Homeಕರ್ನಾಟಕಇದ್ರೀಸ್ ಪಾಶ ಹತ್ಯೆಗೆ ಪೊಲೀಸರ ಕರ್ತವ್ಯ ಲೋಪವೂ ಕಾರಣ: ಸತ್ಯಶೋಧನಾ ವರದಿ ಬಿಡುಗಡೆ

ಇದ್ರೀಸ್ ಪಾಶ ಹತ್ಯೆಗೆ ಪೊಲೀಸರ ಕರ್ತವ್ಯ ಲೋಪವೂ ಕಾರಣ: ಸತ್ಯಶೋಧನಾ ವರದಿ ಬಿಡುಗಡೆ

ಇದಕ್ಕೂ ಮುಂಚೆ ಇಂತದ್ದೇ ಕೃತ್ಯಗಳಲ್ಲಿ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರು ತೊಡಗಿಸಿಕೊಂಡಿದ್ದರೂ ಸಹ ಅವರನ್ನು ಸೆದೆ ಬಡಿಯುವಲ್ಲಿ ಪೊಲೀಸರ ನಿಷ್ಕ್ರಿಯತೆ ಹಾಗೂ ವೈಫಲ್ಯತೆ ಸ್ಪಷ್ಟವಾಗಿ ಕಂಡುಬಂದಿದೆ.

- Advertisement -
- Advertisement -

ಟ್ರಕ್ ಚಾಲಕ ಇದ್ರೀಸ್ ಪಾಶ ಹತ್ಯೆಯಲ್ಲಿ ಪೊಲೀಸರ ಕರ್ತವ್ಯ ಲೋಪ ಕಂಡುಬಂದಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ನಕಲಿ ಗೋರಕ್ಷಕರಿಗೆ ಎಚ್ಚರಿಕೆ ನೀಡಿ, ವಶಕ್ಕೆ ಪಡೆದಿದ್ದಲ್ಲಿ ಹತ್ಯೆಯನ್ನು ತಡೆಗಟ್ಟಬಹುದಿತ್ತು ಎಂದು ಸತ್ಯ ಶೋಧನಾ ವರದಿ ತಿಳಿಸಿದೆ.

ವಕೀಲ ಶಿವಮಾನಿತನ್, ಸಿದ್ಧಾರ್ಥ್ ಕೆ.ಜಿ, ಡಾ. ಸಿಲ್ವಿಯಾ ಕರ್ಪಗಂ, ಖಾಸಿಂ ಶೋಯೆಬ್ ಖುರೇಷಿ ಮತ್ತು ಅಖಿಲ ಭಾರತ ಜಮೈತುಲ್ ಖುರೇಷ್ (ಕರ್ನಾಟಕ) ಸದಸ್ಯರ ಸತ್ಯಶೋಧನಾ ತಂಡವು ಇದ್ರೀಸ್ ಪಾಶ ಹತ್ಯೆ ಪ್ರಕರಣದ ಸತ್ಯಶೋಧನಾ ವರದಿಯನ್ನು ಪ್ರಕಟಿಸಿದ್ದು, ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಶಿಫಾರಸ್ಸುಗಳನ್ನು ಸಲ್ಲಿಸಿದ್ದಾರೆ.

ಹಣ ಸುಲಿಗೆ ಮಾಡುವ ಹಾಗೂ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ, ದಾಳಿ ನಡೆಸುವ ಉದ್ದೇಶದಿಂದ ಸಮಾಜ-ವಿರೋಧಿ ಗುಂಪುಗಳು ಬಹಿರಂಗವಾಗಿ ಕಾನೂನನ್ನು ಕೈಗೆತ್ತಿಕೊಂಡಿವೆ. ಪೊಲೀಸರ ಯಾವುದೇ ಭಯವಿಲ್ಲದೆ ಪೊಲೀಸ್ ಠಾಣೆಯ ಹತ್ತಿರವೇ ಮೂರು ಜನ ನಾಗರೀಕರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಆದರೆ ಪೊಲೀಸರು ತಕ್ಷಣವೇ ಈ ದಾಳಿಕೋರರನ್ನು ಬಂಧಿಸುವ ಬದಲು ಇನ್ನುಳಿದ ಸಂತ್ರಸ್ಥರನ್ನು ಹುಡುಕಲು ದಾಳಿಕೋರರನ್ನು ಬಿಟ್ಟಿದ್ದಾರೆ. ಪೊಲೀಸ್ ಠಾಣೆಯ ಸಿಬ್ಬಂಧಿಯೊಬ್ಬರು ಸಂತ್ರಸ್ಥರ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ಕಣ್ಣಾರೆ ಕಂಡ ನಂತರ ಹಾಗೂ ಪೊಲೀಸ್ ಠಾಣೆ ಹೊರಗೆ ಸ್ವತಃ ದಾಳಿಕೋರರೇ ಫೇಸ್‌ಬುಕ್ ಲೈವ್ ಮಾಡಿದರೂ ಸಹ ದಾಳಿಕೋರರನ್ನು ಬಂಧಿಸಿರುವುದಿಲ್ಲ. ಇದರಿಂದಾಗಿಯೇ ಇದ್ರೀಸ್ ಪಾಶರವರ ಹತ್ಯೆಯಾಗಿದೆ ಎಂದು ವರದಿ ಹೇಳಿದೆ.

ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸಿ, ಪೊಲೀಸ್ ಠಾಣೆಯ ಹತ್ತಿರವೇ ಹಣ ಸುಲಿಗೆ ಮಾಡುವುದು ಹಾಗೂ ಪೊಲೀಸರು ಸಂತ್ರಸ್ಥರ ರಕ್ಷಣೆಗೆ ಕಾಳಜಿ ವಹಿಸದಿರುವುದು ಈ ಗೂಂಡಾಗಳು ಎಷ್ಟು ನಿರ್ಭೀತಿಯಿಂದ ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ. ತಕ್ಷಣವೇ ಪೊಲೀಸರು ಎಲ್ಲಾ ದಾಳಿಕೋರರನ್ನು ಬಂಧಿಸಿ, ಸಂತ್ರಸ್ಥರನ್ನು ಹುಡುಕಿದ್ದರೆ, ಇದ್ರಿಸ್ ಪಾಷಾ ಅವರ ಪ್ರಾಣವನ್ನು ಉಳಿಸುವುದು ಸಾಧ್ಯವಿತ್ತು. ಇದಕ್ಕೂ ಮುಂಚೆ ಇಂತದ್ದೇ ಕೃತ್ಯಗಳಲ್ಲಿ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರು ತೊಡಗಿಸಿಕೊಂಡಿದ್ದರೂ ಸಹ ಅವರನ್ನು ಸೆದೆ ಬಡಿಯುವಲ್ಲಿ ಪೊಲೀಸರ ನಿಷ್ಕ್ರಿಯತೆ ಹಾಗೂ ವೈಫಲ್ಯತೆ ಸ್ಪಷ್ಟವಾಗಿ ಕಂಡುಬಂದಿದೆ ಎಂದು ವರದಿ ಹೇಳಿದೆ.

ಆರೋಪಿಯ ಮೇಲೆ ಹಣ ಸುಲಿಗೆ ಯತ್ನದಂತಹ ಆರೋಪಗಳಿದ್ದರೂ ಸಹ, ಮೂರನೇ ಎಫ್‌ಐಆರ್ (ಸಿಆರ್ 0054/2023) ನಲ್ಲಿ ಭಾರತೀಯ ದಂಡ ಸಂಹಿತೆಯ ಪ್ರಮುಖ ಸೆಕ್ಷನ್‌ಗಳನ್ನು ಸೇರಿಸಿರುವುದಿಲ್ಲ. ಬದುಕುಳಿದಿರುವ ಸಂತ್ರಸ್ಥರು ಪ್ರತ್ಯಕ್ಷ ಸಾಕ್ಷಿಗಳೂ ಸಹ ಆಗಿದ್ದು, ಅಪರಾಧ ಸ್ಥಳದ ಮಹಜರು ಸಂಧರ್ಭದಲ್ಲಿ ಅವರನ್ನು ಹಾಜರುಪಡಿಸಿಲ್ಲ. ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 164 ರ ಪ್ರಕಾರ ಪ್ರತ್ಯಕ್ಷದರ್ಶಿಗಳನ್ನು ಹೇಳಿಕೆ ನೀಡಲು ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಿಲ್ಲ. ಮೃತರ ಕುಟುಂಬಕ್ಕೆ ಪೋಸ್ಟ್ ಮಾರ್ಟಂ ವರದಿಯ ಪ್ರತಿಯನ್ನು ನೀಡಿರುವುದಿಲ್ಲ. ಇವೆಲ್ಲರೂ ತನಿಖೆಯಲ್ಲಿ ಕಂಡುಬಂದ ಪೊಲೀಸ್ ವೈಫಲ್ಯವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸ್ ಇಲಾಖೆಗೆ ಶಿಫಾರಸ್ಸುಗಳು

