Homeಕರ್ನಾಟಕಸಿ.ಡಿ. ಪುರಾಣ: ಕರ್ನಾಟಕದ ವಿಕೃತ ರಾಜಕೀಯ 2.0: ಎ ನಾರಾಯಣ

ಸಿ.ಡಿ. ಪುರಾಣ: ಕರ್ನಾಟಕದ ವಿಕೃತ ರಾಜಕೀಯ 2.0: ಎ ನಾರಾಯಣ

- Advertisement -
- Advertisement -

ಇಡೀ ಪ್ರಪಂಚವನ್ನೇ ಒಂದು ಸಾಂಕ್ರಾಮಿಕ ಕಾಡುತಿದ್ದರೆ ಕರ್ನಾಟಕದಲ್ಲಿ ಕೊರೊನಾದ ಜತೆಗೆ ಸರಕಾರವೂ ತನ್ನದೇ ಆದ ರೀತಿಯಲ್ಲಿ ರೋಗಗ್ರಸ್ತವಾದಂತಿದೆ ಅಧಿಕಾರವಹಿಸಿಕೊಂಡಂದಿನಿಂದ ಇಂದಿನವರೆಗೆ ಒಂದು ಆರೋಗ್ಯಪೂರ್ಣ ಚುನಾಯಿತ ಸರ್ಕಾರದಂತೆ ಈ ಸರಕಾರ ಕಂಡುಬರಲೇ ಇಲ್ಲ. ಮೊದಲಿಗೆ ಆಪರೇಷನ್ ಕಮಲ ಎಂಬ ಅರ್ಬುದವನ್ನು ಆಶ್ರಯಿಸಿ ಸರಕಾರ ರಚಿಸಿದಾಗಲೇ ಈ ಸರಕಾರದ ಆರೋಗ್ಯದ ಬಗ್ಗೆ ಸಂಶಯ ಎದ್ದಿತ್ತು. ಈಗ ಊಹಿಸಿದ್ದಕ್ಕಿಂತ ಹೆಚ್ಚೇ ಆಪರೇಷನ್ ಕಮಲದ ಪರಿಣಾಮಗಳು ಸರಕಾರವನ್ನು ಕಾಡುತ್ತಿರುವಂತಿದೆ.

ಅಶ್ಲೀಲತೆಯೂ ನಿಗೂಢತೆಯೂ ಒಂದಕ್ಕಿಂತ ಒಂದು ಹೆಚ್ಚು ಎನ್ನುವ ರೀತಿಯಲ್ಲಿ ಬೆರೆಸಿಕೊಂಡು ಕರ್ನಾಟಕದ ಜನರನ್ನು ಸದ್ಯಕ್ಕೆ ರಂಜಿಸುತ್ತಿರುವ ಆಳುವ ಪಕ್ಷದ ಪ್ರಭಾವಿ ರಾಜಕಾರಣಿಯೊಬ್ಬರ ವಿವಾಹೇತರ ಖಾಸಗಿ ಕ್ಷಣಗಳ ದೃಶ್ಯಾವಳಿಗಳ ಸಿ.ಡಿ.ಯ ಮೂಲ ಇನ್ನೂ ರಹಸ್ಯವಾಗಿಯೇ ಉಳಿದಿದ್ದರೂ, ಆಪರೇಷನ್ ಕಮಲಕ್ಕೂ ಈ ಸಿ.ಡಿ.ಗೂ ಒಂದು ನಂಟು ಇದ್ದಂತೆ ಈ ತನಕದ ಬೆಳವಣಿಗೆಗಳು ಸೂಚಿಸುತ್ತವೆ. ಇನ್ನೂ ಇವೆ ಎನ್ನಲಾದ ಹಲವು ಸಚಿವರುಗಳನ್ನೂ, ಪ್ರಭಾವಿಗಳನ್ನೂ ಒಳಗೊಂಡ ಸಿ.ಡಿ.ಗಳಿಗೂ ಈ ನಂಟನ್ನು ವಿಸ್ತರಿಸಬಹುದು ಅನ್ನಿಸುತ್ತದೆ. ಒಂದೆಡೆ, ಜನಸಮೂಹಕ್ಕೆ ಕೊರೊನಾ ವೈರಸ್ಸು ಬಾಧಿಸುತಿದ್ದರೆ, ಇನ್ನೊಂದೆಡೆ ಸರಕಾರದ ಬಹುಭಾಗವನ್ನು ಆಪರೇಷನ್ ಕಮಲದ ಉತ್ತರಾರ್ಧದಲ್ಲಿ ಅದ್ಯಾವುದೋ ವಿಕೃತಿ (perversion) ಆವರಿಸಿದಂತಿದೆ.

