Homeಸಿನಿಮಾಕ್ರೀಡೆಇಂದಿನಿಂದ ಕ್ವಾರ್ಟರ್ ಫೈನಲ್‌ ಹಣಾಹಣಿ: ಕುತೂಹಲ ಘಟ್ಟ ತಲುಪಿದ ಫಿಫಾ!

ಇಂದಿನಿಂದ ಕ್ವಾರ್ಟರ್ ಫೈನಲ್‌ ಹಣಾಹಣಿ: ಕುತೂಹಲ ಘಟ್ಟ ತಲುಪಿದ ಫಿಫಾ!

- Advertisement -
- Advertisement -

ಕಳೆದ ಎರಡು ವಾರಗಳಿಂದ ಫುಟ್‌ಬಾಲ್ ಪ್ರಿಯರ ಪಾಲಿಗೆ ರಸದೌತಣ ನೀಡುತ್ತಿರುವ ಫಿಫಾ ವಿಶ್ವಕಪ್-2022 ಪೂರ್ವ ಅಂತಿಮ ಘಟ್ಟ ತಲುಪಿದೆ. ಅಗ್ರ ಎಂಟು ತಂಡಗಳು ಈಗಾಗಲೇ ಕ್ವಾರ್ಟರ್ ಫೈನಲ್ ತಲುಪಿದ್ದು, ಇಂದಿನಿಂದ ರೋಚಕ ಹಣಾಹಣಿ ಆರಂಭವಾಗಲಿದೆ. ಈ ನಡುವೆ ಫಿಫಾ ಫುಟ್‌ಬಾಲ್ ವಿಶ್ವಕಪ್ ದಿನದಿಂದ ದಿನಕ್ಕೆ ರೋಚಕತೆಗೆ ಮತ್ತು ಅಪರೂಪದ ದಾಖಲೆಗಳಿಗೆ ಸಾಕ್ಷಿಯಾಗುತ್ತಿರುವುದು ಮತ್ತಷ್ಟು ವಿಶೇಷ.

ಡಿಸೆಂಬರ್ 3ರಂದು ನಡೆದ ಮೊದಲ ನಾಕ್‌ಔಟ್ ಪಂದ್ಯದಲ್ಲಿ ಯುಎಸ್‌ಎ ತಂಡಕ್ಕೆ ಆಘಾತ ನೀಡಿರುವ ನೆದರ್ಲೆಂಡ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊದಲ ತಂಡವೆನಿಸಿಕೊಂಡಿದ್ದರೆ, ಮತ್ತೊಂದೆಡೆ ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದ್ದ ಬಲಿಷ್ಠ ಬ್ರೆಜಿಲ್ ತಂಡ ಕೂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಇದಲ್ಲದೆ ಸೆನೆಗಲ್ ವಿರುದ್ಧ 3-0 ಗೋಲುಗಳಿಂದ ಭರ್ಜರಿ ಜಯ ಸಾಧಿಸಿರುವ ಇಂಗ್ಲೆಂಡ್, ಪೊಲೆಂಡ್ ವಿರುದ್ಧ ಗೆಲುವು ದಾಖಲಿಸಿರುವ ಹಾಲಿ ಚಾಂಪಿಯನ್ ಫ್ರಾನ್ಸ್, ಆಸ್ಟ್ರೇಲಿಯಾವನ್ನು ಮಣಿಸಿರುವ ಅರ್ಜೆಂಟೀನಾ, ಜಪಾನ್ ವಿರುದ್ಧ ರೋಚಕ ಗೆಲುವು ಸಾಧಿಸಿರುವ ಕಳೆದ ವಿಶ್ವಕಪ್ ರನ್ನರ್ ಅಪ್ ಕ್ರೊಯೇಶಿಯಾ, ಪೆನಾಲ್ಟಿ ಶೂಟೌಟ್‌ನಲ್ಲಿ ಬಲಿಷ್ಟ ಸ್ಪೇನ್ ಮಣಿಸಿದ ಮೊರಾಕ್ಕೊ, ಸ್ವಿಜರ್ಲೆಂಡ್ ಮಣಿಸಿದ ಪೋರ್ಚುಗಲ್ ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಲು ಸಜ್ಜಾಗಿವೆ.

