Homeಮುಖಪುಟಎನ್‌ಸಿಇಆರ್‌ಟಿಯ ಆಘಾತಕಾರಿ ಕ್ರಮದ ಹೊರತಾಗಿಯೂ, ಜೀವಂತವಾಗಿರುವ ಗಾಂಧಿ

ಎನ್‌ಸಿಇಆರ್‌ಟಿಯ ಆಘಾತಕಾರಿ ಕ್ರಮದ ಹೊರತಾಗಿಯೂ, ಜೀವಂತವಾಗಿರುವ ಗಾಂಧಿ

- Advertisement -
- Advertisement -

ಗಾಂಧಿ ಹತ್ಯೆಯ ವಿಷಯವನ್ನು ಎನ್‌ಸಿಇಆರ್‌ಟಿಯ ಇತಿಹಾಸ ಪಠ್ಯ ಪುಸ್ತಕದಿಂದ ತೆಗೆದುಹಾಕುವ ನಿರ್ಧಾರದಿಂದಷ್ಟೇ ಮಹಾತ್ಮರ ನೆನಪನ್ನು ಅಳಿಸಲಾಗದು.

ಕಾಲು ಶತಮಾನಕ್ಕೆ ಮೊದಲು ನಾನು ಗುಜರಾತಿನ ಬರೋಡದಲ್ಲಿ ಭಿಕ್ಷುಕರ ವಿಷಯದಲ್ಲಿ ಅವರ ಜೊತೆಗೆ ಕೆಲಸ ಮಾಡುತ್ತಿದ್ದೆ. ಆರಂಭದಲ್ಲಿ ನಾನು ನಗರದಲ್ಲಿ ಎಷ್ಟು ಮಂದಿ ಭಿಕ್ಷುಕರು ಇದ್ದಾರೆ ಮತ್ತು ಅವರು ಒಂದು ಸಮುದಾಯವಾಗಿ ಹೇಗೆ ರೂಪುಗೊಂಡಿದ್ದಾರೆ ಎಂದು ತಿಳಿದುಕೊಳ್ಳಲು ಯತ್ನಿಸುತ್ತಿದ್ದೆ. ಇದರಿಂದಾಗಿ ನನಗೆ ಅವರಲ್ಲಿ ಹಲವರ ಜೊತೆಗೆ ಆಳವಾದ ಗೆಳೆತನ ಹೊಂದುವುದು ಸಹಜವಾಗಿತ್ತು. ಬೇಸಿಗೆಯಲ್ಲಿ ಬಿಸಿಲಿನ ಝಳ ತಡೆಯಲಾಗದೇ ಸಮಯ ಕಳೆಯಲೆಂದು ಅವರು ಆಗಾಗ ನನ್ನ ಕಚೇರಿಗೆ ಬಂದು, ಅಂಚೆಯ ಲಕೋಟೆಗೆ ಗೋಂದು ಅಂಟಿಸುವುದು, ಕುರ್ಚಿ ಮೇಜು ಒರೆಸುವುದು ಮುಂತಾದ ಚಿಕ್ಕಪುಟ್ಟ ಕೆಲಸಗಳಲ್ಲಿ ನನಗೆ ನೆರವಾಗುತ್ತಿದ್ದರು.

