Homeಮುಖಪುಟಕೋಮು ದಂಗೆಗಳು ಮತ್ತು ಪರಿಹಾರ ಮಾರ್ಗಗಳು: ಭಗತ್‌‌ ಸಿಂಗ್

ಕೋಮು ದಂಗೆಗಳು ಮತ್ತು ಪರಿಹಾರ ಮಾರ್ಗಗಳು: ಭಗತ್‌‌ ಸಿಂಗ್

- Advertisement -
  • ಮೂಲ: ಭಗತ್‌ ಸಿಂಗ್‌‌
  • ಅನುವಾದ: ನಾ ದಿವಾಕರ
- Advertisement -

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರ ಬ್ರಿಟೀಷ್ ಸರ್ಕಾರವು ಭಾರತದ ಕೋಮುವಾದಿ ವಿಭಜನೆಯ ಪ್ರಕ್ರಿಯೆಯನ್ನು ಚುರುಕುಗೊಳಿಸಿತ್ತು. ಇದರ ಪರಿಣಾಮವನ್ನು ಕೆಲವೇ ವರ್ಷಗಳಲ್ಲಿ ಕೋಹಾತ್ನಲ್ಲಿ ನಡೆದ ಹಿಂದೂ ಮುಸ್ಲಿಂ ಘರ್ಷಣೆಯಲ್ಲಿ ಕಾಣಬಹುದಿತ್ತು. ಈ ಘಟನೆಯ ನಂತರದಲ್ಲಿ, ರಾಷ್ಟ್ರದ ರಾಜಕೀಯ ಪ್ರಜ್ಞೆಯಲ್ಲಿ ಕೋಮು ದಂಗೆಗಳ ಬಗ್ಗೆ ವ್ಯಾಪಕವಾದ ಚರ್ಚೆಯನ್ನು ಕಾಣಬಹುದಾಗಿತ್ತು. ಇಂತಹ ಕೋಮು ಸಂಘರ್ಷಗಳಿಗೆ ಅಂತ್ಯ ಹಾಡಬೇಕು ಎನ್ನುವುದು ಬಹುಪಾಲು ಎಲ್ಲ ಅಭಿಪ್ರಾಯವಾಗಿತ್ತು. ಆದರೆ ಕಾಂಗ್ರೆಸ್ ನೇತೃತ್ವದ ರಾಜಕಾರಣಿಗಳು ಈ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ಹೆಜ್ಜೆ ಎಂದರೆ ಹಿಂದೂ ಮತ್ತು ಮುಸ್ಲಿಂ ನಾಯಕರ ನಡುವೆ ಸೌಹಾರ್ದದ ಒಪ್ಪಂದಗಳನ್ನು ಮಾಡಿಕೊಳ್ಳುವುದು. ಈ ಸಮಸ್ಯೆಗೆ ಒಂದು ನಿರ್ದಿಷ್ಟ ಪರಿಹಾರವನ್ನು ಸೂಚಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಆಂದೋಲನಗಳೂ ಸಹ ತಮ್ಮದೇ ಆದ ಪ್ರಸ್ತಾವನೆಯನ್ನು ಮುಂದಿರಿಸಿದ್ದವು. 1927ರಲ್ಲಿ ‘ಕೀರ್ತಿ’ ಎಂಬ ಪತ್ರಿಕೆಯಲ್ಲಿ ‘ಸಂಗಾತಿ ಭಗತ್ ಸಿಂಗ್’ ಬರೆದ ಈ ಲೇಖನ, 94 ವರ್ಷಗಳ ನಂತರವೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ.


ಭಾರತದ ಇಂದಿನ ಪರಿಸ್ಥಿತಿ ಶೋಚನೀಯವಾಗಿದೆ. ಒಂದು ಮತದ ಅನುಯಾಯಿಗಳು ಮತ್ತೊಂದು ಮತದ ಅನುಯಾಯಿಗಳ ಬದ್ಧ ವೈರಿಗಳಾಗಿಬಿಟ್ಟಿದ್ದಾರೆ. ವಿಭಿನ್ನ ಮತಗಳಿಗೆ ಸೇರಿದ ಜನರ ಗುಂಪುಗಳ ನಡುವೆ ದ್ವೇಷ ಎಷ್ಟು ಹೆಚ್ಚಾಗುತ್ತಿದೆ ಎಂದರೆ, ಒಂದು ಮತಕ್ಕೆ ಸೇರಿದವರಾಗಿರುವುದೇ ಮತ್ತೊಂದು ಮತದ ಜನರ ದ್ವೇಷಕ್ಕೆ ಕಾರಣವಾಗುತ್ತಿದೆ. ಈ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಯಾರಿಗಾದರೂ ಅನುಮಾನಗಳಿದ್ದಲ್ಲಿ ಅಂಥವರು ಇತ್ತೀಚೆಗೆ ನಡೆದ ಲಾಹೋರ್ ಕೋಮು ದಂಗೆಯತ್ತ ನೋಡುವುದು ಒಳಿತು.

