Homeಅಂಕಣಗಳುಪಾಕೀಸ್ತಾನದಲ್ಲೂ ಮೋದಿ ಅಭಿಮಾನಿಗಳವುರೆ ಕಂಡ್ರೀ!

ಪಾಕೀಸ್ತಾನದಲ್ಲೂ ಮೋದಿ ಅಭಿಮಾನಿಗಳವುರೆ ಕಂಡ್ರೀ!

- Advertisement -
- Advertisement -

ಪಾಕೀಸ್ತಾನದಲ್ಲೂ ಮೋದಿ ಭಕ್ತರಿದ್ದಾರೆ, ಅವರೆಲ್ಲಾ ಮೋದಿ ಆಡಳಿತಕ್ಕೆ ಒಳಪಡಲು ಹಾತೊರೆಯುತ್ತಿದ್ದಾರೆ ಎಂದು ನಮ್ಮ ಈಶ್ವರಪ್ಪನವರು ಹೇಳಿದ್ದಾರಲ್ಲಾ. ಕೇಳಿದ ಕೂಡಲೇ ಬೆಚ್ಚಿಬೀಳುವಂತಹ ಈ ಸಂಗತಿಯ ಬಗ್ಗೆ ಈಶ್ವರಪ್ಪರನ್ನೇ ಕೇಳಿದರೆ ಹೇಗೆ ಅನ್ನಿಸಿ ಫೋನ್ ಮಾಡಿದರೆ ರಿಂಗಾಯ್ತು. ರಿಂಗ್ ಟೋನ್: ’ನಮಸ್ತೇ ಸದಾ ವತ್ಸಲೇ ಮಾತೃ ಭೂಮಿ…’

“ಹಲೋ ಯಾರು?”

“ನಾನು ಸಾರ್ ಯಾಹೂ.”

“ಯಾಹೂ ಎಲ್ಲಿದ್ದಿರಿ, ಬನ್ರಿ ಮಾತಾಡಣ.”

“ಮಾತಾಡಸಕ್ಕೆ ಅಂತ ಫೋನು ಮಾಡಿದೆ ಸಾರ್.”

“ಏನಿಸೇಷ?”

“ತಾವು ಶಿವಮೊಗ್ಗದ ಖಾಸಗಿ ಬಸ್ಟಾಂಡಲ್ಲಿ ನಿಂತುಕೊಂಡು ಪಾಕೀಸ್ತಾನದ ಜನರು ಉಸುರಾಡದೆ ಕಷ್ಟ ಆಗಿದೆ. ಆದ್ರಿಂದ ಅವುರೆಲ್ಲಾ ಮೋದಿಯಂತವರು ನಮ್ಮ ದೇಶದ ಪ್ರಧಾನಿಯಾಗಬೇಕು ಅಂತ ಬಯಸಿದ್ದಾರೆ, ಅಲ್ಲಿ ಜನಕ್ಕೆ ಮೋದಿ ಆಡಳಿತದ ಒಲವಿದೆ ಅಂದಿದೀರಿ ಸಾರ್.”

“ಹೌದು ಹೇಳೀದ್ದಿನಿ, ಅದರಲ್ಲಿ ತಪ್ಪೇನು?”

“ಹಾಗಂತ ನಿಮಿಗೆ ಯಾರೇಳಿದ್ರು ಸಾರ್…”

“ಯಾರು ಹೇಳಕ್ಕೆ ಬಂದಿಲ್ಲ. ಪಾಕೀಸ್ತಾನದ ಸ್ಥಿತಿ ನೋಡಿದ್ರೆ, ನಾವೆ ಊಹೆ ಮಾಡಬಹುದು ಕಂಡ್ರಿ.”

