Homeಸಿನಿಮಾಕ್ರೀಡೆಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳ ನಡುವೆಯೇ ಏರುತ್ತಿರುವ ಫಿಫಾ ಫೀವರ್

ಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳ ನಡುವೆಯೇ ಏರುತ್ತಿರುವ ಫಿಫಾ ಫೀವರ್

- Advertisement -
- Advertisement -

ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡಾ ಹಬ್ಬವಾದ ಫಿಫಾ 2022 ಫುಟ್‌ಬಾಲ್ ವಿಶ್ವಕಪ್‌ಗೆ ಕತಾರ್‌ನಲ್ಲಿ ವಿದ್ಯುಕ್ತ ಚಾಲನೆ ದೊರೆತಿದೆ. ವಿಶ್ವದ ಬಲಿಷ್ಠ 32 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದರೆ, ತಮ್ಮ ನೆಚ್ಚಿನ ತಂಡದ ಗೆಲುವಿಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಕ್ರಿಕೆಟನ್ನು ಉಸಿರಾಡುವ ಭಾರತದಲ್ಲೂ ಫುಟ್‌ಬಾಲ್ ಫೀವರ್ ದಿನೇದಿನೇ ಏರುತ್ತಲೇ ಇದೆ. ಕೋಲ್ಕತ್ತಾದ ಬೀದಿಗಳಲ್ಲಿ ಫುಟ್‌ಬಾಲ್ ದಂತಕಥೆಗಳಾದ ಲಿಯೋನಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೋ, ನೇಯ್ಮರ್ ಚಿತ್ರಗಳು ರಾರಾಜಿಸುತ್ತಿದ್ದರೆ, ಕೇರಳದಲ್ಲಂತೂ ರಸ್ತೆಗಳ ಇಕ್ಕೆಲಗಳಲ್ಲಿ ಜನಪ್ರಿಯ ಫುಟ್‌ಬಾಲ್ ಆಟಗಾರರ ಕಟೌಟ್‌ಗಳು, ನೆಚ್ಚಿನ ತಂಡಗಳ ಬಾವುಟಗಳು ಕ್ರಿಕೆಟನ್ನೂ ನಾಚಿಸುತ್ತಿವೆ. ಏಕೆಂದರೆ ಫುಟ್‌ಬಾಲ್ ಎಂಬ ಆಟದ ಗಮ್ಮತ್ತೆ ಅಂಥದ್ದು.

ಜಗತ್ತಿನ ಫುಟ್‌ಬಾಲ್ ಕ್ರೀಡೆಯ ಅತ್ಯುನ್ನತ ಪ್ರಶಸ್ತಿ ಫಿಫಾ. ಇದನ್ನು ಸಾಮಾನ್ಯವಾಗಿ ವಿಶ್ವಕಪ್ ಫುಟ್‌ಬಾಲ್ ಎಂದೇ ಕರೆಯುವುದು ವಾಡಿಕೆ. ಈ ಪಂದ್ಯಾವಳಿಯು ಫಿಫಾ (ಅಂತಾರಾಷ್ಟ್ರೀಯ ಫುಟ್‌ಬಾಲ್ ಫೆಡರೇಷನ್) ಸದಸ್ಯ ರಾಷ್ಟ್ರಗಳ ಪುರುಷರ ತಂಡಗಳ ನಡುವೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. 1930ರಲ್ಲಿ ಮೊಟ್ಟಮೊದಲ ಫಿಫಾ ವಿಶ್ವಕಪ್ ಟೂರ್ನಿಯನ್ನು ಆಯೋಜಿಸಲಾಗಿತ್ತು. 1940 ಮತ್ತು 1944ರಲ್ಲಿ ಎರಡನೇ ಮಹಾಯುದ್ಧದ ಕಾರಣಕ್ಕೆ ಈ ಟೂರ್ನಿಯನ್ನು ಆಯೋಜಿಸಿರಲಿಲ್ಲ. ಉಳಿದಂತೆ ವರ್ಷದಿಂದ ವರ್ಷಕ್ಕೆ ಈ ಕ್ರೀಡಾಕೂಟದ ಜನಪ್ರಿಯತೆ ಮತ್ತಷ್ಟು ಹೆಚ್ಚುತ್ತಲೇ ಇದೆ.

