Homeಸಿನಿಮಾಕ್ರೀಡೆಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳ ನಡುವೆಯೇ ಏರುತ್ತಿರುವ ಫಿಫಾ ಫೀವರ್

ಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳ ನಡುವೆಯೇ ಏರುತ್ತಿರುವ ಫಿಫಾ ಫೀವರ್

- Advertisement -
- Advertisement -

ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡಾ ಹಬ್ಬವಾದ ಫಿಫಾ 2022 ಫುಟ್‌ಬಾಲ್ ವಿಶ್ವಕಪ್‌ಗೆ ಕತಾರ್‌ನಲ್ಲಿ ವಿದ್ಯುಕ್ತ ಚಾಲನೆ ದೊರೆತಿದೆ. ವಿಶ್ವದ ಬಲಿಷ್ಠ 32 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದರೆ, ತಮ್ಮ ನೆಚ್ಚಿನ ತಂಡದ ಗೆಲುವಿಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಕ್ರಿಕೆಟನ್ನು ಉಸಿರಾಡುವ ಭಾರತದಲ್ಲೂ ಫುಟ್‌ಬಾಲ್ ಫೀವರ್ ದಿನೇದಿನೇ ಏರುತ್ತಲೇ ಇದೆ. ಕೋಲ್ಕತ್ತಾದ ಬೀದಿಗಳಲ್ಲಿ ಫುಟ್‌ಬಾಲ್ ದಂತಕಥೆಗಳಾದ ಲಿಯೋನಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೋ, ನೇಯ್ಮರ್ ಚಿತ್ರಗಳು ರಾರಾಜಿಸುತ್ತಿದ್ದರೆ, ಕೇರಳದಲ್ಲಂತೂ ರಸ್ತೆಗಳ ಇಕ್ಕೆಲಗಳಲ್ಲಿ ಜನಪ್ರಿಯ ಫುಟ್‌ಬಾಲ್ ಆಟಗಾರರ ಕಟೌಟ್‌ಗಳು, ನೆಚ್ಚಿನ ತಂಡಗಳ ಬಾವುಟಗಳು ಕ್ರಿಕೆಟನ್ನೂ ನಾಚಿಸುತ್ತಿವೆ. ಏಕೆಂದರೆ ಫುಟ್‌ಬಾಲ್ ಎಂಬ ಆಟದ ಗಮ್ಮತ್ತೆ ಅಂಥದ್ದು.

ಜಗತ್ತಿನ ಫುಟ್‌ಬಾಲ್ ಕ್ರೀಡೆಯ ಅತ್ಯುನ್ನತ ಪ್ರಶಸ್ತಿ ಫಿಫಾ. ಇದನ್ನು ಸಾಮಾನ್ಯವಾಗಿ ವಿಶ್ವಕಪ್ ಫುಟ್‌ಬಾಲ್ ಎಂದೇ ಕರೆಯುವುದು ವಾಡಿಕೆ. ಈ ಪಂದ್ಯಾವಳಿಯು ಫಿಫಾ (ಅಂತಾರಾಷ್ಟ್ರೀಯ ಫುಟ್‌ಬಾಲ್ ಫೆಡರೇಷನ್) ಸದಸ್ಯ ರಾಷ್ಟ್ರಗಳ ಪುರುಷರ ತಂಡಗಳ ನಡುವೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. 1930ರಲ್ಲಿ ಮೊಟ್ಟಮೊದಲ ಫಿಫಾ ವಿಶ್ವಕಪ್ ಟೂರ್ನಿಯನ್ನು ಆಯೋಜಿಸಲಾಗಿತ್ತು. 1940 ಮತ್ತು 1944ರಲ್ಲಿ ಎರಡನೇ ಮಹಾಯುದ್ಧದ ಕಾರಣಕ್ಕೆ ಈ ಟೂರ್ನಿಯನ್ನು ಆಯೋಜಿಸಿರಲಿಲ್ಲ. ಉಳಿದಂತೆ ವರ್ಷದಿಂದ ವರ್ಷಕ್ಕೆ ಈ ಕ್ರೀಡಾಕೂಟದ ಜನಪ್ರಿಯತೆ ಮತ್ತಷ್ಟು ಹೆಚ್ಚುತ್ತಲೇ ಇದೆ.

