ಚಕ್ರತೀರ್ಥನ ಕಾಯಿಲೆ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಷಿಗೂ ಬಡಿದುಕೊಂಡಿದೆಯಂತಲ್ಲಾ. ಈ ಬಿಜೆಪಿಗಳದ್ದು ಅಂಟು ರೋಗ. ಈ ರೋಗದ ವಿಶೇಷ ಏನೆಂದರೆ ಎಲ್ಲವೂ ಒಂದೇ ತರಹ ಮಾತನಾಡುತ್ತವೆ ಮತ್ತು ಆಡಿದ್ದನ್ನು ಮಾಡಲು ಹೋಗುತ್ತವೆ. ಇದಕ್ಕೆ ನೂರಾರು ಉದಾಹರಣೆಗಳಿವೆ. ಈ ಸಾಹಿತ್ಯ ಪರಿಷತ್ ಜೋಷಿಯವರನ್ನೇ ನೋಡಿ; ಈತ ಆಯ್ಕೆಯಾಗಿ ಬಂದಾಗ ಬಡಿದುಕೊಂಡ ರೋಗ ಯಾವುದೆಂದರೆ ಜನರನ್ನು ಶುದ್ಧ ಕನ್ನಡದಲ್ಲಿ ಮಾತನಾಡುವಂತೆ ಮಾಡಬೇಕೆಂಬುದು; ಶುದ್ಧ ಕನ್ನಡ ಅಂದರೆ ಏನು ಎಂಬುದು ಆತನಿಗೇ ಗೊತ್ತಿರಲಿಲ್ಲ. ಹಲವು ಕನ್ನಡಗಳಲ್ಲಿ ಅದ್ಲಿಸಿದಾಗ ಸುಮ್ಮನಾದರು. ಆದರೆ ಕಾಯಿಲೆ ಜನಕ್ಕೆ ಹಲವು ಕಾಯಿಲೆಗಳು ಅಂಟುವುದು ಸಾಮಾನ್ಯ. ಈಗ ಜೋಷಿಗೆ ಪಂಪ ಮಹಾಕವಿಯ ರಸ್ತೆ ಹೆಸರು ಬದಲಿಸುವ ಕಾಯಿಲೆ ಕಾಣಿಸಿಕೊಂಡಿದೆ. ಅದಕ್ಕಾಗಿ ಆತನ ಅಣ್ಣನಂತಿರುವ ಬೊಮ್ಮಾಯಿಗೆ ಪರಮಿಷನ್ ಕೇಳಿದ್ದಾರಂತೆ! ಇಂಗ್ಲಿಷ್ ಭಾಷೆಯನ್ನ ಮಾತನಾಡುವ ಜನಗಳು ತೊಗಟೆಯನ್ನು ಸೊಂಟಕ್ಕೆ ಸುತ್ತಿಕೊಂಡು ನಾಗರಿಕ ಜಗತ್ತಿನೆಡೆಗೆ ನಡೆಯಲು ಯತ್ನಿಸುತ್ತಿದ್ದಾನೆ ಇಲ್ಲಿ ಕನ್ನಡದ ಆದಿಕವಿ ಪಂಪ ಮಹಾಕಾವ್ಯವನ್ನೆ ಬರೆದಿದ್ದ ಎಂದು ಕುವೆಂಪು ಹೇಳಿದ್ದಾರೆ. ಜೋಷಿ ಆ ಮಹಾಕಾವ್ಯವನ್ನು ಓದಿ ಜೀರ್ಣಿಸಿಕೊಂಡು ಮಾತನಾಡುವುದಬಿಟ್ಟು ರಸ್ತೆ ಹೆಸರನ್ನೇ ಬದಲಿಸಹೊರಟಿರುವುದು ಶುದ್ದ ಮೂರ್ಖತನ. ಪಂಪನ ಮಾರ್ಗದಿಂದಲೇ ಸಾಹಿತ್ಯ ಪರಿಷತ್ ಪ್ರವೇಶ ನಡೆಯುತ್ತ ಬಂದಿದೆ ಎಂಬುದೇ ಜೋಷಿಗೆ ಗೊತ್ತಿಲ್ಲವಂತಲ್ಲಾ, ಥೂತ್ತೇರಿ.