ಇದೇ ಕಾರಣಕ್ಕೆ ವಿಶ್ವದಲ್ಲೇ ಅತಿ ಹೆಚ್ಚಿನ ಜನ ದೂರದರ್ಶನದ ಮೂಲಕ ವೀಕ್ಷಿಸುವ ಕ್ರೀಡಾಕೂಟ ಎಂಬ ಶ್ರೇಯಕ್ಕೆ ಫಿಫಾ ಪಾತ್ರವಾಗಿದೆ. 2018 ವಿಶ್ವಕಪ್ ರಷ್ಯಾದಲ್ಲಿ ನಡೆದಿತ್ತು. ಇಡೀ ಕೂಟದ ಉದ್ದಕ್ಕೂ 64 ಪಂದ್ಯಗಳು ನಡೆದಿದ್ದವು. ಈ ಪಂದ್ಯಗಳನ್ನು ಟಿವಿಯಲ್ಲಿ ದಾಖಲೆಯ 191 ಮಿಲಿಯನ್ ಜನ ವೀಕ್ಷಿಸಿದ್ದರು ಎಂದರೆ ಫುಟ್‌ಬಾಲ್‌ನ ಜನಪ್ರಿಯತೆ ಎಂಥದ್ದು ಎಂಬುದು ಅರ್ಥವಾಗುತ್ತದೆ. ಪ್ರಸ್ತುತ ವರ್ಷ ಈ ದಾಖಲೆ ಮತ್ತಷ್ಟು ಸುಧಾರಿಸಲಿದೆ ಎಂದು ಅಂದಾಜಿಸಲಾಗಿದೆ. ಈ ವರ್ಷದ ಟೂರ್ನಿಯಲ್ಲಿ ವಿಶ್ವಕಪ್ ಗೆದ್ದ ತಂಡಕ್ಕೆ 42 ಮಿಲಿಯನ್ ಡಾಲರ್ ದೊರೆತರೆ, ಫೈನಲ್‌ನಲ್ಲಿ ಸೋತ ತಂಡಕ್ಕೆ 30 ಮಿಲಿಯನ್ ಡಾಲರ್ ಮತ್ತು ಪ್ರಶಸ್ತಿ ಲಭಿಸಲಿದೆ. ಇನ್ನೂ ಈ ಟೂರ್ನಿಯಲ್ಲಿ ಫಿಫಾ 5.31 ಟ್ರಿಲಿಯನ್ ಲಾಭ ಗಳಿಸಿದರೆ, ಆತಿಥೇಯ ಕತಾರ್ 1.27 ಲಕ್ಷ ಕೋಟಿ ಲಾಭ ನೋಡಲಿದೆ.

ಫುಟ್‌ಬಾಲ್ ಇತಿಹಾಸ ಏನು?

