Homeಕರ್ನಾಟಕಸಿ.ಡಿ. ಪುರಾಣ: ಕರ್ನಾಟಕದ ವಿಕೃತ ರಾಜಕೀಯ 2.0: ಎ ನಾರಾಯಣ

ಸಿ.ಡಿ. ಪುರಾಣ: ಕರ್ನಾಟಕದ ವಿಕೃತ ರಾಜಕೀಯ 2.0: ಎ ನಾರಾಯಣ

- Advertisement -
- Advertisement -

ಇಡೀ ಪ್ರಪಂಚವನ್ನೇ ಒಂದು ಸಾಂಕ್ರಾಮಿಕ ಕಾಡುತಿದ್ದರೆ ಕರ್ನಾಟಕದಲ್ಲಿ ಕೊರೊನಾದ ಜತೆಗೆ ಸರಕಾರವೂ ತನ್ನದೇ ಆದ ರೀತಿಯಲ್ಲಿ ರೋಗಗ್ರಸ್ತವಾದಂತಿದೆ ಅಧಿಕಾರವಹಿಸಿಕೊಂಡಂದಿನಿಂದ ಇಂದಿನವರೆಗೆ ಒಂದು ಆರೋಗ್ಯಪೂರ್ಣ ಚುನಾಯಿತ ಸರ್ಕಾರದಂತೆ ಈ ಸರಕಾರ ಕಂಡುಬರಲೇ ಇಲ್ಲ. ಮೊದಲಿಗೆ ಆಪರೇಷನ್ ಕಮಲ ಎಂಬ ಅರ್ಬುದವನ್ನು ಆಶ್ರಯಿಸಿ ಸರಕಾರ ರಚಿಸಿದಾಗಲೇ ಈ ಸರಕಾರದ ಆರೋಗ್ಯದ ಬಗ್ಗೆ ಸಂಶಯ ಎದ್ದಿತ್ತು. ಈಗ ಊಹಿಸಿದ್ದಕ್ಕಿಂತ ಹೆಚ್ಚೇ ಆಪರೇಷನ್ ಕಮಲದ ಪರಿಣಾಮಗಳು ಸರಕಾರವನ್ನು ಕಾಡುತ್ತಿರುವಂತಿದೆ.

ಅಶ್ಲೀಲತೆಯೂ ನಿಗೂಢತೆಯೂ ಒಂದಕ್ಕಿಂತ ಒಂದು ಹೆಚ್ಚು ಎನ್ನುವ ರೀತಿಯಲ್ಲಿ ಬೆರೆಸಿಕೊಂಡು ಕರ್ನಾಟಕದ ಜನರನ್ನು ಸದ್ಯಕ್ಕೆ ರಂಜಿಸುತ್ತಿರುವ ಆಳುವ ಪಕ್ಷದ ಪ್ರಭಾವಿ ರಾಜಕಾರಣಿಯೊಬ್ಬರ ವಿವಾಹೇತರ ಖಾಸಗಿ ಕ್ಷಣಗಳ ದೃಶ್ಯಾವಳಿಗಳ ಸಿ.ಡಿ.ಯ ಮೂಲ ಇನ್ನೂ ರಹಸ್ಯವಾಗಿಯೇ ಉಳಿದಿದ್ದರೂ, ಆಪರೇಷನ್ ಕಮಲಕ್ಕೂ ಈ ಸಿ.ಡಿ.ಗೂ ಒಂದು ನಂಟು ಇದ್ದಂತೆ ಈ ತನಕದ ಬೆಳವಣಿಗೆಗಳು ಸೂಚಿಸುತ್ತವೆ. ಇನ್ನೂ ಇವೆ ಎನ್ನಲಾದ ಹಲವು ಸಚಿವರುಗಳನ್ನೂ, ಪ್ರಭಾವಿಗಳನ್ನೂ ಒಳಗೊಂಡ ಸಿ.ಡಿ.ಗಳಿಗೂ ಈ ನಂಟನ್ನು ವಿಸ್ತರಿಸಬಹುದು ಅನ್ನಿಸುತ್ತದೆ. ಒಂದೆಡೆ, ಜನಸಮೂಹಕ್ಕೆ ಕೊರೊನಾ ವೈರಸ್ಸು ಬಾಧಿಸುತಿದ್ದರೆ, ಇನ್ನೊಂದೆಡೆ ಸರಕಾರದ ಬಹುಭಾಗವನ್ನು ಆಪರೇಷನ್ ಕಮಲದ ಉತ್ತರಾರ್ಧದಲ್ಲಿ ಅದ್ಯಾವುದೋ ವಿಕೃತಿ (perversion) ಆವರಿಸಿದಂತಿದೆ.

