Homeಅಂಕಣಗಳುರೈತಬಂಧು ಪ್ರವಾದಿ ಮುಹಮ್ಮದ್ (ಸ) : ಮಿಸ್ರಿಯಾ ಐ ಪಜೀರ್

ರೈತಬಂಧು ಪ್ರವಾದಿ ಮುಹಮ್ಮದ್ (ಸ) : ಮಿಸ್ರಿಯಾ ಐ ಪಜೀರ್

“ನಿನ್ನ ಕೈಗಳಲ್ಲಿ ದುಡಿದು ಸಂಪಾದಿಸಿದ ಆಹಾರವಾಗಿದೆ ಶ್ರೇಷ್ಠ ಆಹಾರ. ನೀನು ಸಂಪಾದಿಸುವ ಪ್ರತಿ ಸಂಪಾದನೆಯಲ್ಲೂ ನಿನ್ನ ಪರಿಶ್ರಮವಿರಬೇಕು” ಎಂದು ಎಚ್ಚರಿಸುತ್ತದೆ ಇಸ್ಲಾಂ.

- Advertisement -
- Advertisement -

ಪ್ರವಾದಿ ಮುಹಮ್ಮದ್(ಸ. ಅ)ರನ್ನು ಅರಿಯದವರು ಅವರಿಗೆ ಕೇವಲ ಧರ್ಮ ಪ್ರಬೋಧಕರೆಂಬ ಚೌಕಟ್ಟನ್ನು ಹಾಕಿಬಿಡುತ್ತಾರೆ. ಜೊತೆಗೆ ಪೂರ್ವಾಗ್ರಹಗಳನ್ನಿಟ್ಟುಕೊಂಡು ಇಸ್ಲಾಮನ್ನು ದ್ವೇಷಿಸುತ್ತಾರೆ. ಆದರೆ ಇತಿಹಾಸದ ಸರಿಯಾದ ತಿಳಿವು ಮಾತ್ರ ಈ ಪೂರ್ವಾಗ್ರಹಗಳನ್ನು ದೂರ ಮಾಡಬಲ್ಲದು.

ಮುಹಮ್ಮದ್ ಪೈಗಂಬರರದು (ಸ) ಬಹುಮುಖ ಆಯಾಮಗಳುಳ್ಳ ವ್ಯಕ್ತಿತ್ವ. ಧರ್ಮ ಪ್ರಬೋಧಕರಾಗಿ, ಮಾನವತಾವಾದಿಯಾಗಿ, ಸಮಾನತೆಯ ಹರಿಕಾರನಾಗಿ, ಮಾನವ ಹಕ್ಕುಗಳ ಪ್ರತಿಪಾದಕನಾಗಿ, ಸ್ತ್ರೀ ವಿಮೋಚಕನಾಗಿ, ಅತ್ಯುತ್ತಮ ಶಿಕ್ಷಕನಾಗಿ, ಪರಿಸರವಾದಿಯಾಗಿ – ಹೀಗೆ ಅವರ ವ್ಯಕ್ತಿತ್ವದ ಹರವು ವಿಸ್ತಾರಗೊಳ್ಳುತ್ತಲೇ ಹೋಗುತ್ತದೆ. ತಮ್ಮ ಬೋಧನೆಗಳನ್ನು ಪ್ರಾಯೋಗಿಕವಾಗಿ ಸ್ವತಃ ಜೀವನದಲ್ಲಿ ಅಳವಡಿಸಿಕೊಂಡು ಬದುಕುವುದರ ಮೂಲಕ ಇಡೀ ಮನುಕುಲಕ್ಕೆ ಮಾದರೀಯೋಗ್ಯರಾದರು. ಪ್ರಸಿದ್ಧ ಆಂಗ್ಲ ಸಾಹಿತಿ ಮೈಕಲ್.ಎಚ್.ಹರ್ಟ್ ತನ್ನ ಪ್ರಸಿದ್ಧ ಕೃತಿಯಾದ ‘ದಿ ಹಂಡ್ರೆಡ್ಸ್’ನಲ್ಲಿ ಪ್ರವಾದಿ ಮುಹಮ್ಮದರಿಗೆ ಪ್ರಥಮ ಸ್ಥಾನವನ್ನು ನೀಡಿದರು. ಅವರು ಅದಕ್ಕೆ ನೀಡಿದ ಕಾರಣ “ಜಗತ್ತಿನ ಇತಿಹಾಸದಲ್ಲಿ ಮಾನವಕುಲವನ್ನು ಅವರಂತೆ ಪ್ರಭಾವಿಸಿದ ವ್ಯಕ್ತಿ ಇನ್ನೊಬ್ಬರಿಲ್ಲ. ಬಹುತೇಕರು ಅವರನ್ನೋರ್ವ ಧರ್ಮ ಪ್ರಬೋಧಕರಾಗಿ ಮಾತ್ರ ಗುರುತಿಸುತ್ತಾರೆ. ವಾಸ್ತವದಲ್ಲಿ ಅವರ ವ್ಯಕ್ತಿತ್ವವನ್ನು ಕೇವಲ ಧಾರ್ಮಿಕ ಆಯಾಮದಡಿ ಹಿಡಿದಿಡಲು ಸಾಧ್ಯವಿಲ್ಲ” ಎಂಬುದಾಗಿತ್ತು.

