ಭಾರತ ಸರ್ಕಾರದ ಜೊತೆ ನಡೆದ ಪಂಜಾಬ್ ರೈತ ಮುಖಂಡರ ಸಭೆಯಲ್ಲಿ ರೈತರಿಗೆ ಯಾವುದೇ ಖಚಿತವಾದ ಭರವಸೆ ದೊರೆತಿಲ್ಲ. ಸರ್ಕಾರ ಈಗಲಾದರೂ ಪ್ರಾಮಾಣಿಕತೆಯನ್ನು ತೋರಿಸಬೇಕಾಗಿದೆ. ಹಾಗಾಗಿ ನವೆಂಬರ್ 26, 27ಕ್ಕೆ ದೆಹಲಿ ಚಲೋ ನಡೆಸಲಾಗುವುದು ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ತಿಳಿಸಿದೆ.
ನವೆಂಬರ್ 13 ರಂದು ಭಾರತ ಸರ್ಕಾರದೊಂದಿಗೆ ಪಂಜಾಬ್ನ ರೈತ ಮುಖಂಡರ ಸತತ ಏಳು ಗಂಟೆಗಳ ಸಭೆ ನಡೆಸಿದರು. ರೈತ ಮುಖಂಡರು ತಮ್ಮ ಬೇಡಿಕೆಗಳನ್ನು ಸ್ಪಷ್ಟವಾಗಿ ಮಂಡಿಸಿದರೂ ಸಹ ಸರ್ಕಾರದಿಂದ ರೈತರಿಗೆ ಯಾವುದೇ ಖಚಿತ ಭರವಸೆ ದೊರೆತಿಲ್ಲ. ಹಾಗಾಗಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲು ರೈತ ಮುಖಂಡರು ನವೆಂಬರ್ 18 ರಂದು ಪಂಜಾಬ್ ನಡೆಸಲಿದ್ದಾರೆ ಎನ್ನಲಾಗಿದೆ.
ಸರ್ಕಾರವು ತನ್ನ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಲು ಅಥವಾ ಎಲ್ಲಾ ರೈತರಿಗೆ ಮತ್ತು ಎಲ್ಲಾ ಕೃಷಿ ಉತ್ಪನ್ನಗಳಿಗೆ ಕಾನೂನುಬದ್ಧವಾಗಿ ಖಾತರಿಪಡಿಸಿದ ಕನಿಷ್ಟ ಬೆಂಬಲ ಬೆಲೆ ನೀಡಲು ಬದ್ಧವಾಗಿಲ್ಲ. ಸಭೆಯಲ್ಲಿ ರೈತ ಮುಖಂಡರು ಎತ್ತಿದ ಸಮಸ್ಯೆಗಳಿಗೆ ಸರ್ಕಾರ ಯಾವುದೇ ಪೂರ್ವಭಾವಿ ಅಥವಾ ರಚನಾತ್ಮಕ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಹಾಗಾಗಿ ಎಐಕೆಎಸ್ಸಿಸಿ, ರಾಷ್ಟ್ರೀಯ ಕಿಸಾನ್ ಮಹಾಸಂಗ್ ಮತ್ತು ಭಾರತೀಯ ಕಿಸಾನ್ ಯೂನಿಯನ್ ಸೇರಿದಂತೆ ಹಲವಾರು ರೈತರು ಮತ್ತು ಕೃಷಿ ಕಾರ್ಮಿಕರ ಒಕ್ಕೂಟಗಳು 500 ಕ್ಕೂ ಹೆಚ್ಚು ರೈತ ಸಂಘಟನೆಗಳು ನವೆಂಬರ್ 26-27ರಂದು ದೆಹಲಿ ಚಲೋ ನಡೆಸಲು ನಿರ್ಧರಿಸಿದ್ದಾರೆ.
ದೇಶದ 500 ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟವಾದ ಎಐಕೆಎಸ್ಸಿಸಿ ಅಕ್ಟೋಬರ್ 27 ರಂದೇ ನವದೆಹಲಿಯ ಗುರುದ್ವಾರ ರಾಕಬ್ಗಂಜ್ನಲ್ಲಿ ಸಭೆ ಸೇರಿ ಹೋರಾಟವನ್ನು ತೀವ್ರಗೊಳಿಸುವ ನಿರ್ಧಾರ ತೆಗೆದುಕೊಂಡಿತ್ತು ಎಂದು ಎಐಕೆಎಸ್ಸಿಸಿ ಮಾಧ್ಯಮ ಕಾರ್ಯದರ್ಶಿ ಅಶುತೋಷ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳಿಗೆ ವಿರೋಧ: ದೇಶಾದ್ಯಂತ ರಸ್ತೆ ತಡೆ, ದೆಹಲಿ ಚಲೋಗೆ ನಿರ್ಧಾರ!