Homeಮುಖಪುಟಸ್ಟ್ಯಾನ್‌ ಸ್ವಾಮಿ ನಿಧನಕ್ಕೆ ಕಾರಣರಾದವರನ್ನು ಇತಿಹಾಸ ಕ್ಷಮಿಸುವುದಿಲ್ಲ

ಸ್ಟ್ಯಾನ್‌ ಸ್ವಾಮಿ ನಿಧನಕ್ಕೆ ಕಾರಣರಾದವರನ್ನು ಇತಿಹಾಸ ಕ್ಷಮಿಸುವುದಿಲ್ಲ

ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮತ್ತು ನಾಗರೀಕರಿಗೆ ಸಲ್ಲಬೇಕಾದ ಹೋರಾಟದ ಅವಕಾಶಗಳನ್ನು ಕುಗ್ಗಿಸುವುದು ಭಾರತದ ಪ್ರಜಾಸತ್ತೆಗೆ ಮಾರಕಪ್ರಾಯವಾಗಿದೆ.

- Advertisement -
- Advertisement -

ಭೀಮಾ ಕೊರೆಗಾಂವ್ ಯುದ್ಧ ಭಾರತದ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿದೆ. ಜನವರಿ 01, 1818ರಲ್ಲಿ ಪೇಶ್ವೆ ಬಾಜಿರಾವ್-2 ಮತ್ತು ಈಸ್ಟ್ ಇಂಡಿಯಾ ಕಂಪನಿಯ ಮಹರ್ ಸೇನೆಗಳ ನಡುವೆ ನಡೆದ ಯುದ್ಧದಲ್ಲಿ ಸುಮಾರು 28 ಸಾವಿರ ಸೈನ್ಯಬಲವನ್ನು ಹೊಂದಿದ್ದ ಪ್ರಭುತ್ವವಾದಿ ಪೇಶ್ವೆ ಬಾಜಿರಾವ್ ಸ್ವಾಭಿಮಾನಿ ದಲಿತ ಮಹರ್ ಸೇನೆಯ 800 ವೀರ ಯೋಧರ ಮುಂದೆ ಸೋಲುಂಡಂತಹ ಘಟನೆ ಐತಿಹಾಸಿಕವಾಗಿ ವಿಶೇಷ ಮಹತ್ವ ಹೊಂದಿದೆ. ಮಹಾರಾಷ್ಟ್ರದ ಪುಣೆ ಬಳಿಯ ಕೋರೆಗಾಂವ್ ಎಂಬಲ್ಲಿ ವಿಜಯದ ಸಂಕೇತವಾಗಿ ಯುದ್ಧ ಸ್ಮಾರಕವನ್ನು ಬ್ರಿಟಿಷರು ಅಂದು ನಿರ್ಮಿಸಿದ್ದರು. ಸುಮಾರು 49 ಜನ ವೀರ ಮಹರ್ ಯೋಧರು ಹುತಾತ್ಮರಾಗಿ ಪ್ರಭುತ್ವದ ವಿರುದ್ಧ ತಮ್ಮ ಶೌರ್ಯವನ್ನು ದಾಖಲಿಸಿದ್ದಾರೆ. ಸ್ಮಾರಕದಲ್ಲಿ ಸಿದನಾಯಕ ಸೇರಿದಂತೆ ಸುಮಾರು 22 ವೀರಯೋಧರ ಹೆಸರನ್ನು ಅಭಿಮಾನಪೂರ್ವಕವಾಗಿ ಮಂಡಿಸಲಾಗಿದೆ. ದಲಿತರ ಸಾಮಾಜಿಕ ನ್ಯಾಯಪರ ಹೋರಾಟಕ್ಕೆ ಕೋರೆಗಾಂವ್ ಯುದ್ಧದ ಗೆಲುವು ಸ್ಪೂರ್ತಿಯೆಂದು ಬಾಬಾ ಸಾಹೇಬ್ ಅಂಬೇಡ್ಕರ್ ಬಣ್ಣಿಸಿದ್ದಾರೆ. ಅವರು ಬದುಕಿರುವ ತನಕ ಪ್ರತಿ ವರ್ಷ ಜನವರಿ 01 ರಂದು ಕೋರೆಗಾಂವ್‌ಗೆ ತೆರಳಿ ಸ್ಮಾರಕಕ್ಕೆ ನಮಿಸುತ್ತಿದ್ದರು. ಅಂದಿನಿಂದ ದೇಶದ ಎಲ್ಲೆಡೆ ಸ್ವಾಭಿಮಾನಿ ದಲಿತರು ಕೋರೆಗಾಂವ್ ಗೆಲುವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಅಲ್ಲದೆ ದೇಶದ ಬಹಳಷ್ಟು ಕಡೆ ಕೋರೆಗಾಂವ್ ಯುದ್ಧ ಸ್ಮಾರಕಗಳನ್ನು ಪ್ರೀತಿಪೂರ್ವಕವಾಗಿ ದಲಿತರು ನಿರ್ಮಿಸಿದ್ದಾರೆ. ಐತಿಹಾಸಿಕ ಮೈಸೂರು ನಗರದ ಅಶೋಕಪುರಂನಲ್ಲಿಯೂ ಕೂಡ ಇಂತಹದೇ ಒಂದು ಸ್ಮಾರಕವಿದ್ದು ಪ್ರತಿವರ್ಷ ಜನವರಿ 01ರಂದು ಸಾವಿರಾರು ದಲಿತರು ಕೋರೆಗಾಂವ್ ಗೆಲುವಿನ ರೂವಾರಿಗಳು ಮತ್ತು ಹುತಾತ್ಮರಿಗೆ ನುಡಿನಮನ ಸಲ್ಲಿಸುತ್ತಾರೆ.

