Homeಮುಖಪುಟತನಿಖಾ ಪತ್ರಿಕೋದ್ಯೋಗ ನಶಿಸುತ್ತಿದೆ: CJI ಎನ್.ವಿ ರಮಣ ಅವರಿಗೆ ಪಿ ಸಾಯಿನಾಥ್ ಪತ್ರ

ತನಿಖಾ ಪತ್ರಿಕೋದ್ಯೋಗ ನಶಿಸುತ್ತಿದೆ: CJI ಎನ್.ವಿ ರಮಣ ಅವರಿಗೆ ಪಿ ಸಾಯಿನಾಥ್ ಪತ್ರ

ಹಿಂದೆ ದೊಡ್ಡ ಹಗರಣಗಳನ್ನು ಬಯಲಿಗೆಳೆಯಲಾಗುತ್ತಿತ್ತು. ಈಗ ಅಂತಹ ಪತ್ರಕರ್ತರ ಮೇಲೆ ಕೇಸು ಹಾಕಲಾಗುತ್ತಿದೆ, ತನಿಖಾ ಪತ್ರಿಕೋದ್ಯೋಗ ಕಣ್ಮರೆಯಾಗುತ್ತಿದೆ ಎಂದು ಸಿಜೆಐ ಎನ್‌.ವಿ ರಮಣ ಆತಂಕ ವ್ಯಕ್ತಪಡಿಸಿದ್ದರು.

- Advertisement -
- Advertisement -

ಸುಪ್ರೀಂಕೋರ್ಟ್ ಮುಖ್ಯನಾಯಮೂರ್ತಿ ಎನ್.ವಿ ರಮಣ ಅವರಿಗೊಂದು ಪತ್ರ

ಮೂಲ : ಪಿ ಸಾಯಿನಾಥ್, ದ ವೈರ್ 20/12/21
ಅನುವಾದ : ನಾ ದಿವಾಕರ

ಸನ್ಮಾನ್ಯ ಮುಖ್ಯ ನ್ಯಾಯಾಧೀಶರಿಗೆ,

ಭಾರತದಲ್ಲಿ ಮಾಧ್ಯಮಗಳ ವಲಯದಲ್ಲಿ ತನಿಖಾತ್ಮಕ ಪತ್ರಿಕೋದ್ಯಮದ ಪರಿಕಲ್ಪನೆಯೇ ನಶಿಸುತ್ತಿದೆ… ನಾವು ಬೆಳೆಯುತ್ತಿದ್ದಾಗ ದೊಡ್ಡ ಹಗರಣಗಳನ್ನು ಬಯಲು ಮಾಡುವ ಸುದ್ದಿಪತ್ರಿಕೆಗಳಿಗಾಗಿ ಎದುರು ನೋಡುತ್ತಿದ್ದೆವು. ಅಂದಿನ ಸುದ್ದಿ ಪತ್ರಿಕೆಗಳು ನಮ್ಮನ್ನು ನಿರಾಸೆಗೊಳಿಸಲಿಲ್ಲ ಎಂದು ನೀವು ಬಹಳ ಸಮಂಜಸವಾಗಿ ಗಮನ ಸೆಳೆದಿದ್ದೀರಿ.

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಬಗ್ಗೆ ನಿಷ್ಕೃಷ್ಟವಾಗಿ ಮಾತನಾಡುವುದೇ ಕಡಿಮೆಯಾಗಿದೆ. ಸ್ವಲ್ಪವೇ ಕಾಲ ನಿಮ್ಮ ಭ್ರಾತೃತ್ವ ಹೊಂದಿದ್ದ ಸಂಗತಿಯನ್ನು ನೀವು ಸ್ಮರಿಸುವುದಕ್ಕೆ ಧನ್ಯವಾದಗಳು. ನೀವು 1979ರಲ್ಲಿ ಈನಾಡು ಪತ್ರಿಕೆಗೆ ಸೇರಿಕೊಂಡ ಕೆಲವೇ ತಿಂಗಳುಗಳ ನಂತರ ನಾನು ಪತ್ರಿಕೋದ್ಯೋಗ ಪ್ರವೇಶಿಸಿದ್ದೆ.

ಒಂದು ಕೃತಿ ಬಿಡುಗಡೆ ಸಮಾರಂಭದಲ್ಲಿ ನಿಮ್ಮ ಉಪನ್ಯಾಸದಲ್ಲಿ ನೀವು ಪ್ರಸ್ತಾಪಿಸಿದಂತೆ, ಅಂದಿನ ದಿನಗಳಲ್ಲಿ ಮುಂಜಾನೆ ಎದ್ದ ಕೂಡಲೇ ದೊಡ್ಡ ಹಗರಣಗಳನ್ನು ಬಯಲಿಗೆಳೆಯುವ ಸುದ್ದಿಗಾಗಿ ಸುದ್ದಿ ಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತಿದ್ದೆವು. ಇಂದು ನಾವು ನೋಡುತ್ತಿರುವುದು, ಈ ರೀತಿಯ ಹಗರಣಗಳ ಬಗ್ಗೆ ವರದಿ ಮಾಡುವ ಪತ್ರಕರ್ತರನ್ನೇ ಅಪರಾಧಿಗಳನ್ನಾಗಿ ಕಾಣಲಾಗುತ್ತಿದೆ, ಕೆಲವರನ್ನು ಯುಎಪಿಎ ಅಂತಹ ಕರಾಳ ಶಾಸನಗಳಡಿ ಬಂಧಿಸಲಾಗುತ್ತಿದೆ. ಅಥವಾ ನೀವು ಸೂಕ್ತವಾಗಿಯೇ ಖಂಡಿಸಿರುವಂತೆ, ಅಕ್ರಮ ಹಣಕಾಸು ವ್ಯವಹಾರ ಕಾಯ್ದೆಯಂತಹ (ಪಿಎಮ್‌ಎಲ್‌ಎ) ಕಾನೂನುಗಳ ತೀವ್ರ ದುರ್ಬಳಕೆಯನ್ನೂ ಕಾಣುತ್ತಿದ್ದೇವೆ.

ಎನ್ ವಿ ರಮಣ

ನಿಮ್ಮ ಉಪನ್ಯಾಸದಲ್ಲಿ ನೀವು ಗಮನಿಸಿರುವಂತೆ ಈ ಹಿಂದೆ ನಾವು ಹಗರಣಗಳ ಬಗ್ಗೆ ಮತ್ತು ದುರ್ವರ್ತನೆಯ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವರದಿಗಳೇ ಸಂಚಲನ ಉಂಟುಮಾಡುತ್ತಿದ್ದುದನ್ನು, ಇದರಿಂದ ಭೀಕರ, ಗಂಭೀರ ಪರಿಣಾಮಗಳುಂಟಾಗುತ್ತಿದ್ದುದನ್ನೂ ಗಮನಿಸಿದ್ದೇವೆ. ಆದರೆ ಇಂದು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಿರುವುದು ಅಂತಹ ವರದಿಗಳನ್ನು ನೀಡುವ ಪತ್ರಕರ್ತರು. ಉತ್ತರ ಪ್ರದೇಶದಲ್ಲಿ ನಡೆದ ಸಾಮೂಹಿಕ ಹಾಥ್ರಸ್ ಅತ್ಯಾಚಾರ ಪ್ರಕರಣವನ್ನು ವರದಿ ಮಾಡಲು ಹೋಗುತ್ತಿದ್ದ ಸಿದ್ದಿಕ್ ಕಪ್ಪನ್ ಎಂಬ ಪತ್ರಕರ್ತನನ್ನು ಮಾರ್ಗದಲ್ಲೇ ಬಂಧಿಸಲಾಯಿತು. ಆತ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲೇ ಕಳೆದಿದ್ದಾನೆ, ಜಾಮೀನು ಪಡೆಯಲಾಗುತ್ತಿಲ್ಲ. ಆತನ ಮೊಕದ್ದಮೆ ನ್ಯಾಯಾಲಯದಿಂದ ನ್ಯಾಯಾಲಯಕ್ಕೆ ಜಿಗಿಯುತ್ತಿದೆ. ಆತನ ಆರೋಗ್ಯ ತೀವ್ರವಾಗಿ ಹದಗೆಡುತ್ತಿದೆ.