ಭಾರತದಲ್ಲಿ ಸೋಂಕಿತರ ಚೇತರಿಕೆ ಪ್ರಮಾಣ 67.19% ಕ್ಕೆ ಏರಿಕೆ
PC: Google

ಕರ್ನಾಟಕದ ಈಗಿನ ಆಳುವ ಪಕ್ಷ 2008ರಲ್ಲಿ ಮೊದಲ ಬಾರಿಗೆ ಅಪೂರ್ಣ ಬಹುಮತ ಪಡೆದು ಸರ್ಕಾರ ರಚಿಸಿದ ಸಂದರ್ಭದಲ್ಲಿ ಆಪರೇಷನ್ ಕಮಲದ ಮೂಲಕ ಖರೀದಿಸಿದ ವಿರೋಧಿ ಬಣದ ಶಾಸಕರು ಕೊಟ್ಟದ್ದನ್ನು ಪಡೆದು ತೆಪ್ಪಗೆ ಇರುವ ಜಾಯಮಾನದವರಾಗಿದ್ದರು. ಆದಕಾರಣ ಆಪರೇಷನ್ ಕಮಲದ ಆ ಮೊದಲ ಆವೃತ್ತಿ ’ಯಶಸ್ವಿ’ ಎನ್ನುವಂತೆಯೇ ಆಗಿಹೋಯಿತು. ಈ ಬಾರಿ ಆಪರೇಷನ್ ಕಮಲದ ಮೂಲಕ ಆಳುವ ಪಕ್ಷಕ್ಕೆ ಖರೀದಿಸಲು ಸಿಕ್ಕಿದ್ದು ಹೋದ ಬಾರಿ ಸಿಕ್ಕಂತಹ ನೀರೊಳ್ಳೆ ಹಾವುಗಳಲ್ಲ. ಈ ಬಾರಿ ಬಲೆಗೆ ಬಿದ್ದದ್ದು ಘಟಸರ್ಪಗಳು. ಅವು ಕೊಟ್ಟದ್ದನ್ನು ಗಿಟ್ಟಿಸಿಕೊಂಡು ಸುಮ್ಮನಿರುವ ಜಾಯಮಾನದವುಗಳಲ್ಲ. ಅವು ಖಾತೆಗಾಗಿ ನಡೆಸಿದ ಚೌಕಾಸಿಯನ್ನು ನೆನಪಿಸಿಕೊಳ್ಳಿ. ಈಗಲೂ ಆಳುವ ಪಕ್ಷದ ಮೂಲ ಹಳೆಯ ತಲೆಗಳಿಗಿಂತ ಸರಕಾರದಲ್ಲಿ ಹೆಚ್ಚು ಮಿಂಚುತ್ತಿರುವುದು ಆಪರೇಷನ್ ಕಮಲದ ಮೂಲಕ ಖರೀದಿಯಾದ ಮುಖಗಳೇ.

ಆಪರೇಷನ್ ಕಮಲವನ್ನು ಈ ಬಾರಿ ನಿರ್ದೇಶಿಸದವರಿಗೆ ಇದೆಲ್ಲಾ ಮೊದಲೇ ಗೊತ್ತಿತ್ತು. ಅವರು ಬಹು ಚಾಣಾಕ್ಷರೇ ಇರಬೇಕು. ಅವರು ಬಹಳ ಮುಂದಾಲೋಚನೆಯಿಂದಲೇ ಕಾರ್ಯಪ್ರವೃತ್ತರಾಗಿದ್ದಾರೆ. ಬಲೆಗೆ ಬಿದ್ದ ಸರ್ಪಗಳ ಹಲ್ಲಿನ ಹರಿತವನ್ನೂ, ವಿಷದ ಚೀಲದ ಗಾತ್ರವನ್ನು ಅವರು ಪೂರ್ವಭಾವಿಯಾಗಿಯೇ ಲೆಕ್ಕಹಾಕಿ ಮುಂದೊಂದು ದಿನ ಭಾರಿಯಾಗಿ ಹೆಡೆ ಬಿಚ್ಚಿದರೆ ಏನೇನು ಮಾಡಬೇಕು ಅಂತ ಸರಿಯಾದ ಮುನ್ನೆಚ್ಚರಿಕೆ ವಹಿಸಿದ್ದಾರೆ. ಗುಟ್ಟಾಗಿ ಎಲ್ಲರ ಜುಟ್ಟನ್ನು ಕೈಗೆ ತೆಗೆದುಕೊಂಡೇ ಈ ಬಾರಿ ಆಪರೇಷನ್ ಕಮಲದ ದಾಳ ಉರುಳಿಸಿದ್ದಾರೆ. ಅದರ ಫಲವಾಗಿಯೇ ಈಗ ಆಪರೇಷನ್ ಕಮಲದ ಫಲಾನುಭವಿಗಳ ಕೊರಳಿಗೆ ಸಿ.ಡಿ.ಯ ಮಾಲೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸುತ್ತಿಕೊಂಡಿರುವುದು ಎನ್ನುವುದು ಜನರು ತಮ್ಮ ಸಾಮಾನ್ಯ ಜ್ಞಾನದಿಂದ ಹಾಕಿಕೊಂಡ ಲೆಕ್ಕಾಚಾರ.