ಡಿಸೆಂಬರ್ 31, 2017ರಂದು ಪುಣೆಯಲ್ಲಿ ಭೀಮಾ ಕೋರೆಗಾಂವ್ ಯುದ್ಧದ ಸ್ಮರಣಾರ್ಥವಾಗಿ ಎಲ್ಗಾರ್ ಪರಿಷತ್ ಎಂಬ ಸ್ವಾಭಿಮಾನಿ ದಲಿತರ ವೇದಿಕೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 260ಕ್ಕೂ ಹೆಚ್ಚು ಸಂಘಟನೆಗಳು ಭಾಗವಹಿಸಿದ್ದವು. ಲಕ್ಷಾಂತರ ಜನ ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಸಮಾವೇಶದಲ್ಲಿ ಆನಂದ ತೇಲ್‌ತುಂಬ್ಡೆ, ಗೌತಮ್ ನೌಲಖ, ಸ್ಟ್ಯಾನ್‌ಸ್ವಾಮಿ ಮೊದಲಾದ ಸುಮಾರು 15 ಮಂದಿ ಸಮಾನತೆಯ ಹರಿಕಾರರು ಭಾಗವಹಿಸಿ ಬುದ್ಧ, ಫುಲೆ, ಅಂಬೇಡ್ಕರ್, ಪೆರಿಯಾರ್ ಮೊದಲಾದ ಮಹಾತ್ಮರು ಕಂಡ ಪ್ರಬುದ್ಧ ಭಾರತ ಕನಸನ್ನು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನನಸು ಮಾಡಬೇಕೆಂದು ಕರೆ ನೀಡಿದರು. ಇದರಿಂದ ಕುಪಿತಗೊಂಡ ಸಂಘ ಪರಿವಾರಿಗಳು ಕೋರೆಗಾಂವ್ ಯುದ್ಧದ ಐತಿಹಾಸಿಕ ಮಹತ್ವಕ್ಕೆ ಕಳಂಕ ತರಲು ದುರುದ್ದೇಶ ಪೂರ್ವಕವಾಗಿ ಹಿಂಸಾಚಾರ ನಡೆಸಿದರು. ತದನಂತರ ಪ್ರಬಲರು ಮತ್ತು ದಲಿತರ ನಡುವಣ ಸಂಘರ್ಷದಲ್ಲಿ ಅನೇಕ ಜನ ಮುಗ್ಧ ದಲಿತರು ಪ್ರಾಣ ಕಳೆದುಕೊಂಡಿದ್ದರು. ಅಂದು ಕೇಂದ್ರ ಹಾಗೂ ಮಹಾರಾಷ್ಟ್ರಗಳಲ್ಲಿ ಆಡಳಿತ ನಡೆಸುತ್ತಿದ್ದ ಸಂಘ ಪರಿವಾರಿಗಳ ನೇತೃತ್ವದ ಸರ್ಕಾರಗಳು ಬಲಾಢ್ಯರ ಪರವಾಗಿ ನಿಂತು ದಲಿತರನ್ನು ಹೀನಾಯವಾಗಿ ಕಡೆಗಣಿಸಿದರು. ಈ ಘಟನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗೊಳಗಾಗಿ ಭಾರತವು ಮಾನವ ಹಕ್ಕುಗಳ ಉಲ್ಲಂಘನೆಯ ದೇಶವೆಂಬ ಕಳಂಕ ಹೊಂದಲು ಕಾರಣವಾಯಿತು.

