ಚಂಡಮಾರುತ, ಭೂಕಂಪ, ಪ್ರವಾಹ ಇತ್ಯಾದಿ ನೈಸರ್ಗಿಕ ದುರಂತಗಳಂತೆಯೇ ಬಿಜೆಪಿ ಸರಕಾರದಲ್ಲಿ ನಡೆದ ನೋಟುಬ್ಯಾನು, ಜಿಎಸ್ಟಿ, ಕೃಷಿಕಾಯ್ದೆಗಳಿಂದಾಗಿರಬಹುದಾದ ಅನಾಹುತಗಳನ್ನು ದಾಖಲಿಸುವ ಬದಲು, ಮಾಧ್ಯಮದವರು ಚೀನಾದಲ್ಲಿ ಏನಾಗಿದೆ ಆಫ್ಘಾನಿನ ಕತೆಯೇನು, ಪಾಕಿಸ್ತಾನ ಉಳಿಯುವುದೆ, ಶ್ರೀಲಂಕಾದಲ್ಲಿ ಅರಮನೆಗೇ ನುಗ್ಗಿ ಆಹಾರ ಹೊತ್ತುಕೊಂಡು ಹೋಗುತ್ತಿದ್ದಾರೆ ಎಂಬಿತ್ಯಾದಿಯಾಗಿ ಹುಡುಕುತ್ತಾ ಕುಳಿತಿರಬೇಕಾದರೆ ಹಸಿವಿನ ವಿಷಯದಲ್ಲಿ ನಮ್ಮ ಸುತ್ತಮುತ್ತಲ ದೇಶಗಳನ್ನ ಭಾರತ ಹಿಂದಿಕ್ಕಿದೆಯಂತಲ್ಲಾ. ಈ ಬಗ್ಗೆ ಮಾಧ್ಯಮದವರನ್ನ ಕೇಳಿದರೆ, ಅದೆಲ್ಲಾ ಕಾಂಗ್ರೆಸ್ಸಿಗರು ಹರಡುತ್ತಿರುವ ಸುಳ್ಳು ಸುದ್ದಿ; ಈಗ ನಮ್ಮನ್ನೇ ನೋಡಿ, ದಿನಬೆಳಗಾಯ್ತೆಂದರೆ ಯಾರಾದರೂ ಕಾಫಿ, ತಿಂಡಿ ಕೊಡಿಸುವವರು ಸಿಗುತ್ತಾರ ಎಂದು ಹುಡುಕುತ್ತಿದ್ದೆವು. ಮಧ್ಯಾಹ್ನದ ಊಟಕ್ಕೂ ಅದೇ ಸ್ಥಿತಿಯಿತ್ತು. ಸಾಯಂಕಾಲಕ್ಕೆ ಯಾರಾದರೂ ಪಾರ್ಟಿಗೆ ಕರೆಯುತ್ತಿದ್ದರು. ಈಗ ನಾವೇ ಕರೆಯುತ್ತೇವೆ. ಅಲ್ಲದೆ ಅವರವರ ಮನೆಯವರೆಗೂ ಬಿಟ್ಟುಕೊಡುವ ವಾಹನವೂ ನಮ್ಮಲ್ಲಿದೆ. ನಾವೇ ಹೀಗೆ ಸುಧಾರಿಸುತ್ತಿರಬೇಕಾದರೆ, ಇನ್ನು ನಮ್ಮ ದೇಶದ ಜನ ಹಸಿದು ಮಲಗುತ್ತಾರೆಂಬುದು ಹಸಿಸುಳ್ಳು ಎಂದು ಮಾರಿಕೊಂಡ ಮಾಧ್ಯಮದವರು ಬೊಮ್ಮಾಯಿ ಕೊಟ್ಟ ಗಿಫ್ಟನ್ನು ಜೋಪಾನವಾಗಿ ಮನೆಗೆ ತೆಗೆದುಕೊಂಡು ಹೋದರಂತಲ್ಲಾ, ಥೂತ್ತೇರಿ.
