ಸಿಎಎ ಹೋರಾಟದ ಸಮಯದಲ್ಲಿ ದೇಶದ್ರೋಹದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ರೈತ ಹೋರಾಟಗಾರ ಅಖಿಲ್ ಗೊಗೊಯ್ ಅವರು ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಸಿಬ್ಸಾಗರ್ ಕ್ಷೇತ್ರದಲ್ಲಿ ಜಯ ಗಳಿಸಿದ್ದಾರೆ.
ಪ್ರಸ್ತುತ ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ದಾಖಲಾಗಿರುವ 45 ವರ್ಷದ ಅಖಿಲ್ ಗೊಗೊಯ್ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಸುರಭಿ ರಾಜ್ಕೋನ್ವಾರಿ ವಿರುದ್ಧ ಜೈಲಿನಲ್ಲಿದ್ದುಕೊಂಡೇ ಜಯಗಳಿಸಿದ್ದಾರೆ.
ರೈತ ಹಕ್ಕುಗಳ ಹೋರಾಟಗಾರರ ಸಮೂಹವಾದ ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿ (ಕೆಎಂಎಸ್ಎಸ್)ಯಲ್ಲಿ ಅಖಿಲ್ ಗೊಗೋಯ್ ತೊಡಗಿಸಿಕೊಂಡಿದ್ದರು. ಅವರ ಬಂಧನವಾದ ನಂತರ ಜೈಲಿನಲ್ಲಿದ್ದುಕೊಂಡೇ 2020ರ ಅಕ್ಟೋಬರ್ನಲ್ಲಿ ರೈಜೋರ್ ದಳ ಪಕ್ಷವನ್ನು ಸ್ಥಾಪಿಸಿದ್ದರು. ಅವರು ಅದರ ಅಧ್ಯಕ್ಷರಾಗಿದ್ದು, ಮತ್ತೊಬ್ಬ ಹೋರಾಟಗಾರ ಭಾಸ್ಕೊ ಡಿ ಸೈಕಿಯಾ ಅದರ ಕಾರ್ಯಕಾರಿ ಅಧ್ಯಕ್ಷರಾಗಿದ್ದಾರೆ. ಈ ಚುನಾವಣೆಯಲ್ಲಿ ರೈಜೋರ್ ದಳ ಪಕ್ಷವು 17 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು.
2019ರಿಂದ ಅಸ್ಸಾಂನಲ್ಲಿ ನಡೆದ ಸಿಎಎ ಮತ್ತು ಎನ್ಆರ್ಸಿ ವಿರೋಧಿ ಹೋರಾಟದಲ್ಲಿ ಅಖಿಲ್ ಗೊಗೊಯ್ ಮುಂಚೂಣಿಯಲ್ಲಿದ್ದರು. 2019 ರ ಡಿಸೆಂಬರ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಅಖಿಲ್ ಗೊಗೊಯ್ ವಿರುದ್ಧ ಕಠಿಣ ಯುಎಪಿಎ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಂದಿನಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಅಸ್ಸಾಂನಲ್ಲಿ ಬಿಜೆಪಿಯು 76 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೇರಲಿದೆ. ಕಾಂಗ್ರೆಸ್ ಮೈತ್ರಿಕೂಟ 48 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: Election Results 2021 Live Updates: ಚೇತರಿಸಿದ ಅಸ್ಸಾಂ ಕಾಂಗ್ರೆಸ್; BJP ಗೆ ಗೆಲುವಿನಲ್ಲೂ ಹಿನ್ನಡೆ