“ಪಾಕೀಸ್ತಾನದವು ಹ್ವಟ್ಟಿಗಿಲ್ದೆಯಿದ್ರು ಮೋದಿ ಬಗ್ಗೆ ತಿಳಕತ್ತವೆ ಸಾರ್. ಗುಜರಾತ್ ಗಲಭೆ ಆಯ್ತಲ್ಲಾ, ಆಗಿನಿಂದ ಏನು ಮಾಡ್ತರೆ, ಏನೇಳ್ತರೆ ಅನ್ನದ ತಿಳಕತ್ತಾ ಅವುರೆ. ಅಂಥೊರು ಮೋದಿ ಆಡಳಿತದ ಬಗ್ಗೆ ಒಲವು ತೋರತರೆ ಅಂತಿರಲ್ಲಾ ಹ್ಯಂಗೇ?”

“ಮೋದಿ ಆಡಳಿತದಲ್ಲಿ ಹತ್ತೊರಸದಿಂದ ಗಲಭೆ ಆಗಿಲ್ಲ. ಜನಾಂಗದ ಘರ್ಷಣೆ ನಡೆದಿಲ್ಲ. ಕೊಲೆ ಸುಲಿಗೆ ಏನೂ ನಡದಿಲ್ಲ. ಇಡೀ ದೇಶ ತುಂಗಾ ನದಿಯಂಗೆ ಪ್ರಶಾಂತವಾಗಿ ಹರಿತಾ ಅದೆ.”

“ತುಂಗಾ ನದಿಗೆ ಸೇರಿದಂಗೆ ಮನೆಕಟ್ಟಿಗೊಂಡು ನೀವೀ ಮಾತೇಳದು ಸರಿ; ಆದ್ರೆ ತಾವು ಮಂತ್ರಿಯಾಗಿದ್ದಾಗ 144ನೇ ಸೆಕ್ಷನ್ ಜಾರಿಯಾಗಿದ್ರು ಎಂ.ಪಿಯಾದಿಯಾಗಿ ಮೆರವಣಿಗೆ ತಗದು ಮುಸ್ಲಿಮರ ಕೇರಿಗೆ ನುಗ್ಗಿ ಮನೆನ್ಯಲ್ಲ ಲೂಟಿ ಮಾಡಿ, ಹಲ್ಲೆ ಮಾಡುದ್ರಲ್ಲ ಸಾರ್, ಇದ ಮರತುಬುಟ್ರ?”

“ಅದು ಅಮಾಯಕನ ಕೊಲೆ ಮಾಡಿದ್ದಕ್ಕೆ ನಡೆದ ಪ್ರತಿಭಟನೆ ಕಂಡ್ರಿ.”

“ಪ್ರತಿಭಟನೆಲಿ ಹಿಂಸೆ ಇರಬವುದೊ?”

“ಕೈ ಮೀರಿದಾಗ ಏನೂ ಮಾಡಕ್ಕಾಗದಿಲ್ಲ.”

“ಅದು ಸಾರ್ವಜನಿಕರ ವಿಷಯ. ನೀವು ಮಂತ್ರಿಯಾಗಿದ್ದು ನಿಮ್ಮ ಲೀಡರ್‌ಶಿಪ್ಪಲ್ಲೆ ದೊಂಬಿ ನಡಿತು ಸಾರ್.”

“ಪುನಃ ಅದ್ನೆ ಹೇಳ್ತಿರಲ್ರೀ. ನಾವು ಮೆರವಣಿಗೆ ಹೋಗುವಾಗ ಯಾವನೊ ನಿಮ್ಮಂಥೋನು ಸಾಬರ ಮನಿಗೆ ನುಗ್ಗಿ ಟಿ.ವಿ ಹೊತ್ತಗಂಡು ಬಂದು ಬೀದಿಗಾಕಿದ. ಆಗ ಮೆತ್ತಗಾಕಪ್ಪ ವಡದೋಗತ್ತೆ ಅನ್ನಕ್ಕಾಗತ್ತ. ಇನ್ನೊಬ್ಬ ಪ್ರಿಜ್ ತಂದು ಯಸ್ದ. ಮತ್ತೊಬ್ಬ ಗುಜರಿ ಸಾಮನು ತಂದು ಚಲ್ಲಿದ. ಅಂತವರನ್ನ ತಡಿಯಕ್ಕಾಗತ್ತ?”