ನಾನಿಲ್ಲಿ ಪೈಗಂಬರರ ಪರಿಸರ ಮತ್ತು ಕೃಷಿ ನೀತಿಯ ಬಗ್ಗೆ ಕ್ಷ-ಕಿರಣ ಬೀರುವ ಪುಟ್ಟ ಪ್ರಯತ್ನ ಮಾಡುತ್ತೇನೆ.

ಮೊನ್ನೆ ನನ್ನ ಪುಟ್ಟ ಮಗಳು ಕೋಲೊಂದರಿಂದ ಮನೆಯಂಗಳದ ದಾಸವಾಳ ಗಿಡಕ್ಕೆ ಬಡಿಯುತ್ತಾ ಎಲೆಗಳನ್ನು ಉದುರಿಸುತ್ತಿದ್ದಳು. ಹಾಗೆಲ್ಲಾ ಗಿಡಮರಗಳಿಗೆ ತೊಂದರೆ ಕೊಡಬಾರದು ನಮ್ಮಂತೆಯೇ ಅವುಗಳಿಗೂ ಜೀವವಿದೆ, ನೋವಾಗುತ್ತದೆ ಎಂದೆ. ಅಷ್ಟು ಹೇಳಿದ್ದೇ ತಡ, ಸಿಕ್ಕಸಿಕ್ಕ ವಸ್ತುಗಳಿಗೆಲ್ಲಾ ಬಡಿಯುತ್ತಾ ಇದಕ್ಕೆ ಜೀವವಿದೆಯೇ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳತೊಡಗಿದಳು. ಕಿರಿಕಿರಿಯೆನಿಸಿದರೂ ಅವಳಿಗೆ ಜೀವಿಗಳು ಮತ್ತು ನಿರ್ಜೀವಿಗಳ ನಡುವಿನ ವ್ಯತ್ಯಾಸವನ್ನು ಮನವರಿಕೆ ಮಾಡಿಕೊಟ್ಟೆ. ಆ ಕೂಡಲೇ ಪಾಪ ಎಂದು ಗಿಡವನ್ನು ಅಪ್ಪಿಕೊಳ್ಳುತ್ತಾ ಇದೆಲ್ಲಾ ನಿನ್ನ ಅಮ್ಮ ನಿನಗೆ ಕಲಿಸಿದ್ದಾ ಎಂದು ಕೇಳಿದಳು. ಇದನ್ನು ಪ್ರತಿಪಾದಿಸಿ ಸಾರಿದವರು ಮುಹಮ್ಮದ್ ಪೈಗಂಬರರು(ಸ) ಎಂದೆ. ಒಮ್ಮೆ ಮುಹಮ್ಮದರು(ಸ) ಅನುಯಾಯಿಗಳ ಜೊತೆ ಮಸೀದಿಗೆ ಹೋಗುತ್ತಿದ್ದಾಗ ಅವರಲ್ಲೊಬ್ಬರು ಅಲ್ಲೇ ಪಕ್ಕದಲ್ಲಿದ್ದ ಗಿಡವೊಂದರಿಂದ ಎಲೆಗಳನ್ನು ಕಿತ್ತರು. ಇದನ್ನು ಗಮನಿಸಿದ ಪೈಗಂಬರರು, “ಇದೇನು ಮಾಡುತ್ತಿರುವಿರಿ? ವಿನಾಕಾರಣ ಎಲೆಗಳನ್ನು ಕೀಳದಿರಿ, ಅವುಗಳಿಗೂ ಜೀವವಿದೆ” ಎಂದಿದ್ದರು ಎಂದು ಅವಳದೇ ಭಾಷೆಯಲ್ಲಿ ವಿವರಿಸಿದೆ.

