Homeರಾಜಕೀಯಹೆಚ್ಚಾಗುತ್ತಿದೆ ಬಿಜೆಪಿಯ ಆತಂಕ; ಕುಗ್ಗುತ್ತಿದೆ ಅದರ ಅಂಕಗಣಿತ

ಹೆಚ್ಚಾಗುತ್ತಿದೆ ಬಿಜೆಪಿಯ ಆತಂಕ; ಕುಗ್ಗುತ್ತಿದೆ ಅದರ ಅಂಕಗಣಿತ

- Advertisement -
- Advertisement -

 ಶ್ರೀನಿವಾಸ ಕಾರ್ಕಳ |

‘ಕೆಳಗಿನ ನೆಲ ಕುಸಿದಾಗ ಅದರ ಮೇಲೆ ನಿಂತ ಅತಿ ಎತ್ತರದ ವ್ಯಕ್ತಿ ಮೊದಲು ಉರುಳುತ್ತಾರೆ’ ಎಂಬ ಒಂದು ಮಾತಿದೆ. ಒಂದು ಕಾಲದಲ್ಲಿ ಇಂದಿರಾ ಗಾಂಧಿಯವರನ್ನು, ರಾಜೀವ ಗಾಂಧಿಯವರನ್ನು, ವಾಜಪೇಯಿಯವರನ್ನು ಸೋಲಿಸುವುದು ಸಾಧ್ಯವೇ ಇಲ್ಲ ಎಂಬಂತಹ ಒಂದು ವಾತಾವರಣವಿತ್ತು. ಆದರೆ ಈ ದೇಶದ ಸಾಮಾನ್ಯ ಮತದಾರರ ನಿರ್ಧಾರ ಹೇಗೆ ಅವರನ್ನೆಲ್ಲ ಗಾದಿಯಿಂದ ಉರುಳಿಸಿತ್ತು ಎನ್ನುವುದನ್ನು ನಾವು ನೋಡಿಯೇ ಇದ್ದೇವೆ. ಅಂತಹ ಒಂದು ಸಂದರ್ಭದ ಹೊಸ್ತಿಲಿನಲ್ಲಿ ಭಾರತ ಮತ್ತೆ ಬಂದು ನಿಂತಿದೆಯೇ? ಮೊನ್ನೆ ನಡೆದ ಐದು ರಾಜ್ಯಗಳ ಫಲಿತಾಂಶ ಅಂತಹ ಒಂದು ಸಣ್ಣದಾದರೂ ಸೂಚನೆಯನ್ನು ನೀಡುತ್ತಿರುವಂತೆ ಭಾಸವಾಗುತ್ತಿದೆ.

ನಮಗೆಲ್ಲ ಈಗಾಗಲೇ ಗೊತ್ತಿರುವ ಹಾಗೆ ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ತೆಲಂಗಾಣವನ್ನು ಟಿ.ಆರ್.ಎಸ್, ಮಿಜೊರಂ ಅನ್ನು ಎಮ್.ಎನ್.ಎಫ್ ವಶಕ್ಕೆ ತೆಗೆದುಕೊಂಡರೆ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ತನ್ನದು ಜಗತ್ತಿನಲ್ಲಿಯೇ ಅತಿದೊಡ್ಡ ರಾಜಕೀಯ ಪಕ್ಷ, ಚುನಾವಣೆ ಗೆಲ್ಲುವುದು ತನಗೆ ಒಂದು ಸವಾಲೇ ಅಲ್ಲ ಎಂದು ಬೀಗುತ್ತಾ ಕಾಂಗ್ರೆಸ್-ಮುಕ್ತ, ವಿಪಕ್ಷ-ಮುಕ್ತ, 50 ವರ್ಷಗಳವರೆಗೆ ತಮ್ಮದೇ ರಾಜ್ಯಭಾರ ಎಂದು ಹಾರಾಡುತ್ತಿದ್ದ ಬಿಜೆಪಿ ಹೊಸ ರಾಜ್ಯವನ್ನು ಗೆಲ್ಲುವ ಮಾತಂತಿರಲಿ, ಇದ್ದ ಮೂರು ರಾಜ್ಯಗಳನ್ನೂ ಕಳೆದುಕೊಂಡಿದೆ. ಅದೂ ನಗಣ್ಯವೆನಿಸುವ ರಾಜ್ಯಗಳಲ್ಲ; ಹಿಂದಿ ಹೃದಯ ಭಾಗಗಳು, ಹಿಂದೂಗಳು ಬಹುಸಂಖ್ಯಾತರಾಗಿರುವ ರಾಜ್ಯಗಳು. ಈ ಭಾಗದ ಸೋಲು ಸರಿಸುಮಾರು 44 ಲೋಕಸಭಾ ಸ್ಥಾನಗಳ ಬಗ್ಗೆ ಬಿಜೆಪಿಗೆ ಚಿಂತೆಯುಂಟು ಮಾಡುವ ಸಂಗತಿಯಿದು ಎನ್ನುತ್ತಿದ್ದಾರೆ ವಿಶ್ಲೇಷಕರು.