ಭಾರತದಲ್ಲಿ ಸೋಂಕಿತರ ಚೇತರಿಕೆ ಪ್ರಮಾಣ 67.19% ಕ್ಕೆ ಏರಿಕೆ
PC: Google

ಕರ್ನಾಟಕದ ಈಗಿನ ಆಳುವ ಪಕ್ಷ 2008ರಲ್ಲಿ ಮೊದಲ ಬಾರಿಗೆ ಅಪೂರ್ಣ ಬಹುಮತ ಪಡೆದು ಸರ್ಕಾರ ರಚಿಸಿದ ಸಂದರ್ಭದಲ್ಲಿ ಆಪರೇಷನ್ ಕಮಲದ ಮೂಲಕ ಖರೀದಿಸಿದ ವಿರೋಧಿ ಬಣದ ಶಾಸಕರು ಕೊಟ್ಟದ್ದನ್ನು ಪಡೆದು ತೆಪ್ಪಗೆ ಇರುವ ಜಾಯಮಾನದವರಾಗಿದ್ದರು. ಆದಕಾರಣ ಆಪರೇಷನ್ ಕಮಲದ ಆ ಮೊದಲ ಆವೃತ್ತಿ ’ಯಶಸ್ವಿ’ ಎನ್ನುವಂತೆಯೇ ಆಗಿಹೋಯಿತು. ಈ ಬಾರಿ ಆಪರೇಷನ್ ಕಮಲದ ಮೂಲಕ ಆಳುವ ಪಕ್ಷಕ್ಕೆ ಖರೀದಿಸಲು ಸಿಕ್ಕಿದ್ದು ಹೋದ ಬಾರಿ ಸಿಕ್ಕಂತಹ ನೀರೊಳ್ಳೆ ಹಾವುಗಳಲ್ಲ. ಈ ಬಾರಿ ಬಲೆಗೆ ಬಿದ್ದದ್ದು ಘಟಸರ್ಪಗಳು. ಅವು ಕೊಟ್ಟದ್ದನ್ನು ಗಿಟ್ಟಿಸಿಕೊಂಡು ಸುಮ್ಮನಿರುವ ಜಾಯಮಾನದವುಗಳಲ್ಲ. ಅವು ಖಾತೆಗಾಗಿ ನಡೆಸಿದ ಚೌಕಾಸಿಯನ್ನು ನೆನಪಿಸಿಕೊಳ್ಳಿ. ಈಗಲೂ ಆಳುವ ಪಕ್ಷದ ಮೂಲ ಹಳೆಯ ತಲೆಗಳಿಗಿಂತ ಸರಕಾರದಲ್ಲಿ ಹೆಚ್ಚು ಮಿಂಚುತ್ತಿರುವುದು ಆಪರೇಷನ್ ಕಮಲದ ಮೂಲಕ ಖರೀದಿಯಾದ ಮುಖಗಳೇ.

ಆಪರೇಷನ್ ಕಮಲವನ್ನು ಈ ಬಾರಿ ನಿರ್ದೇಶಿಸದವರಿಗೆ ಇದೆಲ್ಲಾ ಮೊದಲೇ ಗೊತ್ತಿತ್ತು. ಅವರು ಬಹು ಚಾಣಾಕ್ಷರೇ ಇರಬೇಕು. ಅವರು ಬಹಳ ಮುಂದಾಲೋಚನೆಯಿಂದಲೇ ಕಾರ್ಯಪ್ರವೃತ್ತರಾಗಿದ್ದಾರೆ. ಬಲೆಗೆ ಬಿದ್ದ ಸರ್ಪಗಳ ಹಲ್ಲಿನ ಹರಿತವನ್ನೂ, ವಿಷದ ಚೀಲದ ಗಾತ್ರವನ್ನು ಅವರು ಪೂರ್ವಭಾವಿಯಾಗಿಯೇ ಲೆಕ್ಕಹಾಕಿ ಮುಂದೊಂದು ದಿನ ಭಾರಿಯಾಗಿ ಹೆಡೆ ಬಿಚ್ಚಿದರೆ ಏನೇನು ಮಾಡಬೇಕು ಅಂತ ಸರಿಯಾದ ಮುನ್ನೆಚ್ಚರಿಕೆ ವಹಿಸಿದ್ದಾರೆ. ಗುಟ್ಟಾಗಿ ಎಲ್ಲರ ಜುಟ್ಟನ್ನು ಕೈಗೆ ತೆಗೆದುಕೊಂಡೇ ಈ ಬಾರಿ ಆಪರೇಷನ್ ಕಮಲದ ದಾಳ ಉರುಳಿಸಿದ್ದಾರೆ. ಅದರ ಫಲವಾಗಿಯೇ ಈಗ ಆಪರೇಷನ್ ಕಮಲದ ಫಲಾನುಭವಿಗಳ ಕೊರಳಿಗೆ ಸಿ.ಡಿ.ಯ ಮಾಲೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸುತ್ತಿಕೊಂಡಿರುವುದು ಎನ್ನುವುದು ಜನರು ತಮ್ಮ ಸಾಮಾನ್ಯ ಜ್ಞಾನದಿಂದ ಹಾಕಿಕೊಂಡ ಲೆಕ್ಕಾಚಾರ.

