Homeಸಿನಿಮಾಕ್ರೀಡೆಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳ ನಡುವೆಯೇ ಏರುತ್ತಿರುವ ಫಿಫಾ ಫೀವರ್

ಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳ ನಡುವೆಯೇ ಏರುತ್ತಿರುವ ಫಿಫಾ ಫೀವರ್

- Advertisement -
- Advertisement -

ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡಾ ಹಬ್ಬವಾದ ಫಿಫಾ 2022 ಫುಟ್‌ಬಾಲ್ ವಿಶ್ವಕಪ್‌ಗೆ ಕತಾರ್‌ನಲ್ಲಿ ವಿದ್ಯುಕ್ತ ಚಾಲನೆ ದೊರೆತಿದೆ. ವಿಶ್ವದ ಬಲಿಷ್ಠ 32 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದರೆ, ತಮ್ಮ ನೆಚ್ಚಿನ ತಂಡದ ಗೆಲುವಿಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಕ್ರಿಕೆಟನ್ನು ಉಸಿರಾಡುವ ಭಾರತದಲ್ಲೂ ಫುಟ್‌ಬಾಲ್ ಫೀವರ್ ದಿನೇದಿನೇ ಏರುತ್ತಲೇ ಇದೆ. ಕೋಲ್ಕತ್ತಾದ ಬೀದಿಗಳಲ್ಲಿ ಫುಟ್‌ಬಾಲ್ ದಂತಕಥೆಗಳಾದ ಲಿಯೋನಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೋ, ನೇಯ್ಮರ್ ಚಿತ್ರಗಳು ರಾರಾಜಿಸುತ್ತಿದ್ದರೆ, ಕೇರಳದಲ್ಲಂತೂ ರಸ್ತೆಗಳ ಇಕ್ಕೆಲಗಳಲ್ಲಿ ಜನಪ್ರಿಯ ಫುಟ್‌ಬಾಲ್ ಆಟಗಾರರ ಕಟೌಟ್‌ಗಳು, ನೆಚ್ಚಿನ ತಂಡಗಳ ಬಾವುಟಗಳು ಕ್ರಿಕೆಟನ್ನೂ ನಾಚಿಸುತ್ತಿವೆ. ಏಕೆಂದರೆ ಫುಟ್‌ಬಾಲ್ ಎಂಬ ಆಟದ ಗಮ್ಮತ್ತೆ ಅಂಥದ್ದು.

ಜಗತ್ತಿನ ಫುಟ್‌ಬಾಲ್ ಕ್ರೀಡೆಯ ಅತ್ಯುನ್ನತ ಪ್ರಶಸ್ತಿ ಫಿಫಾ. ಇದನ್ನು ಸಾಮಾನ್ಯವಾಗಿ ವಿಶ್ವಕಪ್ ಫುಟ್‌ಬಾಲ್ ಎಂದೇ ಕರೆಯುವುದು ವಾಡಿಕೆ. ಈ ಪಂದ್ಯಾವಳಿಯು ಫಿಫಾ (ಅಂತಾರಾಷ್ಟ್ರೀಯ ಫುಟ್‌ಬಾಲ್ ಫೆಡರೇಷನ್) ಸದಸ್ಯ ರಾಷ್ಟ್ರಗಳ ಪುರುಷರ ತಂಡಗಳ ನಡುವೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. 1930ರಲ್ಲಿ ಮೊಟ್ಟಮೊದಲ ಫಿಫಾ ವಿಶ್ವಕಪ್ ಟೂರ್ನಿಯನ್ನು ಆಯೋಜಿಸಲಾಗಿತ್ತು. 1940 ಮತ್ತು 1944ರಲ್ಲಿ ಎರಡನೇ ಮಹಾಯುದ್ಧದ ಕಾರಣಕ್ಕೆ ಈ ಟೂರ್ನಿಯನ್ನು ಆಯೋಜಿಸಿರಲಿಲ್ಲ. ಉಳಿದಂತೆ ವರ್ಷದಿಂದ ವರ್ಷಕ್ಕೆ ಈ ಕ್ರೀಡಾಕೂಟದ ಜನಪ್ರಿಯತೆ ಮತ್ತಷ್ಟು ಹೆಚ್ಚುತ್ತಲೇ ಇದೆ.

