Homeದಿಟನಾಗರಫ್ಯಾಕ್ಟ್‌ಚೆಕ್: ತುಮಕೂರು ಜಿಲ್ಲೆಗೆ ಮನುಷ್ಯ ರೂಪದ ವಿಚಿತ್ರ ಪ್ರಾಣಿ ಬಂದಿದ್ದು ನಿಜವೇ?

ಫ್ಯಾಕ್ಟ್‌ಚೆಕ್: ತುಮಕೂರು ಜಿಲ್ಲೆಗೆ ಮನುಷ್ಯ ರೂಪದ ವಿಚಿತ್ರ ಪ್ರಾಣಿ ಬಂದಿದ್ದು ನಿಜವೇ?

ಮನುಷ್ಯ ರೂಪದ ಪ್ರಾಣಿಯು ಜನರನ್ನು ಕೊಲ್ಲುತ್ತಿದ್ದು, ಜನರು ಎಚ್ಚರ ವಹಿಸಬೇಕೆಂದು ವಾಟ್ಸ್‌ಆಪ್‌ನಲ್ಲಿ ವಿಡಿಯೊಗಳನ್ನು ಹರಿಬಿಡಲಾಗಿದೆ.

- Advertisement -
- Advertisement -

“ನೋಡಿ ಫ್ರೆಂಡ್ಸ್, ಆದಷ್ಟು ರಾತ್ರಿ ಹೊತ್ತು ಓಡಾಡುವುದನ್ನು ಕಡಿಮೆ ಮಾಡಿ. ಯಾಕೆಂದ್ರೆ ಸೇಮ್ ಮನುಷ್ಯ ಆಕಾರದಲ್ಲಿ ಒಂದು ಪ್ರಾಣಿ ಬಂದಿದೆ. ಹುಷಾರು ಫ್ರೆಂಡ್ಸ್, ನೆನ್ನೆ ಹೊಸಕೆರೆ ಪಕ್ಕ ಇರುವ ಹೇಳದಾಸರಹಳ್ಳಿಯಲ್ಲಿ ಒಬ್ಬ ಮನುಷ್ಯನನ್ನು ಕೊಂದಿದೆ ಮತ್ತು ನೊಣವಿನಕೆರೆ ಹತ್ತಿರ ಕೂಡ ಬಂದು ಅಲ್ಲಿಯೂ ಇಬ್ಬರು ವ್ಯಕ್ತಿಯನ್ನು ಕೊಂದಿದೆ. ಈ ಪ್ರಾಣಿ ಮರದ ಮೇಲೆ ಇರುತ್ತೆ… Be Care Full”

“ಸ್ನೇಹಿತರೆ, ತುಮಕೂರು ಜಿಲ್ಲೆಯಲ್ಲಿ ಮನುಷ್ಯನ ರೂಪದಲ್ಲಿ ಇರುವಂತಹ ಒಂದು ವಿಷಜಂತು ಪ್ರಾಣಿ, ಮನುಷ್ಯರನ್ನು ಸಾಯಿಸುತ್ತಾ ಬರುತ್ತಿದೆ. ಹೊಸಕೆರೆ ಪಕ್ಕ ಇರುವಂತಹ ಹೇಳದಾಸರಹಳ್ಳಿಯಲ್ಲಿ ಮನುಷ್ಯನನ್ನು ಕೊಂದು, ನೊಣವಿನಕೆರೆ ಹತ್ತಿರ ಇರುವಂತಹ ಹಳ್ಳಿಗಳಲ್ಲಿ ಮನುಷ್ಯರನ್ನು ಕೊಂದಿದೆ. ಮನುಷ್ಯರೂಪದಲ್ಲೇ ಇರುವಂತಹ ಈ ಪ್ರಾಣಿ ಹೆಚ್ಚಾಗಿ ಮರದ ಮೇಲೆ ಇರುತ್ತದೆ. ಸುತ್ತಮುತ್ತಲಿನ ಊರುಗಳಲ್ಲಿ ಇರುವಂತಹ ಜನರು ಹುಷಾರಾಗಿ ಎಚ್ಚರದಿಂದ ಇರಬೇಕಾಗಿ ವಿನಂತಿ…..”
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

