Homeಮುಖಪುಟಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆ ಮತ್ತು ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆ ಮತ್ತು ಮಲ್ಲಿಕಾರ್ಜುನ ಖರ್ಗೆ

- Advertisement -
- Advertisement -

ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಎಂಬತ್ತನೆಯ ವಯಸ್ಸಿನಲ್ಲಿ ಕಾಂಗ್ರೆಸ್ಸಿನ ಅಖಿಲ ಭಾರತ ಅಧ್ಯಕ್ಷರಾಗಲಿದ್ದಾರೆ. ಕಾಂಗ್ರೆಸ್ಸಿಗೊಂದು ಚುನಾಯಿತ ಅಧ್ಯಕ್ಷರಿಲ್ಲದ ಕೊರತೆಗೆ, ಮಲ್ಲಿಕಾರ್ಜುನ ಖರ್ಗೆಯವರು ಆ ಸ್ಥಾನವನ್ನು ತುಂಬುವುದರೊಂದಿಗೆ ತಾಂತ್ರಿಕವಾಗಿ ಪರಿಹಾರ ಸಿಗಬಹುದು. ಆದರೆ ಕಾಂಗ್ರೆಸ್ ಇಂದು ಎದುರಿಸುತ್ತಿರುವ ನಾಯಕತ್ವದ ಕೊರತೆ ಈ ಮೂಲಕ ನೀಗುತ್ತದೆ ಎಂದು ಯಾರಾದರೂ ಭಾವಿಸಿದರೆ ಅದು ಅತಿಯಾದ ಆಶಾವಾದ ಆದೀತು. ಅಂತಹ ಆಶಾವಾದವನ್ನು ಸ್ವತಃ ಕಾಂಗ್ರೆಸ್ಸಿನ ಕಾರ್ಯಕತ್ರರೂ ಇಟ್ಟುಕೊಂಡಿರಲಾರರು.

ಅಂತೂ ಕರ್ನಾಟಕದವರೊಬ್ಬರು ಅಖಿಲ ಭಾರತ ಮಟ್ಟದ ರಾಜಕೀಯ ಹುದ್ದೆಯೊಂದನ್ನು ಹೊಂದಲಿದ್ದಾರೆ ಎನ್ನುವುದು ಒಂದು ರೀತಿಯಲ್ಲಿ ಪಕ್ಷಾತೀತವಾಗಿ ಸಂತಸಪಡಬೇಕಾದ ವಿಚಾರವಾದರೆ, ಕಾಂಗ್ರೆಸ್ ಪಕ್ಷ ಚಾರಿತ್ರಿಕವಾಗಿ ಬಸವಳಿದು ನಿಂತಿರುವ ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್ಸಿನ ಅಧ್ಯಕ್ಷರಾಗುತ್ತಿರುವುದರಲ್ಲಿ ಸವಾಲೆಷ್ಟು, ಸಂಭ್ರಮವೆಷ್ಟು ಎನ್ನುವುದು ಇನ್ನೊಂದು ಪ್ರಶ್ನೆ. ಅದ್ಯಾಕೋ ಕರ್ನಾಟಕದವರು ರಾಷ್ಟ್ರಮಟ್ಟದ ರಾಜಕೀಯ ಪದವಿ ಹೊಂದುವ ಅವಕಾಶಗಳು ಬಂದಾಗಲೆಲ್ಲಾ ಅದರೊಂದಿಗೆ ಏನೋ ಒಂದು ವಿಲಕ್ಷಣ ಬೆಳವಣಿಗೆ ತಳುಕುಹಾಕಿಕೊಂಡಿರುತ್ತದೆ. ಕಾಂಗ್ರೆಸ್ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಎಸ್. ನಿಜಲಿಂಗಪ್ಪನವರು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದರು. ಅವರ ಅವಧಿಯಲ್ಲಿ ಕಾಂಗ್ರೆಸ್ ಚಾರಿತ್ರಿಕವಾಗಿ ಹೋಳಾಯಿತು. ಕರ್ನಾಟಕದ ಎಸ್.ಆರ್ ಬೊಮ್ಮಾಯಿ ಅವರು ಜನತಾ ದಳದ ಅಧ್ಯಕ್ಷರಾದರು. ಅಷ್ಟೊತ್ತಿಗೆ ರಾಷ್ಟ್ರಮಟ್ಟದಲ್ಲಿ ಜನತಾದಳದ ಅವನತಿ ಆರಂಭವಾಗಿತ್ತು. ಈಗ ಖರ್ಗೆಯವರು ನಿತ್ರಾಣ ಸ್ಥಿತಿಯಲ್ಲಿರುವ ಸ್ಥಿತಿಯಲ್ಲೇ ಕಾಂಗ್ರೆಸ್ಸಿನ ಅಧಿಪತ್ಯ ವಹಿಸಿಕೊಳ್ಳಲಿದ್ದಾರೆ.