ಇದೇ ಕಾರಣಕ್ಕೆ ವಿಶ್ವದಲ್ಲೇ ಅತಿ ಹೆಚ್ಚಿನ ಜನ ದೂರದರ್ಶನದ ಮೂಲಕ ವೀಕ್ಷಿಸುವ ಕ್ರೀಡಾಕೂಟ ಎಂಬ ಶ್ರೇಯಕ್ಕೆ ಫಿಫಾ ಪಾತ್ರವಾಗಿದೆ. 2018 ವಿಶ್ವಕಪ್ ರಷ್ಯಾದಲ್ಲಿ ನಡೆದಿತ್ತು. ಇಡೀ ಕೂಟದ ಉದ್ದಕ್ಕೂ 64 ಪಂದ್ಯಗಳು ನಡೆದಿದ್ದವು. ಈ ಪಂದ್ಯಗಳನ್ನು ಟಿವಿಯಲ್ಲಿ ದಾಖಲೆಯ 191 ಮಿಲಿಯನ್ ಜನ ವೀಕ್ಷಿಸಿದ್ದರು ಎಂದರೆ ಫುಟ್‌ಬಾಲ್‌ನ ಜನಪ್ರಿಯತೆ ಎಂಥದ್ದು ಎಂಬುದು ಅರ್ಥವಾಗುತ್ತದೆ. ಪ್ರಸ್ತುತ ವರ್ಷ ಈ ದಾಖಲೆ ಮತ್ತಷ್ಟು ಸುಧಾರಿಸಲಿದೆ ಎಂದು ಅಂದಾಜಿಸಲಾಗಿದೆ. ಈ ವರ್ಷದ ಟೂರ್ನಿಯಲ್ಲಿ ವಿಶ್ವಕಪ್ ಗೆದ್ದ ತಂಡಕ್ಕೆ 42 ಮಿಲಿಯನ್ ಡಾಲರ್ ದೊರೆತರೆ, ಫೈನಲ್‌ನಲ್ಲಿ ಸೋತ ತಂಡಕ್ಕೆ 30 ಮಿಲಿಯನ್ ಡಾಲರ್ ಮತ್ತು ಪ್ರಶಸ್ತಿ ಲಭಿಸಲಿದೆ. ಇನ್ನೂ ಈ ಟೂರ್ನಿಯಲ್ಲಿ ಫಿಫಾ 5.31 ಟ್ರಿಲಿಯನ್ ಲಾಭ ಗಳಿಸಿದರೆ, ಆತಿಥೇಯ ಕತಾರ್ 1.27 ಲಕ್ಷ ಕೋಟಿ ಲಾಭ ನೋಡಲಿದೆ.

ಫುಟ್‌ಬಾಲ್ ಇತಿಹಾಸ ಏನು?

