Homeಮುಖಪುಟ'ಇಬ್ರಾಹಿಂ ಏಕೆ ಸಿಎಂ ಆಗಬಾರದು?, ಅವರೇನು ಅಸ್ಪೃಶ್ಯರಲ್ಲ': ಎಚ್.ಡಿ ಕುಮಾರಸ್ವಾಮಿ ಅಸೂಕ್ಷ್ಮ ಹೇಳಿಕೆ

‘ಇಬ್ರಾಹಿಂ ಏಕೆ ಸಿಎಂ ಆಗಬಾರದು?, ಅವರೇನು ಅಸ್ಪೃಶ್ಯರಲ್ಲ’: ಎಚ್.ಡಿ ಕುಮಾರಸ್ವಾಮಿ ಅಸೂಕ್ಷ್ಮ ಹೇಳಿಕೆ

- Advertisement -
- Advertisement -

ಜೆಡಿಎಸ್ ಪಕ್ಷವು ಮುಸ್ಲಿಂ ವ್ಯಕ್ತಿಯನ್ನು ಸಿಎಂ ಮಾಡುತ್ತದೆ ಎಂಬ ವಿಚಾರದ ಕುರಿತು ಮಾಧ್ಯಮಗಳ ಜೊತೆ ಮಾತನಾಡುವಾಗ ಅಸ್ಪೃಶ್ಯತೆಯನ್ನು ಸಮರ್ಥಿಸುವ ರೀತಿಯಲ್ಲಿ ‘ಇಬ್ರಾಹಿಂ ಏಕೆ ಸಿಎಂ ಆಗಬಾರದು, ಅವರೇನು ಅಸ್ಪೃಶ್ಯರಲ್ಲ’ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅಸೂಕ್ಷ್ಮವಾಗಿ ಮಾತನಾಡಿರುವುದು ವರದಿಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆಯಲ್ಲಿ ನಿರತರಾಗಿರುವ ಕುಮಾರಸ್ವಾಮಿಯವರು ಖಾಸಗಿ ಇಂಗ್ಲಿಷ್ ವಾಹಿನಿಯೊಂದಕ್ಕೆ ನೀಡಿದ ಚುಟುಕು ಸಂದರ್ಶನದಲ್ಲಿ ಈ ಮಾತುಗಳನ್ನು ಆಡಿ ವಿವಾದಕ್ಕೆ ಗುರಿಯಾಗಿದ್ದಾರೆ.

ಕಳೆದ ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಂ ವ್ಯಕ್ತಿಯನ್ನು ಸಿಎಂ ಮಾಡುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳೀಕೆ ನೀಡಿದ್ದರು. ಈ ಕುರಿತು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ ಕುಮಾರಸ್ವಾಮಿಯವರು “ನಾವು ಮುಸ್ಲಿಂ ಮತಗಳನ್ನು ಪಡೆಯುವುದಕ್ಕಾಗಿ ಮಾತನಾಡುತ್ತಿಲ್ಲ. ಇತ್ತೀಚೆಗೆ ನಮ್ಮ ಪಕ್ಷದ ಅಧ್ಯಕ್ಷರಾದ ಸಿ.ಎಂ ಇಬ್ರಾಹಿಂರವರು ಒಂದೆರೆಡು ವರ್ಷಗಳಲ್ಲಿ ಕುಮಾರಸ್ವಾಮಿಯವರು ಕೇಂದ್ರಕ್ಕೆ ತೆರಳಿದರೆ ನಾನು ಸಿಎಂ ಆಗುತ್ತೇನೆ ಎಂದು ಹೇಳಿದ್ದಾರೆ. ಆದರೆ ಪ್ರಸ್ತುತ 5 ವರ್ಷ ನಾನು ನಮ್ಮ ಐದು ಅಂಶಗಳ ಕುರಿತು ಗಮನ ವಹಿಸುತ್ತೇವೆ. ಆದರೆ ಎರಡೂ ಮೂರು ವರ್ಷದಲ್ಲಿ ದೆಹಲಿಯ ನಮ್ಮ ಸ್ನೇಹಿತರು ಉನ್ನತ ಸ್ಥಾನಮಾನ ಕೊಡುವುದಾಗಿ ಕೇಂದ್ರಕ್ಕೆ ಕರೆದರೆ, ಅಂತ ಸಂದರ್ಭ ಬಂದರೆ ಹೋಗುತ್ತೇನೆ. ಅಂತ ಸಂದರ್ಭದಲ್ಲಿ ಇಬ್ರಾಹಿಂರವರು ಏಕೆ ಸಿಎಂ ಆಗಬಾರದು? ಅವರೇನು ಅಸ್ಪೃಶ್ಯರಲ್ಲ (He is not an Untouchable Man)” ಎಂದು ಹೇಳಿದ್ದಾರೆ.

