Homeಮುಖಪುಟಕಾಣದ ನ್ಯಾಯಕ್ಕೆ ಕಾಯುತ್ತಿರುವ ಕಣ್ಣುಗಳು; 58 ದಿನಗಳು ಮತ್ತು....

ಕಾಣದ ನ್ಯಾಯಕ್ಕೆ ಕಾಯುತ್ತಿರುವ ಕಣ್ಣುಗಳು; 58 ದಿನಗಳು ಮತ್ತು….

- Advertisement -
- Advertisement -

ಸಾಂಕ್ರಾಮಿಕ ರೋಗದಿಂದ ವಿಧಿಸಲಾದ ಲಾಕ್‍ಡೌನ್‍ನಿಂದ ಲಕ್ಷಾಂತರ ಕಾರ್ಮಿಕರು ತಮ್ಮ ಮನೆಗಳನ್ನು ತಲುಪಲು ನೂರಾರು ಕಿಲೋಮೀಟರ್‍ಗಳ ಪಯಣ ಪ್ರಾರಂಭಿಸಬೇಕಾಯಿತು. ಈ ಕಾಮಿಕರಿಗೆ ಲಾಕ್‍ಡೌನ್ ಎಂಬುದರ ಅರ್ಥ: ಇದ್ದ ಕೆಲಸ ಹೋಯಿತು ಹಾಗೂ ಜೀವಸಲು ಬೇಕಾದ ಹಣ ಇಲ್ಲ. ಹೇಗೋ ಮಾಡಿ ಕೂಡಿಟ್ಟ ಒಂದಿಷ್ಟು ಹಣ ಮೊದಲ ಕೆಲವು ವಾರಗಳಲ್ಲಿ ಬತ್ತಿತು ಹಾಗೂ ಈಗ ತಮಗೆ, ತಮ್ಮ ಕುಟುಂಬಗಳಿಗೆ ತಿನ್ನಲೂ ಏನೂ ಇಲ್ಲದ ಪರಿಸ್ಥಿತಿ ತಲುಪಿದ್ದಾರೆ. ಸರಕಾರದಿಂದ ಇವರ ಸಂಕಷ್ಟಕ್ಕೆ ಯಾವುದೇ ಪರಿಹಾರದ ಕ್ರಮ ಕೈಗೊಳ್ಳದಿರುವುದು ಗಾಯದ ಮೇಲೆ ಬರೆ ಎಳೆದಂತೆ. ಇವರು ಎಲ್ಲಾ ಆಸೆ ಆಕಾಂಕ್ಷೆಗಳನ್ನು ಕಳೆದುಕೊಂಡಿದ್ದಾರೆ. ಈ ಕುರಿತು ಸ್ನೇಹಲ್ ಸಿನ್ಹಾ ಅವರು ಬರೆದಿರುವ ಲೇಖನ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಭಾರತದ ಜನತೆಗೆ ಮತ್ತು ಆರ್ಥಿಕತೆಗೆ ಅನುಕೂಲವಾಗಲಿ ಎಂದು 20 ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜ್‍ಅನ್ನು ಘೋಷಿಸಿ ಒಂದು ವಾರ ಆಗುತ್ತ ಬಂತು. ಅದರ ವಿವರಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಐದು ಧಾರವಾಹಿಕ ಕಂತುಗಳಲ್ಲಿ ವಿವರಿಸಿದರು. ಅದರಲ್ಲಿ ಅವರು ಆರ್ಥಿಕತೆಯ ಬೇರೆ ಬೇರೆ ವಲಯಗಳಿಗೆ ಏನೆಂಥ ಉತ್ತೇಜನ/ಸ್ಟಿಮ್ಯಲಸ್ ನೀಡಲಾಗುತ್ತವೆ ಹಾಗೂ ಅದರ ಅನುಕೂಲಗಳನ್ನು ವಿವರಿಸಲು ಪ್ರಯತ್ನಪಟ್ಟರು. ಈ ಧಾರವಾಹಿಯ ಎರಡನೇ ಕಂತಿನಲ್ಲಿ ವಲಸೆ ಕಾರ್ಮಿಕರಿಗೆ ಅನುಕೂಲವಾಗುವ ಕೆಲವು ಕ್ರಮಗಳ ಬಗ್ಗೆಯೂ ಹೇಳಿದರು.