ಅವರಲ್ಲಿ ಮೂಲತಃ ಆಂಧ್ರಪ್ರದೇಶದವರಾದ ವಯಸ್ಸಾದ ಮಹಿಳೆಯೊಬ್ಬರು ಇದ್ದರು. ಕೆಲಸ ಮಾಡುತ್ತಿದ್ದ ಅವರ ಗಂಡುಮಕ್ಕಳು ಅವರನ್ನು ತೊರೆದುಬಿಟ್ಟಿದ್ದರು. ಆಕೆಗೆ ಓದು ಬರಹ ಗೊತ್ತಿರಲಿಲ್ಲ ಮತ್ತು ದೀರ್ಘ ಸಂಭಾಷಣೆಯೂ ಆಕೆಗೆ ಇಷ್ಟವಿರಲಿಲ್ಲ. ಒಂದು ದಿನ ಆಕೆ ಕುರ್ಚಿಯಲ್ಲಿ ಕುಳಿತಿದ್ದಾಗ, ನಾನು ಗೋಡೆಯಲ್ಲಿದ್ದ ಒಂದು ಚಿತ್ರವನ್ನು ತೋರಿಸಿ, “ಈ ಮನುಷ್ಯ ಯಾರೆಂದು ಗೊತ್ತೆ?” ಎಂದು ಕೇಳಿದೆ. ಒಂದು ಕ್ಷಣವೂ ತಡವರಿಸದೇ ಆಕೆ ಹೇಳಿದರು: “ಮಹಾತ್ಮಾ ಗಾಂದಿ.” ನಿಜವಾಗಿಯೂ ಹೇಳುತ್ತೇನೆ: ಆಕೆಗೆ ಅವರ್‍ಯಾರೆಂದು ಗೊತ್ತಿರಬಹುದು ಎಂದು ನಾನು ನಿರೀಕ್ಷಿಸಿಯೇ ಇರಲಿಲ್ಲ; ಯಾಕೆಂದರೆ, ಆಕೆ ಶಾಲೆಯ ಮೆಟ್ಟಲೇ ಹತ್ತಿದವರಲ್ಲ. ನನಗೆ ಆಶ್ಚರ್ಯವಾಗಿತ್ತು. ಆದರೆ, ನನಗೆ ಹೆಚ್ಚು ಆಶ್ಚರ್ಯ ಆದದ್ದು ಯಾವಾಗೆಂದರೆ, ಆಕೆ ಆ ವ್ಯಕ್ತಿ ಹತ್ತಿರದ ವ್ಯಕ್ತಿ ಎಂಬಂತೆ ವಿವರವಾಗಿ ಉದ್ದಕ್ಕೆ ಮಾತನಾಡಿದಾಗ- ಆಕೆ ಗಾಂಧಿ ಬಗ್ಗೆ ಮಾತುಗಳನ್ನು ಕೊನೆಗೊಳಿಸಿದ್ದು ಹೀಗೆ: “ಒಬ್ಬ ನಿಜವಾದ ಮನುಷ್ಯ, ಬೇರೆಯವರೆಲ್ಲ ನಕಲಿ.”

ಮಹಾತ್ಮ ಗಾಂಧಿ

ಗಾಂಧಿಯೊಳಗೆ ಇದ್ದಿದ್ದಾದರೂ ಏನು- ಭಾರತದ ಆತ್ಮವನ್ನೇ ತಟ್ಟುವಂತದ್ದು?- ಪ್ರತೀ ಭಾರತೀಯನೊಳಗಿನ ಅರೆ ಪ್ರಜ್ಞೆ ತಾನೇ ಎಂಬಂತೆ ನೆಲೆಯಾಗಿ ಉಳಿದಿರುವಂತದ್ದು? ಈ ಘಟನೆ ಗಾಂಧಿ ಮರಣವಾಗಿ 55 ವರ್ಷಗಳ ನಂತರ ನಡೆದದ್ದು. ಇಷ್ಟು ಕಾಲಾನಂತರದಲ್ಲಿಯೂ, ಆ ಗುಜರಾತಿನಲ್ಲಿ ಬದುಕುತ್ತಿರುವ ಆಂಧ್ರದ ಹೆಣ್ಣು ಮತ್ತು ಆತನ ಸಾಮಾಜಿಕ ಅಂತರಗಳ ನಡುವೆಯೂ- ಯಾವುದೇ ಪರಿಚಯ ಮಾಡಿಕೊಡುವ ನೆಲೆ ಅಥವಾ ಆಂಕರ್ ಅಗತ್ಯ ಇಲ್ಲದೇ, ನಡುವೆ ಒಬ್ಬ ಅರ್ಥ ಮಾಡಿಸುವ ಮಧ್ಯವರ್ತಿ ಇಲ್ಲದೇ, ಅವರನ್ನು ಎತ್ತಿ ಕೊಂಡಾಡುವ ಒಂದು ವಾಟ್ಸಪ್ ಕಾರ್ಖಾನೆ ಇಲ್ಲದೇ, ಅವನ್ಯಾಕೆ ಆಕೆಯ ಎದೆಯಲ್ಲಿ ಅಂಟಿಕೊಂಡ?

