Homeಮುಖಪುಟಬಿಸಿಲು, ಬರ ಅಂದ್ರೆ ಇವರಿಗೆ ವರ. ವಿಜಯಪುರ ಜನರ ವಿಶೇಷ ಸ್ಟೋರಿ ಓದಿ

ಬಿಸಿಲು, ಬರ ಅಂದ್ರೆ ಇವರಿಗೆ ವರ. ವಿಜಯಪುರ ಜನರ ವಿಶೇಷ ಸ್ಟೋರಿ ಓದಿ

ಬಿಸಿಲೆಂಬುದು ಕೆಂಡದ ಮಳೆಯಾದರೂ ದುಡಿದು ತಿನ್ನುವವರ ಪಾಲಿಗೆ ಕೆಂಡ ಸಂಪಿಗೆಯಾಗಿದೆ. ಅದರೊಳಗೆ ಹಿತವಾದ ಆರೋಗ್ಯಪೂರ್ಣವಾದ ಬಿಸಿಯಿದೆ.

- Advertisement -
- Advertisement -

| ಶಿವಾ |

ವಿಜಯಪುರ ಬಿಸಿಲು ಎಂದರೆ ಸಾಕು ರಾಜ್ಯದ ಜನರು ನಲುಗಿ ಹೋಗಿ, ಬೇಡವೇ ಬೇಡ ವಿಜಯಪುರ ಸಹವಾಸ ಎಂದು ದೂರವೇ ಸರಿಯುತ್ತಾರೆ. ಆದರೆ ಇದೇ ಕೆಂಡದ ಮಳೆಯಂತಹ ಬಿಸಿಲು ಮತ್ತು ಬರ ಕೆಲವರಿಗೆ ವರದಾನವಾಗಿ ಪರಿಣಮಿಸಿದೆ.

ಬಿಸಿಲು ಮನುಷ್ಯನ ಜೀವನಕ್ಕೆ, ಅಂಗಾಗಕ್ಕೆ ಅನ್ನಾಂಗ (ವಿಟಮಿನ್) ನೀಡುವುದು. ವಿಜಯಪುರ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾದರೆ ಭೂಮಿಯೊಳಗಿನ ಅಂತರ್ಜಲ ಕಡಿಮೆಯಾಗುತ್ತದೆ. ಜನ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುವುದಿಲ್ಲ. ಬರಗಾಲ ಎದುರಿಸಲಾಗದವರು ಗುಳೆ ಹೋಗುತ್ತಾರೆ, ಮಳೆ ಇರುವ ಕಡೆಗೆ. ಆದರೆ, ಇದೇ ನಮ್ಮೂರು, ಇಲ್ಲೇ ನಮ್ಮ ಸೂರು, ಇಲ್ಲೆ ನಮ್ಮ ಬೇರು ಎಂದು ವಿಜಯಪುರದಲ್ಲಿ ಬಿಸಿಲು ಮತ್ತು ಬರದ ವಿರುದ್ಧ ಹೋರಾಡಿ, ಜೀವನದಲ್ಲಿ ಒಂದು ಹೊತ್ತಿನ ಗಂಜಿ ಸಂಪಾದಿಸುತ್ತ, ಕೃಷಿ ಸೇರಿದಂತೆ ಇತರೆ ಗುಡಿ ಕೈಗಾರಿಕೆ ಕಾರ್ಮಿಕರು ಇಲ್ಲಿದ್ದಾರೆ. ಬಿಸಿಲು ರೈತರ ಪಾಲಿಗೆ ಅತ್ಯಂತ ಆಪ್ತ ಮಿತ್ರವಾಗಿದೆ. ಅದರಲ್ಲೂ ರೈತ ಮಹಿಳೆಯರು ಈ ಬಿಸಿಲನ್ನು ಹೆಚ್ಚು ಉಪಯುಕ್ತವಾಗಿ ಬಳಸಿಕೊಳ್ಳುತ್ತಾರೆ. ರಾಶಿ ಮಾಡಿದ ಫಸಲನ್ನು ಸಂರಕ್ಷಿಸುವುದಕ್ಕೆ ಈ ಬಿಸಿಲು ನೆರವಾಗುವುದು.

ಹಗೆವುನಲ್ಲಿ ತುಂಬಿಟ್ಟ ದವಸ, ಧಾನ್ಯ, ಕಾಳು ಕಡ್ಡಿಗಳನ್ನು ಹೊರ ತೆಗೆದು, ಬಿಸಿಲಿಗೆ ಒಣ ಹಾಕುವರು. ಉಗ್ರಾಣದಲ್ಲಿರುವ ಆಹಾರ ಧಾನ್ಯಗಳಿಗೆ ಅಂಟಿರುವ ನುಶಿ ಪೀಡೆ, ಹೇನು ಪೀಡೆ, ಜಿಗಿ ಪೀಡೆ ಇತ್ಯಾದಿ ಹಾನಿಕಾರಕ ಕ್ರಿಮಿಕೀಟಗಳನ್ನು ನಾಶ ಮಾಡಲು ಈ ಬಿಸಿಲನ್ನೆ ರಾಮಬಾಣವಾಗಿ ಬಳಸುವರು.