ನಾನು ಸಿಲುಕಿಕೊಂಡಿರುವ ಕಾರ್ಮಿಕರ ಬಗ್ಗೆ ಕೆಲಸ ಮಾಡುತ್ತಿರುವ Stranded Workers Action Network (SWAN)ನೊಂದಿಗೆ ವಾಲಂಟೀರ್ ಆಗಿ ಕೆಲಸ ಮಾಡುತ್ತಿರುವುದರಿಂದ ಈ ವಲಸೆ ಕಾರ್ಮಿಕರೊಂದಿಗೆ ನೇರವಾಗಿ ಸಂಪರ್ಕಕ್ಕೆ ಬಂದಿದ್ದೇನೆ. ಹಾಗೂ ಈ ಕಾರ್ಮಿಕರಿಗೆ ರೇಷನ್, ಹಣ ಮತ್ತಿತರ ಸಹಾಯ ಮಾಡುತ್ತಿರುವ ಅನೇಕ ಜನರೊಂದಿಗೆ ಮಾತನಾಡಿ ಅವರ ಅನುಭವಗಳನ್ನು ಕೇಳಿದ್ದೇನೆ. ಈ ವೇದಿಕೆಯ ಜನರು ಮಾರ್ಚ್ 27 ರಿಂದ ವಲಸೆ ಕಾರ್ಮಿಕರು ಎದುರಿಸುತ್ತಿರುವ ಬಿಕ್ಕಟ್ಟಿನ ಮೇಲೆ ಕೆಲಸ ಮಾಡುತ್ತಿದ್ದಾರೆ. ಇಂದಿನರೆಗೆ 22 ಸಾವಿರಕ್ಕಿಂತಲೂ ಹೆಚ್ಚು ವಲಸೆ ಕಾರ್ಮಿಕರ ನೆರವಿಗೆ ಬಂದಿದ್ದಾರೆ. ವಿದ್ಯಾರ್ಥಿಗಳು, ಶೈಕ್ಷಣಿಕ ವಲಯದಲ್ಲಿ ಕೆಲಸ ಮಾಡುತ್ತಿರುವವರು, ಕಾರ್ಮಿಕ ಮುಖಂಡರು, ಸಂಶೋಧಕರು ಹಾಗೂ ಇತರ ಸಾಮಾಜಿಕ ಕಾರ್ಯಕರ್ತರು ಸೇರಿ ಈ ತಂಡ ರಚಿಸಿದ್ದಾರೆ. ನಾನೂ ಖುದ್ದಾಗಿ ಕೆಲಸ ಮಾಡುತ್ತಿರುವುದರಿಂದ ವಾಸ್ತವದಲ್ಲಿ ಅವರ ಪರಿಸ್ಥಿತಿ ಹೇಗಿದೆ ಎಂಬುದು ನನಗೆ ತಿಳಿದಿದೆ, ಸರಕಾರ ಏನು ಬಿಂಬಿಸಲು ಪ್ರಯತ್ನಿಸುತ್ತಿದೆಯೋ ಅದಕ್ಕೆ ವಿರುದ್ಧವಾಗಿದೆ ವಲಸೆ ಕಾರ್ಮಿಕರ ಪರಿಸ್ಥಿತಿ; ಇಷ್ಟಂತೂ ಸುಲಭವಾಗಿ ಹೇಳಬಲ್ಲೆ.

