ಉದ್ಯೋಗ ಅರಸುತ್ತಾ ಹಳ್ಳಿಯಿಂದ ನಗರದ ಕಡೆಗೆ ವಲಸೆ ಬಂದಿದ್ದ ಕೋಟ್ಯಾಂತರ ಜನರು ಯಾವುದೇ ಸಿದ್ದತೆಗಳಿಲ್ಲದೆ ಸರ್ಕಾರಗಳು ಹೇರಿದ್ದ ಲಾಕ್ಡೌನ್ನಿಂದಾಗಿ ನಗರದಲ್ಲಿಯೂ ಉದ್ಯೋಗಗಳಿಲ್ಲದೆ ಮತ್ತೇ ತಮ್ಮ ಹಳ್ಳಿಗಳಿಗೆ ಮರಳಿದ್ದಾರೆ. ಇದೆ ಸಮಯದಲ್ಲಿ ಉತ್ತಮ ಮುಂಗಾರು ಮಳೆಯಾದ್ದರಿಂದ ಉತ್ತಮ ಬೆಳೆಯಾಗಿದ್ದು, ಇದೀಗ ಮುಂಗಾರು ಬೆಳೆಗಳು ಮಾರುಕಟ್ಟೆಗೆ ಬರಲು ಪ್ರಾರಂಭವಾಗಿದೆ.
ರಾಜ್ಯದ ಕೆಲವೆಡೆ ಪ್ರವಾಹ ಬಂದು ಬೆಳೆಗಳು ಕೊಚ್ಚಿಕೊಂಡು ಹೋಗಿದೆಯದರೂ, ಉಳಿದ ಕಡೆ ರೈತರಿಗೆ ಉತ್ತಮ ಇಳುವರಿ ಬಂದಿದೆ. ಉತ್ತಮ ಬೆಳೆಯಾದರೆ ಸಾಮಾನ್ಯವಾಗಿ ಬೆಲೆಗಳು ಸಹಜವಾಗಿಯೇ ಇಳಿಯುತ್ತದೆ. ಆದರೆ ತಾನು ಕಷ್ಟ ಪಟ್ಟ ಬೆಳೆದ ಬೆಳೆಗಳನ್ನು ನಷ್ಟಕ್ಕೆ ಮಾರಾಟ ಮಾಡಲಾಗದೆ, ಬೆಳೆಗಳನ್ನು ತನ್ನಲ್ಲಿ ಇಟ್ಟುಕೊಳ್ಳಲೂ ಆಗದೆ ರೈತರು ಕಷ್ಟಕ್ಕ ಸಿಲುಕಿದ್ದಾರೆ. ಈ ಸಮಯದಲ್ಲಿ ಸರ್ಕಾರಗಳು ಖರೀದಿ ಕೇಂದ್ರಗಳನ್ನು ತೆರೆದು ರೈತರ ಬೆಳೆಗಳನ್ನು ಖರೀದಿ ಮಾಡಬೇಕು ಎಂದು ಹೋರಾಟಗಳು ನಡೆಯುತ್ತಿವೆ.
ಇದನ್ನೂ ಓದಿ: ಕೇಂದ್ರ ಸರ್ಕಾರದೊಂದಿಗೆ ರೈತ ಮುಖಂಡರ ಮಾತುಕತೆ ವಿಫಲ: ನ.26,27ಕ್ಕೆ ದೆಹಲಿ ಚಲೋ
ಅಲ್ಲದೆ ಇದೀಗ ಕೇಂದ್ರ ಹಾಗೂ ರಾಜ್ಯ ಸಕಾರಗಳು ಹಲವಾರು ರೈತ ವಿರೋಧಿ ಕಾಯ್ದೆಗಳನ್ನು ತಂದು ಬೆಂಬಲ ಬೆಲೆಗಳನ್ನು ಇಲ್ಲವಾಗಿಸುತ್ತಿದೆ. ರಾಜ್ಯ ಸೇರಿದಂತೆ ಕೇಂದ್ರ ಸರ್ಕಾರಗಳು ಖರೀದಿ ಕೇಂದ್ರದ ಬಗ್ಗೆ ಯಾವುದೆ ಮಾತೆತ್ತುತ್ತಿಲ್ಲ ಎಂದು ರೈತರು ದೂರುತ್ತಿದ್ದಾರೆ.