“ಆಗಲ್ಲ ಸಾರ್, ಅಂತ ಕ್ಯಲಸ ಮಾಡೋರ ಲೀಡ್ರು ನೀವೆ ಹಿಂದಿರುವಾಗ ಇನ್ನ ಅವುರನ್ನ್ ತಡಿಯಕ್ಕಾಗಲ್ಲ. ಇದು ಪಾಕೀಸ್ತಾನದವರಿಗೆ ಗೊತ್ತಿಲ್ಲವೆ?”

“ಅದ್ಯಂಗೆ ಗೊತ್ತಾಗತ್ತೆರಿ? ಪಾಕೀಸ್ತಾನ ಎಲ್ಲೀ ಶಿವಮೊಗ್ಗ ಎಲ್ಲಿ…”

ಇದನ್ನೂ ಓದಿ: ಗ್ಯಾರಂಟಿ ಸಪೋರ್ಟು ಮಾಡಿ ನೋಡಿ ಸಾರ್

“ಮಂಡ್ಯದ ಹಿಜಾಬ್ ಹುಡುಗಿ ವಿಷಯ ಸಂಗ್ರಹಿಸಿರೋರಿಗೆ ನಿಮ್ಮ ವಿಷಯ ತಿಳಿಯಲ್ವ ಸಾರ್?”

“ತಿಳಿಲಿ ಬುಡ್ರಿ, ಅವುರೇನು ಮಾಡ್ತರೆ?”

“ಅಲ್ಲ ಸಾರ್ ಇಡೀ ದೇಶದಲ್ಲಿ ಬಿಜೆಪಿ ಮಂತ್ರಿಗಳು ಶಾಸಕರೆಲ್ಲಾ ನಿಮ್ಮಂಗೆ ಇರುವಾಗ, ಇದ ತಿಳಕಂಡ ಪಾಕಿಸ್ತಾನಿಗಳು ಅದ್ಯಂಗೆ ಮೋದಿ ಆಡಳಿತವೇ ಚಂದ ಅಂತರೆ ಅನ್ನದೆ ನಮಿಗೆ ಸಮಸ್ಯೆ.”

“ಪಾಕೀಸ್ತಾನದಲ್ಲಿ ಈಗೇನು ನ್ಯಡಿತಾ ಅದೆ ಗೊತ್ತೇನ್ರಿ?”

“ಗೊತ್ತು ಸಾರ್. ಆ ದೇಶ ಪಾಲಾದಾಗಿಂದ ನ್ಯಟ್ಟಗಿಲ್ಲ. ಆ ದೇಶಕ್ಕೆ ಮೋದಿಯಂತ ಪ್ರಧಾನಿಗಳು ಬಂದು ಹೋಗ್ಯವುರೆ, ಆದ್ರೆ ನೆಹರು, ಶಾಸ್ತ್ರಿ, ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ತರದವುರು ಬಂದಿಲ್ಲ. ಅದ್ಕೆ ಆ ದೇಶ ಅಂಗಿರದು.”

“ನಾನೇಳಿದ್ದು ಈ ಕ್ಷಣಕ್ಕೆ ಆ ಜನ ಮೋದಿ ಆಡಳಿತ ಬೇಕು ಅಂತರೆ ಅಂತ.”

“ನೋಡಿ ಸಾರ್, ಮೋದಿ ನಿಮ್ಮ ಆರಾಧ್ಯ ದೈವ ಇರಬಹುದು, ಆದ್ರೆ ಅವರು ಈ ದೇಶಕ್ಕೆ ಸುಳ್ಳು ಹೇಳ್ಯವುರೆ.”

“ಏನು ಸುಳ್ಳೇಳಿದ್ದಾರ್ರೀ?”

“ಅವುರು ಮಾತಾಡೊ ಐದು ಮಾತಲ್ಲಿ ಮೂರು ಸುಳ್ಳಿರತವೆ ಸಾರ್.”

“ಒಂದೇ ಒಂದು ಸುಳ್ಳು ತೋರಿಸಿ, ನಾನು ರಾಜಕೀಯ ನಿವೃತ್ತಿ ತಗತಿನಿ.”