shivaraja chowhvan

ಸದ್ಯ ದಕ್ಷಿಣದಲ್ಲಿ ಬಿಜೆಪಿಯ ಭವಿಷ್ಯ ಏನೇನೂ ಚೆನ್ನಾಗಿಲ್ಲ. ಕೇರಳದಲ್ಲಿ ಎಡಪಕ್ಷ ಮತ್ತು ಕಾಂಗ್ರೆಸ್ ಸಮಬಲದಲ್ಲಿದ್ದು, ಅಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕೈಜೋಡಿಸಿದರೆ ಬಿಜೆಪಿಗೆ ಒಂದಷ್ಟು ಹಾನಿಯಾಗಲಿದೆ. ಆಂಧ್ರದಲ್ಲಿ ಕಾಂಗ್ರೆಸ್ ಮತ್ತು ಟಿಡಿಪಿ ಒಂದಾಗಿವೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಗೆಳೆಯರು. ಮಹಾರಾಷ್ಟ್ರ, ಗುಜರಾತ್‍ಗಳಲ್ಲಿ ಕಾಂಗ್ರೆಸ್ ಸಮಬಲದಲ್ಲಿದೆ. ಒಡಿಶಾದಲ್ಲಿ ಬಿಜೆಡಿ ಪ್ರಬಲವಾಗಿದೆ. ಪ.ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಕ್ತಿಶಾಲಿಯಾಗಿದ್ದು ಅಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ. ಬಿಹಾರದಲ್ಲಿ ಬಿಜೆಪಿಯು ಸ್ಥಾನಗಳನ್ನು ಜೆಡಿಯು ಜತೆಗೆ ಹಂಚಿಕೊಳ್ಳುವ ಅನಿವಾರ್ಯತೆ ಇದೆಯಲ್ಲದೆ, ಅಲ್ಲಿ ಆರ್.ಜೆ.ಡಿ ಶಕ್ತಿಶಾಲಿಯಾಗಿದೆ. 80 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷ ಕೈ ಜೋಡಿಸಿದರೆ ಬಿಜೆಪಿಗೆ ಮಾರಕ ಹೊಡೆತವಾಗಲಿದೆ. ಅಂದಮೇಲೆ ಮತ್ತೆ ತಮ್ಮದೇ ಸರಕಾರ ಎಂದು ಹೇಳಿಕೊಳ್ಳುವ ಬಿಜೆಪಿಗೆ ಅಷ್ಟು ಸ್ಥಾನಗಳು ಎಲ್ಲಿಂದ ಸಿಗಬೇಕು?! ಈ ವಾಸ್ತವದ ಅರಿವಿದ್ದೇ, ‘ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷವೂ 200ರ ಗಡಿ ದಾಟುವುದಿಲ್ಲ’ ಎಂದು ಅಕಾಲಿ ದಳದ ನಾಯಕ ನರೇಶ್ ಗುಜ್ರಾಲ್ ಅವರು ಬಿಜೆಪಿಯನ್ನು ಗಮನದಲ್ಲಿರಿಸಿಕೊಂಡು ಹೇಳಿದ್ದಾರೆ.

