಿಸಲು ಅಗತ್ಯ ಸಂಪನ್ಮೂಲ, ಹಾಗೆಯೇ ಕಾರ್ಯಕರ್ತರ ಮನೋಬಲವೂ ಹೆಚ್ಚಲಿದೆ. ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಅಲ್ಲಿ ಆಡಳಿತ ವಿರೋಧಿ ಅಲೆ ಏಳುವ ಸಾಧ್ಯತೆಯೇ ಇಲ್ಲದಿರುವುದರಿಂದ ಅಲ್ಲೂ ಬಿಜೆಪಿ ತೀವ್ರ ಸವಾಲು ಎದುರಿಸಬೇಕಾಗುತ್ತದೆ.

ಗ್ರಾಮೀಣ ಭಾಗದಲ್ಲಿ ಜನರು ಆಕ್ರೋಶಿತರಾಗಿದ್ದು ಅವರು ದೊಡ್ಡ ಪ್ರಮಾಣದಲ್ಲಿ ಬಿಜೆಪಿಯ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ಹಿರಿಯ ಪತ್ರಕರ್ತೆ ಸಭಾ ನಕ್ವಿ ಹೇಳಿದ್ದಾರೆ. ಇದನ್ನು ಪುಷ್ಟೀಕರಿಸುವಂತೆ ಮೂರು ರಾಜ್ಯಗಳ ಗ್ರಾಮೀಣ ಸ್ಥಾನಗಳಲ್ಲಿ ಬಿಜೆಪಿಗೆ ಬಿದ್ದ ಹೊಡೆತ ಮಾರಕವಾಗಿದೆ. ಅದಕ್ಕೆ ಛತ್ತೀಸ್‍ಗಢದಲ್ಲಿ 34% ಗ್ರಾಮೀಣ ಸೀಟುಗಳು, ಮಧ್ಯಪ್ರದೇಶದಲ್ಲಿ 30% ಸೀಟುಗಳು, ರಾಜಸ್ತಾನದಲ್ಲಿ 49% ಸ್ಥಾನ ನಷ್ಟವಾಗಿದೆ.

ದೇಶದ ರೈತರು ಹಿಂದೆಂದೂ ಕಂಡಿರದ ಸಂಕಷ್ಟದಲ್ಲಿದ್ದಾರೆ. ತಮ್ಮ ಹಕ್ಕೊತ್ತಾಯ ಆಗ್ರಹಿಸಿ ಪ್ರತಿಭಟನೆ ನಡೆಸಿದರೆ ಅವರ ಮೇಲೆ ಸರಕಾರ ಗುಂಡು ಹಾರಿಸಿ ಕೊಂದು ಹಾಕುತ್ತದೆ. ದೇಶದ ಉದ್ದಗಲದಿಂದ ತಮ್ಮ ದೂರು ಹೇಳಿಕೊಂಡು ದಿಲ್ಲಿಗೆ ಬಂದರೆ ಅವರನ್ನು ಕನಿಷ್ಠ ಕಂಡು ಅವರ ಅಳಲು ಆಲಿಸುವ ಸೌಜನ್ಯವನ್ನೂ ಆಳುವವರು ತೋರುವುದಿಲ್ಲ. ಹಾಗಾಗಿ ಸರಕಾರದ ನೀತಿಯಿಂದ ಅಸಮಾಧಾನಗೊಂಡ ರೈತರೂ ಬಿಜೆಪಿಯ ವಿರುದ್ಧ ಮತ ಚಲಾಯಿಸಿದ್ದಾರೆ. ಬಿಜೆಪಿಯ ವಿರುದ್ಧ ಮತ ಚಲಾಯಿಸಿದ್ದು ಗ್ರಾಮೀಣ ಭಾಗದವರು ಮಾತ್ರವೇ? ಅಲ್ಲ. ಅಚ್ಚರಿಯೆಂಬಂತೆ ನಗರ ಪ್ರದೇಶಗಳಲ್ಲೂ ಜನ ದೊಡ್ಡ ಪ್ರಮಾಣದಲ್ಲಿ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂಬುದನ್ನು ದಿ ಹಿಂದೂ ಪತ್ರಿಕೆಯ ವರದಿಯೊಂದು ಅಂಕಿಅಂಶ ಸಹಿತ ಬೆಟ್ಟು ಮಾಡಿದೆ. ನಗರದ ಜನ ತಿರಸ್ಕರಿಸಿದ್ದಾರೆ ಎಂಬುದು ಬಿಜೆಪಿಯನ್ನು ಖಂಡಿತವಾಗಿಯೂ ಕಂಗಾಲು ಮಾಡುವ ಸಂಗತಿ.