ಇದೇ ಕಾರಣಕ್ಕೆ ವಿಶ್ವದಲ್ಲೇ ಅತಿ ಹೆಚ್ಚಿನ ಜನ ದೂರದರ್ಶನದ ಮೂಲಕ ವೀಕ್ಷಿಸುವ ಕ್ರೀಡಾಕೂಟ ಎಂಬ ಶ್ರೇಯಕ್ಕೆ ಫಿಫಾ ಪಾತ್ರವಾಗಿದೆ. 2018 ವಿಶ್ವಕಪ್ ರಷ್ಯಾದಲ್ಲಿ ನಡೆದಿತ್ತು. ಇಡೀ ಕೂಟದ ಉದ್ದಕ್ಕೂ 64 ಪಂದ್ಯಗಳು ನಡೆದಿದ್ದವು. ಈ ಪಂದ್ಯಗಳನ್ನು ಟಿವಿಯಲ್ಲಿ ದಾಖಲೆಯ 191 ಮಿಲಿಯನ್ ಜನ ವೀಕ್ಷಿಸಿದ್ದರು ಎಂದರೆ ಫುಟ್‌ಬಾಲ್‌ನ ಜನಪ್ರಿಯತೆ ಎಂಥದ್ದು ಎಂಬುದು ಅರ್ಥವಾಗುತ್ತದೆ. ಪ್ರಸ್ತುತ ವರ್ಷ ಈ ದಾಖಲೆ ಮತ್ತಷ್ಟು ಸುಧಾರಿಸಲಿದೆ ಎಂದು ಅಂದಾಜಿಸಲಾಗಿದೆ. ಈ ವರ್ಷದ ಟೂರ್ನಿಯಲ್ಲಿ ವಿಶ್ವಕಪ್ ಗೆದ್ದ ತಂಡಕ್ಕೆ 42 ಮಿಲಿಯನ್ ಡಾಲರ್ ದೊರೆತರೆ, ಫೈನಲ್‌ನಲ್ಲಿ ಸೋತ ತಂಡಕ್ಕೆ 30 ಮಿಲಿಯನ್ ಡಾಲರ್ ಮತ್ತು ಪ್ರಶಸ್ತಿ ಲಭಿಸಲಿದೆ. ಇನ್ನೂ ಈ ಟೂರ್ನಿಯಲ್ಲಿ ಫಿಫಾ 5.31 ಟ್ರಿಲಿಯನ್ ಲಾಭ ಗಳಿಸಿದರೆ, ಆತಿಥೇಯ ಕತಾರ್ 1.27 ಲಕ್ಷ ಕೋಟಿ ಲಾಭ ನೋಡಲಿದೆ.

ಫುಟ್‌ಬಾಲ್ ಇತಿಹಾಸ ಏನು?