Bhagat Singh Is Not the Man the Right Wants You to Think He Is

ಅಲ್ಲಿ ಹೇಗೆ ಮುಸ್ಲಿಮರು ಅಮಾಯಕ ಹಿಂದೂಗಳನ್ನು ಮತ್ತು ಸಿಖ್ಖರನ್ನು ಕೊಂದಿದ್ದಾರೆ, ಹೇಗೆ ಸಿಖ್ಖರೂ ಅಷ್ಟೇ ತೀವ್ರವಾಗಿ ಹತ್ಯೆ ಮಾಡಿದ್ದಾರೆ ಎನ್ನುವುದನ್ನು ಗಮನಿಸಬೇಕು. ಈ ಪರಸ್ಪರ ಹತ್ಯೆಗಳು ನಡೆದಿರುವುದಕ್ಕೆ ಹಂತಕರು ಹತ್ಯೆಗೀಡಾದವ ವ್ಯಕ್ತಿಯಲ್ಲಿ ಯಾವುದೇ ಅಪರಾಧ ಕಂಡಿದ್ದಾರೆ ಎನ್ನುವುದು ಕಾರಣವಲ್ಲ, ಬದಲಾಗಿ ಅವರು ಅನ್ಯ ಮತಕ್ಕೆ, ಹಿಂದೂ-ಮುಸ್ಲಿಂ-ಸಿಖ್ ಮತಕ್ಕೆ ಸೇರಿದವರಾಗಿದ್ದಾರೆ ಎಂಬ ಕಾರಣಕ್ಕಾಗಿದೆ. ಮುಸಲ್ಮಾನರ ದೃಷ್ಟಿಯಲ್ಲಿ ಒಬ್ಬ ವ್ಯಕ್ತಿ ಹಿಂದೂ ಅಥವಾ ಸಿಖ್ ಆಗಿದ್ದರೂ ಸಾಕು ಅಥವಾ ಹಿಂದೂಗಳಿಗೆ ಆ ವ್ಯಕ್ತಿ ಮುಸ್ಲಿಂ ಆಗಿದ್ದರೆ ಸಾಕು ಹತ್ಯೆಗೀಡಾಗುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಗತಿ ಏನಾಗುವುದೋ ಭಗವಂತನೇ ಬಲ್ಲ.

ಇದನ್ನೂ ಓದಿ:ಆ ಮಹಿಳೆಗೆ ಭಗತ್ ಸಿಂಗ್‌ರಂತ ಬ್ರಿಟಿಷರಿಗೆ ಕ್ಷಮೆ ಕೇಳದ ಹುತಾತ್ಮರ ಬಗ್ಗೆ ನೆನಪಿಸಿ; ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ

ಇಂದು ಭಾರತದ ಭವಿಷ್ಯ ಮಸುಕಾಗಿ ಕಾಣುತ್ತಿದೆ. ಈ ಮತಗಳು ಭಾರತವನ್ನು ಶಿಥಿಲಗೊಳಿಸಿವೆ. ಭಾರತ ಎಂದು ಈ ಕೋಮು ದಂಗೆಗಳಿಂದ ಮುಕ್ತವಾಗುವುದೋ ಹೇಳಲಾಗುವುದಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ದಂಗೆಗಳು ಭಾರತವನ್ನು ನಾಚಿ ತಲೆ ತಗ್ಗಿಸುವಂತೆ ಮಾಡಿವೆ. ಮೂಢನಂಬಿಕೆಗಳ ಪ್ರವಾಹದಲ್ಲಿ ಪ್ರತಿಯೊಬ್ಬರೂ ಕೊಚ್ಚಿಹೋಗುತ್ತಿರುವುದನ್ನು ನೋಡುತ್ತಿರುವಿರಿ.

ಈ ದಂಗೆಗಳ ಸಂದರ್ಭದಲ್ಲಿ ತಮ್ಮ ಸಂಯಮವನ್ನು ಕಾಪಾಡಿಕೊಳ್ಳುವ ಹಿಂದೂ, ಮುಸ್ಲಿಂ, ಸಿಖ್ ವ್ಯಕ್ತಿಯನ್ನು ಕಾಣುವುದೇ ಅಪರೂಪ ಎನ್ನಬಹುದು. ಉಳಿದವರು ಕಬ್ಬಿಣದ ಸಲಾಕೆಗಳನ್ನು ಹಿಡಿದು, ದಂಡಗಳನ್ನು ಹಿಡಿದು, ಖಡ್ಗ, ಚಾಕುಗಳನ್ನು ಹಿಡಿದು ತಮ್ಮ ಪ್ರಾಬಲ್ಯವನ್ನು ಸಾಧಿಸಲು ಮುಂದಾಗಿರುತ್ತಾರೆ. ಈ ಪ್ರಕ್ರಿಯೆಯಲ್ಲೇ ತಮ್ಮ ಪಾರಮ್ಯ ಸಾಧಿಸಲು ಪರಸ್ಪರ ಹತ್ಯೆಯಲ್ಲಿ ತೊಡಗುತ್ತಾರೆ. ಕೆಲವರು ನೇಣುಗಂಬ ಏರುತ್ತಾರೆ ಇನ್ನು ಕೆಲವರು ಸೆರೆವಾಸ ಅನುಭವಿಸುತ್ತಾರೆ. ಈ ರಕ್ತಪಾತವೆಲ್ಲವೂ ಮುಗಿದ ನಂತರ ಬ್ರಿಟೀಷ್ ಸರ್ಕಾರ ಈ ಧರ್ಮ ರಕ್ಷಕರನ್ನೇ ಬಳಸಿಕೊಳ್ಳಲಾರಂಭಿಸುತ್ತದೆ. ಆಗ ಇವರ ಮಾನಸಿಕ ರೋಗ ವಾಸಿಯಾಗುತ್ತದೆ.