PC : The Print

ಫಾದರ್ ಸ್ಟ್ಯಾನ್‌ಸ್ವಾಮಿ ಆದಿವಾಸಿಗಳ ಮಾನವ ಹಕ್ಕುಗಳ ಅಪ್ರತಿಮ ಹೋರಾಟಗಾರರೆಂದು ಭಾರತದ ಇತಿಹಾಸದಲ್ಲಿ ಗೌರವಿಸಲ್ಪಟ್ಟಿದ್ದಾರೆ. ಆದಿವಾಸಿಗಳ ಭೂಮಿಯ ಹಕ್ಕು, ಶಿಕ್ಷಣ ಹಕ್ಕು, ಆರೋಗ್ಯ ಹಕ್ಕು, ಉದ್ಯೋಗ ಹಕ್ಕು, ಸಾಮಾಜಿಕ ಸುರಕ್ಷತೆ, ಒಳಗೊಳ್ಳುವ ಅಭಿವೃದ್ಧಿ ಮೊದಲಾದ ಮಹತ್ವದ ವಿಷಯಗಳನ್ನು ಕೈಗೊಂಡು ಉತ್ತರ ಭಾರತದಲ್ಲಿ ಇವರು ನಡೆಸಿದ ಹೋರಾಟ ಅಪ್ರತಿಮವಾದುದು. ಇವರು ಬದುಕಿನುದ್ದಕ್ಕೂ ಮಾನವತಾವಾದಿಯಾಗಿ ಆದಿವಾಸಿಗಳ ಹಕ್ಕುಗಳಿಗಾಗಿ ಮಹಾಶ್ವೇತಾದೇವಿಯವರ ಜೊತೆಗೆ ಕೈಜೋಡಿಸಿ ಅಹರ್ನಿಸಿ ದುಡಿದರು. ಇವರ ಬದುಕು, ಹೋರಾಟ ಮತ್ತು ಕೊಡುಗೆಗಳು ತೆರೆದ ಪುಸ್ತಕವೆಂದೇ ನಿರ್ಭಿಡೆಯಿಂದ ಹೇಳಬಹುದು. ಇವರು 2017ರಲ್ಲಿ ಕೋರೆಗಾಂವ್ ಯುದ್ಧದ ಸ್ಮರಣಾರ್ಥ ಎಲ್ಗಾರ್ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ದಲಿತರು, ಆದಿವಾಸಿಗಳು ಮತ್ತು ಶೋಷಿತ ವರ್ಗಗಳಲ್ಲಿ ಜನಜಾಗೃತಿ ಮೂಡಿಸಿದರೇ ಹೊರತಾಗಿ ಯಾವುದೇ ರೀತಿಯ ಹಿಂಸಾಚಾರಕ್ಕೆ ಪ್ರೇರಣೆ ನೀಡಲಿಲ್ಲ. ಆದಿವಾಸಿಗಳು ಇಂದಿಗೂ ಇವರನ್ನು ಮಹಾನ್ ಶಾಂತಿಧೂತ ಮತ್ತು ಮಾನವತಾವಾದಿಯೆಂದು ಗೌರವಿಸುತ್ತಾರೆ.

