ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ತಾಯಿ ವಿರುದ್ಧ ಲೋಕಸಭಾ ಸಂಸದ ಎ ರಾಜಾ ನೀಡಿರುವ ಅವಹೇಳನಕಾರಿ ಹೇಳಿಕೆ ತಮಿಳುನಾಡಿನಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಎ.ರಾಜಾ ಹೇಳಿಕೆಯಿಂದ ನೊಂದಿರುವ ಸಿಎಂ ಪಳನಿಸ್ವಾಮಿ ಕಣ್ಣೀರು ಸುರಿಸಿರುವ ಘಟನೆ ನಡೆದಿದೆ.
ಸದ್ಯ ಕೇಂದ್ರ ಅಪರಾಧ ಶಾಖೆ ಪೊಲೀಸರು ಎ.ರಾಜಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎಐಎಡಿಎಂಕೆ ವಕೀಲ ವಿಭಾಗದ ಜಂಟಿ ಕಾರ್ಯದರ್ಶಿ ತಿರುಮಾರನ್ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಚೆನ್ನೈನ ತಿರುವತ್ರಿಯೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾವನಾತ್ಮಕವಾಗಿ ಮಾತನಾಡಿರುವ ಪಳನಿಸ್ವಾಮಿ, ಡಿಎಂಕೆ ಅಧಿಕಾರಕ್ಕೆ ಬಂದರೇ ಮಹಿಳೆಯರ ಸುರಕ್ಷತೆಯ ಬಗ್ಗೆ ಯೋಚಿಸಿ ಎಂದಿದ್ದಾರೆ. ಭಾನುವಾರ ಎಐಎಡಿಎಂಕೆ ಮತ್ತು ಬಿಜೆಪಿ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ರಾಜಾ ಅವರನ್ನು ಚುನಾವಣೆಯ ಪ್ರಚಾರದಿಂದ ತಡೆಯುವಂತೆ ಎಐಎಡಿಎಂಕೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಿತ್ತು.
ಇದನ್ನೂ ಓದಿ: ಪಂಜಾಬ್ ಬಿಜೆಪಿ ಶಾಸಕನ ಮೇಲೆ ಹಲ್ಲೆ ಪ್ರಕರಣ: ನಮ್ಮ ರೈತರು ಭಾಗಿಯಾಗಿಲ್ಲವೆಂದ ರಾಕೇಶ್ ಟಿಕಾಯತ್
“ತಾಯಿಗೆ ಸಮಾಜದಲ್ಲಿ ಉನ್ನತ ಸ್ಥಾನವಿದೆ. ಯಾರೇ ಮಹಿಳೆಯರನ್ನು ಅವಹೇಳನ ಮಾಡಿದರೂ ಅವರನ್ನು ದೇವರು ಶಿಕ್ಷಿಸುತ್ತಾನೆ. ನಾನು ಮುಖ್ಯಮಂತ್ರಿಯಾಗಿದ್ದರೂ, ಅವರು ನನ್ನ ತಾಯಿಯ ಬಗ್ಗೆ ಇಂತಹ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಾರೆ ಎಂದರೆ, ಅವರು ಅಧಿಕಾರಕ್ಕೆ ಬಂದರೆ ಡಿಎಂಕೆ ಆಡಳಿತದಲ್ಲಿ ಸಾಮಾನ್ಯ ಮಹಿಳೆಯರ ಸುರಕ್ಷತೆಯ ಬಗ್ಗೆ ಯೋಚಿಸಿ, ಅವರಿಗೆ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಿ” ಎಂದು ಪಳನಿಸ್ವಾಮಿ ಹೇಳಿದ್ದಾರೆ.
ಎ.ರಾಜಾ ವಿರುದ್ಧ ಐಪಿಸಿಯ ಸೆಕ್ಷನ್ 153 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ) ಮತ್ತು 294 ಬಿ (ಸಾರ್ವಜನಿಕ ಸ್ಥಳದಲ್ಲಿ ಕೆಟ್ಟ ಭಾಷೆ) ಮತ್ತು ಜನರ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 127 (ಚುನಾವಣಾ ಸಭೆಗಳಲ್ಲಿ ಅಡಚಣೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉದಯನಿಧಿ ಸ್ಟಾಲಿನ್ ಸ್ಪರ್ಧಿಸುತ್ತಿರುವ ಚೆಪಾಕ್-ತಿರುವಳ್ಳಿಕೇಣಿಯಲ್ಲಿ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ, ‘ಸ್ಟಾಲಿನ್ ಅವರು ಉತ್ತಮ ಸಂಬಂಧದಿಂದ, ನಾರ್ಮಲ್ ಡೆಲಿವರಿ ಮೂಲಕ ಜನಿಸಿದ್ದಾರೆ. ಆದರೆ, ಪಳನಿಸ್ವಾಮಿ ಜನಿಸಿದ್ದು ಅಕ್ರಮ ಸಂಬಂಧದಿಂದ ಮತ್ತು ಅದು ಅಕಾಲಿಕ ಜನನ’ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದರು.
ರಾಜಾ ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಮತ್ತು ಅವರು ಈ ಹೇಳಿಕೆಗಳನ್ನು ರಾಜಕೀಯ ಸನ್ನಿವೇಶದ ಬಳಕೆ ಮಾಡುತ್ತಿದ್ದಾರೆ. ರಾಜಾ ಅವರ ಹೇಳಿಕೆ ಪಳನಿಸ್ವಾಮಿ ಅವರ ವೈಯಕ್ತಿಕ ಜೀವನದ ಬಗ್ಗೆ ಅಲ್ಲ. ಅದು ರಾಜಕೀಯವಾಗಿ ಹೇಳಿದ್ದು ಎಂದು ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಹೇಳಿದ್ದಾರೆ. ಜೊತೆಗೆ ತಮ್ಮ ಪಕ್ಷದ ಸದಸ್ಯರಿಗೆ ಪ್ರಚಾರದಲ್ಲಿ ಮತ್ತು ಭಾಷಣಗಳಲ್ಲಿ ಗೌರವಯುತವಾಗಿ ಮಾತನಾಡಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಮಹಾನಾಯಕ ಪದ ಬಳಕೆಗೆ ಪ್ರಜ್ಞಾವಂತರ ವಿರೋಧ