ಈ ದಿನಗಳಲ್ಲಿ, ಕೋಮುವಾದಿ ನಾಯಕರು ಮತ್ತು ಕೆಲವು ಪತ್ರಿಕೆಗಳೂ ಸಹ ಈ ರೀತಿಯ ದಂಗೆಗಳಿಗೆ ಪ್ರಚೋದನೆ ನೀಡುವುದನ್ನು ಗಮನಿಸಬಹುದು. ಕೋಮು ದ್ವೇಷ ಉಲ್ಬಣಿಸುತ್ತಿರುವ ಈ ಸಂದರ್ಭದಲ್ಲಿ ಭಾರತದ ನೇತಾರರು ಮೌನ ವಹಿಸಲು ನಿರ್ಧರಿಸಿದ್ದಾರೆ. ದೇಶಕ್ಕೆ ವಸಾಹತು ದಾಸ್ಯದಿಂದ ವಿಮೋಚನೆ ಪಡೆಯಲು ಮುಂಚೂಣಿಯಲ್ಲಿ ನಿಂತು ಹೋರಾಡಲು ಸಜ್ಜಾಗಿರುವ ನಾಯಕರೂ ಇವರೇ ಆಗಿದ್ದಾರೆ. ಹಾಗೆಯೇ ಸಮಾನ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ನೇತಾರರೂ ಇವರೇ ಆಗಿದ್ದಾರೆ. ಸ್ವರಾಜ್ ಆಗ್ರಹದೊಂದಿಗೆ ಹೋರಾಟಕ್ಕೆ ಧುಮುಕಿರುವ ಈ ನಾಯಕರೇ ಈಗ ನಾಚಿಕೆಯಿಂದ ತಲೆ ತಗ್ಗಿಸಿ ಮೌನಕ್ಕೆ ಶರಣಾಗಿದ್ದಾರೆ. ಈ ಧಾರ್ಮಿಕ ಮತಾಂಧತೆಯಿಂದ ಕೆಲವು ನಾಯಕರು ಅಪಾರ ನೋವು ಅನುಭವಿಸಿದ್ದಾರೆ.

Bhagat Singh, Sukhdev and Rajguru: The revolutionary legends of Indian  freedom struggle - NewsBharati

ಇನ್ನು ಕೆಲವು ನಾಯಕರು ಈ ಸಂದಿಗ್ಧ ಸಮಯದಲ್ಲಿ ತಲೆಮರೆಸಿಕೊಂಡಿದ್ದಾರೆ. ಇನ್ನು ನೀವು ಮುಕ್ತವಾಗಿ ಕೋಮುವಾದವನ್ನೇ ಪ್ರಚೋದಿಸುವ ನಾಯಕರನ್ನೂ ಕಾಣಬಹುದು. ಪ್ರತಿಯೊಬ್ಬರ ಬಗ್ಗೆಯೂ ಯೋಚಿಸಿ ಪ್ರಾಮಾಣಿಕವಾಗಿ ಚಿಂತೆ ಮಾಡುವ ಕೆಲವೇ ನಾಯಕರನ್ನು ನೀವು ಕಾಣಬಹುದಷ್ಟೆ. ಈ ಪ್ರಾಮಾಣಿಕ ನಾಯಕರೂ ಸಹ ಕೋಮುವಾದಿ ಭಾವನೆಗಳು ಹರಡುತ್ತಿರುವುದನ್ನು ತಡೆಗಟ್ಟಲಾಗುತ್ತಿಲ್ಲ. ಬಹುಶಃ ಭಾರತದ ನಾಯಕತ್ವವೇ ದೀವಾಳಿಯಾಗುತ್ತಿದೆ!

ಇದನ್ನೂ ಓದಿ:ಬಹುಜನ ಭಾರತ; ಭಗತ್ ಸಿಂಗ್ ಎಂಬ ಬೆಳಕಿಗೆ ಬೆನ್ನು ಮಾಡಿರುವ ಸಮಾಜ

ಕೋಮು ಗಲಭೆಯನ್ನು ಪ್ರಚೋದಿಸಿ, ಹಿಂಸೆಯ ಕಿಡಿಯನ್ನು ಹೊತ್ತಿಸುವ ಮತ್ತೊಂದು ಸಾಧನ ಎಂದರೆ ದಿನಪತ್ರಿಕೆಗಳಲ್ಲಿ ಬರೆಯುವವರು. ಒಂದು ಕಾಲದಲ್ಲಿ ಪತ್ರಿಕೋದ್ಯೋಗ ಎಂದರೆ ಗೌರವಯುತ ಸ್ಥಾನ ಹೊಂದಿತ್ತು ಆದರೆ ಇಂದು ಇದು ಕೊಳೆತುಹೋಗಿದೆ. ಈ ಜನರು ಅನ್ಯ ಸಮುದಾಯಗಳ ವಿರುದ್ಧ ದಪ್ಪ ಅಕ್ಷರಗಳ ಶೀರ್ಷಿಕೆಯುಳ್ಳ ಲೇಖನಗಳನ್ನು ಬರೆಯುವ ಮೂಲಕ ಸಮುದಾಯಗಳ ನಡುವೆ ಶಾಶ್ವತವಾದ ದ್ವೇಷ ಮತ್ತು ಶತ್ರುತ್ವವನ್ನು ಪ್ರಚೋದಿಸುತ್ತಾರೆ. ಇದು ಬೀಸು ಆರೋಪವಲ್ಲ. ಇಂತಹ ಹಲವು ಉದಾಹರಣೆಗಳನ್ನು ಕಾಣಬಹುದು. ಈ ಸುದ್ದಿಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳಿಂದ ಪ್ರಚೋದನೆ ಪಡೆದೇ ಹಲವು ಕೋಮು ಗಲಭೆಗಳಾಗಿರುವುದನ್ನೂ ಗಮನಿಸಬಹುದು. ಈ ಪ್ರಕ್ಷುಬ್ಧ ಸಂದರ್ಭದಲ್ಲಿ ಸಮಚಿತ್ತದೊಂದಿಗೆ ಸಮತೋಲಿತ ವರದಿಯನ್ನು ಮಾಡುತ್ತೇವೆ ಎಂದು ಎದೆತಟ್ಟಿಕೊಳ್ಳಬಹುದಾದ ಕೆಲವೇ ಪತ್ರಿಕೋದ್ಯೋಗಿಗಳನ್ನು ಕಾಣಲು ಸಾಧ್ಯ.