ಗೋಣಿ ಚೀಲದಲ್ಲಿ ತುಂಬಿರುವ ಸಜ್ಜೆ, ಜೋಳ, ಶೇಂಗಾ, ಕಡಲೆ, ತೊಗರಿ ದ್ವಿದಳ ಧಾನ್ಯಗಳಿಗೆ ನುಶಿ ಪೀಡೆ ಅಂಟುವುದು ಬಲು ಬೇಗ. ಹಾಗೇ ಅವು ಕಾಳು ಕಡ್ಡಿಗಳನ್ನು ನಾಶ ಪಡಿಸುತ್ತವೆ. ಮುಂಬರುವ ಮಳೆಗಾಲದ ಹೊತ್ತಿಗೆ ಆಹಾರ ಧಾನ್ಯಕ್ಕೆ ಅಂಟುವ ಕ್ರಿಮಿಕೀಟಗಳು ಸಂಪೂರ್ಣವಾಗಿ ಎಲ್ಲ ಅನ್ನಸಂಪತ್ತನ್ನು ತಿಂದು ಹಾಕುತ್ತವೆ. ಆಗ ರೈತ ಕಂಗಾಲಾಗುತ್ತಾನೆ.
ಮುಂಬರುವ ಅಪಾಯವನ್ನು ಗಮನದಲ್ಲಿಟ್ಟುಕೊಂಡು, ಕ್ರಿಮಿಕೀಟಗಳ ನಾಶಕ್ಕಾಗಿ ದವಸ- ಧಾನ್ಯಗಳನ್ನು ಬಿಸಿಲಿಗೆ ಹಾಕುತ್ತಾರೆ. ತಿನ್ನುವ ಆಹಾರ ಧಾನ್ಯ ಸ್ವಚ್ಛವಾಗಿದ್ದರೆ, ಆರೋಗ್ಯವು ಸದೃಢವಾಗಿರುತ್ತದೆ.

ವಿಜಯಪುರದ ಬಿಸಿಲು ಕೇವಲ ಆಹಾರ ಧಾನ್ಯ ಸಂರಕ್ಷಿಸುವುದಕ್ಕೆ ಅಷ್ಟೆ ಅಲ್ಲ. ಅದು ಬರದಿಂದ ಗುಳೆ ಹೋಗುವವರ ಜನರಿಗೆ ಬದುಕಿನ ಪಾಠ ಹೇಳುವ ನೇಸರ ಗುರುವಾಗಿದೆ.

ಬಿಸಿಲು ದುಡುಮೆಯ ಟಿಸಿಲು:
ಬಹುತೇಕ ಜನ ಗೃಹಿಣಿಯರು ಈ ಬೇಸಿಗೆ ಕಾಲಕ್ಕೆ ಕಾಯ್ದು ಕುಳಿತಿರುತ್ತಾರೆ. ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು, ಹಾಗೇ ಅದರಿಂದ ದುಡಿಮೆಯ ದಾರಿಯನ್ನು ಕಂಡುಕೊಳ್ಳಲು.

ಶಾವಿಗೆ ಹೊಸೆದು, ಅದನ್ನು ಬಿಸಿಲಿಗೆ ಒಣ ಹಾಕಿ, ಸಂಜೆ ಹೊತ್ತಿಗೆ ಅದನ್ನು ಪ್ಯಾಕೇಟ್ ಮಾಡಿ, ಸ್ಥಳೀಯ ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಚಳಿಗಾಲ, ಮಳೆಗಾಲದಲ್ಲಿ ಬದುಕು ತಣ್ಣಗಿರಲೆಂದು ಬೇಸಿಗೆ ಬಿಸಿಲನ್ನು ಬಳಸಿಕೊಳ್ಳುತ್ತಾರೆ.

ಹಾಗೇ ಹಪ್ಪಳ, ಸಂಡಿಗೆ, ಉಪ್ಪಿನ ಕಾಯಿ ಸೇರಿದಂತೆ ಕುರುಕಲು ತಿಂಡಿ ಈ ಎಲ್ಲ ತಿನಿಸುಗಳು ಬಿಸಿಲಿನ ಬಿಸಿಗೆ ಸಿಲುಕಿ ಹದವಾಗಿ ತಿನ್ನುವುದಕ್ಕೆ ರೂಪುಗೊಂಡಿರುತ್ತವೆ. ಅದನ್ನು ರಾತ್ರಿ ಹೊತ್ತಿಗೆ ಕುಟುಂಬದವರೊಂದಿಗೆ ಊಟ ಮಾಡುವಾಗ, ಬಿಸಿಲನ್ನು ನೆನೆಯದೇ ಇರಲಾರರು.

