ಕಳೆದ ಒಂದು ತಿಂಗಳಿನಿಂದ ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥರ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿ ಕುಸ್ತಿಪಟುಗಳ ಗುಂಪು ಪ್ರತಿಭಟನೆ ನಡೆಸುತ್ತಿದೆ. ಆದರೆ ಕೇಂದ್ರ ಸರ್ಕಾರದ ನಡೆ ಬಗ್ಗೆ ಹರಿಯಾಣದ ಬಿಜೆಪಿ ಘಟಕದಲ್ಲಿ ಅಸಮಾಧಾನ ಮೂಡಿದೆ.
ಬಿಜೆಪಿ ಸಂಸದ ಮತ್ತು ಭಾರತೀಯ ಫೆಡರೇಶ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕಳದ ಆರೋಪಗಳು ಕೇಳಿಬಂದಿರುವ ಹಿನ್ನೆಲೆ ಪ್ರತಿಭಟನೆಗಳನ್ನು ಮಾಡಲಾಗುತ್ತಿದೆ. ಈ ಆರೋಪಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ಆರೋಪಿಸಿ ಹರ್ಯಾಣದ ಮೂವರು ಪ್ರಮುಖ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಅವರು ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದಾರೆ.
ಪ್ರತಿಭಟನಾಕಾರರು ಭಾನುವಾರ ಹೊಸ ಸಂಸತ್ತಿನ ಕಟ್ಟಡದತ್ತ ಮೆರವಣಿಗೆ ಮಾಡಲು ಪ್ರಯತ್ನಿಸಿದಾಗ ಅವರನ್ನು ತಡೆದು ಬಂಧನ ಮಾಡಲಾಯಿತು. ಮುಂದಿನ ವರ್ಷ ಲೋಕಸಭೆ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ, ಈ ಘಟನೆಯು ಬಿಜೆಪಿಯೊಳಗೆ ಅಸಮಾಧಾನವನ್ನು ಉಂಟುಮಾಡಿದೆ. ಹಿಸಾರ್ ಸಂಸದ ಬ್ರಿಜೇಂದ್ರ ಸಿಂಗ್ ಮತ್ತು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಸೇರಿದಂತೆ ರಾಜ್ಯದ ಕೆಲವು ನಾಯಕರಿಂದ ಅನಿರೀಕ್ಷಿತ ಬೆಂಬಲವನ್ನು ಗಳಿಸಿದೆ.
”ನಮ್ಮ ಕುಸ್ತಿಪಟುಗಳು ಒಲಂಪಿಕ್ಸ್, ಸಿಡಬ್ಲ್ಯೂಜಿ, ಏಷ್ಯನ್ ಕ್ರೀಡಾಕೂಟಗಳಲ್ಲಿ ತಮ್ಮ ಜೀವಮಾನದ ಕಠಿಣ ಪರಿಶ್ರಮದಿಂದ ಗಳಿಸಿದ ಪದಕಗಳನ್ನು ಪವಿತ್ರ ಗಂಗೆಯಲ್ಲಿ ಎಸೆಯಲು ಮುಂದಾಗಿದ್ದು, ಅವರ ನೋವು ಮತ್ತು ಅಸಹಾಯಕತೆಯನ್ನು ತೋರಿಸುತ್ತದೆ. ಇದು ಸಂಪೂರ್ಣವಾಗಿ ಹೃದಯವಿದ್ರಾವಕ” ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
I feel the pain and helplessness of our wrestlers forcing them to the brink of throwing away their lifetime of hardwork- the medals from Olympics, CWGs, Asian Games in the holy Ganga.
Absolutely heartbreaking.