ಮೊನ್ನೆಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ 61 ಲಕ್ಷಕ್ಕೂ ಅಧಿಕ ಮತಗಳನ್ನು ಕಳೆದುಕೊಂಡರೆ, ಕಾಂಗ್ರೆಸ್‍ಗೆ 1 ಕೋಟಿ 25 ಲಕ್ಷಕ್ಕಿಂತಲೂ ಅಧಿಕ ಮತಗಳ ಲಾಭವಾಗಿದೆ. ಇದು ಬಿಜೆಪಿಗೆ ಎಚ್ಚರಿಕೆಯ ಗಂಟೆಯಾದರೆ ಕಾಂಗ್ರೆಸ್‍ಗೆ ಉತ್ಸಾಹ ಮೂಡಿಸುವ ಸಂಗತಿ. ಪಂಜಾಬ್ ಈಗಾಗಲೇ ಕಾಂಗ್ರೆಸ್ ವಶದಲ್ಲಿದ್ದು, ಇದೀಗ ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್‍ಗಢ ಹೀಗೆ ಹಿಂದಿ ಬೆಲ್ಟ್ ಎಂದು ಕರೆಯಲಾಗುವ ಪ್ರದೇಶವೂ ಅದರ ತೆಕ್ಕೆಗೆ ಬಿದ್ದುದರಿಂದ ಅಲ್ಲಿ ಕಾಂಗ್ರೆಸ್‍ಗೆ ಅನುಕೂಲಕರ ಸ್ಥಿತಿ ನಿರ್ಮಾಣವಾಗಲಿದೆ. ಚುನಾವಣೆ ಎದುರಿಸಲು ಅಗತ್ಯ ಸಂಪನ್ಮೂಲ, ಹಾಗೆಯೇ ಕಾರ್ಯಕರ್ತರ ಮನೋಬಲವೂ ಹೆಚ್ಚಲಿದೆ. ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಅಲ್ಲಿ ಆಡಳಿತ ವಿರೋಧಿ ಅಲೆ ಏಳುವ ಸಾಧ್ಯತೆಯೇ ಇಲ್ಲದಿರುವುದರಿಂದ ಅಲ್ಲೂ ಬಿಜೆಪಿ ತೀವ್ರ ಸವಾಲು ಎದುರಿಸಬೇಕಾಗುತ್ತದೆ.

ಗ್ರಾಮೀಣ ಭಾಗದಲ್ಲಿ ಜನರು ಆಕ್ರೋಶಿತರಾಗಿದ್ದು ಅವರು ದೊಡ್ಡ ಪ್ರಮಾಣದಲ್ಲಿ ಬಿಜೆಪಿಯ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ಹಿರಿಯ ಪತ್ರಕರ್ತೆ ಸಭಾ ನಕ್ವಿ ಹೇಳಿದ್ದಾರೆ. ಇದನ್ನು ಪುಷ್ಟೀಕರಿಸುವಂತೆ ಮೂರು ರಾಜ್ಯಗಳ ಗ್ರಾಮೀಣ ಸ್ಥಾನಗಳಲ್ಲಿ ಬಿಜೆಪಿಗೆ ಬಿದ್ದ ಹೊಡೆತ ಮಾರಕವಾಗಿದೆ. ಅದಕ್ಕೆ ಛತ್ತೀಸ್‍ಗಢದಲ್ಲಿ 34% ಗ್ರಾಮೀಣ ಸೀಟುಗಳು, ಮಧ್ಯಪ್ರದೇಶದಲ್ಲಿ 30% ಸೀಟುಗಳು, ರಾಜಸ್ತಾನದಲ್ಲಿ 49% ಸ್ಥಾನ ನಷ್ಟವಾಗಿದೆ.

ದೇಶದ ರೈತರು ಹಿಂದೆಂದೂ ಕಂಡಿರದ ಸಂಕಷ್ಟದಲ್ಲಿದ್ದಾರೆ. ತಮ್ಮ ಹಕ್ಕೊತ್ತಾಯ ಆಗ್ರಹಿಸಿ ಪ್ರತಿಭಟನೆ ನಡೆಸಿದರೆ ಅವರ ಮೇಲೆ ಸರಕಾರ ಗುಂಡು ಹಾರಿಸಿ ಕೊಂದು ಹಾಕುತ್ತದೆ. ದೇಶದ ಉದ್ದಗಲದಿಂದ ತಮ್ಮ ದೂರು ಹೇಳಿಕೊಂಡು ದಿಲ್ಲಿಗೆ ಬಂದರೆ ಅವರನ್ನು ಕನಿಷ್ಠ ಕಂಡು ಅವರ ಅಳಲು ಆಲಿಸುವ ಸೌಜನ್ಯವನ್ನೂ ಆಳುವವರು ತೋರುವುದಿಲ್ಲ. ಹಾಗಾಗಿ ಸರಕಾರದ ನೀತಿಯಿಂದ ಅಸಮಾಧಾನಗೊಂಡ ರೈತರೂ ಬಿಜೆಪಿಯ ವಿರುದ್ಧ ಮತ ಚಲಾಯಿಸಿದ್ದಾರೆ. ಬಿಜೆಪಿಯ ವಿರುದ್ಧ ಮತ ಚಲಾಯಿಸಿದ್ದು ಗ್ರಾಮೀಣ ಭಾಗದವರು ಮಾತ್ರವೇ? ಅಲ್ಲ. ಅಚ್ಚರಿಯೆಂಬಂತೆ ನಗರ ಪ್ರದೇಶಗಳಲ್ಲೂ ಜನ ದೊಡ್ಡ ಪ್ರಮಾಣದಲ್ಲಿ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂಬುದನ್ನು ದಿ ಹಿಂದೂ ಪತ್ರಿಕೆಯ ವರದಿಯೊಂದು ಅಂಕಿಅಂಶ ಸಹಿತ ಬೆಟ್ಟು ಮಾಡಿದೆ. ನಗರದ ಜನ ತಿರಸ್ಕರಿಸಿದ್ದಾರೆ ಎಂಬುದು ಬಿಜೆಪಿಯನ್ನು ಖಂಡಿತವಾಗಿಯೂ ಕಂಗಾಲು ಮಾಡುವ ಸಂಗತಿ.