******
ತೇಜಸ್ವಿ ಸೂರ್ಯ ಎಂಬ ಸಂಸದ ಹೋಟಲಿಗೆ ಹೋಗಿ ದೋಸೆ ತಿನ್ನುವುದನ್ನು ಆಡಿಕೊಂಡ ಕೆಲವರು ದೋಸೆ ಸೂರ್ಯ ಎಂದು ನಾಮಕರಣ ಮಾಡಿದ್ದಾರಲ್ಲಾ. ಇಂತಹ ಹೆಸರನ್ನು ಸಂಪಾದಿಸುವುದು ಸಾಮಾನ್ಯವಲ್ಲ. ಬೊಂಡ ರಮೇಶ ಮುದ್ದೇಗೌಡರು, ಬಿರಿಯಾನಿ ಜಮೀರು, ಉಪ್ಪೆಸಾರಿನ ಪುಟ್ಟಸ್ವಾಮಿ, ತೂತುವಡೆ ಶ್ರೀಕಂಠಯ್ಯ, ಬಾಡೂಟದ ಕೃಷ್ಣಪ್ಪ ಇವೆಲ್ಲ ನಮ್ಮ ರಾಜಕಾರಣದಲ್ಲಿ ಹಿಂದೆ ನಮ್ಮ ನಾಯಕರು ಸಂಪಾದಿಸಿದ ಹೆಸರುಗಳು. ಅದರೊಳಕ್ಕೆ ಈಗ ದೋಸೆ ಸೂರ್ಯ ಸೇರಿಕೊಂಡಿದ್ದಾರೆ ಅಷ್ಟೇ. ಮುಖ್ಯವಾಗಿ ಆತನ ಕಡೆಯವರಿಗೆ ದೋಸೆ ಅಂದರೆ ಪ್ರಾಣ. ಮೂರು ದೋಸೆ ಕೊಟ್ಟರೆ ಈ ಕಡೆ ಬರುತ್ತವೆ ಆರು ದೋಸೆ ಕೊಟ್ಟರೆ ಈ ಕಡೆ
ಹೋಗುತ್ತವೆ. ಅದರಲ್ಲೂ ಮಸಾಲದೋಸೆ ಎಂದರೆ ಮುಗಿದೇ ಹೋಯ್ತು, ಮೈ ಮರೆತು ತಿನ್ನುತ್ತವೆ. ಹಾಗೇ ತೇಜಸ್ವಿಸೂರ್ಯ ಇಡೀ ಬೆಂಗಳೂರು ಸೊಂಟಮಟ ಮುಳುಗಿರುವಾಗ ಬಿಸಿಬಿಸಿ ದೋಸೆ ತಿನ್ನುತ್ತ ನೀವು ಬಂದು ತಿನ್ನಿ ಎಂದು ಹೋಟೆಲ್ ಅಡ್ರೆಸ್ ಹೇಳಿದ್ದಕ್ಕೆ ಜನಗಳು ನಖಶಿಖಾಂತ ಕೆರಳಿ ಕ್ಯಾಕರಿಸಿದ್ದಾರೆ. ಸಿಟ್ಟಾಗಿರುವ ಆತನ ಸಂಬಂಧಿ ಭಗವಾನ್ ಎಂಬ ದೋಸೆ ಪ್ರಿಯ, ನಮ್ಮ ಸೂರ್ಯ ಸುಮ್ಮಸುಮ್ಮನೆ ದೋಸೆ ತಿಂದಿಲ್ಲ; ಕೆರೆಯಂತಾಗಿರುವ ಬೆಂಗಳೂರು ನೀರನ್ನು ಹೊರಗೆ ಹಾಕಲು ಏನು ಮಾಡಬೇಕೆಂದು ಯೋಚಿಸುತ್ತ ದೋಸೆ ಅಗಿದಿದ್ದಾರೆ; ಸಾರ್ವಜನಿಕರೊಂದಿಗೆ ಸೇರಲು ದೋಸೆಗಿಂತ ತಿನಿಸೇ ಇಲ್ಲ ಎಂದು ಕೂಗುತ್ತಿದ್ದಾರಲ್ಲಾ, ಥೂತ್ತೇರಿ.
