Homeಅಂತರಾಷ್ಟ್ರೀಯಅಮೇರಿಕದ ಜನಪ್ರಿಯ ಫುಟ್‍ಬಾಲ್ ಆಟಗಾರ್ತಿ ಮೇಗನ್ ರೆಪಿನೋ ರಾಷ್ಟ್ರಗೀತೆಯೊಂದಿಗೆ ದನಿಗೂಡಿಸುವುದಿಲ್ಲ ಯಾಕೆ ಗೊತ್ತೆ?

ಅಮೇರಿಕದ ಜನಪ್ರಿಯ ಫುಟ್‍ಬಾಲ್ ಆಟಗಾರ್ತಿ ಮೇಗನ್ ರೆಪಿನೋ ರಾಷ್ಟ್ರಗೀತೆಯೊಂದಿಗೆ ದನಿಗೂಡಿಸುವುದಿಲ್ಲ ಯಾಕೆ ಗೊತ್ತೆ?

- Advertisement -
- Advertisement -

ಮೇಗನ್ ರೆಪಿನೋ, ಅಮೇರಿಕದ ಮಹಿಳಾ ಫುಟ್‍ಬಾಲ್ ತಂಡದ ಸಹನಾಯಕಿ. ಇಷ್ಟು ಹೇಳಿದರೆ ಆಕೆಯ ಬಗ್ಗೆ ಏನೂ ಹೇಳಿದಂತಾಗುವುದಿಲ್ಲ. ಉತ್ತರ-ದಕ್ಷಿಣ ಅಮೇರಿಕ ಮತ್ತು ಯುರೋಪ್ ಖಂಡಗಳ ದೇಶಗಳಲ್ಲಿ ಫುಟ್‍ಬಾಲ್ ಎಂಬುದು ರಾಷ್ಟ್ರಧರ್ಮವೆಂದು ಕರೆಸಿಕೊಳ್ಳುತ್ತದೆ. ಆ ದೇಶಗಳ ಪ್ರತಿಯೊಬ್ಬ ಪ್ರಜೆ ಪ್ರೀತಿಸುವ, ಕಲಿತು ಆಡುವ, ಅಭಿಮಾನಿಸುವ, ಬಹಳಷ್ಟು ಮಂದಿ ಒಂದು ಗೀಳಿನಂತೆ ಆರಾಧಿಸುವ ಫುಟ್‍ಬಾಲ್ ಕ್ರೀಡೆಯ ಸುತ್ತಮುತ್ತ ಏನು ನಡೆದರೂ ಅದೊಂದು ಪ್ರಮುಖ ವಿಚಾರವಾಗುತ್ತದೆ.

ಇಂತಹ ಕ್ರೀಡೆಯನ್ನಾಡುವ ಮಹಿಳಾ ಫುಟ್‍ಬಾಲ್ ತಂಡದ ಅತ್ಯಂತ ಜನಪ್ರಿಯ ಆಟಗಾರ್ತಿಯರಲ್ಲಿ ಪ್ರಮುಖಳು ಮೇಗನ್ ರೆಪಿನೋ. ಈಕೆ, ದೀರ್ಘ ಕಾಲ ಮಹಿಳಾ ಫುಟ್‍ಬಾಲ್ ತಂಡದ ನಾಯಕಿಯಾಗಿ, ಅತ್ಯುತ್ತಮ ಲೀಡ್ ಆಟಗಾರ್ತಿಯಾಗಿ ತಂಡವನ್ನು ತಾನು ಆಡಿದ ಬಹುತೇಕ ಎಲ್ಲ ಪಂದ್ಯಗಳಲ್ಲೂ ವಿಜಯದೆಡೆಗೆ ಸಾಗಿಸಿದ, ಈಗಲೂ ಸಾಗಿಸಬಲ್ಲ ಛಾತಿಯುಳ್ಳವರು. ಈಗ 34 ವರ್ಷ ವಯಸ್ಸಾಗಿದ್ದರೂ, ತಂಡಕ್ಕೆ ಸೇರ್ಪಡೆಯಾಗಿರುವ 20-22 ವರ್ಷದ ಎಳೆಯ ಶಕ್ತಿಶಾಲಿ ಚುರುಕು ಆಟಗಾರ್ತಿಯರಿಗಿಂತಲೂ ಅತ್ಯುತ್ತಮ ಫಾರ್ಮ್‍ನಲ್ಲಿರುವ, ಇದೀಗ ನಡೆಯುತ್ತಿರುವ ಫಿಫಾ ಮಹಿಳಾ ವಿಶ್ವಕಪ್‍ನಲ್ಲಿಯೂ ಪ್ರತಿಯೊಂದು ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿರುವ ಕ್ರೀಡಾಪಟು.