ನಮ್ಮದು ಬಹುಸಂಸ್ಕøತಿಯ ಬಹುಭಾಷೆಯ, ಬಹು ಧರ್ಮಗಳ ದೇಶ. ನೈಜ ಸಮಸ್ಯೆಗಳನ್ನು ಕಡೆಗಣಿಸಿ ಮತಧರ್ಮದಂತಹ ಭಾವನಾತ್ಮಕ ವಿಷಯಗಳ ಮೇಲೆ ಆಡಳಿತ ನಡೆಸಲು ಬಯಸಿದವರನ್ನು ಈ ದೇಶದ ಜನರು ಪುರಸ್ಕರಿಸಿದ್ದು ಕಡಿಮೆ. ಒಂದುವೇಳೆ ಅದರಿಂದ ಲಾಭವಾದರೂ ಅದು ತಾತ್ಕಾಲಿಕ. ಗುಜರಾತಿನಂತಹ ಗುಜರಾತಿನಲ್ಲಿಯೇ ಈ ಬಾರಿ ಬಿಜೆಪಿಗೆ 99ರ ಗಡಿಯನ್ನು ದಾಟಲಾಗಲಿಲ್ಲ. ಸ್ವತಃ ಪ್ರಧಾನಿಗಳೇ 21 ರ್ಯಾಲಿ ಮಾಡಿದರೂ ಕರ್ನಾಟಕ ಅವರಿಗೆ ಮಣೆ ಹಾಕಲಿಲ್ಲ. ಧರ್ಮದ ಮೇಲೆ ಮತ ಕೇಳಿದವರನ್ನು, ಅಧಿಕಾರಕ್ಕೆ ಬಂದರೆ ಊರಿನ ಹೆಸರು ಬದಲಾವಣೆ ಮಾಡುತ್ತೇವೆ ಅಂದವರನ್ನು ಮೊನ್ನೆಯ ಚುನಾವಣೆಯಲ್ಲಿ ಮತದಾರರು ಗುಡಿಸಿ ಹಾಕಿದ್ದಾರೆ. ಇದು ಮೋದಿ ಮತ್ತವರ ಬಳಗಕ್ಕೆ ಅರ್ಥವಾಗದ ವಿಷಯವೇನಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಅವರು ಬೇರೆಯೇ ತಂತ್ರಗಳನ್ನು ಹೂಡಲೂಬಹುದು ಮತ್ತು ಆ ತಂತ್ರ ದೇಶದ ಒಟ್ಟಾರೆ ಹಿತದೃಷ್ಟಿಯಿಂದ ಅತ್ಯಂತ ಮಾರಕವಾಗಿರಲೂಬಹುದು. ಯಾಕೆಂದರೆ ಸರ್ವಾಧಿಕಾರಿಗಳು ಅಷ್ಟು ಸುಲಭದಲ್ಲಿ ಅಧಿಕಾರ ತ್ಯಾಗ ಮಾಡಿದ ಉದಾಹರಣೆ ಜಗತ್ತಿನಲ್ಲಿ ತುಂಬ ಕಡಿಮೆ.