ಫಾದರ್ ಸ್ಟ್ಯಾನ್‌ಸ್ವಾಮಿ ವಿರುದ್ಧ ಆಗಸ್ಟ್ 22, 2018ರಂದು ಪುಣೆ ಪೊಲೀಸರು ಭಯೋತ್ಪಾದನೆಗೆ ಪ್ರೇರಣೆ ನೀಡಿದರೆಂದು ಎಫ್‌ಐಆರ್ ದಾಖಲಿಸಿದರು. ಅಕ್ಟೋಬರ್ 26, 2018ರಂದು ಮಹಾರಾಷ್ಟ್ರ ಉಚ್ಛನ್ಯಾಯಾಲಯ ಇವರನ್ನು ಬಂಧಿಸಬಾರದೆಂದು ತೀರ್ಪು ನೀಡಿತು. ಅಕ್ಟೋಬರ್ 08, 2020ರಂದು ಭಾರತ ಸರ್ಕಾರದ ಎನ್‌ಐಎ ಬಂಧಿಸಿ ಅವರನ್ನು ತಾಲೋಜ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿತು. ಅಕ್ಟೋಬರ್ 23, 2020ರಂದು ಎನ್‌ಐಎ ವಿಶೇಷ ನ್ಯಾಯಾಲಯ ಆರೋಗ್ಯ ಕಾರಣದ ಹಿನ್ನೆಲೆಯಲ್ಲಿ ಜಾಮೀನು ನಿರಾಕರಿಸಿತು. ನವೆಂಬರ್ 06, 2020ರಂದು ಅವರು ಮಾನವೀಯ ನೆಲೆಗಟ್ಟಿನಲ್ಲಿ ತನಗೆ ಒಣಹುಲ್ಲಿನ ಹಾಸಿಗೆ ಮತ್ತು ವೈದ್ಯಕೀಯ ಪರಿಕರಗಳನ್ನು ಒದಗಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಆದರೆ ನವೆಂಬರ್ 26, 2020ರಂದು ಎನ್‌ಐಎ ತನ್ನ ಬಳಿ ಇಂತಹ ಸೌಲಭ್ಯಗಳಿಲ್ಲವೆಂದು ನಿರಾಕರಿಸಿತು. ಆದಾಗ್ಯೂ ಡಿಸೆಂಬರ್ 04, 2020ರಂದು ಈ ಸೌಲಭ್ಯಗಳು ಪ್ರಜ್ಞಾವಂತರ ಹಸ್ತಕ್ಷೇಪದಿಂದಾಗಿ ಲಭಿಸಿದವು.