ನಮ್ಮ ಮುಂದಿನ ಈ ನಿದರ್ಶನದ ಹಿನ್ನೆಲೆಯಲ್ಲಿ, ಪತ್ರಿಕೋದ್ಯಮದ ನೆಲೆಗಳು, ತನಿಖಾತ್ಮಕ ಪತ್ರಿಕೋದ್ಯೋಗ ಮತ್ತು ಇತರ ಸ್ವರೂಪಗಳದ್ದು, ಕ್ರಮೇಣ ನಶಿಸಿಹೋಗುತ್ತಿದೆ.

ನ್ಯಾಯಮೂರ್ತಿ ರಮಣ ಅವರೇ ನೀವು ಸರಿಯಾಗಿ ಹೇಳಿದ್ದೀರಿ. ಈ ಹಿಂದೆ ಬಹಿರಂಗಗೊಳಿಸಲಾದ ಹಗರಣಗಳಿಗೆ ಹೋಲಿಸಿದರೆ ನಿಮಗೆ ಹಿಂದಿನ ವರ್ಷಗಳಲ್ಲಿ ಕಂಡ ಬೃಹತ್ ಪ್ರಮಾಣದ ಹಗರಣಗಳು ಕಂಡುಬರುತ್ತಿಲ್ಲ. ನಮ್ಮ ಉದ್ಯಾನದಲ್ಲಿರುವ ಎಲ್ಲ ಕುಸುಮಗಳೂ ಅರಳಿ ಪರಿಮಳಭರಿತವಾದಂತಿದೆ. ನಿಮ್ಮದೇ ಆದ ತೀರ್ಮಾನಕ್ಕೆ ಬರುವುದು ನಿಮಗೆ ಬಿಟ್ಟ ವಿಚಾರ ಎಂದು ಸಮರ್ಪಕವಾಗಿಯೇ ಹೇಳಿದ್ದೀರಿ. ಕಾನೂನು ಮತ್ತು ಮಾಧ್ಯಮಗಳ ಬಗ್ಗೆ ನಿಮ್ಮಲ್ಲಿರುವ ಅಪಾರ ಜ್ಞಾನ ಮತ್ತು ಭಾರತೀಯ ಸಮಾಜವನ್ನು ನೀವು ಸೂಕ್ಷ್ಮವಾಗಿ ಗಮನಿಸುವರಾಗಿರುವುದರಿಂದ, ಭಾರತದಲ್ಲಿ ಕೇವಲ ತನಿಖಾತ್ಮಕ ಪತ್ರಿಕೋದ್ಯೋಗ ಮಾತ್ರವೇ ಅಲ್ಲ ಮೂಲತಃ ಭಾರತೀಯ ಪತ್ರಿಕೋದ್ಯೋಗ ಕ್ಷೇತ್ರವೇ ಅಪಾಯದಲ್ಲಿರುವುದರ ಕಾರಣಗಳನ್ನು ನೀವು ಪರಾಮರ್ಶಿಸಬಹುದಿತ್ತು ಎಂದು ನಾನು ಆಶಿಸುತ್ತೇನೆ. ಅಂತಿಮ ತೀರ್ಮಾನವನ್ನು ನಮ್ಮ ಗ್ರಹಿಕೆಗೆ ಬಿಟ್ಟಿರುವುದಾಗಿ ನೀವು ಹೇಳಿರುವುದರಿಂದ ನಾನು ಮೂರು ಕಾರಣಗಳನ್ನು ನಿಮ್ಮ ಅವಗಾಹನೆಗೆ ಸಲ್ಲಿಸಬಹುದೇ?

ಮೊದಲನೆಯದಾಗಿ ಮಾಧ್ಯಮಗಳ ಒಡೆತನದ ರಚನಾತ್ಮಕ ವಾಸ್ತವತೆಗಳು ಕೆಲವೇ ಲಾಭಕೋರ ಕಾರ್ಪೋರೇಟ್ ಸಮೂಹಗಳ ಪಾಲಾಗಿವೆ. ಎರಡನೆಯದಾಗಿ ಪ್ರಭುತ್ವದ ಕ್ರೂರ ದಮನಕಾರಿ ಧೋರಣೆ ಮತ್ತು ಸ್ವತಂತ್ರ ಪತ್ರಿಕೋದ್ಯೋಗ ಮೇಲೆ ಪ್ರಭುತ್ವ ನಡೆಸುತ್ತಿರುವ ಆಕ್ರಮಣ. ಮೂರನೆಯದಾಗಿ ಕೊಳೆತುಹೋಗುತ್ತಿರುವ ನೈತಿಕ ಮೌಲ್ಯಗಳ ನೆಲೆಗಳು ಮತ್ತು ಹಿರಿಯ ವೃತ್ತಿಪರ ಪತ್ರಿಕೋದ್ಯೋಗಿಗಳಲ್ಲಿ ಅಧಿಕಾರಸ್ಥರ ಖಾಸಗಿ ಶೀಘ್ರಲಿಪಿಕಾರರಾಗಿ ದುಡಿಯುವ ಹಂಬಲ. ಕೌಶಲವನ್ನು ಬೋಧಿಸುವವನಾಗಿ ನಾನು ನನ್ನ ವಿದ್ಯಾರ್ಥಿಗಳಲ್ಲಿ, ಪತ್ರಿಕೋದ್ಯೋಗಿಗಳಾಗುವುದು ಅಥವಾ ಶೀಘ್ರಲಿಪಿಕಾರರಾಗುವುದು, ಈ ಎರಡು ಚಿಂತನಾವಾಹಿನಿಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳುತ್ತೇನೆ.