-ಈ ರೀತಿಯ ವಿವರಣೆಗಳೊಂದಿಗೆ ವಿಡಿಯೊಗಳನ್ನು ಹಂಚಿಕೊಳ್ಳಲಾಗುತ್ತಿದೆ. ಭೀಕರವಾಗಿ ಗಾಯಗೊಂಡು ಸಾವನ್ನಪ್ಪಿದವರ ಚಿತ್ರಗಳು, ಸತ್ತವರ ಸುತ್ತ ರೋಧಿಸುತ್ತಿರುವವರ ದೃಶ್ಯಗಳು ವಾಟ್ಸ್‌ಅಪ್‌ನಲ್ಲಿ ಹರಿದಾಡಿವೆ. ಜೊತೆಗೆ ಮನುಷ್ಯನ ಆಕಾರ ಹೋಲುವ ಪ್ರಾಣಿಯೊಂದರ ಎರಡು ವಿಡಿಯೊ ತುಣುಕುಗಳೂ ಇದರಲ್ಲಿ ಸೇರಿವೆ.

ಮೇಲಿನ ಪ್ರತಿಪಾದನೆಯೊಂದಿಗೆ ಈ ವಿಡಿಯೊಗಳನ್ನು ವ್ಯಾಪಕವಾಗಿ ವಾಟ್ಸ್‌ಅಪ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ನಾನುಗೌರಿ.ಕಾಂ ಓದುಗರು ಈ ವಿಡಿಯೊಗಳನ್ನು ನಮ್ಮೊಂದಿಗೆ ಹಂಚಿಕೊಂಡು ಸತ್ಯಪರಿಶೀಲನೆ ಮಾಡಲು ಕೋರಿದ್ದಾರೆ.

ಸತ್ಯಾಂಶ

ಮನುಷ್ಯನನ್ನು ಹೋಲುವ ತೋಳವೊಂದರ ವಿಡಿಯೊಗಳ ಸ್ಕ್ರೀನ್‌ ಶಾಟ್‌ ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಈ ವಿಡಿಯೊವನ್ನು ಹೋಲುವ ಹಲವು ಕ್ಲಿಪ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದವು. “Werewolf founded in Brazil… do you believe?” ಎಂಬ ಟೈಟಲ್‌ನೊಂದಿಗೆ anilmal good stories ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿರುವ ವಿಡಿಯೊವನ್ನು ಪರಿಶೀಲಿಸಿದೆವು. ಈ ವಿಡಿಯೊವನ್ನು ಜೂನ್‌ 20, 2021ರಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

https://www.youtube.com/watch?v=W0hvvgSyQQQ

ಈ ವಿಡಿಯೊದ ಆಧಾರದೊಂದಿಗೆ ಮತ್ತಷ್ಟು ಪರಿಶೀಲನೆ ಮಾಡಿದಾಗ ಮನುಷ್ಯನನ್ನು ಹೋಲುವ ತೋಳದ ವಿಡಿಯೊವನ್ನು ಅನೇಕರು ತರಹೇವಾರಿ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿರುವುದು ತಿಳಿದುಬಂದಿದೆ. ಈ ತೋಳದ ಕಲಾಕೃತಿಯ ಕುರಿತು ಪ್ರಖ್ಯಾತ ಫ್ಯಾಕ್ಟ್‌ಚೆಕ್‌ ಸಂಸ್ಥೆಯಾದ Factlyಯು ಜುಲೈ 4, 2021ರಂದು ಸತ್ಯಶೋಧನೆ ವರದಿಯೊಂದನ್ನು ಮಾಡಿದೆ.