ಖರೀದಿ ಕೇಂದ್ರಗಳು ಎಂದರೇನು?
ಮಾರುಕಟ್ಟೆಯಲ್ಲಿ ಬೆಳೆಗಳು ಅಧಿಕವಾಗಿ ಬಂದಾಗ ಸಹಜವಾಗಿ ಬೆಲೆ ಇಳಿದು ಹೋಗುತ್ತದೆ. ಈ ಸಮಯದಲ್ಲಿ ರೈತರಿಗೆ ತಾವು ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ಸಮಯದಲ್ಲಿ ಸರ್ಕಾರವೆ ಮುಂದೆ ನಿಂತು ಎಪಿಎಂಸಿ ಸೇರಿದಂತೆ ಸರ್ಕಾರಿ ನಿಯಂತ್ರಿತ ಮಾರುಕಟ್ಟೆಗಳಲ್ಲಿ ಬೆಳೆಗಳಿಗೆ ನಿಗದಿತ ಬೆಲೆಯನ್ನು ನೀಡಿ ಖರೀದಿ ಮಾಡುತ್ತದೆ. ಈ ಖರೀದಿ ಕೇಂದ್ರಗಳಲ್ಲಿ ಈ ಬೆಲೆಯೂ ತನ್ನದೆಂದು ದೃಡೀಕರಿಸಲು ರೈತನೂ ತನ್ನ ಬೆಳೆಗಳ ಜೊತೆಗೆ ತನ್ನ ಭೂಮಿಯ ಪತ್ರಗಳನ್ನು ತರಬೇಕಾಗುತ್ತದೆ.
ಭೂಮಿ ಪತ್ರಗಳನ್ನು ತರಬೇಕು ಎನ್ನುವ ನಿಯಮ ಕೆಲವೊಮ್ಮ ರೈತರಿಗೆ ಮಾರಕವಾಗಿಯೂ ಪರಿಣಮಿಸುತ್ತದೆ. ಯಾಕೆಂದರೆ ತನ್ನ ಜಮೀನಲ್ಲದೆ ಇತರರಿಂದ ಗೇಣಿಗೆ ಪಡೆದು ಬೆಳೆದವನು ಅದನ್ನು ಖರೀದಿ ಕೇಂದ್ರದಲ್ಲಿ ಮಾರಲಾಗದೆ ಖಾಸಗಿಯಾಗಿ ಕಡಿಮೆ ಬೆಲೆಗೆ ಮಾರಾಟ ಮಾಡಿ ನಷ್ಟ ಅನುಭವಿಸುತ್ತಾನೆ. ಅಷ್ಟೆ ಅಲ್ಲದೆ ಭೂಮಿ ಪತ್ರವನ್ನು ವ್ಯಾಪಾರಿಗಳು ತಮಗೆ ಬೇಕಾದಂತೆ ಪಡೆದು, ರೈತರಿಂದ ಕಡಿಮೆ ಬೆಳೆಗಳನ್ನು ಖರೀದಿ ಮಾಡಿ ಅದನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡುವು ಸಾಧ್ಯತೆ ಕೂಡಾ ಇರುತ್ತೆ.