  • ಮೇಲಿನ ಅಂಶಗಳ ಆಧಾರದ ಮೇಲೆ ಈ ಕೃತ್ಯದಲ್ಲಿ ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯುವಂತೆ ಖಾತ್ರಿಪಡಿಸಿಕೊಳ್ಳಬೇಕು.
  • ಇದ್ರಿಸ್ ಪಾಷಾ ಅವರ ಕುಟುಂಬಕ್ಕೆ 10 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಬೇಕು.
  • ತಕ್ಷಣವೇ ಪೋಸ್ಟ್ ಮಾರ್ಟಂ ವರದಿಯ ಪ್ರತಿ ಒಂದನ್ನು ಮೃತರ ಕುಟುಂಬಕ್ಕೆ ನೀಡಬೇಕು.
  • ಕಾನೂನನ್ನು ಕೈಗೆತ್ತಿಕೊಳ್ಳುವ ಸಮಾಜ-ವಿರೋಧಿ ವ್ಯಕ್ತಿಗಳನ್ನು ತಕ್ಷಣವೇ ಬಂಧಿಸುವಂತೆ ಎಲ್ಲಾ ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಬೇಕು.
  • ತಕ್ಷಣವೇ ಸಿಆರ್‌ಪಿಸಿ ಸೆಕ್ಷನ್ 164 ರ ಅಡಿಯಲ್ಲಿ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು.
  • ಈ ಕೃತ್ಯದಲ್ಲಿ ಉಂಟಾಗಿರುವ ಪೊಲೀಸ್ ವೈಫಲ್ಯದ ಕುರಿತು ಇಲಾಖಾ ತನಿಖೆಯನ್ನು ಆದೇಶಿಸಬೇಕು

ಸರ್ಕಾರಕ್ಕೆ  ಶಿಫಾರಸ್ಸುಗಳು

  1. ಬೆದರಿಕೆ ಹಾಕುವಂತಹ ವಿಡಿಯೋಗಳು, ಅಥವಾ ಹಿಂಸಾತ್ಮಕ ಕ್ರಿಯೆಗಳನ್ನು ಹಾಗೂ ಕಿರುಕುಳವನ್ನು ಪ್ರಚೋದಿಸುವ ಅಂಶಗಳು ಬೆಳಕಿಗೆ ಬಂದ ಕೂಡಲೇ, ಪೊಲೀಸರು ಅದನ್ನು ಪರಿಗಣನೆಗೆ ತೆಗೆದುಕೊಂಡು ಅವುಗಳ ವಿರುದ್ಧ ಸುಮೊಟೋ ಎಫ್‌ಐಆರ್‌ಗಳನ್ನು ದಾಖಲಿಸಬೇಕು.

2. ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯಿದೆ, 2020 ಜನರ ಜೀವನೋಪಾಯಗಳನ್ನು ನಾಶಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಕಾಯಿದೆಯನ್ನು ತಕ್ಷಣವೇ ರದ್ದುಪಡಿಸಬೇಕು. ಈ ಕಾಯ್ದೆಯಡಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಿರಿ.

3. ಪರಿಹಾರಾತ್ಮಕ ಹಾಗೂ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಖಾತ್ರಿಪಡಿಸಿಕೊಳ್ಳಲು ಘನತೆವೆತ್ತ ಸರ್ವೋಚ್ಛ ನ್ಯಾಯಾಲಯವು ತೆಲ್ಸನ್ ಪೂನಾವಾಲ ವರ್ಸಸ್ ಯೂನಿಯನ್ ಆಫ್ ಇಂಡಿಯಾ (ಎಐಆರ್ 2018 ಎಸ್‌ಸಿ 3354) ಪ್ರಕರಣದಲ್ಲಿ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಪ್ರತಿಯೊಂದು ಜಿಲ್ಲೆಯಲ್ಲಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ನೋಡಲ್ ಅಧಿಕಾರಿಗಳನ್ನು ನೇಮಿಸುವುದು, ಯಾವುದೇ ತಡಮಾಡದೆ ಎಫ್‌ಐಆರ್‌ಗಳನ್ನು ದಾಖಲಿಸುವುದು, ಸಂತ್ರಸ್ಥರ ಕುಟುಂಬಸ್ಥರ ಮೇಲೆ ಆಗುವ ದೌರ್ಜನ್ಯವನ್ನು ತಡೆಗಟ್ಟುವುದು, ಪ್ರತಿ ದಿನದ ಆಧಾರದ ಮೇಲೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳು ಗುಂಪು ಹಿಂಸೆಯಂತಹ ಪ್ರಕರಣಗಳನ್ನು ಇತ್ಯರ್ಥಪಡಿಸುವ ಕುರಿತು ಖಾತ್ರಿಪಡಿಸಿಕೊಳ್ಳುವುದು, ಸಂತ್ರಸ್ಥ ಪರಿಹಾರ ಯೋಜನೆಯನ್ನು ಪರಿಚಯಿಸುವುದು, ಈ ಹಿಂಸೆಗಳನ್ನು ತಡೆಗಟ್ಟುವಲ್ಲಿ ವಿಫಲವಾಗುವ ಪೊಲೀಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸುವುದು. ಇವಿಷ್ಟು ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನಗಳಾಗಿದ್ದು ಇವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ವರದಿಯಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ: ಗೋರಕ್ಷಣೆ ಹೆಸರಿನಲ್ಲಿ ಹಾದಿಬೀದಿಯಲ್ಲಿ ರಕ್ತ ಹರಿಸುವ ದಂಧೆಕೋರರು: ಕೊಲ್ಲುವ ಹಂತಕ್ಕೆ ಬೆಳೆದು ನಿಂತದ್ದು ಹೇಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...