ಸುದ್ದಿ ಪತ್ರಿಕೆಗಳ ಮುಖ್ಯ ಉದ್ದೇಶ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಅವರ ಮನಸುಗಳನ್ನು ಸ್ವಚ್ಚಗೊಳಿಸುವುದು. ಜನರಲ್ಲಿರಬಹುದಾದ ಸಂಕುಚಿತ ಪಂಥೀಯ, ಪ್ರತ್ಯೇಕತಾ ಭಾವನೆಗಳನ್ನು ಹೋಗಲಾಡಿಸಿ ಅವರಲ್ಲಿ ಕೋಮು ಸೌಹಾರ್ದತೆ, ಸಮನ್ವಯತೆ ಮತ್ತು ಭ್ರಾತೃತ್ವದ ಭಾವನೆಗಳನ್ನು ಬಿತ್ತುವುದು ಪತ್ರಿಕೆಗಳ ಉದ್ದೇಶವಾಗಿರಬೇಕು. ತನ್ಮೂಲಕ ಜನಸಾಮಾನ್ಯರ ನಡುವೆ ಇರುವ ಅಪನಂಬಿಕೆಗಳನ್ನು ಹೋಗಲಾಡಿಸಿ ಪರಸ್ಪರ ವಿಶ್ವಾಸ ಮೂಡಿಸುವಂತಾಗಬೇಕು. ಹಾಗಾದಲ್ಲಿ ಮಾತ್ರವೇ ಸಮಾನ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಸಾಕಾರಗೊಳಿಸಲು ನಾವು ಮುನ್ನಡೆಯಲು ಸಾಧ್ಯ. ಆದರೆ ಇವರು ಇದಕ್ಕೆ ತದ್ವಿರುದ್ಧವಾಗಿಯೇ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಸಮಾನ ರಾಷ್ಟ್ರೀಯತೆಯ ಉದ್ದೇಶದಲ್ಲೇ ವಿಭಜನೆಯನ್ನು ಕಾಣುತ್ತಿದ್ದೇವೆ. ಈ ಕಾರಣಕ್ಕಾಗಿಯೇ ನನಗೆ ಪ್ರಸ್ತುತ ಭಾರತವನ್ನು ನೆನೆಯುವಾಗಲೆಲ್ಲಾ ಕಣ್ಣಲ್ಲಿ ರಕ್ತ ಬರುತ್ತದೆ. “ಈ ನನ್ನ ಭಾರತಕ್ಕೆ ಏನಾಗುತ್ತದೆ” ಎಂಬ ಆತಂಕ ಮೂಡುತ್ತದೆ.

Behind Bhagat Singh chants at farmers' protest, a century-old Left  tradition in Punjab

ಅಸಹಕಾರ ಚಳುವಳಿಯ ಸಂದರ್ಭದಲ್ಲಿ, ದುರಾಸೆ ಮತ್ತು ಅಸೂಯೆಯನ್ನು ಹೊಂದಿದ್ದ ಜನರೂ ಸಹ ಬದಲಾಗಿ ಸರಳ ಸಜ್ಜನರಾಗಿ ರೂಪುಗೊಂಡಿದ್ದರು. ಸ್ವಾತಂತ್ರ್ಯ ನಮ್ಮ ಕಣ್ಣೆದುರಿನಲ್ಲೇ ಇದೆ ಎಂಬ ಕನಸು ಕಂಡಿದ್ದ ಆ ದಿನಗಳು ಈಗೆಲ್ಲಿದೆ? ಈ ಸಂದರ್ಭವನ್ನು ನೋಡಿ, ಸ್ವಾತಂತ್ರ್ಯ ಎನ್ನುವುದೇ ಒಂದು ಮರೀಚಿಕೆಯಂತೆ ಕಾಣುತ್ತಿದೆ! ಕೋಮು ದಂಗೆಗಳನ್ನು ಸೃಷ್ಟಿಸಿದವರಿಗೆ ಇದು ಮೂರನೆಯ ಮತ್ತು ಕೊನೆಯ ಲಾಭವಾಗಿದೆ. ಅಸಹಕಾರ ಚಳುವಳಿಯ ದಿನಗಳಲ್ಲಿ ತನ್ನ ಸ್ಥಾನವೇ ಇಲ್ಲವಾಗುತ್ತದೆ ಎಂಬ ಭೀತಿಯಲ್ಲಿದ್ದ ಅಧಿಕಾರಶಾಹಿಗಳು ಇಂದು ಆಳವಾಗಿ ಬೇರೂರಿದ್ದು, ಇಂದಿನ ಪರಿಸ್ಥಿತಿಯಲ್ಲಿ ಅಲುಗಾಡಿಸದಂತಾಗಿದೆ.