“ಪ್ರತಿ ಬೆಳೆಗೂ ವೈಜ್ಞಾನಿಕ ದರ ನಿಗದಿಪಡಿಸಿ ಅದಕ್ಕಿಂತ ಕಡಿಮೆ ಬೆಲೆಗೆ ಖಾಸಗಿ ಹಾಗೂ ಸರ್ಕಾರಿ ಮಾರುಕಟ್ಟೆಯಲ್ಲಿ ಖರೀದಿ ಮಾಡುವಂತಿಲ್ಲ, ಅದಾಗಿಯೂ ಕಡಿಮೆ ಬೆಲೆ ನಿಗದಿ ಪಡಿಸಿದರೆ ಶಿಕ್ಷೆಗೆ ಒಳಪಡಿಸುವ ಕಾನೂನು ಬಂದರೆ ಈ ಸಮಸ್ಯೆಯ ಪರಿಹಾರವಾಗುತ್ತದೆ” ಎಂದು ಕರ್ನಾಟಕದ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾಗಿರುವ ಪ್ರಕಾಶ್ ಕಮ್ಮರಡಿ ಹೇಳುತ್ತಾರೆ. ಇಂತಹ ಕಾನೂನುಗಳು ರಾಜಸ್ಥಾನ ಹಾಗೂ ಕೇರಳ ಸರ್ಕಾರಗಳು ಮಾಡಿದೆ ಎಂದು ಅವರು ಉಲ್ಲೇಖಿಸುತ್ತಾರೆ.
ಇದನ್ನೂ ಓದಿ: ರೈತಬಂಧು ಪ್ರವಾದಿ ಮುಹಮ್ಮದ್ (ಸ) : ಮಿಸ್ರಿಯಾ ಐ ಪಜೀರ್
ಖರೀದಿ ಕೇಂದ್ರಗಳು ಈ ಸಮಯದಲ್ಲಿ ಯಾಕಿರಬೇಕು?
ಬೆಳೆಗಳು ಕೊಯ್ಲಿಗೆ ಬಂದು ಎಲ್ಲಾ ಕಡೆಯಿಂದಲೂ ಮಾರುಕಟ್ಟೆಗೆ ಬರುತ್ತಿರುವಾಗ ಸಹಜವಾಗಿಯೆ ಬೆಲೆಗಳು ಇಳಿಕೆಯಾಗುತ್ತದೆ. ಇದರ ಲಾಭವನ್ನು ಖಾಸಗಿ ವ್ಯಾಪಾರಿಗಳು ಪಡೆದು ಕೊಳ್ಳುತ್ತಾರೆ. ಕೆಲವೊಮ್ಮ ದರಗಳು ಎಷ್ಟು ಇಳಿದು ಹೋಗತ್ತದೆಯೆಂದರೆ ರೈತನೂ ತನ್ನ ಬೆಳೆಗಳನ್ನು ಇಳಿಸಿದ ಹಮಾಲಿಗೆ ಕೂಡಾ ಕೊಡಲು ದುಡ್ಡು ಇಲ್ಲದಷ್ಟು. ಈ ರೀತಿಯ ಸಮಸ್ಯೆಗಳು ಬರದಂತೆ ತಡೆಯಲು ಸರ್ಕಾರವೆ ಮುಂದೆ ನಿಂತು ರೈತರ ಬೆಳೆಗಳಿಗೆ ಬೆಂಬಲ ಬೆಲೆಯನ್ನು ನೀಡಿ ಖರೀದಿಸುತ್ತದೆ.
ಪ್ರತಿ ಕೊಯ್ಲಿನ ಸಮಯದಲ್ಲಿ ಸರ್ಕಾರ ಬೆಲೆಗಳಿಗೆ ಸರಿಯಾದ ದರ ನಿಗದಿಪಡಿಸಿ ಅವುಗಳನ್ನು ಖರೀದಿ ಮಾಡಿದರೆ, ರೈತರನ್ನು ವ್ಯಾಪಾರಿಗಳಿಂದ ಕಾಪಾಡಿದಂತಾಗುತ್ತದೆ. “ಬಿತ್ತನೆ ಎಷ್ಟಾಗಿದೆ, ಅಂದಾಜು ಎಷ್ಟು ಬೆಳೆಗಳು, ಎಷ್ಟು ಪ್ರಮಾಣದಲ್ಲಿ, ಯಾವಾಗ ಮಾರುಕಟ್ಟೆಗೆ ಬರುತ್ತದೆ ಎಂದು ಸರ್ಕಾರಕ್ಕೆ ತಿಳಿದಿರುತ್ತದೆ. ಆವಾಗಲೇ ಖರೀದಿ ಕೇಂದ್ರಗಳಿಗೆ ತಯಾರಿ ಮಾಡುವ ಸಮಯಾವಕಾಶಗಳು ಅದಕ್ಕೆ ಇರುತ್ತದೆ. ಆದರೆ ಸರ್ಕಾರಕ್ಕೆ ಆ ಇಚ್ಛಾಶಕ್ತಿ ಇಲ್ಲದೆ ಇರುವುದು ದುರಂತವಾಗಿದೆ” ಎಂದು ಕೃಷಿ ತಜ್ಞ ಸುರೇಶ್ ಕಂಜರ್ಪಣೆ ಹೇಳುತ್ತಾರೆ.