ಸಿದ್ದಿಕ್ ಕಪ್ಪನ್

ಭಾರತದ ಮಾಧ್ಯಮ ವಲಯ ಸ್ವತಂತ್ರವಾಗಿದೆ ಆದರೆ ಲಾಭಕೋರತನದಿಂದ ಬಂಧಿಯಾಗಿದೆ ಎಂದು ಮೂವತ್ತು ವರ್ಷಗಳ ಕಾಲ ನಾನು ಪ್ರತಿಪಾದಿಸಿಕೊಂಡು ಬಂದಿದ್ದೆ. ಇಂದು ಈ ವಲಯ ಲಾಭಕೋರತನದ ಪಂಜರದಲ್ಲಿ ಸಿಲುಕಿದೆ, ಈ ವಲಯದಲ್ಲಿ ಕಂಡುಬರುವ ಕೆಲವೇ ಸ್ವತಂತ್ರ ದನಿಗಳು ರಾಜಕೀಯ ಶರಪಂಜರದಲ್ಲಿ ಸಿಲುಕಿಸಿಕೊಂಡಿವೆ. ಇಲ್ಲಿ ಗಮನಿಸಬೇಕಾದ ಕುತೂಹಲಕಾರಿ ಸಂಗತಿ ಎಂದರೆ ಮಾಧ್ಯಮಕ್ಕೆ ಒದಗಿರುವ ದುರವಸ್ಥೆಯನ್ನು ಕುರಿತಂತೆ ಈ ವಲಯದಲ್ಲೇ ಚರ್ಚೆಯಾಗುತ್ತಿಲ್ಲ. ಪತ್ರಿಕೋದ್ಯೋಗಕ್ಕೆ ಸಂಬಂಧಿಸಿದ ಭಾರತದ ನಾಗರಿಕ ಸಮಾಜದ ನಾಲ್ವರು ಬುದ್ಧಿಜೀವಿಗಳು ಕಳೆದ ಹಲವು ವರ್ಷಗಳಲ್ಲಿ ಹತ್ಯೆಗೀಡಾಗಿದ್ದಾರೆ. ಇವರ ಪೈಕಿ ಖ್ಯಾತ ಪತ್ರಿಕೋದ್ಯೋಗಿ ಗೌರಿ ಲಂಕೇಶ್ ಪೂರ್ಣ ಪ್ರಮಾಣದ ಮಾಧ್ಯಮ ಪ್ರತಿನಿಧಿಯಾಗಿದ್ದರು. (ರೈಸಿಂಗ್ ಕಾಶ್ಮೀರ್ ಪತ್ರಿಕೆಯ ಶುಜಾತ್ ಬುಖಾರಿ ಸಹ ಬಂದೂಕುಧಾರಿಗಳ ದಾಳಿಗೆ ಬಲಿಯಾಗಿದ್ದರು.) ಉಳಿದ ಮೂವರೂ ಸಹ ಲೇಖಕರು ಮತ್ತು ಮಾಧ್ಯಮ ಅಂಕಣಕಾರರಾಗಿದ್ದರು. ನರೇಂದ್ರ ದಾಭೋಲ್ಕರ್ ಮೂಢ ನಂಬಿಕೆಗಳ ವಿರುದ್ಧ ಸೆಣಸುವುದಕ್ಕಾಗಿಯೇ ಒಂದು ಪತ್ರಿಕೆಯನ್ನು ಆರಂಭಿಸಿ 25 ವರ್ಷಗಳ ಕಾಲ ನಿರ್ವಹಿಸಿದ್ದರು. ಗೋವಿಂದ್ ಪನ್ಸಾರೆ ಮತ್ತು ಎಂ ಎಂ ಕಲಬುರ್ಗಿ ಖ್ಯಾತ ಲೇಖಕರು, ಅಂಕಣಕಾರರೂ ಆಗಿದ್ದರು.

ಈ ನಾಲ್ವರಲ್ಲೂ ಒಂದು ಸಮಾನ ಎಳೆ ಕಾಣಬಹುದಿತ್ತು. ಇವರೆಲ್ಲರೂ ವಿಚಾರವಾದಿಗಳಾಗಿದ್ದು ಭಾರತೀಯ ಭಾಷೆಗಳಲ್ಲಿ ಬರೆಯುತ್ತಿದ್ದುದು ಅವರ ಹಂತಕರಿಗೆ ಹೆಚ್ಚು ಅಪಾಯಕಾರಿಯಾಗಿ ಕಂಡಿತ್ತು. ಈ ನಾಲ್ಕೂ ಜನರ ಹತ್ಯೆ ಮಾಡಿದವರು, ಆಳುವ ವ್ಯವಸ್ಥೆಯ ಕೃಪಾಕಟಾಕ್ಷ ಇರುವಂತಹ ಸರ್ಕಾರೇತರ ವ್ಯಕ್ತಿಗಳು. ಈ ಹಂತಕರ ಉದ್ದೇಶಿತರ ಆಯ್ಕೆ ಪಟ್ಟಿಯಲ್ಲಿ ಇನ್ನೂ ಹಲವಾರು ಸ್ವತಂತ್ರ ಪತ್ರಿಕೋದ್ಯೋಗಿಗಳೂ ಇದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಪತ್ರಿಕಾ ಸ್ವಾತಂತ್ರ್ಯ ಪಾತಾಳಕ್ಕೆ ತಲುಪಿದೆ ಎಂಬ ವಾಸ್ತವವನ್ನು ಅರಿತು ನ್ಯಾಯಾಂಗವು ಕ್ರಿಯಾಶೀಲವಾದರೆ ಬಹುಶಃ ಪತ್ರಿಕೋದ್ಯೋಗದ ದುರವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗಬಹುದು. ಪೆಗಾಸಸ್ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ನೀವೇ ಗಮನಿಸಿರುವಂತೆ, ಆಧುನಿಕ ತಂತ್ರಜ್ಞಾನ ಆಧಾರಿತ ಪ್ರಭುತ್ವಕ್ಕೆ ಇರುವ ದಮನಿಸುವ ಸಾಮರ್ಥ್ಯ ತುರ್ತುಪರಿಸ್ಥಿತಿಯ ಭಯಾನಕ ಹೆಜ್ಜೆಗಳನ್ನೂ ಮೀರಿಸುವಂತಿದೆ. 2020ರಲ್ಲಿ ಫ್ರಾನ್ಸ್‌ನ ರಿಪೋರ್ಟರ್ಸ್‌ ಸಂಸ್ಥೆ ಸಿದ್ಧಪಡಿಸಿದ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 142ನೆಯ ಸ್ಥಾನಕ್ಕೆ ಕುಸಿದಿದೆ.

ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಈ ಸರ್ಕಾರದ ಧೋರಣೆಯ ಬಗ್ಗೆ ನನ್ನದೇ ಆದ ನೇರ ಅನುಭವವನ್ನು ಹಂಚಿಕೊಳ್ಳಲಿಚ್ಚಿಸುತ್ತೇನೆ. 142ನೇ ಸ್ಥಾನಕ್ಕೆ ಕುಸಿದಿರುವುದನ್ನು ಗಮನಿಸಿ ಆಕ್ರೋಶಭರಿತರಾದ ಕೇಂದ್ರ ಸಂಪುಟ ಕಾರ್ಯದರ್ಶಿಯವರು ಕೂಡಲೇ ಸೂಚ್ಯಂಕ ನಿರ್ವಹಣಾ ಸಮಿತಿಯೊಂದನ್ನು ರಚಿಸುವುದರ ಮೂಲಕ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ವಿಚಾರದಲ್ಲಿ ಸ್ಪಷ್ಟನೆ ನೀಡಲು ಆದೇಶಿಸಿದ್ದಾರೆ. ಈ ಸಮಿತಿಗೆ ನನ್ನನ್ನೂ ಆಹ್ವಾನಿಸಲಾಗಿ, ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸಂಸ್ಥೆಯ ವರದಿಯನ್ನು ನಿರಾಕರಿಸದೆ, ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ವಸ್ತುಸ್ಥಿತಿಯ ಮೇಲೆ ಗಮನ ನೀಡುವುದಾದರೆ ಒಪ್ಪಿಕೊಳ್ಳುವುದಾಗಿ ಹೇಳಿದ್ದೆ.