ಎಸ್. ನಿಜಲಿಂಗಪ್ಪ

ಕಾಂಗ್ರೆಸ್ ಎದುರಿಸುತ್ತಿರುವ ಚಾರಿತ್ರಿಕ ನಾಯಕತ್ವ ಕೊರತೆಯ ಸಮಸ್ಯೆಗೆ ಹಲವಾರು ಆಯಾಮಗಳಿವೆ. ಆ ಪಕ್ಷದ ಉಳಿವಿಗೆ ನೆಹರು ಕುಟುಂಬದ ನಾಯಕತ್ವ ಅನಿವಾರ್ಯವೋ ಅಥವಾ ಆ ಪಕ್ಷದ ಕಾಯಕಲ್ಪಕ್ಕೆ ನೆಹರೂ ಕುಟುಂಬದ ಹೊರಗಿನವರೊಬ್ಬರು ಅಧ್ಯಕ್ಷರಾಗುವುದು ಅನಿವಾರ್ಯವೋ ಎಂಬ ಯಕ್ಷ ಪ್ರಶ್ನೆಗೆ ಯಾರ ಬಳಿಯೂ ಸರಿಯಾದ ಉತ್ತರವಿಲ್ಲ. ಸದ್ಯಕ್ಕೆ ನೆಹರೂ ಕುಟುಂಬದಲ್ಲಿ ಕಾಂಗ್ರೆಸ್ಸಿಗೆ ಅಧ್ಯಕ್ಷರಾಗುವ ಉಮೇದು ಯಾರಿಗೂ ಇಲ್ಲದೆ ಇರುವ ಕಾರಣವೋ ಏನೋ, ಪಕ್ಷಕ್ಕೊಬ್ಬರು ಚುನಾಯಿತ ಅಧ್ಯಕ್ಷರನ್ನು ತರುವ ನಿರ್ಧಾರವಾಗಿ ಪ್ರಕ್ರಿಯೆಗಳು ನಡೆಯುತ್ತಿವೆ. ಆದರೆ ಇದೀಗ ಚುನಾಯಿತರಾಗಲಿರುವ ಅಧ್ಯಕ್ಷರು ನಿಜಕ್ಕೂ ಚುನಾಯಿತ ಅಧ್ಯಕ್ಷರೇ? ಇಂತವರೇ ಅಧ್ಯಕ್ಷರಾಗಬೇಕು ಎಂದು ಕುಟುಂಬದವರು ನಿರ್ಧರಿಸಿ, ಅವರ ಕೈಯ್ಯಲ್ಲಿ ನಾಮಪತ್ರ ಹಾಕಿಸಿ, ಪಕ್ಷದ ಮತದಾರರಿಗೆ ಇಂತವರಿಗೆ ಮತ ಹಾಕಬೇಕು ಎನ್ನುವ ಸೂಚನೆಯನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ರವಾನಿಸಿ ಅಧ್ಯಕ್ಷರೊಬ್ಬರನ್ನು ಚುನಾಯಿಸಿದರೆ ಅದನ್ನು ಚುನಾವಣೆ ಅಂತ ಕರೆಯುವುದು ಸೂಕ್ತವಲ್ಲ. ಹಾಗೆಯೇ ಈ ರೀತಿ ಚುನಾಯಿತರಾಗುವ ಅಧ್ಯಕ್ಷರು ಪೂರ್ಣಾವಧಿ ಅಧ್ಯಕ್ಷರೇನೋ ಆಗಬಹುದು, ಆದರೆ ಚುನಾಯಿತ ಅಧ್ಯಕ್ಷರಿಗಿರುವ ಸ್ವಾಯತ್ತತೆ ಅವರಿಗೆ ಎಂದೂ ಇರುವುದಿಲ್ಲ. ಆದರೂ ಚುನಾವಣೆ ನಡೆಯುತ್ತಿದೆ, ಚುನಾಯಿತ ಅಧ್ಯಕ್ಷರು ಅಂತ ಒಬ್ಬರು ಪಕ್ಷದಲ್ಲಿರುತ್ತಾರೆ. ಸಂಪೂರ್ಣ ಸ್ವಾಯತ್ತತೆ ಇಲ್ಲದ ಸ್ಥಿತಿಯಲ್ಲೂ ದೊಡ್ಡ ಪಕ್ಷದ ಅಖಿಲ ಭಾರತ ಮಟ್ಟದ ಅಧ್ಯಕ್ಷಗಿರಿ ಎಂದರೆ ಅದು ದೊಡ್ಡ ರಾಜಕೀಯ ಜವಾಬ್ದಾರಿ. ಅಷ್ಟರಮಟ್ಟಿಗೆ ಖರ್ಗೆಯವರಿಗೆ ಅಭಿನಂದನೆ ಸಲ್ಲುತ್ತದೆ.