ಡಿಸೆಂಬರ್ 9ರಿಂದ ಕ್ವಾರ್ಟರ್ ಫೈನಲ್ ಪಂದ್ಯಗಳು ಆರಂಭವಾಗಲಿದ್ದು, ಎಂಟು ತಂಡಗಳು ಮುಂದಿನ ಹಂತಕ್ಕೆ ತಲುಪಲು ಆಡಲಿವೆ. ಹೀಗಾಗಿ ಗೆಲುವು ಯಾರಿಗೆ? ಸೆಮಿಫೈನಲ್ ತಲುಪಲಿರುವ ಆ ನಾಲ್ಕು ಬಲಿಷ್ಠ ತಂಡಗಳು ಯಾವುವು? ಎಂಬ ಲೆಕ್ಕಾಚಾರಗಳು ಈಗಾಗಲೇ ಆರಂಭವಾಗಿವೆ.

ಸೆಮಿಫೈನಲ್‌ಗೆ ಲಗ್ಗೆ ಇಡಬಹುದಾದ ತಂಡಗಳ್ಯಾವುದು?

ಶುಕ್ರವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಕ್ರೊಯೇಶಿಯಾ ಬಲಿಷ್ಠ ಬ್ರೆಜಿಲ್ ತಂಡವನ್ನು ಎದುರಿಸಲಿದೆ. ಮತ್ತೊಂದು ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಬ್ರೆಜಿಲ್ ಈ ಪಂದ್ಯವನ್ನು ಸುಲಭಕ್ಕೆ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ, ಬ್ರೆಜಿಲ್ ತಂಡದ ಸ್ಟಾರ್ ಆಟಗಾರ ನೇಯ್ಮರ್ ಈ ಮಹತ್ವದ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಏಕೆಂದರೆ ಕಳೆದ ಪಂದ್ಯದಲ್ಲಿ ನೇಯ್ಮರ್ ಅವರ ಹಿಮ್ಮಡಿಯ ಮೂಳೆಗೆ ಬಲವಾದ ಪೆಟ್ಟುಬಿದ್ದಿದೆ. ನೋವಿನ ತೀವ್ರತೆ ನಿರೀಕ್ಷೆಗಿಂತ ಅಧಿಕವಾಗಿದೆ ಎಂದು ಬ್ರೆಜಿಲ್ ತಂಡ ಈಗಾಗಲೇ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ.

ವೈದ್ಯರು ಮುಂದಿನ ಮೂರು ವಾರಗಳ ಕಾಲ ನೇಯ್ಮರ್‌ಗೆ ವಿಶ್ರಾಂತಿ ಸೂಚಿಸಿದ್ದು, ಮುಂದಿನ ಪಂದ್ಯದಲ್ಲಿ ನೇಯ್ಮರ್ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ. ಆದರೆ, ಬ್ರೆಜಿಲ್ ತಂಡ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ನೇಯ್ಮರ್ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂದೇನೂ ಉಲ್ಲೇಖಿಸಿಲ್ಲ. ಹೀಗಾಗಿ ನೇಯ್ಮರ್ ಆಟ ನೋಡಲು ಅವರ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಮತ್ತೊಂದೆಡೆ ಕ್ರೊಯೇಶಿಯಾ ಸುಲಭಕ್ಕೆ ಮಣಿಯುವ ತಂಡವೇನಲ್ಲ. ಕಳೆದ ವಿಶ್ವಕಪ್ ರನ್ನರ್ ಅಪ್ ಆಗಿರುವ ಈ ತಂಡ, ಈ ಟೂರ್ನಿಯಲ್ಲೂ ಚಾಂಪಿಯನ್ ಆಟ ಪ್ರದರ್ಶಿಸುತ್ತಿದ್ದು, ಬ್ರೆಜಿಲ್ ಎದುರು ಗೆಲುವು ಸಾಧಿಸುವ ವಿಶ್ವಾಸ ಹೊಂದಿದೆ. ಹೀಗಾಗಿ ಈ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿರಲಿದೆ ಎನ್ನಲಡ್ಡಿಯಿಲ್ಲ.