13 ಸದಸ್ಯರ ಈ ಸಮಿತಿಯಲ್ಲಿ 11 ಅಧಿಕಾರಿಗಳು ಮತ್ತು ಸರ್ಕಾರಿ ನಿಯಂತ್ರಿತ ಸಂಸ್ಥೆಗಳ ಸಂಶೋಧಕರೂ ಇದ್ದಾರೆ. ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಪರಾಮರ್ಶಿಸಬೇಕಾದ ಸಮಿತಿಯಲ್ಲಿ ಕೇವಲ ಇಬ್ಬರು ಪತ್ರಿಕೋದ್ಯೋಗಿಗಳಿದ್ದಾರೆ ! ಅವರಲ್ಲಿ ಒಬ್ಬರು ಹಾಜರಿದ್ದ ಒಂದೆರಡು ಸಭೆಗಳಲ್ಲಿ ತುಟಿ ಬಿಚ್ಚಲಿಲ್ಲ. ಈ ಸಭೆಗಳು ಶಾಂತಿಯುತವಾಗಿ ನಡೆದವು. ಕೆಲವು ಪ್ರಶ್ನೆಗಳನ್ನು ಎತ್ತುತ್ತಾ ಸಭೆಯಲ್ಲಿ ಮಾತನಾಡಿದವನು ನಾನೊಬ್ಬನೇ ಆಗಿದ್ದೆ. ನಂತರ ಒಂದು ಕರಡು ವರದಿಯನ್ನು ಸಿದ್ಧಪಡಿಸಲಾಗಿತ್ತಾದರೂ ಅಲ್ಲಿ ಕರಡು ಎಂಬ ಪದವೇ ಅಪ್ತಸ್ತುತವಾದಂತಿತ್ತು. ಈ ಸಭೆಗಳಲ್ಲಿ ಚರ್ಚೆಗೊಳಗಾದ ಹಲವಾರು ಗಂಭೀರ ವಿಚಾರಗಳನ್ನು ವರದಿಯಲ್ಲಿ ಪ್ರಸ್ತಾಪಿಸಿಯೇ ಇಲ್ಲ. ಹಾಗಾಗಿ ನಾನು ವೈಯಕ್ತಿಕವಾಗಿ ನನ್ನದೇ ಆದ ಭಿನ್ನಾಭಿಪ್ರಾಯಗಳನ್ನೊಳಗೊಂಡ ಟಿಪ್ಪಣಿಯನ್ನು ಸಮಿತಿಗೆ ಸಲ್ಲಿಸಿ ಅಂತಿಮ ವರದಿಯಲ್ಲಿ ಸೇರಿಸಲು ಕೋರಿದ್ದೆ.

ಶುಜಾತ್ ಬುಖಾರಿ

ಆದರೆ ಒಮ್ಮೆಲೇ ಈ ವರದಿ, ಸಮಿತಿ ಮತ್ತು ಎಲ್ಲವೂ ಮರೆಯಾಗಿಬಿಟ್ಟವು. ದೇಶದ ಇಬ್ಬರು ಅಧಿಕಾರಯುತರಿಗೆ ನೇರವಾಗಿ ವರದಿ ಮಾಡುವಂತಹ, ದೇಶದ ಅತ್ಯುನ್ನತ ಅಧಿಕಾರಿಯ ಆದೇಶದ ಮೇರೆಗೆ ಸ್ಥಾಪಿಸಲ್ಪಟ್ಟ ಸಮಿತಿ ಏಕಾಏಕಿ ಕಣ್ಮರೆಯಾಗಿಬಿಟ್ಟಿತು. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಯಿಂದಲೂ ಪತ್ರಿಕಾ ಸ್ವಾತಂತ್ರ್ಯ ಕುರಿತ ಈ ವರದಿಯ ಮೂಲವನ್ನು ಶೋಧಿಸಲಾಗಿಲ್ಲ. ಈ ಕರಡು ವರದಿಯ ಒಂದು ಪ್ರತಿ ನನ್ನ ಬಳಿಯೂ ಲಭ್ಯವಿಲ್ಲ. ಈ ಸಮಿತಿಯ ಮೂಲ ಉದ್ದೇಶ ತನಿಖಾತ್ಮಕ ಪತ್ರಿಕೋದ್ಯೋಗ ಆಗಿರಲಿಲ್ಲ, ಬದಲಾಗಿ ಪತ್ರಿಕೋದ್ಯೋಗವನ್ನು ಶೋಧಿಸುವುದಾಗಿತ್ತು. ನಿಮ್ಮ ಉಪನ್ಯಾಸದಲ್ಲಿ ನೀವು ಭಾವುಕರಾಗಿ ಸ್ಮರಿಸಿದ ತನಿಖಾತ್ಮಕ ವರದಿಗಾರಿಕೆಯನ್ನು ಮುಂದುವರೆಸಲು ಇಂದಿಗೂ ಪತ್ರಿಕೋದ್ಯಮದಲ್ಲಿ ಹಲವರು ತಯಾರಿದ್ದಾರೆ. ಹಗರಣಗಳನ್ನು ಶೋಧಿಸಲು, ಸರ್ಕಾರದಲ್ಲಿ ಉನ್ನತ ಮಟ್ಟದ ಭ್ರಷ್ಟಾಚಾರಗಳನ್ನು ಹೊರಗೆಳೆಯಲು ಉತ್ಸುಕರಾದವರಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುವ ಬಹುಪಾಲು ಪತ್ರಕರ್ತರು ಮೊದಲನೆಯ ತಡೆಗೋಡೆಯಲ್ಲೇ ಮುಗ್ಗರಿಸುತ್ತಾರೆ. ಈ ತಡೆಗೋಡೆ ಯಾವುದೆಂದರೆ, ಕಾರ್ಪೋರೇಟ್ ಮಾಧ್ಯಮದ ಒಡೆಯರ ಹಿತಾಸಕ್ತಿಗಳು. ಈ ಮಾಧ್ಯಮದ ಒಡೆಯರು ಸರ್ಕಾರದ ಗುತ್ತಿಗೆಗಳೊಂದಿಗೆ ನಿಕಟ ಸಂಬಂಧ ಹೊಂದಿರುವುದೇ ಅಲ್ಲದೆ ಉನ್ನತ ಮಟ್ಟದ ವ್ಯಕ್ತಿಗಳೊಡನೆ ನಿಕಟ ಸಂಬಂಧ ಹೊಂದಿರುತ್ತಾರೆ.

