Homeಅಂತರಾಷ್ಟ್ರೀಯಅಮೇರಿಕದ ಜನಪ್ರಿಯ ಫುಟ್‍ಬಾಲ್ ಆಟಗಾರ್ತಿ ಮೇಗನ್ ರೆಪಿನೋ ರಾಷ್ಟ್ರಗೀತೆಯೊಂದಿಗೆ ದನಿಗೂಡಿಸುವುದಿಲ್ಲ ಯಾಕೆ ಗೊತ್ತೆ?

ಅಮೇರಿಕದ ಜನಪ್ರಿಯ ಫುಟ್‍ಬಾಲ್ ಆಟಗಾರ್ತಿ ಮೇಗನ್ ರೆಪಿನೋ ರಾಷ್ಟ್ರಗೀತೆಯೊಂದಿಗೆ ದನಿಗೂಡಿಸುವುದಿಲ್ಲ ಯಾಕೆ ಗೊತ್ತೆ?

- Advertisement -
- Advertisement -

ಮೇಗನ್ ರೆಪಿನೋ, ಅಮೇರಿಕದ ಮಹಿಳಾ ಫುಟ್‍ಬಾಲ್ ತಂಡದ ಸಹನಾಯಕಿ. ಇಷ್ಟು ಹೇಳಿದರೆ ಆಕೆಯ ಬಗ್ಗೆ ಏನೂ ಹೇಳಿದಂತಾಗುವುದಿಲ್ಲ. ಉತ್ತರ-ದಕ್ಷಿಣ ಅಮೇರಿಕ ಮತ್ತು ಯುರೋಪ್ ಖಂಡಗಳ ದೇಶಗಳಲ್ಲಿ ಫುಟ್‍ಬಾಲ್ ಎಂಬುದು ರಾಷ್ಟ್ರಧರ್ಮವೆಂದು ಕರೆಸಿಕೊಳ್ಳುತ್ತದೆ. ಆ ದೇಶಗಳ ಪ್ರತಿಯೊಬ್ಬ ಪ್ರಜೆ ಪ್ರೀತಿಸುವ, ಕಲಿತು ಆಡುವ, ಅಭಿಮಾನಿಸುವ, ಬಹಳಷ್ಟು ಮಂದಿ ಒಂದು ಗೀಳಿನಂತೆ ಆರಾಧಿಸುವ ಫುಟ್‍ಬಾಲ್ ಕ್ರೀಡೆಯ ಸುತ್ತಮುತ್ತ ಏನು ನಡೆದರೂ ಅದೊಂದು ಪ್ರಮುಖ ವಿಚಾರವಾಗುತ್ತದೆ.

ಇಂತಹ ಕ್ರೀಡೆಯನ್ನಾಡುವ ಮಹಿಳಾ ಫುಟ್‍ಬಾಲ್ ತಂಡದ ಅತ್ಯಂತ ಜನಪ್ರಿಯ ಆಟಗಾರ್ತಿಯರಲ್ಲಿ ಪ್ರಮುಖಳು ಮೇಗನ್ ರೆಪಿನೋ. ಈಕೆ, ದೀರ್ಘ ಕಾಲ ಮಹಿಳಾ ಫುಟ್‍ಬಾಲ್ ತಂಡದ ನಾಯಕಿಯಾಗಿ, ಅತ್ಯುತ್ತಮ ಲೀಡ್ ಆಟಗಾರ್ತಿಯಾಗಿ ತಂಡವನ್ನು ತಾನು ಆಡಿದ ಬಹುತೇಕ ಎಲ್ಲ ಪಂದ್ಯಗಳಲ್ಲೂ ವಿಜಯದೆಡೆಗೆ ಸಾಗಿಸಿದ, ಈಗಲೂ ಸಾಗಿಸಬಲ್ಲ ಛಾತಿಯುಳ್ಳವರು. ಈಗ 34 ವರ್ಷ ವಯಸ್ಸಾಗಿದ್ದರೂ, ತಂಡಕ್ಕೆ ಸೇರ್ಪಡೆಯಾಗಿರುವ 20-22 ವರ್ಷದ ಎಳೆಯ ಶಕ್ತಿಶಾಲಿ ಚುರುಕು ಆಟಗಾರ್ತಿಯರಿಗಿಂತಲೂ ಅತ್ಯುತ್ತಮ ಫಾರ್ಮ್‍ನಲ್ಲಿರುವ, ಇದೀಗ ನಡೆಯುತ್ತಿರುವ ಫಿಫಾ ಮಹಿಳಾ ವಿಶ್ವಕಪ್‍ನಲ್ಲಿಯೂ ಪ್ರತಿಯೊಂದು ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿರುವ ಕ್ರೀಡಾಪಟು.