ಚುನಾವಣಾ ಕಣದಲ್ಲಿ ಇನ್ನೊಬ್ಬ ಅಭ್ಯರ್ಥಿ ಶಶಿ ತರೂರ್ ಇದ್ದಾರೆ. ಖರ್ಗೆಯವರು ಕುಟುಂಬದ ಅಭ್ಯರ್ಥಿ ಎನ್ನುವ ಕಾರಣಕ್ಕೆ ಶಶಿ ತರೂರ್ ನಾಮಪತ್ರ ಹಿಂತೆಗೆದುಕೊಂಡಿಲ್ಲ ಮತ್ತು ಹಿಂತೆಗೆದುಕೊಳ್ಳುವುದಿಲ್ಲ ಅಂತ ಅವರು ಹೇಳಿದ್ದಾರೆ. ಕುಟುಂಬದ ಬಲ ಇಲ್ಲದೆ ಅವರು ಗೆಲ್ಲಲಾರರು ಎನ್ನುವುದು ಖಾತ್ರಿ. ಆದರೂ ಕಾಂಗ್ರೆಸ್ಸಿನ ಹಿರಿಯ ನಾಯಕರಲ್ಲೊಬ್ಬರಾದ ಪಿ.ಚಿದಂಬರಂ ಅವರು ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡುತ್ತಾ ’ಶಶಿ ತರೂರ್ ಅವರು ಗೆದ್ದರೂ ಗೆಲ್ಲಬಹುದು ಸೋತರೂ ಸೋಲಬಹುದು, ಅದು ಕಾಂಗ್ರೆಸ್ಸಿನ ಎಲೆಕ್ಟೊರಲ್ ಕಾಲೇಜಿನ ಸದಸ್ಯರು ಹೇಗೆ ಮತ ಚಲಾಯಿಸುತ್ತಾರೆ ಎನ್ನುವುದರ ಮೇಲೆ ನಿರ್ಣಯ ಆಗುತ್ತದೆ’ ಅಂತ ಒಗಟಾಗಿ ಹೇಳಿದ್ದಾರೆ. ಹಾಗೆ ನೋಡಿದರೆ ಒಂದು ವೇಳೆ ಶಶಿ ತರೂರ್ ಅವರೇನಾದರೂ ಅಕಸ್ಮಾತ್ತಾಗಿ ಗೆದ್ದುಬಿಟ್ಟರೆ ಪಕ್ಷದ ಆಂತರಿಕ ಬೆಳವಣಿಗೆಯ ದೃಷ್ಟಿಯಿಂದ ಅದು ಸೂಕ್ತ ಆಯ್ಕೆ ಆಗುತ್ತದೆ. ಕೊನೆಗೂ ಪಕ್ಷ ನೆಹರೂ ಕುಟುಂಬದ ನೆರಳಿನಿಂದ ನಿಜಕ್ಕೂ ಹೊರಬಂದ ಸೂಚನೆ ಅದಾಗುತ್ತದೆ. ಅದೇ ರೀತಿಯಲ್ಲಿ ಪಕ್ಷಕ್ಕೊಂದು ಹೊಸ ಯೋಚನೆ ಮತ್ತು ಪಕ್ಷವನ್ನು ಹೊಸ ತಲೆಮಾರಿಗೆ ಪರಿಚಯಿಸುವ ದೃಷ್ಟಿಯಿಂದಲೂ ಶಶಿ ತರೂರ್ ಉತ್ತಮ ಆಯ್ಕೆ ಆಗಬಹುದಾಗಿತ್ತೋ ಏನೋ? ಆದರೆ ಕಾಂಗ್ರೆಸ್ಸಿನ ಮುಂದಿರುವ ದ್ವಂದ್ವ ಏನೆಂದರೆ, ಹೊಸ ತಲೆಮಾರನ್ನು ತಲುಪುವ ಮುನ್ನ ಅದಕ್ಕೆ ಹಳೆ ತಲೆಮಾರಿನ ಬೆಂಬಲವನ್ನು ಉಳಿಸಿಕೊಳ್ಳಬೇಕಾಗಿದೆ. ಅದಕ್ಕೆ ಖರ್ಗೆಯವರಂತಹ ಆಯ್ಕೆ ಅನಿವಾರ್ಯ. ಅದಕ್ಕಿಂತಲೂ ಮುಖ್ಯವಾಗಿ ಹೊಸ ತಲೆಮಾರು ಮತ್ತು ಹಳೆ ತಲೆಮಾರು ಎರಡನ್ನೂ ಸರಿತೂಗಿಸಿಕೊಂಡು ಹೋಗಬಲ್ಲ ಒಬ್ಬ ನಾಯಕ ಬಹುಶಃ ಕಾಂಗ್ರೆಸ್ಸಿನಲ್ಲಿ ಇಲ್ಲ. ಒಂದು ವೇಳೆ ಅಂತವರೊಬ್ಬರು ಇದ್ದರೂ ಅವರು ಕುಟುಂಬಕ್ಕೆ ಒಪ್ಪಿಗೆ ಆಗಲಾರದೆ ಇದ್ದರೆ ಅವರಿಗೆ ಅವಕಾಶ ಸಿಗಲಾರದು ಎನ್ನುವ ಸ್ಥಿತಿ ಕಾಂಗ್ರೆಸ್ಸಿನಲ್ಲಿ ಈಗಲೂ ಇದೆ. ಈ ಎಲ್ಲ ಕಾರಣಕ್ಕೆ ಕುಟುಂಬದ ನಿಷ್ಠಾವಂತ ಮತ್ತು ಹಳೆಯ ತಲೆಮಾರಿನವರಿಗೆ ಸ್ವೀಕೃತರಾಗುವ ಖರ್ಗೆ ಅಧ್ಯಕ್ಷಗಿರಿಯ ಹತ್ತಿರಬಂದು ನಿಂತಿದ್ದಾರೆ.