ನೈತಿಕ ಮೌಲ್ಯಗಳು

“ಒಬ್ಬ ಮನುಷ್ಯ ಮಾತಾಡುತ್ತಾನೆ; ಮತ್ತೆ ಮತ್ತೆ ಮಾತಾಡುತ್ತಾನೆ ಎಂಬ ಕಾರಣಕ್ಕೇ ಆತನನ್ನು ವಿವೇಕಿ ಎಂದು ಕರೆಯಲಾಗದು. ಆದರೆ, ಆತ ಶಾಂತಿಯುತನಾಗಿ ಇದ್ದರೆ, ಪ್ರೀತಿಸುವವನಾಗಿ ಇದ್ದರೆ, ಆಗ ಮಾತ್ರವೇ ಆತನನ್ನು ನಿಜವಾಗಿಯೂ ವಿವೇಕಿ ಎಂದು ಕರೆಯಬಹುದು” ಎಂಬುದು ಗೌತಮಬುದ್ಧರ ಎಲ್ಲರಿಗೂ ಗೊತ್ತಿರುವ ಮಾತುಗಳು. ಈ ಮಾತುಗಳ ಶಾಶ್ವತತೆಗೆ ಒಂದು ಅತ್ಯಂತ ಅಪೂರ್ವ ಉದಾಹರಣೆ ಎಂದರೆ, ಮೋಹನದಾಸ ಗಾಂಧಿಯ ಜೀವನ- ಮತ್ತು ಬುದ್ಧನ ನಂತರದ ಎರಡೂವರೆ ಸಹಸ್ರಮಾನದ ಬಳಿಕ- ಆತ ಭಾರತೀಯ ಉಪಖಂಡದಲ್ಲಿ ಸ್ಥಾಪಿಸಿದ ನೈತಿಕ ಮೌಲ್ಯಗಳು. ಗಾಂಧಿ ಭಾರತೀಯ ರಾಜಕೀಯ ಚಿತ್ರಣಕ್ಕೆ ಕಾಲಿಡುವ ಮೊದಲೇ ಒಂದು ದಂತಕತೆಯಾಗಿದ್ದರು- ಅವರನ್ನು ಕ್ರೂರವಾಗಿ ಕೊಲೆ ಮಾಡುವ ಸಮಯಕ್ಕೆ ಜೀವಂತ ಪುರಾಣವಾಗಿಹೋಗಿದ್ದರು. ಅವರು ರಾಜಕೀಯ ಸಿದ್ಧಾಂತ ಅಥವಾ ನೈತಿಕತೆಗಳ ಬಗ್ಗೆ ಭಾರೀ ಪುಸ್ತಕಗಳನ್ನು ಬರೆದರೆಂದರಲ್ಲ- ಆದರೂ ಅವರ ಚಿಂತನೆಗಳು ಕೋಟ್ಯಂತರ ಜನರನ್ನು ಮುಟ್ಟಿವೆ ಮತ್ತು ಆಗಣಿತ ಜನರ ಜೀವನವನ್ನು ಬದಲಾಯಿಸಿದೆ.

ಗಾಂಧಿಯವರ ಮಾಂತ್ರಿಕತೆ ಎಂದರೆ, ಅದು ಅವರ ಅಗಾಧ ನೈತಿಕ ಅಧಿಕಾರದಿಂದ ಹುಟ್ಟಿರಲಿ, ಅಥವಾ ಆಕಸ್ಮಿಕವಾದ ಅವರ ಐತಿಹಾಸಿಕ ಸ್ಥಾನದ ಕಾರಣದಿಂದಲೇ ಇರಲಿ- ಅದು ಆವರ ಜೀವನ ಚರಿತ್ರಕಾರರ, ವಿಮರ್ಶಕರ, ಹಿಂಬಾಲಕರ ಮತ್ತವರ ವಿಷಕಾರಿ ಟೀಕಾಕಾರರು, ನಿಂದಕರನ್ನೂ ತಟ್ಟದೇ ಬಿಟ್ಟಿಲ್ಲ. ಖಂಡಿತವಾಗಿಯೂ ಅವರ ಹೆಸರನ್ನು ಕಳೆದ ನೂರು ವರ್ಷಗಳಲ್ಲಿ ಎಷ್ಟು ವಿದ್ವಾಂಸರ ಪುಸ್ತಕಗಳಲ್ಲಿ, ಪ್ರಬಂಧಗಳಲ್ಲಿ, ಸಾರ್ವಜನಿಕ ಉಪನ್ಯಾಸ, ಭಾಷಣಗಳಲ್ಲಿ, ರಾಜಕೀಯ ಬೋಧನೆಗಳಲ್ಲಿ, ನಾಟಕೀಯ ಚಿತ್ರಣಗಳಲ್ಲಿ, ಚಲನಚಿತ್ರಗಳಲ್ಲಿ, ಕಲಾಕೃತಿಗಳಲ್ಲಿ, ಕೌಟುಂಬಿಕ ಮಾತುಕತೆಗಳಲ್ಲಿ ಮತ್ತು ಕೋಟ್ಯಂತರ ಜನರ ಯೋಚನೆಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಲೆಕ್ಕಹಾಕಲೇ ಸಾಧ್ಯವಿಲ್ಲ.