ಒಬ್ಬ ಮಹಿಳಾ ಫುಟ್‍ಬಾಲ್ ಕ್ರೀಡಾಪಟುವಾಗಿ, ಈಕೆಯ ಕೌಶಲ್ಯ, ಶಕ್ತಿ, ಸಾಮರ್ಥ್ಯ, ಮತ್ತು ಕ್ರೀಡೆಯ ಬಗೆಗಿನ ಈಕೆಯ ಅದಮ್ಯ ಪ್ರೀತಿ ಮತ್ತು ಬದ್ಧತೆ ಪ್ರಶ್ನಾತೀತ. ಇದು, ಆ ದೇಶದ ಮಹಿಳಾ ಫುಟ್‍ಬಾಲ್ ತಂಡಕ್ಕೂ ಮತ್ತು ಎಲ್ಲ ಕ್ರೀಡಾಭಿಮಾನಿಗಳಿಗೂ ಅನುಮಾನಕ್ಕೆ ಎಡೆಯಿಲ್ಲದಂತೆ ಗೊತ್ತಿರುವ ಸಂಗತಿ. ಈಗ ಫ್ರಾನ್ಸ್ ನಲ್ಲಿ ನಡೆಯುತ್ತಿರುವ ‘ಫಿಫಾ ಮಹಿಳಾ ಫುಟ್‍ಬಾಲ್ ವಿಶ್ವಕಪ್’ನಲ್ಲಿ ಅಮೇರಿಕದ ತಂಡ ಈವರೆಗೆ ಆಡಿ ಗೆದ್ದಿರುವ 8 ಪಂದ್ಯಗಳಲ್ಲಿ ದೊರೆತಿರುವ ಎಲ್ಲ ಗೋಲುಗಳಲ್ಲೂ ಗಳಿಸಿದಾಕೆ ಇದೇ ಮೇಗನ್ ರೆಪಿನೋ.

ಅಂತಹ ಅದ್ವಿತೀಯ ಆಟಗಾರ್ತಿಯ ಬಗ್ಗೆ ಇಲ್ಲಿ ಬರೆಯುತ್ತಿರುವುದು ಇವಿಷ್ಟು ಕಾರಣಗಳಿಗಾಗಿ ಮಾತ್ರವಲ್ಲ! ಇತ್ತೀಚೆಗೆ ಆಕೆ ತಾನೊಬ್ಬ ನಾಗರೀಕಳಾಗಿ, ಜವಾಬ್ದಾರಿಯುಳ್ಳ ಒಬ್ಬ ಪ್ರಜೆಯಾಗಿ ತೋರಿದ ಅದ್ವಿತೀಯವಾದ ಮಾನವೀಯ ಸ್ಪಂದನಕ್ಕಾಗಿ; ದಿಟ್ಟ, ಧೀರ ನಡವಳಿಕೆಗಾಗಿ. ತನ್ನ ದೇಶದ ಬಿಳಿಯ ನಾಗರೀಕರು- ವಿಶೇಷವಾಗಿ ಪೊಲೀಸರು ಕಪ್ಪು ಜನರು ಮತ್ತು ಇನ್ನಿತರ ವರ್ಣೀಯ ಜನರ ವಿರುದ್ಧ ತೋರುತ್ತಿರುವ ಅಸಹಿಷ್ಣುತೆ, ಅವರ ಮೇಲೆ ನಡೆಸುತ್ತಿರುವ ಹಲ್ಲೆ ಮತ್ತು ಅಮಾಯಕರ ಕೊಲೆಗಳ ವಿರುದ್ಧ ಧೈರ್ಯದಿಂದ ದನಿಯೆತ್ತಿರುವುದಕ್ಕಾಗಿ ಮೇಗನ್ ರೆಪಿನೋ ಬಗ್ಗೆ ತಿಳಿಯಬೇಕಾಗಿದೆ ಮತ್ತು ಮಾತಾಡಬೇಕಾಗಿದೆ.