ಕುಮಾರಸ್ವಾಮಿಯವರು ಒಂದು ಪಕ್ಷದ ಶಾಸಕಾಂಗ ಪಕ್ಷದ ಮುಖಂಡರಾಗಿ, ಮಾಜಿ ಮುಖ್ಯ ಮಂತ್ರಿಗಳಾಗಿ ಆ ಪಕ್ಷದ ಅಧ್ಯಕ್ಷರಿಗೆ ಸಿಎಂ ಸ್ಥಾನ ನೀಡುವ ಕುರಿತು ಮಾತನಾಡುವುದು ತಪ್ಪಲ್ಲ. ಆದರೆ ಮಾತಿನ ಮಧ್ಯೆ ಅವರೇನು ಅಸ್ಪೃಶ್ಯರಲ್ಲ ಎಂದು ಹೇಳುವ ಮೂಲಕ ಅಸ್ಪೃಶ್ಯ ಸಮುದಾಯಗಳನ್ನು ಅವಮಾನಿಸಿ, ಅಸ್ಪೃಶ್ಯರಿಗೆ ಅಧಿಕಾರ ನೀಡುವ ಅಗತ್ಯವಿಲ್ಲ ಎನ್ನುವ ಧಾಟಿಯಲ್ಲಿ ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿದೆ.

ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ಸೂಕ್ಷ್ಮತೆಯನ್ನು ಹೊಂದಿರಬೇಕಾಗುತ್ತದೆ. ಅಸ್ಪೃಶ್ಯತೆ ಎಂಬುದು ಭಾರತಕ್ಕೆ ಅಂಟಿದ ಶಾಪ ಹಲವು ಮಹನೀಯರು ಅಭಿಪ್ರಾಯಪಟ್ಟಿದ್ದಾರೆ. ಹೀಗಿರುವಾಗ ಅಸ್ಪೃಶ್ಯತೆಯನ್ನು ತೊಡೆದುಹಾಕಬೇಕಾದರೆ ಅವರಿಗೆ ಅಧಿಕಾರ-ಸಮಾನತೆ ನೀಡುವ ಮೂಲಕ ಮುಖ್ಯವಾಹಿನಿ ಸಮಾಜದ ಭಾಗವಾಗುವಂತೆ ಮಾಡಬೇಕಿದೆ. ಅದನ್ನೇ ನಮ್ಮ ಸಂವಿಧಾನ ಹೇಳುತ್ತದೆ. ಒಂದು ಕಡೆ ದಲಿತರನ್ನು ಸಿಎಂ, ಡಿಸಿಎಂ ಮಾಡುತ್ತೇವೆ ಎನ್ನುವವರು ಇನ್ನೊಂದು ಕಡೆ ಅವರೇನು ಅಸ್ಪೃಶ್ಯರಲ್ಲ ಎನ್ನುವುದು ವಿರೋಧಭಾಸ ಮಾತ್ರವಲ್ಲ ಅವರ ನೈಜ ಕಾಳಜಿಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ಈ ಹೇಳಿಕೆಯನ್ನು ಕುಮಾರಸ್ವಾಮಿ ಪರಿಶೀಲಿಸಿ ವಾಪಸ್ ಪಡೆದು ಕ್ಷಮೆ ಕೇಳಬೇಕು ಮತ್ತು ಉಳಿದವರಿಗೆ ಇದು ಪಾಠವಾಗಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮತದಾರರ ಮಾಹಿತಿ ಕದಿಯಲು 500 ಸಿಬ್ಬಂದಿ ನೇಮಿಸಿದ್ದ ಚಿಲುಮೆ: ತನಿಖೆಯಲ್ಲಿ ಬಯಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...