ಕೃಷಿಯು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ನಿಮ್ಮೊಂದಿಗೆ ನಂಬಿಕೆಯಿಂದ ಜೋಪಾನವಾಗಿ ನೋಡಿಕೊಳ್ಳುವಂತೆ ನೀಡಿದ ಸ್ವತ್ತಾಗಿದೆ ಪರಿಸರ ಎಂದು ಇಸ್ಲಾಂ ಸಾರುತ್ತದೆ. ಇಸ್ಲಾಂ ಕೃಷಿಗೆ ಪ್ರಾಮುಖ್ಯತೆಯನ್ನು ನೀಡಿ ಅದನ್ನೊಂದು ಪುಣ್ಯ ಕರ್ಮವೆಂದು ಪರಿಗಣಿಸಿದೆ.

ನಾಳೆ ಲೋಕಾವಸಾನವಾಗುವುದೆಂದು ಖಾತರಿಯಿದ್ದರೂ ನಿನ್ನ ಬಳಿ ಗಿಡವೊಂದಿದ್ದರೆ ಅದನ್ನು ನೆಟ್ಟುಬಿಡು ಎಂದಿದ್ದಾರೆ ಪ್ರವಾದಿ ಮುಹಮ್ಮದ್(ಸ.ಅ). ಪ್ರಕೃತಿಯ ಮೇಲೆ ನಮಗಿರುವ ಜವಾಬ್ದಾರಿಯೇನೆಂಬುದು ಇದರಿಂದ ಮನದಟ್ಟಾಗುತ್ತದೆ.

ಮನುಷ್ಯನಂತೆಯೇ ಇತರ ಜೀವಿಗಳಿಗೂ ಈ ಪ್ರಕೃತಿಯ ಮೇಲೆ ಸಮಪಾಲಿನ ಹಕ್ಕಿದೆ ಎಂಬ ಪ್ರಜ್ಞೆಯನ್ನು ಹುಟ್ಟುಹಾಕಿದ ಅವರು “ಯಾರಾದರೂ ಒಂದು ಗಿಡ ನೆಟ್ಟರೆ/ಬೇಸಾಯ ಮಾಡಿದರೆ ಅದು ಮರವಾಗಿ ಬೆಳೆದು ಫಸಲು ನೀಡಲಾರಂಭಿಸಿದಾಗ, ಪಕ್ಷಿಗಳು, ಪ್ರಾಣಿಗಳು, ಮನುಷ್ಯರು ಅದರಲ್ಲಿನ ಫಲಗಳನ್ನು ತಿಂದರೆ ಅಥವಾ ಆ ಮರವನ್ನು ನೆರಳಿಗೋ, ಆವಾಸಕ್ಕಾಗಿಯೋ ಆಶ್ರಯಿಸಿದರೆ ದಾನದ ಪ್ರತಿಫಲವು ನೆಟ್ಟವನಿಗೆ ಲಭಿಸುವುದು” ಎನ್ನುವ ಮೂಲಕ ಹಸಿರು ಪರಿಸರವನ್ನು ಬೆಳೆಸಲು ಉತ್ತೇಜಿಸಿದರು.