“ನಿಮ್ಮ ನಿವೃತ್ತಿನ ಬಿಜೆಪಿನೇ ಮಾಡಿದೆ ಸಾರ್, ನೀವು ಸುಮ್ಮನೆ ಅದನ್ನ ಒಪ್ಪಿಗಳದೆ ಸಕ್ರಿಯವಾಗಿದ್ದೀರಿ.”

“ಬಿಜೆಪಿ ಎಲ್ಲಿ ಮಾಡಿದೆ ರೀ?”

“ಸಾರ್ ನಲವತ್ತು ಪರಸೆಂಟ್ ಕಮಿಷನ್ ವಿಷಯದಲ್ಲಿ ಪೇ ಸಿಎಂ ಬೊಮ್ಮಾಯಿ ನಿಮ್ಮ ರಾಜಿನಾಮೆ ತಗಂಡ್ರು. ಸರಕಾರನೆ ಅತ್ಮಹತ್ಯೆ ವಿಷಯದಲ್ಲಿ ಬಿ ರಿಪೋರ್ಟು ಹಾಕ್ಸಿದ್ರೂ, ಸರಕಾರದ ಅವಧಿ ಮಿಗಿಯೋವರಿಗ್ರೂ, ನಿಮ್ಮನ್ನ ತಿರಗ ಮಂತ್ರಿ ಮಾಡಲಿಲ್ಲ. ಟಿಕೆಟ್‌ನೂ ಕೊಡಲಿಲ್ಲ ಇದರರ್ಥ ಏನೂ ಅಂತ?”

“ಬಿ ರಿಪೋರ್ಟು ಬಂತಲ್ಲ. ನಾನು ಆ ವಿಷಯದಲ್ಲಿ ನಿರಪರಾಧಿ ಅಂತ ಆಯ್ತು, ಇನ್ನ ಟಿಕೆಟ್ ವಿಷಯದಲ್ಲಿ ಯುವಕನಿಗೆ ಕೊಟ್ರು ಅದು ಪಾರ್ಟಿ ತೀರ್ಮಾನ. ನಮ್ಮಲ್ಲಿ ವಂಶಾಡಳಿತ ಇಲ್ಲ.”

“ವಿಜಯೇಂದ್ರ, ರಾಘವೇಂದ್ರ, ಎಡೂರಪ್ಪ ಬೇರೆಬೇರೆ ಜಾತಿನ?”

“ಅದ್ಕೆ ನಾನೀಗ ಹಾವೇರಿಗೆ ನನ್ನ ಮಗನ್ನ ನಿಲ್ಲುಸ್ತಿನಿ.”

“ಟಿಕೆಟ್ ಕೊಡದೆ ಹೋದ್ರೆ?”

“ಪಾರ್ಟಿ ಕೆಲಸ ಮಾಡ್ತಿವಿ. ಮುಸ್ಲಿಂ ಗೂಂಡಾಗಳ ವಿರುದ್ಧ ಹೋರಾಡ್ತಿವಿ.”

“ದ್ವೇಷ ವಳ್ಳೆದಲ್ಲ ಸಾರ್.”

“ಅದ್ನನಿಗೂ ಗೊತ್ತು ಕಂಡ್ರಿ, ಬಿಜೆಪಿಲಿ ರಾಜಕಾರಣ ಮಾಡಬೇಕಾದ್ರೆ ಹಿಂಸೆ ಮಾತಾಡಬೇಕು, ಜನಗಳನ್ನ ಸುಳ್ಳು ಸುಳ್ಳೆ ಪ್ರಚೋದಿಸಬೇಕು.”

“ಇನ್ನೊಂದು ಮಾತಾಡಿದ್ದೀರಿ ಸಾರ್ ನೀವು ಬಸ್ಟಾಂಡಲ್ಲಿ. ಅಧಿಕಾರದಾಸೆಗೆ ಕಾಂಗ್ರೆಸ್‌ನವರು ದೇಶ ತುಂಡು ಮಾಡಿದ್ರು. ಈಗ್ಲಾರ ಕ್ಷಮೆ ಕೇಳಿದ್ರೆ ಪಾಕೀಸ್ತಾನ ಭಾರತದ ತೆಕ್ಕೆಗೆ ಸೇರತದೆ ಅಂದಿದೀರಿ.”