vasumdaraje sindhya

ಈ ಚುನಾವಣೆ ಪ್ರಧಾನಿ ಮೋದಿಯವರ ಸಾಧನೆಯನ್ನು ಪರೀಕ್ಷೆಗಿಡುವ ಚುನಾವಣೆಯಲ್ಲ, ಇದು ರಾಜ್ಯಗಳ ಲೋಕಲ್ ಇಶ್ಯೂಗಳನ್ನು ಆಧರಿಸಿದ ಚುನಾವಣೆ ಬಿಜೆಪಿ ಸೋಲಿನ ಹೊಣೆಯನ್ನು ಆ ಮೂರು ರಾಜ್ಯಗಳ ಮುಖ್ಯಮಂತ್ರಿಗಳೇ ಹೊರಬೇಕು ಎಂದು ಮೋದಿಯವರನ್ನು ಪಾರು ಮಾಡುವ ವಿಫಲ ಯತ್ನ ನಡೆದಿದೆ. ಇದಕ್ಕೆ ಬಿಜೆಪಿಯ ತುತ್ತೂರಿ ಮಾಧ್ಯಮಗಳೂ ಇನ್ನಿಲ್ಲದ ಯತ್ನ ಮಾಡುತ್ತಿವೆÉ. ಸೋಲಿಗೆ ತಾವೇ ಕಾರಣ ಎಂದು ಈಗಾಗಲೇ ಆ ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಹೇಳಿಕೆ ಕೊಡಿಸಲಾಗಿದೆ ಕೂಡಾ. ಆದರೆ ಈವತ್ತು ದೇಶದ ಜನರನ್ನು ತೀವ್ರವಾಗಿ ಬಾಧಿಸಿರುವುದು ಕೃಷಿ, ಆರ್ಥಿಕತೆ ಇತ್ಯಾದಿಗಳನ್ನು ಕುರಿತ ಕೇಂದ್ರ ಸರಕಾರದ ಜನವಿರೋಧಿ ನೀತಿಗಳು. ಸಾಧನೆಯ ಕೀರ್ತಿಯೆಲ್ಲ ತನ್ನದೇ ಎನ್ನುವವರು ಸಹಜವಾಗಿಯೇ ಸೋಲಿನ ಹೊಣೆಯನ್ನೂ ಹೊರಲೇಬೇಕಾಗುತ್ತದೆ ಅಲ್ಲವೇ? ಅಲ್ಲದೆ ಪ್ರಧಾನಿಗಳು ಪ್ರಚಾರದಿಂದಲೇ ದೂರ ನಿಂತಿದ್ದರೆ ಬೇರೆ ವಿಚಾರ. ಆದರೆ ಈ ಎಲ್ಲ ರಾಜ್ಯಗಳಲ್ಲೂ ಅವರು ವ್ಯಾಪಕವಾಗಿ ತಿರುಗಾಡಿ ಪ್ರಚಾರ ಭಾಷಣ ಮಾಡಿದ್ದಾರೆ. ಪಕ್ಷವನ್ನು ಗೆಲ್ಲಿಸುವ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದರು. ಹಾಗಾಗಿ ಈಗ ಏನೇ ಸಬೂಬುಗಳನ್ನು ಹೇಳಿಕೊಳ್ಳಬಹುದಾದರು ಆಂತರ್ಯದಲ್ಲಿ ಬಿಜೆಪಿ ಮತ್ತು ಮೋದಿ, ಕುಸಿದುಹೋಗಿದ್ದಾರೆ. ಅಧಿಕಾರ ಉಳಿಸಿಕೊಳ್ಳುವ ಆತಂಕ ಅವರಿಗೆ ಶುರುವಾಗಿದೆ. ನಿವೃತ್ತ ನ್ಯಾಯಮೂರ್ತಿ ಮತ್ತು ಭಾರತೀಯ ಪ್ರೆಸ್ ಕೌನ್ಸಿಲ್‍ನ ಮಾಜಿ ಅಧ್ಯಕ್ಷರೂ ಆದ ಮಾರ್ಕಂಡೇಯ ಖಟ್ಜು ಹೇಳಿರುವಂತೆ ಬಿಜೆಪಿ ದೇಶದ ಮೇಲೆ ಆಘಾತಕಾರಿ ಪ್ರಯೋಗಗಳನ್ನು ನಡೆಸಿದರೂ ಅಚ್ಚರಿಯಿಲ್ಲ.

