Homeಮುಖಪುಟಪಾದ್ರಿ ಸ್ಟಾನ್ ಸ್ವಾಮಿ ಸಾವು: ಭಾರತದ ಮುಖ್ಯ ನ್ಯಾಯಾಧೀಶರಿಗೊಂದು ಬಹಿರಂಗ ಪತ್ರ

ಪಾದ್ರಿ ಸ್ಟಾನ್ ಸ್ವಾಮಿ ಸಾವು: ಭಾರತದ ಮುಖ್ಯ ನ್ಯಾಯಾಧೀಶರಿಗೊಂದು ಬಹಿರಂಗ ಪತ್ರ

- Advertisement -
- Advertisement -

ಭಾರತದ ಮುಖ್ಯ ನ್ಯಾಯಾಧೀಶರಿಗೊಂದು ಬಹಿರಂಗ ಪತ್ರ

ವಿಷಯ: ಈ ದೇಶದಲ್ಲಿ ಮೋದಿವಾದಿಗಳಿಗೊಂದು ಕಾನೂನು- ಜನವಾದಿಗಳಿಗೊಂದು ಕಾನೂನಿದೆಯೇ?

ಯುವರ್ ಆನರ್,

ಸಂತ ಪಾದ್ರಿ ಸ್ಟಾನ್ ಸ್ವಾಮಿಯವರ ಸಾವು ತಮ್ಮ ನಿದ್ದೆಯನ್ನು ಕೂಡಾ ಕೆಡಿಸಿರಬಹುದು.

ಆದರೆ ಒಂದು ಸಾಂವಿಧಾನಿಕ ಸಂಸ್ಥೆಯಾಗಿ, ನ್ಯಾಯಾಂಗವು ಸರ್ಕಾರದ ದಾಳಿಯಿಂದ ನಾಗರಿಕ ಸ್ವಾತಂತ್ರ್ಯ ವನ್ನು ರಕ್ಷಿಸಲು ವಿಫಲವಾಗಿರುವುದರಿಂದಲೇ ಈ ಸಂತನ ಸಾಂಸ್ಥಿಕ ಹತ್ಯೆ ಯಾಗಿದೆಯೆಂದು

ಈ ದೇಶದ ಜನರಾದ ನಾವು”

ಕಳವಳಗೊಂಡಿದ್ದೇವೆ…

ಎಲ್ಲಕ್ಕಿಂತ ಹೆಚ್ಚಾಗಿ ,

ಕಳೆದ ಏಳುವರ್ಷಗಳಿಂದ ಈ ದೇಶದಲ್ಲಿ “ಒಂದು ದೇಶ-ಎರಡೆರಡು ಕಾನೂನು” ಜಾರಿಯಲ್ಲಿರುವುದು ಆತಂಕ ಹುಟ್ಟಿಸಿದೆ.

ಮತ್ತು ನ್ಯಾಯಾಂಗದ ಕೆಳಹಂತದಿಂದ ಮೇಲಿನವರೆಗೆ ನ್ಯಾಯದಾನ ಮಾಡುವಾಗ ‘ಮೋದಿವಾದಿಗಳಿಗೊಂದು ಮಾನದಂಡ… ಜನವಾದಿಗಳಿಗೊಂದು ಮಾನದಂಡವನ್ನು ಅನುಸರಿಸುತ್ತಾ ಬಂದಿರುವುದು ಈ ದೇಶದ ಪ್ರಜಾತಂತ್ರದ ಭವಿಷ್ಯದ ಬಗ್ಗೆ ತೀವ್ರವಾದ ಕಾಳಜಿ ಹುಟ್ಟಿಸುತ್ತಿದೆ…

ಏಕೆಂದರೆ, 2021ರ ಮಾರ್ಚ್ ನಲ್ಲಿ ಫಾದರ್ ಸ್ವಾಮಿಯವರ ಜಾಮೀನು ಅರ್ಜಿಯನ್ನು ತಿರಸ್ಕರಿಸುತ್ತಾ ವಿಶೇಷ ನ್ಯಾಯಾಲಯವು ಪಾದ್ರಿಯವರ “right to personal liberty and other grounds like his old age and sickness were outweighed by the “collective interest of the community” (ಸಮುದಾಯದ ಸಾಮೂಹಿಕ ಹಿತಾಸಕ್ತಿಯ ತೂಕವು ಸ್ವಾಮಿಯವರ ವೈಯಕ್ತಿಕ ಸ್ವಾತಂತ್ರ್ಯ, ಅವರ ವಯಸ್ಸು ಹಾಗೂ ಖಾಯಿಲೆಗಳಿಂಗಿಂತ ಹೆಚ್ಚು ತೂಗುತ್ತದೆ. ಆದ್ದರಿಂದ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ ) ಎಂದು ಹೇಳಿತ್ತು.