ಇದನ್ನೂ ಓದಿ: ಕಂಗೆಡುತ್ತಿರುವ ಪ್ರಜಾಪ್ರಭುತ್ವ ಮತ್ತು ಬೆದರಿದ ರಾಜಕೀಯಕ್ಕೆ ಬಲಿಪಶುಗಳಾದ ಪಠ್ಯಪುಸ್ತಕಗಳು

ಯಾವುದೇ ನಾಯಕ, ಚಿಂತಕ, ಕಾರ್ಯಕರ್ತ, ಸಂತ, ಕಲಾವಿದ, ಕ್ರೀಡಾಳು, ವಿಜ್ಞಾನಿ, ರಾಜಮಹಾರಾಜರು ಅಥವಾ ಬರಹಗಾರರ ಗಾಂಧಿಯವರ ಹಲವು ಆಯಾಮಗಳು ಪಡೆದ ಪ್ರಸಿದ್ಧಿಯ ಮಟ್ಟಕ್ಕೆ ತಲುಪಲು ಸಾಧ್ಯವಾಗಿಲ್ಲ.

ಒಬ್ಬ ಕೊಲೆಗಾರನ ಗುಂಡುಗಳಿಂದ ಗಾಂಧಿ ಸತ್ತ ಬಳಿಕ ಇಡೀ ಪ್ರಪಂಚವೇ ಈ ಕೃತ್ಯದ ಕ್ರೌರ್ಯದಿಂದ ಸ್ಥಂಭೀಭೂತವಾಯಿತು. ಹಲವಾರು ಸಂಪುಟಗಳಲ್ಲಿ ಮುದ್ರಿಸಬಹುದಾದಷ್ಟು ಶ್ರದ್ಧಾಂಜಲಿ ಪ್ರತಿಕ್ರಿಯೆಗಳು ವ್ಯಕ್ತವಾದವು. ಅವುಗಳಲ್ಲಿ ಅತ್ಯುತ್ತಮವಾದುದು ಎಂದರೆ, 20ನೇ ಶತಮಾನದ ಅಪ್ರತಿಮ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಅವರಿಂದ ಬಂದದ್ದು. ಇಂತಹ ಒಬ್ಬ ಮನುಷ್ಯ ರಕ್ತ ಮಾಂಸಗಳ ಜೊತೆ ಈ ಭೂಮಿಯಲ್ಲಿ ನಡೆದಾಡುತ್ತಿದ್ದ ಎಂದು ಹೇಳಿದರೆ, ಮುಂದಿನ ಹಲವಾರು ತಲೆಮಾರುಗಳವರು ನಂಬುವುದು ಕಷ್ಟ ಎಂದು ಐನ್‌ಸ್ಟೀನ್ ಬರೆದರು.

ಗಾಂಧಿಯವರ ಹತ್ಯೆಯಾದ ಬಿರ್ಲಾ ಹೌಸಿನ ಹಿತ್ತಿಲ ಉದ್ಯಾನದ ರಸ್ತೆಗೆ ಅವರ ಕೊಲೆಯಾದ ದಿನದ ಹೆಸರಿನಲ್ಲಿ “ತೀಸ್ ಜನವರಿ ರೋಡ್” (ಮೂವತ್ತು ಜನವರಿ ರಸ್ತೆ) ಎಂಬ ಹೆಸರಿಡಲಾಗಿದೆ. ಕಲ್ಲಿನಲ್ಲಿ ಕೆತ್ತಲಾಗಿರುವ ಈ ಪ್ರಸಿದ್ಧ ಸಮಾಧಿ ಬರಹವು ಗಾಂಧಿ ಎಂಬ ಅದ್ಭುತ ದಂತಕತೆಯ ಆಯಾಮಗಳನ್ನು ಮತ್ತೆಮತ್ತೆ ನೆನಪಿಸುತ್ತದೆ. ಅದಕ್ಕಿಂತಲೂ ಅತಿ ಮುಖ್ಯ ವಿಷಯವೆಂದರೆ, ಕಣ್ಣಿಗೆ ರಾಚುವ ಈ ಸ್ಮಾರಕದ ಸರಳತೆ. ಗಾಂಧಿಯವರು ಗುಂಡುಗಳಿಗೆ ಎದೆಯೊಡ್ಡಿದ ಆ ನಿರ್ದಿಷ್ಟ ಸ್ಥಳಕ್ಕೆ ಯಾರು ಬೇಕಾದರೂ ನಡೆದು ಹೋಗಬಹುದು ಮತ್ತು ಕ್ಷಣಮಾತ್ರವಾದರೂ ಅವರ ಜೊತೆಗೆ ಇದ್ದ, ಅಥವಾ ಅವರೇ ಆಗಿದ್ದ ಕಲ್ಪನೆಯನ್ನು ಮಾಡಿಕೊಳ್ಳಬಹುದು.