ಚಿದಂಬರಂ

ಚಿದಂಬರಂ ಅವರು ಇನ್ನೊಂದು ವಿಷಯ ಹೇಳಿದ್ದಾರೆ. ಖರ್ಗೆಯವರ ಬದಲಿಗೆ (ಮತ್ತು ತರೂರ್ ಅವರ ಬದಲಿಗೂ) ಯಾರಾದರೂ ಹಿಂದಿ ಮಾತೃಭಾಷೆಯ ಬಲ್ಲ, ಉತ್ತರ ಭಾರತದ ರಾಜ್ಯದವರು ಕಾಂಗ್ರೆಸ್ಸ್ ಅಧ್ಯಕ್ಷರಾಗಿದ್ದರೆ ಚೆನ್ನಾಗಿತ್ತೆಂದು. ಇದು ವಿಚಿತ್ರವಾಗಿದೆ. ಇನ್ನೂ ನಮ್ಮ ರಾಷ್ಟ್ರೀಯ ಪಕ್ಷದವರ ಮನಸ್ಥಿತಿ ಹೇಗಿದೆ ಎಂದರೆ, ರಾಷ್ಟ್ರಮಟ್ಟದ ರಾಜಕೀಯ ಪದವಿಗಳೇನಿದ್ದರೂ ಅದಕ್ಕೆ ಉತ್ತರದವರೇ ಆಗಬೇಕು. ಅಂದರೆ, ಉತ್ತರದವರ ಆಧಿಪತ್ಯವನ್ನು ಅರ್ಥಾತ್ ಹಿಂದಿಯವರ ಆಧಿಪತ್ಯ ಅಥವಾ ನಾಯಕತ್ವವನ್ನು ದಕ್ಷಿಣದವರು ಯಾ ಹಿಂದಿಯೇತರ ಭಾಷೆಯವರು ಒಪ್ಪಿಕೊಳ್ಳಬೇಕು; ಆದರೆ ದಕ್ಷಿಣದವರ ನಾಯಕತ್ವವನ್ನು ಉತ್ತರದವರು ಒಪ್ಪಿಕೊಳ್ಳುವುದಿಲ್ಲ ಎನ್ನುವುದು. ಈ ಮಾತ್ರನ್ನು ಹೇಳಿದ ಚಿದಂಬರಂ ದಕ್ಷಿಣವರೇ, ಅದರಲ್ಲೂ ತಮಿಳುನಾಡಿನವರು ಎನ್ನುವುದು ಇನ್ನೊಂದು ವಿಶೇಷ.