ಫಾದರ್ ಸ್ಟ್ಯಾನ್‌ಸ್ವಾಮಿ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಮಾರ್ಚ್ 22, 2021ರಂದು ಎನ್‌ಐಎ ನ್ಯಾಯಾಲಯ ಇವರ ಆರೋಗ್ಯ ಕೇಂದ್ರಿತ ಜಾಮೀನು ಮನವಿಯನ್ನು ಸಮರ್ಪಕ ಪರಿಶೀಲನಗೆ ಒಳಪಡಿಸದೇ ತಿರಸ್ಕರಿಸಿತು. ಏಪ್ರಿಲ್ 26, 2021ರಂದು ತಾಲೋಜ ಸೆರೆಮನೆಗೆ ತೆರಳಿದ ನಂತರ ಅವಶ್ಯಕ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಇವರ ಅನಾರೋಗ್ಯ ಮತ್ತಷ್ಟು ಹೆಚ್ಚಾದ ಕಾರಣ ತಮಗೆ ಜಾಮೀನು ನೀಡಬೇಕೆಂದು ಮುಂಬಯಿ ಉಚ್ಛನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಮೇ 21, 2021ರಂದು ಮುಂಬಯಿನ ಜೆಜೆ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಇವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಇವರಿಗೆ ಕಾಲುಗಳು ಸ್ವಾಧೀನವಿಲ್ಲದೆ ನಡುಗುತ್ತವೆ, ಎರಡೂ ಕಿವಿಗಳು ಕೇಳಿಸುವುದಿಲ್ಲ, ದೈಹಿಕವಾಗಿ ಅಶಕ್ತರು, ಆಗಾಗ್ಗೆ ಬೇಧಿ ಉಂಟಾಗುವುದು, ತೀವ್ರ ಬೆನ್ನು ನೋವು ಮೊದಲಾದ ಗಂಭೀರ ಆರೋಗ್ಯ ಸಮಸ್ಯೆಗಳಿರುವುದನ್ನು ವರದಿ ಮಾಡಿತು. ಇವರಿಗೆ ಸೆರೆಮನೆಯಲ್ಲಿ ನಡೆದಾಡಲು ಊರುಗೋಲು, ಸಹಾಯಕರು, ಗಾಲಿಕುರ್ಚಿ ಮೊದಲಾದವುಗಳನ್ನು ಒದಗಿಸಬೇಕೆಂದು ತಿಳಿಸಿತು.

ಮೇ 28, 2021ರಂದು ಮುಂಬಯಿ ಉಚ್ಛನ್ಯಾಯಾಲಯದ ಎಸ್.ಜೆ.ಕಥಾವಲ್ಲ ಮತ್ತು ಎಸ್.ಪಿ.ಥಾವಡೆ ವಿಭಾಗೀಯ ಪೀಠ ಫಾದರ್ ಸ್ಟ್ಯಾನ್‌ಸ್ವಾಮಿಯವರು ದೈಹಿಕವಾಗಿ ತುಂಬಾ ದುರ್ಬಲರು ಮತ್ತು ಕಿವಿಗಳು ಸರಿಯಾಗಿ ಕೇಳಿಸದ ಕಾರಣ ಅವರನ್ನು ಒಂದು ಒಳ್ಳೆಯ ಆಸ್ಪತ್ರೆಗೆ ಸೇರಿಸಬೇಕೆಂದು ಸೂಚಿಸಿತು. ಇವರು ಯಾವುದೋ ಒಂದು ನಾಮ್ ಕೆ ವಾಸ್ತೆ ಆಸ್ಪತ್ರೆಯಲ್ಲಿ ಸಾಯುವುದಕ್ಕಿಂತ ಸೆರೆಮನೆಯಲ್ಲಿ ಸಾಯುವುದೇ ಲೇಸು ಎಂದು ನ್ಯಾಯಾಲಯಕ್ಕೆ ಮಂಡಿಸಿದರು. ಆದಾಗ್ಯೂ ಇವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಉತ್ತಮ ಚಿಕಿತ್ಸೆಗಾಗಿ ಸೇರಿಸಬೇಕೆಂದು ಉಚ್ಛನ್ಯಾಯಾಲಯ ತೀರ್ಮಾನಿಸಿತು. ಮೇ 30, 2021ರಂದು ಇವರು ಕೋವಿಡ್-19 ಸೋಂಕಿಗೆ ಗುರಿಯಾದರು. ಜೂನ್ 17, 2021ರಂದು ಉಚ್ಛನ್ಯಾಯಾಲಯ ಇವರನ್ನು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆಗಾಗಿ ಉಳಿಸಬೇಕೆಂಬ ತೀರ್ಪು ನೀಡಿತು. ಜುಲೈ 04, 2021ರಂದು ಇವರಿಗೆ ತೀವ್ರ ಹೃದಯಾಘಾತವಾದ ಕಾರಣ ಇವರನ್ನು ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಸೌಲಭ್ಯದಲ್ಲಿ ಇಡಲಾಯಿತು. ಜುಲೈ 05, 2021ರಂದು ಇವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. ಈ ಘಟನೆಗಳಿಂದ 84 ವಯಸ್ಸಿನ ವಯೋವೃದ್ಧ ಮತ್ತು ಅಪ್ರತಿಮ ಮಾನವ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್‌ಸ್ವಾಮಿ ಜೈಲುವಾಸ, ಅವರು ಜೈಲಿನಲ್ಲಿ ಅನುಭವಿಸಿದ ಯಾತನೆ, ಅವರಿಗೆ ಜಾಮೀನು ನಿರಾಕರಣೆಯಿಂದ ಉಂಟಾದ ಆರೋಗ್ಯ ಸಮಸ್ಯೆ ಮತ್ತು ಅವರು ಲೋಕಕ್ಕೆ ವಿದಾಯ ಹೇಳಿದ ಅಮಾನವೀಯ ಪರಿಸರ ಸ್ಪಷ್ಟವಾಗಿ ತಿಳಿದು ಬರುತ್ತದೆ.