“ಸಿಯಾಲ್‌ಕೋಟ್‌ ಗಡಿಯಲ್ಲಿ ಪಾಕ್‌ ಸೇನೆಯು ವೇರ್‌ವೂಲ್ಫ್‌ ಪ್ರಾಣಿಯನ್ನು ಹೊಡೆದು ಸಾಯಿಸಲಾಗಿದೆ” ಎಂಬ ಪ್ರತಿಪಾದನೆಯೊಂದಿಗೆ ವಿಡಿಯೊ ವೈರಲ್ ಆಗಿದ್ದಾಗ, ಫ್ಯಾಕ್ಟ್‌ಲಿ ಸಂಸ್ಥೆ ಫ್ಯಾಕ್ಟ್‌ಚೆಕ್‌ ಮಾಡಿರುವುದನ್ನು ಕಾಣಬಹುದು.

https://www.youtube.com/watch?v=PJrS7L34KeE

“ಈ ವಿಡಿಯೊವನ್ನು ರಿವರ್ಸ್ ಸರ್ಚ್ ಮಾಡಿದಾಗ 2020ರ ನವೆಂಬರ್‌‌ 27ರಂದು ಇನ್ಸ್‌ಟಾಗ್ರಾಮ್‌ ಖಾತೆಯಲ್ಲಿ ರೊಬ್ಕೋಬಸ್ಕಿ ಎಂಬವರು ಇದೇ ರೀತಿಯ ವಿಡಿಯೊಗಳನ್ನು ಹಂಚಿಕೊಂಡಿರುವುದು ಕಂಡು ಬಂತು. ಜೋಸೆಫ್‌ ರೊಬ್ಕೋಬಸ್ಕಿ ಅವರು ಹವ್ಯಾಸಿ ಶಿಲ್ಪಾಕಲಾ ಕಲಾವಿದರಾಗಿದ್ದಾರೆ. ವೇರ್‌ವೂಲ್ಫ್‌ (ಮನುಷ್ಯರೂಪದ ತೋಳ) ಹೋಲುವ ಹಲವು ಪೋಸ್ಟ್‌ಗಳನ್ನು ರಾಬ್ಕೋಬಸ್ಕಿ ಅವರ ಖಾತೆಯಲ್ಲಿ ಕಾಣಬಹುದು.

ಪಾಟಿ ಕ್ಯಾಟರ್‌ ಎಂಬವವರು ಅಪ್‌ಲೋಡ್‌ ಮಾಡಿರುವ ವಿಡಿಯೊವೊಂದು ರಾಬ್ಕೋಬಸ್ಕಿ ಅವರ ಕುರಿತು ಬೆಳಕು ಚೆಲ್ಲುತ್ತದೆ.