ಈ ನಂಟಿಗೆ ಪುರಾವೆ ಇಲ್ಲ ಎನ್ನುವುದು ನಿಜ. ಆದರೆ, ಎಲ್ಲಾ ಪುರಾವೆಗಿಂತಲೂ ಜನರ ಸಾಮಾನ್ಯ ಜ್ಞಾನವನ್ನೇ ನಂಬಬೇಕಾದ ಕಾಲ ಇದು. ಈ ನಂಟಿಗೆ ಹಲವು ಆಯಾಮಗಳನ್ನು ಊಹಿಸಬಹುದು. ವಾಸ್ತವದಲ್ಲಿ, ಇದನ್ನೆಲ್ಲಾ ಆಪರೇಷನ್ ಕಮಲದ ನೇರ ರೂವಾರಿಗಳೇ ಮಾಡಿರಬೇಕಂತಲೂ ಇಲ್ಲ. ಆಪರೇಷನ್ ಕಮಲದ ಒಟ್ಟು ಯೋಜನೆ ಮತ್ತು ಆ ಮೂಲಕ ಈಗಿನ ಮುಖ್ಯಮಂತ್ರಿಗಳ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರುವುದೇ ಇಷ್ಟವಿಲ್ಲದ ಆಳುವ ಪಕ್ಷದ ಯಾವುದೋ ಗುಂಪಿನವರೂ ಹೀಗೆ ಎಲ್ಲರ ಜುಟ್ಟನ್ನು ಸಿ.ಡಿ.ಯ ಮೂಲಕ ಹಿಡಿದುಕೊಳ್ಳುವ ಜಾಣತನ ತೋರಿರುವ ಸಾಧ್ಯತೆ ಇದೆ. ಯಾರೇ ಮಾಡಿರಲಿ, ಅವರು ಈ ಜಾಲದ ಒಂದು ತಂತು ವಿರೋಧ ಪಕ್ಷದ ಬುಡಕ್ಕೂ ತಗುಲಿಸಿ ಅವರನ್ನೂ ಇದರಲ್ಲಿ ಭಾಗೀದಾರರನ್ನಾಗಿ ಮಾಡಿದ ರಣತಂತ್ರವಂತೂ ಅದ್ಭುತ. ಆಪರೇಷನ್ ಕಮಲದ ವಿರುದ್ಧ ಸೇಡು ತೀರಿಸಿಕೊಳ್ಳಲೆಂದು ವಿರೋಧ ಪಕ್ಷದ ಯಾರದ್ದಾದರೂ ಕಡೆಯಿಂದಲೇ ಇಡೀ ನಾಟಕ ನಡೆದಿದ್ದರಂತೂ ಅದು ಇನ್ನೂ ಅದ್ಭುತ – ಯಾಕೆಂದರೆ ವಿರೋಧ ಪಕ್ಷಗಳಲ್ಲಿ ಚೈತನ್ಯವೇ ಉಡುಗಿಹೋಗಿದೆ ಎನ್ನುವ ಊಹೆ ಆ ಮೂಲಕ ಸುಳ್ಳಾದಂತೆ ಆಗುತ್ತದೆ. ಸದ್ಯಕ್ಕಂತೂ ನದಿ ಮೂಲ, ಋಷಿ ಮೂಲ ಇತ್ಯಾದಿಗಳಂತೆಯೇ ಈ ಸಿ.ಡಿ. ಮೂಲ ಕೂಡ ನಿಗೂಢ.

ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಮದ್ಯದ ಲಾಬಿ ಸರಕಾರಗಳನ್ನು ನಿಯಂತ್ರಿಸುತ್ತಿದ್ದ ಕತೆ ಕೇಳಿದ್ದೇವೆ, ಕ್ಯಾಪಿಟೇಷನ್ ಲಾಬಿ, ಟಿಂಬರ್ ಲಾಬಿ, ಗಣಿ ಲಾಬಿ ಸರಕಾರಗಳನ್ನು ನಿಯಂತ್ರಿಸುತ್ತಿದ್ದ ಕತೆ ಕೇಳಿದ್ದೇವೆ. ಆ ಲಾಬಿಗಳದ್ದೆಲ್ಲಾ ಹಳೆಯ ಕತೆ. ಇದು ಹೊಸ ಸ್ಟಾರ್ಟ್‌ಅಪ್ ಐಡಿಯಾಗಳ ಕಾಲ. ಯಾವ ಲಾಬಿಯೂ ಬೇಕಾಗಿಲ್ಲ. ಆಯಕಟ್ಟಿನ ಜಾಗದಲ್ಲಿ ಒಂದು ಕ್ಯಾಮರಾ ಇಟ್ಟುಬಿಟ್ಟು ಒಂದು ಸಿ.ಡಿ. ಸೃಷ್ಟಿಸಿಬಿಟ್ಟರೆ ಆರು ಕೋಟಿ ಜನ ಚುನಾಯಿಸಿದ ಸರ್ಕಾರವೊಂದನ್ನು ಬೆರಳ ತುದಿಯಲ್ಲಿ ಆಡಿಸಿಬಿಡಬಹುದು. ಹೋರಾಟಗಳ ಮೂಸೆಯಲ್ಲಿ ರೂಪುಗೊಂಡ ರಾಜಕೀಯ ಹುಲಿಗಳನ್ನು ಬಾಲ ಮುದುಡಿದ ಬೆಕ್ಕುಗಳನ್ನಾಗಿ ಮಾಡಿಬಿಡಬಹುದು. ಒಂದು ದಿನ ಸರಕಾರ ಉರುಳಿಸಿದವರನ್ನು ಮರುದಿನ ಪೊಲೀಸರ ಮುಂದೆ ದೈನೇಸಿ ನಿಲ್ಲುವಂತೆ ಮಾಡಬಹುದು. ಎಲೆಕ್ಟ್ರಾನಿಕ್ಸ್ ಟ್ಯಾಬ್ಲಾಯ್ಡ್‌ಗಳು (ಸುದ್ದಿವಾಹಿನಿ) ಎಲ್ಲವನ್ನೂ ಮರೆತು ಆಡಿದ್ದನ್ನೇ ಆಡುತ್ತಾ, ತೋರಿಸಿದ್ದನ್ನೇ ತೋರಿಸುತ್ತಾ ಜೊಲ್ಲು ಸುರಿಸುವಂತೆ ಮಾಡಬಹುದು.

ಇಲ್ಲಿ ಯಾವುದೇ ರೀತಿಯ ಊಹೆ, ಕಲ್ಪನೆ, ಸುಳ್ಳು ಸುದ್ದಿಯ ಪ್ರಶ್ನೆ ಇಲ್ಲ. ಆಳುವ ಪಕ್ಷದ ಜವಾಬ್ದಾರಿಯುತ ಶಾಸಕರುಗಳು ಕಾಲಕಾಲಕ್ಕೆ ನೀಡಿದ ಸಾರ್ವಜನಿಕ ಹೇಳಿಕೆಗಳನ್ನು ಮತ್ತು ನಮ್ಮ ಕಣ್ಣೆದುರಿಗೆ ನಡೆಯುತ್ತಿರುವ ವಿದ್ಯಮಾನಗಳನ್ನು ಒಟ್ಟಿಗಿಟ್ಟು ಪರಾಮರ್ಶಿಸಿದರೆ ತಿಳಿಯುವ ಕೆಲವು ಸತ್ಯಗಳು ಹೀಗಿವೆ: ಈ ರಾಜ್ಯದ ಮಂತ್ರಿಮಂಡಲದಲ್ಲಿ ಯಾರು ಸೇರುತ್ತಾರೆ, ಯಾರು ಸೇರುವುದಿಲ್ಲ ಎನ್ನುವುದರ ನಿರ್ಣಯವಾಗುವುದು ಯಾರೋ ಯಾರದೋ ಖಾಸಗಿ ಕ್ಷಣಗಳನ್ನೂ ಚಿತ್ರೀಕರಿಸಿ ಇಟ್ಟುಕೊಂಡಿರುವ ’ಸಿ.ಡಿ.’ಗಳ ಆಧಾರದಲ್ಲಿ. ಈ ರಾಜ್ಯದ ವಿಧಾನಮಂಡಲದ ಬಜೆಟ್ ಅಧಿವೇಶನದಲ್ಲಿ ಚರ್ಚೆಯಾಗುವುದೂ ಅಂತಹ ಸಿ.ಡಿ.ಗಳ ವಿಷಯ. ಈ ರಾಜ್ಯದ ಪತ್ರಿಕೆಗಳ ಮುಖಪುಟಗಳನ್ನು ಮತ್ತು ಎಲೆಕ್ಟ್ರಾನಿಕ್ಸ್ ಟ್ಯಾಬ್ಲಾಯ್ಡ್‌ಗಳ ಪ್ರೈಮ್ ಟೈಮ್‌ಅನ್ನು ಆವರಿಸಿಕೊಳ್ಳುತ್ತಿರುವುದು ಅಂತಹ ಸಿ.ಡಿ.ಗಳಲ್ಲಿ ಹುದುಗಿಕೊಂಡಿರುವ ವರ್ಣರಂಜಿತ ದೃಶ್ಯಾವಳಿಗಳ-ಅವುಗಳ ಹಿಂದಿನ ಕಾಣದ ಕೈಗಳ ವಿಚಾರ.