— Brijendra Singh (@BrijendraSpeaks) May 30, 2023
ಕುಸ್ತಿಪಟುಗಳಿಗೆ ಹೆಚ್ಚುತ್ತಿರುವ ಬೆಂಬಲದ ಹೊರತಾಗಿಯೂ, ಹರಿಯಾಣ ಬಿಜೆಪಿ ನಾಯಕತ್ವವು ಈ ವಿಷಯದ ಬಗ್ಗೆ ಅಧಿಕೃತವಾಗಿ ನಿಲುವು ತಾಳಬೇಕಿದೆ. ಆದರೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಧ್ಯಪ್ರವೇಶ ಮಾಡದೇ ದೂರವಿದ್ದು ಉಳಿದಿದ್ದಾರೆ. ಅವರು, ”ಈ ಸಮಸ್ಯೆ ಹರಿಯಾಣಕ್ಕೆ ಸಂಬಂಧಿಸಿಲ್ಲ, ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದೆ” ಎಂದು ಹೇಳಿದ್ದಾರೆ ಎಂದರು.
ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಬೃಹತ್ ಪ್ರತಿಭಟನೆಗೆ ರಾಜ್ಯದ ಪ್ರಬಲ ರೈತ ಸಂಘಗಳು ಬೆಂಬಲ ನೀಡಿರುವುದರಿಂದ ಕುಸ್ತಿಪಟುಗಳ ಪ್ರತಿಭಟನೆ ಬಲಪಡೆದಿದೆ. ಕಾಂಗ್ರೆಸ್ ಮತ್ತು ಐಎನ್ಎಲ್ಡಿ ಸೇರಿದಂತೆ ವಿರೋಧ ಪಕ್ಷಗಳು ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿವೆ.
ಇದನ್ನೂ ಓದಿ: ಕುಸ್ತಿಪಟುಗಳ ಪ್ರತಿಭಟನೆ: ಇಂದು ರೈತ ಮುಖಂಡ ನರೇಶ್ ಟಿಕಾಯತ್ ನೇತೃತ್ವದಲ್ಲಿ ‘ಮಹಾಪಂಚಾಯತ್’
ಮಾಜಿ ಕೇಂದ್ರ ಸಚಿವ ಬಿರೇಂದರ್ ಸಿಂಗ್ ಅವರು ಈ ವಿಷಯದ ಬಗ್ಗೆ ಧ್ವನಿಯೆತ್ತಿದ್ದಾರೆ, ಕುಸ್ತಿಪಟುಗಳನ್ನು ಭೇಟಿ ಮಾಡಿದ್ದಾರೆ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ವಿಷಯವನ್ನು ಪ್ರಸ್ತಾಪಿಸಿದ್ದಾರೆ, ಪಕ್ಷದ ವಿಶ್ವಾಸಾರ್ಹತೆ ಅಪಾಯದಲ್ಲಿದೆ ಎಂದು ಒತ್ತಿಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಆದಷ್ಟು ಬೇಗ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಬೇಕೆಂದು ಅವರು ಕರೆ ನೀಡಿದರು ಮತ್ತು ಕ್ರೀಡಾ ಒಕ್ಕೂಟಗಳನ್ನು ನಡೆಸುವ ರೀತಿಯಲ್ಲಿ ಸುಧಾರಣೆಗಳ ಅಗತ್ಯವನ್ನು ಒತ್ತಿ ಹೇಳಿದರು.
ಹರ್ಯಾಣ ಬಿಜೆಪಿ ಅಧ್ಯಕ್ಷ ಓಂ ಪ್ರಕಾಶ್ ಧನಕರ್ ಅವರು, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದರು. ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ನ್ಯಾಯ ಸಿಗಬೇಕು ಎಂದು ಒತ್ತಿ ಹೇಳಿದರು.
ಠಾಕೂರ್ ಅವರು ಕುಸ್ತಿಪಟುಗಳಿಗೆ ದೆಹಲಿ ಪೊಲೀಸ್ ತನಿಖೆಯಲ್ಲಿ ವಿಶ್ವಾಸವಿಡಿ, ತನಿಖೆಯ ವರದಿ ಹೊರುವವರೆಗೂ ”ತಾಳ್ಮೆಯಿಂದಿರಿ” ಎಂದು ಒತ್ತಾಯಿಸಿದ್ದಾರೆ.