https://www.youtube.com/watch?v=kATCYMqqovQ

ದೈತ್ಯಾಕಾರದ ಶಿಲ್ಪಗಳು ಮತ್ತು ಸ್ಪೆಷಲ್‌ ಎಫೆಕ್ಟ್‌ಗಳನ್ನು ರಚಿಸುವ ಜಟಿಲತೆಗಳ ಬಗ್ಗೆ ರಾಬ್ಕೊಬಸ್ಕಿ ಮಾತನಾಡುತ್ತಾರೆ. ರೊಬ್ಕೊಬಸ್ಕಿ ಅವರು ಅರಿಕ್ಸೋನಾದ ಫೀನಿಕ್ಸ್‌ನವರು ಎಂದು ವಿಡಿಯೊ ವಿವರಣೆ ಹೇಳುತ್ತದೆ. ರೊಬ್ಕೋಬಸ್ಕಿಯವರು ಹವ್ಯಾಸಿ SFX ಶಿಲ್ಪ ಕಲಾವಿದ ಮತ್ತು ಕಲಾ ನಿರ್ದೇಶಕ ಎಂದು ತಿಳಿಯುತ್ತದೆ. ಲಾಸ್ ಏಂಜಲೀಸ್ – ಆಧಾರಿತ ದೂರದರ್ಶನ ಮತ್ತು ಚಲನಚಿತ್ರ ನಿರ್ಮಾಣ ಸ್ಟುಡಿಯೋ ಟ್ರೆಮುಲಸ್ ಮೋಷನ್ ಪಿಕ್ಚರ್ಸ್ ಟ್ವೀಟ್ ಮಾಡಿ, “ರೋಬ್ಕೊಬಸ್ಕಿ ಅವರು`Unsanctified’ ಎಂಬ ಶೀರ್ಷಿಕೆಯ ಚಲನಚಿತ್ರಕ್ಕಾಗಿ ಮನುಷ್ಯರೂಪದ ತೋಳವನ್ನು ರಚಿಸಿದ್ದಾರೆ” ಎಂದು ತಿಳಿಸಿದೆ. ಟ್ವೀಟ್ ಪ್ರಕಾರ, “ಅರ್ಜೆಂಟೀನಾ ಮತ್ತು ಬ್ರೆಜಿಲ್‌ನಲ್ಲಿ ಜನರು ಇದನ್ನು ನಿಜವಾದ ತೋಳವೆಂದು ನಂಬಿದ್ದಾರೆ” ಫ್ಯಾಕ್ಟ್‌ಲಿ ವರದಿ ಮಾಡಿದೆ.

https://twitter.com/motiontremulous/status/1405897387214884871?lang=en

ಸಿಯೋಲ್‌ ಕೋಟ್‌ ಗಡಿಯಲ್ಲಿ ಪಾಕ್‌ ಸೇನೆಯಿಂದ ಹತ್ಯೆಯಾದ ಪ್ರಾಣಿಯೆಂದು ವೈರಲ್ ಆದ ಈ ಕಲಾಕೃತಿ ಈಗ, ತುಮಕೂರು ಜಿಲ್ಲೆಗೆ ವಿಚಿತ್ರ ಪ್ರಾಣಿಯೊಂದು ಬಂದಿದೆ ಎಂಬ ಪ್ರತಿಪಾದನೆಯೊಂದಿಗೆ ವೈರಲ್‌ ಆಗಿದೆ. ಇದು ಸಿನಿಮಾಕ್ಕಾಗಿ ಮಾಡಿದ ಕಲಾಕೃತಿಯೇ ಹೊರತು ನಿಜವಾದ ಪ್ರಾಣಿಯ ದೃಶ್ಯವಲ್ಲ.

ಸಾವಿನ ದೃಶ್ಯಗಳ ಸತ್ಯಾಸತ್ಯತೆ

ಕಲಾಕೃತಿಯೊಂದಿಗೆ ಗಾಯಗೊಂಡು ಸಾವಿಗೀಡಾದವರ ದೃಶ್ಯಗಳನ್ನೂ ಹಂಚಿಕೊಳ್ಳಲಾಗುತ್ತಿದೆ. ಮಗುವೊಂದು ಗಾಯಗೊಂಡಿರುವ ವಿಡಿಯೊವೂ ಇದರಲ್ಲಿದೆ. ಇದನ್ನು ಪರಿಶೀಲಿಸಿದಾಗ, ಇದೇ ದೃಶ್ಯವನ್ನು ಹೋಲುವ ಸುದ್ದಿಯೊಂದು ಪತ್ತೆಯಾಗಿದೆ. ಪಶ್ಚಿಮ ಬಂಗಾಳದ ಮಾಲ್‌ಬಜಾರ್‌ನ ಮೆಟ್ಲಿ ಬ್ಲಾಕ್‌ನಲ್ಲಿ ಕಾಡು ಪ್ರಾಣಿಗಳು ದಾಳಿ ಮಾಡಿರುವ ಸುದ್ದಿ ಇದಾಗಿದೆ. ಮಗು ಹಾಗೂ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ.