******
ಒಂದಲ್ಲಾ ಒಂದು ದಿನ ಶುದ್ಧ ಸಾಹಿತ್ಯದ ಕಡೆಗೆ ಸಾಹಿತಿ ತಿರುಗಲೇಬೇಕೆಂದು ನಮ್ಮ ಸಂತೆಶಿವರದ ಭೈರಪ್ಪ ಹಾಸನಕ್ಕೆ ಬಂದು ಭೈರಿಗೆ ಹಿಡಿದು ಹೋಗಿದ್ದಾರಲ್ಲಾ! ಸದರಿ ಸಾಹಿತಿಗೆ ಈ ಜ್ಞಾನೋದಯ ತಡವಾಗಿ ಸಂಭವಿಸಿದೆ. ಭೈರಪ್ಪನವರು ಧರ್ಮಶ್ರೀ, ದಾಟು, ಆವರಣ ಇತ್ಯಾದಿ ಶುದ್ಧವಲ್ಲದ ಸಾಹಿತ್ಯ ರಚಿಸಿದ ಮೇಲೆ ಕಡೆಗೂ ಶುದ್ಧ ಸಾಹಿತ್ಯದ ಬಗ್ಗೆ ಹಲುಬಿದ್ದಾರೆ. ಪರಂಪರೆಯ ಹಾಳುಗುಡಿಯಲ್ಲೇ ಕುಳಿತು ರಿಮ್ಮುಗಟ್ಟಲೆ ಬರೆದ ಭೈರಪ್ಪನವರಿಗೆ ಆಧುನಿಕತೆ ಚಿಂತನೆಯ ಸಾಹಿತಿಗಳನ್ನು ಕಂಡರಾಗುವುದಿಲ್ಲ. ಅವರೆಲ್ಲಾ ವಿಜೃಂಭಿಸುತ್ತಿದ್ದ ಕಾಲದಲ್ಲಿ ಕೀಳರಿಮೆಯಿಂದ ಹಿಂದೂ ಧರ್ಮದ ಕಗ್ಗ ಹೊಸೆಯುತ್ತಿದ್ದ ಭೈರಣ್ಣ ಅವರೆಲ್ಲಾ ಕಾಲವಾದ ನಂತರ ಅವರ ಸಾಹಿತ್ಯವನ್ನು ಅಣಕಿಸುತ್ತಿದ್ದಾರೆ. ಸುದೈವದಿಂದ ಅವರೆಲ್ಲಾ ಭೈರಪ್ಪನ ಸಾಹಿತ್ಯ ಅಂದರೆ ಏನು ಎಂದು ದಾಖಲಿಸಿ ಹೋಗಿದ್ದಾರೆ. ಅವು ನೆನಪಿಗೆ ಬಂದಾಗಲೆಲ್ಲಾ ಆಧುನಿಕ ಸಾಹಿತಿಗಳು ಮತ್ತು ಕವಿಗಳನ್ನ ಟೀಕಿಸುತ್ತಲೇ ಬರುತ್ತಿದ್ದಾರಲ್ಲಾ, ಥೂತ್ತೇರಿ.
ಇದನ್ನೂ ಓದಿ: ಸಿನಿಮಾ, ಮಿಥ್ ಮತ್ತು ರಾಜಕೀಯ; ಕಾಂತಾರ ಮತ್ತದರ ಯಶಸ್ಸಿನ ಸುತ್ತ…
******
ಭೈರಪ್ಪನವರ ಬರವಣಿಗೆಯ ಬೆಲೆ ಕಟ್ಟಿದ ಯು.ಆರ್ ಅನಂತಮೂರ್ತಿಯವರು ಭೈರಪ್ಪ ರಂಜಿಸಿ ವಂಚಿಸುವ ಲೇಖಕ ಎಂದು ಸಾಕ್ಷಿಸಮೇತ ತೋರಿ ಹೋಗಿದ್ದರು. ಈ ವ್ಯಾಖ್ಯಾನ ಕಾಂತಾರ ಎಂಬ ಕಂತೆ ಪುರಾಣದ ಸಿನಿಮಾ ನೋಡುವಾಗ ಜ್ಞಾಪಕಕ್ಕೆ ಬಂತಲ್ಲಾ. ಕಾಂತಾರದ ನಿರ್ದೇಶಕ ಜಗ್ಗೇಶ್ ಚೇಷ್ಟೆಗಳನ್ನು ಅನುಕರಿಸಿ ಮೇಲೆ ಬಂದವರು. ಹಾಗೆಯೇ ಜನ ಹಗುರವಾಗಿ ನಗುವ ದೃಶ್ಯಗಳನ್ನು ತೆಗೆದು ತೋರಿದವರು. ಹೀಗೆ ತೋರುತ್ತ ಬಂದ ಆತನೊಳಗೆ ಅಮಾನುಷತೆ ಅಡಗಿರುವುದು ಅವರಿಗೇ ಗೊತ್ತಿಲ್ಲ. ಉಬ್ಬುಹಲ್ಲಿರುವ ಪಾತ್ರವೊಂದನ್ನು ಸೃಷ್ಠಿ ಮಾಡಿ ಆಡಿಕೊಳ್ಳುವ ಈತ ಜನರನ್ನು ನಗಿಸುವ ಬರದಲ್ಲಿ ಎಂತಹ ಹೀನ ಕೆಲಸ ಮಾಡುತ್ತೇನೆಂದು