ಎರಡನೇ ಕಂತಿನಲ್ಲಿ ಮಾತನಾಡುತ್ತ ಹಣಕಾಸು ಸಚಿವರು ಹೇಳಿದ್ದು; ದೇಶಾದ್ಯಂತ ವಲಸೆ ಕಾರ್ಮಿಕರಿಗೆ ಸರಕಾರಿ ಆಶ್ರಯಗಳಲ್ಲಿ ಮೂರು ಹೊತ್ತಿನ ಊಟ ನೀಡಲಾಗುತ್ತಿದೆ. ಈ ಮಾತು ಸತ್ಯಕ್ಕೆ ಅತ್ಯಂತ ದೂರವಾದ ಮಾತು. ನನ್ನ ಅನುಭವದಲ್ಲಿ ಹೇಳಿದರೆ, ಈ ಕಾರ್ಮಿಕರಿಗೆ ತಾವು ಸರಕಾರದಿಂದ ರೇಷನ್ ಅಥವಾ ಹಣ ಪಡೆದಿದ್ದಾರೆಯೋ ಎಂದು ಕೇಳಿದಾಗ ಕೆಲವು ಅಪವಾದಗಳನ್ನು ಬಿಟ್ಟು ಎಲ್ಲರೂ ತಮಗೆ ಯಾವುದೇ ಸಹಾಯ ಸರಕಾರದಿಂದ ಆಗಿಲ್ಲ ಎಂದೇ ಹೇಳಿದರು. ಅವರಲ್ಲಿ ಕೆಲವರಿಗೆ ಕೆಲವೊಮ್ಮೆ ಸರಕಾರೇತರ ಸಂಘ ಸಂಸ್ಥೆಗಳಿಂದ ಆಹಾರ ಮತ್ತು ಆಹಾರಧಾನ್ಯಗಳನ್ನು ಒದಗಿಸಲಾಗಿದೆ. ಇದೇ ವಾಸ್ತವ.

ಪ್ರಧಾನಿಯವರು ಆತ್ಮನಿರ್ಭರ ಭಾರತ ಅಭಿಯಾನವನ್ನು ಘೋಷಿಸಿದಾಗ, ಈಗ ಸರಕಾರ ವಲಸೆ ಕಾರ್ಮಿಕರಿಗೆ ಒಂದಿಷ್ಟು ಸಹಾಯವಾಗುವಂತೆ ಏನಾದರೂ ಮಾಡಬಹುದು ಎನ್ನುವ ಆಶಾಭಾವನೆಯಲ್ಲಿದ್ದೆ, ಆದರೆ ಅದು ಸುಳ್ಳಾಯಿತು. ನೀವು 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಅನ್ನು ಕೂಲಂಕುಷವಾಗಿ ನೋಡಿದರೆ, ಜನರಿಗೆ ತಕ್ಷಣದಲ್ಲಿ ಸಹಾಯವಾಗುವಂತ ಯಾವುದೇ ಕ್ರಮಗಳು ಅಲ್ಲಿ ಕಾಣುವುದಿಲ್ಲ.

ಸಾಂಕ್ರಾಮಿಕ ರೋಗದಿಂದ ವಿಧಿಸಲಾದ ಲಾಕ್‍ಡೌನ್‍ನಿಂದ ಲಕ್ಷಾಂತರ ಕಾರ್ಮಿಕರು ತಮ್ಮ ಮನೆಗಳನ್ನು ತಲುಪಲು ನೂರಾರು ಕಿಲೋಮೀಟರ್‍ಗಳ ಪಯಣ ಪ್ರಾರಂಭಿಸಬೇಕಾಯಿತು. ಈ ಕಾಮಿಕರಿಗೆ ಲಾಕ್‍ಡೌನ್ ಎಂಬುದರ ಅರ್ಥ: ಇದ್ದ ಕೆಲಸ ಹೋಯಿತು ಹಾಗೂ ಜೀವಸಲು ಬೇಕಾದ ಹಣ ಇಲ್ಲ. ಹೇಗೋ ಮಾಡಿ ಕೂಡಿಟ್ಟ ಒಂದಿಷ್ಟು ಹಣ ಮೊದಲ ಕೆಲವು ವಾರಗಳಲ್ಲಿ ಬತ್ತಿತು ಹಾಗೂ ಈಗ ತಮಗೆ, ತಮ್ಮ ಕುಟುಂಬಗಳಿಗೆ ತಿನ್ನಲೂ ಏನೂ ಇಲ್ಲದ ಪರಿಸ್ಥಿತಿ ತಲುಪಿದ್ದಾರೆ. ಸರಕಾರದಿಂದ ಇವರ ಸಂಕಷ್ಟಕ್ಕೆ ಯಾವುದೇ ಪರಿಹಾರದ ಕ್ರಮ ಕೈಗೊಳ್ಳದಿರುವುದು ಗಾಯದ ಮೇಲೆ ಬರೆ ಎಳೆದಂತೆ. ಇವರು ಎಲ್ಲಾ ಆಸೆ ಆಕಾಂಕ್ಷೆಗಳನ್ನು ಕಳೆದುಕೊಂಡಿದ್ದಾರೆ. ಆರ್ಥಿಕ ತಜ್ಞರು ಈ ಆರ್ಥಿಕ ಪ್ಯಾಕೇಜ್‍ಅನ್ನು ತಡವಾಗಿ ಬಂದಿದ್ದು ಹಾಗೂ ಈ ಕಾರ್ಮಿಕರಿಗೆ ಸಹಾಯವಾಗುವಂತಹದ್ದು ಹೆಚ್ಚಿನದ್ದೇನೂ ಇಲ್ಲ ಎಂದು ಹೇಳಿದ್ದಾರೆ.