ಇದನ್ನೂ ಓದಿ:ಪಗಡಿ ಸಂಭಲ್ ದಿನ: ಸಿಂಘು ಗಡಿಗೆ ಹುತಾತ್ಮ ಭಗತ್ ಸಿಂಗ್ ಸಂಬಂಧಿಕರ ಭೇಟಿ, ರೈತ ಹೋರಾಟಕ್ಕೆ ಬೆಂಬಲ

ಕೋಮು ಹಿಂಸೆ ಮತ್ತು ದಂಗೆಗಳಿಗೆ ಆರ್ಥಿಕ ಕಾರಣಗಳೇ ಮೂಲ. ಅಸಹಕಾರ ಚಳುವಳಿಯ ಸಂದರ್ಭದಲ್ಲಿ ನಾಯಕರು ಮತ್ತು ಪತ್ರಿಕಾ ವರದಿಗಾರರು ಅನೇಕ ರೀತಿಯ ತ್ಯಾಗ ಮಾಡುವ ಮೂಲಕ ಚಳವಳಿಗೆ ಜೀವ ತುಂಬಿದ್ದರು. ಈ ತ್ಯಾಗ ಬಲಿದಾನಗಳ ಫಲವೇ ಅವರ ಆರ್ಥಿಕ ಸ್ಥಿತಿಗತಿಯೂ ಸಾಕಷ್ಟು ಶಿಥಿಲವಾಯಿತು. ಅಸಹಕಾರ ಚಳುವಳಿ ತನ್ನ ಕಾವು ಕಳೆದುಕೊಂಡ ನಂತರ ಜನರು ತಮ್ಮ ನಾಯಕರ ಮೇಲೆ ವಿಶ್ವಾಸ ಕಳೆದುಕೊಂಡರು. ಏಕೆಂದರೆ ಇಂದು ಕಾಣುತ್ತಿರುವ ಅನೇಕ ಕೋಮುವಾದಿ ನಾಯಕರು ಅರ್ಥಿಕವಾಗಿ ದಿವಾಳಿಯಾಗಿದ್ದರು.

ಜಗತ್ತಿನಲ್ಲಿ ಏನೇ ಸಂಭವಿಸಿದರೂ, ಅದರ ಹಿಂದೆ ಹಣವೇ ಪ್ರಧಾನ ಕಾರಣ ಎನ್ನುವುದನ್ನು ಸುಲಭವಾಗಿ ಗುರುತಿಸಬಹುದು. ಇದು ಮಾರ್ಕ್ಸ್‌ವಾದಿ ತತ್ವಗಳ ಮೂರು ಪ್ರಮುಖ ಅಂಶಗಳಲ್ಲೊಂದು. ತಬ್ಲೀಘಿ ಮತ್ತು ಶುದ್ಧಿ ಸಂಘಟನೆಗಳು ಉಗಮಿಸಿದ್ದನ್ನು ಮಾರ್ಕ್ಸ್‌‌ ಈ ತತ್ವದ ನೆಲೆಯಲ್ಲಿ ನೋಡಬಹುದು. ಈ ಅಂಶವೇ ನಮ್ಮನ್ನು ಇಂತಹ ದುಸ್ಥಿತಿಗೆ ನೂಕಿದೆ.

ಆದ್ದರಿಂದ, ಕೋಮು ದಂಗೆಗಳಿಗೆ ಯಾವುದಾದರೂ ಪರಿಹಾರ ಮಾರ್ಗಗಳು ಇದ್ದಲ್ಲಿ, ಅದು ಭಾರತದಲ್ಲಿ ಜನಸಾಮಾನ್ಯರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದೇ ಆಗಿದೆ. ವಾಸ್ತವವಾಗಿ, ಭಾರತದ ಸಾಮಾನ್ಯ ಪ್ರಜೆಯ ಆರ್ಥಿಕ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆಯೆಂದರೆ, ಯಾವುದೇ ವ್ಯಕ್ತಿ ಮತ್ತೊಬ್ಬರಿಗೆ ನಾಲ್ಕಾಣೆ ಕಾಸು ನೀಡುವ ಮೂಲಕ ಮತ್ತೊಬ್ಬನ ಮೇಲೆ ಹಲ್ಲೆ ನಡೆಸಲು ಪ್ರಚೋದಿಸಬಹುದು. ಹಸಿವು ಮತ್ತು ಸಂಕಷ್ಟಗಳೊಡನೆ ಸಂಘರ್ಷ ನಡೆಸುತ್ತಿರುವ ಜನಗಳಿಗೆ, ಮಾಡು ಇಲ್ಲವೇ ಮಡಿ ಆಯ್ಕೆಯನ್ನು ಮುಂದಿಟ್ಟಾಗ, ಸಹಜವಾಗಿಯೇ ಜನರು ತಮ್ಮ ತತ್ವಾದರ್ಶಗಳನ್ನು ಬದಿಗಿಡುತ್ತಾರೆ ಅಲ್ಲವೇ?

☭ avin⚓ ☭ on Twitter: "What a sight ! Two revolutionaries meeting each  other. A protesting farmer is reading about legendary Bhagat Singh! Photo  courtesy- Kirandip Singh https://t.co/qVkL8gt7N7" / Twitter

ಇಂದಿನ ಪರಿಸ್ಥಿತಿಯಲ್ಲಿ ಜನರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವುದು ಅಸಾಧ್ಯದ ಮಾತು. ಏಕೆಂದರೆ ನಮ್ಮಲ್ಲಿ ವಿದೇಶದ ಸರ್ಕಾರವಿದೆ. ಈ ಸರ್ಕಾರಕ್ಕೆ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವುದರಲ್ಲಿ ಯಾವುದೇ ಆಸಕ್ತಿ ಇರುವುದಿಲ್ಲ. ಈ ಕಾರಣಕ್ಕಾಗಿಯೇ ಜನರು ವಿದೇಶಿ ಸರ್ಕಾರದ ವಿರುದ್ಧ, ಆ ಸರ್ಕಾರ ತೊಲಗುವವರೆಗೂ ಹೋರಾಡಲು ಸಜ್ಜಾಗಬೇಕಿದೆ.