ಯುದ್ಧದ ಸಂದರ್ಭದಲ್ಲಿಯೂ ಅಶಕ್ತರಿಗೆ, ವೃದ್ಧರಿಗೆ, ಸ್ತ್ರೀಯರಿಗೆ, ಮಕ್ಕಳಿಗೆ, ಮರಗಿಡಗಳಿಗೆ ಹಾಗೂ ಬೆಳೆಗಳಿಗೆ ಹಾನಿ ಮಾಡಬಾರದೆಂದು ಆಜ್ಞಾಪಿಸಿದ ಅವರ ಪರಿಸರದ ಬಗೆಗಿನ ಕಾಳಜಿ ಸರ್ವಕಾಲಕ್ಕೂ ಅನುಕರಣಾಯೋಗ್ಯವಾದುದು.

ಯಾರಲ್ಲಾದರೂ ಜಮೀನಿದ್ದರೆ ಅದನ್ನು ಕೃಷಿಗಾಗಿ ಬಳಸಬೇಕೆಂದೂ, ಒಂದು ವೇಳೆ ಉಳುಮೆ ಮಾಡುವುದಿಲ್ಲವೆಂದಾದರೆ ಯಾರಾದರೂ ಬೇಸಾಯ ಮಾಡುವವನಿಗೆ ಕೊಡಬೇಕು, ಕೃಷಿ ಭೂಮಿಯನ್ನು ಭೋಗಿಸಲು ಉಳುವ ಕೈಗಳಿಗಿಂತ ಮಿಗಿಲಾದ ಅರ್ಹ ಇನ್ನೊಬ್ಬನಿಲ್ಲ ಎಂಬುದು ಅವರ ಉಪದೇಶವಾಗಿತ್ತು. ಇಲ್ಲಿ ವಿ(ಶೇ)ಷ ಆರ್ಥಿಕ ವಲಯದ ಹೆಸರಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳಿಗೆ ಆಳುವ ವರ್ಗವೇ ಧಾರೆಯೆರೆದು ಕೊಡುತ್ತಿದೆ. ಕೃಷಿ ಭೂಮಿಯ ನಾಶದಿಂದಾಗಿ ಕೃಷಿ ಉತ್ಪಾದನೆಯು ಕಡಿಮೆಯಾಗಿ ಬೆಲೆಯೇರಿಕೆಗೆ ಕಾರಣವಾಗುತ್ತಿದೆ. ಆಧುನಿಕ ಕೈಗಾರಿಕೆಗಳು, ಕಾಂಕ್ರೀಟು ಕಾಡುಗಳು ದುಡ್ಡಿನ ಗುಡ್ಡೆಗಳನ್ನು ನೀಡಬಹುದೇ ಹೊರತು ಹಸಿವು ಇಂಗಿಸಲಾರದು.