ಕಳೆದ ವರ್ಷ ಅಮೇರಿಕದಲ್ಲಿ ನಡೆದ ಆಂತರಿಕ ಮಹಿಳಾ ಫುಟ್‍ಬಾಲ್‍ನ ಲೀಗ್ ಪಂದ್ಯಗಳು ಅಮೇರಿಕದ ಸಾಮಾನ್ಯ ನಾಗರೀಕರಿಗೆ ಶಾಕ್ ಟ್ರೀಟ್‍ಮೆಂಟ್ ಕೊಟ್ಟವು. ಯಾಕೆಂದರೆ, ಪ್ರತಿಯೊಂದು ಪಂದ್ಯಕ್ಕೂ ಮೊದಲು ನುಡಿಸಲಾಗುವ ಅಮೇರಿಕದ ರಾಷ್ಟ್ರಗೀತೆಗೆ ಹೆಮ್ಮೆಯಿಂದ ಹೃದಯದ ಮೇಲೆ ಕೈಯಿಟ್ಟುಕೊಂಡು ದನಿಗೂಡಿಸಬೇಕಾದ ತಮ್ಮ ನೆಚ್ಚಿನ ಮಹಿಳಾ ಕ್ರೀಡಾಪಟು ಮೇಗನ್ ರೆಪಿನೋ, ರಾಷ್ಟ್ರಗೀತೆ ಹಾಡುವುದನ್ನು ನಿರಾಕರಿಸಿ, ಪ್ರತಿಭಟನಾಸೂಚಕವಾಗಿ ಮಂಡಿಯೂರಿ ನಿಂತಿದ್ದಳು!! ಪಂದ್ಯಗಳ ನಂತರದ ಸಂದರ್ಶನಗಳಲ್ಲಿ, ‘ಅಮೇರಿಕದ ಸರ್ಕಾರ ಪೊಲೀಸ್ ಪಡೆ ಮತ್ತು ನಾಗರೀಕರು ತಮ್ಮದೇ ದೇಶದ ಪ್ರಜೆಗಳಾದ ಕಪ್ಪುಜನರು ಮತ್ತು ವರ್ಣೀಯ ಜನರನ್ನು (ಕಂದು ಮತ್ತಿತರ ಮೈಬಣ್ಣ ಹೊಂದಿರುವ ಇತರ ದೇಶಗಳ ವಲಸಿಗರು) ಅಸಮಾನತೆಯಿಂದ ನಡೆಸಿಕೊಳ್ಳುತ್ತಾ, ಅತ್ಯಂತ ಬರ್ಬರವಾಗಿ ಕೊಲೆಗಳನ್ನೂ ಮಾಡುತ್ತಿರುವಾಗ, ತಾನು ಹೇಗೆ ರಾಷ್ಟ್ರಗೀತೆಗೆ ದನಿಗೂಡಿಸಲು ಸಾಧ್ಯ’ ಎಂದಾಕೆ ಮಾಧ್ಯಮಗಳನ್ನು ಪ್ರಶ್ನಿಸಿದರು.

ಇದಕ್ಕೂ ಮೊದಲು ಪ್ರಖ್ಯಾತ ರಾಷ್ಟ್ರೀಯ ಫುಟ್‍ಬಾಲ್ ಲೀಗ್ ಆಟಗಾರ ಕೊಲಿನ್ ಕೇಪರ್‍ನಿಕ್ ಕೂಡಾ ಇದೇ ರೀತಿಯ ಪ್ರತಿಭಟನೆಯನ್ನು ದಾಖಲಿಸಿ, ರಾಷ್ಟ್ರಗೀತೆಯ ಸಂದರ್ಭದಲ್ಲಿ ನೆಲದ ಮೇಲೆ ಕುಳಿತುಕೊಳ್ಳುವ ಮೂಲಕ ತನ್ನ ದೇಶದ ತುಳಿಯಲ್ಪಟ್ಟ ಜನರ ಬಗ್ಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದ್ದರು. “ಅವರ ಮಾತುಗಳು ತನ್ನನ್ನು ಪ್ರೇರೇಪಿಸಿದವು, ಏಕೆಂದರೆ ಕೊಲಿನ್ ಕೇಪರ್‍ನಿಕ್ ಅವರು ಯಾರನ್ನೂ ಮೆಚ್ಚಿಸುವುದಕ್ಕಾಗಿ ಹೀಗೆ ಮಾಡಲಿಲ್ಲ, ‘ಅಮೇರಿಕಾ ದೇಶವೆಂದರೆ ಅದು ಬಿಳಿಯರು ಮಾತ್ರವಲ್ಲ, ಕರಿಯರು ಮತ್ತು ವರ್ಣೀಯರು ಎಲ್ಲರೂ ಸೇರಿ ಕಟ್ಟಿದ ದೇಶ, ತಾನು ಈ ದೇಶದ ರಾಷ್ಟ್ರೀಯ ಕ್ರೀಡೆಯನ್ನು ಪ್ರತಿನಿಧಿಸುತ್ತೇನಾದರೆ, ಅದು ಅವರೆಲ್ಲರನ್ನೂ ಒಳಗೊಂಡ ಪ್ರತಿನಿಧಿತ್ವವೇ ಆಗಿರುತ್ತದೆ. ಹಾಗಿರುವಾಗ ಅವರುಗಳ ಮೇಲೆ ನಡೆಯುವ ಅಮಾನವೀಯ ದೌರ್ಜನ್ಯವನ್ನು ಸುಮ್ಮನೆ ನೋಡುತ್ತಾ ಸಹಿಸಲು ಸಾಧ್ಯವಿಲ್ಲವಾದ ಕಾರಣ ನನ್ನ ಪ್ರತಿಕ್ರಿಯೆ ಕೊಡುತ್ತಿದ್ದೇನೆ’ ಎಂದು ಹೇಳಿದ ಮಾತುಗಳು ಅತ್ಯಂತ ಪ್ರಾಮಾಣಿಕವಾಗಿದ್ದವು ಮತ್ತು ನನ್ನನ್ನು ತಟ್ಟಿದವು” ಎಂದು ಮೇಗನ್ ಅವರು ಹೇಳಿಕೊಂಡಿದ್ದಾರೆ.