ನಮ್ಮದು ಬಹುಸಂಸ್ಕøತಿಯ ಬಹುಭಾಷೆಯ, ಬಹು ಧರ್ಮಗಳ ದೇಶ. ನೈಜ ಸಮಸ್ಯೆಗಳನ್ನು ಕಡೆಗಣಿಸಿ ಮತಧರ್ಮದಂತಹ ಭಾವನಾತ್ಮಕ ವಿಷಯಗಳ ಮೇಲೆ ಆಡಳಿತ ನಡೆಸಲು ಬಯಸಿದವರನ್ನು ಈ ದೇಶದ ಜನರು ಪುರಸ್ಕರಿಸಿದ್ದು ಕಡಿಮೆ. ಒಂದುವೇಳೆ ಅದರಿಂದ ಲಾಭವಾದರೂ ಅದು ತಾತ್ಕಾಲಿಕ. ಗುಜರಾತಿನಂತಹ ಗುಜರಾತಿನಲ್ಲಿಯೇ ಈ ಬಾರಿ ಬಿಜೆಪಿಗೆ 99ರ ಗಡಿಯನ್ನು ದಾಟಲಾಗಲಿಲ್ಲ. ಸ್ವತಃ ಪ್ರಧಾನಿಗಳೇ 21 ರ್ಯಾಲಿ ಮಾಡಿದರೂ ಕರ್ನಾಟಕ ಅವರಿಗೆ ಮಣೆ ಹಾಕಲಿಲ್ಲ. ಧರ್ಮದ ಮೇಲೆ ಮತ ಕೇಳಿದವರನ್ನು, ಅಧಿಕಾರಕ್ಕೆ ಬಂದರೆ ಊರಿನ ಹೆಸರು ಬದಲಾವಣೆ ಮಾಡುತ್ತೇವೆ ಅಂದವರನ್ನು ಮೊನ್ನೆಯ ಚುನಾವಣೆಯಲ್ಲಿ ಮತದಾರರು ಗುಡಿಸಿ ಹಾಕಿದ್ದಾರೆ. ಇದು ಮೋದಿ ಮತ್ತವರ ಬಳಗಕ್ಕೆ ಅರ್ಥವಾಗದ ವಿಷಯವೇನಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಅವರು ಬೇರೆಯೇ ತಂತ್ರಗಳನ್ನು ಹೂಡಲೂಬಹುದು ಮತ್ತು ಆ ತಂತ್ರ ದೇಶದ ಒಟ್ಟಾರೆ ಹಿತದೃಷ್ಟಿಯಿಂದ ಅತ್ಯಂತ ಮಾರಕವಾಗಿರಲೂಬಹುದು. ಯಾಕೆಂದರೆ ಸರ್ವಾಧಿಕಾರಿಗಳು ಅಷ್ಟು ಸುಲಭದಲ್ಲಿ ಅಧಿಕಾರ ತ್ಯಾಗ ಮಾಡಿದ ಉದಾಹರಣೆ ಜಗತ್ತಿನಲ್ಲಿ ತುಂಬ ಕಡಿಮೆ.