ಚೆಂಡನ್ನು ಕಾಲಿನಿಂದ ಒದೆಯುವ ಮೂಲಕ ಗೋಲು ಗಳಿಸುವ ಫುಟ್‌ಬಾಲ್ ಆಟಕ್ಕೆ ಯೂರೋಪ್‌ನಷ್ಟೇ ಪ್ರಾಚೀನ ಇತಿಹಾಸವಿದೆ. ಯೂರೋಪ್ ದೇಶಗಳ ಪಾಲಿಗೆ ಫುಟ್‌ಬಾಲ್ ಎಂಬುದು ಅಲ್ಲಿನ ಪರಂಪರೆ ಮತ್ತು ಪ್ರಾಚೀನ ಸಂಪ್ರದಾಯಗಳ ಭಾಗ. ಹಿಂದಿನಿಂದಲೂ ಅಲ್ಲಿನ ರೈತರು ಕುಟುಂಬಸಮೇತರಾಗಿ ಈ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಅಲ್ಲಿನ ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಲಾಗಿದೆ. 18-19ನೇ ಶತಮಾನಗಳಲ್ಲಿ ಯೂರೋಪಿನ ಇಂಗ್ಲಿಷ್ ಪಬ್ಲಿಕ್ ಶಾಲೆಗಳಲ್ಲಿ ಹಲವಾರು ಬದಲಾವಣೆಗಳೊಂದಿಗೆ ಈ ಆಟವನ್ನು ಸ್ಪರ್ಧಾತ್ಮಕಗೊಳಿಸಲಾಯಿತು. ತದನಂತರದ ಕಾಲದಲ್ಲಿ ಬ್ರಿಟಿಷರು ಈ ಆಟವನ್ನು ತಮ್ಮ ವಸಾಹತು ರಾಷ್ಟ್ರಗಳಿಗೂ ಪರಿಚಯಿಸಿದರು. ಈ ಮೂಲಕ ಫುಟ್‌ಬಾಲ್ ಮತ್ತಷ್ಟು ಜನಪ್ರಿಯವಾಯಿತು. ಇಂದು ವಿಶ್ವದಲ್ಲೇ ಅತಿಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ಕ್ರೀಡೆಗಳ ಪಟ್ಟಿಯಲ್ಲಿ ಫುಟ್‌ಬಾಲ್‌ಗೆ ಅಗ್ರಸ್ಥಾನ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ: ಫಿಫಾ ಪುಟ್ಬಾಲ್: ಏಕೈಕ ಗೋಲಿನಿಂದ ಗೆದ್ದ ಸ್ವಿಜರ್ಲ್ಯಾಂಡ್ – ಗೋಲು ಬಾರಿಸಿದ ಬ್ರೀಲ್ ಎಂಬೋಲೊ ಸಂಭ್ರಮಿಸಲಿಲ್ಲವೇಕೆ?

ಫಿಫಾ ವಿಶ್ವಕಪ್

ಕ್ರೀಡಾಲೋಕದಲ್ಲಿ ಒಲಿಂಪಿಕ್ಸ್‌ಗೆ ತನ್ನದೇ ಆದ ಸ್ಥಾನವಿದೆ. ಆದರೆ 1904ರಲ್ಲಿ ಸ್ಥಾಪಿತವಾದ ಫಿಫಾ ಒಲಿಂಪಿಕ್ಸ್‌ನ ಹೊರಗೆ ಒಂದು ಜಾಗತಿಕ ಮಟ್ಟದ ಫುಟ್‌ಬಾಲ್ ಕ್ರೀಡಾಕೂಟವನ್ನು ಆಯೋಜಿಸಲು ಕ್ರಮಕೈಗೊಂಡಿತ್ತು. ಆದರೆ ಆರಂಭದ ಯತ್ನಗಳು ಸಫಲವಾಗಲಿಲ್ಲ. ಬ್ರಿಟಿಷ್ ಫುಟ್‌ಬಾಲ್ ಅಸೋಸಿಯೇಷನ್ ಮತ್ತು ಫಿಫಾದ ನಡುವೆ ಸಾಕಷ್ಟು ತಿಕ್ಕಾಟ ನಡೆದು ಕೊನೆಗೆ ಫಿಫಾ ಒಲಿಂಪಿಕ್ ಫುಟ್‌ಬಾಲ್‌ಗೆ ಮಾನ್ಯತೆ ನೀಡಿತು, ಅಲ್ಲದೆ 1920ರ ಒಲಿಂಪಿಕ್ಸ್‌ನಲ್ಲಿ ಫುಟ್‌ಬಾಲ್ ಪಂದ್ಯಾವಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿತು. ಹೀಗೆ ನಿಜವಾದ ಅರ್ಥದಲ್ಲಿ ಅಂತಾರಾಷ್ಟ್ರೀಯ ಫುಟ್‌ಬಾಲ್ ಪಂದ್ಯಾವಳಿಯು ಮೊದಲ ಬಾರಿಗೆ 1920ರಲ್ಲಿ ಒಲಿಂಪಿಕ್ಸ್‌ನಲ್ಲಿ ಜರುಗಿತು.

