ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ 46 ವರ್ಷದ ಸರ್ಕಾರಿ ಆಸ್ಪತ್ರೆಯ ಉದ್ಯೋಗಿಯೊಬ್ಬರು ಭಾನುವಾರ ಸಂಜೆ ಕೊರೊನಾ ಲಸಿಕೆ ಪಡೆದ 24 ಗಂಟೆಗಳ ನಂತರ ನಿಧನರಾಗಿದ್ದಾರೆ. ಆದರೆ ಅವರ ಸಾವಿಗೂ ವ್ಯಾಕ್ಸಿನೇಷನ್ಗೂ ಸಂಬಂಧವಿಲ್ಲ ಎಂದು ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿ ಹೇಳಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಮೃತಪಟ್ಟವರನ್ನು ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿದ್ದ ಮಹಿಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ನಿಧನರಾಗುವುದಕ್ಕಿಂತ ಮುಂಚೆ ಅವರು ಎದೆ ನೋವು ಮತ್ತು ಉಸಿರಾಟದ ತೊಂದರೆಗಳ ಬಗ್ಗೆ ಹೇಳಿದ್ದರು ಎನ್ನಲಾಗಿದೆ. ಲಸಿಕೆ ಚುಚ್ಚುವುದಕ್ಕಿಂತ ಮೊದಲೆ ಅವರು ಅಸ್ವಸ್ಥರಾಗಿದ್ದರು ಎಂದು ಅವರ ಕುಟುಂಬ ಹೇಳಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಕೊರೊನಾ ಲಸಿಕೆ: 51 ಪ್ರತಿಕೂಲ ಪರಿಣಾಮ ಪ್ರಕರಣ, ಒಬ್ಬರ ಸ್ಥಿತಿ ಗಂಭೀರ
“ಅವರಿಗೆ ಶನಿವಾರ ಮಧ್ಯಾಹ್ನ ಲಸಿಕೆ ನೀಡಲಾಯಿತು. ಭಾನುವಾರ ಉಸಿರಾಟದ ತೊಂದರೆ ಮತ್ತು ಎದೆ ನೋವಿನ ಬಗ್ಗೆ ಹೇಳಿದ್ದರು. ಮರಣೋತ್ತರ ಪರೀಕ್ಷೆ ನಡೆಯಲಿದೆ, ಸಾವಿಗೆ ಕಾರಣಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಇದು ವ್ಯಾಕ್ಸಿನೇಷನ್ನ ಪ್ರತಿಕೂಲ ಪರಿಣಾಮದಂತೆ ಕಾಣುತ್ತಿಲ್ಲ. ಅವರು ಶನಿವಾರ ರಾತ್ರಿ ಕೂಡಾ ಆಸ್ಪತ್ರೆಯಲ್ಲಿ ಡ್ಯೂಟಿ ಮಾಡಿದ್ದರು, ಆಗ ಯಾವುದೆ ಸಮಸ್ಯೆಗಳಿರಲಿಲ್ಲ” ಎಂದು ಮೊರಾದಾಬಾದ್ನ ಮುಖ್ಯ ವೈದ್ಯಕೀಯ ಅಧಿಕಾರಿ ಎಂ.ಸಿ.ಗಾರ್ಗ್ ಕಳೆದ ರಾತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಾವಿಗೆ ತಕ್ಷಣದ ಕಾರಣ ಹೃದಯ-ಶ್ವಾಸಕೋಶದ ಕಾಯಿಲೆ. ಅದರಿಂದಾಗಿ ”ಹೃದಯ ಆಘಾತ / ಸೆಪ್ಟಿಸೆಮಿಕ್ ಆಘಾತ” ಆಗಿದೆ ಎಂದು ಮರಣೋತ್ತರ ವರದಿಯು ಬಹಿರಂಗಪಡಿಸಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಮೂಲಗಳು ತಿಳಿಸಿವೆ.
“ನನ್ನ ತಂದೆಯನ್ನು ಮಧ್ಯಾಹ್ನ 1.30 ರ ಸುಮಾರಿಗೆ ವ್ಯಾಕ್ಸಿನೇಷನ್ ಕೇಂದ್ರದಿಂದ ನಾನು ಮನೆಗೆ ಕರೆತಂದೆ. ಅವರಿಗೆ ಉಸಿರುಗಟ್ಟುತ್ತಿದ್ದರು ಮತ್ತು ಕೆಮ್ಮುತ್ತಿದ್ದರು. ಅಲ್ಲದೆ ಅವರು ಸ್ವಲ್ಪ ನ್ಯುಮೋನಿಯಾ, ಸಾಮಾನ್ಯ ಕೆಮ್ಮು ಮತ್ತು ಶೀತದಿಂದ ಬಳಲುತ್ತಿದ್ದರು, ಆದರೆ ಮನೆಗೆ ಹಿಂದಿರುಗಿದ ನಂತರ ಇದು ಜಾಸ್ತಿಯಾಯಿತು” ಎಂದು ಮಹಿಪಾಲ್ ಸಿಂಗ್ ಮಗ ವಿಶಾಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಭಾರತದ ಕೊರೊನಾ ವ್ಯಾಕ್ಸಿನೇಷನ್ನ ಮೊದಲ ದಿನವಾದ ಶನಿವಾರದಂದು ಉತ್ತರ ಪ್ರದೇಶದಲ್ಲಿ 22,643 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ವಿಶ್ವದ ಹಲವು ನಾಯಕರು ಮೊದಲ ಲಸಿಕೆ ಪಡೆದಿರುವಾಗ ಮೋದಿ ಏಕೆ ಪಡೆಯಲಿಲ್ಲ? ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