ಸರ್ಕಾರ ಮಾಡುತ್ತಿರುವುದೇನು? ಮಾಡಬೇಕಿರುವುದೇನು?
ಇದುವರೆಗೂ ಸರ್ಕಾರ ಕೇವಲ 26 ಪ್ರಮುಖ ಬೆಲೆಗಳಿಗಷ್ಟೆ ಬೆಂಬಲ ಬೆಲೆ ನೀಡುತ್ತಿತ್ತು. ಇದೀಗ ಹೊಸತಾಗಿ ತರುತ್ತಿರುವ ಕಾಯ್ದೆಯಲ್ಲಿ ಅವುಗಳ ಸಂಖ್ಯೆಯನ್ನು ಇನ್ನೂ ಇಳಿಸುತ್ತಿದೆ. ಅಲ್ಲದೆ ಎಪಿಎಂಸಿ ಸೇರಿದಂತೆ ಕೆಲವು ಮಾರುಕಟ್ಟೆಗಳಲ್ಲಿ ಮಾತ್ರ ಖರೀದಿ ಕೇಂದ್ರಗಳಿವೆ. ಅವುಗಳು ಹೆಚ್ಚಿನವು ಜಿಲ್ಲಾ ಕೇಂದ್ರಗಳಲ್ಲಿ ಇದರಿಂದಾಗಿ ಸಣ್ಣಪುಟ್ಟ ರೈತರಿಗೆ ತಾವು ಬೆಳೆದ ಬೆಳೆಗಳನ್ನು ಅಲ್ಲಿವರೆಗೆ ಸಾಗಾಟ ಮಾಡುವುದು ದುಬಾರಿ ಎಣಿಸುತ್ತದೆ. ಅಷ್ಟೇ ಅಲ್ಲದೆ ಸರ್ಕಾರ ಕೂಡಾ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಮೀನಾಮೇಷ ಎಣಿಸುತ್ತದೆ. ಇವುಗಳಿಂದಾಗಿ ರೈತನು ಮತ್ತಷ್ಟು ಕಷ್ಟಕ್ಕೆ ಒಳಗಾಗುತ್ತಾನೆ.
ಇದನ್ನೂ ಓದಿ: ರಾಜಸ್ಥಾನ: ವಿಮಾ ಕಂಪನಿ, ಬ್ಯಾಂಕ್ ವಿರುದ್ಧ ಸತತ 3 ವರ್ಷ ಹೋರಾಡಿ ವಿಮಾ ಹಕ್ಕು ಪಡೆದ ರೈತರು!