ಖರ್ಗೆ ಕರ್ನಾಟಕದವರಾಗಿರುವುದರಿಂದ ಈಗ ಎಲ್ಲರೂ ಕೇಳುತ್ತಿರುವ ಇನ್ನೊಂದು ಪ್ರಶ್ನೆಯೆಂದರೆ ಅವರು ಅಖಿಲ ಭಾರತ ಮಟ್ಟದಲ್ಲಿ ಕಾಂಗ್ರೆಸ್ಸಿನ ಅಧ್ಯಕ್ಷ ಸ್ಥಾನ ಪಡೆಯುತ್ತಿರುವುದು ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ 2023ರ ಚುನಾವಣೆಯಲ್ಲಿ ಯಾವ ರೀತಿಯಲ್ಲಿ ಸಹಾಯಕವಾಗಬಹುದೆಂದು. ಹೌದು ಸಹಾಯಕವಾಗುತ್ತದೆ ಅಂತ ಒಂದೇ ಪಟ್ಟಿಗೆ ಹೇಳಿ ಬಿಡಬಹುದು. ಆದರೆ, ಹೇಗೆ ಸಹಾಯಕವಾಗುತ್ತದೆ ಅಂತ ಕೇಳಿದರೆ ಬಿಡಿಸಿ ಹೇಳಲು ಕಷ್ಟ. ಏನೇ ಹೇಳುವುದಾದರೂ ಮೊದಲಿಗೆ ಇಲ್ಲಿ ಖರ್ಗೆಯವರ ಜಾತಿಯನ್ನು ಪ್ರಸ್ತಾಪಿಸಬೇಕಾಗುತ್ತದೆ. ಖರ್ಗೆಯವರು ಜಾತಿಯಿಂದ ದಲಿತರು ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್ಸಿನಲ್ಲಿ ಇವರಿಗೆ ನೀಡಿದ ಉನ್ನತ ಸ್ಥಾನ ಕರ್ನಾಟಕದಲ್ಲಿ ದಲಿತರ ಮತಗಳನ್ನು ಸೆಳೆಯಲು ಕಾಂಗ್ರೆಸಿಗೆ ಎಷ್ಟು ನೆರವಾಗಬಹುದು ಎನ್ನುವುದು ಇಲ್ಲಿರುವ ನಿಜವಾದ ಪ್ರಶ್ನೆ. ಕರ್ನಾಟಕದಲ್ಲಿ ಕಾಂಗೆಸ್ಸಿಗೆ ದಲಿತರ ಬೆಂಬಲ ಒಂದು ಸಂಕ್ರಮಣ ಸ್ಥಿತಿಯಲ್ಲಿದೆ. ರಾಜ್ಯದ ದಲಿತ ಮತದಾರರ ಪೈಕಿ ಎಡಗೈ ಪಂಗಡದ ದಲಿತರನ್ನು ಬಿಜೆಪಿ ದೊಡ್ಡಮಟ್ಟದಲ್ಲಿ ಸೆಳೆದಿದೆ. ಕಾಂಗ್ರೆಸ್ಸಿನಲ್ಲಿ ಈ ಪಂಗಡದ ದಲಿತ ನಾಯಕರಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎನ್ನುವ ಅತೃಪ್ತಿಯನ್ನು ಬಳಸಿಕೊಂಡ ಬಿಜೆಪಿ ಆ ಪಂಗಡದ ಕೆಲ ನಾಯಕರಿಗೆ ಅಧಿಕಾರದಲ್ಲಿ ವಿವಿಧ ಸ್ಥಾನಮಾನಗಳನ್ನು ನೀಡಿ ಅವರ ಬೆಂಬಲವನ್ನು ಭದ್ರಪಡಿಸಿಕೊಂಡಿದೆ.

