ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ನೂರನೇ ದಿನಕ್ಕೆ ಕಾಲಿಡುತ್ತಿದೆ. ಪ್ರತಿಭಟನಾ ನಿರತ ರೈತರು ದೆಹಲಿ ಕೇಂದ್ರವಾಗಿಟ್ಟುಕೊಂಡು ಮಾತ್ರ ಹೋರಾಟವನ್ನು ಕಟ್ಟದೆ, ಹೋರಾಟದ ಕಾವು ದೇಶದ ಇತರ ಕಡೆಗಳಲ್ಲೂ ಹರಡುವಂತಹ ಕಾರ್ಯತಂತ್ರಗಳನ್ನು ಹೂಡುತ್ತಿದ್ದಾರೆ.
ಪ್ರತಿಭಟನೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯತಂತ್ರವಾಗಿ ಪ್ರಸ್ತುತ ಚುನಾವಣೆ ಘೋಷಣೆಯಾಗಿರುವ ರಾಜ್ಯಗಳು ಸೇರಿದಂತೆ ದೇಶಾದ್ಯಂತ ರೈತ ಮಹಾಪಂಚಾಯತ್ ಸರಣಿ ಸಭೆಯನ್ನು ನಡೆಸಲಾಗುವುದು ಎಂದು ಅವರು ಘೋಷಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಗಾಜಿಪುರ್ ಗಡಿಯಿಂದ ಭಾಗಶಃ ವಾಹನ ಸಂಚಾರ ಆರಂಭ
ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್ಕೆಎಂ) ನಾಯಕ ರಾಕೇಶ್ ಟಿಕಾಯತ್ ಅವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಮಾರ್ಚ್ 13 ರಂದು ಅಲ್ಲಿ ನಡೆಯಲಿರುವ ರೈತ ಮಹಾಪಂಚಾಯತ್ ಒಂದಕ್ಕೆ ಹಾಜರಾಗಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27 ರಿಂದ ಏಪ್ರಿಲ್ 29 ರವರೆಗೆ ಒಟ್ಟು ಎಂಟು ಹಂತಗಳಲ್ಲಿ 294 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ.
ಮಾರ್ಚ್ 12 ರಂದು ರೈತ ಮುಖಂಡರಾದ ಡಾ. ದರ್ಶನ್ ಪಾಲ್, ಯೋಗೇಂದ್ರ ಯಾದವ್, ಬಲ್ಬೀರ್ ಸಿಂಗ್ ರಾಜೇವಾಲ್ ಮುಂತಾದವರು ಮಹಾಪಂಚಾಯತ್ನಲ್ಲಿ ಪಾಲ್ಗೊಳ್ಳಲಿದ್ದು, ಮಾರ್ಚ್ 13 ರ ಮತ್ತೊಂದು ಮಹಾಪಂಚಾಯತ್ನಲ್ಲಿ ಟಿಕಾಯತ್ ಭಾಷಣ ಮಾಡಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಬ್ಯುಸಿನೆಸ್ ಸ್ಟಾಂಡರ್ಡ್ ಪತ್ರಿಕೆ ವರದಿ ಮಾಡಿದೆ.
ಟಿಕಾಯತ್ ಅವರ ಪಶ್ಚಿಮ ಬಂಗಾಳ ಭೇಟಿಯು ಮಹತ್ವದ್ದಾಗಿದ್ದು, ಚುನಾವಣೆ ಘೋಷಣೆಯಾಗಿರುವ ರಾಜ್ಯಗಳ ಜನರು ರೈತ ವಿರೋಧಿ ಮತ್ತು ಬಡವರ ವಿರೋಧಿ ಬಿಜೆಪಿ ತಕ್ಕ ಪಾಠ ಕಲಿಸಲು ಮನವಿ ಮಾಡಿದ್ದರು.
ಇದನ್ನೂ ಓದಿ: ರೈತರನ್ನು ಸುತ್ತುವರಿಯಲು ನೋಡಿದರು, ಈಗ ರೈತರೇ ಸರ್ಕಾರವನ್ನು ಸುತ್ತುವರೆದಿದ್ದಾರೆ: ಡಾ. ಅಮಿತ್ ಬಾಧುರಿ