ಚೆಂಡನ್ನು ಕಾಲಿನಿಂದ ಒದೆಯುವ ಮೂಲಕ ಗೋಲು ಗಳಿಸುವ ಫುಟ್‌ಬಾಲ್ ಆಟಕ್ಕೆ ಯೂರೋಪ್‌ನಷ್ಟೇ ಪ್ರಾಚೀನ ಇತಿಹಾಸವಿದೆ. ಯೂರೋಪ್ ದೇಶಗಳ ಪಾಲಿಗೆ ಫುಟ್‌ಬಾಲ್ ಎಂಬುದು ಅಲ್ಲಿನ ಪರಂಪರೆ ಮತ್ತು ಪ್ರಾಚೀನ ಸಂಪ್ರದಾಯಗಳ ಭಾಗ. ಹಿಂದಿನಿಂದಲೂ ಅಲ್ಲಿನ ರೈತರು ಕುಟುಂಬಸಮೇತರಾಗಿ ಈ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಅಲ್ಲಿನ ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಲಾಗಿದೆ. 18-19ನೇ ಶತಮಾನಗಳಲ್ಲಿ ಯೂರೋಪಿನ ಇಂಗ್ಲಿಷ್ ಪಬ್ಲಿಕ್ ಶಾಲೆಗಳಲ್ಲಿ ಹಲವಾರು ಬದಲಾವಣೆಗಳೊಂದಿಗೆ ಈ ಆಟವನ್ನು ಸ್ಪರ್ಧಾತ್ಮಕಗೊಳಿಸಲಾಯಿತು. ತದನಂತರದ ಕಾಲದಲ್ಲಿ ಬ್ರಿಟಿಷರು ಈ ಆಟವನ್ನು ತಮ್ಮ ವಸಾಹತು ರಾಷ್ಟ್ರಗಳಿಗೂ ಪರಿಚಯಿಸಿದರು. ಈ ಮೂಲಕ ಫುಟ್‌ಬಾಲ್ ಮತ್ತಷ್ಟು ಜನಪ್ರಿಯವಾಯಿತು. ಇಂದು ವಿಶ್ವದಲ್ಲೇ ಅತಿಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ಕ್ರೀಡೆಗಳ ಪಟ್ಟಿಯಲ್ಲಿ ಫುಟ್‌ಬಾಲ್‌ಗೆ ಅಗ್ರಸ್ಥಾನ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ: ಫಿಫಾ ಪುಟ್ಬಾಲ್: ಏಕೈಕ ಗೋಲಿನಿಂದ ಗೆದ್ದ ಸ್ವಿಜರ್ಲ್ಯಾಂಡ್ – ಗೋಲು ಬಾರಿಸಿದ ಬ್ರೀಲ್ ಎಂಬೋಲೊ ಸಂಭ್ರಮಿಸಲಿಲ್ಲವೇಕೆ?

ಫಿಫಾ ವಿಶ್ವಕಪ್

ಕ್ರೀಡಾಲೋಕದಲ್ಲಿ ಒಲಿಂಪಿಕ್ಸ್‌ಗೆ ತನ್ನದೇ ಆದ ಸ್ಥಾನವಿದೆ. ಆದರೆ 1904ರಲ್ಲಿ ಸ್ಥಾಪಿತವಾದ ಫಿಫಾ ಒಲಿಂಪಿಕ್ಸ್‌ನ ಹೊರಗೆ ಒಂದು ಜಾಗತಿಕ ಮಟ್ಟದ ಫುಟ್‌ಬಾಲ್ ಕ್ರೀಡಾಕೂಟವನ್ನು ಆಯೋಜಿಸಲು ಕ್ರಮಕೈಗೊಂಡಿತ್ತು. ಆದರೆ ಆರಂಭದ ಯತ್ನಗಳು ಸಫಲವಾಗಲಿಲ್ಲ. ಬ್ರಿಟಿಷ್ ಫುಟ್‌ಬಾಲ್ ಅಸೋಸಿಯೇಷನ್ ಮತ್ತು ಫಿಫಾದ ನಡುವೆ ಸಾಕಷ್ಟು ತಿಕ್ಕಾಟ ನಡೆದು ಕೊನೆಗೆ ಫಿಫಾ ಒಲಿಂಪಿಕ್ ಫುಟ್‌ಬಾಲ್‌ಗೆ ಮಾನ್ಯತೆ ನೀಡಿತು, ಅಲ್ಲದೆ 1920ರ ಒಲಿಂಪಿಕ್ಸ್‌ನಲ್ಲಿ ಫುಟ್‌ಬಾಲ್ ಪಂದ್ಯಾವಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿತು. ಹೀಗೆ ನಿಜವಾದ ಅರ್ಥದಲ್ಲಿ ಅಂತಾರಾಷ್ಟ್ರೀಯ ಫುಟ್‌ಬಾಲ್ ಪಂದ್ಯಾವಳಿಯು ಮೊದಲ ಬಾರಿಗೆ 1920ರಲ್ಲಿ ಒಲಿಂಪಿಕ್ಸ್‌ನಲ್ಲಿ ಜರುಗಿತು.