ಶಶಿ ತರೂರ್

ದಲಿತರ ಬಲಗೈ ಪಂಗಡಕ್ಕೆ ಸೇರಿದ ಬಹಳಷ್ಟು ನಾಯಕರು ಕಾಂಗ್ರೆಸ್ಸಿನಲ್ಲಿ ಇದ್ದಾರೆ. ಹಾಗೆಂದು ಬಲಗೈ ಪಂಗಡಕ್ಕೆ ಸೇರಿದ ಎಲ್ಲಾ ದಲಿತ ಮತದಾರರು ಕಾಂಗ್ರೆಸ್ಸಿನೊಂದಿಗೆ ಹಿಂದಿನಂತೆ ಗಟ್ಟಿಯಾಗಿ ಇದ್ದಾರೆ ಎನ್ನುವ ಸ್ಥಿತಿ ಈಗ ಇಲ್ಲ. ಖರ್ಗೆಯವರ ಅಧ್ಯಕ್ಷ ಸ್ಥಾನ ದಲಿತ ಮತದಾರರಿಗೆ ಕಾಂಗ್ರೆಸ್ ಕುರಿತಂತೆ ಒಂದು ಸಕಾರಾತ್ಮಕವಾದ ಸಂದೇಶವನ್ನೇನೋ ರವಾನಿಸಬಹುದು. ಆದರೆ, ಬಿಜೆಪಿಯವರೊಂದಿಗೆ ಹೊಂದಿಕೊಂಡಿರುವ ಎಡಗೈ ದಲಿತ ಸಮುದಾಯವನ್ನು ಕಾಂಗ್ರೆಸ್ಸಿನತ್ತ ಒಲಿಸಿಕೊಳ್ಳಲು ಖರ್ಗೆಯವರಿಗೆ ಸಾಧ್ಯವೇ? ಅದೇ ರೀತಿ ಕಾಂಗ್ರೆಸ್ಸಿನೊಂದಿಗಿನ ಭಾವನಾತ್ಮಕ ಕಳಚಿಕೊಳ್ಳುತ್ತಿರುವ ಬಲಗೈ ಪಂಗಡದ ದಲಿತ ಮತದಾರರನ್ನು ಮತ್ತೊಮ್ಮೆ ಕಾಂಗ್ರೆಸ್ಸಿನ ಮತಬ್ಯಾಂಕ್ ಆಗಿ ಪರಿವರ್ತಿಸಬಲ್ಲ ಚಾಕಚಕ್ಯತೆಯನ್ನು ಖರ್ಗೆ ಪ್ರದರ್ಶಿಸಬಲ್ಲರೇ? ದಲಿತ ಮತದಾರರ ಆಶೋತ್ತರಗಳೂ ಬದಲಾಗಿವೆ. ಹೊಸ ತಲೆಮಾರಿನ ದಲಿತ ಮತದಾರರನ್ನು ಅಧಿಕಾರವಿಲ್ಲದ ಸ್ಥಿತಿಯಲ್ಲಿ ಒಲಿಸಿಕೊಳ್ಳಬೇಕಾದರೆ ಅಪಾರವಾದ ರಾಜಕೀಯ ಚಾಕಚಕ್ಯತೆಯ ಜತೆಗೆ ದಣಿವರಿಯದ ದುಡಿಮೆಯೂ ಬೇಕಾಗುತ್ತದೆ. ಬದಲಾವಣೆಗೆ ಒಗ್ಗಿಕೊಳ್ಳದ, ಹೊಸ ರಾಜಕೀಯ ನುಡಿಗಟ್ಟು ಅರ್ಥವಾಗದ ಹಳೆಯ ತಲೆಗಳನ್ನು ಸಂಭಾಳಿಸಿಕೊಂಡೆ ಕೆಲಸಮಾಡಬೇಕಾದ ಎಂಬತ್ತರ ಪ್ರಾಯದ ಖರ್ಗೆಯವರಿಗೆ ಈ ಚಾಕಚಕ್ಯತೆಯನ್ನು ಪ್ರದರ್ಶಿಸಲು ಸಾಧ್ಯ ಎಂದಾದಲ್ಲಿ, ದಣಿವರಿಯದೆ ದುಡಿದು ಯೋಚನೆಗಳನ್ನು ಯೋಜನೆಗಳಾಗಿ ಪರಿವರ್ತಿಸಿ ಅನುಷ್ಠಾನಗೊಳಿಸಬಲ್ಲ ಚೈತನ್ಯ ಇರುವುದಾದರೆ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರದಲ್ಲೂ ಕಾಂಗೆಸ್ಸಿಗೆ ಅವರ ಅಧ್ಯಕ್ಷಗಿರಿಯಿಂದ ಅನುಕೂಲ ಆಗುತ್ತದೆ. ಇಲ್ಲವಾದರೆ? ಇಲ್ಲವಾದರೆ ಏನೂ ಇಲ್ಲ. ಯಥಾಸ್ಥಿತಿಗಂತೂ ಅವರಿಂದ ಯಾವುದೇ ತೊಂದರೆ ಆಗುವುದಿಲ್ಲ.

 


ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಶಶಿ ತರೂರು v/s ಮಲ್ಲಿಕಾರ್ಜುನ ಖರ್ಗೆ; ದಿಗ್ವಿಜಯ್ ಸಿಂಗ್ ಕಣದಿಂದ ಹೊರಕ್ಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...