ಗಾಂಧಿ ಅಥವಾ ಅವರಿಗೆ ಸಂಬಂಧಿಸಿದ ಎಲ್ಲವನ್ನೂ ಸಮೀಪಿಸುವ ಸರಳತೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಒಂದು ದಶಕದ ಕಾಲ ಗಾಂಧಿಯವರು ಜೀವನ ಕಳೆದ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದವರಿಗೂ ಅದೇ ಅನುಭವ. ಅವರು ಬದುಕಿದ್ದ ಆ ಮನೆ ಅವರೇ ವಿನ್ಯಾಸ ಮಾಡಿದ್ದು. ಅದರೊಳಗಿನ ಜಾಗವು ನಿರ್ಮಲ, ಪ್ರಶಾಂತ ಮತ್ತು ಸುಂದರ. ಅದನ್ನು “ಹೊರಗಡೆ” ಮತ್ತು “ಒಳಗಡೆ” ಎಂದು ವಿಭಜಿಸಲು ಸಾಧ್ಯವಿಲ್ಲ. ಅವು ಒಂದು ಇನ್ನೊಂದರ ಒಳಗೆ ಸಂಪೂರ್ಣವಾಗಿ ವಿಲೀನವಾಗಿವೆ. ಅದು ಗಾಂಧಿಯವರು ಬದುಕಿದ ಜೀವನವನ್ನಲ್ಲದೆ ಇನ್ನೇನನ್ನೂ ಪ್ರತಿಫಲಿಸುವುದಿಲ್ಲ. ಆ ಮಹಾತ್ಮರು ಬದುಕಿದ್ದರು ಮತ್ತು ಯುಗಮಾನಗಳ ಕಾಲ ಬದುಕಿರುತ್ತಾರೆ- ನೀವು ಅವರಿಗೆ ಹತ್ತಿರವಾಗುವಂತೆ ಮಾಡಬಲ್ಲ ಅವರ ಸಾಮರ್ಥ್ಯ ಮತ್ತು ಅವರಿಗೆ ಅತಿಮಾನವ, ದಂತಕತೆಯ ಆಯಾಮ ನೀಡಬಲ್ಲ ಅಗಾಧ ಚಿಂತನೆ ಮತ್ತು ಕಾರ್ಯಗಳ ಸಂಗಮದಿಂದ.