ತರುವಾಯ ಫಿಫಾ ತನ್ನದೇ ಆದ ವಿಶ್ವ ಫುಟ್‌ಬಾಲ್ ಚಾಂಪಿಯನ್‌ಶಿಪ್ ನಡೆಸುವ ತನ್ನ ಹಳೆಯ ಯೋಜನೆಗೆ ಮತ್ತೆ ಜೀವ ತುಂಬಿ 1930ರಲ್ಲಿ ಉರುಗ್ವೆಯಲ್ಲಿ ಪ್ರಪ್ರಥಮ ಫುಟ್‌ಬಾಲ್ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಲು ಮುಂದಾಯಿತು. 1924 ಮತ್ತು 1928ರ ಒಲಿಂಪಿಕ್ಸ್‌ನಲ್ಲಿ ಉರುಗ್ವೆ ತಂಡವು ಫುಟ್‌ಬಾಲ್ ಸ್ವರ್ಣಪದಕ ಪಡೆದಿತ್ತು. ಅಲ್ಲದೇ ಉರುಗ್ವೆಯು 1930ರಲ್ಲಿ ತನ್ನ ಸ್ವಾತಂತ್ರ್ಯೋತ್ಸವದ ಶತಮಾನವನ್ನು ಆಚರಿಸಲು ಮುಂದಾಗಿತ್ತು. ಹೀಗಾಗಿ ಸಹಜವಾಗಿಯೇ ಮೊದಲ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯನ್ನು ಆಯೋಜಿಸುವ ಅವಕಾಶವನ್ನು ಯೂರೋಪ್ ದೇಶಗಳ ಕಡು ವಿರೋಧದ ನಡುವೆಯೂ ಉರುಗ್ವೆ ಪಡೆದುಕೊಂಡಿತು. ಈ ಪಂದ್ಯಾವಳಿಯ ಕನಸನ್ನು ನನಸಾಗಿಸುವಲ್ಲಿ ಫಿಫಾದ ಅಂದಿನ ಅಧ್ಯಕ್ಷ ಜೂಲ್ಸ್ ರಿಮೆ ಪ್ರಧಾನ ಪಾತ್ರ ವಹಿಸಿದ್ದರು. ನಂತರ ನಡೆದದ್ದೆಲ್ಲವೂ ಇತಿಹಾಸ.

ವಿವಾದದಲ್ಲಿ ಫಿಫಾ ಮತ್ತು ಕತಾರ್

ಫಿಫಾ 2014ರ ವಿಶ್ವಕಪ್ ಟೂರ್ನಿ ನಡೆಯುತ್ತಿರುವಾಗಲೇ 2018ರ ವಿಶ್ವಕಪ್ ಆತಿಥ್ಯವನ್ನು ರಷ್ಯಾಗೆ ಹಾಗೂ 2022ರ ವಿಶ್ವಕಪ್ ಆತಿಥ್ಯವನ್ನು ಕತಾರ್ ದೇಶಕ್ಕೆ ನೀಡಲಾಗಿತ್ತು. ಕತಾರ್ ಹಿಂಬಾಗಿಲಿನ ಮೂಲಕ ತನ್ನ ಹಣ ಬಲದ ಸಹಾಯದಿಂದಲೇ ಈ ಆತಿಥ್ಯವನ್ನು ಗಳಿಸಿದೆ ಎಂಬ ಆರೋಪ ಅಂದಿನಿಂದಲೂ ಚಾಲ್ತಿಯಲ್ಲಿದೆ. ಫಿಫಾ ವಿಶ್ವಕಪ್ ಆಯೋಜಿಸಿದ ಮೊದಲ ಅರಬ್ ರಾಷ್ಟ್ರ ಎಂಬ ಶ್ರೇಯಕ್ಕೆ ಕತಾರ್ ಪಾತ್ರವಾಗಿರುವುದೇನೋ ನಿಜ. ಆದರೆ, ವಿವಾದಗಳು ಮಾತ್ರ ಸದ್ಯಕ್ಕಂತೂ ಕತಾರ್ ಮತ್ತು ಫಿಫಾವನ್ನು ಬೆಂಬಿಡದೆ ಕಾಡುತ್ತಿದೆ.