ತರುವಾಯ ಫಿಫಾ ತನ್ನದೇ ಆದ ವಿಶ್ವ ಫುಟ್‌ಬಾಲ್ ಚಾಂಪಿಯನ್‌ಶಿಪ್ ನಡೆಸುವ ತನ್ನ ಹಳೆಯ ಯೋಜನೆಗೆ ಮತ್ತೆ ಜೀವ ತುಂಬಿ 1930ರಲ್ಲಿ ಉರುಗ್ವೆಯಲ್ಲಿ ಪ್ರಪ್ರಥಮ ಫುಟ್‌ಬಾಲ್ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಲು ಮುಂದಾಯಿತು. 1924 ಮತ್ತು 1928ರ ಒಲಿಂಪಿಕ್ಸ್‌ನಲ್ಲಿ ಉರುಗ್ವೆ ತಂಡವು ಫುಟ್‌ಬಾಲ್ ಸ್ವರ್ಣಪದಕ ಪಡೆದಿತ್ತು. ಅಲ್ಲದೇ ಉರುಗ್ವೆಯು 1930ರಲ್ಲಿ ತನ್ನ ಸ್ವಾತಂತ್ರ್ಯೋತ್ಸವದ ಶತಮಾನವನ್ನು ಆಚರಿಸಲು ಮುಂದಾಗಿತ್ತು. ಹೀಗಾಗಿ ಸಹಜವಾಗಿಯೇ ಮೊದಲ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯನ್ನು ಆಯೋಜಿಸುವ ಅವಕಾಶವನ್ನು ಯೂರೋಪ್ ದೇಶಗಳ ಕಡು ವಿರೋಧದ ನಡುವೆಯೂ ಉರುಗ್ವೆ ಪಡೆದುಕೊಂಡಿತು. ಈ ಪಂದ್ಯಾವಳಿಯ ಕನಸನ್ನು ನನಸಾಗಿಸುವಲ್ಲಿ ಫಿಫಾದ ಅಂದಿನ ಅಧ್ಯಕ್ಷ ಜೂಲ್ಸ್ ರಿಮೆ ಪ್ರಧಾನ ಪಾತ್ರ ವಹಿಸಿದ್ದರು. ನಂತರ ನಡೆದದ್ದೆಲ್ಲವೂ ಇತಿಹಾಸ.

ವಿವಾದದಲ್ಲಿ ಫಿಫಾ ಮತ್ತು ಕತಾರ್

ಫಿಫಾ 2014ರ ವಿಶ್ವಕಪ್ ಟೂರ್ನಿ ನಡೆಯುತ್ತಿರುವಾಗಲೇ 2018ರ ವಿಶ್ವಕಪ್ ಆತಿಥ್ಯವನ್ನು ರಷ್ಯಾಗೆ ಹಾಗೂ 2022ರ ವಿಶ್ವಕಪ್ ಆತಿಥ್ಯವನ್ನು ಕತಾರ್ ದೇಶಕ್ಕೆ ನೀಡಲಾಗಿತ್ತು. ಕತಾರ್ ಹಿಂಬಾಗಿಲಿನ ಮೂಲಕ ತನ್ನ ಹಣ ಬಲದ ಸಹಾಯದಿಂದಲೇ ಈ ಆತಿಥ್ಯವನ್ನು ಗಳಿಸಿದೆ ಎಂಬ ಆರೋಪ ಅಂದಿನಿಂದಲೂ ಚಾಲ್ತಿಯಲ್ಲಿದೆ. ಫಿಫಾ ವಿಶ್ವಕಪ್ ಆಯೋಜಿಸಿದ ಮೊದಲ ಅರಬ್ ರಾಷ್ಟ್ರ ಎಂಬ ಶ್ರೇಯಕ್ಕೆ ಕತಾರ್ ಪಾತ್ರವಾಗಿರುವುದೇನೋ ನಿಜ. ಆದರೆ, ವಿವಾದಗಳು ಮಾತ್ರ ಸದ್ಯಕ್ಕಂತೂ ಕತಾರ್ ಮತ್ತು ಫಿಫಾವನ್ನು ಬೆಂಬಿಡದೆ ಕಾಡುತ್ತಿದೆ.