ನಾನು ಆಂಧ್ರದ ಆ ಮಹಿಳೆಯನ್ನು ಭೇಟಿಯಾದದ್ದು 2002ರಲ್ಲಿ- ಭವಿಷ್ಯದ ಗುಜರಾತಿ ತಲೆಮಾರುಗಳು ನಾಚಿಕೆಯಿಂದ ತಲೆ ಬಗ್ಗಿಸಬೇಕಾಗುವಂತೆ ಮಾಡಿದ ನರಮೇಧ ನಡೆದ ವರ್ಷ. ಹದಿನೇಳು ವರ್ಷಗಳ ನಂತರ ಮೋಹನದಾಸ ಗಾಂಧಿಯವರ 150ನೇ ಜನ್ಮದಿನಾಚರಣೆ ನಡೆಯಲಿತ್ತು. ಆ 17 ವರ್ಷಗಳು ಗಾಂಧಿಯವರ ಇಮೇಜನ್ನು ಮಲಿನಗೊಳಿಸಲು ಬಿಜೆಪಿಯ ಅಪಪ್ರಚಾರ ಯಂತ್ರಕ್ಕೆ ಸಾಕಾಗಿದ್ದವು. ಈ ಅದ್ಭುತ ಬ್ಯಾರಿಸ್ಟರ್ ಅವರ ಇಮೇಜನ್ನು ಸರಕಾರಿ ಪ್ರಚಾರದ ಪೋಸ್ಟರುಗಳಲ್ಲಿ ಕಾಣಿಸಲಾಯಿತು- ಅವರ ಕನ್ನಡಕ ಮತ್ತು ಹಿನ್ನೆಲೆಯಲ್ಲಿ ಶೌಚಾಲಯದ ಚಿತ್ರದ ಮೂಲಕ ಮಾತ್ರ. ಆ ಹೊತ್ತಿಗೆ ಆ ಆಡಳಿತವು ಧರ್ಮದ ಹೆಸರಿನಲ್ಲಿ ಭಾರತೀಯ ಜನತೆಯನ್ನು ವಿಭಜಿಸಲು ಯಶಸ್ವಿಯಾಗಿತ್ತು. ಮುಸ್ಲಿಮರು ಮತ್ತು ದಲಿತರನ್ನು ಗುಂಪು ಹಲ್ಲೆಗಳಿಂದ ಕೊಲ್ಲುವುದು ಆ ದಿನಗಳ ಕಾನೂನಾಗಿತ್ತು. ಗೋರಕ್ಷಕರು ಅಮಾಯಕ ಜನರನ್ನು ಬೆದರಿಸಲು ಅನಿಯಂತ್ರಿತ ಪರವಾನಗಿ ಪಡೆದಿದ್ದರು. ಸ್ವತಃ ಬೆದರಿಕೆಗೆ ಒಳಗಾಗಿದ್ದ ರಾಷ್ಟ್ರೀಯ ಮಾಧ್ಯಮಗಳಿಗೆ, ಮುಖ್ಯವಾಗಿ ಟಿವಿಗಳಿಗೆ ಇದುವೇ ನಿತ್ಯದ ಆಹಾರವಾಗಿತ್ತು. ಪ್ರಸಿದ್ಧ ವಿಚಾರವಾದಿ ಚಿಂತಕರಾದ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಮುಂತಾದವರನ್ನು ಗುಂಡಿನಿಂದಲೇ ಕೊಲ್ಲಲಾಯಿತು.

ಕಾನೂನು ಮತ್ತು ಶಿಸ್ತು ಕಾಪಾಡಬೇಕಾದ ಸಂಸ್ಥೆಗಳು ಯಾವುದೇ ಮತ್ತು ಎಲ್ಲ ಭಿನ್ನಮತವನ್ನು ದಮನಿಸುವುದರಲ್ಲೇ ವ್ಯಸ್ತವಾಗಿದ್ದವು. ಪ್ರತಿರೋಧ ವ್ಯಕ್ತಪಡಿಸುವವರನ್ನು ಟ್ರೋಲ್ ಮಾಡಲು ಸಾಮಾಜಿಕ ಮಾಧ್ಯಮವನ್ನು ಕೈಗಾರಿಕೆಯ ಪ್ರಮಾಣದಲ್ಲಿ ಬಳಸಲಾಯಿತು.

ಇದು ಭಾರತದಲ್ಲಿ ಸಾಮಾನ್ಯ ಪರಿಸ್ಥಿತಿ ಆಗಿದ್ದರೆ, ಅಂತಾರಾಷ್ಟ್ರೀಯ ಪರಿಸ್ಥಿತಿ ಬೇರೆಯೇನೂ ಆಗಿರಲಿಲ್ಲ. ಯುರೋಪಿನಲ್ಲಿ ತೀವ್ರ ಬಲಪಂಥವು ಏರುದಿಸೆಯಲ್ಲಿತ್ತು. ಟರ್ಕಿ, ಈಜಿಪ್ಟ್, ಬ್ರೆಝಿಲ್ ಮತ್ತು ಚೀನಾ ಸರ್ವಾಧಿಕಾರಿ ಆಡಳಿತದ ಅಡಿಗೆ ಬಂದವು. ಜರ್ಮನಿ, ಇಟಲಿ, ಸ್ಪೇನ್ ಮತ್ತು ಫ್ರಾನ್ಸಿನಂಥ ಪ್ರಜಾಸತ್ತಾತ್ಮಕ ಸರಕಾರಗಳು ಕೆಲಸ ಮಾಡಲು ಬಲಪಂಥೀಯರ ನೆರವು ಕೋರಬೇಕಾಯಿತು. ಯುಎಸ್‌ಯಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆ ಗೆದ್ದು “ಸತ್ಯೋತ್ತರ” (post-truth) ಎಂದು ಕರೆಯಲಾಗುವ ಯುಗವು ತ್ವರಿತವಾಗಿ ರೆಕ್ಕೆ ಬಿಚ್ಚುತ್ತಿತ್ತು.

