Homeಅಂಕಣಗಳುಮಾತು ಮರೆತ ಭಾರತ; ಸ್ವತಂತ್ರ ಪೂರ್ವ ಭಾರತದ ಕೆಲವು ದಲಿತ್ ಫೈಲ್ಸ್

ಮಾತು ಮರೆತ ಭಾರತ; ಸ್ವತಂತ್ರ ಪೂರ್ವ ಭಾರತದ ಕೆಲವು ದಲಿತ್ ಫೈಲ್ಸ್

- Advertisement -
- Advertisement -

1947ಕ್ಕೆ ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ಆದರೆ ಹಿಂದೂ ಮೇಲ್ಜಾತಿಗಳಿಂದ ದಲಿತರಿಗೆ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ಅದಕ್ಕೆ ಎರಡನೇ ಸ್ವಾತಂತ್ರ್ಯ ಸಂಗ್ರಾಮವೇ ಘಟಿಸಬೇಕಿದೆ. ಇಲ್ಲವೇ ಮನುಸ್ಮೃತಿಯ ಪ್ರೇತಗಳು ಹೊಸರೂಪದಲ್ಲಿ ಭಾರತವನ್ನು ಆಳಲಿವೆ. ಇರಲಿ, ಇಲ್ಲಿ ನಾನಿಂದು ಹೇಳಲು ಹೊರಟಿರುವುದು 20ನೇ ಶತಮಾನದ ಮೊದಲರ್ಧ ಕಾಲಘಟ್ಟದ ದಲಿತ್ ಫೈಲ್ಸ್‌ಗಳನ್ನು. ಈ ಫೈಲ್ಸ್‌ಗಳಲ್ಲಿ ಬಹುತೇಕ ಘಟನೆಗಳು ನಿಮಗೆ ನೆನಪಿಗೆ ಬರಬಹುದು. ’ಮಾತು ಮರೆತ ಭಾರತ’ದಲ್ಲಿ ಈ ನಿಮ್ಮ ನೆನಪನ್ನು ಕೆದಕುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ ಅಷ್ಟೆ.

ನೀವು ಈ ಕೆಳಗಿನ ಪ್ರತಿಯೊಂದು ಘಟನೆಯನ್ನೂ ನಿನ್ನೆಮೊನ್ನೆ ಎಲ್ಲೋ ನಡೆದಿತ್ತಲ್ಲ? ಎಂದಂದುಕೊಂಡರೆ ಅದು ನಿಜ. ಏಕೆಂದರೆ ಭಾರತದ ಇತಿಹಾಸದುದ್ದಕ್ಕೂ ದಲಿತರ ಮೇಲೆ ಅಸ್ಪೃಶ್ಯತೆಯ ಕಾರಣಕ್ಕೆ ಹಿಂದೂ ಮೇಲ್ಜಾತಿಗಳು ಎಸಗಿರುವ ನೀಚ ಕೃತ್ಯಗಳು ಇಂದಿಗೂ ಹೆಚ್ಚೂಕಡಿಮೆ ಹಾಗೆಯೇ ಇವೆ ಎನಿಸುತ್ತದೆ. ಬೇಕಿದ್ದರೆ ಈ ಕೆಳಗಿನ ಘಟನೆಗಳನ್ನೊಮ್ಮೆ ಗಮನಿಸಿ.

12 ನೆಯ ಫೆಬ್ರವರಿ 1923ರ ’ಪ್ರತಾಪ್’ ಪತ್ರಿಕೆಯಿಂದ ಆಯ್ದುಕೊಂಡಿದ್ದು:

“ಆಗ್ರಾ ಜಿಲ್ಲೆಯಲ್ಲಿ ಬ್ರಾಹ್ಮಣನೊಬ್ಬ ತನ್ನ ಮನೆಯಲ್ಲಿ ವಿಷ್ಣುವಿನ ವಿಗ್ರಹವನ್ನು ಪೂಜಿಸುತ್ತಿದ್ದುದನ್ನು ಒಬ್ಬ ಚಮ್ಮಾರ ನೋಡಿದ್ದ. ಅಂತೆಯೇ ಅವನೂ ಮಾಡಲಾರಂಭಿಸಿದ. ಬ್ರಾಹ್ಮಣನಿಗೆ ಇದು ತಿಳಿದುಬಂದಾಗ ಅವನು ವಿಪರೀತ ಕ್ರುದ್ಧನಾದ ಮತ್ತು ಹಳ್ಳಿಯ ಇತರರ ಸಹಾಯ ಪಡೆದು ಈ ಪಾಪದ ಹರಿಜನನನ್ನು ಹಿಡಿದ. ಅವನಿಗೆ ಚೆನ್ನಾಗಿ ಬಡಿದು ಹೇಳಿದ: ’ವಿಷ್ಣುವಿನಂಥ ದೇವರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುವಷ್ಟು ಉದ್ಧಟತನ ಬಂತೇ ನಿನಗೆ?’ ಕಡೆಗೆ ಆ ಹರಿಜನರವನ ಬಾಯಿಗೆ ಒಂದಿಷ್ಟು ಹೊಲಸನ್ನು ತುರುಕಿ ಬಿಟ್ಟುಬಿಟ್ಟರು. ಒಣ ಹತಾಶೆಯಿಂದ ಕಡೆಗೆ ಆ ಚಮ್ಮಾರ ಹಿಂದೂ ಧರ್ಮವನ್ನು ಒಗೆದ, ಇಸ್ಲಾಂ ಧರ್ಮವನ್ನವಲಂಬಿಸಿದ.”

14ನೆಯ ಸೆಪ್ಟೆಂಬರ್ 1929ರ ’ಆರ್ಯ ಗೆಜೆಟ್’ ನಿಂದ:

“ಗುರ್ದಾಸ್ಪುರ ಜಿಲ್ಲೆಯ ಬೆರ್ಹಾಂಪುರ ಪಟ್ಟಣದ ಬಳಿ ಇರುವ ರಮಣಿ ಎಂಬ ಹಳ್ಳಿಯ ಹಿಂದೂ ರಜಪೂತರು ಆ ಊರಿನ ಅಸ್ಪೃಶ್ಯರನ್ನೆಲ್ಲಾ ಮನೆಗಳಿಂದ ಹೊರಬರುವಂತೆ ಹೇಳಿ ಆ ಕ್ಷಣವೇ ತಮ್ಮ ಪಾವನವಾದ ದಾರವನ್ನು ತೆಗೆದುಹಾಕಬೇಕೆಂದೂ ಮತ್ತೆ ಅದನ್ನೆಂದೂ ಧರಿಸುವುದಿಲ್ಲವೆಂದು ಆಣೆ ಇಡಬೇಕೆಂದೂ ಆಜ್ಞಾಪಿಸಿದರು. ಹಾಗೆ ಮಾಡದಿದ್ದಲ್ಲಿ ಅವರ ಪ್ರಾಣಕ್ಕೆ ಸಂಚು ಬರಬಹುದೆಂದೂ ಎಚ್ಚರಿಸಿದರು. ಇದಕ್ಕೆ ಅಸ್ಪೃಶ್ಯರು ಶಾಂತವಾಗಿ ಉತ್ತರ ಕೊಟ್ಟರು: ’ಮಹಾಸ್ವಾಮಿ ನೀವೇಕೆ ಇಷ್ಟು ಕೋಪಗೊಳ್ಳುತ್ತೀರಿ? ನಿಮ್ಮ ಸಹೋದರರೇ ಆದ ಆರ್ಯಸಮಾಜವಾದಿಗಳು ಈ ದಾರಗಳನ್ನು ಕೃಪೆಮಾಡಿ ನಮ್ಮ ಕೊರಳಿಗೆ ಹಾಕಿದ್ದಾರೆ ಮತ್ತು ಅವು ಹಿಂದೂಧರ್ಮದ ನೈಜ ಪ್ರತೀಕಗಳಾದ್ದರಿಂದ ಅವನ್ನು ಎಂದೆಂದಿಗೂ ರಕ್ಷಿಸಬೇಕೆಂದು ಅಪ್ಪಣೆ ನೀಡಿದ್ದಾರೆ. ಅದಕ್ಕೆ ನೀವು ಆಕ್ಷೇಪಿಸುವುದಾದರೆ ನಮ್ಮ ದೇಹದಿಂದ ಅವನ್ನು ನಿಮ್ಮ ಕೈಗಳಿಂದಲೇ ಹರಿದು ಹಾಕಿ’ ಇದರಿಂದ ಉದ್ವಿಗ್ನಗೊಂಡ ರಜಪೂತರು ಆ ಬಡಜನರ ಮೇಲೆರಗಿದರು. ಲಾಠಿಗಳಿಂದ ಚಚ್ಚಿದರು ಮತ್ತು ಬಹಳ ಕಾಲದವರೆಗೆ ಹಾಗೆ ಹೊಡೆಯುತ್ತಲೇ ಇದ್ದರು. ಈ ಪ್ರಹಾರಗಳನ್ನು ಅಸ್ಪೃಶ್ಯರು ಬಹಳ ಸ್ಥೈರ್ಯದಿಂದ ಸಹಿಸುತ್ತಿದ್ದರೇ ವಿನಾ ಅದನ್ನವರು ಪ್ರತಿಭಟಿಸಲೂ ಇಲ್ಲ ಅಥವಾ ವಿರೋಧಿಸಲೂ ಇಲ್ಲ. ಅವರ ಅಸಹಾಯಕ ಪರಿಸ್ಥಿತಿಯ ಬಗ್ಗೆ ಆ ಪೀಡಕರಿಗೆ ಯಾವ ಕನಿಕರವೂ ಮೂಡಲಿಲ್ಲ. ಮೂರು ನಾಲ್ಕು ಮಂದಿ ರಜಪೂತರು ಗೋರಿರಾಮ್ ಎಂಬ ಹರಿಜನರವನು ಧರಿಸಿದ್ದ ಪವಿತ್ರ ದಾರವನ್ನು ನಿಜಕ್ಕೂ ಕಿತ್ತೆಸೆದರು. ದಾರದ ಗುರುತನ್ನು ಅಣಕಿಸುವ ಅನುಕರಣದೋಪಾದಿಯಲ್ಲಿ ಒಂದು ಕಳೆಗುದ್ದಲಿಯಿಂದ ಅವನ ಮೈಮೇಲೆ ಗಾಯವನ್ನು ಉಂಟುಮಾಡಿದರು.”