ಎರಡನೇ ಪಂದ್ಯದಲ್ಲಿ ಜನಪ್ರಿಯ ಆಟಗಾರ ಲಿಯೋನಲ್ ಮೆಸ್ಸಿ ನೇತೃತ್ವದ ಮತ್ತೊಂದು ಬಲಿಷ್ಠ ತಂಡ ಅರ್ಜೆಂಟೀನಾ ನೆದರ್ಲೆಂಡ್ ವಿರುದ್ಧ ಸೆಣಸಲಿದೆ. ಮೇಲ್ನೋಟಕ್ಕೆ ಅರ್ಜೆಂಟೀನಾ ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ನೆದರ್ಲೆಂಡ್ ತಂಡವನ್ನೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಕಳೆದ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಈ ತಂಡ ನೀಡಿದ ಪ್ರದರ್ಶನ ಫುಟ್‌ಬಾಲ್‌ಪ್ರಿಯರನ್ನು ಬೆರಗುಗೊಳಿಸಿತ್ತು.

ಆ ಪಂದ್ಯದ ಆರಂಭದಿಂದಲೇ ನೆದರ್ಲೆಂಡ್ ಅಬ್ಬರಿಸಿತ್ತು. ಪಂದ್ಯದ 10ನೇ ನಿಮಿಷದಲ್ಲೇ ಮೆಂಫಿಸ್ ಡೆಪೇ ಗೋಲು ಸಿಡಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. 46ನೇ ನಿಮಿಷದಲ್ಲಿ ಮತ್ತೋರ್ವ ಆಟಗಾರ ಡ್ಯಾಲಿ ಬ್ಲಿಂಡ್ ಮತ್ತೊಂದು ಗೋಲು ಗಳಿಸುವ ಮೂಲಕ ಗೆಲುವನ್ನು ಖಚಿತಪಡಿಸಿದ್ದರು. ನಂತರ ಪಂದ್ಯದ 81ನೇ ನಿಮಿಷದಲ್ಲಿ ಡಮ್ಫ್ರೈಸ್ ಮೂರನೇ ಗೋಲು ಗಳಿಸುವ ಮೂಲಕ ಯುಎಸ್‌ಎ ತಂಡದ ಪಾಲಿಗೆ ನುಂಗಲಾರದ ತುತ್ತಾದರು. ಹೀಗಾಗಿ ಈ ತಂಡ ಬಲಿಷ್ಠ ಅರ್ಜೆಂಟೀನಾ ವಿರುದ್ಧ ಅಷ್ಟು ಸುಲಭಕ್ಕೆ ಸೋಲೊಪ್ಪಲಾರದು ಎಂಬುದರಲ್ಲೂ ಎರಡು ಮಾತಿಲ್ಲ.

ಇದನ್ನೂ ಓದಿ: ಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳ ನಡುವೆಯೇ ಏರುತ್ತಿರುವ ಫಿಫಾ ಫೀವರ್

ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಹಾಲಿ ಚಾಂಪಿಯನ್ ಫ್ರಾನ್ಸ್ ಮುಖಾಮುಖಿಯಾಗಲಿವೆ. ಈ ಎರಡೂ ತಂಡಗಳು ಆಕ್ರಮಣಾಕಾರಿ ಆಟಕ್ಕೆ ಹೆಸರುವಾಸಿಯಾದಂತಹ ತಂಡಗಳೇ. ಹಾಲಿ ಚಾಂಪಿಯನ್ ಫ್ರಾನ್ಸ್ ಈ ಬಾರಿಯೂ ಪ್ರಬಲವಾಗಿದೆ. ಅಗ್ರ ಶ್ರೇಯಾಂಕಿತರಾದ ಕರೀಮ್ ಬೆಂಜೆಮಾ, ಕೈಲಿಯನ್ ಎಂಬಾಪೆ ಮತ್ತು ಉಸ್ಮಾನೆ ಡೆಂಬೆಲೆ ಅವರಂತಹ ಆಕ್ರಮಣಕಾರಿ ಆಟಗಾರರು ತಂಡದಲ್ಲಿರುವುದು ಇತರೆ ಆಟಗಾರರಿಗೆ ಮಾನಸಿಕವಾಗಿಯೂ ಬಲ ತುಂಬಲಿದೆ. ಇದಲ್ಲದೆ, ಕ್ರಿಸ್ಟೋಫರ್ ಕುಂಕು, ಆಂಟೊಯಿನ್ ಗ್ರೀಜ್ಮನ್, ಒಲಿವಿಯರ್ ಗೆರಾರ್ಡ್ ಮತ್ತು ಕಿಂಗ್ಸ್ಲೆ ಕೊಮನ್ ಸೇರಿದಂತೆ ತರಬೇತುದಾರ ಡಿಡಿಯರ್ ಡ್ಯಾಶ್ಚಾಂಪ್ಸ್ ಎದುರು ಸಾಕಷ್ಟು ಉತ್ತಮ ಆಯ್ಕೆಗಳಿವೆ. ಹೀಗಾಗಿ ಈ ತಂಡ ಎರಡನೇ ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಇನ್ನು ನಾಯಕ ಗ್ಯಾರೆತ್ ಸೌತ್‌ಗೇಟ್ ನೇತೃತ್ವದ ಇಂಗ್ಲೆಂಡ್ ಫುಟ್‌ಬಾಲ್ ತಂಡ ಸಾಕಷ್ಟು ಆಕ್ರಮಣಕಾರಿ ಆಟಗಾರರನ್ನು ಹೊಂದಿದೆ. ಹ್ಯಾರಿ ಕೇನ್, ಫಿಲ್ ಫೋಡೆನ್, ರಹೀಮ್ ಸ್ಟರ್ಲಿಂಗ್, ಮೇಸನ್ ಮೌಂಟ್, ಜ್ಯಾಕ್ ಗ್ರೀಲಿಶ್ ಮತ್ತು ಬುಕಾಯೊ ಸಕಾ ಅವರಂತಹ ಆಟಗಾರರು ಎಂತಹ ಎದುರಾಳಿಗೂ ನೀರು ಕುಡಿಸಬಲ್ಲರು. ಹ್ಯಾರಿ ಕೇನ್ ವಿಶ್ವದ ಅತ್ಯುತ್ತಮ ಸ್ಟ್ರೈಕರ್‌ಗಳಲ್ಲಿ ಒಬ್ಬರಾಗಿದ್ದು, ಇದೀಗ ಅವರು ಉತ್ತಮ ಫಾರ್ಮ್‌ನಲ್ಲಿರುವುದು ಇಂಗ್ಲೆಂಡ್ ಪಾಲಿಗೆ ಪ್ಲಸ್ ಪಾಯಿಂಟ್. ಹೀಗಾಗಿ ಕ್ವಾರ್ಟರ್ ಫೈನಲ್ ಪಂದ್ಯಗಳ ಪೈಕಿ ಈ ಪಂದ್ಯ ಅಭಿಮಾನಿಗಳಿಂದ ಅತಿಹೆಚ್ಚು ಗಮನ ಸೆಳೆಯುತ್ತಿದೆ.

ನಾಲ್ಕನೇ ಪಂದ್ಯದಲ್ಲಿ ಮೊರಾಕ್ಕೊ ಮತ್ತು ಪೂರ್ಚುಗಲ್ ತಂಡಗಳು ಸೆಣಸಲಿವೆ.

ಹೊಸ ದಾಖಲೆ ಬರೆದ ಕ್ಯಾಮರೂನ್

ಆಫ್ರಿಕಾ ಖಂಡದ ಪುಟ್ಟ ರಾಷ್ಟ್ರವಾದ ರಿಪಬ್ಲಿಕ್ ಆಫ್ ಕ್ಯಾಮರೂನ್ ಫಿಫಾ ವಿಶ್ವಕಪ್ ಟೂರ್ನಿಯಿಂದ ಹೊರಬೀಳುವ ಮುನ್ನ ಬಲಿಷ್ಠ ಬ್ರೆಜಿಲ್ ತಂಡವನ್ನು ಸೋಲಿಸಿ ಸ್ಮರಣೀಯ ಗೆಲುವು ದಾಖಲಿಸಿದ ಹಿರಿಮೆಗೆ ಪಾತ್ರವಾಗಿದೆ.

ವಿನ್ಸೆಂಟ್ ಅಬೂಬಕ್ಕರ್ ಗಳಿಸಿದ ಗೋಲಿನಿಂದ ಕ್ಯಾಮರೂನ್ ಬ್ರೆಜಿಲ್ ತಂಡವನ್ನು 1-0 ಅಂತರದಲ್ಲಿ ಪರಾಭವಗೊಳಿಸಿತು. ಈ ಮೂಲಕ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಈ ಸಾಧನೆ ಮಾಡಿದ (ಬ್ರೆಜಿಲ್ ಮಣಿಸಿದ) ಆಫ್ರಿಕಾದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಕ್ಯಾಮರೂನ್ ಪಾತ್ರವಾಗಿದೆ.