ಎರಡನೇ ಕಂತಿನಲ್ಲಿಯ ಒಂದು ಕ್ರಮದಲ್ಲಿ ವಲಸೆ ಕಾರ್ಮಿಕರಿಗೆ ಮತ್ತು ಅವರ ಕುಟುಂಬಕ್ಕೆ 5ಕೆಜಿ ಅಕ್ಕಿ/ಗೋಧಿ ಹಾಗೂ 1ಕೆಜಿ ಕಡಲೆ ಎರಡು ತಿಂಗಳಿಗಾಗಿ ಉಚಿತವಾಗಿ ನೀಡಲಾಗುವುದು ಎಂದು ಹೇಳಲಾಗಿತ್ತು. ಅಧಿಕೃತ ಸರಕಾರಿ ಅಂಶಗಳ ಪ್ರಕಾರ, ಭಾರತೀಯ ಆಹಾರ ನಿಗಮ (ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ) ಹಾಗೂ ಇತರ ರಾಜ್ಯ ಸರಕಾರಗಳ ನಿಗಮಗಳ ಬಳಿ ಮಾರ್ಚ್ 2020 ರ ಹೊತ್ತಿಗೆ 7.8 ಕೋಟಿ ಟನ್ನಗಳಷ್ಟು ಅಕ್ಕಿ ಹಾಗೂ ಗೋಧಿಯ ದಾಸ್ತಾನು ಇದೆ. ಇದಕ್ಕೆ ಭತ್ತವನ್ನು ಸೇರಿಸಿದರೆ 9.8 ಕೋಟಿ ಟನ್ನುಗಳ ದಾಸ್ತಾನು ಸರಕಾರಿ ನಿಗಮಗಳ ಬಳಿ ಇದ್ದಂತೆ. ಯಾವುದೇ ವರ್ಷದಲ್ಲಿ ಏಪ್ರಿಲ್ ತಿಂಗಳಲ್ಲಿ ಇರಬೇಕಾದ ಹೆಚ್ಚುವರಿ ದಾಸ್ತಾನಾದ (ಬಫರ್ ಸ್ಟಾಕ್) 2.1 ಕೋಟಿ ಟನ್ನುಗಳಿಗಿಂತ ಕೆಲವು ಪಟ್ಟು ಹೆಚ್ಚು. ಒಂದು ವೇಳೆ ಜನಸಂಖ್ಯೆಯ 80% ಜನರಿಗೆ (100ಕೋಟಿ) ಮೇಲೆ ಹೇಳಿದ 5 ಕೆಜಿ ಆಹಾರ ಧಾನ್ಯವನ್ನು ಎರಡಲ್ಲ ಆರು ತಿಂಗಳು ಹಂಚಿದರೂ ಆಗುವುದು ಕೇವಲ 30 ಕೋಟಿ ಟನ್ನುಗಳಷ್ಟು. ಅದು ಈಗ ಲಭ್ಯವಿರುವ ದಾಸ್ತಾನಿನ ಅರ್ಧದಷ್ಟೂ ಅಲ್ಲ. ಹಾಗಾದರೆ ಕೇವಲ ಎರಡು ತಿಂಗಳಿಗೋಸ್ಕರ ಏಕೆ ಈ ಅವಕಾಶ?