ಚೆಂಡನ್ನು ಕಾಲಿನಿಂದ ಒದೆಯುವ ಮೂಲಕ ಗೋಲು ಗಳಿಸುವ ಫುಟ್‌ಬಾಲ್ ಆಟಕ್ಕೆ ಯೂರೋಪ್‌ನಷ್ಟೇ ಪ್ರಾಚೀನ ಇತಿಹಾಸವಿದೆ. ಯೂರೋಪ್ ದೇಶಗಳ ಪಾಲಿಗೆ ಫುಟ್‌ಬಾಲ್ ಎಂಬುದು ಅಲ್ಲಿನ ಪರಂಪರೆ ಮತ್ತು ಪ್ರಾಚೀನ ಸಂಪ್ರದಾಯಗಳ ಭಾಗ. ಹಿಂದಿನಿಂದಲೂ ಅಲ್ಲಿನ ರೈತರು ಕುಟುಂಬಸಮೇತರಾಗಿ ಈ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಅಲ್ಲಿನ ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಲಾಗಿದೆ. 18-19ನೇ ಶತಮಾನಗಳಲ್ಲಿ ಯೂರೋಪಿನ ಇಂಗ್ಲಿಷ್ ಪಬ್ಲಿಕ್ ಶಾಲೆಗಳಲ್ಲಿ ಹಲವಾರು ಬದಲಾವಣೆಗಳೊಂದಿಗೆ ಈ ಆಟವನ್ನು ಸ್ಪರ್ಧಾತ್ಮಕಗೊಳಿಸಲಾಯಿತು. ತದನಂತರದ ಕಾಲದಲ್ಲಿ ಬ್ರಿಟಿಷರು ಈ ಆಟವನ್ನು ತಮ್ಮ ವಸಾಹತು ರಾಷ್ಟ್ರಗಳಿಗೂ ಪರಿಚಯಿಸಿದರು. ಈ ಮೂಲಕ ಫುಟ್‌ಬಾಲ್ ಮತ್ತಷ್ಟು ಜನಪ್ರಿಯವಾಯಿತು. ಇಂದು ವಿಶ್ವದಲ್ಲೇ ಅತಿಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ಕ್ರೀಡೆಗಳ ಪಟ್ಟಿಯಲ್ಲಿ ಫುಟ್‌ಬಾಲ್‌ಗೆ ಅಗ್ರಸ್ಥಾನ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ: ಫಿಫಾ ಪುಟ್ಬಾಲ್: ಏಕೈಕ ಗೋಲಿನಿಂದ ಗೆದ್ದ ಸ್ವಿಜರ್ಲ್ಯಾಂಡ್ – ಗೋಲು ಬಾರಿಸಿದ ಬ್ರೀಲ್ ಎಂಬೋಲೊ ಸಂಭ್ರಮಿಸಲಿಲ್ಲವೇಕೆ?

ಫಿಫಾ ವಿಶ್ವಕಪ್

ಕ್ರೀಡಾಲೋಕದಲ್ಲಿ ಒಲಿಂಪಿಕ್ಸ್‌ಗೆ ತನ್ನದೇ ಆದ ಸ್ಥಾನವಿದೆ. ಆದರೆ 1904ರಲ್ಲಿ ಸ್ಥಾಪಿತವಾದ ಫಿಫಾ ಒಲಿಂಪಿಕ್ಸ್‌ನ ಹೊರಗೆ ಒಂದು ಜಾಗತಿಕ ಮಟ್ಟದ ಫುಟ್‌ಬಾಲ್ ಕ್ರೀಡಾಕೂಟವನ್ನು ಆಯೋಜಿಸಲು ಕ್ರಮಕೈಗೊಂಡಿತ್ತು. ಆದರೆ ಆರಂಭದ ಯತ್ನಗಳು ಸಫಲವಾಗಲಿಲ್ಲ. ಬ್ರಿಟಿಷ್ ಫುಟ್‌ಬಾಲ್ ಅಸೋಸಿಯೇಷನ್ ಮತ್ತು ಫಿಫಾದ ನಡುವೆ ಸಾಕಷ್ಟು ತಿಕ್ಕಾಟ ನಡೆದು ಕೊನೆಗೆ ಫಿಫಾ ಒಲಿಂಪಿಕ್ ಫುಟ್‌ಬಾಲ್‌ಗೆ ಮಾನ್ಯತೆ ನೀಡಿತು, ಅಲ್ಲದೆ 1920ರ ಒಲಿಂಪಿಕ್ಸ್‌ನಲ್ಲಿ ಫುಟ್‌ಬಾಲ್ ಪಂದ್ಯಾವಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿತು. ಹೀಗೆ ನಿಜವಾದ ಅರ್ಥದಲ್ಲಿ ಅಂತಾರಾಷ್ಟ್ರೀಯ ಫುಟ್‌ಬಾಲ್ ಪಂದ್ಯಾವಳಿಯು ಮೊದಲ ಬಾರಿಗೆ 1920ರಲ್ಲಿ ಒಲಿಂಪಿಕ್ಸ್‌ನಲ್ಲಿ ಜರುಗಿತು.