ಹಣ ಪಡೆದು ಸುದ್ದಿ ಮಾಡುವುದರ ಮೂಲಕ ಬೃಹತ್ ಲಾಭ ಗಳಿಸುತ್ತಿರುವ ದೊಡ್ಡ ಮಾಧ್ಯಮ ಸಮೂಹಗಳು ಹಲವು ಮಾರ್ಗಗಳಲ್ಲಿ ಹಣ ಗಳಿಸುತ್ತಿವೆ. ಸಾರ್ವಜನಿಕ ಒಡೆತನದ ಸಂಪನ್ಮೂಲಗಳನ್ನು ಬಳಸಲು ಪರವಾನಗಿ ಪಡೆಯುವುದು, ಕೋಟ್ಯಂತರ ರೂ ಮೌಲ್ಯದ ಸಂಪನ್ಮೂಲಗಳನ್ನು ಖಾಸಗಿ ಕಾರ್ಪೋರೇಟ್‌ಗಳಿಗೆ ಒಪ್ಪಿಸುವ ಸರ್ಕಾರದ ಖಾಸಗೀಕರಣದ ವಾಹಿನಿಗಳು, ಆಡಳಿತಾರೂಢ ಪಕ್ಷಗಳ ಚುನಾವಣಾ ನಿಧಿಗೆ ಅಪಾರ ಮೊತ್ತವನ್ನು ದೇಣಿಗೆಯನ್ನಾಗಿ ನೀಡುವವರು ಈ ಮಾಧ್ಯಮ ಸಮೂಹಗಳನ್ನು ನಿಯಂತ್ರಿಸುತ್ತಿದ್ದು, ಅಧಿಕಾರಸ್ಥರಾಗಿರುವ ತಮ್ಮ ಸಹವರ್ತಿಗಳ ಹಿತಾಸಕ್ತಿಗೆ ವಿರುದ್ಧವಾಗಿ ವರದಿ ಮಾಡಲು ಪತ್ರಕರ್ತರಿಗೆ ಅವಕಾಶವನ್ನೇ ನೀಡುವುದಿಲ್ಲ. ಒಂದು ಕಾಲದಲ್ಲಿ ಭಾರತದ ಹೆಮ್ಮೆ ಎನಿಸಿಕೊಂಡಿದ್ದ ವೃತ್ತಿಯನ್ನು ಧನಾರ್ಜನೆಯ ವಾಹಿನಿಯನ್ನಾಗಿ ಪರಿವರ್ತಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭಕ್ಕೂ ರಿಯಲ್ ಎಸ್ಟೇಟ್ ಉದ್ಯಮಕ್ಕೂ ವ್ಯತ್ಯಾಸವೇ ಇಲ್ಲದಂತೆ ಮಾಡಲಾಗಿದೆ. ಅಧಿಕಾರಸ್ಥರ ಬಗ್ಗೆ ಸತ್ಯ ಹೇಳುವ ಪತ್ರಿಕೋದ್ಯೋಗ ಇವರಿಗೆ ಅಪಥ್ಯವಾಗುತ್ತದೆ.

ಪತ್ರಿಕೋದ್ಯೋಗ ಮತ್ತು ಪತ್ರಕರ್ತರ ಅತ್ಯಾವಶ್ಯಕತೆಯನ್ನು, ಈ ದೇಶದ ಸಾರ್ವಜನಿಕರು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಬಯಸಿದ್ದಷ್ಟು ಮತ್ತಾವುದೇ ಸಂದರ್ಭದಲ್ಲಿ ಬಯಸಿರಲಿಕ್ಕಿಲ್ಲ ಎಂಬ ನನ್ನ ಮಾತುಗಳನ್ನು ನೀವು ಸಮ್ಮತಿಸುವಿರಿ ಎಂದು ಭಾವಿಸುತ್ತೇನೆ. ಸಾರ್ವಜನಿಕರ ಈ ಹತಾಶ ಅವಶ್ಯಕತೆಗೆ ಪ್ರಬಲ ಮಾಧ್ಯಮ ಸಮೂಹಗಳು ಸ್ಪಂದಿಸಿದುದಾದರೂ ಹೇಗೆ? 2000 ದಿಂದ 2500 ಪತ್ರಕರ್ತರನ್ನು ವಜಾಗೊಳಿಸುವ ಮೂಲಕವೇ? ಇನ್ನೂ ಹೆಚ್ಚಿನ ಸಂಖ್ಯೆಯ ಪತ್ರಕರ್ತರಲ್ಲದ ಮಾಧ್ಯಮ ಕ್ಷೇತ್ರದ ನೌಕರರನ್ನು ವಜಾಗೊಳಿಸುವ ಮೂಲಕವೇ? ಸಮಾಜ ಸೇವೆಯ ಆದರ್ಶ ಸಂಪೂರ್ಣ ಮಾಯವಾಗಿದೆ. 2020ರಲ್ಲಿ ಸಂಭವಿಸಿದ ಆರ್ಥಿಕ ಕುಸಿತದ ಪರಿಣಾಮ ಮಾಧ್ಯಮ ಸಮೂಹಗಳ ಸರ್ಕಾರಿ ಜಾಹೀರಾತುಗಳ ಅವಲಂಬನೆಯನ್ನು ಇನ್ನೂ ಹೆಚ್ಚಿಸಿದೆ. ಹಾಗಾಗಿ ಇಂದು ಬಹುತೇಕ ಮಾಧ್ಯಮಗಳು, ಕೋವಿಡ್ 19 ಸಂದರ್ಭದ ದುರವಸ್ಥೆ ಮತ್ತು ಕೆಟ್ಟ ನಿರ್ವಹಣೆಯ ತಮ್ಮದೇ ವರದಿಗಳನ್ನೂ ಮರೆತು, ಕೋವಿಡ್ 19 ಸಾಂಕ್ರಾಮಿಕವನ್ನು ನಿಯಂತ್ರಿಸುವಲ್ಲಿ ಸರ್ಕಾರ ಮಹತ್ತರ ಸಾಧನೆ ಮಾಡಿದೆ, ಎಲ್ಲ ವಿಚಾರಗಳಲ್ಲೂ ಸರ್ಕಾರ ಜಗತ್ತಿಗೆ ಮಾದರಿಯಾಗಿದೆ ಎಂದು ತುತ್ತೂರಿ ಊದುತ್ತಿವೆ.

ಈ ಸಂದರ್ಭದಲ್ಲೇ ಅಪಾರದರ್ಶಕವಾದ ಪಿಎಂ ಕೇರ್ಸ್ ಫಂಡ್ ಸ್ಥಾಪಿಸುವುದನ್ನು ಕಂಡಿದ್ದೇವೆ. ಇದರ ಹೆಸರಿನಲ್ಲೇ ಪ್ರಧಾನ ಮಂತ್ರಿ ಎಂದಿದೆ. ವೆಬ್ ತಾಣದಲ್ಲಿ ಅವರ ಚಿತ್ರವನ್ನೂ ಬಿಂಬಿಸುತ್ತದೆ. ಆದರೂ ಇದು ಸಾರ್ವಜನಿಕ ಪ್ರಾಧಿಕಾರ ಅಲ್ಲ ಅಥವಾ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೊಳಪಡುವುದಿಲ್ಲ ಎಂದು ಸರ್ಕಾರ ಹೇಳುತ್ತದೆ. ಇದು ಭಾರತ ಸರ್ಕಾರಕ್ಕೆ ಸೇರಿದ ನಿಧಿ ಅಲ್ಲ ಎಂದೇ ಹೇಳಲಾಗುತ್ತಿದೆ. ಯಾವುದೇ ಸರ್ಕಾರಿ ಸಂಸ್ಥೆಗೆ ಸಾಂಸ್ಥಿಕ ಲೆಕ್ಕಪತ್ರಗಳನ್ನು ಸಲ್ಲಿಸಬೇಕಿಲ್ಲ ಎಂದೂ ಹೇಳಲಾಗಿದೆ.