ಇಷ್ಟಾದರೂ ಮೋದಿಯವರು ನೆಹರೂ ವಂಶದ ಮೇಲಿನ ವಾಗ್ದಾಳಿಯನ್ನು ಈಗಲೂ ಮುಂದುವರಿಸಿದ್ದಾರೆ. ಅವರಿಗೆ ತಾನು ದೇಶದ ಪ್ರಧಾನಿ ಹಾಗಾಗಿ ಪ್ರಧಾನಿ ಸ್ಥಾನದ ಘನತೆ ಕಾಪಾಡಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲ. ಸಾಲದೆಂಬಂತೆ ಇದೀಗ ರಾಮ ಮಂದಿರ ವಿಷಯವನ್ನು ಮುಂದಿಡಲಾಗುತ್ತಿದೆ. ಅಮಿತ್ ಶಾ ಈ ದೇಶದ ಅಕ್ರಮ ವಲಸಿಗರನ್ನು ಹೊರ ಹಾಕುವ ಮಾತು ಆಡುತ್ತಿದ್ದಾರೆ. ದೇಶಪ್ರೇಮವನ್ನು, ಪಾಕಿಸ್ತಾನವನ್ನು ಮತ್ತೆ ಮತ್ತೆ ಪ್ರಸ್ತಾವಿಸಲಾಗುತ್ತಿದೆ. ಇನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಜಯ್ ಬಿಶ್ತ್ (ಯೋಗಿ ಆದಿತ್ಯನಾಥ) ಅವರಂತೂ ಹೋದಲ್ಲಿ ಬಂದಲ್ಲಿ ಹಿಂದೂ ಮುಸ್ಲಿಂ ವಿಭಜನೆಯ ರಾಜಕಾರಣ ಮಾಡುತ್ತಿದ್ದಾರೆ. ‘ಅಲಿ ನಿಮಗಿರಲಿ ನಮಗೆ ಭಜರಂಗಬಲಿ ಸಾಕು’ ಎಂದು ಬಹಿರಂಗವಾಗಿಯೇ ಕೋಮುವಾದಿ ಹೇಳಿಕೆ ನೀಡುತ್ತಿದ್ದಾರೆ. ಅಧಿಕಾರಕ್ಕೆ ಬಂದರೆ ನಿಮಗೆ ಅನ್ನ, ಆರೋಗ್ಯ, ವಸತಿ, ಉದ್ಯೋಗ ನೀಡುತ್ತೇವೆ ಎನ್ನುವ ಬದಲಿಗೆ ನಿಮ್ಮೂರಿನ ಹೆಸರು ಬದಲಾಯಿಸುತ್ತೇವೆ ಅನ್ನುತ್ತಿದ್ದಾರೆ. ಹನುಮಂತನನ್ನೂ ದಲಿತನನ್ನಾಗಿಸುತ್ತಾರೆ. ಆದರೆ ಚುನಾವಣಾ ಫಲಿತಾಂಶಗಳು ಹೇಳುವ ಪ್ರಕಾರ ಜನರಿಗೆ ಇದೆಲ್ಲ ಬೇಕಾಗಿಲ್ಲ. ಅವರಿಗೆ ಅವರ ನಿತ್ಯ ಬದುಕಿನ ಸಮಸ್ಯೆಗಳು ನೀಗಬೇಕು. ಉಣ್ಣಲು ಇಲ್ಲದವರಿಗೆ ಉಣ್ಣಲು ಬೇಕು, ಮನೆಯಿಲ್ಲದವರಿಗೆ ಮನೆ ಬೇಕು, ರೈತರಿಗೆ ತಮ್ಮ ಫಸಲಿಗೆ ಸೂಕ್ತ ಬೆಲೆ ಬೇಕು, ಯುವಕರಿಗೆ ಉದ್ಯೋಗ ಬೇಕು.
ಅಂದಹಾಗೆ, ದೇಶದ ಮೊದಲ ಗೋ ಕಲ್ಯಾಣಮಂತ್ರಿ ಬಿಜೆಪಿಯ ಓತಾ ರಾಮ್ ದೇವಸಿ ರಾಜಸ್ತಾನದ ಸಿರೋಹಿ ಜಿಲ್ಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯ ವಿರುದ್ಧ ಮೊನ್ನೆ ಚುನಾವಣೆ ಸೋತರು. ಇದನ್ನು ಧರ್ಮ, ದೇವರು, ದನ ಎಂದು ಭಾವನಾತ್ಮಕ ವಿಷಯಗಳನ್ನು ಬಳಸಿಕೊಂಡು ಅಧಿಕಾರ ಹಿಡಿಯಲು ಯತ್ನಿಸುವವರಿಗೆ ಭಾರತೀಯ ಮತದಾರರು ರವಾನಿಸಿದ ಎಚ್ಚರಿಕೆಯ ಸಂದೇಶವೆಂದೂ ಪರಿಗಣಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...