ತರುವಾಯ ಫಿಫಾ ತನ್ನದೇ ಆದ ವಿಶ್ವ ಫುಟ್‌ಬಾಲ್ ಚಾಂಪಿಯನ್‌ಶಿಪ್ ನಡೆಸುವ ತನ್ನ ಹಳೆಯ ಯೋಜನೆಗೆ ಮತ್ತೆ ಜೀವ ತುಂಬಿ 1930ರಲ್ಲಿ ಉರುಗ್ವೆಯಲ್ಲಿ ಪ್ರಪ್ರಥಮ ಫುಟ್‌ಬಾಲ್ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಲು ಮುಂದಾಯಿತು. 1924 ಮತ್ತು 1928ರ ಒಲಿಂಪಿಕ್ಸ್‌ನಲ್ಲಿ ಉರುಗ್ವೆ ತಂಡವು ಫುಟ್‌ಬಾಲ್ ಸ್ವರ್ಣಪದಕ ಪಡೆದಿತ್ತು. ಅಲ್ಲದೇ ಉರುಗ್ವೆಯು 1930ರಲ್ಲಿ ತನ್ನ ಸ್ವಾತಂತ್ರ್ಯೋತ್ಸವದ ಶತಮಾನವನ್ನು ಆಚರಿಸಲು ಮುಂದಾಗಿತ್ತು. ಹೀಗಾಗಿ ಸಹಜವಾಗಿಯೇ ಮೊದಲ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯನ್ನು ಆಯೋಜಿಸುವ ಅವಕಾಶವನ್ನು ಯೂರೋಪ್ ದೇಶಗಳ ಕಡು ವಿರೋಧದ ನಡುವೆಯೂ ಉರುಗ್ವೆ ಪಡೆದುಕೊಂಡಿತು. ಈ ಪಂದ್ಯಾವಳಿಯ ಕನಸನ್ನು ನನಸಾಗಿಸುವಲ್ಲಿ ಫಿಫಾದ ಅಂದಿನ ಅಧ್ಯಕ್ಷ ಜೂಲ್ಸ್ ರಿಮೆ ಪ್ರಧಾನ ಪಾತ್ರ ವಹಿಸಿದ್ದರು. ನಂತರ ನಡೆದದ್ದೆಲ್ಲವೂ ಇತಿಹಾಸ.

ವಿವಾದದಲ್ಲಿ ಫಿಫಾ ಮತ್ತು ಕತಾರ್

ಫಿಫಾ 2014ರ ವಿಶ್ವಕಪ್ ಟೂರ್ನಿ ನಡೆಯುತ್ತಿರುವಾಗಲೇ 2018ರ ವಿಶ್ವಕಪ್ ಆತಿಥ್ಯವನ್ನು ರಷ್ಯಾಗೆ ಹಾಗೂ 2022ರ ವಿಶ್ವಕಪ್ ಆತಿಥ್ಯವನ್ನು ಕತಾರ್ ದೇಶಕ್ಕೆ ನೀಡಲಾಗಿತ್ತು. ಕತಾರ್ ಹಿಂಬಾಗಿಲಿನ ಮೂಲಕ ತನ್ನ ಹಣ ಬಲದ ಸಹಾಯದಿಂದಲೇ ಈ ಆತಿಥ್ಯವನ್ನು ಗಳಿಸಿದೆ ಎಂಬ ಆರೋಪ ಅಂದಿನಿಂದಲೂ ಚಾಲ್ತಿಯಲ್ಲಿದೆ. ಫಿಫಾ ವಿಶ್ವಕಪ್ ಆಯೋಜಿಸಿದ ಮೊದಲ ಅರಬ್ ರಾಷ್ಟ್ರ ಎಂಬ ಶ್ರೇಯಕ್ಕೆ ಕತಾರ್ ಪಾತ್ರವಾಗಿರುವುದೇನೋ ನಿಜ. ಆದರೆ, ವಿವಾದಗಳು ಮಾತ್ರ ಸದ್ಯಕ್ಕಂತೂ ಕತಾರ್ ಮತ್ತು ಫಿಫಾವನ್ನು ಬೆಂಬಿಡದೆ ಕಾಡುತ್ತಿದೆ.

