ಮಣಿಪುರದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿ ತನಿಖೆ ನಡೆಸಲಿದೆ ಮತ್ತು ಶಾಂತಿ ಸಮಿತಿಯನ್ನು ರಚಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅಮಿತ್ ಶಾ, ”ಮಣಿಪುರದಲ್ಲಿ ಆದಷ್ಟು ಬೇಗ ಶಾಂತಿಯನ್ನು ಮರುಸ್ಥಾಪಿಸಲು ಮತ್ತು ನಿರಾಶ್ರಿತರನ್ನು ಅವರ ಮನೆಗಳಿಗೆ ಹಿಂದಿರುಗಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಮಣಿಪುರ ಶಾಂತವಾಗಿದೆ . ನಾವು ಜನರಿಗೆ ಅಭಿವೃದ್ಧಿ ಮತ್ತು ಕಲ್ಯಾಣವನ್ನು ತಲುಪಿಸುತ್ತಿದ್ದೇವೆ” ಎಂದು ಹೇಳಿದರು.
ಮಣಿಪುರದಲ್ಲಿ ಕುಕಿ ಮತ್ತು ಮೈತಿ ಸಮುದಾಯದ ನಡುವಿನ ಸಂಘರ್ಷಕ್ಕೆ ಕಾರಣವಾದ ಆತುರದ ನಿರ್ಧಾರದಿಂದ ಮೈತಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನವನ್ನು ನೀಡಲು ರಾಜ್ಯ ಸರ್ಕಾರವನ್ನು ಶಿಫಾರಸು ಮಾಡುವಂತೆ ಕೇಳಿದೆ. ಕುಕಿಗಳು ಮತ್ತು ಮೈತಿಗಳೆರಡೂ ನೆಲೆಸಿರುವ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಕುಕಿಗಳು ಮತ್ತು ಮೈತಿ ಸುರಕ್ಷಿತವಾಗಿ ಮನೆಗೆ ಮರುಳುವಂತೆ ಮಾಡುವುದು ನಮ್ಮ ಕರ್ತವ್ಯ, ಆ ಕೆಲಸವನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.
ತುರ್ತು ಪರಿಸ್ಥಿತಿಗಳಿಗೆ ಹೆಲಿಕಾಪ್ಟರ್ ಸೇವೆಗಳು ಸೇರಿದಂತೆ ಅಗತ್ಯ ವಸ್ತುಗಳ ಸುರಕ್ಷತೆ ಮತ್ತು ಪೂರೈಕೆಯ ಭರವಸೆ ಕೂಡ ನೀಡಿದರು. ಮೇ 3ರಿಂದ ಪ್ರಕ್ಷುಬ್ಧ ಸ್ಥಿತಿಯಲ್ಲಿರುವ ಮಣಿಪುರಕ್ಕೆ ಅಮಿತ್ ಶಾ ಭೇಟಿ ನೀಡಿದ್ದು, ಪ್ರಬಲ ಮೈತಿ ಸಮುದಾಯ ಮತ್ತು ಬುಡಕಟ್ಟು ಕುಕಿ ಸಮುದಾಯದ ನಡುವೆ ಘರ್ಷಣೆಗಳು ಭುಗಿಲೆದ್ದಿವೆ. ಹಿಂಸಾಚಾರದಲ್ಲಿ 80 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಣಿಪುರ ಪೊಲೀಸ್ ಮುಖ್ಯಸ್ಥ (ಡಿಜಿಪಿ) ಪಿ ಡೌಂಗೆಲ್ ಅವರನ್ನು ಪೊಲೀಸ್ ಪಡೆ ಮುಖ್ಯಸ್ಥರನ್ನಾಗಿ ವರ್ಗಾವಣೆ ಮಾಡಲಾಗಿದೆ, ಇದೀಗ ಅವರ ಸ್ಥಾನಕ್ಕೆ ಅಂದರೆ ಮಣಿಪುರ ನೂತನ ಪೊಲೀಸ್ ಮುಖ್ಯಸ್ಥರಾಗಿ ರಾಜೀವ್ ಸಿಂಗ್ ನೇಮಕ ಮಾಡಲಾಗಿದೆ.
ಶಿಕ್ಷಣಾಧಿಕಾರಿಗಳು ರಾಜ್ಯಕ್ಕೆ ಆಗಮಿಸಲಿದ್ದು, ವಿದ್ಯಾರ್ಥಿಗಳಿಗೆ ನಿರಂತರ ಶಿಕ್ಷಣ ಸೌಲಭ್ಯ ಕಲ್ಪಿಸಲು ಚರ್ಚೆ ನಡೆಸಲಾಗುವುದು. ಆನ್ಲೈನ್ ಶಿಕ್ಷಣ ಮತ್ತು ಪರೀಕ್ಷೆಯು ಯೋಜನೆಯಂತೆ ನಡೆಯಲಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ರಾಜ್ಯದಲ್ಲಿನ ಹಿಂಸಾಚಾರದ ಸಂತ್ರಸ್ತರಿಗೆ ನೆರವು ನೀಡಲು ಮಣಿಪುರಕ್ಕೆ 20 ವೈದ್ಯರು ಸೇರಿದಂತೆ 8 ವೈದ್ಯಕೀಯ ತಜ್ಞರ ತಂಡಗಳನ್ನು ಕೇಂದ್ರ ಸರ್ಕಾರ ಒದಗಿಸಿದೆ. ಈಗಾಗಲೇ 5 ತಂಡಗಳು ಇಲ್ಲಿಗೆ ತಲುಪಿದ್ದು, ಇನ್ನೂ 3 ತಂಡಗಳು ಇಲ್ಲಿಗೆ ಬಂದಿವೆ ಎಂದರು.
