ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ಸರ್ಕಾರವು ಅಧ್ಯಾತ್ಮದ ವಿರೋಧಿಯಲ್ಲ, ಆದರೆ ರಾಜಕೀಯಕ್ಕಾಗಿ ಆಧ್ಯಾತ್ಮಿಕತೆಯ ಲಾಭವನ್ನು ಪಡೆದು ದ್ವೇಷ ಪ್ರಚಾರ ಮಾಡುವವರ ವಿರೋಧಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಅವರು ಬುಧವಾರ ಚೆನ್ನೈ ಬಳಿಯ ಮೈಲಾಪುರದಲ್ಲಿರುವ ಕಪಾಲೀಶ್ವರ ದೇವಸ್ಥಾನದಲ್ಲಿ ಮಾತನಾಡುತ್ತಿದ್ದರು.
ತಮಿಳು ಸಂತ ವಲ್ಲಲಾರ್ ಅವರ ಜನ್ಮದಿನವನ್ನು ಆಚರಿಸಲು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ (ಎಚ್ಆರ್ ಮತ್ತು ಸಿಇ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ, “ಧಾರ್ಮಿಕ ರಾಜಕಾರಣವನ್ನು ತನ್ನ ಉಳಿವಿನ ಮಾರ್ಗವಾಗಿ ಬಳಸಿಕೊಂಡ ರಾಜಕೀಯ ಪಕ್ಷಗಳು ಡಿಎಂಕೆ ಸರ್ಕಾರವು ಆಧ್ಯಾತ್ಮಿಕತೆಗೆ ವಿರುದ್ಧವಾಗಿದೆ ಎಂದು ಬಿಂಬಿಸಲು ಪ್ರಚಾರ ನಡೆಸುತ್ತಿದೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ನಾನು ಮತ್ತು ಡಿಎಂಕೆ ಸರ್ಕಾರವು ಆಧ್ಯಾತ್ಮಿಕತೆಗೆ ವಿರುದ್ಧವಾಗಿದೆ ಎಂಬ ಭಾವನೆ ಮೂಡಿಸಲು ನನ್ನ ಭಾಷಣದ ಭಾಗಗಳನ್ನು ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ, ಆದರೆ ಅದು ನಿಜವಲ್ಲ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
“ಡಿಎಂಕೆ ಆಧ್ಯಾತ್ಮದ ವಿರುದ್ಧವಲ್ಲ, ಆದರೆ ಅದನ್ನು ತಮ್ಮ ಸ್ವಾರ್ಥ ಕಾರ್ಯಸೂಚಿಯನ್ನು ಪೂರೈಸಲು ಮತ್ತು ಸಾಮಾಜಿಕ ತಾರತಮ್ಯವನ್ನು ಹರಡುವವರ ವಿರುದ್ಧ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ತಮಿಳುನಾಡಿನ ಧಾರ್ಮಿಕ ಸಂಸ್ಕೃತಿಯನ್ನು ಬಲ್ಲವರು ಅದನ್ನು ಅರ್ಥಮಾಡಿಕೊಳ್ಳುತ್ತಾರೆ” ಎಂದು ಅವರು ಹೇಳಿದ್ದಾರೆ.
“ದೇವರು ಒಬ್ಬನೇ ಮತ್ತು ಅವನು ಬೆಳಕಿನ ರೂಪದಲ್ಲಿರುತ್ತಾನೆ’’ ಎಂಬ ವಲ್ಲಲಾರ್ ಅವರ ವಾಕ್ಯವನ್ನು ನೆನಪಿಸಿಕೊಂಡ ಮುಖ್ಯಮಂತ್ರಿ, “ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರು ಕವಿಯಿಂದ ‘ಒಬ್ಬ ದೇವರು, ಒಂದು ಜನಾಂಗ’ ಎಂಬ ಕಲ್ಪನೆಯನ್ನು ಅಳವಡಿಸಿಕೊಂಡರು” ಎಂದು ಹೇಳಿದ್ದಾರೆ. ವ್ಯಕ್ತಿಯೊಬ್ಬನ ಜನ್ಮದ ಆಧಾರದಲ್ಲಿ ಸಾಮಾಜಿಕ ಸ್ಥಾನಮಾನವನ್ನು ನಿರಾಕರಿಸುವ ತಿರುಕ್ಕುರಲ್ ಅನ್ನು ಸಹ ಅವರು ಉಲ್ಲೇಖಿಸಿದ್ದಾರೆ.
ಜಾತಿ ಮತ್ತು ಧರ್ಮದ ಆಧಾರದ ಮೇಲಿನ ತಾರತಮ್ಯದ ವಿರುದ್ಧ ಆಂದೋಲನ ನಡೆಸಿದ್ದ ವಲ್ಲಲಾರ್ ಅವರನ್ನು ‘ಆಚರಿಸುವುದು’ ಡಿಎಂಕೆ ಸರ್ಕಾರದ ಕರ್ತವ್ಯ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.
ಇದನ್ನೂ ಓದಿ: ನಾನೇನು ಮಾಡಬೇಕು ಎಂಬ ಅಧಿಕಾರ ಜನ ನೀಡಿದ್ದಾರೆ, ಮೋದಿ ಮಾತು ಯಾಕೆ ಕೇಳಬೇಕು: ತಮಿಳುನಾಡು ಹಣಕಾಸು ಸಚಿವ
“ಸರ್ಕಾರವು ಸಮಿತಿಯನ್ನು ರಚಿಸಿದ್ದು, ವಡಲೂರಿನಲ್ಲಿ ಅಂತರರಾಷ್ಟ್ರೀಯ ಕೇಂದ್ರವನ್ನು ಸ್ಥಾಪಿಸಲು 100 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ವಲ್ಲಲಾರ್ ತಮ್ಮ ಕಾಲದಲ್ಲಿ ಸಮುದಾಯ ಅಡುಗೆಮನೆ ಸ್ಥಾಪಿಸಿದ್ದರು. ಈ ಕೇಂದ್ರದಲ್ಲಿ ಅನ್ನದಾನ ನೀಡಲು 3.25 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ” ಎಂದು ಸಿಎಂ ಸ್ಟಾಲಿನ್ ಘೋಷಿಸಿದ್ದಾರೆ.