ಕತಾರ್ ದೇಶವು 2013ರಲ್ಲಿ ದೋಹಾ ವಿಶ್ವಕಪ್ ಆಯೋಜಿಸುವ ಬಿಡ್‌ಅನ್ನು ಗೆದ್ದಾಗಲೇ, ಹಲವು ಮಾನವ ಹಕ್ಕುಗಳ ಸಂಘಟನೆಗಳು ಇದನ್ನು ವಿರೋಧಿಸಿದ್ದವು. ಕ್ರೀಡೆ ಎಂಬುದು ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯ ಸಂಕೇತ. ಆದರೆ, ಮಾನವ ಹಕ್ಕುಗಳ ವಿಚಾರದಲ್ಲಿ ಕಳಪೆ ಸಾಧನೆ ಹೊಂದಿರುವ ಕತಾರ್‌ಗೆ ದೋಹಾ ವಿಶ್ವಕಪ್ ಆಯೋಜನೆಯ ಅವಕಾಶ ನೀಡಿದ್ದು ಸರಿಯಲ್ಲ ಎಂದು ವಾದಿಸಿದ್ದವು. ಅದರಲ್ಲೂ ವಿಶೇಷವಾಗಿ LGBT ಹಕ್ಕುಗಳು, ನಾಗರಿಕ ಸ್ವಾತಂತ್ರ್ಯ ಮತ್ತು ವಲಸೆ ಕಾರ್ಮಿಕರ ಚಿಕಿತ್ಸೆ ವಿಚಾರದಲ್ಲಿ ಕತಾರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಕಳಪೆ ದಾಖಲೆ ಹೊಂದಿದೆ. ಹೀಗಾಗಿ ಕ್ರೀಡಾಕೂಟದ ಆಯೋಜನೆ ಅವಕಾಶವನ್ನು ಕತಾರ್‌ಗೆ ನೀಡಬಾರದು ಎಂಬ ವಾದ ಮುನ್ನೆಲೆಗೆ ಬಂದಿತ್ತು. ಆದರೆ, ಈ ವಿವಾದ ತಣ್ಣಗಾಗುವ ಮೊದಲೆ ಫಿಫಾ ಆಯೋಜಿಸುವ ಅವಕಾಶವೂ ಕತಾರ್ ಪಾಲಾಗಿದ್ದು ಕ್ರೀಡಾ ಅಭಿಮಾನಿಗಳನ್ನು ಕೆರಳಿಸಿತ್ತು.

ಇದನ್ನೂ ಓದಿ: ಫಿಫಾ ವಿಶ್ವಕಪ್‌ನಲ್ಲಿ ಏಷ್ಯಾ ದೇಶಗಳ ಗೆಲುವು: ಫೈನಲ್‌ವರೆಗೆ ಸಾಗಬೇಕಾದ ಹಾದಿ ಹೀಗಿದೆ

ಹೀಗಾಗಿ ಫಿಫಾ ಮತ್ತು ಫುಟ್‌ಬಾಲ್ ಅಭಿಮಾನಿಗಳು ಕತಾರ್ ವಿಶ್ವಕಪ್ ಆಯೋಜಿಸುವ ಅವಕಾಶ ನೀಡಿದ್ದಕ್ಕೆ ಸಾಕಷ್ಟು ಆಕ್ರೋಶ ಹೊರಹಾಕಿದ್ದರು. ಅಲ್ಲದೆ, ಕಳೆದ ನಾಲ್ಕು ವರ್ಷಗಳಿಂದ ಎಲ್ಲೇ ಫುಟ್‌ಬಾಲ್ ಪಂದ್ಯಾವಳಿ ನಡೆದರೂ ಅಭಿಮಾನಿಗಳು ಬಾಯ್ಕಾಟ್‌ಕತಾರ್2022 ಎಂಬ ಬ್ಯಾನರ್‌ಗಳನ್ನು ಹಿಡಿದು ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದರು. ಆದರೂ, ಫಿಫಾ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.