12ನೆಯ ಅಕ್ಟೋಬರ್ 1929ರ ’ಮಿಲಾಪ್’ ಪತ್ರಿಕೆಯದ್ದು:

“ಒಂದು ಮದುವೆಯ ದಿಬ್ಬಣದ ಆಗಮನದ ವಿಷಯ ತಿಳಿಯಿತು. ಮದುವೆಯಾಗಲಿದ್ದವನು ಪಲ್ಲಕ್ಕಿಯನ್ನೇರಿದ್ದ. ಅಗಾಧ ಸಂಖ್ಯೆಯಲ್ಲಿ ಹಿಂದೂಗಳು ಮುನ್ನುಗ್ಗಿ ದಿಬ್ಬಣದವರನ್ನು ಸುತ್ತುವರಿದು ನಿಂತರು ಮತ್ತು ಅವರನ್ನು ಚೆನ್ನಾಗಿ ಹೊಡೆದರು. ಮದುವೆಯ ದಿಬ್ಬಣದವರನ್ನು ಕೊರೆಯುವ ಚಳಿಯಲ್ಲಿ ನಡುಗುವಂತೆ ದಿಗ್ಭಂಧಿಸಿ 24 ಗಂಟೆಗಳ ಕಾಲ ಯಾವ ಆಹಾರವೂ ದೊರೆಯದಂತೆ ತಡೆಹಿಡಿದರು. ದಿಬ್ಬಣದವರನ್ನು ಅಮಾನವೀಯವಾಗಿ ನಡೆಸಿಕೊಂಡು, ಪೊಲೀಸರು ಬಂದ ನಂತರವೇ ಈ ಕಷ್ಟದ ಸನ್ನಿವೇಶದಿಂದ ಅವರನ್ನು ಪಾರುಮಾಡಿದರು.”

ಕೆಳಗಿನದು 1936ನೆಯ ನವೆಂಬರ್ 4ರಂದು ’ಮುಂಬೈ ಸಮಾಚಾರ್’ ಪತ್ರಿಕೆಯಲ್ಲಿ ಪ್ರಕಟವಾಗಿದದ್ದು:

“(ಮಲಬಾರಿನಲ್ಲಿ) ಉಟ್ಟಪಾಲಂ ಎಂಬಲ್ಲಿ 17 ವರ್ಷ ವಯಸ್ಸಿನ ಶಿವರಾಮನ್ ಎಂಬ ಅಸ್ಪೃಶ್ಯ ಜಾತಿಯವನು ಉಪ್ಪು ಕೊಳ್ಳಲು ಸವರ್ಣೀಯ ಹಿಂದೂವೊಬ್ಬನ ಅಂಗಡಿಗೆ ಹೋಗಿ ಮಲಯಾಳಂ ಭಾಷೆಯಲ್ಲಿ ’ಉಪ್ಪು’ ಬೇಕೆಂದು ಕೇಳಿದ. ಮಲಬಾರಿನ ಸಂಪ್ರದಾಯದಂತೆ ಸವರ್ಣೀಯ ಹಿಂದೂಗಳು ಮಾತ್ರ ಉಪ್ಪಿಗೆ ’ಉಪ್ಪು’ ಎಂಬ ಪದ ಬಳಸಬಹುದು. ಹರಿಜನರವನಾಗಿ ಅವನು ’ಪುಲಿಜಾತನ್’ ಎಂಬ ಪದ ಬಳಸಬೇಕಿತ್ತು. ಅದರಿಂದ ಮೇಲ್ಜಾತಿಯ ಅಂಗಡಿಯವನು ಕೋಪಗೊಂಡು ಶಿವರಾಮನ್‌ಗೆ ಚೆನ್ನಾಗಿ ಥಳಿಸಿದನೆಂದೂ ಮತ್ತು ಅದರಿಂದ ಆತ ಮರಣ ಹೊಂದಿದನೆಂದೂ ಹೇಳಲಾಗಿದೆ”.

ಕೆಳಗಿನ ಘಟನೆಗಳನ್ನು ’ಸಮತಾ’ ಪತ್ರಿಕೆಯಿಂದ ಆಯ್ದುಕೊಳ್ಳಲಾಗಿದೆ (1932):

1) “(ಮಣೆ ಜಿಲ್ಲೆಯ) ಕಾಥಿ ಎಂಬಲ್ಲಿ ಜನ ಅಸ್ಪೃಶ್ಯರಿಗೆ ಕಿರುಕುಳ ಕೊಡಲು ಆರಂಭಿಸಿದ್ದಾರೆ; ಏಕೆಂದರೆ ಅಲ್ಲಿಯ ಅಸ್ಪೃಶ್ಯರು ’ರಾಂ ರಾಂ’ ಮತ್ತು ’ನಮಸ್ಕಾರ್’ ಹೇಳತೊಡಗಿದ್ದಾರೆ. ತಿಳಿದಿಲ್ಲದವರಿಗೆ ಗೊತ್ತುಪಡಿಸಲು ಹೇಳಬೇಕಾದದ್ದೇನೆಂದರೆ ಈ ರೀತಿ ನಮಸ್ಕಾರ ಹೇಳುವ ಪದ್ಧತಿಯು ಕೇವಲ ಮೇಲ್ಜಾತಿಯವರಿಗೆ ಮೀಸಲಾಗಿರುವ ಹಕ್ಕು. ಮಹಾರರು ಮತ್ತಿತರರು ’ಜೋಹಾರ್’ ಅಥವಾ ’ಪಾಯಾಲಾಗೂ’ (ನಿನ್ನ ಕಾಲು ಮುಟ್ಟುತ್ತೇನೆ) ಎಂದು ಹೇಳಬೇಕು”.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

2) “(ಮಗ ಜಿಲ್ಲೆಯ) ಟಾವಿನಲ್ಲಿ ಅಸ್ಪೃಶ್ಯರು ಸ್ಪೃಶ್ಯ ಹಿಂದೂ ಜನರಂತೆ ನಡೆದುಕೊಳ್ಳಲು ಯತ್ನಿಸಿದರು. ಈ ಉದ್ಧಟತನದ ಅತಿಕ್ರಮಣದ ಫಲವಾಗಿ ಅವರಲ್ಲಿ ಅನೇಕರು ಹಳ್ಳಿಯನ್ನು ಬಿಡಬೇಕಾಗಿ ಬಂತು. ಅವರಲ್ಲಿ ಕೆಲವರು ಬಾವಾ ಎಂಬಲ್ಲಿಗೆ ವಲಸೆ ಹೋದರು”.

3) “(ಶೋಲಾಪುರ ಜಿಲ್ಲೆಯ) ವಾಲಾಪುರ ಎಂಬಲ್ಲಿ ಮಹಾರರಿಗೆ ಕಿರುಕುಳ ನೀಡಲಾಗುತ್ತಿದೆ: ಏಕೆಂದರೆ ಸ್ಪೃಶ್ಯರನ್ನು ’ಸಾಹೇಬ್’ ಎಂದು ಕರೆಯಲು ಮತ್ತು ನಮಸ್ಕಾರ ಹೇಳುವಾಗ ’ಪಾಯಾಲಾಗೂ’ (ನಿನ್ನ ಕಾಲು ಮುಟ್ಟುತ್ತೇನೆ) ಎನ್ನಲು ನಿರಾಕರಿಸುವಷ್ಟು ಧೈರ್ಯ ತೋರಿದ್ದಾರೆ.