ಈ ನಂಟಿಗೆ ಪುರಾವೆ ಇಲ್ಲ ಎನ್ನುವುದು ನಿಜ. ಆದರೆ, ಎಲ್ಲಾ ಪುರಾವೆಗಿಂತಲೂ ಜನರ ಸಾಮಾನ್ಯ ಜ್ಞಾನವನ್ನೇ ನಂಬಬೇಕಾದ ಕಾಲ ಇದು. ಈ ನಂಟಿಗೆ ಹಲವು ಆಯಾಮಗಳನ್ನು ಊಹಿಸಬಹುದು. ವಾಸ್ತವದಲ್ಲಿ, ಇದನ್ನೆಲ್ಲಾ ಆಪರೇಷನ್ ಕಮಲದ ನೇರ ರೂವಾರಿಗಳೇ ಮಾಡಿರಬೇಕಂತಲೂ ಇಲ್ಲ. ಆಪರೇಷನ್ ಕಮಲದ ಒಟ್ಟು ಯೋಜನೆ ಮತ್ತು ಆ ಮೂಲಕ ಈಗಿನ ಮುಖ್ಯಮಂತ್ರಿಗಳ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರುವುದೇ ಇಷ್ಟವಿಲ್ಲದ ಆಳುವ ಪಕ್ಷದ ಯಾವುದೋ ಗುಂಪಿನವರೂ ಹೀಗೆ ಎಲ್ಲರ ಜುಟ್ಟನ್ನು ಸಿ.ಡಿ.ಯ ಮೂಲಕ ಹಿಡಿದುಕೊಳ್ಳುವ ಜಾಣತನ ತೋರಿರುವ ಸಾಧ್ಯತೆ ಇದೆ. ಯಾರೇ ಮಾಡಿರಲಿ, ಅವರು ಈ ಜಾಲದ ಒಂದು ತಂತು ವಿರೋಧ ಪಕ್ಷದ ಬುಡಕ್ಕೂ ತಗುಲಿಸಿ ಅವರನ್ನೂ ಇದರಲ್ಲಿ ಭಾಗೀದಾರರನ್ನಾಗಿ ಮಾಡಿದ ರಣತಂತ್ರವಂತೂ ಅದ್ಭುತ. ಆಪರೇಷನ್ ಕಮಲದ ವಿರುದ್ಧ ಸೇಡು ತೀರಿಸಿಕೊಳ್ಳಲೆಂದು ವಿರೋಧ ಪಕ್ಷದ ಯಾರದ್ದಾದರೂ ಕಡೆಯಿಂದಲೇ ಇಡೀ ನಾಟಕ ನಡೆದಿದ್ದರಂತೂ ಅದು ಇನ್ನೂ ಅದ್ಭುತ – ಯಾಕೆಂದರೆ ವಿರೋಧ ಪಕ್ಷಗಳಲ್ಲಿ ಚೈತನ್ಯವೇ ಉಡುಗಿಹೋಗಿದೆ ಎನ್ನುವ ಊಹೆ ಆ ಮೂಲಕ ಸುಳ್ಳಾದಂತೆ ಆಗುತ್ತದೆ. ಸದ್ಯಕ್ಕಂತೂ ನದಿ ಮೂಲ, ಋಷಿ ಮೂಲ ಇತ್ಯಾದಿಗಳಂತೆಯೇ ಈ ಸಿ.ಡಿ. ಮೂಲ ಕೂಡ ನಿಗೂಢ.

ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಮದ್ಯದ ಲಾಬಿ ಸರಕಾರಗಳನ್ನು ನಿಯಂತ್ರಿಸುತ್ತಿದ್ದ ಕತೆ ಕೇಳಿದ್ದೇವೆ, ಕ್ಯಾಪಿಟೇಷನ್ ಲಾಬಿ, ಟಿಂಬರ್ ಲಾಬಿ, ಗಣಿ ಲಾಬಿ ಸರಕಾರಗಳನ್ನು ನಿಯಂತ್ರಿಸುತ್ತಿದ್ದ ಕತೆ ಕೇಳಿದ್ದೇವೆ. ಆ ಲಾಬಿಗಳದ್ದೆಲ್ಲಾ ಹಳೆಯ ಕತೆ. ಇದು ಹೊಸ ಸ್ಟಾರ್ಟ್‌ಅಪ್ ಐಡಿಯಾಗಳ ಕಾಲ. ಯಾವ ಲಾಬಿಯೂ ಬೇಕಾಗಿಲ್ಲ. ಆಯಕಟ್ಟಿನ ಜಾಗದಲ್ಲಿ ಒಂದು ಕ್ಯಾಮರಾ ಇಟ್ಟುಬಿಟ್ಟು ಒಂದು ಸಿ.ಡಿ. ಸೃಷ್ಟಿಸಿಬಿಟ್ಟರೆ ಆರು ಕೋಟಿ ಜನ ಚುನಾಯಿಸಿದ ಸರ್ಕಾರವೊಂದನ್ನು ಬೆರಳ ತುದಿಯಲ್ಲಿ ಆಡಿಸಿಬಿಡಬಹುದು. ಹೋರಾಟಗಳ ಮೂಸೆಯಲ್ಲಿ ರೂಪುಗೊಂಡ ರಾಜಕೀಯ ಹುಲಿಗಳನ್ನು ಬಾಲ ಮುದುಡಿದ ಬೆಕ್ಕುಗಳನ್ನಾಗಿ ಮಾಡಿಬಿಡಬಹುದು. ಒಂದು ದಿನ ಸರಕಾರ ಉರುಳಿಸಿದವರನ್ನು ಮರುದಿನ ಪೊಲೀಸರ ಮುಂದೆ ದೈನೇಸಿ ನಿಲ್ಲುವಂತೆ ಮಾಡಬಹುದು. ಎಲೆಕ್ಟ್ರಾನಿಕ್ಸ್ ಟ್ಯಾಬ್ಲಾಯ್ಡ್‌ಗಳು (ಸುದ್ದಿವಾಹಿನಿ) ಎಲ್ಲವನ್ನೂ ಮರೆತು ಆಡಿದ್ದನ್ನೇ ಆಡುತ್ತಾ, ತೋರಿಸಿದ್ದನ್ನೇ ತೋರಿಸುತ್ತಾ ಜೊಲ್ಲು ಸುರಿಸುವಂತೆ ಮಾಡಬಹುದು.

ಇಲ್ಲಿ ಯಾವುದೇ ರೀತಿಯ ಊಹೆ, ಕಲ್ಪನೆ, ಸುಳ್ಳು ಸುದ್ದಿಯ ಪ್ರಶ್ನೆ ಇಲ್ಲ. ಆಳುವ ಪಕ್ಷದ ಜವಾಬ್ದಾರಿಯುತ ಶಾಸಕರುಗಳು ಕಾಲಕಾಲಕ್ಕೆ ನೀಡಿದ ಸಾರ್ವಜನಿಕ ಹೇಳಿಕೆಗಳನ್ನು ಮತ್ತು ನಮ್ಮ ಕಣ್ಣೆದುರಿಗೆ ನಡೆಯುತ್ತಿರುವ ವಿದ್ಯಮಾನಗಳನ್ನು ಒಟ್ಟಿಗಿಟ್ಟು ಪರಾಮರ್ಶಿಸಿದರೆ ತಿಳಿಯುವ ಕೆಲವು ಸತ್ಯಗಳು ಹೀಗಿವೆ: ಈ ರಾಜ್ಯದ ಮಂತ್ರಿಮಂಡಲದಲ್ಲಿ ಯಾರು ಸೇರುತ್ತಾರೆ, ಯಾರು ಸೇರುವುದಿಲ್ಲ ಎನ್ನುವುದರ ನಿರ್ಣಯವಾಗುವುದು ಯಾರೋ ಯಾರದೋ ಖಾಸಗಿ ಕ್ಷಣಗಳನ್ನೂ ಚಿತ್ರೀಕರಿಸಿ ಇಟ್ಟುಕೊಂಡಿರುವ ’ಸಿ.ಡಿ.’ಗಳ ಆಧಾರದಲ್ಲಿ. ಈ ರಾಜ್ಯದ ವಿಧಾನಮಂಡಲದ ಬಜೆಟ್ ಅಧಿವೇಶನದಲ್ಲಿ ಚರ್ಚೆಯಾಗುವುದೂ ಅಂತಹ ಸಿ.ಡಿ.ಗಳ ವಿಷಯ. ಈ ರಾಜ್ಯದ ಪತ್ರಿಕೆಗಳ ಮುಖಪುಟಗಳನ್ನು ಮತ್ತು ಎಲೆಕ್ಟ್ರಾನಿಕ್ಸ್ ಟ್ಯಾಬ್ಲಾಯ್ಡ್‌ಗಳ ಪ್ರೈಮ್ ಟೈಮ್‌ಅನ್ನು ಆವರಿಸಿಕೊಳ್ಳುತ್ತಿರುವುದು ಅಂತಹ ಸಿ.ಡಿ.ಗಳಲ್ಲಿ ಹುದುಗಿಕೊಂಡಿರುವ ವರ್ಣರಂಜಿತ ದೃಶ್ಯಾವಳಿಗಳ-ಅವುಗಳ ಹಿಂದಿನ ಕಾಣದ ಕೈಗಳ ವಿಚಾರ.