ಕತಾರ್ ದೇಶವು 2013ರಲ್ಲಿ ದೋಹಾ ವಿಶ್ವಕಪ್ ಆಯೋಜಿಸುವ ಬಿಡ್‌ಅನ್ನು ಗೆದ್ದಾಗಲೇ, ಹಲವು ಮಾನವ ಹಕ್ಕುಗಳ ಸಂಘಟನೆಗಳು ಇದನ್ನು ವಿರೋಧಿಸಿದ್ದವು. ಕ್ರೀಡೆ ಎಂಬುದು ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯ ಸಂಕೇತ. ಆದರೆ, ಮಾನವ ಹಕ್ಕುಗಳ ವಿಚಾರದಲ್ಲಿ ಕಳಪೆ ಸಾಧನೆ ಹೊಂದಿರುವ ಕತಾರ್‌ಗೆ ದೋಹಾ ವಿಶ್ವಕಪ್ ಆಯೋಜನೆಯ ಅವಕಾಶ ನೀಡಿದ್ದು ಸರಿಯಲ್ಲ ಎಂದು ವಾದಿಸಿದ್ದವು. ಅದರಲ್ಲೂ ವಿಶೇಷವಾಗಿ LGBT ಹಕ್ಕುಗಳು, ನಾಗರಿಕ ಸ್ವಾತಂತ್ರ್ಯ ಮತ್ತು ವಲಸೆ ಕಾರ್ಮಿಕರ ಚಿಕಿತ್ಸೆ ವಿಚಾರದಲ್ಲಿ ಕತಾರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಕಳಪೆ ದಾಖಲೆ ಹೊಂದಿದೆ. ಹೀಗಾಗಿ ಕ್ರೀಡಾಕೂಟದ ಆಯೋಜನೆ ಅವಕಾಶವನ್ನು ಕತಾರ್‌ಗೆ ನೀಡಬಾರದು ಎಂಬ ವಾದ ಮುನ್ನೆಲೆಗೆ ಬಂದಿತ್ತು. ಆದರೆ, ಈ ವಿವಾದ ತಣ್ಣಗಾಗುವ ಮೊದಲೆ ಫಿಫಾ ಆಯೋಜಿಸುವ ಅವಕಾಶವೂ ಕತಾರ್ ಪಾಲಾಗಿದ್ದು ಕ್ರೀಡಾ ಅಭಿಮಾನಿಗಳನ್ನು ಕೆರಳಿಸಿತ್ತು.

ಇದನ್ನೂ ಓದಿ: ಫಿಫಾ ವಿಶ್ವಕಪ್‌ನಲ್ಲಿ ಏಷ್ಯಾ ದೇಶಗಳ ಗೆಲುವು: ಫೈನಲ್‌ವರೆಗೆ ಸಾಗಬೇಕಾದ ಹಾದಿ ಹೀಗಿದೆ

ಹೀಗಾಗಿ ಫಿಫಾ ಮತ್ತು ಫುಟ್‌ಬಾಲ್ ಅಭಿಮಾನಿಗಳು ಕತಾರ್ ವಿಶ್ವಕಪ್ ಆಯೋಜಿಸುವ ಅವಕಾಶ ನೀಡಿದ್ದಕ್ಕೆ ಸಾಕಷ್ಟು ಆಕ್ರೋಶ ಹೊರಹಾಕಿದ್ದರು. ಅಲ್ಲದೆ, ಕಳೆದ ನಾಲ್ಕು ವರ್ಷಗಳಿಂದ ಎಲ್ಲೇ ಫುಟ್‌ಬಾಲ್ ಪಂದ್ಯಾವಳಿ ನಡೆದರೂ ಅಭಿಮಾನಿಗಳು ಬಾಯ್ಕಾಟ್‌ಕತಾರ್2022 ಎಂಬ ಬ್ಯಾನರ್‌ಗಳನ್ನು ಹಿಡಿದು ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದರು. ಆದರೂ, ಫಿಫಾ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.

