ಮಧ್ಯಪ್ರದೇಶದ ರಾಜ್ನಗರ ಕ್ಷೇತ್ರದಲ್ಲಿ ಎರಡು ಗುಂಪುಗಳ ಹೊಡೆದಾಟದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಸಹಾಯಕ ಹತ್ಯೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ವಿಧಾನಸಭೆ ಚುನಾವಣೆಯ ಮತದಾನ ನಡೆಯುತ್ತಿದ್ದು, ರಾಜ್ಯದ ಇತರ ಭಾಗಗಳಲ್ಲಿ ಕೆಲವು ಘರ್ಷಣೆಗಳು ವರದಿಯಾಗಿವೆ ಎಂದು ಅವರು ಹೇಳಿದ್ದಾರೆ.
ಇಂದೋರ್ ಜಿಲ್ಲೆಯ ಮೊವ್ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಐವರು ಗಾಯಗೊಂಡಿದ್ದಾರೆ. ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಸ್ಪರ್ಧಿಸುತ್ತಿರುವ ಮೊರೆನಾ ಜಿಲ್ಲೆಯ ದಿಮಾನಿ ಕ್ಷೇತ್ರದಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
”ಶುಕ್ರವಾರ ಬೆಳಿಗ್ಗೆ ರಾಜನಗರ ಕ್ಷೇತ್ರದಲ್ಲಿ ಇಬ್ಬರು ರಾಜಕೀಯ ನಾಯಕರ ಬೆಂಬಲಿಗರು ಮುಖಾಮುಖಿಯಾಗಿದ್ದು, ಒಬ್ಬ ಸಲ್ಮಾನ್ ಎನ್ನುವವರು ಸಾವಿಗೀಡಾಗಿದ್ದಾರೆ” ಎಂದು ಛತ್ತರ್ಪುರ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಂಘಿ ತಿಳಿಸಿದ್ದಾರೆ.
ಮೊರೆನಾ ಜಿಲ್ಲೆಯ ಸೂಕ್ಷ್ಮ ಸುಮಾವಾಲಿ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ಪೊಲೀಸರು ಬಿಜೆಪಿ ಅಭ್ಯರ್ಥಿ ಆಂಡಾಲ್ ಸಿಂಗ್ ಕಂಸಾನಾ, ಕಾಂಗ್ರೆಸ್ ಅಭ್ಯರ್ಥಿ ಅಜಬ್ ಸಿಂಗ್ ಕುಶ್ವಾಹಾ ಮತ್ತು ಬಿಎಸ್ಪಿಯ ಕುಲದೀಪ್ ಸಿಂಗ್ ಸಿಕರ್ವಾರ್ ಅವರನ್ನು ಒಂದೇ ಸ್ಥಳದಲ್ಲಿ ಸೇರುವಂತೆ ಹೇಳಿದ್ದರು.
ಮೊರೆನಾ ಪೊಲೀಸ್ ಅಧೀಕ್ಷಕ ಶೈಲೇಂದ್ರ ಸಿಂಗ್ ಅವರು, ಈ ಮೂವರನ್ನು ಹಿಂದಿನ ದಿನ ಸಭೆಗೆ ಕರೆಯಲಾಗಿತ್ತು, ಅಲ್ಲಿ ಅವರು ಪೊಲೀಸರು ಹೇಳಿದಂತೆ ನಡೆದುಕೊಳ್ಳಲು ಒಪ್ಪಿಕೊಂಡಿದ್ದರು ಆದರೆ, ಅವರು ತಮ್ಮ ಹಳೆಯ ಅಭ್ಯಾಸ ಮುಂದುವರೆಸಿದ್ದಾರೆ” ಎಂದು ಹೇಳಿದರು.
ಝಬುವಾ ಕ್ಷೇತ್ರದಲ್ಲಿ ಗುರುವಾರ ಮಧ್ಯರಾತ್ರಿಯ ಸುಮಾರಿಗೆ ಕಾಂಗ್ರೆಸ್ ಅಭ್ಯರ್ಥಿ ಡಾ.ವಿಕ್ರಾಂತ್ ಭೂರಿಯಾ ಅವರ ಮೇಲೆ ಕಲ್ಲು ತೂರಾಟ ನಡೆದಿದ್ದು, ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಛತ್ತೀಸ್ಗಢ: ಮತದಾನದ ಮುನ್ನಾ ದಿನ ಬಿಜೆಪಿ ಅಭ್ಯರ್ಥಿಯ ವಾಹನದಲ್ಲಿ ಕಂತೆ ಕಂತೆ ನೋಟು ಪತ್ತೆ