vasumdaraje sindhya

ಈ ಚುನಾವಣೆ ಪ್ರಧಾನಿ ಮೋದಿಯವರ ಸಾಧನೆಯನ್ನು ಪರೀಕ್ಷೆಗಿಡುವ ಚುನಾವಣೆಯಲ್ಲ, ಇದು ರಾಜ್ಯಗಳ ಲೋಕಲ್ ಇಶ್ಯೂಗಳನ್ನು ಆಧರಿಸಿದ ಚುನಾವಣೆ ಬಿಜೆಪಿ ಸೋಲಿನ ಹೊಣೆಯನ್ನು ಆ ಮೂರು ರಾಜ್ಯಗಳ ಮುಖ್ಯಮಂತ್ರಿಗಳೇ ಹೊರಬೇಕು ಎಂದು ಮೋದಿಯವರನ್ನು ಪಾರು ಮಾಡುವ ವಿಫಲ ಯತ್ನ ನಡೆದಿದೆ. ಇದಕ್ಕೆ ಬಿಜೆಪಿಯ ತುತ್ತೂರಿ ಮಾಧ್ಯಮಗಳೂ ಇನ್ನಿಲ್ಲದ ಯತ್ನ ಮಾಡುತ್ತಿವೆÉ. ಸೋಲಿಗೆ ತಾವೇ ಕಾರಣ ಎಂದು ಈಗಾಗಲೇ ಆ ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಹೇಳಿಕೆ ಕೊಡಿಸಲಾಗಿದೆ ಕೂಡಾ. ಆದರೆ ಈವತ್ತು ದೇಶದ ಜನರನ್ನು ತೀವ್ರವಾಗಿ ಬಾಧಿಸಿರುವುದು ಕೃಷಿ, ಆರ್ಥಿಕತೆ ಇತ್ಯಾದಿಗಳನ್ನು ಕುರಿತ ಕೇಂದ್ರ ಸರಕಾರದ ಜನವಿರೋಧಿ ನೀತಿಗಳು. ಸಾಧನೆಯ ಕೀರ್ತಿಯೆಲ್ಲ ತನ್ನದೇ ಎನ್ನುವವರು ಸಹಜವಾಗಿಯೇ ಸೋಲಿನ ಹೊಣೆಯನ್ನೂ ಹೊರಲೇಬೇಕಾಗುತ್ತದೆ ಅಲ್ಲವೇ? ಅಲ್ಲದೆ ಪ್ರಧಾನಿಗಳು ಪ್ರಚಾರದಿಂದಲೇ ದೂರ ನಿಂತಿದ್ದರೆ ಬೇರೆ ವಿಚಾರ. ಆದರೆ ಈ ಎಲ್ಲ ರಾಜ್ಯಗಳಲ್ಲೂ ಅವರು ವ್ಯಾಪಕವಾಗಿ ತಿರುಗಾಡಿ ಪ್ರಚಾರ ಭಾಷಣ ಮಾಡಿದ್ದಾರೆ. ಪಕ್ಷವನ್ನು ಗೆಲ್ಲಿಸುವ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದರು. ಹಾಗಾಗಿ ಈಗ ಏನೇ ಸಬೂಬುಗಳನ್ನು ಹೇಳಿಕೊಳ್ಳಬಹುದಾದರು ಆಂತರ್ಯದಲ್ಲಿ ಬಿಜೆಪಿ ಮತ್ತು ಮೋದಿ, ಕುಸಿದುಹೋಗಿದ್ದಾರೆ. ಅಧಿಕಾರ ಉಳಿಸಿಕೊಳ್ಳುವ ಆತಂಕ ಅವರಿಗೆ ಶುರುವಾಗಿದೆ. ನಿವೃತ್ತ ನ್ಯಾಯಮೂರ್ತಿ ಮತ್ತು ಭಾರತೀಯ ಪ್ರೆಸ್ ಕೌನ್ಸಿಲ್‍ನ ಮಾಜಿ ಅಧ್ಯಕ್ಷರೂ ಆದ ಮಾರ್ಕಂಡೇಯ ಖಟ್ಜು ಹೇಳಿರುವಂತೆ ಬಿಜೆಪಿ ದೇಶದ ಮೇಲೆ ಆಘಾತಕಾರಿ ಪ್ರಯೋಗಗಳನ್ನು ನಡೆಸಿದರೂ ಅಚ್ಚರಿಯಿಲ್ಲ.

