ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗಿದ್ದು, ರೈತರು ಕೂಡ ಅಲ್ಲಿ ಬಿಜೆಪಿ ವಿರುದ್ಧ ಅಭಿಯಾನ ನಡೆಸಲು ನಿರ್ಧರಿಸಿದ್ದಾರೆ.
ಭಾನುವಾರ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ರ್ಯಾಲಿ ನಡೆಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಯೂನಿಯನ್ ಟಿಕಾಯತ್ ಬಣದ ಮುಖಂಡ ರಾಕೇಶ್ ಟಿಕಾಯತ್, ಇಂದು ಸರ್ಕಾರ ಕೊಲ್ಕಾತ್ತಾಗೆ ತೆರಳಿದೆ. ನಾವು ಮಾರ್ಚ್ 13 ರಂದು ಪಶ್ಚಿಮ ಬಂಗಾಳಕ್ಕೆ ತೆರಳಿ ರೈತರೊಂದಿಗೆ ಸಂವಾದ ನಡೆಸುತ್ತೇವೆ ಎಂದು ಘೋಷಿಸಿದ್ದಾರೆ.
ಒಕ್ಕೂಟ ಸರ್ಕಾರ ರೈತರ ಮಾತುಗಳನ್ನು ಕೇಳುತ್ತಿಲ್ಲ. ಹೀಗಾಗಿ ಮುಂಬರುವ ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಅಭಿಯಾನ ನಡೆಸಲು ರೈತ ಮುಖಂಡರು ನಿರ್ಧರಿಸಿದ್ದರು. ರೈತರ ಮಾತನ್ನು ಕೇಳದ ಸರ್ಕಾರಕ್ಕೆ ಮತ ನೀಡಬೇಡಿ. ಉತ್ತಮ ಅಭ್ಯರ್ಥಿಗೆ ಮತ ನೀಡಿ ಎಂದು ಕೇಳುತ್ತೇವೆ ಎಂದು ಹೇಳಿದ್ದರು.
ಇದನ್ನೂ ಓದಿ: ಡಿಎಂಕೆ-ಕಾಂಗ್ರೆಸ್ ಸೀಟು ಹಂಚಿಕೆ: ಕೊನೆಗೂ 25 ಸೀಟು ಪಡೆದ ಕಾಂಗ್ರೆಸ್!
Govt has gone to Kolkata so we will also go there on 13th March to speak with farmers: BKU leader Rakesh Tikait pic.twitter.com/s0wLKcdjYS
— ANI (@ANI) March 7, 2021
ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೆಸರೆರಚಾಟ ಉತ್ತುಂಗದಲ್ಲಿದೆ. ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳು ಪ್ರಚಾರದಲ್ಲಿ ನಿರತವಾಗಿವೆ. ಈಗ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ರೈತ ಮುಖಂಡರು ಇದೆ ಭಾಗವಾಗಿ ಚುನಾವಣೆಗೆ ಹೊಸ ಕಳೆ ತಂದಿದ್ದಾರೆ.
“ಸರ್ಕಾರವು ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಬಂಗಾಳಕ್ಕೆ ಹೆಚ್ಚು ಹೋಗುತ್ತಿದೆ. ನಾವು ಅಲ್ಲಿಯೇ ಸರ್ಕಾರವನ್ನು ಭೇಟಿಯಾಗುತ್ತೇವೆ. ಎಂಎಸ್ಪಿ ಸರಿಯಾಗಿ ನೀಡಲಾಗುತ್ತಿದೆಯೇ ಅಥವಾ ಇಲ್ಲವೇ, ಅವರಿಗೆ ಏನು ಸಮಸ್ಯೆ ಇದೆ ಎಂಬೆಲ್ಲಾ ವಿಚಾರಗಳ ಬಗ್ಗೆ, ಎಂಎಸ್ಪಿ ಬಗ್ಗೆ ತಿಳಿಯಲು ನಾವು ರೈತರೊಂದಿಗೆ ಮಾತನಾಡಲು ಮಾರ್ಚ್ 13 ರಂದು ಬಂಗಾಳಕ್ಕೆ ಹೋಗುತ್ತಿದ್ದೇವೆ’ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.
“ಮಾರ್ಚ್ 13 ರಂದು ಪಶ್ಚಿಮ ಬಂಗಾಳದಲ್ಲಿ ಮಹಾಪಂಚಾಯತ್ ಇದೆ. ಅಲ್ಲಿ ರೈತರನ್ನು ಭೇಟಿ ಮಾಡಿ ರೈತ ಚಳವಳಿ ಮತ್ತು ಎಂಎಸ್ಪಿ ಬಗ್ಗೆ ಮಾತನಾಡುತ್ತೇನೆ. ನಾಳೆ ಎಲ್ಲಾ ಪ್ರತಿಭಟನಾ ಗಡಿಗಳಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ನಾಳೆ ಮಹಿಳೆಯರು ಸಂಪೂರ್ಣ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ರೈತ ವೇದಿಕೆಗಳು ಮಹಿಳೆಯರದ್ದಾಗಲಿವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಾರ್ಚ್ 20 ರಂದು ಶಿವಮೊಗ್ಗದಲ್ಲಿ ರೈತ ಮಹಾಪಂಚಾಯತ್: ದರ್ಶನ್ ಪಾಲ್, ಯೋಗೇಂದ್ರ ಯಾದವ್, ರಾಕೇಶ್ ಟಿಕಾಯತ್ ಭಾಗಿ