ಲುಸೈಲ್ ಕ್ರೀಡಾಂಗಣದಲ್ಲಿ ಶುಕ್ರವಾರ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ನಿಗದಿತ ಅವಧಿಯವರೆಗೆ ಯಾವುದೇ ಗೋಲು ದಾಖಲಾಗಲಿಲ್ಲ. ಇಂಜುರಿ ಅವಧಿಯಲ್ಲಿ (ಹೆಚ್ಚುವರಿ 92ನೇ ನಿಮಿಷ) ಸಬ್‌ಸ್ಟಿಟ್ಯೂಟ್ ಆಟಗಾರ ಜೆರೋಮ್ ಎನ್ಗೊಮ್ ಎಂಬೆಕೆಲಿ ನೀಡಿದ ಕ್ರಾಸ್‌ನಲ್ಲಿ ವಿನ್ಸೆಂಟ್ ಅಬೂಬಕ್ಕರ್ ಚೆಂದದ ಹೆಡರ್ ಮಾಡಿದರು. ಚೆಂಡು ಗೋಲ್ ಪೋಸ್ಟ್‌ನೊಳಗೆ ಸೇರುತ್ತಿದ್ದಂತೆ ಕ್ಯಾಮರೂನ್ ಆಟಗಾರರು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ಜಿ ಗುಂಪಿನ ಹಣಾಹಣಿಯಲ್ಲಿ ಸೋತರೂ ಬ್ರೆಜಿಲ್ ತಂಡವು ಆಗಾಗಲೇ 16ರ ಘಟ್ಟಕ್ಕೆ ಅರ್ಹತೆ ಗಳಿಸಿದ್ದರಿಂದ ಫಲಿತಾಂಶ ಯಾವುದೇ ಪರಿಣಾಮ ಬೀರಲಿಲ್ಲ. 1998ರ ಬಳಿಕ ಗುಂಪು ಹಂತದಲ್ಲಿ ಬ್ರೆಜಿಲ್ ಸೋತಿದ್ದು ಇದೇ ಮೊದಲು. ಆ ವರ್ಷ ನಾರ್ವೆ ತಂಡಕ್ಕೆ ಬ್ರೆಜಿಲ್ ಮಣಿದಿತ್ತು. ಈ ಪಂದ್ಯದಲ್ಲಿ ಬ್ರೆಜಿಲ್ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ್ದ ಕಾರಣ ಕ್ಯಾಮರೂನ್ ಪಾಲಿಗೆ ಗೆಲುವು ಸುಲಭದ್ದಾಗಿತ್ತು.

ಕತಾರ್‌ಗೆ ಮತ್ತೊಂದು ಮುಖಭಂಗ

ಕತಾರ್‌ನಲ್ಲಿ ವಿಶ್ವಕಪ್ ಆಯೋಜನೆಯ ಅವಕಾಶ ನೀಡಿದ್ದಕ್ಕೆ ಅನೇಕ ಮಾನವ ಹಕ್ಕುಗಳ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೆ, #ಬಾಯ್ಕಾಟ್‌ಕತಾರ್ ಎಂಬ ಹ್ಯಾಷ್‌ಟ್ಯಾಗ್ ಟ್ವಿಟ್ಟರ್ ಮತ್ತಿತರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುವ ಮೂಲಕ ಕತಾರ್ ತೀವ್ರ ಮುಖಭಂಗಕ್ಕೆ ಒಳಗಾಗಿತ್ತು. ಈ ನಡುವೆ ಇದೀಗ ಕತಾರ್ ಮತ್ತೊಂದು ಮುಖಭಂಗವನ್ನು ಅನುಭವಿಸಿದೆ.