ಒಬ್ಬ ಮಹಿಳಾ ಫುಟ್‍ಬಾಲ್ ಕ್ರೀಡಾಪಟುವಾಗಿ, ಈಕೆಯ ಕೌಶಲ್ಯ, ಶಕ್ತಿ, ಸಾಮರ್ಥ್ಯ, ಮತ್ತು ಕ್ರೀಡೆಯ ಬಗೆಗಿನ ಈಕೆಯ ಅದಮ್ಯ ಪ್ರೀತಿ ಮತ್ತು ಬದ್ಧತೆ ಪ್ರಶ್ನಾತೀತ. ಇದು, ಆ ದೇಶದ ಮಹಿಳಾ ಫುಟ್‍ಬಾಲ್ ತಂಡಕ್ಕೂ ಮತ್ತು ಎಲ್ಲ ಕ್ರೀಡಾಭಿಮಾನಿಗಳಿಗೂ ಅನುಮಾನಕ್ಕೆ ಎಡೆಯಿಲ್ಲದಂತೆ ಗೊತ್ತಿರುವ ಸಂಗತಿ. ಈಗ ಫ್ರಾನ್ಸ್ ನಲ್ಲಿ ನಡೆಯುತ್ತಿರುವ ‘ಫಿಫಾ ಮಹಿಳಾ ಫುಟ್‍ಬಾಲ್ ವಿಶ್ವಕಪ್’ನಲ್ಲಿ ಅಮೇರಿಕದ ತಂಡ ಈವರೆಗೆ ಆಡಿ ಗೆದ್ದಿರುವ 8 ಪಂದ್ಯಗಳಲ್ಲಿ ದೊರೆತಿರುವ ಎಲ್ಲ ಗೋಲುಗಳಲ್ಲೂ ಗಳಿಸಿದಾಕೆ ಇದೇ ಮೇಗನ್ ರೆಪಿನೋ.

ಅಂತಹ ಅದ್ವಿತೀಯ ಆಟಗಾರ್ತಿಯ ಬಗ್ಗೆ ಇಲ್ಲಿ ಬರೆಯುತ್ತಿರುವುದು ಇವಿಷ್ಟು ಕಾರಣಗಳಿಗಾಗಿ ಮಾತ್ರವಲ್ಲ! ಇತ್ತೀಚೆಗೆ ಆಕೆ ತಾನೊಬ್ಬ ನಾಗರೀಕಳಾಗಿ, ಜವಾಬ್ದಾರಿಯುಳ್ಳ ಒಬ್ಬ ಪ್ರಜೆಯಾಗಿ ತೋರಿದ ಅದ್ವಿತೀಯವಾದ ಮಾನವೀಯ ಸ್ಪಂದನಕ್ಕಾಗಿ; ದಿಟ್ಟ, ಧೀರ ನಡವಳಿಕೆಗಾಗಿ. ತನ್ನ ದೇಶದ ಬಿಳಿಯ ನಾಗರೀಕರು- ವಿಶೇಷವಾಗಿ ಪೊಲೀಸರು ಕಪ್ಪು ಜನರು ಮತ್ತು ಇನ್ನಿತರ ವರ್ಣೀಯ ಜನರ ವಿರುದ್ಧ ತೋರುತ್ತಿರುವ ಅಸಹಿಷ್ಣುತೆ, ಅವರ ಮೇಲೆ ನಡೆಸುತ್ತಿರುವ ಹಲ್ಲೆ ಮತ್ತು ಅಮಾಯಕರ ಕೊಲೆಗಳ ವಿರುದ್ಧ ಧೈರ್ಯದಿಂದ ದನಿಯೆತ್ತಿರುವುದಕ್ಕಾಗಿ ಮೇಗನ್ ರೆಪಿನೋ ಬಗ್ಗೆ ತಿಳಿಯಬೇಕಾಗಿದೆ ಮತ್ತು ಮಾತಾಡಬೇಕಾಗಿದೆ.