ಪರಿಣಾಮ ಕತಾರ್‌ನ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸಿ ಆಸ್ಟ್ರೇಲಿಯಾ ತಂಡವು ಈಗಾಗಲೇ ವೀಡಿಯೊ ಒಂದನ್ನು ಬಿಡುಗಡೆ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದೆ. ಡೆನ್ಮಾರ್ಕ್ ತಂಡ ಇಡೀ ಟೂರ್ನಿಯ ಉದ್ದಕ್ಕೂ ಕಪ್ಪು ಬಣ್ಣದ ಪಟ್ಟಿ ಧರಿಸಿ ಆಡಲು ನಿರ್ಧರಿಸಿದೆ. ಇಂಗ್ಲೆಂಡ್‌ನ ಸ್ಟಾರ್ ಆಟಗಾರ ಹ್ಯಾರಿ ಕೇನ್ ಮತ್ತು ಯುರೋಪಿಯನ್ ತಂಡಗಳ ನಾಯಕರು ’ಒನ್‌ಲವ್’ ಆರ್ಮ್‌ಬ್ಯಾಂಡ್‌ಗಳನ್ನು ಧರಿಸಿ ಆಡುವುದಾಗಿ ತಿಳಿಸಿದ್ದಾರೆ. ಕತಾರ್‌ನಲ್ಲಿ ಮಾನವ ಹಕ್ಕುಗಳನ್ನು ದಮನಿಸಲಾಗುತ್ತಿದೆ ಎಂಬ ಕಾರಣಕ್ಕೆ ಪಾಪ್ ಸಂಗೀತ ಲೋಕದ ಖ್ಯಾತ ತಾರೆ ದುವಾ ಲಿಪಾ ಫಿಫಾ ಉದ್ಘಾಟನಾ ಸಮಾರಂಭದಲ್ಲಿ ತಾನು ಪ್ರದರ್ಶನ ನೀಡುವುದಿಲ್ಲ ಎಂದು ಫಿಫಾ ಅವಕಾಶವನ್ನು ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಶ್ವಕಪ್ ಗೆದ್ದ ತಂಡಗಳಿವು!

1930 ರಿಂದ 2018ರ ನಡುವೆ ಒಟ್ಟು 21 ಬಾರಿ ವಿಶ್ವಕಪ್ ಫುಟ್‌ಬಾಲ್ ಟೂರ್ನಿ ಜರುಗಿದೆ. ಈ ಪೈಕಿ ಖ್ಯಾತ ಬ್ರೆಜಿಲ್ ತಂಡ 5 ವಿಶ್ವಕಪ್‌ನಲ್ಲಿ ಗೆಲ್ಲುವ ಮೂಲಕ ಫುಟ್‌ಬಾಲ್ ಲೋಕದಲ್ಲಿ ಪಾರಮ್ಯ ಸಾಧಿಸಿದೆ. ಇದು ತಂಡವೊಂದರ ಅತಿಹೆಚ್ಚು ಗೆಲುವು. ಇನ್ನೂ ಜರ್ಮನಿ ಮತ್ತು ಇಟಲಿ ತಲಾ 4 ಬಾರಿ ಹಾಗೂ ದಕ್ಷಿಣ ಅಮೆರಿಕದ ಪುಟ್ಟ ರಾಷ್ಟ್ರ ಉರುಗ್ವೆ, ಅರ್ಜೆಂಟೀನಾ ಮತ್ತು ಫ್ರಾನ್ಸ್ ಎರಡು ಬಾರಿ ವಿಶ್ವಕಪ್‌ಅನ್ನು ತನ್ನ ಮುಡಿಗೇರಿಸಿಕೊಂಡಿವೆ. ಇಂಗ್ಲೆಂಡ್ ಮತ್ತು ಸ್ಪೇನ್ ದೇಶಗಳು ತಲಾ ಒಂದು ಬಾರಿ ವಿಶ್ವಕಪ್ ವಿಜಯಿಗಳಾಗಿವೆ.

ಫುಟ್‌ಬಾಲ್ ಅಂದರೆ ಮೆಸ್ಸಿ, ರೊನಾಲ್ಡೋ ಅಷ್ಟೇ ಅಲ್ಲ

ಭಾರತದ ಬಹುಸಂಖ್ಯಾತರ ಮಟ್ಟಿಗೆ ಫುಟ್‌ಬಾಲ್ ಎಂದ ತಕ್ಷಣ ತಟ್ಟನೆ ನೆನಪಾಗುವುದು ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ, ಪೋರ್ಚುಗೀಸ್‌ನ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಬ್ರೆಜಿಲ್ ದೇಶದ ನೇಯ್ಮರ್ ಹೆಸರು ಮಾತ್ರ. ಆದರೆ, ಜಾಗತಿಕ ಫುಟ್‌ಬಾಲ್‌ನಲ್ಲಿ ಪ್ರಸ್ತುತ ಇವರಿಗಿಂತ ಸದ್ದು ಮಾಡುತ್ತಿರುವ, ತಂಡದ ಪಾಲಿಗೆ ಅತಿಮುಖ್ಯವಾಗಿರುವ ಹಾಗೂ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಹಲವಾರು ಆಟಗಾರರಿದ್ದಾರೆ.