ಅಮೇರಿಕದಲ್ಲಿ ಕಪ್ಪುಜನರು ಮತ್ತು ಬಿಳಿ ವರ್ಣೀಯರ ಮೇಲಿನ ಹಿಂಸಾಚಾರಕ್ಕೆ ಸಾಕಷ್ಟು ಸುದೀರ್ಘ ಕರಾಳ ಇತಿಹಾಸವಿದೆ. ಇಂದಿನವರೆಗೂ ಎಲ್ಲ ಕಾನೂನುಗಳನ್ನೂ ಮೀರಿ ನಡೆಯುತ್ತಿರುವ ಈ ಅನ್ಯಾಯವನ್ನು ಪ್ರತಿಭಟಿಸುತ್ತಾ 2015ರಲ್ಲಿ ಹುಟ್ಟಿಕೊಂಡ ಚಳವಳಿ-‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ (ಕಪ್ಪು ಬದುಕುಗಳಿಗೂ ಬೆಲೆಯಿದೆ). ಈ ಚಳವಳಿಯ ಪರವಾಗಿ ಅನೇಕಾನೇಕ ಕಪ್ಪು ಮತ್ತು ವರ್ಣೀಯ ಸಲೆಬ್ರಿಟಿಗಳು ಹೇಳಿಕೆಗಳನ್ನು, ಹಣಸಹಾಯವನ್ನು, ತಮ್ಮ ಕಲೆಗಳ ಪ್ರದರ್ಶನವನ್ನು ನೀಡುತ್ತಲೇ ಬಂದಿದ್ದಾರೆ.

ಪ್ರಖ್ಯಾತ ಕಲಾವಿದ ದಂಪತಿ ಕ್ರಿಸ್ ತೇಗನ್ ಮತ್ತು ಜಾನ್ ಲೆಜೆಂಡ್, ಹಾಡುಗಾರ ವೀಕನ್ಡ್, ಕಲಾವಿದೆ ಕಿಮ್ ಕರ್ದಶಿಯನ್ ವೆಸ್ಟ್, ಕೆರ್ರಿ ವಾಷಿಂಗ್ಟನ್, ಖ್ಯಾತ ಅಥ್ಲೀಟುಗಳಾದ ಕಾರ್ಮೆಲೋ ಆಂಥನಿ, ಕ್ರಿಸ್ ಪಾಲ್, ಡ್ವೇನ್ ವೇಡ್ ಮತ್ತು ಲೆಬ್ರಾನ್ ಜೇಮ್ಸ್ ಮೊದಲಾದ ಕಪ್ಪು ವರ್ಣೀಯ ಸೆಲೆಬ್ರಿಟಿಗಳು ‘ಬ್ಲಾಕ್ ಲೈನ್ಸ್ ಮ್ಯಾಟರ್’ ಪರವಾಗಿ ಸಾಕಷ್ಟು ಗಟ್ಟಿಯಾಗಿಯೇ ಮಾತನಾಡಿದ್ದಾರೆ. ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಾರೆ, ಸಾಕ್ಷ್ಯಚಿತ್ರಗಳನ್ನು ತೆಗೆದಿದ್ದಾರೆ ಮತ್ತು ಚಾರಿಟಿ ಶೋಗಳ ಮೂಲಕ ಹಣ ಸಂಗ್ರಹಿಸಿ ಕೊಟ್ಟಿದ್ದಾರೆ. ಅವರ ಜೊತೆಗೆ ಈಗ ಕೊಲಿನ್ ಕೊಪರ್‍ನಿಕ್ ಮತ್ತು ಮೇಗನ್ ಕೂಡಾ ಸೇರಿಕೊಂಡಿದ್ದಾರೆ.