ಇದೇ ಅವಧಿಯಲ್ಲೇ, ಸ್ವತಂತ್ರ ಭಾರತದ ಇತಿಹಾಸದಲ್ಲೇ ದಮನಕಾರಿಯಾದ ಕಾರ್ಮಿಕ ಶಾಸನಗಳನ್ನು ಮೊದಲು ರಾಜ್ಯಗಳಲ್ಲಿ ಸುಗ್ರೀವಾಜ್ಞೆಗಳ ಮೂಲಕ ಮತ್ತು ಕೇಂದ್ರದಲ್ಲಿ ಸಂಹಿತೆಗಳ ಮೂಲಕ ಜಾರಿಗೊಳಿಸಲಾಗಿದೆ. ಜಾರಿಗೊಳಿಸಲಾಗಿರುವ ಈ ಸುಗ್ರೀವಾಜ್ಞೆಗಳು ಭಾರತದ ದುಡಿಯುವ ವರ್ಗಗಳನ್ನು ಒಂದು ಶತಮಾನದಷ್ಟು ಹಿಂದಕ್ಕೆ ಕರೆದೊಯ್ದಿದೆ. ಕಾರ್ಮಿಕ ಹಕ್ಕುಗಳಲ್ಲಿ ಪ್ರಮಖ ಮಾನದಂಡ ಆಗಿರುವ ಎಂಟು ಗಂಟೆಗಳ ದುಡಿಮೆಯ ನಿಯಮವನ್ನೇ ಇಲ್ಲವಾಗಿಸಲಾಗಿದೆ. ನೂರಾರು ಕಾರ್ಮಿಕರಿಗೆ ಆಶ್ರಯ ನೀಡುವ ಕಾರ್ಪೋರೇಟ್ ಒಡೆತನದ ಮಾಧ್ಯಮ ಸಮೂಹಗಳಲ್ಲಿ ಈ ಕುರಿತು ತನಿಖೆ ನಡೆಸುವ ಅವಕಾಶಗಳೂ ಸಹ ಇರುವುದಿಲ್ಲ. ಈ ಸವಾಲಿನ ಕೆಲಸವನ್ನು ಮಾಡಲು ಮುಂದಾಗಬಹುದಾದ ಅನೇಕ ಪತ್ರಕರ್ತರು ಮಾಲೀಕರ ಮರ್ಜಿಯಿಂದ ವಜಾಗೊಳಿಸಲ್ಪಟ್ಟು ಈಗ ನಿರುದ್ಯೋಗಿಗಳಾಗಿದ್ದಾರೆ.

ಸನ್ಮಾನ್ಯರೇ, ನನ್ನನ್ನು ಬಾಧಿಸುವ ಮತ್ತೊಂದು ಸಂಗತಿ ಎಂದರೆ, ಸರ್ಕಾರದೊಳಗಿನ ಭ್ರಷ್ಟಾಚಾರವಾಗಲೀ, ಪತ್ರಕರ್ತರ ಸಾಮೂಹಿಕ ವಜಾಗೊಳಿಸುವಿಕೆಯಾಗಲೀ, ಕಾರ್ಮಿಕ ಹಕ್ಕುಗಳನ್ನು ದಮನಿಸುವ ಬಗ್ಗೆಯಾಗಲೀ, ಯಾವುದೇ ಪಾರದರ್ಶಕ ಪರಿಶೋಧನೆ ಇಲ್ಲದೆ ಪ್ರಧಾನಮಂತ್ರಿಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಿಧಿ ಸಂಗ್ರಹಿಸುವ ನೀತಿಯಾಗಲೀ, ಈ ಅಪಾಯಗಳನ್ನು ತಪ್ಪಿಸುವ ನಿಟ್ಟಿನಲ್ಲಿ ನ್ಯಾಯಾಂಗವು ಒಂದು ಹೆಜ್ಜೆಯನ್ನೂ ಮುಂದಿಟ್ಟಿಲ್ಲ. ಮಾಧ್ಯಮಗಳಲ್ಲಿ ಅಂತರ್ಗತವಾಗಿರಬಹುದಾದ ರಚನಾತ್ಮಕ ಲೋಪಗಳು ಅವುಗಳನ್ನು ಈ ರಾಜೀ ಸೂತ್ರಕ್ಕೆ ಕಟ್ಟಿಹಾಕಿದೆ ಮತ್ತು ಹಣ ನೀಡುವವರಿಗೆ ಸ್ನೇಹಹಸ್ತ ಚಾಚುವ ವಿದ್ಯಮಾನಕ್ಕೆ ಕಾರಣವಾಗಿದೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಈ ಕೆಲವು ವಿಚಾರಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡುವುದರಿಂದ ಪತ್ರಕರ್ತರು ನೆಮ್ಮದಿಯಿಂದ ಉಸಿರಾಡಲು ಸಾಧ್ಯ ಅಲ್ಲವೇ?

ಸ್ವತಂತ್ರ ಮಾಧ್ಯಮಗಳ ಮೇಲೆ ನಡೆದ ಸರ್ಕಾರಿ ಆಕ್ರಮಣಗಳು, ಬೆದರಿಕೆಯ ತಂತ್ರಗಳು, ಅವುಗಳ ಒಡೆಯರನ್ನು ಅಪಮಾನಗೊಳಿಸುವ ಪ್ರಯತ್ನಗಳು, ಪತ್ರಕರ್ತರು ಅಕ್ರಮ ಹಣ ಸಾಗಾಣಿಕೆದಾರರು ಎಂಬ ಆರೋಪಗಳು ಮತ್ತು ಈ ಪತ್ರಿಕೋದ್ಯೋಗಿಗಳ, ಪತ್ರಕರ್ತರಿಗೆ ನೀಡಲಾಗುತ್ತಿರುವ ಚಿತ್ರಹಿಂಸೆ ಇವೆಲ್ಲವೂ ದಿನೇ ದಿನೇ ತೀವ್ರವಾಗುತ್ತಿದೆ. ನ್ಯಾಯಾಲಯದಲ್ಲಿ ಈ ಮೊಕದ್ದಮೆಗಳು ವಿಫಲವಾಗುತ್ತವೆ ಎನ್ನುವುದು ಶತಃಸಿದ್ಧ ಎನ್ನುವ ವಾಸ್ತವವನ್ನು, ಸರ್ಕಾರದ ಆದೇಶದ ಮೇರೆಗೆ ಈ ಹೆಜ್ಜೆ ಇಟ್ಟಿರುವ ಸಂಸ್ಥೆಗಳಿಗೂ ತಿಳಿದಿದೆ. ಆದರೂ ಈ ಪ್ರಕ್ರಿಯೆಯೇ ಒಂದು ಶಿಕ್ಷೆ ಎನ್ನುವ ತತ್ವವನ್ನಾಧರಿಸಿ ಈ ಸಂಸ್ಥೆಗಳು ನಡೆದಿವೆ. ಈ ಮೊಕದ್ದಮೆಗಳು ಹಲವು ವರ್ಷಗಳ ಕಾಲ ನಡೆಯುತ್ತವೆ, ವಕೀಲರ ಶುಲ್ಕದ ರೂಪದಲ್ಲಿ ಲಕ್ಷಾಂತರ ರೂ ಖರ್ಚಾಗುತ್ತದೆ. ಕೊನೆಗೆ ಭಾರತದ ಮಾಧ್ಯಮ ವಲಯದಲ್ಲಿ ಇರುವ ಕೆಲವೇ ಸ್ವತಂತ್ರ ದನಿಗಳು ದಿವಾಳಿಯಾಗುತ್ತವೆ. ಭಾರತದ ದೊಡ್ಡ ಮಾಧ್ಯಮಗಳ ಪೈಕಿ ಅಪರೂಪಕ್ಕೆ ಸ್ವತಂತ್ರ ನಿಲುವು ಹೊಂದಿದ್ದ ದೈನಿಕ್ ಭಾಸ್ಕರ್ ಸಮೂಹದ ಮೇಲೆ ಸಹ, ಭೂಗತ ಲೋಕದ ಮೇಲೆ ನಡೆಸುವಂತಹ ಆಕ್ರಮಣ ನಡೆದಿದೆ. ಭಯಭೀತರಾಗಿರುವ ಇತರ ಮಾಧ್ಯಮಗಳಲ್ಲಿ ಈ ಕುರಿತ ಚರ್ಚೆಯೂ ಸಹ ನಡೆಯಲಿಲ್ಲ.