ಅರಣ್ಯಾಧಿಕಾರಿಗಳು ಈ ಕಾಡುಪ್ರಾಣಿಯನ್ನು ಸೆರೆ ಹಿಡಿದಿದ್ದು, ಕಳೆದ ನವೆಂಬರ್‌ನಲ್ಲಿ ಕಾಡು ಕರಡಿಗಳ ದಾಳಿ ಕುರಿತು ಹಲವು ಸುದ್ದಿವಾಹಿನಿಗಳು ಈ ಕುರಿತು ವರದಿ ಮಾಡಿರುವುದನ್ನು ಕಾಣಬಹುದು.

ವಾಟ್ಸ್‌ಆಪ್‌ನಲ್ಲಿ ಮತ್ತೊಂದು ವಿಡಿಯೊ ಹರಿದಾಡಿದೆ. ವಿಚಿತ್ರ ಪ್ರಾಣಿಯು ಒಬ್ಬ ಪುರುಷ ಹಾಗೂ ಮಹಿಳೆಯನ್ನು ಕೊಂದಿರುವುದಾಗಿ ಬಿಂಬಿಸಲಾಗಿದೆ. ಆದರೆ ಇದು ಕೂಡ ಸುಳ್ಳಾಗಿದೆ. ಈ ವಿಡಿಯೊ ಯಾವುದೋ ಅಪರಾಧ ಪ್ರಕರಣವೆಂದು ಶಂಕಿಸಬಹುದೇ ಹೊರತು, ಸ್ಥಳೀಯ ಪ್ರಕರಣವಾಗಿಲ್ಲ. ಈ ವಿಡಿಯೊ ಎಲ್ಲಿಯದ್ದು ಎಂಬುದು ಪತ್ತೆಯಾಗಿಲ್ಲ.

ಯಾವುದಾದರೂ ಕೊಲೆ ಪ್ರಕರಣ ನೊಣವಿನಕೆರೆ ಹಾಗೂ ಹೊಸಕೆರೆ ವ್ಯಾಪ್ತಿಯಲ್ಲಿ ಘಟಿಸಿದೆಯೇ ಎಂದು ತಿಳಿಯಲು ಪೊಲೀಸ್ ಠಾಣೆಗಳಿಗೆ ಕರೆ ಮಾಡಲಾಯಿತು. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಗೆ ಹೊಸಕೆರೆ ಬರಲಿದೆ. “ನಮ್ಮ ವ್ಯಾಪ್ತಿಯಲ್ಲಿ ಇಂತಹ ಯಾವುದೇ ಪ್ರಕರಣಗಳು ನಡೆದಿಲ್ಲ” ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ತಿಪಟೂರು ತಾಲ್ಲೂಕಿನ ನೊಣವಿನಕೆರೆ ಪೊಲೀಸರಿಗೆ ಕರೆ ಮಾಡಿದಾಗ, “ಈ ಸುದ್ದಿಯ ಕುರಿತು ಸ್ಪಷ್ಟನೆ ಕೇಳಿ ಅನೇಕರು ಕರೆ ಮಾಡುತ್ತಿದ್ದಾರೆ. ಇದು ಸುಳ್ಳು ಸುದ್ದಿಯಾಗಿದ್ದು, ನಮ್ಮ ವ್ಯಾಪ್ತಿಯಲ್ಲಿ ಯಾವುದೇ ಕೊಲೆಯಾಗಿಲ್ಲ” ಎಂದು ತಿಳಿಸಿದ್ದಾರೆ.


ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್‌: ರಾಹುಲ್‌ ಸಾಮರ್ಥ್ಯ ಅಲ್ಲಗಳೆದು ಕಾಂಗ್ರೆಸ್ ವಕ್ತಾರರೊಬ್ಬರು ಮೋದಿಯನ್ನು ಹೊಗಳಿದ್ದಾರೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...