‘ಬ್ಲಾಕ್ ಲೈವ್ಸ್ ಮ್ಯಾಟರ್’ ಚಳುವಳಿಯನ್ನು ಈ ಇಬ್ಬರು ಬೆಂಬಲಿಸುವುದಕ್ಕೆ ಹೆಚ್ಚು ಮಹತ್ವ ಸಿಕ್ಕಿರುವುದು ಈ ಇಬ್ಬರೂ ಬಿಳಿಯ ಪ್ರಜೆಗಳಾದ ಕಾರಣಕ್ಕೂ ಕೂಡಾ. ಕಪ್ಪು ಮತ್ತು ವರ್ಣೀಯರ ಆಂದೋಲನವನ್ನು ಬೆಂಬಲಿಸಿದ ಮೊದಲ ಬಿಳಿ ಮಹಿಳಾ ಕ್ರೀಡಾಪಟುವೆನ್ನಿಸಿಕೊಂಡಿರುವ ಮೇಗನ್ ರೆಪಿನೋ ಇದನ್ನೂ ಕೂಡಾ ಗುರುತಿಸಿದ್ದಾರೆ.

“ನಾನು ಈ ಹೆಜ್ಜೆಯನ್ನಿಟ್ಟು ಸಾಕಷ್ಟು ನಷ್ಟಗಳಿಗೆ ತುತ್ತಾಗಿದ್ದೇನೆ, ದಾಳಿಗಳಿಗೆ ಗುರಿಯಾಗಿದ್ದೇನೆ; ಆದರೆ, ಆಗೆಲ್ಲ ನಾನು ಅಂದುಕೊಳ್ಳುವುದು ಇಷ್ಟೆ, ಬಿಳಿಯಳಾಗಿ ಸಾಕಷ್ಟು ಅನುಕೂಲತೆಗಳನ್ನು ಈಗಲೂ ಪಡೆದಿರುವ ನನಗೇ ಇಷ್ಟು ಕಷ್ಟವೆನಿಸಿದರೆ, ಈ ಚಾರಿತ್ರಿಕ ಅಸಮಾನತೆಯ ವಿರುದ್ಧ ದನಿಯೆತ್ತಿರುವ ನಮ್ಮ ಕಪ್ಪು ಮತ್ತು ವರ್ಣೀಯ ಸಹೋದರ ಸಹೋದರಿಯರಿಗೆ ಇನೆಷ್ಟು ಕಷ್ಟನಷ್ಟಗಳು ಎದುರಾಗಿರಬಹುದು? ಏನನ್ನಾದರೂ ಬದಲಾಯಿಸಬೇಕೆಂದರೆ, ಇರುವಂತೆಯೇ ಇರಲು ಬಿಡದೆ ಪರಿವರ್ತಿಸಬೇಕೆಂದರೆ ಇಷ್ಟಾದರೂ ಆಗಲೇಬೇಕು; ಇಷ್ಟನ್ನು ನಾನು ಸಹಿಸಲೇಬೇಕು”. ಹೀಗೆ ಹೇಳುತ್ತಾ, ತನ್ನ ಪ್ರತಿಭಟನೆಯ ಹಾದಿಯಲ್ಲಿ ಅವರು ಮುನ್ನಡೆದಿದ್ದಾರೆ.

ಆಂತರಿಕ ಲೀಗ್ ಪಂದ್ಯಗಳಲ್ಲಿ ಮಂಡಿಯೂರಿದ್ದ ರೆಪಿನೋ ಪ್ರತಿಭಟನೆಗೆ ಬೆದರಿದ ಫುಟ್‍ಬಾಲ್ ಮಂಡಳಿ, ಆಟಗಾರರ ನಿಯಮಾವಳಿಗೇ ಏಕಪಕ್ಷೀಯ ತಿದ್ದುಪಡಿ ತಂದು, ರಾಷ್ಟ್ರಗೀತೆಯ ಸಂದರ್ಭದಲ್ಲಿ ಯಾರೂ ಮಂಡಿಯೂರುವಂತಿಲ್ಲ ಎಂದು ಆದೇಶಿಸಿದೆ. ಅದಾದ ಮೇಲೆ ನಡೆಯುತ್ತಿರುವ ಫಿಫಾ ವಿಶ್ವಕಪ್‍ನಲ್ಲಿ ರೆಪಿನೋ ಮಂಡಿಯೂರುತ್ತಿಲ್ಲ, ಆದರೆ ರಾಷ್ಟ್ರಗೀತೆಯನ್ನು ಹಾಡುತ್ತಲೂ ಇಲ್ಲ. ಧೀರ ಗಂಭೀರ ನಿಲುವಿನೊಂದಿಗೆ ತನ್ನ ವಿರೋಧ ದಾಖಲಿಸುತ್ತಲೇ ಇದ್ದಾರೆ.

ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೆಪಿನೋ ಅವರನ್ನು ‘ಬಿಚ್’ (ಸೂಳೆ) ಎಂದು ಕರೆದು, “ಆಕೆಯನ್ನು ಮೈದಾನದಿಂದ ಎಳೆದು ಹೊರಕ್ಕೆಸೆಯಿರಿ” ಎಂದು ಕರೆಕೊಟ್ಟರೆ, ಮೇಗನ್ ರೆಪಿನೋ ಜೊತೆಗಾರ್ತಿ ಆಟಗಾರ್ತಿಯರು ಮತ್ತು ಕೋಚ್ ಆಕೆಯ ಹೋರಾಟಕ್ಕೆ ಪರೋಕ್ಷ ಬೆಂಬಲ ನೀಡಿದ್ದಾರೆ. ‘ಆಕೆಯೊಬ್ಬ ಅತ್ಯುತ್ತಮ ಕ್ರೀಡಾಪಟು ಮತ್ತು ತಂಡಕ್ಕೆ ಅಮೂಲ್ಯ ಆಸ್ತಿ, ಒಳ್ಳೆಯ ಗೆಳತಿ ಮತ್ತು ಸಹ ಆಟಗಾರ್ತಿ. ಇದನ್ನು ಬಿಟ್ಟು ಉಳಿದ ಆಕೆಯ ನಿಲುವುಗಳು ಆಕೆಯ ಇಷ್ಟ, ಆ ಬಗ್ಗೆ ನಾವು ಚರ್ಚಿಸುವುದಿಲ್ಲ’ ಎಂದು ತಂಡ ಹೇಳಿದ್ದರೆ, ಕೋಚ್ ಪ್ರತಿಕ್ರಿಯಿಸಿ ‘ರೆಪಿನೋ ಯಾವಾಗಲೂ ದಿಟ್ಟವಾದ ನಿಲುವು ಮತ್ತು ಮಾತುಗಳನ್ನು ಹೊಂದಿರುವವರು. ಅದಕ್ಕಾಗಿ ಆಕೆಯನ್ನು ಗೌರವಿಸಬೇಕೇ ಹೊರತು ತೆಗಳಬೇಕಿಲ್ಲ’ ಎಂದಿದ್ದಾರೆ.

ಮೇಗನ್ ರೆಪಿನೋ ಈ ಹಿಂದೆಯೂ ಮಹಿಳಾ ಅಸಮಾನತೆಯ ಬಗ್ಗೆ, ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಗಟ್ಟಿದನಿಯಲ್ಲಿ ಮಾತನಾಡಿದವರು. ತಾನು ಸ್ವತಃ ಒಬ್ಬ ಲೆಸ್ಬಿಯನ್ ಆಗಿರುವುದನ್ನು ಯಾವ ಮುಚ್ಚುಮರೆಯಿಲ್ಲದೆ ಚರ್ಚಿಸಿದವರು. ಇಂತಹ ಅವರ ಕಾಳಜಿಗಳ ವಿಸ್ತರಣೆಯಾಗಿ ಈಗಿನ ಅವರ ಪ್ರತಿಭಟನೆಯೂ ಇದೆ. ನಿಜಕ್ಕೂ ಮೇಗನ್ ರೆಪಿನೋ ಅಭಿನಂದನಾರ್ಹರು. ಹಾದಿಬೀದಿಗಳಲ್ಲಿ ಅಮಾಯಕ ಅಲ್ಪಸಂಖ್ಯಾತರನ್ನು, ದಲಿತರು, ಮಹಿಳೆಯರು, ಆದಿವಾಸಿಗಳನ್ನು ಕಟ್ಟಿಹಾಕಿ ಥಳಿಸಿ ಕೊಂದರೂ ತುಟಿಪಿಟಕ್ಕೆನ್ನದ ಭಾರತದ ಸೆಲೆಬ್ರಿಟಿ ಕೋಟ್ಯಾಧಿಪತಿಗಳ ನಡುವೆ ಅಮೇರಿಕದ ಹೆಸರಾಂತರ ಈ ಸಾಮಾಜಿಕ ಜವಾಬ್ದಾರಿಯ ನಡವಳಿಕೆ ಇನ್ನಷ್ಟು ತಟ್ಟುತ್ತದೆ; ಮುಖ್ಯವೆನ್ನಿಸುತ್ತದೆ.