ಫ್ರಾನ್ಸ್ ದೇಶಕ್ಕಾಗಿ ಆಡುತ್ತಿರುವ ಕೈಲಿಯನ್ ಎಂಬಪ್ಪೆ ಪ್ರಸ್ತುತ ವಿಶ್ವದ ನಂಬರ್ ೧ ಆಟಗಾರ. ಫಾರ್ವರ್ಡ್ ಪೊಸಿಷನ್‌ನಲ್ಲಿ ಆಡುವ ಕೈಲಿಯನ್ ಎಂಬಪ್ಪೆ ಪಂದ್ಯದ ಫಿನಿಶರ್ ಆಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಫ್ರಾನ್ಸ್ ದೇಶಕ್ಕಾಗಿ ಫಾರ್ವರ್ಡ್ ಪೊಸಿಷನ್‌ನಲ್ಲೇ ಆಡುವ ಮತ್ತೋರ್ವ ಆಟಗಾರ ಕರೀಮ್ ಬೆಂಜೆಮಾ ವಿಶ್ವದ ನಂಬರ್ ೨ ಶ್ರೇಯಾಂಕಿತ ಆಟಗಾರ.

ಇನ್ನೂ ಬೆಲ್ಜಿಯಂ ದೇಶದ ಆಟಗಾರರಾದ ಕೆವಿನ್ ಡಿ ಬ್ರೂಯ್ನೆ ಮತ್ತು ಥಿಬೌಟ್ ಕೋರ್ಟೊಯಿಸ್, ಪೋಲೆಂಡ್‌ನ ರಾಬರ್ಟ್ ಲೆವಾಂಡೋಸ್ಕಿ, ಕ್ರೊವೇಶಿಯಾದ ಲ್ಯೂಕ್ ಮೊಡ್ರಿಕ್, ಬ್ರೆಜಿಲ್‌ನ ವಿನಿಸಿಯಸ್ ಜೂನಿಯರ್, ಸೆನೆಗಲ್‌ನ ಸೆಡಿಯೋ ಮಾನೆ, ಇಂಗ್ಲೆಂಡ್‌ನ ಹ್ಯಾರಿ ಕೇನ್ ಸೇರಿದಂತೆ ಹಲವು ಆಟಗಾರರು ಯೂರೋಪಿನ ಶ್ರೀಮಂತ ಫುಟ್‌ಬಾಲ್ ಲೀಗ್‌ಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಈ ಆಟಗಾರರ ಪ್ರದರ್ಶನದ ಮೇಲೂ ಫುಟ್‌ಬಾಲ್ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳಿವೆ.

ಫಿಫಾ ಟೂರ್ನಿ ವೀಕ್ಷಣೆ ಹೇಗೆ?

ಫಿಫಾ ವಿಶ್ವಕಪ್ 2022 ಪಂದ್ಯಗಳನ್ನು ಭಾರತದ ಹೊಸ ಪ್ರೀಮಿಯರ್ ಸ್ಪೋರ್ಟ್ಸ್ ನೆಟ್ವರ್ಕ್ ವಯಾಕಾಮ್18ನ ಸ್ಪೋರ್ಟ್ಸ್18 ಮತ್ತು ಸ್ಪೋರ್ಟ್ಸ್18 ಹೆಚ್‌ಡಿ ಟಿವಿ ಚಾನೆಲ್‌ಗಳಲ್ಲಿ ವೀಕ್ಷಿಸಬಹುದಾಗಿದೆ. ಭಾರತದಲ್ಲಿ ಈ ಚಾನೆಲ್‌ಗಳನ್ನು ಹೊರತುಪಡಿಸಿ ಜಿಯೋ ಸಿನಿಮಾ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತ ಲೈವ್ ಸ್ಟ್ರೀಮಿಂಗ್ ಲಭ್ಯವಿದೆ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...