ಪರಿಣಾಮ ಕತಾರ್‌ನ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸಿ ಆಸ್ಟ್ರೇಲಿಯಾ ತಂಡವು ಈಗಾಗಲೇ ವೀಡಿಯೊ ಒಂದನ್ನು ಬಿಡುಗಡೆ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದೆ. ಡೆನ್ಮಾರ್ಕ್ ತಂಡ ಇಡೀ ಟೂರ್ನಿಯ ಉದ್ದಕ್ಕೂ ಕಪ್ಪು ಬಣ್ಣದ ಪಟ್ಟಿ ಧರಿಸಿ ಆಡಲು ನಿರ್ಧರಿಸಿದೆ. ಇಂಗ್ಲೆಂಡ್‌ನ ಸ್ಟಾರ್ ಆಟಗಾರ ಹ್ಯಾರಿ ಕೇನ್ ಮತ್ತು ಯುರೋಪಿಯನ್ ತಂಡಗಳ ನಾಯಕರು ’ಒನ್‌ಲವ್’ ಆರ್ಮ್‌ಬ್ಯಾಂಡ್‌ಗಳನ್ನು ಧರಿಸಿ ಆಡುವುದಾಗಿ ತಿಳಿಸಿದ್ದಾರೆ. ಕತಾರ್‌ನಲ್ಲಿ ಮಾನವ ಹಕ್ಕುಗಳನ್ನು ದಮನಿಸಲಾಗುತ್ತಿದೆ ಎಂಬ ಕಾರಣಕ್ಕೆ ಪಾಪ್ ಸಂಗೀತ ಲೋಕದ ಖ್ಯಾತ ತಾರೆ ದುವಾ ಲಿಪಾ ಫಿಫಾ ಉದ್ಘಾಟನಾ ಸಮಾರಂಭದಲ್ಲಿ ತಾನು ಪ್ರದರ್ಶನ ನೀಡುವುದಿಲ್ಲ ಎಂದು ಫಿಫಾ ಅವಕಾಶವನ್ನು ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಶ್ವಕಪ್ ಗೆದ್ದ ತಂಡಗಳಿವು!

1930 ರಿಂದ 2018ರ ನಡುವೆ ಒಟ್ಟು 21 ಬಾರಿ ವಿಶ್ವಕಪ್ ಫುಟ್‌ಬಾಲ್ ಟೂರ್ನಿ ಜರುಗಿದೆ. ಈ ಪೈಕಿ ಖ್ಯಾತ ಬ್ರೆಜಿಲ್ ತಂಡ 5 ವಿಶ್ವಕಪ್‌ನಲ್ಲಿ ಗೆಲ್ಲುವ ಮೂಲಕ ಫುಟ್‌ಬಾಲ್ ಲೋಕದಲ್ಲಿ ಪಾರಮ್ಯ ಸಾಧಿಸಿದೆ. ಇದು ತಂಡವೊಂದರ ಅತಿಹೆಚ್ಚು ಗೆಲುವು. ಇನ್ನೂ ಜರ್ಮನಿ ಮತ್ತು ಇಟಲಿ ತಲಾ 4 ಬಾರಿ ಹಾಗೂ ದಕ್ಷಿಣ ಅಮೆರಿಕದ ಪುಟ್ಟ ರಾಷ್ಟ್ರ ಉರುಗ್ವೆ, ಅರ್ಜೆಂಟೀನಾ ಮತ್ತು ಫ್ರಾನ್ಸ್ ಎರಡು ಬಾರಿ ವಿಶ್ವಕಪ್‌ಅನ್ನು ತನ್ನ ಮುಡಿಗೇರಿಸಿಕೊಂಡಿವೆ. ಇಂಗ್ಲೆಂಡ್ ಮತ್ತು ಸ್ಪೇನ್ ದೇಶಗಳು ತಲಾ ಒಂದು ಬಾರಿ ವಿಶ್ವಕಪ್ ವಿಜಯಿಗಳಾಗಿವೆ.

ಫುಟ್‌ಬಾಲ್ ಅಂದರೆ ಮೆಸ್ಸಿ, ರೊನಾಲ್ಡೋ ಅಷ್ಟೇ ಅಲ್ಲ

ಭಾರತದ ಬಹುಸಂಖ್ಯಾತರ ಮಟ್ಟಿಗೆ ಫುಟ್‌ಬಾಲ್ ಎಂದ ತಕ್ಷಣ ತಟ್ಟನೆ ನೆನಪಾಗುವುದು ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ, ಪೋರ್ಚುಗೀಸ್‌ನ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಬ್ರೆಜಿಲ್ ದೇಶದ ನೇಯ್ಮರ್ ಹೆಸರು ಮಾತ್ರ. ಆದರೆ, ಜಾಗತಿಕ ಫುಟ್‌ಬಾಲ್‌ನಲ್ಲಿ ಪ್ರಸ್ತುತ ಇವರಿಗಿಂತ ಸದ್ದು ಮಾಡುತ್ತಿರುವ, ತಂಡದ ಪಾಲಿಗೆ ಅತಿಮುಖ್ಯವಾಗಿರುವ ಹಾಗೂ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಹಲವಾರು ಆಟಗಾರರಿದ್ದಾರೆ.