ಕಳೆದ ವರ್ಷ ಅಮೇರಿಕದಲ್ಲಿ ನಡೆದ ಆಂತರಿಕ ಮಹಿಳಾ ಫುಟ್‍ಬಾಲ್‍ನ ಲೀಗ್ ಪಂದ್ಯಗಳು ಅಮೇರಿಕದ ಸಾಮಾನ್ಯ ನಾಗರೀಕರಿಗೆ ಶಾಕ್ ಟ್ರೀಟ್‍ಮೆಂಟ್ ಕೊಟ್ಟವು. ಯಾಕೆಂದರೆ, ಪ್ರತಿಯೊಂದು ಪಂದ್ಯಕ್ಕೂ ಮೊದಲು ನುಡಿಸಲಾಗುವ ಅಮೇರಿಕದ ರಾಷ್ಟ್ರಗೀತೆಗೆ ಹೆಮ್ಮೆಯಿಂದ ಹೃದಯದ ಮೇಲೆ ಕೈಯಿಟ್ಟುಕೊಂಡು ದನಿಗೂಡಿಸಬೇಕಾದ ತಮ್ಮ ನೆಚ್ಚಿನ ಮಹಿಳಾ ಕ್ರೀಡಾಪಟು ಮೇಗನ್ ರೆಪಿನೋ, ರಾಷ್ಟ್ರಗೀತೆ ಹಾಡುವುದನ್ನು ನಿರಾಕರಿಸಿ, ಪ್ರತಿಭಟನಾಸೂಚಕವಾಗಿ ಮಂಡಿಯೂರಿ ನಿಂತಿದ್ದಳು!! ಪಂದ್ಯಗಳ ನಂತರದ ಸಂದರ್ಶನಗಳಲ್ಲಿ, ‘ಅಮೇರಿಕದ ಸರ್ಕಾರ ಪೊಲೀಸ್ ಪಡೆ ಮತ್ತು ನಾಗರೀಕರು ತಮ್ಮದೇ ದೇಶದ ಪ್ರಜೆಗಳಾದ ಕಪ್ಪುಜನರು ಮತ್ತು ವರ್ಣೀಯ ಜನರನ್ನು (ಕಂದು ಮತ್ತಿತರ ಮೈಬಣ್ಣ ಹೊಂದಿರುವ ಇತರ ದೇಶಗಳ ವಲಸಿಗರು) ಅಸಮಾನತೆಯಿಂದ ನಡೆಸಿಕೊಳ್ಳುತ್ತಾ, ಅತ್ಯಂತ ಬರ್ಬರವಾಗಿ ಕೊಲೆಗಳನ್ನೂ ಮಾಡುತ್ತಿರುವಾಗ, ತಾನು ಹೇಗೆ ರಾಷ್ಟ್ರಗೀತೆಗೆ ದನಿಗೂಡಿಸಲು ಸಾಧ್ಯ’ ಎಂದಾಕೆ ಮಾಧ್ಯಮಗಳನ್ನು ಪ್ರಶ್ನಿಸಿದರು.