ಕೆಳಗಿನದನ್ನು ’ಪ್ರಕಾಶ್’ ಪತ್ರಿಕೆಯ 1932ನೆಯ ಆಗಸ್ಟ್ 23ರ ಸಂಚಿಕೆಯಿಂದ ತೆಗೆದುಕೊಳ್ಳಲಾಗಿದೆ:

“’ಜಾಫರ್ವಾಲ್ ತಾಲ್ಲೂಕಿನ ಜಗ್ವಾಲ್’ ಎಂಬ ಹಳ್ಳಿಯಲ್ಲಿ ಆಗಸ್ಟ್ 6ರಂದು ಒಂದು ಕರುವು ಬಾವಿಯೊಳಕ್ಕೆ ಬಿದ್ದುಹೋಗಿತ್ತು. ಡೋಮ್ ಜಾತಿಗೆ ಸೇರಿದ ರಾಮ್ ಮಹಾಶಯ ಎಂಬುವನು ಅಲ್ಲೇ ಹತ್ತಿರದಲ್ಲಿ ನಿಂತಿದ್ದ. ಕೂಡಲೆ ಅವನು ಬಾವಿಯೊಳಕ್ಕೆ ಜಿಗಿದ ಮತ್ತು ಕರುವನ್ನು ತನ್ನ ಕೈಗಳಲ್ಲಿ ತಬ್ಬಿಕೊಂಡ. ಅಷ್ಟರಲ್ಲಿ ಮೂರು-ನಾಲ್ಕು ಮಂದಿ ಅವನ ಸಹಾಯಕ್ಕೆ ಬಂದರು ಮತ್ತು ಕರುವನ್ನು ಬಾವಿಯಿಂದ ಪಾರು ಮಾಡಲಾಯಿತು. ಆದರೆ ಹಳ್ಳಿಯ ಹಿಂದೂಗಳು ಒಂದು ದೊಡ್ಡ ಹುಯಿಲನ್ನೇ ಆರಂಭಿಸಿದರು. ಏಕೆಂದರೆ ಅವರ ಬಾವಿಯು ಅಪವಿತ್ರಗೊಂಡಿತ್ತು. ಅದಕ್ಕಾಗಿ ಆ ಪಾಪಿ ರಾಮ್ ಮಹಾಶಯನಿಗೆ ಬಲಿ ಹಾಕಲಾಗಿತ್ತು. ಅದೃಷ್ಟವೋ ಎಂಬಂತೆ ಆ ವೇಳೆಗೆ ಒಬ್ಬ ಬ್ಯಾರಿಸ್ಟರ್ ಅಲ್ಲಿಗೆ ಪ್ರವೇಶ ಮಾಡಿದ್ದ. ಸಾಧುರಾಮನನ್ನು ಗೋಳು ಹುಯ್ದುಕೊಳ್ಳುತ್ತಿದ್ದ ಅಲ್ಲಿನ ಜನರಿಗೆ ಅವನು ಚೆನ್ನಾಗಿ ಬೈಗುಳ ಸುರಿಸಿ ಅವರಿಗೆ ಬುದ್ಧಿ ನೆಟ್ಟಗಾಗುವಂತೆ ಮಾಡಿದ. ಹೀಗಾಗಿ ಆ ಸಾಧುರಾಮ ಉಳಿದುಕೊಂಡ, ಇಲ್ಲದಿದ್ದರೆ ಅವನ ಗತಿ ಏನಾಗುತ್ತಿತ್ತೋ ಕಂಡವರಾರು!”