PC : Asia News

ವಿಶ್ವಸಂಸ್ಥೆಯ ಮಾನವಹಕ್ಕುಗಳ ವಿಶೇಷ ಪ್ರತಿನಿಧಿಗಳಾದ ಮೇರಿ ಲಾಲರ್ ಮತ್ತು ಇಮಾನ್ ಗಿಲ್ಮೋರ್ ಎಂಬುವರು ಫಾದರ್ ಸ್ಟ್ಯಾನ್‌ಸ್ವಾಮಿ ಅವರನ್ನು ಭಯೋತ್ಪಾದನೆಯ ಸುಳ್ಳು ಅಪಾದನೆ ಮೇರೆಗೆ ಸ್ಥಾಪಿತ ಹಿತಾಸಕ್ತಿಗಳು ಅಮಾನುಷವಾಗಿ ಸೆರೆಮನೆಗೆ ದಬ್ಬಿದವು ಎಂದು ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುಗುಣವಾಗಿ ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸಿ ಇತಿಹಾಸದ ಬಗ್ಗೆ ಜನಜಾಗೃತಿ ಮೂಡಿಸಿದ ವ್ಯಕ್ತಿಗೆ ಇಂತಹ ಸ್ಥಿತಿ ಬರಬಾರದಾಗಿತ್ತು. ಇವರನ್ನು ಅಮಾನುಷವಾಗಿ ನಡೆಸಿಕೊಂಡು ಕೊಂದವರೇ ನಿಜವಾದ ಅರ್ಥದಲ್ಲಿ ಭಯೋತ್ಪಾದಕರು. ಇವರನ್ನು ಇತಿಹಾಸ ಖಂಡಿತ ಕ್ಷಮಿಸುವುದಿಲ್ಲ.