ಫಿಫಾ ಆಯೋಜಿಸಿದ ಮೊದಲ ಅರಬ್ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ, ಫುಟ್‌ಬಾಲ್ ವಿಶ್ವಕಪ್ ಇತಿಹಾಸದಲ್ಲೇ, ದಕ್ಷಿಣ ಆಫ್ರಿಕಾ ಆಯೋಜಿಸಿದ್ದ ಫಿಫಾ ಬಳಿಕ ಗುಂಪು ಹಂತದಲ್ಲಿಯೇ ಹೊರಹಾಕಲ್ಪಟ್ಟ ಎರಡನೇ ಅತಿಥೇಯ ದೇಶ ಎಂಬ ಕುಖ್ಯಾತಿಗೆ ಇದೀಗ ಕತಾರ್ ಪಾತ್ರವಾಗಿದೆ. ಕತಾರ್ ತಾನಾಡಿದ ಮೂರು ಪಂದ್ಯಗಳಲ್ಲೂ ಹೀನಾಯ ಸೋಲನುಭವಿಸಿದೆ. ದಕ್ಷಿಣ ಆಫ್ರಿಕಾ 2010ರ ವಿಶ್ವಕಪ್‌ನಲ್ಲಿ ಗುಂಪು ಹಂತದ ಪಂದ್ಯಗಳ ಮೂರನೇ ಸುತ್ತಿನಲ್ಲಿ ಹೊರಬಿದ್ದಿತ್ತು. ಇದು ಈವರೆಗೆ ಅತಿಥೇಯ ತಂಡವೊಂದರ ಕಳಪೆ ಪ್ರದರ್ಶನವಾಗಿತ್ತು.

ದಂತಕಥೆ ಪೀಲೆ ದಾಖಲೆ ಮುರಿಯುವರೇ ನೇಯ್ಮರ್?

ವಿಶ್ವಕಪ್ 16ರ ಘಟ್ಟದ ಪಂದ್ಯದಲ್ಲಿ ಬ್ರೆಜಿಲ್ ದಕ್ಷಿಣ ಕೊರಿಯಾ ತಂಡವನ್ನು 4-1 ಅಂತರದಲ್ಲಿ ಸೋಲಿಸುವ ಮೂಲಕ ಕ್ವಾರ್ಟರ್ ಫೈನಲ್ ತಲುಪಿತ್ತು. ಈ ಪಂದ್ಯದ 7ನೇ ನಿಮಿಷದಲ್ಲೇ ನೇಯ್ಮರ್ ಜೂನಿಯರ್ ತಮ್ಮ ವೃತ್ತಿ ಜೀವನದ 76ನೇ ಅಂತಾರಾಷ್ಟ್ರೀಯ ಗೋಲು ಗಳಿಸಿ ಮತ್ತೊಂದು ದಾಖಲೆ ಬರೆದರು.

ಫುಟ್‌ಬಾಲ್‌ನ ದಂತಕಥೆ ಪೀಲೆ ಅವರ ಅಂತಾರಾಷ್ಟ್ರೀಯ ಗೋಲುಗಳ ಸಂಖ್ಯೆ 77. ಈ ದಾಖಲೆಯನ್ನು ಸರಿಗಟ್ಟಲು ನೇಯ್ಮರ್ ಜೂನಿಯರ್‌ಗೆ ಇನ್ನು ಕೇವಲ ಒಂದು ಗೋಲು ಮಾತ್ರ ಬಾಕಿ ಇದೆ. ಮುಂದಿನ ಪಂದ್ಯದಲ್ಲಿ ಆ ಅಪರೂಪದ ಗಳಿಗೆಯನ್ನು ಕಣ್ತುಂಬಿಕೊಳ್ಳಲು ಫುಟ್‌ಬಾಲ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆದರೆ, ಗಾಯಾಳುವಾಗಿರುವ ನೇಯ್ಮರ್ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದೇ ಅನುಮಾನವಾಗಿದ್ದು, ಅಭಿಮಾನಿಗಳ ನಿರಾಸೆಗೂ ಕಾರಣವಾಗಿದೆ. ಒಂದು ವೇಳೆ ನೇಯ್ಮರ್ ಕಣಕ್ಕಿಳಿದರೆ ಫಿಫಾ ವಿಶ್ವಕಪ್ 2022 ಮತ್ತೊಂದು ಹೊಸ ಇತಿಹಾಸಕ್ಕೆ ಸಾಕ್ಷಿಯಾಗುವ ಸಾಧ್ಯತೆ ದಟ್ಟವಾಗಿದೆ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...