ಗೃಹ ಸಚಿವಾಲಯ ಮತ್ತು ಇತರ ಸಚಿವಾಲಯಗಳ ಜಂಟಿ ಕಾರ್ಯದರ್ಶಿ ಮತ್ತು ಜಂಟಿ ನಿರ್ದೇಶಕ ಮಟ್ಟದ ಅಧಿಕಾರಿಗಳು ಜನರಿಗೆ ಸಹಾಯ ಮಾಡಲು ಮತ್ತು ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಲು ಮಣಿಪುರದಲ್ಲಿ ಉಪಸ್ಥಿತರಿರುತ್ತಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ತಗ್ಗದ ಸಾವು ನೋವು, ಅಮಿತ್ ಷಾ ಭೇಟಿ
ಹಿಂಸಾತ್ಮಕ ಘಟನೆಗಳ ತನಿಖೆಗಾಗಿ ಮಣಿಪುರದಲ್ಲಿ ಹಲವಾರು ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿವೆ. ಪಿತೂರಿಯ ಸುಳಿವು ನೀಡುವ 6 ಹಿಂಸಾಚಾರದ ಘಟನೆಗಳಲ್ಲಿ ಉನ್ನತ ಮಟ್ಟದ ಸಿಬಿಐ ತನಿಖೆ. ತನಿಖೆ ನ್ಯಾಯಯುತವಾಗಿರುವಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
ಅಕ್ರಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಎಂದು ಗಲಭೆಕೋರರಿಗೆ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ನಾಳೆಯಿಂದ ಕೂಂಬಿಂಗ್ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಅವರು ಹೇಳಿದರು.
ಶಾಂತಿ ಒಪ್ಪಂದ ಉಲ್ಲಂಘಿಸುವ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಆಂತರಿಕ ಸಾರಿಗೆಗೆ ಚಾಪರ್ಗಳನ್ನು ಬಳಸಲಾಗುತ್ತಿದೆ. ಎಂದು ತಿಳಿಸಿದರು.
ಈ ಘಟನೆಗಳ ಕುರಿತು ತನಿಖೆ ನಡೆಸಲು ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿದೆ. ಮಣಿಪುರದ ರಾಜ್ಯಪಾಲರು ನಾಗರಿಕ ಸಮಾಜದ ಸದಸ್ಯರೊಂದಿಗೆ ಶಾಂತಿ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ ಎಂದು ಅಮಿತ್ ಶಾ ಅವರು ಮಾಹಿತಿ ನೀಡಿದರು.
ಪರಿಹಾರ ಕ್ರಮಗಳು:
ಮಣಿಪುರ ಸರ್ಕಾರವು ಮೃತ ಸಂತ್ರಸ್ತರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡುತ್ತದೆ. ಕೇಂದ್ರ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಲಿದೆ. ಮಣಿಪುರದಲ್ಲಿ ಹಿಂಸಾಚಾರದ ಸಂತ್ರಸ್ತರಿಗೆ ಪರಿಹಾರ ಕ್ರಮಗಳು ನಡೆಯಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಕಳೆದ 1 ತಿಂಗಳಲ್ಲಿ ಮಣಿಪುರದಲ್ಲಿ ಕೆಲವು ಹಿಂಸಾತ್ಮಕ ಘಟನೆಗಳು ವರದಿಯಾಗಿವೆ. ಹಿಂಸಾಚಾರದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲಾ ಕುಟುಂಬಗಳಿಗೆ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ನಾನು ಕಳೆದ 3 ದಿನಗಳಲ್ಲಿ ಮಣಿಪುರದ ಇಂಫಾಲ್, ಮೋರೆ ಮತ್ತು ಚುರಾಚಂದಪುರ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದೇನೆ ಮತ್ತು ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ನಾನು ಮೈತಿ ಮತ್ತು ಕುಕಿ ಸಮುದಾಯಗಳ ಸಿಎಸ್ಒಗಳನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿದರು.
ಮಣಿಪುರದಲ್ಲಿ ಹಿಂಸಾಚಾರದಿಂದ ಸಂತ್ರಸ್ತರಾದವರಿಗೆ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ. ರಾಜ್ಯದಲ್ಲಿ ಹಿಂಸಾಚಾರದ ತನಿಖೆಗೆ ವಿಶೇಷ ಸಿಬಿಐ ತಂಡ ರಚಿಸಲಾಗಿದೆ. ಅಪರಾಧಿಗಳನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.