ಇದನ್ನೂ ಓದಿ:ಫ್ಯಾಕ್ಟ್‌ಚೆಕ್: ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಿದ್ದು ಫೆಬ್ರವರಿ 14 ಪ್ರೇಮಿಗಳ ದಿನದಂದು ಅಲ್ಲ

ಜನರು ಪರಸ್ಪರ ಕಚ್ಚಾಡುವುದನ್ನು ತಪ್ಪಿಸಲು, ಇಂದು ವರ್ಗ ಪ್ರಜ್ಞೆ ಬೆಳೆಸುವುದು ಅತ್ಯವಶ್ಯವಾಗಿದೆ. ಬಡ ಕಾರ್ಮಿಕರು ಮತ್ತು ರೈತರಿಗೆ ಅವರ ನಿಜವಾದ ಶತ್ರುಗಳು ಬಂಡವಾಳಶಾಹಿಗಳೇ ಎಂದು ಮನವರಿಕೆ ಮಾಡಬೇಕಿದೆ. ಅವರ ತಂತ್ರಗಾರಿಕೆಗಳ ಬಗ್ಗೆ ಎಚ್ಚರಿಕೆಯಿಂದಿದ್ದು, ಅಂಧರಂತೆ ಅವರನ್ನು ಹಿಂಬಾಲಿಸದಂತೆ ಜಾಗೃತಿ ಮೂಡಿಸಬೇಕಿದೆ. ಜನಾಂಗ, ವರ್ಣ, ಮತ, ಧರ್ಮ ಮತ್ತು ದೇಶ ಯಾವುದೇ ಇರಲಿ ಜಗತ್ತಿನ ಬಡಜನತೆಯ ಹಕ್ಕುಗಳು ಒಂದೇ ಆಗಿರುತ್ತವೆ. ಹಾಗಾಗಿ ವರ್ಣ, ಕುಲ, ಜನಾಂಗ, ಮತ, ಧರ್ಮ, ಪ್ರಾಂತೀಯತೆಗಳನ್ನಾಧರಿಸಿದ ಎಲ್ಲ ರೀತಿಯ ತಾರತಮ್ಯಗಳನ್ನೂ ಹೋಗಲಾಡಿಸಬೇಕಿದೆ. ತನ್ಮೂಲಕ ಐಕ್ಯತೆಯನ್ನು ಸಾಧಿಸಿ ಬಡ ಜನರು ಸರ್ಕಾರದ ಅಧಿಕಾರವನ್ನು ತಾವೇ ವಹಿಸಿಕೊಳ್ಳಬೇಕಿದೆ. ಈ ಪ್ರಯತ್ನ ಮಾಡುವ ಮೂಲಕ ನೀವು ಏನನ್ನೂ ಕಳೆದುಕೊಳ್ಳುವುದಿಲ್ಲ. ಆದರೆ ಮುಂದೊಂದು ದಿನ ಸಂಕೋಲೆಗಳಿಂದ ಮುಕ್ತರಾಗಿ ಆರ್ಥಿಕ ದಬ್ಬಾಳಿಕೆಯಿಂದ ವಿಮೋಚನೆ ಪಡೆಯುತ್ತೀರಿ.

ರಷ್ಯಾದ ಚರಿತ್ರೆಯನ್ನು ಬಲ್ಲವರು ನಿಮಗೆ ಇದನ್ನು ಹೇಳಿರಬಹುದು. ತ್ಸಾರ್ ದೊರೆಯ ಅಧಿಕಾರಾವಧಿಯಲ್ಲಿಯೂ ಸಹ ಜನಸಮುದಾಯಗಳು ಪರಸ್ಪರ ಸುಳ್ಳುಗಳನ್ನು ಹರಡುತ್ತಾ ದ್ವೇಷ ಸಾಧಿಸುತ್ತಿದ್ದವು. ರಷ್ಯಾದಲ್ಲಿ ಬೋಲ್ಷೆವಿಕರು ಅಧಿಕಾರಕ್ಕೆ ಬಂದ ಮೇಲೆ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಆಗಿನಿಂದಲೂ ರಷ್ಯಾದಲ್ಲಿ ಯಾವುದೇ ದಂಗೆಗಳ ಸುದ್ದಿ ಕೇಳಿಬರುತ್ತಿಲ್ಲ. ರಷ್ಯಾದಲ್ಲಿ ಈಗ ಪ್ರತಿಯೊಬ್ಬರನ್ನೂ ಮನುಷ್ಯನನ್ನಾಗಿ ಕಾಣಲಾಗುತ್ತದೆ. ಯಾವುದೇ ಧಾರ್ಮಿಕ ಅಸ್ಮಿತೆಗಳನ್ನು ಹೊಂದಿರುವುದಿಲ್ಲ. ತ್ಸಾರ್ ದೊರೆಯ ಅಧಿಕಾರಾವಧಿಯಲ್ಲಿ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ಅಧೋಗತಿಗಿಳಿದಿತ್ತು. ಈ ಕಾರಣದಿಂದಲೇ ಅನೇಕ ದಂಗೆಗಳು ನಡೆಯುತ್ತಿದ್ದವು. ಕೋಮು ಗಲಭೆಗಳು ನಡೆಯುತ್ತಿದ್ದವು. ಆದರೆ ಇಂದು ರಷ್ಯನ್ನರ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದು, ಆರ್ಥಿಕ ವರ್ಗಗಳ ಬಗ್ಗೆ ಜನರಲ್ಲಿ ಜಾಗೃತಿಯೂ ಮೂಡಿದೆ. ಈ ಬದಲಾವಣೆ ಆದ ದಿನದಿಂದ ರಷ್ಯಾದಲ್ಲಿ ಕೋಮು ಗಲಭೆಯಾಗಲೀ, ದಂಗೆಗಳಾಗಲೀ ಸಂಭವಿಸಿದ ವರದಿಯಾಗಿಲ್ಲ.