*****
ಕರ್ನಾಟಕಕ್ಕೆ ಇದು ಕೆಟ್ಟ ಕಾಲ. ಏಕೆಂದರೆ ಜನಾಭಿಪ್ರಾಯವಿಲ್ಲದ ಮತ್ತು ಶಾಸಕರ ಬೆಂಬಲವೂ ಇಲ್ಲದ ಮುಖ್ಯಮಂತ್ರಿಯೊಬ್ಬರು ಅಕಸ್ಮಾತ್ ವಕ್ಕರಿಸಿ ಅಬ್ಬರಿಸಿದ್ದಾರಂತಲ್ಲಾ. ಈ ಅಬ್ಬರದ ಹೆಸರು ’ಜನೋತ್ಸವ’. ಈ ಸರಕಾರದ ಸಾಧನೆಯ ಪಟ್ಟಿ ಮಾಡುವುದಾದರೆ ಜೋಗದಲ್ಲಿ ಜನರೇಟರ್ ಆನ್ ಆದ ಕೂಡಲೆ ಅರ್ಧ ನಾಡಿನ ಲೈಟ್ ಹಚ್ಚಿಕೊಳ್ಳುವಂತೆ, ಮುಸ್ಲಿಂ ಹೆಣ್ಣು ಮಕ್ಕಳ ಹಿಜಾಬ್ ಪ್ರತಿಭಟನೆ ಉಡುಪಿಯಿಂದ ಬೇರೆ ಕಡೆಗೆ ಹರಡಿಸಿದ್ದು. ನಂತರ ಮುಸ್ಲಿಮರ ಅಂಗಡಿಗೆ ಹೋಗದಂತೆ ಮಾಡಿ ಎಂದದ್ದು, ಮುಸ್ಲಿಂ ಹಣ್ಣಿನ ಅಂಗಡಿ ಧ್ವಂಸ ಮಾಡಿದ್ದು, ಅವರ ಆಜಾನ್ ಶಬ್ದ ನಿಲ್ಲಿಸಲು ಹೋರಾಡಿದ್ದು ಇತ್ಯಾದಿ. ಸುದೈವಕ್ಕೆ ನಲವತ್ತು ಪರಸೆಂಟ್ ಲಂಚ, ಪಿಎಸ್ಐ ಹಗರಣ, ಶಿಕ್ಷಣ ಇಲಾಖೆಯಲ್ಲಿನ ಹಗರಣ ಎಲ್ಲವೂ ಮುಸ್ಲಿಮರ ವಿರುದ್ಧದ ಹೋರಾಟಗಳು ಹಿನ್ನಡೆಯಾಗುವಂತೆ ಮಾಡಿದವು. ಇದರ ಜೊತೆಗೆ ಬೆಂಗಳೂರು ಹಿಂದೆಂದೂ ಕಂಡರಿಯದ ಜಲಪ್ರಳಯಕ್ಕೆ ಸಿಕ್ಕಿ ಮುಳುಗಿತು. ಇಂತಹ ಸಮಯದಲ್ಲಿ ಸಾಧನೆಯ ಸಮಾವೇಶ ಮಾಡಿ ನಿಮಗೆ ತಾಕತ್ತಿದ್ದರೆ ತಡೆಯಿರಿ ಎಂದು ಕೀರಲು ಗಂಟಲಲ್ಲಿ ಕಿರುಚಿದ ಬೊಮ್ಮಯಿ ಮಾತಿಗೆ ಜಾಕ್ಸನ್ ಮತ್ತು ಪ್ರಭುದೇವನೆ ನಾಚಿಕೊಳ್ಳುವಂತೆ ಎಂಟಿಬಿ ಫ್ರೆಂಡ್ಸ್ ಕುಣಿದರಂತಲ್ಲಾ. ಇತ್ತ ಕಾಂಗೈನ ಕಿಡಿಗೇಡಿಗಳು ಬೊಮ್ಮಾಯಿಯ ಮಾತಿಗೆ ಬಿದ್ದುಬಿದ್ದು ನಗುತ್ತ ನಮ್ಮ ಸಿದ್ದರಾಮಯ್ಯನ ತಾಕತ್ತಿನ ಬಗ್ಗೆ ಮಾತಾಡ್ತೀರಾ, ನಿಮಗೆ ತಾಕತ್ತಿದ್ದರೆ ಸಂಪುಟ ವಿಸ್ತರಿಸಿ ಸರಿಯಾಗಿ ನಡೆಯಿರಿ ನೋಡೋಣ ಎಂದವಂತಲ್ಲಾ, ಥೂತ್ತೇರಿ.
ಇದನ್ನೂ ಓದಿ: ‘ನಿಮ್ಮ ಪಾರ್ಟಿಲಿ ಶೀಲವಂತ್ರೆ ಇಲ್ಲವಲ್ಲ ಸಾರ್?’


