ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಮೃತಪಟ್ಟಿದ್ದರೆ ಅದಕ್ಕೆ ಸರ್ಕಾರವೆ ಹೊಣೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೋಮವಾರ ಹೇಳಿದ್ದಾರೆ. ಚಿಕಿತ್ಸೆ ವೈಫಲ್ಯದಿಂದ ಮೃತಪಟ್ಟಿದ್ದರೆ ಅದು ಉದ್ದೇಶಪೂರ್ವಕ ಅಲ್ಲ. ಉದ್ದೇಶಪೂರ್ವಕವಾಗಿ ಮಾಡಿದ್ದರೆ, ಅದಕ್ಕೆ ಕಾರಣರಾದವರೇ ಹೊಣೆ ಹೊರಬೇಕು ಎಂದು ಅವರು ಹೇಳಿದ್ದಾರೆ.
ಆಮ್ಲಜನಕ ಕೊರತೆಯ ಪರಿಣಾಮ 12 ಕೊರೊನಾ ರೋಗಿಗಳ ಸಹಿತ 24 ಜನರು ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆಮ್ಲಜನಕ ಪೂರೈಕೆಯ ಕೊರತೆಯಿಂದಾಗಿ 12 ರೋಗಿಗಳು ಸಾವನ್ನಪ್ಪಿದ್ದು, ಇತರ ರೋಗಿಗಳು ವಿವಿಧ ಬೇರೆ ಕಾರಣಗಳಿಂದಾಗಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಪ್ರತಿಪಾದಿಸಿದೆ. ‘ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ, ಕೊರೊನಾ ಸೋಂಕಿತರಲ್ಲದ ರೋಗಿಗಳು ಕೂಡಾ ಆಮ್ಲಜನಕದ ಕೊರತೆಯಿಂದಾಗಿ ಮೃತಪಟ್ಟಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ ಆಸ್ಪತ್ರೆಯಲ್ಲಿ ದುರಂತ: ಆಮ್ಲಜನಕ ಕೊರತೆಯಿಂದ 24 ಜನರು ಮೃತ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, “ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಆದ್ಯತೆ ಮೇಲೆ ಮಾಡಬೇಕು. ಇದು ಹೆಲ್ತ್ ಎಮರ್ಜೆನ್ಸಿ, ಕೊರೊನಾ ನಿರ್ವಹಣೆಗೇ ಆಧ್ಯತೆ ಕೊಡಬೇಕು. ಚಾಮರಾಜನಗರ ದುರಂತ ಘೋರ ಅನ್ಯಾಯ. ದುರಂತಕ್ಕೆ ಯಾರೇ ಹೊಣೆಯಾದರೂ ಅವರ ಮೇಲೆ ಕ್ರಮ ಆಗಲೇಬೇಕು. ಬೇರೆ ರಾಜ್ಯಗಳಲ್ಲಿ ನಡೆಯುತ್ತಿದ್ದದ್ದು ನಮ್ಮ ರಾಜ್ಯದಲ್ಲಿ ನಡೆದಿದೆ. ಇದು ದುರ್ದೈವದ ಸಂಗತಿಯಾಗಿದ್ದು, ಕಠಿಣ ಕ್ರಮ ಆದಾಗ ಮಾತ್ರ ಇಂತಹ ಘಟನೆಗಳು ಮರುಕಳಿಸುವುದಿಲ್ಲ” ಎಂದು ಹೇಳಿದ್ದಾರೆ.
“ಘಟನೆ ಕುರಿತು ನಾನು ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಬೇರೆ ಜಿಲ್ಲೆಗಳ ಆಕ್ಸಿಜನ್ ಕೊರತೆ ಬಗ್ಗೆ ಗಮನಕ್ಕೆ ತಂದಿದ್ದೇನೆ. ಜನರು ಜೀವ ಕೈಯಲ್ಲಿ ಹಿಡಿಯಬೇಕಾದ ಸ್ಥಿತಿ ಇದೆ. ಬೇರೆ ರಾಜ್ಯಗಳ ದುರ್ಘಟನೆಗಳು ನಮಗೆ ಪಾಠ ಆಗಬೇಕಿತ್ತು. ಇದು ಕ್ಷಮೆಗೆ ಅರ್ಹವಿಲ್ಲದ ಘಟನೆ. ಸಚಿವರು ತಪ್ಪಿತಸ್ಥರಾಗಿದ್ದರೆ ಸಚಿವರೇ ಹೊಣೆ ಹೊತ್ತುಕೊಳ್ಳಬೇಕು. ಅಧಿಕಾರಿಗಳು ತಪ್ಪಿತಸ್ಥರಾಗಿದ್ದರೆ ಅವರೇ ಹೊಣೆ. ಸರ್ಕಾರದ ಗಮನಕ್ಕೂ ಬಂದು ನಿರ್ಲಕ್ಷ್ಯ ವಹಿಸಿದರೆ ಸರ್ಕಾರವೇ ಹೊಣೆ’’ ಎಂದು ಸಿ.ಟಿ. ರವಿ ತಿಳಿಸಿದ್ದಾರೆ.
“ಹಿಂದೆ ರಾಜಕೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದ ರೀತಿಯಲ್ಲಿ, ಪ್ರಸ್ತುತ ಹೆಲ್ತ್ ಎಮರ್ಜೆನ್ಸಿ ಎಂದು ಸರ್ಕಾರ ಘೋಷಿಸಬೇಕು. ಈ ಮೂಲಕ ಉಳಿದೆಲ್ಲ ಇಲಾಖೆ ಕೆಲಸ ಸ್ಥಗಿತ ಮಾಡಿ, ಆರೋಗ್ಯದ ಸಮಸ್ಯೆಗೆ ಮಾತ್ರ ಒತ್ತು ನೀಡಬೇಕು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಸತೀಶ್ ಆಚಾರ್ಯ ಅವರೇ, ನೀವು ಆನೆಯಂತೆ ನಡೆಯಿರಿ’: ಬಿಜೆಪಿ ಐಟಿ ಸೆಲ್ ದಾಳಿ ವಿರುದ್ದ ಆಕ್ರೋಶ
ನೆಲಮಂಗಲದ 10 ಸಾವಿರ ಬೆಡ್ನ ಕೊರೊನಾ ಆಸ್ಪತ್ರೆಯ ಬಗ್ಗೆ ಮಾತನಾಡಿದ ಅವರು, “10 ಸಾವಿರ ಬೆಡ್ನ ಆಸ್ಪತ್ರೆ ನಿರ್ಮಿಸಿದ್ದು ಹೌದು. ಅದು ಉಪಯೋಗವಾಗದಿದ್ದಾಗ ಅದನ್ನು ಡಿಸ್ಮೆಂಟಲ್ ಮಾಡಿದ್ದೆವು. ಈಗ ಪೂರ್ವಯೋಜಿತವಾಗಿ ಹಂತಹಂತವಾಗಿ ಕೇಸು ಹೆಚ್ಚಾಗಿಲ್ಲ, ಒಂದೇ ಸಲಕ್ಕೆ ಪ್ರಕರಣಗಳು ಹೆಚ್ಚಾದವು. ಹೀಗಾಗಿ ನಿಭಾಯಿಸುವಲ್ಲಿ ಸ್ವಲ್ಪ ಕಷ್ಟ ಆಗಿದೆ” ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮುಖ್ಯಮಂತ್ರಿ ರಾಜೀನಾಮೆ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಿಎಂ ರಾಜೀನಾಮೆಯಿಂದ ಸಮಸ್ಯೆ ಬಗೆಹರಿಯುತ್ತಾ? ಎಂದು ಪ್ರಶ್ನಿಸಿದ್ದಾರೆ. “ಸಮಸ್ಯೆ ಬಗೆಹರಿಯುತ್ತೆ ಎಂದರೆ ಅಧಿಕಾರ ದೊಡ್ಡದಲ್ಲ. ಬೇರೆ ರಾಜ್ಯಗಳಲ್ಲಿ ಯಾರೂ ಸಿಎಂನ ರಾಜೀನಾಮೆ ಕೇಳಿಲ್ಲ. ಆದರೆ ಇಲ್ಲಿ ಕೇಳುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಆರೋಗ್ಯ ಸಚಿವ ಸುಧಾಕರ್ ಮೇಲೆ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದು, “ಸುಧಾಕರ್ ಕೇವಲ ಚಿಕ್ಕಬಳ್ಳಾಪುರಕ್ಕೆ ಮಾತ್ರ ಸಚಿವರಲ್ಲ, ಇಡೀ ರಾಜ್ಯದ ಆರೋಗ್ಯ ಮಂತ್ರಿ. ಅವರು ತಮ್ಮ ಜಿಲ್ಲೆಗೆ ಹಾಸಿಗೆಗಳನ್ನು ರಿಸರ್ವ್ ಮಾಡಿದ್ದು ಸರಿಯಲ್ಲ. ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಿಕೊಳ್ಳಬೇಕು. ಹೀಗೆ ಮಾಡಿದರೆ ಅವರು ಸಂಕುಚಿತ ಮನೋಭಾವದರು ಎನಿಸಿಕೊಳ್ಳುತ್ತಾರೆಯೆ ವಿನಃ, ವಿಶಾಲ ಮನೋಭಾವದ ವ್ಯಕ್ತಿ ಎನಿಸಿಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಸ್ಸಾಂ ಚುನಾವಣೆ: ಜೈಲಿನಲ್ಲಿದ್ದುಕೊಂಡೇ ಜಯಗಳಿಸಿದ ಹೋರಾಟಗಾರ ಅಖಿಲ್ ಗೊಗೊಯ್