Farmers call Karnal lathicharge “Death of democracy!” | SabrangIndia

ಸಾಮಾನ್ಯವಾಗಿ, ದಂಗೆಗಳು ತೀವ್ರವಾದ ಶೋಚನೀಯ ಸುದ್ದಿಗಳನ್ನು ಉಂಟುಮಾಡುತ್ತವೆ. ಆದರೆ ಕಲ್ಕತ್ತಾದಲ್ಲಿ ನಡೆದ ಒಂದು ಗಲಭೆಯ ಸಂದರ್ಭದಲ್ಲಿ ಮನಸಿಗೆ ಮುದ ನೀಡುವಂತಹ ವರದಿಯೊಂದಿತ್ತು. ಈ ಗಲಭೆಗಳಲ್ಲಿ ಒಂದು ಕಾರ್ಮಿಕ ಸಂಘಟನೆಗೆ ಸೇರಿದ ಕಾರ್ಮಿಕರು ಪಾಲ್ಗೊಳ್ಳಲಿಲ್ಲ. ಕೋಮು ಸಂಘರ್ಷದಲ್ಲೂ ಈ ಕಾರ್ಮಿಕರು ಪಾಲ್ಗೊಳ್ಳಲಿಲ್ಲ. ಬದಲಾಗಿ ಹಿಂದೂಗಳು ಮತ್ತು ಮುಸ್ಲಿಮರು ಕಾರ್ಖಾನೆಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಮೂಲಕ ಅಸಾಧಾರಣ ಸೋದರತ್ವ, ಸಮನ್ವಯ ತೋರಿದ್ದರು. ಪರಿಸ್ಥಿತಿಯನ್ನು ತಿಳಿಗೊಳಿಸುವುದರಲ್ಲೂ ಸಕ್ರಿಯವಾಗಿ ತೊಡಗಿದ್ದರು. ಇದು ಸಾಧ್ಯವಾಗಿದ್ದು ಏಕೆಂದರೆ ಈ ಕಾರ್ಮಿಕರಲ್ಲಿ ವರ್ಗ ಪ್ರಜ್ಞೆ ಜಾಗೃತವಾಗಿತ್ತು ಮತ್ತು ಒಂದು ಸಮೂಹವಾಗಿ ತಮ್ಮ ಹಿತಾಸಕ್ತಿಯನ್ನು ಇವರು ಅರಿತವರಾಗಿದ್ದರು. ವರ್ಗ ಪ್ರಜ್ಞೆಯ ಈ ಸುಂದರ ನಿದರ್ಶನವನ್ನೇ ಅನುಸರಿಸುವುದಾದರೆ ಕೋಮು ಹಿಂಸೆಯನ್ನು ನಾವು ತಡೆಗಟ್ಟಬಹುದು.

ಇದನ್ನೂ ಓದಿ:ಭಗತ್ ಸಿಂಗ್‌ ಮತ್ತು ಆತನ ಸಂಗಾತಿಗಳ ಚಿಂತನೆಗಳ ನೆನಪು

ಇಂದು ಭಾರತದ ಅಸಂಖ್ಯಾತ ಯುವ ಜನತೆ ಕೋಮು ಹಿಂಸೆ ಮತ್ತು ದ್ವೇಷವನ್ನು ಬೋಧಿಸುವಂತಹ ಮತಗಳಿಂದ ದೂರ ಸರಿಯುತ್ತಿದ್ದಾರೆ ಎಂಬ ಸಂತೋಷದಾಯಕ ವಿಚಾರ ಕೇಳಿಬರುತ್ತಿದೆ. ಅವರ ದೃಷ್ಟಿಕೋನಗಳು ಎಷ್ಟು ವಿಶಾಲವಾಗಿದೆ ಎಂದರೆ ಅವರು ಜನರನ್ನು ಹಿಂದೂ, ಮುಸ್ಲಿಂ ಅಥವಾ ಸಿಖ್ ಎಂದು ಗುರುತಿಸುವುದಿಲ್ಲ. ಮನುಷ್ಯರಾಗಿ ಕಾಣುತ್ತಾರೆ, ಭಾರತೀಯರನ್ನಾಗಿ ಕಾಣುತ್ತಾರೆ. ಭಾರತದ ಯುವ ಜನತೆಯಲ್ಲಿ ಈ ಆಲೋಚನೆಗಳು, ಚಿಂತನೆಗಳು ಜಾಗೃತವಾಗುತ್ತಿರುವುದರಿಂದ, ನನಗೆ ಭಾರತದ ಭವಿಷ್ಯ ಉಜ್ವಲವಾಗಿ ಕಾಣುತ್ತಿದೆ. ಈ ಕೋಮು ಗಲಭೆಗಳ ಸುದ್ದಿಗಳಿಂದ ಭಾರತೀಯರು ವಿಚಲಿತರಾಗಬಾರದು ಆದರೆ ಯಾವುದೇ ಸಂದರ್ಭದಲ್ಲಾದರೂ ಇಂತಹ ದಂಗೆಗಳಿಗೆ ಅವಕಾಶ ಉಂಟುಮಾಡುವಂತಹ ಕೋಮುವಾದಿ ವಾತಾವರಣವನ್ನು ಸೃಷ್ಟಿಸಲು ಇವರು ನೆರವಾಗಕೂಡದು.