1936ನೆಯ ಡಿಸೆಂಬರ್ 19ರಂದು ‘ಮುಂಬೈ ಸಮಾಚಾರ್’ ಪತ್ರಿಕೆಯು ಅಂಥದೇ ಇನ್ನೊಂದು ಘಟನೆಯನ್ನು ವರದಿ ಮಾಡಿತ್ತು:

“ಕಲ್ಲಿಕೋಟೆಯ ಬಳಿಯ ಕಾಲಡಿ ಎಂಬ ಹಳ್ಳಿಯಲ್ಲಿ ಯುವತಿಯೊಬ್ಬಳ ಮಗು ಬಾವಿಯೊಳಕ್ಕೆ ಬಿತ್ತು. ಆಕೆ ಜೋರಾಗಿ ಕೂಗಿಕೊಂಡಳಾದರೂ ಹತ್ತಿರದಲ್ಲೇ ಇದ್ದವರು ಯಾರೂ ಬಾವಿಯೊಳಗೆ ಜಿಗಿಯಲು ಧೈರ್ಯ ತೋರಲಿಲ್ಲ. ಅಲ್ಲೇ ಹಾದುಹೋಗುತ್ತಿದ್ದ ಒಬ್ಬ ವ್ಯಕ್ತಿ ಬಾವಿಗೆ ಧುಮುಕಿ ಮಗುವನ್ನು ಕಾಪಾಡಿದ. ಹೀಗೆ ಸಹಾಯಹಸ್ತ ನೀಡಿದ್ದ ವ್ಯಕ್ತಿಯನ್ನು ಅವನು ಯಾರೆಂದು ವಿಚಾರಿಸಲು ತಾನೊಬ್ಬ ಅಸ್ಪೃಶ್ಯನೆಂದು ಹೇಳಿದ. ಅದನ್ನು ಕೇಳಿ ಅವನಿಗೆ ಕೃತಜ್ಞತೆ ಸೂಚಿಸುವ ಬದಲು ಅವನನ್ನು ವಾಚಾಮಗೋಚರವಾಗಿ ಬೈದರು ಮತ್ತು ಚೆನ್ನಾಗಿ ಥಳಿಸಿದರು. ಕಾರಣ: ಅವನು ಬಾವಿಯನ್ನು ಮಲಿನಗೊಳಿಸಿದ್ದ.”

ಇವಿಷ್ಟು ಸ್ವಾತಂತ್ರ್ಯಪೂರ್ವದ ಕೆಲವೇ ಕೆಲವು ಘಟನೆಗಳು. ಇಂತಹ ಲೆಕ್ಕವಿಲ್ಲದಷ್ಟು ಘಟನೆಗಳಲ್ಲಿ ಕೆಲವನ್ನು ಡಾ. ಬಿ. ಆರ್. ಅಂಬೇಡ್ಕರ್ ಅವರು ನಮೂದಿಸಿಟ್ಟಿದ್ದರು. ಈಗ ಅದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರೆಹಗಳು ಮತ್ತು ಭಾಷಣಗಳು ಸಂಪುಟ 4ರಲ್ಲಿದೆ.

ಸ್ವಾತಂತ್ರ್ಯಪೂರ್ವದಲ್ಲಿ ’ದಲಿತರೆ ನೀವು ಮಡಗದಂಗಿರಬೇಕು’ ಎಂದು ಹಿಂದೂ ಮೇಲ್ಜಾತಿ ಹೇಳಿದ್ದನ್ನು ನಾನಾ ಕಾರಣಕ್ಕೆ ತಲೆಬಾಗಿ ಪಾಲಿಸಿಕೊಂಡು ಬಂದಿದ್ದ ದಲಿತ ಸಮೂಹ ಸ್ವತಂತ್ರ ಭಾರತದಲ್ಲಿ ಹಾಗಿಲ್ಲದೆ ಹರಿಜನ ಪ್ರಜ್ಞೆಯನ್ನು ಕಿತ್ತೆಸೆದು ಅಂಬೇಡ್ಕರ್ ಪ್ರಜ್ಞೆ ಬೆಳೆಸಿಕೊಂಡಿದ್ದನ್ನು ಸಹಿಸದ ಹಿಂದೂ ಮೇಲ್ಜಾತಿಗಳು ಅತ್ಯಂತ ಕ್ರೂರವಾಗಿ ಅವರನ್ನು ಬಲಿಹಾಕಿದವು. ಆ ಘಟನೆಗಳ ದಲಿತ್ ಫೈಲ್ಸ್ ಅನ್ನೂ ಮುಂದಿನ ಸಂಚಿಕೆಯಿಂದ ನೋಡೋಣವಂತೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಮಾತು ಮರೆತ ಭಾರತ; ಅಸ್ಪೃಶ್ಯರು ಪರಿಶಿಷ್ಟ ಜಾತಿಗಳಾಗಿದ್ದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...