“ಹೌದು, ಅದರಲ್ಲಿ ತಪ್ಪೇನು?”

“ಪಾಕೀಸ್ತಾನ ಏನು ಅಂತ ಗೊತ್ತ ಸಾ ನಿಮಿಗೆ, ಅಲ್ಲಿ ಚುನಾಯಿತ ಸರಕಾರ ಅಂತ ಒಂದಿರುತ್ತೆ. ಅದಕ್ಕೆ ಪರ್ಯಾಯವಾಗಿ ಮಿಲಿಟ್ರಿನೂ ಆಡಳಿತ ನಡಸತ್ತೆ. ಇವುರ ನಡುವೆ ಭಯೋತ್ಪಾದಕರು, ಗೂಂಡಾಗಳು ಬೇರೆ ಅವುರೆ. ಈ ಮೂರು ಸಂಘಟನೆ ಕವುಲುಗಳೂ ಸ್ವತಂತ್ರವಾಗಿ ಅಪಾಯಕಾರಿಗಳಾಗಿವೆ. ಇಂತ ದೇಶನ ಭಾರತಕ್ಕೆ ಸೇರಿಕೊಳ್ಳುತ್ತೆ ಅಂತಿರಲ್ಲಾ, ಈ ಶತಮಾನದ ಜೋಕು ಸಾರ್ ಇದು.”

“ಅದ್ಯಂಗ್ರಿ ಜೋಕು. ನಮ್ಮ ಮಾತ್ಯಲ್ಲ ನಿಮಗೆ ಜೋಕಾಗಿ ಕಾಣತ್ತೆ.”

“ನೀವೇಳದೆಂಗೆ ಅಂದ್ರೆ, ಹುಚ್ಚರ ಜೊತೆಗೆ ತಿಕ್ಕಲ್ರು ಸೇರಿಕಂಡ್ರೆ ಎಷ್ಟು ಚನ್ನಾಗಿರುತ್ತೆ ಅನ್ನಂಗೆ ಮಾತಾಡ್ತಿರಿ.”

“ಯಾರ್ರಿ ತಿಕ್ಕಲ್ರು?”

“ತಿಕ್ಕಲರಲ್ಲ ಬಿಡಿ. ಅಸಾಮಾನ್ಯ ದೇಶಭಕ್ತರೆ ಅಂತ ಮಾತಾಡಣ. ಮಣಿಪುರ ಯಾವ ದೇಶದಲ್ಲಿದೆ ಸಾರ್? ಅದರ ಬಗ್ಗೆ ಮಾತಾಡದ ಬುಟ್ಟು ಪಾಕೀಸ್ತಾನದ ಬಗ್ಗೆ ಮಾತಾಡ್ತಿರಿ. ಅಲ್ಲಿ ಜನಾಂಗಿಯ ಹತ್ಯೆ ಶುರುವಾಗಿ, ಮೂರು ತಿಂಗಳಾಯ್ತು, ಪ್ರಧಾನಿ ಆ ವಿಷಯದಲ್ಲೂ ಬಾಯಿ ಬಿಡಕ್ಕೆ ಮೂರು ತಿಂಗಳಾಯ್ತು. ಅದೂ ಬಲವಂತವಾಗಿ ಸಂಸತ್ತಿಗೆ ಬಂದು ಎರಡು ಗಂಟೆ ಕಾಂಗ್ರೆಸ್‌ಗೆ ಬೈದು, ಐದು ನಿಮಿಷ ಮಣಿಪುರದ ಬಗ್ಗೆ ಮಾತಾಡಿದ್ರು. ಇದು ಸರಿನ?”

“ಮೋದಿ ಬಗ್ಗೆ ಮಾತಾಡಬೇಡಿ.”