ಸತ್ಯೋತ್ತರ ವಾಸ್ತವಗಳು

’ಸತ್ಯೋತ್ತರ ಯುಗ ಮತ್ತು ಹಿಂಸಾಚಾರ’ದ ಕುರಿತು ಸತ್ಯ ಮತ್ತು ಅಹಿಂಸೆಯ ವಿರುದ್ಧವಾಗಿ ದೇಶದ ಒಳಗಡೆಯೂ, ಹೊರಗಡೆಯೂ ಜನರು ದೊಡ್ಡ ಮಟ್ಟದಲ್ಲಿ ಯೋಚಿಸಲು ಆರಂಭಿಸಿದುದರಲ್ಲಿ ಆಶ್ಚರ್ಯವೇನಿಲ್ಲ. ಆದುದರಿಂದ ಪ್ರಜಾಪ್ರಭುತ್ವ, ಸಾರ್ವಜನಿಕ ಜೀವನದಲ್ಲಿ ಸನ್ನಡತೆ, ಸಾಮಾಜಿಕ ಸಾಮರಸ್ಯ ಮುಂತಾದ ವಿಚಾರಗಳ ಬಗ್ಗೆ ಒಲವಿರುವವರ ಮನಗಳಲ್ಲಿ ಗಾಂಧಿಯವರ ನೆನಪು ಅಲೆಅಲೆಯಾಗಿ ಮತ್ತೆ ತೇಲಿಬಂತು. ಎಡಪಂಥೀಯರು, ಉದಾರವಾದಿ ಪ್ರಜಾಪ್ರಭುತ್ವವಾದಿಗಳು, ಕಾರ್ಮಿಕ ಸಂಘಟನೆಗಳ ನಾಯಕರು, ಕಲಾವಿದರು, ಬರಹಗಾರರು, ಹಾಡುಗಾರರು ಗಾಂಧಿಯವರ ಕಡೆಗೆ ಮರಳುವುದು ಸಾಮಾನ್ಯವಾಯಿತು. ಸಾಮಾನ್ಯವಾಗಿ ಗಾಂಧಿಯವರ ಕುರಿತು ಬೇಸರ ಹೊಂದಿರುವ ಅಂಬೇಡ್ಕರ್‌ವಾದಿಗಳು ಕೂಡಾ, ಗಾಂಧಿಯವರ ಕಡೆಗೆ ಕಡಿಮೆ ತಿರಸ್ಕಾರದಿಂದ ನೋಡಲಾರಂಭಿಸಿದರು. ಗಾಂಧಿವಾದವನ್ನು ಕೇವಲ ಆಚರಣೆಯ ಮಟ್ಟಕ್ಕೆ ಇಳಿಸಿದ್ದ ಗಾಂಧೀವಾದಿಗಳು ಕೂಡಾ ಗಾಂಧಿಯವರನ್ನು ಮತ್ತೆ ಕಂಡುಕೊಳ್ಳುವ ಅಗತ್ಯವನ್ನು ಮನಗಾಣಲು ಆರಂಭಿಸಿದರು. ಹಲವಾರು ಸಮಾನಮನಸ್ಕ ಸಾಮಾಜಿಕ ಮಾಧ್ಯಮ ಗುಂಪುಗಳು ಆರಂಭಗೊಂಡು ಗಾಂಧಿಯವರ ವಿಚಾರಧಾರೆಗಳ ಬಗ್ಗೆ ಚರ್ಚಿಸಲು ಆರಂಭಿಸಿದವು. ಈ ಎಲ್ಲರೂ ಬೇರೆಬೇರೆ ಮಟ್ಟಗಳಲ್ಲಿ ಹತ್ತಿರ ಬಂದು ಗಾಂಧಿ ಮತ್ತು ಅಂಬೇಡ್ಕರ್ ಪರಂಪರೆಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನದಾಗಿ ಅಪ್ರಾಪ್ರಿಯೇಟ್ ಮಾಡಿಕೊಳ್ಳುವ ಭಯವನ್ನು ವ್ಯಕ್ತಪಡಿಸಲು ಆರಂಭಿಸಿದರು. ವಿಪರ್ಯಾಸ ಎಂದರೆ ಗಾಂಧಿಯವರ ನೆನಪನ್ನು ಅಳಿಸಲು ಪ್ರಯತ್ನಿಸಿದಷ್ಟು ಅದು ಹೆಚ್ಚುಹೆಚ್ಚಾಗಿ ಪಡಿಮೂಡಲು ಆರಂಭಿಸಿತು.