ಇದಕ್ಕೂ ಮೊದಲು ಪ್ರಖ್ಯಾತ ರಾಷ್ಟ್ರೀಯ ಫುಟ್‍ಬಾಲ್ ಲೀಗ್ ಆಟಗಾರ ಕೊಲಿನ್ ಕೇಪರ್‍ನಿಕ್ ಕೂಡಾ ಇದೇ ರೀತಿಯ ಪ್ರತಿಭಟನೆಯನ್ನು ದಾಖಲಿಸಿ, ರಾಷ್ಟ್ರಗೀತೆಯ ಸಂದರ್ಭದಲ್ಲಿ ನೆಲದ ಮೇಲೆ ಕುಳಿತುಕೊಳ್ಳುವ ಮೂಲಕ ತನ್ನ ದೇಶದ ತುಳಿಯಲ್ಪಟ್ಟ ಜನರ ಬಗ್ಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದ್ದರು. “ಅವರ ಮಾತುಗಳು ತನ್ನನ್ನು ಪ್ರೇರೇಪಿಸಿದವು, ಏಕೆಂದರೆ ಕೊಲಿನ್ ಕೇಪರ್‍ನಿಕ್ ಅವರು ಯಾರನ್ನೂ ಮೆಚ್ಚಿಸುವುದಕ್ಕಾಗಿ ಹೀಗೆ ಮಾಡಲಿಲ್ಲ, ‘ಅಮೇರಿಕಾ ದೇಶವೆಂದರೆ ಅದು ಬಿಳಿಯರು ಮಾತ್ರವಲ್ಲ, ಕರಿಯರು ಮತ್ತು ವರ್ಣೀಯರು ಎಲ್ಲರೂ ಸೇರಿ ಕಟ್ಟಿದ ದೇಶ, ತಾನು ಈ ದೇಶದ ರಾಷ್ಟ್ರೀಯ ಕ್ರೀಡೆಯನ್ನು ಪ್ರತಿನಿಧಿಸುತ್ತೇನಾದರೆ, ಅದು ಅವರೆಲ್ಲರನ್ನೂ ಒಳಗೊಂಡ ಪ್ರತಿನಿಧಿತ್ವವೇ ಆಗಿರುತ್ತದೆ. ಹಾಗಿರುವಾಗ ಅವರುಗಳ ಮೇಲೆ ನಡೆಯುವ ಅಮಾನವೀಯ ದೌರ್ಜನ್ಯವನ್ನು ಸುಮ್ಮನೆ ನೋಡುತ್ತಾ ಸಹಿಸಲು ಸಾಧ್ಯವಿಲ್ಲವಾದ ಕಾರಣ ನನ್ನ ಪ್ರತಿಕ್ರಿಯೆ ಕೊಡುತ್ತಿದ್ದೇನೆ’ ಎಂದು ಹೇಳಿದ ಮಾತುಗಳು ಅತ್ಯಂತ ಪ್ರಾಮಾಣಿಕವಾಗಿದ್ದವು ಮತ್ತು ನನ್ನನ್ನು ತಟ್ಟಿದವು” ಎಂದು ಮೇಗನ್ ಅವರು ಹೇಳಿಕೊಂಡಿದ್ದಾರೆ.

ಅಮೇರಿಕದಲ್ಲಿ ಕಪ್ಪುಜನರು ಮತ್ತು ಬಿಳಿ ವರ್ಣೀಯರ ಮೇಲಿನ ಹಿಂಸಾಚಾರಕ್ಕೆ ಸಾಕಷ್ಟು ಸುದೀರ್ಘ ಕರಾಳ ಇತಿಹಾಸವಿದೆ. ಇಂದಿನವರೆಗೂ ಎಲ್ಲ ಕಾನೂನುಗಳನ್ನೂ ಮೀರಿ ನಡೆಯುತ್ತಿರುವ ಈ ಅನ್ಯಾಯವನ್ನು ಪ್ರತಿಭಟಿಸುತ್ತಾ 2015ರಲ್ಲಿ ಹುಟ್ಟಿಕೊಂಡ ಚಳವಳಿ-‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ (ಕಪ್ಪು ಬದುಕುಗಳಿಗೂ ಬೆಲೆಯಿದೆ). ಈ ಚಳವಳಿಯ ಪರವಾಗಿ ಅನೇಕಾನೇಕ ಕಪ್ಪು ಮತ್ತು ವರ್ಣೀಯ ಸಲೆಬ್ರಿಟಿಗಳು ಹೇಳಿಕೆಗಳನ್ನು, ಹಣಸಹಾಯವನ್ನು, ತಮ್ಮ ಕಲೆಗಳ ಪ್ರದರ್ಶನವನ್ನು ನೀಡುತ್ತಲೇ ಬಂದಿದ್ದಾರೆ.