ಬಿಸಿಲು ನಗರದಲ್ಲಿರುವ ಕ್ರಿಯಾಶೀಲ ಮಹಿಳೆಯರಿಗೆ ಇದು ಹೊಸ ಬೆಳದಿಂಗಳ ಬೆಳಕಾಗಿದೆ. ಮರದ ನೆರಳ ಕೆಳಗೆ ಕುಳಿತು ಕೌದಿಯನ್ನು ಹೊಲೆಯುವುದು, ಬಳೆ ತೊಡಿಸುವುದು, ಮದರಂಗಿ ಹಾಕುವುದು, ಬಟ್ಟೆಗಳ ಮೇಲೆ ಹೆಣಿಗೆ, ಸ್ವೇಟರ್ ಹೆಣೆಯುವುದು ಈ ಬಿಸಿಲು ಕಾಲದಲ್ಲಿಯೆ ರೂಪ ಪಡೆಯುತ್ತವೆ.

ಬಿಸಿಲು ಏಪ್ರಿಲ್, ಮೇ ತಿಂಗಳಲ್ಲಿ ಜನರನ್ನು ಕಂಗೆಡಿಸುವಂತಿರುತ್ತದೆ. ಈ ಎರಡು ತಿಂಗಳ ಬಿಸಿಲನ್ನು ಬಳಸಿಕೊಂಡು ಜಿಲ್ಲೆಯ ಬಹುತೇಕ ಮಹಿಳೆಯರು ತಮ್ಮಲ್ಲಿರುವ ಕೆಲಸ, ಕಾಯಕ, ಕಲೆಯ ಮೂಲಕ ಅನಾವರಣಗೊಳಿಸುತ್ತಾರೆ.

ಬಿಸಿಲೆಂಬುದು ಕೆಂಡದ ಮಳೆಯಾದರೂ ದುಡಿದು ತಿನ್ನುವವರ ಪಾಲಿಗೆ ಕೆಂಡ ಸಂಪಿಗೆಯಾಗಿದೆ. ಅದರೊಳಗೆ ಹಿತವಾದ ಆರೋಗ್ಯಪೂರ್ಣವಾದ ಬಿಸಿಯಿದೆ.

ಇನ್ನೇನು ಬೇಸಿಗೆ ಅಂತ್ಯಕ್ಕೆ ಬಂದಿದ್ದು, ಮಳೆಗಾಲ ಸನಿಹಗೊಂಡಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ವಿಜಯಪುರದಲ್ಲಿ ಜೋರಾದ ಗಾಳಿ, ಗುಡುಗು, ಸಿಡಿಲು ಮಿಶ್ರಿತ ಮಳೆಯಾಗಿದೆ. ಈ ಅಕಾಲಿಕ ಮಳೆ ಪ್ರತಿ ವರ್ಷ ಹೀಗೆ ಸುರಿಯುವುದು ವಾಡಿಕೆಯಾಗಿದೆ. ಪ್ರಸಕ್ತ ವರ್ಷದ ಬೇಸಿಗೆಯ ಮೇ ತಿಂಗಳಲ್ಲಿ 42.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದರೆ, ಏಪ್ರಿಲ್‍ನಲ್ಲಿ 42.6 ರಷ್ಟು ಉಷ್ಣಾಂಶ ದಾಖಲಾಗಿತ್ತು. ಅಲ್ಲದೆ ರಾತ್ರಿಯಲ್ಲೂ 28 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲುಗೊಂಡು ಈ ಭಾಗದ ಜನರ ನಿದ್ರೆಗೆ ಕೊಳ್ಳಿಯಿಟ್ಟಂತಾಗಿ, ಸಾರ್ವಜನಿಕರು ನಿದ್ರೆಯಿಲ್ಲದೆ ಪರದಾಡಿರುವುದು ಸುಳ್ಳಲ್ಲ. ಹೀಗೆ ಸೂರ್ಯ ಪುತ್ರರು ಬಿಸಿಲು, ಬರವನ್ನು ತಮ್ಮ ವರವಾಗಿ ಬಳಸಿಕೊಂಡು, ಸುಡು ಬಿಸಿಲಿನಲ್ಲಿಯೇ ಗರಮ್ ಮರಮ್ ಚಹಾ, ಚೋಡಾ, ಮಿರ್ಚಿ ಭಜ್ಜಿ ತಿಂದು, ಬಿಸಿಲ ಬದುಕಿನ ಸುಖ ಅನುಭವಿಸುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...