pe

ತನಿಖೆ ನಡೆಸಲು ಸಾವಿರಗಟ್ಟಲೆ ಪ್ರಕರಣಗಳು ರಾಶಿ ಬಿದ್ದಿರುವಾಗ ಈ ರಾಜ್ಯದ ಪೊಲೀಸರು ತಮ್ಮ ಅಮೂಲ್ಯ ಸಮಯವನ್ನು ಬಳಸುವುದು ಈ ರೀತಿಯ ಸಿ.ಡಿ.ಗಳ ಪಾತ್ರಧಾರಿಗಳ, ಸೂತ್ರಧಾರಿಗಳ ಅಸಲೀಯತ್ತತೆಯನ್ನು ಪತ್ತೆ ಹಚ್ಚುವುದಕ್ಕೋಸ್ಕರ. ಈ ರಾಜ್ಯದ ವಿರೋಧ ಪಕ್ಷಗಳು ಸರಕಾರದ ವಿರುದ್ಧ ಹೋರಾಟ ನಡೆಸಲು ಆದ್ಯತೆಯ ಮೇಲೆ ಆಯ್ದುಕೊಳ್ಳುವುದು ಇಂತಹ ಸಿ.ಡಿ. ಸುತ್ತ ಎದ್ದಿರುವ ಪ್ರಶ್ನೆಗಳನ್ನು. ಈ ರಾಜ್ಯದಲ್ಲಿ ಸಾಮಾಜಿಕ ಕಾರ್ಯಕರ್ತರು ಕಂಡುಕೊಂಡ ಹೊಸ ಸಮಾಜ ಸೇವೆ ಎಂದರೆ ಅದು ಇಂತಹ ಸಿ.ಡಿ.ಗಳ ಸಂಗ್ರಹ ಮತ್ತು ಪ್ರದರ್ಶನ. ಸಿ.ಡಿ. ಪ್ರಕರಣಗಳಲ್ಲಿ ಸಿಲುಕಿದವರನ್ನು-ಸಿಲುಕಿಸಿದವರನ್ನು ಒಟ್ಟುಸೇರಿಸಿ ಸಂಧಾನ ನಡೆಸುವುದು ಈ ರಾಜ್ಯದ ಕೆಲವು ಸ್ವಾಮೀಜಿಗಳು ಮಾಡುವ ಹೊಸ ಆಧ್ಯಾತ್ಮ ಅನುಷ್ಠಾನ.

ರಾಜಕೀಯ ನಾಟಕ ಯಾವತ್ತಿಗೂ ಅಸಂಗತವೇ. ಆದರೆ ನಾವೀಗ ಕಾಣುತ್ತಿರುವುದು ಅಸಂಗತತೆಯ ಅಪರಾವತಾರವನ್ನು. ಅದನ್ನೂ ದಾಟಿದ ಮನೋವಿಕೃತಿಯಾಟಗಳನ್ನು. ಕೊರೊನಾಕ್ಕೆ ಆದರೂ ಲಸಿಕೆ ಬಂದಿದೆ. ಆದರೆ ಈ ಎಲ್ಲಾ ವಿಕೃತಿಗಳಿಗೆ ಲಸಿಕೆ ಎಲ್ಲಿದೆ?


ಇದನ್ನೂ ಓದಿ: ಸಿಡಿ ಹಗರಣ: SIT ನಿಷ್ಪಕ್ಷಪಾತ ತನಿಖೆ ಅನುಮಾನವೆಂದು ಗೃಹಮಂತ್ರಿಗಳಿಗೆ ಪತ್ರ ಬರೆದ ನಾವೆದ್ದು ನಿಲ್ಲದಿದ್ದರೇ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...