pe

ತನಿಖೆ ನಡೆಸಲು ಸಾವಿರಗಟ್ಟಲೆ ಪ್ರಕರಣಗಳು ರಾಶಿ ಬಿದ್ದಿರುವಾಗ ಈ ರಾಜ್ಯದ ಪೊಲೀಸರು ತಮ್ಮ ಅಮೂಲ್ಯ ಸಮಯವನ್ನು ಬಳಸುವುದು ಈ ರೀತಿಯ ಸಿ.ಡಿ.ಗಳ ಪಾತ್ರಧಾರಿಗಳ, ಸೂತ್ರಧಾರಿಗಳ ಅಸಲೀಯತ್ತತೆಯನ್ನು ಪತ್ತೆ ಹಚ್ಚುವುದಕ್ಕೋಸ್ಕರ. ಈ ರಾಜ್ಯದ ವಿರೋಧ ಪಕ್ಷಗಳು ಸರಕಾರದ ವಿರುದ್ಧ ಹೋರಾಟ ನಡೆಸಲು ಆದ್ಯತೆಯ ಮೇಲೆ ಆಯ್ದುಕೊಳ್ಳುವುದು ಇಂತಹ ಸಿ.ಡಿ. ಸುತ್ತ ಎದ್ದಿರುವ ಪ್ರಶ್ನೆಗಳನ್ನು. ಈ ರಾಜ್ಯದಲ್ಲಿ ಸಾಮಾಜಿಕ ಕಾರ್ಯಕರ್ತರು ಕಂಡುಕೊಂಡ ಹೊಸ ಸಮಾಜ ಸೇವೆ ಎಂದರೆ ಅದು ಇಂತಹ ಸಿ.ಡಿ.ಗಳ ಸಂಗ್ರಹ ಮತ್ತು ಪ್ರದರ್ಶನ. ಸಿ.ಡಿ. ಪ್ರಕರಣಗಳಲ್ಲಿ ಸಿಲುಕಿದವರನ್ನು-ಸಿಲುಕಿಸಿದವರನ್ನು ಒಟ್ಟುಸೇರಿಸಿ ಸಂಧಾನ ನಡೆಸುವುದು ಈ ರಾಜ್ಯದ ಕೆಲವು ಸ್ವಾಮೀಜಿಗಳು ಮಾಡುವ ಹೊಸ ಆಧ್ಯಾತ್ಮ ಅನುಷ್ಠಾನ.

ರಾಜಕೀಯ ನಾಟಕ ಯಾವತ್ತಿಗೂ ಅಸಂಗತವೇ. ಆದರೆ ನಾವೀಗ ಕಾಣುತ್ತಿರುವುದು ಅಸಂಗತತೆಯ ಅಪರಾವತಾರವನ್ನು. ಅದನ್ನೂ ದಾಟಿದ ಮನೋವಿಕೃತಿಯಾಟಗಳನ್ನು. ಕೊರೊನಾಕ್ಕೆ ಆದರೂ ಲಸಿಕೆ ಬಂದಿದೆ. ಆದರೆ ಈ ಎಲ್ಲಾ ವಿಕೃತಿಗಳಿಗೆ ಲಸಿಕೆ ಎಲ್ಲಿದೆ?


ಇದನ್ನೂ ಓದಿ: ಸಿಡಿ ಹಗರಣ: SIT ನಿಷ್ಪಕ್ಷಪಾತ ತನಿಖೆ ಅನುಮಾನವೆಂದು ಗೃಹಮಂತ್ರಿಗಳಿಗೆ ಪತ್ರ ಬರೆದ ನಾವೆದ್ದು ನಿಲ್ಲದಿದ್ದರೇ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...