ಕತಾರ್ ದೇಶವು 2013ರಲ್ಲಿ ದೋಹಾ ವಿಶ್ವಕಪ್ ಆಯೋಜಿಸುವ ಬಿಡ್‌ಅನ್ನು ಗೆದ್ದಾಗಲೇ, ಹಲವು ಮಾನವ ಹಕ್ಕುಗಳ ಸಂಘಟನೆಗಳು ಇದನ್ನು ವಿರೋಧಿಸಿದ್ದವು. ಕ್ರೀಡೆ ಎಂಬುದು ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯ ಸಂಕೇತ. ಆದರೆ, ಮಾನವ ಹಕ್ಕುಗಳ ವಿಚಾರದಲ್ಲಿ ಕಳಪೆ ಸಾಧನೆ ಹೊಂದಿರುವ ಕತಾರ್‌ಗೆ ದೋಹಾ ವಿಶ್ವಕಪ್ ಆಯೋಜನೆಯ ಅವಕಾಶ ನೀಡಿದ್ದು ಸರಿಯಲ್ಲ ಎಂದು ವಾದಿಸಿದ್ದವು. ಅದರಲ್ಲೂ ವಿಶೇಷವಾಗಿ LGBT ಹಕ್ಕುಗಳು, ನಾಗರಿಕ ಸ್ವಾತಂತ್ರ್ಯ ಮತ್ತು ವಲಸೆ ಕಾರ್ಮಿಕರ ಚಿಕಿತ್ಸೆ ವಿಚಾರದಲ್ಲಿ ಕತಾರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಕಳಪೆ ದಾಖಲೆ ಹೊಂದಿದೆ. ಹೀಗಾಗಿ ಕ್ರೀಡಾಕೂಟದ ಆಯೋಜನೆ ಅವಕಾಶವನ್ನು ಕತಾರ್‌ಗೆ ನೀಡಬಾರದು ಎಂಬ ವಾದ ಮುನ್ನೆಲೆಗೆ ಬಂದಿತ್ತು. ಆದರೆ, ಈ ವಿವಾದ ತಣ್ಣಗಾಗುವ ಮೊದಲೆ ಫಿಫಾ ಆಯೋಜಿಸುವ ಅವಕಾಶವೂ ಕತಾರ್ ಪಾಲಾಗಿದ್ದು ಕ್ರೀಡಾ ಅಭಿಮಾನಿಗಳನ್ನು ಕೆರಳಿಸಿತ್ತು.

ಇದನ್ನೂ ಓದಿ: ಫಿಫಾ ವಿಶ್ವಕಪ್‌ನಲ್ಲಿ ಏಷ್ಯಾ ದೇಶಗಳ ಗೆಲುವು: ಫೈನಲ್‌ವರೆಗೆ ಸಾಗಬೇಕಾದ ಹಾದಿ ಹೀಗಿದೆ

ಹೀಗಾಗಿ ಫಿಫಾ ಮತ್ತು ಫುಟ್‌ಬಾಲ್ ಅಭಿಮಾನಿಗಳು ಕತಾರ್ ವಿಶ್ವಕಪ್ ಆಯೋಜಿಸುವ ಅವಕಾಶ ನೀಡಿದ್ದಕ್ಕೆ ಸಾಕಷ್ಟು ಆಕ್ರೋಶ ಹೊರಹಾಕಿದ್ದರು. ಅಲ್ಲದೆ, ಕಳೆದ ನಾಲ್ಕು ವರ್ಷಗಳಿಂದ ಎಲ್ಲೇ ಫುಟ್‌ಬಾಲ್ ಪಂದ್ಯಾವಳಿ ನಡೆದರೂ ಅಭಿಮಾನಿಗಳು ಬಾಯ್ಕಾಟ್‌ಕತಾರ್2022 ಎಂಬ ಬ್ಯಾನರ್‌ಗಳನ್ನು ಹಿಡಿದು ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದರು. ಆದರೂ, ಫಿಫಾ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.