ಫಾದರ್ ಸ್ಟ್ಯಾನ್‌ಸ್ವಾಮಿ ಅಮಾನುಷ ಸಾವಿನ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಮೈಕೆಲ್ ಬ್ಯಾಚೆಲೆಟ್ ಕೋರೆಗಾಂವ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಎಲ್ಲ 15 ಮಂದಿ ಪ್ರಗತಿಪರ ಚಿಂತಕರು ಮತ್ತು ಮಾನವ ಹಕ್ಕುಗಳ ಹೋರಾಟಗಾರರನ್ನು ಪೂರ್ವ ವಿಚಾರಣೆಯ ಬಂಧನದಿಂದ ಬಿಡುಗಡೆ ಮಾಡಬೇಕೆಂದು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ವ್ಯವಸ್ಥೆಯ ಲೋಪದೋಷಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಪ್ರವೃತ್ತಿಗಳನ್ನು ವಿಶ್ಲೇಷಿಸುವ ಮತ್ತು ವಿರೋಧಿಸುವ ಪ್ರಜ್ಞಾವಂತರ ವಿರುದ್ಧ ದೇಶದ್ರೋಹ ಕಾಯ್ದೆಯನ್ವಯ ಸುಳ್ಳು ಕೇಸುಗಳನ್ನು ದಾಖಲಿಸಿ ಸೆರೆಮನೆಗೆ ದಬ್ಬುವುದು ಸಾಮಾನ್ಯವಾಗಿದೆ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮತ್ತು ನಾಗರೀಕರಿಗೆ ಸಲ್ಲಬೇಕಾದ ಹೋರಾಟದ ಅವಕಾಶಗಳನ್ನು ಕುಗ್ಗಿಸುವುದು ಭಾರತದ ಪ್ರಜಾಸತ್ತೆಗೆ ಮಾರಕಪ್ರಾಯವಾಗಿದೆ. ಇಡೀ ವಿಶ್ವ ಭಾರತದಲ್ಲಿ ಕೋವಿಡ್-19 ಸಂಕಷ್ಟದ ಬೇಜವಾಬ್ದಾರಿಯುತ ನಿರ್ವಹಣೆ, ಲಕ್ಷಾಂತರ ವಲಸೆಗಾರರ ಗೋಳು, ವೈದ್ಯಕೀಯ ಸೌಲಭ್ಯವಿಲ್ಲದೆ ಅಮಾಯಕರ ಸಾವು, ಹಸಿವು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಹೆಚ್ಚುತ್ತಿರುವ ಬೆಲೆ ಏರಿಕೆ ಮತ್ತು ಶ್ರೀಸಾಮಾನ್ಯರ ಸಂಕಷ್ಟಗಳನ್ನು ಗಂಭೀರವಾಗಿ ಗಮನಿಸುತ್ತಿದೆ. ಮಾನವ ಹಕ್ಕುಗಳಿಗಾಗಿ ಬದುಕಿನುದ್ದಕ್ಕೂ ಹೋರಾಡುವ ಫಾದರ್ ಸ್ಟ್ಯಾನ್‌ಸ್ವಾಮಿ ಅಂಥವರಿಗೆ ಭಾರತದಲ್ಲಿ ಲಭಿಸುತ್ತಿರುವ ಸಾವು-ನೋವು ಭಾರತ ಗಣತಂತ್ರದ ಘನತೆಯನ್ನು ತಗ್ಗಿಸಿದೆ. ಮತ್ತೊಂದು ಅಹಿಂಸಾತ್ಮಕ ಹಾಗೂ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರಜ್ಞಾವಂತ ಭಾರತೀಯರು ಸಜ್ಜುಗೊಳ್ಳಬೇಕಾಗಿದೆ.

  • ಡಾ.ಬಿ.ಪಿ.ಮಹೇಶ ಚಂದ್ರ ಗುರು

(ಲೇಖಕರು ವಿಶ್ರಾಂತ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಮೈಸೂರು ವಿಶ್ವವಿದ್ಯಾಲಯ. ಅಭಿಪ್ರಾಯಗಳು ಲೇಖಕರವು)


ಇದನ್ನೂ ಓದಿ: ಬಹುಜನ ಭಾರತ; ಸ್ಟ್ಯಾನ್ ಸ್ವಾಮಿಯವರ ಬಲಿ ಪಡೆದದ್ದು ಬಲಪಂಥೀಯ ಸೈದ್ಧಾಂತಿಕ ದ್ವೇಷ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....