ಸನ್ಮಾನ್ಯರೇ, ಬಹುಶಃ ಈ ಪ್ರಜ್ಞಾಪೂರ್ವಕ ಕಾನೂನು ದುರ್ಬಳಕೆಯ ಬಗ್ಗೆ ನ್ಯಾಯಾಂಗ ಏನಾದರೂ ಮಾಡಬಹುದಲ್ಲವೇ ?

ಈಗ ಹಿಂಪಡೆಯಲಾಗಿರುವ ಕೃಷಿ ಕಾನೂನುಗಳ ಬಗ್ಗೆಯೂ ನ್ಯಾಯಾಂಗ ತನ್ನ ಭಿನ್ನ ನಿಲುವನ್ನು ಪ್ರದರ್ಶಿಸಲಿಲ್ಲ. ನಾನು ಕಾನೂನು ವ್ಯಾಸಂಗ ಮಾಡಿಲ್ಲ ಆದರೆ ಇಂತಹ ವಿವಾದಾಸ್ಪದ ಶಾಸನಗಳ ಸಾಂವಿಧಾನಿಕ ಔಚಿತ್ಯ ಮತ್ತು ಸಿಂಧುತ್ವವನ್ನು ಪರಾಮರ್ಶಿಸುವುದು ಅತ್ಯುನ್ನತ ಸಾಂವಿಧಾನಿಕ ನ್ಯಾಯಾಲಯದ ಕರ್ತವ್ಯ ಎಂದು ಭಾವಿಸುತ್ತೇನೆ. ಆದರೆ ನ್ಯಾಯಾಲಯವು ಒಂದು ಸಮಿತಿಯನ್ನು ರಚಿಸಿ, ಕೃಷಿ ಕಾನೂನುಗಳ ಬಿಕ್ಕಟ್ಟು ಪರಿಹರಿಸಲು ವರದಿ ನೀಡುವಂತೆ ಕೊರಿದೆ. ಈಗ ವರದಿ ಮತ್ತು ಸಮಿತಿ ಎರಡೂ ಸಹ ನೆನೆಗುದಿಗೆ ಬಿದ್ದಿವೆ. ಇದರೊಂದಿಗೆ ಸಮಿತಿಯಿಂದ ಅವಸಾನವಾಗುವ ತೀರ್ಮಾನವನ್ನು ಸಮಿತಿಯೇ ಅವಸಾನ ಹೊಂದುವ ಮೂಲಕ ಪರಿಸಮಾಪ್ತಿಗೊಳಿಸಲಾಗಿದೆ.

ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಕೃಷಿ ಕಾನೂನುಗಳ ಸಂದರ್ಭದಲ್ಲಿ ಕಂಡುಬಂದ ಹಿತಾಸಕ್ತಿ ಸಂಘರ್ಷಗಳು ಬೃಹತ್ತಾಗಿದೆ. ಈ ಕಾನೂನುಗಳಿಂದ ಅತಿ ಹೆಚ್ಚು ಲಾಭ ಗಳಿಸಬಹುದಾದ ವ್ಯಕ್ತಿಗತ ಕಾರ್ಪೋರೇಟ್ ನಾಯಕರೇ ಇಂದು ಮಾಧ್ಯಮದ ಒಡೆತನವನ್ನೂ ಹೊಂದಿದ್ದಾರೆ. ತಮ್ಮ ಒಡೆತನ ಇಲ್ಲದ ಮಾಧ್ಯಮಗಳಲ್ಲಿ ಇವರೇ ಅತಿ ದೊಡ್ಡ ಜಾಹೀರಾತುದಾರರಾಗಿರುತ್ತಾರೆ. ಹಾಗಾಗಿ ಮುಖ್ಯವಾಹಿನಿಯ ಮಾಧ್ಯಮಗಳ ಸಂಪಾದಕೀಯಗಳಲ್ಲಿ ಕೃಷಿಕಾನೂನುಗಳನ್ನು ಸಮರ್ಥಿಸುವ ಧ್ವನಿಯೇ ಹೆಚ್ಚಾಗಿತ್ತು.

ರೈತರು ತಮ್ಮ ಪ್ರತಿಯೊಂದು ಘೋಷಣೆಯಲ್ಲೂ ಬಿಂಬಿಸಿದಂತೆ, ಇಬ್ಬರು ಕಾರ್ಪೋರೇಟ್ ದಿಗ್ಗಜರ ಒಟ್ಟು ಸಂಪತ್ತಿನ ಪ್ರಮಾಣ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ನಿವ್ವಳ ಸಂಪತ್ತಿಗಿಂತಲೂ ಹೆಚ್ಚಾಗಿದೆ. ಈ ಕಾರ್ಪೋರೇಟ್ ದಿಗ್ಗಜರ ಹೆಸರುಗಳನ್ನು ಓದುಗರಿಗೆ, ವೀಕ್ಷಕರಿಗೆ ಯಾವುದಾದರೂ ಮಾಧ್ಯಮಗಳು ತಿಳಿಸಿವೆಯೇ? ಫೋರ್ಬ್ಸ್ ಪತ್ರಿಕೆಯ ವರದಿಯ ಅನುಸಾರ ಇವರಲ್ಲಿ ಒಬ್ಬರು ಪಂಜಾಬಿನ ರಾಜ್ಯ ಜಿಡಿಪಿಗಿಂತಲೂ ಹೆಚ್ಚಿನ ಸಂಪತ್ತನ್ನು ವ್ಯಕ್ತಿಗತವಾಗಿಯೇ ಹೊಂದಿದ್ದಾರೆ ಎನ್ನುವುದನ್ನು ತಿಳಿಸಿವೆಯೇ? ಈ ಮಾಹಿತಿಯನ್ನು ಓದುಗರಿಗೆ, ವೀಕ್ಷಕರಿಗೆ ನೀಡಿದ್ದಲ್ಲಿ ಸಾರ್ವಜನಿಕರಲ್ಲಿ ಒಂದು ಅಭಿಪ್ರಾಯ ಮೂಡುವ ಸಾಧ್ಯತೆಗಳಿದ್ದವು.