ಇಷ್ಟಾದರೂ ಮೋದಿಯವರು ನೆಹರೂ ವಂಶದ ಮೇಲಿನ ವಾಗ್ದಾಳಿಯನ್ನು ಈಗಲೂ ಮುಂದುವರಿಸಿದ್ದಾರೆ. ಅವರಿಗೆ ತಾನು ದೇಶದ ಪ್ರಧಾನಿ ಹಾಗಾಗಿ ಪ್ರಧಾನಿ ಸ್ಥಾನದ ಘನತೆ ಕಾಪಾಡಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲ. ಸಾಲದೆಂಬಂತೆ ಇದೀಗ ರಾಮ ಮಂದಿರ ವಿಷಯವನ್ನು ಮುಂದಿಡಲಾಗುತ್ತಿದೆ. ಅಮಿತ್ ಶಾ ಈ ದೇಶದ ಅಕ್ರಮ ವಲಸಿಗರನ್ನು ಹೊರ ಹಾಕುವ ಮಾತು ಆಡುತ್ತಿದ್ದಾರೆ. ದೇಶಪ್ರೇಮವನ್ನು, ಪಾಕಿಸ್ತಾನವನ್ನು ಮತ್ತೆ ಮತ್ತೆ ಪ್ರಸ್ತಾವಿಸಲಾಗುತ್ತಿದೆ. ಇನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಜಯ್ ಬಿಶ್ತ್ (ಯೋಗಿ ಆದಿತ್ಯನಾಥ) ಅವರಂತೂ ಹೋದಲ್ಲಿ ಬಂದಲ್ಲಿ ಹಿಂದೂ ಮುಸ್ಲಿಂ ವಿಭಜನೆಯ ರಾಜಕಾರಣ ಮಾಡುತ್ತಿದ್ದಾರೆ. ‘ಅಲಿ ನಿಮಗಿರಲಿ ನಮಗೆ ಭಜರಂಗಬಲಿ ಸಾಕು’ ಎಂದು ಬಹಿರಂಗವಾಗಿಯೇ ಕೋಮುವಾದಿ ಹೇಳಿಕೆ ನೀಡುತ್ತಿದ್ದಾರೆ. ಅಧಿಕಾರಕ್ಕೆ ಬಂದರೆ ನಿಮಗೆ ಅನ್ನ, ಆರೋಗ್ಯ, ವಸತಿ, ಉದ್ಯೋಗ ನೀಡುತ್ತೇವೆ ಎನ್ನುವ ಬದಲಿಗೆ ನಿಮ್ಮೂರಿನ ಹೆಸರು ಬದಲಾಯಿಸುತ್ತೇವೆ ಅನ್ನುತ್ತಿದ್ದಾರೆ. ಹನುಮಂತನನ್ನೂ ದಲಿತನನ್ನಾಗಿಸುತ್ತಾರೆ. ಆದರೆ ಚುನಾವಣಾ ಫಲಿತಾಂಶಗಳು ಹೇಳುವ ಪ್ರಕಾರ ಜನರಿಗೆ ಇದೆಲ್ಲ ಬೇಕಾಗಿಲ್ಲ. ಅವರಿಗೆ ಅವರ ನಿತ್ಯ ಬದುಕಿನ ಸಮಸ್ಯೆಗಳು ನೀಗಬೇಕು. ಉಣ್ಣಲು ಇಲ್ಲದವರಿಗೆ ಉಣ್ಣಲು ಬೇಕು, ಮನೆಯಿಲ್ಲದವರಿಗೆ ಮನೆ ಬೇಕು, ರೈತರಿಗೆ ತಮ್ಮ ಫಸಲಿಗೆ ಸೂಕ್ತ ಬೆಲೆ ಬೇಕು, ಯುವಕರಿಗೆ ಉದ್ಯೋಗ ಬೇಕು.
ಅಂದಹಾಗೆ, ದೇಶದ ಮೊದಲ ಗೋ ಕಲ್ಯಾಣಮಂತ್ರಿ ಬಿಜೆಪಿಯ ಓತಾ ರಾಮ್ ದೇವಸಿ ರಾಜಸ್ತಾನದ ಸಿರೋಹಿ ಜಿಲ್ಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯ ವಿರುದ್ಧ ಮೊನ್ನೆ ಚುನಾವಣೆ ಸೋತರು. ಇದನ್ನು ಧರ್ಮ, ದೇವರು, ದನ ಎಂದು ಭಾವನಾತ್ಮಕ ವಿಷಯಗಳನ್ನು ಬಳಸಿಕೊಂಡು ಅಧಿಕಾರ ಹಿಡಿಯಲು ಯತ್ನಿಸುವವರಿಗೆ ಭಾರತೀಯ ಮತದಾರರು ರವಾನಿಸಿದ ಎಚ್ಚರಿಕೆಯ ಸಂದೇಶವೆಂದೂ ಪರಿಗಣಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...