ಗಾಂಧಿ ಹತ್ಯೆಯನ್ನು ಇತಿಹಾಸದ ಪಠ್ಯದಿಂದ ತೆಗೆದುಹಾಕುವ ಎನ್‌ಸಿಇಆರ್‌ಟಿ ನಡೆಯು ಲಕ್ಷಾಂತರ ಜನರಿಗೆ ಆಘಾತ ಉಂಟುಮಾಡಿದೆಯಾದರೂ, ಎಲ್ಲರೂ ಸಂಘಟಿತ ರೀತಿಯಲ್ಲಿ ತಮ್ಮ ದಿಗಿಲನ್ನು ವ್ಯಕ್ತಪಡಿಸಿಲ್ಲ. ನಾನು ಎನ್‌ಸಿಇಆರ್‌ಟಿ ನಡೆಯ ಕುರಿತು ಓದಿದ ದಿನ ಆಂಧ್ರದ ಆ ಮಹಿಳೆಯ ಉತ್ತೇಜಿತ ಮುಖವು ಧುತ್ತನೇ ಮನಸ್ಸಿನಲ್ಲಿ ಮೂಡಿತು. ಆ ಮುಖವು ಗಾಂಧಿಯವರ ಕುರಿತು ಆಡಿದ ಮೆಚ್ಚುಗೆಯ ಮಾತುಗಳನ್ನು ನೆನಪಿಸಿದ ಕೂಡಲೇ ನಾನು ನನಗೇ ಹೇಳಿಕೊಂಡೆ: “ಪಠ್ಯಪುಸ್ತಕ ಇರಲೀ, ಇಲ್ಲದೆಯೇ ಇರಲಿ, ಗಾಂಧಿ ಬದುಕಿಯೇ ಇರುತ್ತಾರೆ. ಆ ಮಹಿಳೆ ಹೇಳಿದಂತೆ ಅವರು ನಿಜ ಮನುಷ್ಯ. ಹಲವಾರು ನಕಲಿಗಳು ಅಪಪ್ರಚಾರವು ಎತ್ತಿಹಿಡಿದಷ್ಟು ದಿನ ಮಾತ್ರ ಚಲಾವಣೆಯಲ್ಲಿ ಇರುತ್ತಾರೆ. ನಾನು ಎನ್‌ಸಿಇಆರ್‌ಟಿ ಅಧಿಕಾರಸ್ಥರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ: ಮುಂದೆ ಪ್ರಪಂಚವು ಮನಗಾಣಲಿರುವಂತೆ, ಸುಮ್ಮನೇ ಹಾಗೆಯೇ ಮಹಾತ್ಮರ ನೆನಪನ್ನು ಅಳಿಸಲು ಸಾಧ್ಯವಿಲ್ಲ. ಅವರು ಮಹಾತ್ಮ ಏಕೆಂದರೆ, ಅವರ ಸತ್ಯ ಮತ್ತು ಅಹಿಂಸೆಯು ಪ್ರತಿಯೊಬ್ಬರ ಆತ್ಮವನ್ನು ತಟ್ಟಿದೆ. ಇದು ಆತ್ಮದ ಪ್ರಶ್ನೆ ಮತ್ತು ಅದು ಬೆದರಿಕೆಗೆ ಒಳಗಾಗಿರುವ ಅಥವಾ ಶಾಲೆಗೆ ಹೋಗುವ ಮಕ್ಕಳೂ ಎದ್ದುನಿಲ್ಲಬೇಕೆಂದು ಬಯಸುವಲ್ಲಿ, ತೆವಳುವ ಗುಲಾಮಿ ದೇಹಗಳ ಗ್ರಹಿಕೆಯಿಂದ ಸದ್ಯಕ್ಕೆ ಹೆಚ್ಚುಕಡಿಮೆ ಹೊರಗಿದೆ.”

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಪ್ರೊ. ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...