ಪಡಿತರ ಚೀಟಿಯನ್ನು ಹೊಂದದೇ ಇರುವವರಿಗೂ ಇದೇ ಪ್ರಮಾಣದಲ್ಲಿ ಆಹಾರಧಾನ್ಯಗಳು ಲಭ್ಯವಾಗುವವು ಎಂದು ಹೇಳಲಾಗಿದೆ; ಆದರೆ ಇದು ಸುಳ್ಳು. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ ಅಡಿ ಬರುವ ಪಡಿತರ ಚೀಟಿಯನ್ನು ಹೊಂದಿರುವ ಜನರಿಗೆ 5 ಕೆಜಿ ಅಕ್ಕಿ/ಗೋದಿ ಲಭ್ಯವಿದ್ದು, ಅದಕ್ಕೆ ಅವರು ಹಣ ಪಾವತಿಸಬೇಕಾಗುತ್ತದೆ ಹಾಗೂ ಅದರೊಂದಿಗೆ ಉಚಿತವಾಗಿ 5 ಕೆಜಿ ಸಿಗುವುದು, ಹಾಗಾಗಿ ನೋಂದಿತರಾಗದ ಜನರಿಗೆ ಸಿಗುವ ಧಾನ್ಯದ ಎರಡು ಪಟ್ಟು ಧಾನ್ಯ ಪಡಿತರ ಚೀಟಿ ಹೊಂದಿದವರಿಗೆ ಸಿಗುತ್ತಿದೆ. ಆರ್ಥಿಕ ತಜ್ಞರು ಹೇಳುವುದೇನೆಂದರೆ, ಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟವನ್ನು ಬಗೆಹರಿಸಲು ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯಗಳಿಗಾಗಿ ನೀಡಲಾಗುತ್ತಿರುವ 3,500 ಕೋಟಿ ರೂಪಾಯಿಯ ಪ್ಯಾಕೇಜನ್ನು ಸಾರ್ವತ್ರಿಕಗೊಳಿಸಬೇಕು; ಅದನ್ನು ಮಾಡಲು ಸರಕಾರಕ್ಕೆ ಸಾಧ್ಯವಿದೆ.

ಪ್ಯಾಕೇಜಿನ ಈ ಕಂತಿನಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುತ್ತಿರುವ ವಲಸೆ ಕಾರ್ಮಿಕರಿಗಾಗಿ ಕೈಗೆಟುಕುವ ಬಾಡಿಗೆ ವಸತಿ ಸಮುಚ್ಚಯಗಳ Affordable Rental Housing Complexes (ARHC) ಬಗ್ಗೆ ಉಲ್ಲೇಖವಿದೆ. ಇದನ್ನು ಅನುಷ್ಠಾನಗೊಳಿಸಲು ಸಾಕಷ್ಟು ಸಮಯ(ವರ್ಷಗಳು) ಬೇಕಾಗುವುದು ಹಾಗೂ ಈ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಈಗಲೇ ಬೇಕಾಗಿದೆ. ಅದರಲ್ಲಿ ಬೀದಿ ವ್ಯಾಪಾರಿಗಳಿಗೆ 5,000 ಕೋಟಿ ರೂಪಾಯಿಗಳ ಸಾಲದ ಸೌಲಭ್ಯದ ಬಗ್ಗೆಯೂ ಉಲ್ಲೇಖವಿದೆ; ‘ಸರಕಾರವು ಒಂದು ವಿಶೇಷ ಯೋಜನೆಯನ್ನು ಒಂದು ತಿಂಗಳಲ್ಲಿ ಪ್ರಾರಂಭಿಸುವುದು..” ಎಂಬ ಈ ಸರಕಾರಿ ಭಾಷೆಯಲ್ಲಿರುವುದನ್ನು ಹಾಗೂ ಸರಕಾರದ ಹಿಂದಿನ ದಾಖಲೆಗಳನ್ನು ಗಮನಿಸಿದರೆ, ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದು ನನಗೆ ನಂಬಿಕೆಯಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ, ಕೆಲವು ಚಕಿತಗೊಳಿಸುವ ಅಂಕಿಅಂಶಗಳಿವೆ. ಏಪ್ರಿಲ್ ತಿಂಗಳಲ್ಲಿ 19 ಕೋಟಿ ಕುಟುಂಬಗಳಿಗೆ ವಿತರಿಸಬೇಕಿದ್ದ 1.96 ಲಕ್ಷ ಟನ್ನು ಧಾನ್ಯಗಳಲ್ಲಿ ಕೇವಲ 30,000 ಟನ್(ಏಪ್ರಿಲ್ 28 ರಂದು ಇದ್ದ ಸ್ಥಿತಿ) ವಿತರಿಸಲಾಗಿದೆ; ಇದನ್ನು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ. ಅದರೊಂದಿಗೆ ಕೇವಲ 15% ಬಡಕುಟುಂಬಗಳು 1 ಕೆಜಿ ದ್ವಿದಳ ಧಾನ್ಯಗಳನ್ನು ಪಡೆದಿವೆ.