ರೈತ ಮತ್ತು ಮಾರುಕಟ್ಟೆಯ ನಡುವೆ ದಲ್ಲಾಳಿಯ ಮಧ್ಯಸ್ಥಿಕೆಯನ್ನು ಪ್ರವಾದಿವರ್ಯರು ವಿರೋಧಿಸಿದ್ದರು. ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕಾದುದು ಅವನ ಹಕ್ಕಾಗಿರುತ್ತದೆ. ನಾವು ನಮ್ಮ ರಾಜ್ಯದಲ್ಲೇ ಪ್ರತೀ ವರ್ಷ ಟೊಮ್ಯಾಟೊ ಬೆಳೆಗಾರರು ಸೂಕ್ತ ಬೆಲೆ ಸಿಗದೇ ರಸ್ತೆಗೆ ಸುರಿಯುವ ದೃಶ್ಯವನ್ನು ನೋಡುತ್ತಿರುತ್ತೇವೆ. ಟೊಮ್ಯಾಟೊ ಬೆಳೆಯದ ಊರಲ್ಲಿ ಅಂತಹ ಕಾಲದಲ್ಲೂ ಬಳಕೆದಾರ ಅದಕ್ಕೆ ದುಬಾರಿ ಬೆಲೆಯನ್ನೇ ಪಾವತಿಸುತ್ತಾನೆ. ಇಲ್ಲಿ ಬೆಳೆದ ರೈತ ದಿವಾಳಿಯಾದರೆ ಮಧ್ಯವರ್ತಿ ಕೊಬ್ಬುತ್ತಾನೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‍ಡೌನ್ ಕಾಲದಲ್ಲಿ ಅತಿಹೆಚ್ಚು ಬೇಡಿಕೆಯಿದ್ದ ಫಲ ಕಲ್ಲಂಗಡಿ ಹಣ್ಣು. ಈ ಹಣ್ಣಿಗೆ ಅಷ್ಟು ಬೇಡಿಕೆ ಮಂಗಳೂರು ಮಾರುಕಟ್ಟೆಯಲ್ಲಿದ್ದಾಗ್ಯೂ ಕಲ್ಲಂಗಡಿ ಬೆಳೆಗಾರನಿಗೆ ಜುಜುಬಿ ಬೆಲೆ ಕೊಟ್ಟು ಖರೀದಿಸಲಾಗುತ್ತಿದ್ದುದು ಬಹಿರಂಗ ಸತ್ಯ. ಇಲ್ಲಿಯೂ ಬೆಳೆದ ಕೈಗಳನ್ನು ವಂಚಿಸಿ ದಲ್ಲಾಳಿ ಕೊಬ್ಬಿದ್ದ.

“ನಿನ್ನ ಕೈಗಳಲ್ಲಿ ದುಡಿದು ಸಂಪಾದಿಸಿದ ಆಹಾರವಾಗಿದೆ ಶ್ರೇಷ್ಠ ಆಹಾರ. ನೀನು ಸಂಪಾದಿಸುವ ಪ್ರತಿ ಸಂಪಾದನೆಯಲ್ಲೂ ನಿನ್ನ ಪರಿಶ್ರಮವಿರಬೇಕು” ಎಂದು ಎಚ್ಚರಿಸುತ್ತದೆ ಇಸ್ಲಾಂ. ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕದ ಬೆಲೆಯೇರಿಕೆ, ಪ್ರಾಕೃತಿಕ ವಿಕೋಪ ಇವೆಲ್ಲದರ ಸುಳಿಯಲ್ಲಿ ಸಿಕ್ಕು ಯಾತನೆ ಅನುಭವಿಸುತ್ತಿರುವ ರೈತರಿಗೆ ದಲ್ಲಾಳಿಗಳ ಹಾವಳಿಯೂ ತಪ್ಪಿದ್ದಲ್ಲ. ಬೆವರು, ರಕ್ತ ಸುರಿಸಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ದಲ್ಲಾಳಿಗಳು ಯಾವುದೇ ಪರಿಶ್ರಮ, ತ್ರಾಸವಿಲ್ಲದೇ ರೈತನ ಅಹವಾಲಿಗೆ ಬೆಲೆ ಕೊಡದೇ ತಾವಾಗಿಯೇ ನಿಗದಿಪಡಿಸಿದ ಬೆಲೆಗೆ ಕೊಂಡುಕೊಳ್ಳುತ್ತಾರೆ. ಒಂದರ್ಥದಲ್ಲಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳೇ ಏಕಸ್ವಾಮ್ಯ ಮೆರೆಯುತ್ತಾರೆ.