ಅಂದರೆ ವಿಚಾರಣೆಗೆ ಮುನ್ನವೇ, ಹಾಗೂ ಆರೋಪಿಗೆ ತನ್ನ ನಿರಪರಾಧಿತ್ವವನ್ನು ಸಾಬೀತು ಪಡಿಸುವ ಅವಕಾಶವನ್ನೂ ನೀಡದೆಯೇ, ಏಕಪಕ್ಷೀಯವಾಗಿ ನ್ಯಾಯಾಲಯವು ಫಾದರ್ ಸ್ವಾಮಿಯವರು prima facie ಅಪರಾಧಿಯಾಗಿರಬಹುದೆಂಬ ಅಭಿಪ್ರಾಯವನ್ನು ತಳೆದುಬಿಟ್ಟಿತು.

ಯುವರ್ ಆನರ್,

ಇದು ಯಾವ ಪ್ರಜಾತಾಂತ್ರಿಕ ನ್ಯಾಯಸಂಹಿತೆ?

ಇಂಥಾ ಸಂವಿಧಾನ ಬಾಹಿರ ಮಾನದಂಡವಿರುವ UAPA ಕಾಯಿದೆಯೇ ನ್ಯಾಯಬಾಹಿರ ಹಾಗೂ ಸಂವಿಧಾನ ವಿರೋಧಿಯಲ್ಲವೇ?

ಸಂವಿಧಾನವನ್ನು ಇಂಥಾ ದಾಳಿಯಿಂದ ರಕ್ಷಿಸಬೇಕಾದ ಸಾಂವಿಧಾನಿಕ ಜವಾಬ್ದಾರಿಯಿರುವ ತಮ್ಮ ಘನ ನ್ಯಾಯಾಲಯವು, ಈ ಅನ್ಯಾಯ ಹಾಗೂ ಅಕ್ರಮವಾದ ಸಂವಿಧಾನ ಉಲ್ಲಂಘನೆ ಯನ್ನು ಸ್ವಪ್ರೇರಿತರಾಗಿ ಖೈದು ಮಾಡುವ ಬದಲು ಜಾರಿ ಮಾಡುತ್ತಿರುವುದೇಕೆ?

ವಿಪರ್ಯಾಸ ಮತ್ತು ಅಪಾಯಕಾರಿ ಯಾದ ವಿಷಯವೆಂದರೆ,

ಭಾರತದ ನ್ಯಾಯಾಲಯಗಳು ದೇಶದ ಭಾವೈಕ್ಯತೆಗೆ ಹಾಗೂ ದೇಶದ ಭದ್ರತೆಗೆ ಧಕ್ಕೆ ಎಂದು ಭಾವಿಸಿದ ಎಲ್ಲಾ ಪ್ರಕರಣಗಳಲ್ಲೂ “ಆರೋಪಿಗಳ ವೈಯಕ್ತಿಕ ಸ್ವಾತಂತ್ರ್ಯಕ್ಕಿಂತ ಸಮುದಾಯದ ಸಾಮೂಹಿಕ ಹಿತಾಸಕ್ತಿಯೇ ಪ್ರಧಾನ” ಎಂದೇನೂ ಪರಿಗಣಿಸುತ್ತಿಲ್ಲ!

ವಾಸ್ತವವಾಗಿ ಮೋದಿ ಪರವಾದ ಹಲವಾರು ಅಪರಾಧಿಗಳು ಸಮಾಜದ ಹಾಗೂ ದೇಶದ ಭದ್ರತೆ ಹಾಗು ಐಕ್ಯತೆಗೆ ತೀವ್ರವಾಗಿ ಹಾನಿ ಮಾಡಿರುವ ಅಪರಾಧಗಳು ಸಾಕ್ಷಾಧಾರಗಳಿಂದ ಸಾಬೀತಾದ ನಂತರವೂ… ಭಾರತದ ಉಚ್ಚ ಹಾಗೂ ಪರಮೋಚ್ಚ ನ್ಯಾಯಾಲಯಗಳು ಮೋದಿ ಪರವಾದಿಗಳ ಹಿತವನ್ನು “ಸಮುದಾಯದ ಹಿತಕ್ಕಿಂತ ದೇಶದ ಐಕ್ಯತೆ ಮತ್ತು ಭದ್ರತೆಗಿಂತ ಪ್ರಧಾನ” ಎಂದು ಪರಿಗಣಿಸುತ್ತಿವೆಯೇ ಎಂಬ ಸಕಾರಣ ಅನುಮಾನ ಕಳೆದ ಏಳುವರ್ಷಗಳಿಂದ ಈ ದೇಶದ ಜನರನ್ನು ಕಾಡುತ್ತಿದೆ….