ಇಲ್ಲಿಯವರೆಗೆ ಸುಮಾರು 600 ವಲಸೆ ಕಾರ್ಮಿಕರು ಹೆದ್ದಾರಿಗಳಲ್ಲಿ ಆದ ಅಪಘಾತಗಳಿಂದ, ಹಸಿವಿನಿಂದ ಅಥವಾ ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ. ಇದರ ದತ್ತಾಂಶವನ್ನ ಕನಿಕಾ ಶರ್ಮ ಮತ್ತು ಇತರರು ಕಲೆಹಾಕಿದ್ದಾರೆ. ಟಿವಿ ವಾಹಿನಿಯ ಚರ್ಚೆಯೊಂದರಲ್ಲಿ ಓರ್ವರು ಇಷ್ಟು ಸಮಯದಲ್ಲಿ ಈ ಕಾರ್ಮಿಕರಿಂದ ಒಂದು ಬೃಹತ್ ಬಂಡಾಯವೇ ಆಗಬೇಕಿತ್ತು ಎಂದರು. ಆದರೆ ಇದು ಆಗುತ್ತಿಲ್ಲ, ಏಕೆಂದರೆ ಈ ಕಾರ್ಮಿಕರಿಗೆ ಈ ಸರಕಾರದಲ್ಲಿ ಯಾವುದೇ ಭರವಸೆ ಅಥವಾ ಆಸೆ ಉಳಿದಿಲ್ಲ. ಹಾಗಾಗಿ ಬಂಡಾಯವೇಳಲು ಸ್ಪೂರ್ತಿ ಅವರಲ್ಲಿಲ್ಲ. ಈ ಸಂಪೂರ್ಣ ಆರ್ಥಿಕ ಪ್ಯಾಕೇಜ್ ಭಾರತವನ್ನು ದೀರ್ಘಾವಧಿಯಲ್ಲಿ ಸಹಾಯ ಮಾಡಬಹುದು. ಆದರೆ ವಲಸೆ ಕಾರ್ಮಿಕರಿಗೆ ಈ ತಕ್ಷಣ ಸಹಾಯ ಬೇಕಿದೆ. ಕಳೆದೆ 57 ದಿನಗಳಿಂದ ಸಹಾಯದ ಅವಶ್ಯಕತೆಯಲ್ಲಿದ್ದಾರೆ. ಇವರೆಲ್ಲರೂ ಅನುಭವಿಸಿದ ಸಮಸ್ಯೆಗಳ ತೀವ್ರತೆಯನ್ನು ಪದಗಳಲ್ಲಿ ವರ್ಣಿಸಲಾಗದು.

ಸ್ನೇಹಲ್ ಸಿನ್ಹಾ

ಕನ್ನಡಕ್ಕೆ: ರಾಜಶೇಖರ್‌ ಅಕ್ಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ ಪರ ಪ್ರತಿಭಟನೆ: ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಬಂಧನ

0
ಪ್ಯಾಲೆಸ್ತೀನ್‌ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ ಆರೋಪದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಅಚಿಂತ್ಯ ಶಿವಲಿಂಗಂ ಅವರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಕ್ಯಾಂಪಸ್ ಆವರಣದಲ್ಲಿ ಅನಧಿಕೃತ ವಿದ್ಯಾರ್ಥಿಗಳ ನೇತೃತ್ವದ ಪ್ಯಾಲೆಸ್ಟೈನ್ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಭಾರತೀಯ ಮೂಲದ ವಿದ್ಯಾರ್ಥಿ...