ಕೃಪೆ: ‘ಮುನ್ನಡೆ’ ಮಹಿಳಾ ಪತ್ರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ರಾಜಭವನ’ಗಳನ್ನು ‘ಲೋಕಭವನ’ಗಳೆಂದು ಮರುನಾಮಕರಣ; ಇದು ಒಕ್ಕೂಟ ವ್ಯವಸ್ಥೆ ಮತ್ತು ಭಾಷಾ ಸಮಾನತೆಯ ಮೇಲಿನ ಆಕ್ರಮಣ: ಜಾಗೃತ ಕರ್ನಾಟಕ

ದೇಶಾದಾದ್ಯಂತ ಇರುವ ರಾಜಭವನಗಳ ಹೆಸರನ್ನು ಲೋಕಭವನ ಎಂದು ಮರುನಾಮಕರಣ ಮಾಡುವುದಾಗಿ ಕೇಂದ್ರ ಗೃಹಸಚಿವಾಲಯ ತೀರ್ಮಾನಿಸಿದೆ. ಕೇಂದ್ರದ  ಈ ನೀತಿಯನ್ನು ವಿರೋಧಿಸಿರುವ ಜಾಗೃತ ಕರ್ನಾಟಕ ದೇಶದ ಎಲ್ಲಾ ಹಿಂದಿಯೇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ....

ಯುಜಿಸಿ ಈಕ್ವಿಟಿ ನಿಯಮಗಳ ಮೇಲಿನ ಸುಪ್ರೀಂ ಕೋರ್ಟ್ ತಡೆಗೆ ವಿದ್ಯಾರ್ಥಿಗಳ ಪ್ರತಿಭಟನೆ, ರೋಹಿತ್ ಕಾಯ್ದೆಗೆ ಒತ್ತಾಯ

ಯುಜಿಸಿ ಇಕ್ವಿಟಿ ನಿಯಮಗಳಿಗೆ ಸುಪ್ರೀಂ ಕೋರ್ಟ್ ನೀಡಿದ ತಡೆಯಾಜ್ಞೆಯ ವಿರುದ್ಧ ಮತ್ತು ವಿಶ್ವವಿದ್ಯಾಲಯಗಳಲ್ಲಿ ಜಾತಿ ತಾರತಮ್ಯವನ್ನು ಎದುರಿಸಲು ಶಾಸನಬದ್ಧ ರೋಹಿತ್ ಕಾಯ್ದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್ಎ)...

ನರವಾಣೆ ಅಪ್ರಕಟಿತ ಪುಸ್ತಕ ಗದ್ದಲ | ಸತ್ಯ ಹೊರಬಂದರೆ ಮೋದಿ, ರಾಜನಾಥ್ ಸಿಂಗ್ ಮುಖವಾಡ ಬಯಲಾಗಲಿದೆ : ರಾಹುಲ್ ಗಾಂಧಿ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ ಕುರಿತು ರಾಹುಲ್ ಗಾಂಧಿ ಸೋಮವಾರ (ಫೆ.2) ಲೋಕಸಭೆಯಲ್ಲಿ ಉಲ್ಲೇಖಿಸಿದ್ದು, ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ...

ದಲಿತ ಕುಟುಂಬದ ಮದುವೆ ಮೆರವಣಿಗೆ ವೇಳೆ ಘರ್ಷಣೆ : ಮೂವರ ಬಂಧನ

ಗುಜರಾತ್‌ನ ಪಠಾಣ್ ತಾಲೂಕಿನ ಚದ್ರುಮಣ ಗ್ರಾಮದಲ್ಲಿ ದಲಿತ ಕುಟುಂಬದ ಮದುವೆ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಐವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿಗಳ ವಿರುದ್ದ ಎಸ್‌ಸಿ/ಎಸ್‌ಟಿ...