ಉದಾಹರಣೆಗೆ:

1.ಗುಜರಾತ್ ಭಯೋತ್ಪಾದನೆಯ ಮಾಯಾ ಕೊಡ್ನಾನಿ

ಮಾಯಾ ಕೊಡ್ನಾನಿ 2002ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಮಂತ್ರಿ. ಆಗ ಮುಖ್ಯಮಂತ್ರಿ ಮೋದಿಯವರ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಕಾರ, ಯೋಜನೆಗಳೊಂದಿಗೆ ನಡೆದ ಮುಸ್ಲಿಮರ ಮಾರಣಹೋಮದಲ್ಲಿ ಮಾಯಾ ಕೊಡ್ನಾನಿ ನೇರವಾಗಿ ಭಾಗವಹಿಸಿದ್ದರು. ಇದು ಅಂದಿನ ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ನಡೆಸಿದ ಸ್ವತಂತ್ರ ತನಿಖೆಗಳಲ್ಲೂ ಸ್ಪಷ್ಟವಾಗಿತ್ತು…

ಅದರಲ್ಲೂ ವಿಶೇಷವಾಗಿ ಅಹಮದಾಬಾದಿನ ನರೋದಾ ಪಾಟಿಯಾದಲ್ಲಿ ಈಕೆಯ ನೇತೃತ್ವದ ಹಿಂದುತ್ವವಾದಿ ಉಗ್ರರ ಗುಂಪು 2002ರ ಫೆಬ್ರವರಿ 28 ರಂದು 97 ಮುಸ್ಲಿಮರ ಕಗ್ಗೊಲೆ ನಡೆಸಿದ್ದು ಸಕಲ ಸಾಕ್ಷಾಧಾರಗಳಿಂದ ಸಾಬೀತಾಗಿತ್ತು. ಬಲಿಯಾದವರಲ್ಲಿ 36 ಜನ ಮಹಿಳೆಯರು…35 ಜನ ಮಕ್ಕಳು!

ಅಪರಾಧ ಸಾಬೀತಾಗಿದ್ದರಿಂದ 2012ರ ಆಗಸ್ಟಿನಲ್ಲಿ ಈಕೆಗೆ 28 ವರ್ಷಗಳ ಶಿಕ್ಷೆಯನ್ನು ವಿಶೇಷ ಕೋರ್ಟು ವಿಧಿಸಿತ್ತು.

ಆದರೆ… ದುರದೃಷ್ಟವಶಾತ್.. 2014ರಲ್ಲಿ ಮೋದಿಯವರು ಪ್ರಧಾನ ಮಂತ್ರಿಯಾದ ಮೇಲೆ ನ್ಯಾಯಾಲಯಗಳಲ್ಲೂ ಸಮುದಾಯದ ಮತ್ತು ದೇಶದ ಹಿತಾಸಕ್ತಿಯ ವ್ಯಾಖ್ಯಾನಗಳು ಬದಲಾಗಿದ್ದರಿಂದ… ಅಪರಾಧ ಸಾಬೀತಾಗಿ ಜೈಲಿನಲ್ಲಿದ್ದ ಮಾಯಾ ಕೊಡ್ನಾನಿ, ಕೇಂದ್ರದಲ್ಲಿ ಮೋದಿ ಪ್ರಧಾನಿಯಾದ ಕೂಡಲೇ ತನಗೆ ಆರೋಗ್ಯ ಸರಿಯಿಲ್ಲವೆಂದು ತನ್ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ಗುಜರಾತಿನ ಹೈಕೋರ್ಟಿಗೆ ಒಂದೇ ಒಂದು ಅರ್ಜಿ ಹಾಕಿಕೊಂಡರು.