“ಕಟಾವಿಗೆ ಬಂದಂತಹ ಎಲ್ಲಾ ಬೆಳೆಗಳು ’ಕನಿಷ್ಠ ಮಾರಾಟ ದರ’ದ ಒಳಗಡೆ ಖರೀದಿಯಾಗಬೇಕು. ಈ ಕನಿಷ್ಠ ಮಾರಾಟ ದರದ ನೀಡದಿದ್ದರೆ ಎರಡು ವರ್ಷ ಜೈಲು ಶಿಕ್ಷೆಯ ಕಾನೂನು ಆಗಬೇಕು. ಅಷ್ಟೇ ಅಲ್ಲದೆ ಜಿಲ್ಲಾ ಕೇಂದ್ರದಲ್ಲಿ ಇರುವ ಖರೀದಿ ಕೇಂದ್ರಗಳನ್ನು ಹೋಬಳಿ ಮಟ್ಟದಲ್ಲಿ ತೆರೆಯಬೇಕು” ಎಂದು ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಹೇಳುತ್ತಾರೆ.
ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಹೇಳುವಂತೆ, “ರಾಜ್ಯ ಸರ್ಕಾರ ಖರೀದಿ ಕೇಂದ್ರ ಸರ್ಕಾರ ತೆರೆಯಲು ಈಗಲೇ ಸಿದ್ದತೆ ನಡೆಸಬೇಕು. ರೈತನು ತನ್ನ ಬೆಳೆಯನ್ನು ಸಾಗಿಸುವ ಸಾರಿಗೆ ವೆಚ್ಚವನ್ನು ಸರ್ಕಾರವೆ ಹೊರಬೇಕು. ಆಗ ಖರೀದಿ ಕೇಂದ್ರಗಳಿಗೆ ತನ್ನ ಬೆಳೆಗಳನ್ನು ಸಾಗಿಸಲು ಸಾಧ್ಯವಾಗುತ್ತದೆ. ರೈತ ತಂದ ಬೆಳೆಗಳನ್ನು ಕೂಡಿಡುವ ವ್ಯವಸ್ಥೆಯನ್ನು ಕೂಡಾ ಸರ್ಕಾರ ಮಾಡಬೇಕು. ಈ ಕೂಡಿಟ್ಟ ಬೆಳೆಗಳ ಆಧಾರದಲ್ಲಿ ಅಡಮಾನ ಸಾಲವನ್ನು ಶೂನ್ಯ ಬಡ್ಡ ದರದಲ್ಲಿ ಸರ್ಕಾರ ನೀಡಬೇಕು” ಎಂದು ಹೇಳುತ್ತಾರೆ.
ರಾಜ್ಯದಲ್ಲಿ ಬೆಳೆಯುವ ಪ್ರಮುಖ ಬೆಳೆಗಳಿಗೆ ಬೆಂಬಲ ಬೆಲೆ, ಉಗ್ರಾಣ, ಸಾರಿಗೆ, ಅವುಗಳ ಮೇಲಿನ ಬಡ್ಡಿ ರಹಿತ ಸಾಲ ಸೇರಿದಂತೆ ಖರೀದಿ ಕೇಂದ್ರಗಳಲ್ಲಿ ಖರೀದಿ ಮಾಡಲು 5-10 ಸಾವಿರ ಕೋಟಿ ಹಣಕಾಸು ಬೇಡುತ್ತದೆ. “ಈ ಹಣಕಾಸು ಒದಗಿಸುವುದು ರಾಜ್ಯ ಸರ್ಕಾರಕ್ಕೆ ಯಾವ ರೀತಿಯಿಂದಲೂ ಹೊರೆಯಾಗುವುದಿಲ್ಲ, ಆದರೆ ಸರ್ಕಾರ ಇಚ್ಚಾಶಕ್ತಿ ತೋರಿಸಬೇಕಷ್ಟೆ” ಎಂದು ಅವರು ಪ್ರಕಾಶ್ ಕಮ್ಮರಡಿ ಹೇಳುತ್ತಾರೆ.
ಇದನ್ನೂ ಓದಿ: ಡೇರಿ ಫಾರಂ, ಗೋಶಾಲೆಗಳಿಗೆ ಅನುಮತಿ ಕಡ್ಡಾಯ: ಮಾಲಿನ್ಯ ನಿಯಂತ್ರಣದ ಹೆಸರಿನಲ್ಲಿ ರೈತರ ಬದುಕಿಗೆ ಕೊಳ್ಳಿ!