ಕೆಲವೇ ಕೆಲವು ಪತ್ರಕರ್ತರು, ಕೆಲವೇ ಮಾಧ್ಯಮ ವಾಹಿನಿಗಳ ಮೂಲಕ, ನೀವು ನಿಮ್ಮ ಉಪನ್ಯಾಸದಲ್ಲಿ ಅಪೇಕ್ಷಿಸಿದಂತಹ ತನಿಖಾತ್ಮಕ ಪತ್ರಿಕೋದ್ಯೋಗವನ್ನು ಮುಂದುವರೆಸಲು ಸಜ್ಜಾಗಿದ್ದಾರೆ. ಮನುಷ್ಯನ ಜೀವನ ಮತ್ತು ಜೀವನೋಪಾಯದ ಆರ್ಥಿಕ ಸಮಸ್ಯೆಗಳನ್ನು ಶೋಧಿಸಲು, ಕೋಟ್ಯಂತರ ಸಂಖ್ಯೆಯ ಭಾರತದ ಸಾಮಾನ್ಯ ಪ್ರಜೆಗಳ ಸಾಮಾಜಿಕ ಮತ್ತು ಆರ್ಥಿಕ ದುಸ್ಥಿತಿ, ದುರವಸ್ಥೆಯನ್ನು ಶೋಧಿಸಲು ಇನ್ನೂ ಕಡಿಮೆ ಸಂಖ್ಯೆಯ ಪತ್ರಕರ್ತರು ಸಿದ್ಧವಾಗಿದ್ದಾರೆ. ಇದೇ ಹಾದಿಯಲ್ಲೇ 41 ವರ್ಷಗಳ ಸುದೀರ್ಘ ಪಯಣದ ಅನುಭವದ ಹಿನ್ನೆಲೆಯಲ್ಲಿ ಈ ಮಾತುಗಳನ್ನು ಹೇಳುತ್ತಿದ್ದೇನೆ.

ಇನ್ನು ಕೆಲವರು ಮಾನವ ಸಮಾಜದ ಸ್ಥಿತ್ಯಂತರಗಳನ್ನು ಶೋಧಿಸಿ ಅದನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಅವರು ಪತ್ರಕರ್ತರಲ್ಲ. ಈ ಲಾಭರಹಿತ, ನಾಗರಿಕ ಸಮಾಜದ ಸಂಘಟನೆಗಳ ವಿರುದ್ಧ ಭಾರತ ಸರ್ಕಾರ ಸಮರ ಸಾರಿದೆ. ವಿದೇಶಿ ಹಣಕಾಸು ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ರದ್ದುಪಡಿಸಲಾಗಿದೆ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಲೆಕ್ಕಪತ್ರಗಳನ್ನು ಸ್ಥಗಿತಗೊಳಿಸಲಾಗಿದೆ. ಅಕ್ರಮ ಹಣಕಾಸು ವ್ಯವಹಾರದ ಆರೋಪಗಳನ್ನು ಹೊರಿಸಲಾಗಿದೆ. ಈ ಸಂಸ್ಥೆಗಳು ದಿವಾಳಿಯಾಗಿ, ನಾಶವಾಗುವವರೆಗೂ ಈ ಕ್ರಮಗಳು ಮುಂದುವರೆಯುತ್ತವೆ. ವಿಶೇಷವಾಗಿ ಪರಿಸರ ಕಾಳಜಿ ವ್ಯಕ್ತಪಡಿಸುವ, ಹವಾಮಾನ ಬದಲಾವಣೆಯ ಬಗ್ಗೆ ಗಮನ ಹರಿಸುವ, ಬಾಲಕಾರ್ಮಿಕ ಸಮಸ್ಯೆ, ಕೃಷಿ ಮತ್ತು ಮಾನವ ಹಕ್ಕುಗಳ ಬಿಕ್ಕಟ್ಟುಗಳ ಬಗ್ಗೆ ಕ್ರಿಯಾಶೀಲವಾಗಿರುವ ಸಂಸ್ಥೆಗಳು ದಾಳಿಗೊಳಗಾಗಿವೆ.

ಹಾಗಾಗಿ ನಾವು ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ ಸ್ವಾಮಿ. ಮಾಧ್ಯಮಗಳು ಅತ್ಯಂತ ಹೀನಾಯ ಸ್ಥಿತಿಯಲ್ಲಿವೆ. ಇವುಗಳನ್ನು ರಕ್ಷಿಸಬೇಕಾದ ಸಂಸ್ಥೆಗಳೂ ಸಹ ವಿಫಲವಾಗಿವೆ. ನಿಮ್ಮ ಉಪನ್ಯಾಸದಲ್ಲಿ ಕೇಳಿಬಂದ ಸಂಕ್ಷಿಪ್ತವಾದರೂ, ಒಳನೋಟವುಳ್ಳ ಕೆಲವೇ ಮಾತುಗಳು ನನ್ನನ್ನು ಈ ಪತ್ರ ಬರೆಯುವಂತೆ ಪ್ರೇರೇಪಿಸಿವೆ. ನ್ಯಾಯಾಂಗವು ಪರಿಸ್ಥಿತಿಯನ್ನು ಸುಧಾರಿಸಲು ನೆರವಾಗುತ್ತದೆ ಎಂದು ಹೇಳಬಹುದೇ? ಆದರೆ ನ್ಯಾಯಾಂಗವೂ ಸುಧಾರಿಸಬೇಕಿದೆಯೇ? ಎರಡೂ ನಮ್ಮದೇ ಸಂಸ್ಥೆಗಳು. ಒಬ್ಬ ಸಿದ್ದಿಕ್ ಕಪ್ಪನ್ ಸೆರೆಮನೆಯಲ್ಲಿದ್ದಾನೆ ಎಂಬ ಭಾವನೆಯೊಂದಿಗೇ ಈ ಎರಡೂ ಸಂಸ್ಥೆಗಳನ್ನು ನಾವು ಪ್ರತಿನಿತ್ಯವೂ ಪರಾಮರ್ಶಿಸುವಂತಾಗಿದೆ.

ನಿಮ್ಮ ವಿಶ್ವಾಸಿ

ಪಿ ಸಾಯಿನಾಥ್

ಅನುವಾದ: (ನಾ. ದಿವಾಕರ್‌

(ನಾ. ದಿವಾಕರ್‌ರವರು ಜನಪರ ಚಳವಳಿಗಳ ದಿಟ್ಟ ದನಿ. ಮೂಲತಃ ಕೋಲಾರದವರಾಗಿದ್ದು ಸದ್ಯ ಮೈಸೂರಿನಲ್ಲಿ ನೆಲೆಸಿದ್ದಾರೆ. ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು, ಸ್ವಯಂ ನಿವೃತ್ತಿ ಪಡೆದು ಸಂಪೂರ್ಣವಾಗಿ ರೈತ, ಕಾರ್ಮಿಕ, ದಲಿತ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆರ್ಥಿಕ ಹಾಗೂ ರಾಜಕೀಯ ವಿಶ್ಲೇಷಣೆಯಲ್ಲಿ ವಿಶಿಷ್ಟ ಒಳನೋಟಗಳನ್ನು ನೀಡುವ ಇವರು ಸಮರ್ಥ ಅನುವಾದಕರೂ ಹೌದು.)


ಇದನ್ನೂ ಓದಿ: ತ್ರಿಪುರಾ ಹಿಂಸಾಚಾರ ವರದಿ ಮಾಡಿದ ಪತ್ರಕರ್ತೆಯರ ಬಂಧನ: ರಾಹುಲ್ ಗಾಂಧಿ, ಮಾಧ್ಯಮ ಸಂಸ್ಥೆಗಳಿಂದ ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...