ಗ್ರಹಿಸಿದಂತೆ ಕಾಣುವುದಿಲ್ಲ. ಹಾಗೇ ನೋಡಿದರೆ ದಕ್ಷಿಣ ಕನ್ನಡದ ಯಕ್ಷಗಾನ ಯಕ್ಕುಟ್ಟಿ ಹೋಗಿ ಬಹಳ ದಿನಗಳಾಗಿವೆ. ಕಪ್ಪು ಬಣ್ಣ ಬಳಿದ ಪಾತ್ರ ತಂದು ನಿಲ್ಲಿಸಿಕೊಂಡು ಆಡಿಕೊಳ್ಳುವುದು, ಸಾಬರನ್ನ ಅಣಕಿಸುವುದು ಅದ್ಭುತ ಕಲೆಯಾದ ಯಕ್ಷಗಾನದೊಳಕ್ಕೆ ತಂದು ಬಹಳ ದಿನಗಳಾಗಿವೆ. ಮನುಷ್ಯನ ಆಕಾರವನ್ನ ಆಡಿಕೊಳ್ಳುವುದು, ಪುರೋಹಿತರ ಶ್ರೇಷ್ಠತೆ ಮೆರೆಯುವುದು ಇವೆಲ್ಲಾ ಸಾಮಾನ್ಯ ಸಂಗತಿಗಳಾಗಿವೆ. ಇಂತಹ ಸಮಯದಲ್ಲಿ ಭೂತ, ಕೋಲ, ಪಂಜುರ್ಲಿ ಎಂದುಕೊಂಡು ಮನಸ್ಸಿನ ವಿಕಾರಗಳನ್ನು ಮೆರೆಸುತ್ತ, ಅವುಗಳನ್ನು ದೈವೀಕರಿಸಿ ನಿಂದಿಸಿದವರು ರಕ್ತ ಕಾರಿಕೊಂಡು ಸಾಯುತ್ತಾರೆಂದು ನಂಬಿಸಲು ಹೊರಟಿರುವುದು ಒಂದು ಸಮೂಹದ ತಲೆ ಯಕ್ಕುಟ್ಟಿ ಹೋಗಿರುವುದರ ಸೂಚನೆಯಂತಲ್ಲಾ, ಥೂತ್ತೇರಿ.
******
ಗುಜರಾತಿನ ಮೋರ್ಬಿ ಜಿಲ್ಲೆಯ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ತೂಗು ಸೇತುವೆ ಕುಸಿದುಬಿದ್ದು 135 ಜನ ಸಾವಿಗೀಡಾಗಿದ್ದಾರೆ. ಸೇತುವೆ ಕುಸಿಯುವುದು, ಜನರ ಆಕ್ರಂದನ, ಅಸಹಾಯಕರಾಗಿ ಅಸುನೀಗುವುದು ಇವೆಲ್ಲಾ ಬದುಕಿರುವವರನ್ನ ಕಾಡುವ ಸಂಗತಿಗಳು. ಈ ಸೇತುವೆ ದುರಸ್ತಿಗೊಂಡು ಉದ್ಘಾಟನೆಗೊಂಡ ನಾಲ್ಕೇ ದಿನದಲ್ಲಿ ಕುಸಿದುಬಿದ್ದು 135 ಜನ ಸತ್ತಿದ್ದಾರೆ. ಜನ ಸತ್ತಿದ್ದಕ್ಕೆ ಮೋದಿ ಸರ್ಕಾರ ಇಲ್ಲಿಯವರೆಗೆ ತಮ್ಮ ತವರು ರಾಜ್ಯದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿಲ್ಲ. ಕ್ರಮವಂತೂ ದೂರವೇ ಹೋಯ್ತು. ಹಿಂದೆ ಅವರ ಮುಖ್ಯಮಂತ್ರಿ ಅಧಿಕಾರಾವಧಿಯಲ್ಲಿ ಗುಜರಾತಿನಲ್ಲಿ ಮೂರ್ನಾಕು ದಿನದಲ್ಲಿ ಮೂರು ಸಾವಿರ ಜನ ಸತ್ತಾಗ ಅದು ಅವರನ್ನು ಕಾಡಲಿಲ್ಲ. ರೈತ ಹೋರಾಟದ ಸಮಯದಲ್ಲಿ ದೆಹಲಿ ಗಡಿಯಲ್ಲಿ ಏಳುನೂರ ಐವತ್ತು ಜನ ರೈತರು ಅಸುನೀಗಿದಾಗ ಮಾತನಾಡಲಿಲ್ಲ. ಪ್ರಧಾನಿಯವರ ಈ ವಿಲಕ್ಷಣ ನಡೆಗೆ ಏನು ಹೇಳುವುದೆಂಬುದೇ ಸಮಸ್ಯೆಯಾಗಿದೆಯಲ್ಲಾ, ಥೂತ್ತೇರಿ.