ಪ್ರಖ್ಯಾತ ಕಲಾವಿದ ದಂಪತಿ ಕ್ರಿಸ್ ತೇಗನ್ ಮತ್ತು ಜಾನ್ ಲೆಜೆಂಡ್, ಹಾಡುಗಾರ ವೀಕನ್ಡ್, ಕಲಾವಿದೆ ಕಿಮ್ ಕರ್ದಶಿಯನ್ ವೆಸ್ಟ್, ಕೆರ್ರಿ ವಾಷಿಂಗ್ಟನ್, ಖ್ಯಾತ ಅಥ್ಲೀಟುಗಳಾದ ಕಾರ್ಮೆಲೋ ಆಂಥನಿ, ಕ್ರಿಸ್ ಪಾಲ್, ಡ್ವೇನ್ ವೇಡ್ ಮತ್ತು ಲೆಬ್ರಾನ್ ಜೇಮ್ಸ್ ಮೊದಲಾದ ಕಪ್ಪು ವರ್ಣೀಯ ಸೆಲೆಬ್ರಿಟಿಗಳು ‘ಬ್ಲಾಕ್ ಲೈನ್ಸ್ ಮ್ಯಾಟರ್’ ಪರವಾಗಿ ಸಾಕಷ್ಟು ಗಟ್ಟಿಯಾಗಿಯೇ ಮಾತನಾಡಿದ್ದಾರೆ. ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಾರೆ, ಸಾಕ್ಷ್ಯಚಿತ್ರಗಳನ್ನು ತೆಗೆದಿದ್ದಾರೆ ಮತ್ತು ಚಾರಿಟಿ ಶೋಗಳ ಮೂಲಕ ಹಣ ಸಂಗ್ರಹಿಸಿ ಕೊಟ್ಟಿದ್ದಾರೆ. ಅವರ ಜೊತೆಗೆ ಈಗ ಕೊಲಿನ್ ಕೊಪರ್‍ನಿಕ್ ಮತ್ತು ಮೇಗನ್ ಕೂಡಾ ಸೇರಿಕೊಂಡಿದ್ದಾರೆ.

‘ಬ್ಲಾಕ್ ಲೈವ್ಸ್ ಮ್ಯಾಟರ್’ ಚಳುವಳಿಯನ್ನು ಈ ಇಬ್ಬರು ಬೆಂಬಲಿಸುವುದಕ್ಕೆ ಹೆಚ್ಚು ಮಹತ್ವ ಸಿಕ್ಕಿರುವುದು ಈ ಇಬ್ಬರೂ ಬಿಳಿಯ ಪ್ರಜೆಗಳಾದ ಕಾರಣಕ್ಕೂ ಕೂಡಾ. ಕಪ್ಪು ಮತ್ತು ವರ್ಣೀಯರ ಆಂದೋಲನವನ್ನು ಬೆಂಬಲಿಸಿದ ಮೊದಲ ಬಿಳಿ ಮಹಿಳಾ ಕ್ರೀಡಾಪಟುವೆನ್ನಿಸಿಕೊಂಡಿರುವ ಮೇಗನ್ ರೆಪಿನೋ ಇದನ್ನೂ ಕೂಡಾ ಗುರುತಿಸಿದ್ದಾರೆ.