ಪರಿಣಾಮ ಕತಾರ್‌ನ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸಿ ಆಸ್ಟ್ರೇಲಿಯಾ ತಂಡವು ಈಗಾಗಲೇ ವೀಡಿಯೊ ಒಂದನ್ನು ಬಿಡುಗಡೆ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದೆ. ಡೆನ್ಮಾರ್ಕ್ ತಂಡ ಇಡೀ ಟೂರ್ನಿಯ ಉದ್ದಕ್ಕೂ ಕಪ್ಪು ಬಣ್ಣದ ಪಟ್ಟಿ ಧರಿಸಿ ಆಡಲು ನಿರ್ಧರಿಸಿದೆ. ಇಂಗ್ಲೆಂಡ್‌ನ ಸ್ಟಾರ್ ಆಟಗಾರ ಹ್ಯಾರಿ ಕೇನ್ ಮತ್ತು ಯುರೋಪಿಯನ್ ತಂಡಗಳ ನಾಯಕರು ’ಒನ್‌ಲವ್’ ಆರ್ಮ್‌ಬ್ಯಾಂಡ್‌ಗಳನ್ನು ಧರಿಸಿ ಆಡುವುದಾಗಿ ತಿಳಿಸಿದ್ದಾರೆ. ಕತಾರ್‌ನಲ್ಲಿ ಮಾನವ ಹಕ್ಕುಗಳನ್ನು ದಮನಿಸಲಾಗುತ್ತಿದೆ ಎಂಬ ಕಾರಣಕ್ಕೆ ಪಾಪ್ ಸಂಗೀತ ಲೋಕದ ಖ್ಯಾತ ತಾರೆ ದುವಾ ಲಿಪಾ ಫಿಫಾ ಉದ್ಘಾಟನಾ ಸಮಾರಂಭದಲ್ಲಿ ತಾನು ಪ್ರದರ್ಶನ ನೀಡುವುದಿಲ್ಲ ಎಂದು ಫಿಫಾ ಅವಕಾಶವನ್ನು ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಶ್ವಕಪ್ ಗೆದ್ದ ತಂಡಗಳಿವು!

1930 ರಿಂದ 2018ರ ನಡುವೆ ಒಟ್ಟು 21 ಬಾರಿ ವಿಶ್ವಕಪ್ ಫುಟ್‌ಬಾಲ್ ಟೂರ್ನಿ ಜರುಗಿದೆ. ಈ ಪೈಕಿ ಖ್ಯಾತ ಬ್ರೆಜಿಲ್ ತಂಡ 5 ವಿಶ್ವಕಪ್‌ನಲ್ಲಿ ಗೆಲ್ಲುವ ಮೂಲಕ ಫುಟ್‌ಬಾಲ್ ಲೋಕದಲ್ಲಿ ಪಾರಮ್ಯ ಸಾಧಿಸಿದೆ. ಇದು ತಂಡವೊಂದರ ಅತಿಹೆಚ್ಚು ಗೆಲುವು. ಇನ್ನೂ ಜರ್ಮನಿ ಮತ್ತು ಇಟಲಿ ತಲಾ 4 ಬಾರಿ ಹಾಗೂ ದಕ್ಷಿಣ ಅಮೆರಿಕದ ಪುಟ್ಟ ರಾಷ್ಟ್ರ ಉರುಗ್ವೆ, ಅರ್ಜೆಂಟೀನಾ ಮತ್ತು ಫ್ರಾನ್ಸ್ ಎರಡು ಬಾರಿ ವಿಶ್ವಕಪ್‌ಅನ್ನು ತನ್ನ ಮುಡಿಗೇರಿಸಿಕೊಂಡಿವೆ. ಇಂಗ್ಲೆಂಡ್ ಮತ್ತು ಸ್ಪೇನ್ ದೇಶಗಳು ತಲಾ ಒಂದು ಬಾರಿ ವಿಶ್ವಕಪ್ ವಿಜಯಿಗಳಾಗಿವೆ.

ಫುಟ್‌ಬಾಲ್ ಅಂದರೆ ಮೆಸ್ಸಿ, ರೊನಾಲ್ಡೋ ಅಷ್ಟೇ ಅಲ್ಲ

ಭಾರತದ ಬಹುಸಂಖ್ಯಾತರ ಮಟ್ಟಿಗೆ ಫುಟ್‌ಬಾಲ್ ಎಂದ ತಕ್ಷಣ ತಟ್ಟನೆ ನೆನಪಾಗುವುದು ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ, ಪೋರ್ಚುಗೀಸ್‌ನ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಬ್ರೆಜಿಲ್ ದೇಶದ ನೇಯ್ಮರ್ ಹೆಸರು ಮಾತ್ರ. ಆದರೆ, ಜಾಗತಿಕ ಫುಟ್‌ಬಾಲ್‌ನಲ್ಲಿ ಪ್ರಸ್ತುತ ಇವರಿಗಿಂತ ಸದ್ದು ಮಾಡುತ್ತಿರುವ, ತಂಡದ ಪಾಲಿಗೆ ಅತಿಮುಖ್ಯವಾಗಿರುವ ಹಾಗೂ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಹಲವಾರು ಆಟಗಾರರಿದ್ದಾರೆ.