ತರಕಾರಿ ಹಣ್ಣು- ಹಂಪಲುಗಳನ್ನು ಇಂದಲ್ಲ ನಾಳೆ ಬೆಲೆ ಹೆಚ್ಚಾಗಬಹುದೆಂದು ಶೇಖರಿಸಿಡಲಾಗದು. ಇಲ್ಲಿ ಬೆಳೆಗಾರರ ಅಸಹಾಯಕತೆಯ ಲಾಭ ಪಡೆದು ಆಧುನಿಕ ಬಂಡವಾಳಶಾಹಿತ್ವವು ಅವರನ್ನು ವಂಚಿಸುತ್ತದೆ. ಈ ರೀತಿಯ ವ್ಯವಹಾರವು ಇಸ್ಲಾಮಿನಲ್ಲಿ ನಿಷಿದ್ಧವಾಗಿದೆ. ಕ್ಷಾಮಕಾಲದಲ್ಲಿ ಕೃತಕ ಅಭಾವ ಸೃಷ್ಟಿಸಿ ಬೆಲೆಯೇರಿಸುವುದನ್ನೂ ಪ್ರವಾದಿವರ್ಯರು ಕಟುವಾಗಿ ವಿರೋಧಿಸಿದ್ದಾರೆ.

ನೈಸರ್ಗಿಕ ಸಂಪನ್ಮೂಲಗಳಾದ ನೀರು, ಮಣ್ಣು, ಉಪ್ಪು ಇವುಗಳನ್ನು ಯಾರೇ ಕೇಳಿದರೂ ನಿರಾಕರಿಸಬಾರದು ಎಂದು ಪ್ರವಾದಿಯವರು ಹೇಳಿದ್ದರು. ಯಾವಾಗ ಮನುಷ್ಯ ಪ್ರಕೃತಿಯ ಮೇಲೆ ಅಧಿಪತ್ಯ ಸಾಧಿಸಹೊರಟನೋ ಅಂದಿನಿಂದ ಗುಟುಕು ನೀರಿಗೂ ತತ್ವಾರ ಪಡಬೇಕಾದ, ಹಣ ಪಾವತಿಸಿ ಪಡೆಯಬೇಕಾದ ದುಸ್ಥಿತಿ ಬಂದೊದಗಿತು. ನಿನ್ನ ಮುಂದೆ ಸಾಗರವೇ ಹರಿದುಹೋಗುತ್ತಿದ್ದರೂ ಮೂರು ಬಾರಿಯಷ್ಟೇ ಅಂಗಸ್ನಾನವನ್ನು (ನಮಾಜಿಗೆ ಮುಂಚೆ ಮಾಡುವ ಕಡ್ಡಾಯವಾದ ಒಂದು ಕರ್ಮ) ನಿರ್ವಹಿಸಬೇಕು ಎಂದಿದ್ದಾರೆ. ಮುಂದಿನ ಪೀಳಿಗೆಗೆ ನೀರಿನ ಅಭಾವ ಕಾಡದಿರಲು ನೀರನ್ನು ಪೋಲು ಮಾಡದಿರಿ ಎಂಬ ಎಚ್ಚರಿಕೆಯೂ ಇದರಲ್ಲಡಗಿದೆ.

ಇಸ್ಲಾಂ ಹಾಗೂ ಪೈಗಂಬರರು ಬೇರೆ ಬೇರೆಯಲ್ಲ. ಅವರ ಬದುಕೇ ಇಸ್ಲಾಮಿನ ಪ್ರಾಯೋಗಿಕ ರೂಪ. ತಪ್ಪು ಕಲ್ಪನೆಗಳಿಂದಾಗಿ ಅತೀಹೆಚ್ಚು ಅಪಾರ್ಥಕ್ಕೊಳಪಡುತ್ತಿರುವ, ನಿಂದನೆಗೊಳಪಡುತ್ತಿರುವ ಪೈಗಂಬರರನ್ನು ಇಂದು ಹೆಚ್ಚು ಅಧ್ಯಯನ ಮಾಡಬೇಕಾಗಿದೆ.


ಇದನ್ನೂ ಓದಿ: ಎಲೆಮರೆಯಿಂದ: ಸಾಹಿತ್ಯದಿಂದಲೇ ಬದುಕು ಕಟ್ಟಿಕೊಂಡ ಕರಾವಳಿಯ ಮೌಲ್ವಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...