“ನಾನು ಈ ಹೆಜ್ಜೆಯನ್ನಿಟ್ಟು ಸಾಕಷ್ಟು ನಷ್ಟಗಳಿಗೆ ತುತ್ತಾಗಿದ್ದೇನೆ, ದಾಳಿಗಳಿಗೆ ಗುರಿಯಾಗಿದ್ದೇನೆ; ಆದರೆ, ಆಗೆಲ್ಲ ನಾನು ಅಂದುಕೊಳ್ಳುವುದು ಇಷ್ಟೆ, ಬಿಳಿಯಳಾಗಿ ಸಾಕಷ್ಟು ಅನುಕೂಲತೆಗಳನ್ನು ಈಗಲೂ ಪಡೆದಿರುವ ನನಗೇ ಇಷ್ಟು ಕಷ್ಟವೆನಿಸಿದರೆ, ಈ ಚಾರಿತ್ರಿಕ ಅಸಮಾನತೆಯ ವಿರುದ್ಧ ದನಿಯೆತ್ತಿರುವ ನಮ್ಮ ಕಪ್ಪು ಮತ್ತು ವರ್ಣೀಯ ಸಹೋದರ ಸಹೋದರಿಯರಿಗೆ ಇನೆಷ್ಟು ಕಷ್ಟನಷ್ಟಗಳು ಎದುರಾಗಿರಬಹುದು? ಏನನ್ನಾದರೂ ಬದಲಾಯಿಸಬೇಕೆಂದರೆ, ಇರುವಂತೆಯೇ ಇರಲು ಬಿಡದೆ ಪರಿವರ್ತಿಸಬೇಕೆಂದರೆ ಇಷ್ಟಾದರೂ ಆಗಲೇಬೇಕು; ಇಷ್ಟನ್ನು ನಾನು ಸಹಿಸಲೇಬೇಕು”. ಹೀಗೆ ಹೇಳುತ್ತಾ, ತನ್ನ ಪ್ರತಿಭಟನೆಯ ಹಾದಿಯಲ್ಲಿ ಅವರು ಮುನ್ನಡೆದಿದ್ದಾರೆ.

ಆಂತರಿಕ ಲೀಗ್ ಪಂದ್ಯಗಳಲ್ಲಿ ಮಂಡಿಯೂರಿದ್ದ ರೆಪಿನೋ ಪ್ರತಿಭಟನೆಗೆ ಬೆದರಿದ ಫುಟ್‍ಬಾಲ್ ಮಂಡಳಿ, ಆಟಗಾರರ ನಿಯಮಾವಳಿಗೇ ಏಕಪಕ್ಷೀಯ ತಿದ್ದುಪಡಿ ತಂದು, ರಾಷ್ಟ್ರಗೀತೆಯ ಸಂದರ್ಭದಲ್ಲಿ ಯಾರೂ ಮಂಡಿಯೂರುವಂತಿಲ್ಲ ಎಂದು ಆದೇಶಿಸಿದೆ. ಅದಾದ ಮೇಲೆ ನಡೆಯುತ್ತಿರುವ ಫಿಫಾ ವಿಶ್ವಕಪ್‍ನಲ್ಲಿ ರೆಪಿನೋ ಮಂಡಿಯೂರುತ್ತಿಲ್ಲ, ಆದರೆ ರಾಷ್ಟ್ರಗೀತೆಯನ್ನು ಹಾಡುತ್ತಲೂ ಇಲ್ಲ. ಧೀರ ಗಂಭೀರ ನಿಲುವಿನೊಂದಿಗೆ ತನ್ನ ವಿರೋಧ ದಾಖಲಿಸುತ್ತಲೇ ಇದ್ದಾರೆ.

ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೆಪಿನೋ ಅವರನ್ನು ‘ಬಿಚ್’ (ಸೂಳೆ) ಎಂದು ಕರೆದು, “ಆಕೆಯನ್ನು ಮೈದಾನದಿಂದ ಎಳೆದು ಹೊರಕ್ಕೆಸೆಯಿರಿ” ಎಂದು ಕರೆಕೊಟ್ಟರೆ, ಮೇಗನ್ ರೆಪಿನೋ ಜೊತೆಗಾರ್ತಿ ಆಟಗಾರ್ತಿಯರು ಮತ್ತು ಕೋಚ್ ಆಕೆಯ ಹೋರಾಟಕ್ಕೆ ಪರೋಕ್ಷ ಬೆಂಬಲ ನೀಡಿದ್ದಾರೆ. ‘ಆಕೆಯೊಬ್ಬ ಅತ್ಯುತ್ತಮ ಕ್ರೀಡಾಪಟು ಮತ್ತು ತಂಡಕ್ಕೆ ಅಮೂಲ್ಯ ಆಸ್ತಿ, ಒಳ್ಳೆಯ ಗೆಳತಿ ಮತ್ತು ಸಹ ಆಟಗಾರ್ತಿ. ಇದನ್ನು ಬಿಟ್ಟು ಉಳಿದ ಆಕೆಯ ನಿಲುವುಗಳು ಆಕೆಯ ಇಷ್ಟ, ಆ ಬಗ್ಗೆ ನಾವು ಚರ್ಚಿಸುವುದಿಲ್ಲ’ ಎಂದು ತಂಡ ಹೇಳಿದ್ದರೆ, ಕೋಚ್ ಪ್ರತಿಕ್ರಿಯಿಸಿ ‘ರೆಪಿನೋ ಯಾವಾಗಲೂ ದಿಟ್ಟವಾದ ನಿಲುವು ಮತ್ತು ಮಾತುಗಳನ್ನು ಹೊಂದಿರುವವರು. ಅದಕ್ಕಾಗಿ ಆಕೆಯನ್ನು ಗೌರವಿಸಬೇಕೇ ಹೊರತು ತೆಗಳಬೇಕಿಲ್ಲ’ ಎಂದಿದ್ದಾರೆ.

ಮೇಗನ್ ರೆಪಿನೋ ಈ ಹಿಂದೆಯೂ ಮಹಿಳಾ ಅಸಮಾನತೆಯ ಬಗ್ಗೆ, ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಗಟ್ಟಿದನಿಯಲ್ಲಿ ಮಾತನಾಡಿದವರು. ತಾನು ಸ್ವತಃ ಒಬ್ಬ ಲೆಸ್ಬಿಯನ್ ಆಗಿರುವುದನ್ನು ಯಾವ ಮುಚ್ಚುಮರೆಯಿಲ್ಲದೆ ಚರ್ಚಿಸಿದವರು. ಇಂತಹ ಅವರ ಕಾಳಜಿಗಳ ವಿಸ್ತರಣೆಯಾಗಿ ಈಗಿನ ಅವರ ಪ್ರತಿಭಟನೆಯೂ ಇದೆ. ನಿಜಕ್ಕೂ ಮೇಗನ್ ರೆಪಿನೋ ಅಭಿನಂದನಾರ್ಹರು. ಹಾದಿಬೀದಿಗಳಲ್ಲಿ ಅಮಾಯಕ ಅಲ್ಪಸಂಖ್ಯಾತರನ್ನು, ದಲಿತರು, ಮಹಿಳೆಯರು, ಆದಿವಾಸಿಗಳನ್ನು ಕಟ್ಟಿಹಾಕಿ ಥಳಿಸಿ ಕೊಂದರೂ ತುಟಿಪಿಟಕ್ಕೆನ್ನದ ಭಾರತದ ಸೆಲೆಬ್ರಿಟಿ ಕೋಟ್ಯಾಧಿಪತಿಗಳ ನಡುವೆ ಅಮೇರಿಕದ ಹೆಸರಾಂತರ ಈ ಸಾಮಾಜಿಕ ಜವಾಬ್ದಾರಿಯ ನಡವಳಿಕೆ ಇನ್ನಷ್ಟು ತಟ್ಟುತ್ತದೆ; ಮುಖ್ಯವೆನ್ನಿಸುತ್ತದೆ.

ಕೃಪೆ: ‘ಮುನ್ನಡೆ’ ಮಹಿಳಾ ಪತ್ರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...