ಫ್ರಾನ್ಸ್ ದೇಶಕ್ಕಾಗಿ ಆಡುತ್ತಿರುವ ಕೈಲಿಯನ್ ಎಂಬಪ್ಪೆ ಪ್ರಸ್ತುತ ವಿಶ್ವದ ನಂಬರ್ ೧ ಆಟಗಾರ. ಫಾರ್ವರ್ಡ್ ಪೊಸಿಷನ್‌ನಲ್ಲಿ ಆಡುವ ಕೈಲಿಯನ್ ಎಂಬಪ್ಪೆ ಪಂದ್ಯದ ಫಿನಿಶರ್ ಆಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಫ್ರಾನ್ಸ್ ದೇಶಕ್ಕಾಗಿ ಫಾರ್ವರ್ಡ್ ಪೊಸಿಷನ್‌ನಲ್ಲೇ ಆಡುವ ಮತ್ತೋರ್ವ ಆಟಗಾರ ಕರೀಮ್ ಬೆಂಜೆಮಾ ವಿಶ್ವದ ನಂಬರ್ ೨ ಶ್ರೇಯಾಂಕಿತ ಆಟಗಾರ.

ಇನ್ನೂ ಬೆಲ್ಜಿಯಂ ದೇಶದ ಆಟಗಾರರಾದ ಕೆವಿನ್ ಡಿ ಬ್ರೂಯ್ನೆ ಮತ್ತು ಥಿಬೌಟ್ ಕೋರ್ಟೊಯಿಸ್, ಪೋಲೆಂಡ್‌ನ ರಾಬರ್ಟ್ ಲೆವಾಂಡೋಸ್ಕಿ, ಕ್ರೊವೇಶಿಯಾದ ಲ್ಯೂಕ್ ಮೊಡ್ರಿಕ್, ಬ್ರೆಜಿಲ್‌ನ ವಿನಿಸಿಯಸ್ ಜೂನಿಯರ್, ಸೆನೆಗಲ್‌ನ ಸೆಡಿಯೋ ಮಾನೆ, ಇಂಗ್ಲೆಂಡ್‌ನ ಹ್ಯಾರಿ ಕೇನ್ ಸೇರಿದಂತೆ ಹಲವು ಆಟಗಾರರು ಯೂರೋಪಿನ ಶ್ರೀಮಂತ ಫುಟ್‌ಬಾಲ್ ಲೀಗ್‌ಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಈ ಆಟಗಾರರ ಪ್ರದರ್ಶನದ ಮೇಲೂ ಫುಟ್‌ಬಾಲ್ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳಿವೆ.

ಫಿಫಾ ಟೂರ್ನಿ ವೀಕ್ಷಣೆ ಹೇಗೆ?

ಫಿಫಾ ವಿಶ್ವಕಪ್ 2022 ಪಂದ್ಯಗಳನ್ನು ಭಾರತದ ಹೊಸ ಪ್ರೀಮಿಯರ್ ಸ್ಪೋರ್ಟ್ಸ್ ನೆಟ್ವರ್ಕ್ ವಯಾಕಾಮ್18ನ ಸ್ಪೋರ್ಟ್ಸ್18 ಮತ್ತು ಸ್ಪೋರ್ಟ್ಸ್18 ಹೆಚ್‌ಡಿ ಟಿವಿ ಚಾನೆಲ್‌ಗಳಲ್ಲಿ ವೀಕ್ಷಿಸಬಹುದಾಗಿದೆ. ಭಾರತದಲ್ಲಿ ಈ ಚಾನೆಲ್‌ಗಳನ್ನು ಹೊರತುಪಡಿಸಿ ಜಿಯೋ ಸಿನಿಮಾ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತ ಲೈವ್ ಸ್ಟ್ರೀಮಿಂಗ್ ಲಭ್ಯವಿದೆ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...