ಬಾಲಿವುಡ್ ಗೀತರಚನೆಕಾರ ಜಾವೇದ್ ಅಖ್ತರ್ ಅವರು ಸಲ್ಲಿಸಿದ ಮಾನಹಾನಿ ಪ್ರಕರಣದಲ್ಲಿ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಬೇಕೆಂದು ನಟಿ ಕಂಗನಾ ರಾಣಾವತ್ ಮುಂಬೈ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅವರ ಮನವಿಗೆ ಮಂಗಳವಾರ ಮುಂಬೈ ನ್ಯಾಯಾಲಯವು ಅನುಮತಿಸಿದ್ದು, ಇದು ಕೊನೆಯ ಅವಕಾಶ ಎಂದಿದೆ. ಮುಂದಿನ ವಿಚಾರಣೆಯ ದಿನಾಂಕದಂದು ಹಾಜರಾಗುವಂತೆ ಅದು ನಿರ್ದೇಶಿಸಿದೆ.
ಕಂಗಾನಾ ವಿರುದ್ದ ಬಂಧನದ ವಾರೆಂಟ್ ಹೊರಡಿಸಬೇಕು ಎಂದು ತಮ್ಮ ವಕೀಲರ ಮೂಲಕ ಜಾವೇದ್ ಅಖ್ತರ್ ಕೋರಿದ್ದರು. ಅವರ ಮನವಿಯನ್ನು ತಿರಸ್ಕರಿಸಿದ ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್.ಆರ್. ಖಾನ್, ಮುಂದಿನ ವಿಚಾರಣೆಯಲ್ಲಿ ಕಂಗನಾ ಹಾಜರಾಗಲು ವಿಫಲವಾದರೆ ದೂರುದಾರರು ಮತ್ತೆ ಮನವಿಯನ್ನು ಸಲ್ಲಿಸಬಹುದು ಎಂದು ಹೇಳಿದ್ದಾರೆ.
ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 1 ಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ: ತನ್ನ ವಿರುದ್ಧದ ಮಾನಹಾನಿ ಪ್ರಕರಣ ರದ್ದತಿ ಕೋರಿ ಕಂಗನಾ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಕೋರ್ಟ್
“ಆರೋಪಿಗಳ ವಕೀಲರು ಸಲ್ಲಿಸಿದ ವಿನಾಯಿತಿ ಅರ್ಜಿಯನ್ನು ಇಂದು ಕೊನೆಯ ಅವಕಾಶವಾಗಿ ನೀಡಲಾಗಿದೆ. ಆರೋಪಿಯನ್ನು ಮುಂದಿನ ದಿನಾಂಕದಂದು ತಪ್ಪದೆ ಹಾಜರುಪಡಿಸುವಂತೆ ಆರೋಪಿಗಳ ಪರ ವಕೀಲರಿಗೆ ನಿರ್ದೇಶಿಸಲಾಗಿದೆ” ಎಂದು ನ್ಯಾಯಾಲಯ ತಿಳಿಸಿದೆ.
ನಟಿಯ ವಿರುದ್ಧ ವಾರಂಟ್ ಹೊರಡಿಸಬೇಕೆಂದು ಕೋರಿ ಸಲ್ಲಿಸಿದ ಮನವಿಯನ್ನು ನಿರಾಕರಿಸಿದ ಮ್ಯಾಜಿಸ್ಟ್ರೇಟ್, “ಆರೋಪಿಗಳ ವಿರುದ್ಧ ವಾರಂಟ್ ಹೊರಡಿಸಲು ದೂರುದಾರರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಆರೋಪಿಯ ವೈಫಲ್ಯದ ಬಗ್ಗೆ ದೂರುದಾರರ ಪರ ವಕೀಲರಿಗೆ ಮಾಹಿತಿ ನೀಡಲಾಗುತ್ತದೆ. ಮುಂದಿನ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದರೆ, ಅವರ ವಿರುದ್ಧ ವಾರಂಟ್ಗಾಗಿ ಅರ್ಜಿ ಸಲ್ಲಿಸಬಹುದು” ಎಂದು ಹೇಳಿದ್ದಾರೆ.
ಟಿವಿ ಸಂದರ್ಶನವೊಂದರಲ್ಲಿ ಕಂಗನಾ ತನ್ನ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಜಾವೇದ್ ಅಖ್ತರ್ ಕಳೆದ ನವೆಂಬರ್ನಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಕಳೆದ ವರ್ಷ ಜೂನ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಕಂಗಾನಾ ತನ್ನ ಹೆಸರನ್ನು ವಿನಾಃ ಕಾರಣ ಎಳೆದು ತಂದಿದ್ದಾರೆ ಎಂದು ಜಾವೆದ್ ಅಖ್ತರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೆಲಸವಿಲ್ಲದ ಕಾರಣ ಕಳೆದ ವರ್ಷದ ತೆರಿಗೆ ಪಾವತಿಸಲು ಸಾಧ್ಯವಾಗಿಲ್ಲ: ಕಂಗನಾ ರಾಣಾವತ್