ಕೂಡಲೇ ಅದನ್ನು ಪುರಸ್ಕರಿಸಿದ ಗುಜರಾತ್ ಹೈಕೋರ್ಟಿನ ಜಸ್ಟೀಸ್ ಸಹಾಯ್ ಮತ್ತು ಜಸ್ಟೀಸ್ ದೋಹಾರಿಯಾ ಅವರ ದ್ವಿಸದಸ್ಯ ಪೀಠ ಆಕೆಯ “ಅನಾರೋಗ್ಯದ ಕಾರಣಕ್ಕಾಗಿ” ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ಮಾತ್ರವಲ್ಲ, ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಅಮಾನತ್ತು ಮಾಡಿತು! 97 ಅಮಾಯಕರನ್ನು ಕೊಂದ ಅಪರಾಧಿ ಒಂದೂವರೆ ವರ್ಷವೂ ಜೈಲಿನಲ್ಲಿರಲಿಲ್ಲ.

ಈ ಹೊಸ ನ್ಯಾಯವ್ಯಾಖ್ಯಾನಗಳು ಮುಂದುವರೆದು 2018ರಲ್ಲಿ ಇದೆ ಕೋರ್ಟು ಕೊಡ್ನಾನಿಯವರನ್ನು ದೋಷಮುಕ್ತಗೊಳಿಸಿತು.

ಹಾಗಿದ್ದಲ್ಲಿ ನ್ಯಾಯದ ತಕ್ಕಡಿಯಲ್ಲಿ ಬಲಿಯಾದ ಅಮಾಯಕ ಅಲ್ಪಸಂಖ್ಯಾತ ಸಮುದಾಯದ ಹಿತಾಸಕ್ತಿಗೆ ಬೆಲೆ ಇಲ್ಲವೇ?

2.ಸುಪಾರಿ ಭಯೋತ್ಪಾದಕ ಬಾಬು ಭಜರಂಗಿ

ಇದೆ ನರೋಡಾ ಪಾಟಿಯಾದ ಹಾಗು ಗುಜರಾತಿನಲ್ಲಿ ನಡೆದ ಇತರ ಹಿಂದುತ್ವವಾದಿ ನರಸಂಹಾರಗಳ ಸಾಬೀತಾದ ರೂವಾರಿ ಬಾಬು ಭಜರಂಗಿ. ನರೋಡಾ ಪಾಟಿಯಾ ಪ್ರಕರಣದಲ್ಲಿ ಈತನ ಪಾತ್ರವೂ ಸಾಕ್ಷಾಧಾರಗಳಿಂದ ರುಜುವಾತಾಗಿ ಭಜರಂಗಿಗೆ ಅಜೀವ ಕಾರಾಗೃಹ ಶಿಕ್ಷೆಯನ್ನು 2012ರಲ್ಲಿ ವಿಧಿಸಲಾಗಿತ್ತು.

ಆದರೆ … 2012-16ರ ನಡುವೆ ಆತನಿಗೆ, ಹೆಂಡತಿಯ ಅನಾರೋಗ್ಯದ ಹೆಸರಿನಲ್ಲಿ ಮತ್ತು ಆತನದೇ ಅನಾರೋಗ್ಯದ ನೆಪದಲ್ಲಿ 14 ಬಾರಿ ಏಳೇಳು ದಿನಗಳ ತಾತ್ಕಾಲಿಕ ಜಾಮೀನನ್ನು ಕರುಣಾಮಯಿ ಕೋರ್ಟುಗಳು ದಯಪಾಲಿಸಿದ್ದವು!

ಅಷ್ಟು ಮಾತ್ರವಲ್ಲ.. 2019ರ ಮಾರ್ಚ ನಲ್ಲಿ ಜಸ್ಟೀಸ್ ಕಾನ್ವಿಲ್ಕರ್ ನೇತೃತ್ವ ಸುಪ್ರೀಂ ಕೋರ್ಟ್ ಪೀಠ ಅನಾರೋಗ್ಯದ ಕಾರಣವನ್ನು ನೀಡಿ ಬಾಬಾ ಭಜರಂಗಿಗೆ ಪರ್ಮನೆಂಟ್ ಜಾಮೀನನ್ನು ನೀಡಿತು.