1914-15ರ ಸಂದರ್ಭದ ಹುತಾತ್ಮರು ಧರ್ಮ ಮತ್ತು ರಾಜಕಾರಣವನ್ನು ಪ್ರತ್ಯೇಕವಾಗಿಯೇ ಕಂಡಿದ್ದರು. ಮತ ಅಥವಾ ಧರ್ಮ ಎನ್ನುವುದು ವ್ಯಕ್ತಿಯ ಖಾಸಗಿ ವಿಚಾರ ಎನ್ನುವುದನ್ನು ಅರಿತಿದ್ದ ಅವರು ಮತ್ತೊಬ್ಬರ ವ್ಯವಹಾರದಲ್ಲಿ ಇದು ಹಸ್ತಕ್ಷೇಪ ಮಾಡಕೂಡದು ಎಂಬುದನ್ನು ಅರಿತಿದ್ದರು. ಅವರೆಲ್ಲರೂ ಕೂಡಾ ಮತ ಅಥವಾ ಧರ್ಮ ರಾಜಕೀಯವನ್ನು ಪ್ರವೇಶಿಸಕೂಡದು ಎಂದು ನಂಬಿದವರಾಗಿದ್ದರು. ಏಕೆಂದರೆ ಇದರಿಂದ ಜನರು ಸಮಾನ ಧ್ಯೇಯಕ್ಕಾಗಿ ಹೋರಾಡಲು ತೊಡಕುಂಟಾಗುತ್ತದೆ. ಈ ಕಾರಣಕ್ಕಾಗಿಯೇ ಗದರ್ ಪಕ್ಷ ಕ್ರಾಂತಿಯ ಕರೆ ನೀಡಿದ ಸಂದರ್ಭದಲ್ಲಿ ಜನರು ಐಕ್ಯತೆಯೊಂದಿಗಿದ್ದರು. ಇಲ್ಲಿ ಸಿಖ್ಖರು, ಹಿಂದೂಗಳು ಮತ್ತು ಮುಸ್ಲಿಮರು ಕ್ರಾಂತಿಯ ಹರಿಕಾರರಾಗಿ ನೇಣುಗಂಬ ಏರಿದ್ದರು.

Bhagat Singh Biography: Remembering Shaheed-e-Azam on his 114th birth  anniversary

ಇಂದು ಸ್ವಾತಂತ್ರ್ಯ ಸಂಗ್ರಾಮವನ್ನು ಹೊಸದಾಗಿ ಪ್ರವೇಶಿಸಿರುವ ರಾಜಕೀಯ ನಾಯಕರೂ ಸಹ ರಾಜಕೀಯವನ್ನು ಮತ ಮತ್ತು ಧರ್ಮದಿಂದ ಪ್ರತ್ಯೇಕವಾಗಿರಿಸಲು ಯೋಚಿಸುತ್ತಿದ್ದಾರೆ. ಇದು ಕೋಮು ಹಿಂಸೆ ಎಂಬ ವ್ಯಾಧಿಗೆ ಒಂದು ಪರಿಣಾಮಕಾರಿ ಮದ್ದು. ನಮ್ಮಲ್ಲಿ ವಿಭಿನ್ನವಾದ ಧಾರ್ಮಿಕ ನಂಬಿಕೆಗಳು ಇದ್ದರೂ, ನಾವು ರಾಜಕೀಯದಿಂದ ಧರ್ಮವನ್ನು ಪ್ರತ್ಯೇಕಿಸಿದರೆ, ರಾಜಕಾರಣ ಮತ್ತು ರಾಷ್ಟ್ರದ ಹಿತಾಸಕ್ತಿಗಾಗಿ ನಾವು ಒಗ್ಗಟ್ಟಿನಿಂದ ಹೋರಾಡಲು ಸಾಧ್ಯ.

ಭಾರತದ ಬಗ್ಗೆ ನೈಜ ಅನುಕಂಪ ಇರುವ ಎಲ್ಲರೂ ಸಹ ನಾವು ಸೂಚಿಸಿರುವ ಪರಿಹಾರ ಮಾರ್ಗಗಳ ಬಗ್ಗೆ ಆಲೋಚನೆ ಮಾಡಿ, ಭಾರತ ತನ್ನಿಂದ ತಾನೇ ಧ್ವಂಸವಾಗುವುದರಿಂದ ತಪ್ಪಿಸಲು ನೆರವಾಗುತ್ತಾರೆ ಎಂದು ಆಶಿಸೋಣ.

ಇದನ್ನೂ ಓದಿ:ಅಜಾತಶತ್ರು? ಆಹಾ ಗೆಳೆಯನೇ ಇದು ಅತ್ಯಂತ ಕೆಟ್ಟ ಬಿರುದು!- ‘ಭಗತ್‌ ಸಿಂಗ್ ಜೈಲ್ ಡೈರಿ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...