“ಮಾತಾಡ್ತಿನಿ ಸಾರ್, ಅವರು ನಮ್ಮ ದೇಶದ ಪ್ರಧಾನಿ, ಅವುರ ಈ ದೇಶಕ್ಕೆ ಹೇಳಿರೊ ಸುಳ್ಳು ಯಾವುದು ಅಂದ್ರೇ: ಚೀನಾ ದೇಶ ನಮ್ಮ ದೇಶದ ಹುಲ್ಲುಗಾವಲನ್ನು ಅಕ್ರಮಿಸಿದೆ. ಇದು ಗೊತ್ತಿದ್ದೂ ಮೋದಿ ಒಂದಿಂಚು ಭೂಮಿಯನ್ನು ಚೀನಾ ಅಕ್ರಮಿಸಿಕೊಂಡಿಲ್ಲ ಅಂದ್ರು. ಪ್ರಧಾನಿ ಸುಳ್ಳಿಗೆ ಗಡಿಲಿದ್ದ ಸೈನಿಕರೆ ದಂಗುಬಡದವುರೆ ಗೊತ್ತೆ?”

“ರೀ ಚೀನಾದವುರು ಅಕ್ರಮಿಸಿರೋದು ಹುಲ್ಲುಗಾವಲು. ಆ ಹುಲ್ಲುಗಾವುಲಲ್ಲಿ ಗೋವು ಮೇಯ್‌ಸ್ತರೆ. ಗೋವು ಯಲ್ಲಾರಿಗೂ ಒಂದೆ. ಇದೂ ಒಂದು ಸುದ್ದಿ ಅಂತ ಹೇಳ್ತಿರಿ ನೀವು.”

“ಇನ್ನೊಂದು ವಿಷಯ ಸಾರ್, ನಿಮಗೆ ಗೊತ್ತಿರಲಿ ದೇಶಕ್ಕೆ ಸ್ವಾತಂತ್ರ ಬಂದಾಗ ನಿಮ್ಮ ಸಾವರಕರು ಮತ್ತೆ ಇತರರು ಇನ್ನು ಮುಂದೆ ಈ ದೇಶ ಹಿಂದೂ ರಾಷ್ಟ್ರವಾಗತ್ತೆ ಅಂದ್ರು. ಇವುರಂಗಂದ ಕೂಡ್ಲೆ ಜಿನ್ನಾ ಹಿಂದೂ ದೇಶದಲ್ಲಿ ನಾವಿರಲ್ಲ ಪಾಕೀಸ್ತಾನ ಕೊಡಿ ಅಂದ. ಅಂಗಾಗಿ ನಿಮ್ಮವುರ ಮಾತಿಂದ ದೇಶ ಒಡದು, ನಮ್ಮನಮ್ಮ ದಾರಿಲಿ ಆಗ್ಲೆ 75 ವರ್ಷ ನ್ಯಡದಿದ್ದೀವಿ. ಆ ದೇಶನೂ ಅವನತಿ ಅಂಚಿಗೆ ಬಂದಿದೆ. ತಿರಗ ಮೋದಿ ಬಂದ್ರೆ ನಾವೂ ಸರ್ವನಾಶದ ಹಾದಿಗೆ ಬೀಳ್ತಿವಿ. ಇಂಥದೊಂದು ಸ್ಥಿತಿಲಿ ನೀವು ಪಾಕೀಸ್ತಾನ ಸೇರಿಸಿಗಳಕ್ಕೆ ಹಾತೊರೆಯದರ ಬದ್ಲು ಶಿವಮೊಗ್ಗದ ಮಿಳಘಟ್ಟ, ಟಿಪ್ಪು ನಗರ ಮಂಡಿ ಕಡೆಯಿರೊ ಮುಸಲ್ಮಾನರನ್ನ ಮಾತಾಡಿಸಿ ಕಷ್ಟ ಸುಖ ಕೇಳಿ ಸಾರ್. ನೀವಂಗೆ ಮಾಡಿದ್ರೆ ಮುಂದೆ ಪಕ್ಷೇತರವಾಗಿ ನಿಂತ್ರು ಗೆಲ್ತೀರಿ.”

“ಪಕ್ಷೇತರವಾಗಿ ಈಶ್ವರಪ್ಪನ ಶರೀರದಲ್ಲಿ ಉಸಿರಿರೊವರಿಗೂ ನಿಲ್ಲಲ್ಲ.”

“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...