ಲೋಕಸಭೆಯಲ್ಲಿ ಲಡಾಖ್ ಬಿಕ್ಕಟ್ಟಿನ ಬಗ್ಗೆ ಮಾಜಿ ಸೇನಾ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆ ಉಲ್ಲೇಖಿಸಿದ ರಾಹುಲ್ ಗಾಂಧಿ: ಸಭೆಯಲ್ಲಿ ತೀವ್ರ ಗದ್ದಲ

ಸೋಮವಾರ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ಆತ್ಮಚರಿತ್ರೆಯಿಂದ ಉಲ್ಲೇಖಿಸಲು ಪ್ರಯತ್ನಿಸಿದ ನಂತರ ಗದ್ದಲ ಭುಗಿಲೆದ್ದಿತು. ರಾಹುಲ್ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ, ರಕ್ಷಣಾ ಸಚಿವ...

ಪಂಜಾಬ್ ನಿರೀಕ್ಷೆಗಳನ್ನು ಪೂರೈಸುವಲ್ಲಿ ಕೇಂದ್ರ ಬಜೆಟ್ ಮತ್ತೊಮ್ಮೆ ವಿಫಲವಾಗಿದೆ: ಸಿಎಂ ಭಗವಂತ್ ಮಾನ್

ಕೇಂದ್ರ ಬಜೆಟ್ ಮತ್ತೊಮ್ಮೆ ಪಂಜಾಬ್‌ನ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಸಚಿವರು ಭಾನುವಾರ ಅಭಿಪ್ರಾಯಪಟ್ಟಿದ್ದಾರೆ. ಬಜೆಟ್ ರೈತರಿಗೆ ಯಾವುದೇ...

ರಾಜ್ಯಪಾಲರು ಪೂರ್ಣ ಭಾಷಣ ಓದಿಲ್ಲ, ‘ಜೈ ಸಂವಿಧಾನ’ ಎನ್ನುವುದನ್ನು ಉಲ್ಲೇಖಿಸದೆ ಹೋದರು : ಸಿಎಂ ಸಿದ್ದರಾಮಯ್ಯ

ರಾಜ್ಯಪಾಲರು ಪೂರ್ತಿ ಭಾಷಣ ಓದದೆ ತರಾತುರಿಯಲ್ಲಿ ಹೋದರು. ಭಾಷಣದಲ್ಲಿದ್ದ "ಜೈ ಸಂವಿಧಾನ" ಎನ್ನುವುದನ್ನೂ ಉಲ್ಲೇಖಿಸದೆ ತೆರಳಿದರು. ರಾಷ್ಟ್ರಗೀತೆ ಮುಗಿಯುವವರೆಗೂ ಕಾಯದೆ ಹೋಗಿಬಿಟ್ಟರು. ಇದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಿಜೆಪಿ ಶಾಸಕ...

ಉತ್ತರಾಖಂಡ| ಹಿಂದುತ್ವ ಗುಂಪಿನ ಕಿರುಕುಳದಿಂದ ಮುಸ್ಲಿಂ ಅಂಗಡಿ ಮಾಲೀಕನನ್ನು ರಕ್ಷಿಸಿದ ದೀಪಕ್ ಕುಮಾರ್

ಸ್ಥಳೀಯ ಮುಸ್ಲಿಂ ಅಂಗಡಿ ಮಾಲೀಕನ ವಿರುದ್ಧ ಬಜರಂಗದಳ ಸದಸ್ಯರು ನೀಡುತ್ತಿದ್ದ ಕಿರುಕುಳವನ್ನು ಜಿಮ್ ಮಾಲೀಕ ದೀಪಕ್ ಕುಮಾರ್ ಸ್ಥಳದಲ್ಲೇ ಎದುರಿಸಿದ್ದಾರೆ. ಆಕ್ರೋಶಿತರಾದ ಹಿಂದುತ್ವ ಗುಂಪಿನ ಸದಸ್ಯರು ದೀಪಕ್ ವಿರುದ್ಧವೇ ಪ್ರತಿಭಟನೆ ನಡೆಸಿದ್ದು, ಹಲವಾರ...

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ...

ದಕ್ಷಿಣ ಪಿನಾಕಿನಿ ಜಲವಿವಾದ : ನ್ಯಾಯಮಂಡಳಿ ಸ್ಥಾಪಿಸಲು ಸುಪ್ರೀಂ ಕೋರ್ಟ್ ಆದೇಶ

ದಕ್ಷಿಣ ಪಿನಾಕಿನಿ (ಪೆನ್ನೈಯಾರ್) ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ಬಾಕಿ ಇರುವ ವಿವಾದಗಳನ್ನು ಪರಿಹರಿಸಲು ನ್ಯಾಯಮಂಡಳಿ ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಫೆ.2) ನಿರ್ದೇಶನ ನೀಡಿದೆ. ಕೇಂದ್ರ...