ಜಾರ್ಖಂಡ್ನ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ದೇವಸ್ಥಾನವೊಂದರಲ್ಲಿ ಪೂಜೆ ನಡೆಸುವ ಮೂಲಕ ಹಿಂದೂ ಭಾವನೆಗಳಿಗೆ ಘಾಸಿ ಮಾಡಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಜನತಾ ಪಕ್ಷದ ಸಂಸದ ನಿಶಿಕಾಂತ್ ದುಬೆ ಆಗ್ರಹಿಸಿದ್ದಾರೆ.
ದಿಯೋಘರ್ನ ಬಾಬಾ ಬೈದ್ಯನಾಥ ಧಾಮ್ ದೇವಸ್ಥಾನದಲ್ಲಿ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ಪೂಜೆ ನಡೆಸಿದ್ದರು. ಇದರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ನಿಶಿಕಾಂತ್ ದುಬೆ ಬೆದರಿಕೆ ಹಾಕಿದ್ದಾರೆ.
ಅನ್ಸಾರಿ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕಾಯ್ದೆ ಪ್ರಕಾರ ಒಂದು ವರ್ಷದವರೆಗೆ ವಿಚಾರಣೆಯಿಲ್ಲದೆ ಬಂಧನದಲ್ಲಿ ಇಡಬಹುದು.
ಇರ್ಫಾನ್ ಅನ್ಸಾರಿ ಮೊದಲು ಹಿಂದೂ ಧರ್ಮವನ್ನು ಅಳವಡಿಸಿಕೊಳ್ಳಲಿ, ನಿಜವಾಗಿಯೂ ಅವರು ಶಿವನ ಭಕ್ತನಾಗಿದ್ದರೆ ನಂತರ ಪೂಜೆ ನಡೆಸಲಿ ಎಂದು ನಿಶಿಕಾಂತ್ ದುಬೆ ಹೇಳಿದ್ದಾರೆ.
ಇದನ್ನೂ ಓದಿ: ‘ಕರ್ಣನ್’ ಸಿನಿಮಾ ವಿಮರ್ಶೆ; ಘನತೆಗಾಗಿ ತಳ ಸಮುದಾಯದ ಪ್ರತಿರೋಧದ ಸೃಜನಶೀಲ ಅಭಿವ್ಯಕ್ತಿ
“ಬಾಬಾ ಬೈದ್ಯನಾಥ ಧಾಮ್ ದೇವಾಲಯದ ಗರ್ಭಗುಡಿಯಲ್ಲಿ ಮುಸ್ಲಿಮರಿಗೆ ಪ್ರವೇಶಿಸಲು ಅಥವಾ ಪೂಜೆ ನಡೆಸಲು ಅನುಮತಿ ಇಲ್ಲ. ಮಕ್ಕಾನಲ್ಲಿ ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆಯೇ? ಇಲ್ಲ. ಹಾಗಾಗಿ ಬೈದ್ಯನಾಥ ಧಾಮ್ ದೇವಾಲಯದಲ್ಲೂ ಮುಸ್ಲಿಮರಿಗೆ ಪೂಜೆ ಸಲ್ಲಿಸಲು ಅನುಮತಿಯಿಲ್ಲ” ಎಂದು ದುಬೆ ಹೇಳಿದ್ದಾರೆ.
’ಇದು ರಾಜಕೀಯ ವಿಷಯವಲ್ಲ ಆದರೆ, ಧಾರ್ಮಿಕ ನಂಬಿಕೆಗೆ ಸಂಬಂಧಿಸಿದೆ. ಇರ್ಫಾನ್ ಅನ್ಸಾರಿ ಉದ್ದೇಶಪೂರ್ವಕವಾಗಿ ಕೋಟಿಗಟ್ಟಲೆ ಹಿಂದೂಗಳ ಧಾರ್ಮಿಕ ಭಾವನೆಯನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ರೋಗಿಗಳ ಅಂತ್ಯಸಂಸ್ಕಾರ ಕಾಣಿಸದಂತೆ ಸ್ಮಶಾನಕ್ಕೆ ಶೀಟ್ ಗೋಡೆ ಹಾಕಿಸಿದ ಉತ್ತರ ಪ್ರದೇಶ ಸರ್ಕಾರ!