ಫ್ರಾನ್ಸ್ ದೇಶಕ್ಕಾಗಿ ಆಡುತ್ತಿರುವ ಕೈಲಿಯನ್ ಎಂಬಪ್ಪೆ ಪ್ರಸ್ತುತ ವಿಶ್ವದ ನಂಬರ್ ೧ ಆಟಗಾರ. ಫಾರ್ವರ್ಡ್ ಪೊಸಿಷನ್‌ನಲ್ಲಿ ಆಡುವ ಕೈಲಿಯನ್ ಎಂಬಪ್ಪೆ ಪಂದ್ಯದ ಫಿನಿಶರ್ ಆಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಫ್ರಾನ್ಸ್ ದೇಶಕ್ಕಾಗಿ ಫಾರ್ವರ್ಡ್ ಪೊಸಿಷನ್‌ನಲ್ಲೇ ಆಡುವ ಮತ್ತೋರ್ವ ಆಟಗಾರ ಕರೀಮ್ ಬೆಂಜೆಮಾ ವಿಶ್ವದ ನಂಬರ್ ೨ ಶ್ರೇಯಾಂಕಿತ ಆಟಗಾರ.

ಇನ್ನೂ ಬೆಲ್ಜಿಯಂ ದೇಶದ ಆಟಗಾರರಾದ ಕೆವಿನ್ ಡಿ ಬ್ರೂಯ್ನೆ ಮತ್ತು ಥಿಬೌಟ್ ಕೋರ್ಟೊಯಿಸ್, ಪೋಲೆಂಡ್‌ನ ರಾಬರ್ಟ್ ಲೆವಾಂಡೋಸ್ಕಿ, ಕ್ರೊವೇಶಿಯಾದ ಲ್ಯೂಕ್ ಮೊಡ್ರಿಕ್, ಬ್ರೆಜಿಲ್‌ನ ವಿನಿಸಿಯಸ್ ಜೂನಿಯರ್, ಸೆನೆಗಲ್‌ನ ಸೆಡಿಯೋ ಮಾನೆ, ಇಂಗ್ಲೆಂಡ್‌ನ ಹ್ಯಾರಿ ಕೇನ್ ಸೇರಿದಂತೆ ಹಲವು ಆಟಗಾರರು ಯೂರೋಪಿನ ಶ್ರೀಮಂತ ಫುಟ್‌ಬಾಲ್ ಲೀಗ್‌ಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಈ ಆಟಗಾರರ ಪ್ರದರ್ಶನದ ಮೇಲೂ ಫುಟ್‌ಬಾಲ್ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳಿವೆ.

ಫಿಫಾ ಟೂರ್ನಿ ವೀಕ್ಷಣೆ ಹೇಗೆ?

ಫಿಫಾ ವಿಶ್ವಕಪ್ 2022 ಪಂದ್ಯಗಳನ್ನು ಭಾರತದ ಹೊಸ ಪ್ರೀಮಿಯರ್ ಸ್ಪೋರ್ಟ್ಸ್ ನೆಟ್ವರ್ಕ್ ವಯಾಕಾಮ್18ನ ಸ್ಪೋರ್ಟ್ಸ್18 ಮತ್ತು ಸ್ಪೋರ್ಟ್ಸ್18 ಹೆಚ್‌ಡಿ ಟಿವಿ ಚಾನೆಲ್‌ಗಳಲ್ಲಿ ವೀಕ್ಷಿಸಬಹುದಾಗಿದೆ. ಭಾರತದಲ್ಲಿ ಈ ಚಾನೆಲ್‌ಗಳನ್ನು ಹೊರತುಪಡಿಸಿ ಜಿಯೋ ಸಿನಿಮಾ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತ ಲೈವ್ ಸ್ಟ್ರೀಮಿಂಗ್ ಲಭ್ಯವಿದೆ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...