ಆದರೇ, ಇದೇ ಮಾನದಂಡವನ್ನು ತಮ್ಮ ಘನನ್ಯಾಯಾಲಯಗಳು ಕೇವಲ ವಿಚಾರಣಾಧೀನ ಆರೋಪಿಗಳಾಗಿದ್ದ, ಜನಪರ ಹೋರಾಟಗಾರರಿಗೆ ಮಾತ್ರ ವಿಸ್ತರಿಸಲಿಲ್ಲ…

ಯುವರ್ ಆನರ್

2014 ರ ನಂತರದ ನ್ಯಾಯಾಲಯಗಳ ತಾರತಮ್ಯ ನೀತಿಯ ಕೆಲವು ಸ್ಯಾಂಪಲ್ ಗಳು:

– ಶೇ. 90ರಷ್ಟು ಅಂಗವೈಕಲ್ಯದಿಂದ ನರಳುತ್ತಾ ಕೋವಿಡ್ ಅನ್ನು ಕೂಡಾ ಅನುಭವಿಸುತ್ತಿರುವ ದೆಹಲಿ ವಿಶ್ವವಿದ್ಯಾಲಯದ ಅಧ್ಯಾಪಕ ಜಿ.ಎನ್ ಸಾಯಿಬಾಬಾ ಅವರು 2020ರಲ್ಲಿ ಅನಾರೋಗ್ಯದಿಂದ ಸಾವಿನ ದವಡೆಯಲ್ಲಿರುವ ತನ್ನ ತಾಯಿಯ ಕೊನೆಯ ದರ್ಶನ ಮಾಡಲು ಹಾಕಿಕೊಂಡ ತಾತ್ಕಾಲಿನ ಜಾಮೀನನ್ನು ಅರ್ಜಿಯನ್ನು ಮಹಾರಾಷ್ಟ್ರ ಹೈಕೋರ್ಟು ತಿರಸ್ಕರಿಸಿತು.

ಅದಾದ ನಾಲ್ಕೇ ದಿನಗಳಲ್ಲಿ ಅವರ ತಾಯಿ ಮೃತರಾದರು. ಈಗ ಸಾಯಿಬಾಬಾ ಅವರೂ ಜೈಲಿನಲ್ಲಿ ಸಾವಿನ ದವಡೆಯಲ್ಲಿದ್ದಾರೆ.

ಕೊಡ್ನಾನಿಗೆ ಭಜರಂಗಿಗೆ ಜಾಮೀನು ಕೊಡುವ ಕೋರ್ಟುಗಳು ಸಾಯಿಬಾಬಾ ಅವರಿಗೆ ಮೆಡಿಕಲ್ ಬೇಲ್ ಅನ್ನು ನಿರಾಕರಿಸುತ್ತಿರುವುದೇಕೆ…. ಯುವರ್ ಆನರ್?

– ಅಪರಾಧವು ಸಾಬೀತಾದ ನಂತರವೂ ಕೊಡ್ನಾನಿ ಮತ್ತು ಭಜರಂಗಿಗಳನ್ನು ಆರೋಗ್ಯದ ಕಾರಣದಿಂದ ‘ಕರುಣೆ ತೋರಿ’ ಬಿಡುಗಡೆ ಮಾಡಿದ ಕೋರ್ಟುಗಳು…..

ಭೀಮ ಕೋರೆಗಾಂವ್ ಪ್ರಕರಣದಲ್ಲಿ ಮಾತ್ರ, ಅಪರಾಧ ಸಾಬೀತಾಗುವುದಿರಲೀ, ವಿಚಾರಣೆಯೂ ಇಲ್ಲದೆ ಜೈಲಿನಲ್ಲಿ ಕೊಳೆಯುತ್ತಿರುದ್ದ ಸಾವಿನ ದವಡೆಯಲ್ಲಿದ್ದ 82 ವಯಸ್ಸಿನ ಖ್ಯಾತ ಕ್ರಾಂತಿಕಾರಿ ಕವಿ ವರವರರಾವ್ ಅವರಿಗೆ ನಿರಂತರವಾಗಿ ಜಾಮೀನು ನಿರಾಕರಿಸಿದ್ದಕ್ಕೆ ಭಿನ್ನ ಮಾನದಂಡಗಳನ್ನು ಅನುಸರಿಸಿದ್ದೇಕೆ?

ಹಲವು ಮಾರಣಾಂತಿಕ ಖಾಯಿಲೆಗಳಿಂದ ನರಳುತ್ತಿರುವ ಅವರಿಗೆ ಕೇವಲ ಆರು ತಿಂಗಳ ಮೆಡಿಕಲ್ ಜಾಮೀನು ನೀಡಿದೆ. ಆ ನಂತರ..ಯುವರ್ ಆನರ್?