“ನಾನು ಭಾರತದ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇನೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋರಿ ಮುಖ್ಯ ಕಾರ್ಯದರ್ಶಿ ಮತ್ತು ಇತರ ಸಂಬಂಧಪಟ್ಟ ವ್ಯಕ್ತಿಗೆ ಕಳುಹಿಸಿದ್ದೇನೆ. ವಿಧಾನಸಭಾ ಚುನಾವಣೆ ಹಿನ್ನೆಲೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ, ಆದರೆ, ಅನ್ಸಾರಿ ಧಾರ್ಮಿಕ ಮನೋಭಾವವನ್ನು ಕೆರಳಿಸಲು ಪ್ರಯತ್ನಿಸಿದ್ದಾರೆ. ಚುನಾವಣಾ ಆಯೋಗ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ, ನಾನು ನ್ಯಾಯ ಕೋರಿ ನ್ಯಾಯಾಲಯಕ್ಕೆ ಹೋಗುತ್ತೇನೆ” ಎಂದಿದ್ದಾರೆ.
ದುಬೆ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅನ್ಸಾರಿ, ’ಉಪಚುನಾವಣೆಗೆ ಮುಂಚಿತವಾಗಿ ನಿಶಿಕಾಂತ್ ದುಬೆ ಅನಗತ್ಯವಾಗಿ ಕೋಮು ಸೌಹಾರ್ದತೆಗೆ ಭಂಗ ತರಲು ಪ್ರಯತ್ನಿಸುತ್ತಿದ್ದಾರೆ. ಬಾಬಾ ನಾಗ್ರಿ ನನ್ನ ಜನ್ಮಸ್ಥಳ. ನಾನು ಬಾಬಾ ಬೈದ್ಯನಾಥ್ ಧಾಮ್ ದೇವಸ್ಥಾನಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿದ್ದೇನೆ”. ಎಂದಿದ್ದಾರೆ.
ಉಪಚುನಾವಣೆಯಲ್ಲಿ ಜಯಗಳಿಸಿದ ನಂತರ ಮತ್ತೆ ಇಲ್ಲಿಯೇ ಪೂಜೆ ಸಲ್ಲಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. “ನನ್ನನ್ನು ಯಾರು ತಡೆಯುತ್ತಾರೆಂದು ನಾನು ನೋಡುತ್ತೇನೆ. ಶಿವ ಯಾರೊಬ್ಬರ ವೈಯಕ್ತಿಕ ಆಸ್ತಿಯಲ್ಲ. ಶಿವನ ಮೇಲೆ ನನಗೆ ನಂಬಿಕೆಯಿದೆ” ಎಂದು ಸವಾಲು ಹಾಕಿದ್ದಾರೆ.
ಸಚಿವ ಹಾಜಿ ಹುಸೇನ್ ಅನ್ಸಾರಿ ಅವರ ನಿಧನದ ನಂತರ ಮಧುಪುರ ಸ್ಥಾನ ಖಾಲಿ ಬಿದ್ದಿದೆ. ಆ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ.
ಇದನ್ನೂ ಓದಿ: ಎಲ್ಲಾ ಹಿಂದೂಗಳು ಮುಸ್ಲಿಮರ ಕ್ಷಮೆ ಯಾಚಿಸಬೇಕಾಗಿದೆ: ಕುಂಭಮೇಳದ ಬಗ್ಗೆ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
ಹಿಂದೂ ಧರ್ಮವನ್ನು ತಮಗೆ ಬೇಕಾದಂತೆ ತಮ್ಮ ಅಪ್ಪನ ಮನೆ ಆಸ್ತಿ ಅನ್ನು ತರಹ ಉಪಯೋಗಿಸುವ ಈ ದುರ್ಮಾಗಿಗಳ ವಿರುದ್ಧ ಮೊದಲು ಕ್ರಮ ತೆಗೆದುಕೊಳ್ಳಬೇಕು. ಭಾರತೀಯ ಜನತಾ ಪಕ್ಷದ ಸಂಸದ ನಿಶಿಕಾಂತ್ ದುಬೆ ತಾನು ನೀಡಿದ ಹೇಳಿದ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಕೇಳಬೇಕು. ಹಿಂದೂ ಧರ್ಮ ಒಂದು ನೀಚ ಧರ್ಮವೆಂದು ಸಾರಿದಕ್ಕೂ ಕ್ಷಮೆಯಾಚಿಸಬೇಕು.