– ಅನಾರೋಗ್ಯ ಪೀಡಿತ ಹೆಂಡತಿಯನ್ನು ನೋಡಿಬರಲು ಬಾಬು ಭಜರಂಗಿಗೆ ಎರಡು ವರ್ಷಗಳಲ್ಲಿ 14 ಬಾರಿ ಜಾಮೀನು ನೀಡಿದ ಭಾರತದ ಕೋರ್ಟುಗಳು, ಪಿಂಜರಾ ತೋಡ್ ಹಾಗೂ CAA-NRC ಹೋರಾಟದ ವಿದ್ಯಾರ್ಥಿ ನಾಯಕಿ ನತಾಶಾ ನರ್ವಾಲ್ ಗೆ ಕೋವಿಡ್ ಇಂದ ಕೊನೆ ಉಸಿರು ಎಳೆಯುತ್ತಿದ್ದ ತಂದೆಯನ್ನು ಬದುಕಿರುವಾಗಲೇ ಒಮ್ಮೆಯಾದರೂ ನೋಡಿ ಬರಲು ಕೂಡ ಕೋರ್ಟುಗಳು ಜಾಮೀನು ನೀಡಲಿಲ್ಲ.

ಬಾಬು ಭಜರಂಗಿಗೆ ಒಂದು ಕಾನೂನು.., ನತಾಶಾ ನರ್ವಾಲ್ ಗೆ ಒಂದು ಕಾನೂನೇ… ಯುವರ್ ಆನರ್?

– 84 ವಯಸ್ಸಿನ, ಇತರರ ಸಹಾಯವಿಲ್ಲದೆ ನಡೆಯಲು ಆಗದ ಸ್ಟಾನ್ ಸ್ವಾಮಿಯವರಿಗೆ ಮೆಡಿಕಲ್ ಜಾಮೀನು ನೀಡಿದರೆ ದೇಶದ ಭದ್ರತೆಗೆ ಅಪಾಯ ಎಂಬ ಸರ್ಕಾರದ ವಾದವನ್ನು ಕಣ್ಣುಮುಚ್ಚಿ ಒಪ್ಪಿಕೊಂಡು ಸ್ವಾಮಿಯವರ ಹತ್ಯೆಗೆ ಕಾರಣವಾದ ನ್ಯಾಯಾಲಯ ಮತ್ತು ಸರ್ಕಾರ ರಕ್ಷಿಸುತ್ತಾ ಬಂದಿರುವುದು…

“ಯಾವ ಸಮುದಾಯದ ಯಾವ ಹಿತಾಸಕ್ತಿಯನ್ನು ರಕ್ಷಿಸಲು….ಯುವರ್ ಆನರ್?

ಯುವರ್ ಆನರ್,

ಈ ದೇಶದಲ್ಲಿ ಮೋದಿವಾದಿಗಳಿಗೆ ಒಂದು ಕಾನೂನು? ಜನವಾದಿಗಳಿಗೆ ಒಂದು ಕಾನೂನೇ? ….

ಸ್ಟಾನ್ ಸ್ವಾಮಿಯವರ ಈ ಸಾಂಸ್ಥಿಕ ಹತ್ಯೆಯಿಂದಲಾದರೂ ನ್ಯಾಯಾಂಗದ ಆತ್ಮಾವಲೋಕನ ಪ್ರಾರಂಭವಾಗುವುದೇ?

UAPA ಕಾಯಿದೆಯು ಸಂವಿಧಾನ ದ ಮೂಲರಚನೆಗೆ ವಿರುದ್ದವಾದದ್ದೆಂದು ಈಗಲಾದರೂ ನ್ಯಾಯಾಲಯ ಭಾವಿಸುವುದೇ?

ಸರ್ವಾಧಿಕಾರಿ ಸರ್ಕಾರದ ದಾಳಿಯಿಂದ ಸಂವಿಧಾನವನ್ನು ಉಳಿಸಲು ಪ್ರಯತ್ನವನ್ನಾದರೂ ಮಾಡಬಹುದೇ?

ಯುವರ್ ಆನರ್…..

  • ಶಿವಸುಂದರ್

(ಲೇಖಕರು ಖ್ಯಾತ ಚಿಂತಕರು, ಸಾಮಾಜಿಕ ಹೋರಾಟಗಾರರು. ಅಭಿಪ್ರಾಯಗಳು ವೈಯಕ್ತಿಕವಾದವು)


ಇದನ್ನೂ ಓದಿ: ಸ್ಟ್ಯಾನ್‌ ಸ್ವಾಮಿ ನಿಧನಕ್ಕೆ ಕಾರಣರಾದವರನ್ನು ಇತಿಹಾಸ ಕ್ಷಮಿಸುವುದಿಲ್ಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...