Homeಕರ್ನಾಟಕಸಂವಿಧಾನಕ್ಕೆ ಅಗೌರವ ತೋರುವ ಧಾರ್ಮಿಕ ಸ್ವಾತಂತ್ರ ಹಕ್ಕು ಸಂರಕ್ಷಣಾ ವಿಧೇಯಕ

ಸಂವಿಧಾನಕ್ಕೆ ಅಗೌರವ ತೋರುವ ಧಾರ್ಮಿಕ ಸ್ವಾತಂತ್ರ ಹಕ್ಕು ಸಂರಕ್ಷಣಾ ವಿಧೇಯಕ

- Advertisement -
- Advertisement -

ಕರ್ನಾಟಕ ಧಾರ್ಮಿಕ ಸ್ವಾತಂತ್ರ ಹಕ್ಕು ಸಂರಕ್ಷಣಾ ವಿಧೇಯಕ, 2021 (ಕರ್ನಾಟಕ ಪ್ರೊಟೆಕ್ಷನ್ ಆಫ್ ರೈಟ್ ಟು ಫ್ರೀಡಮ್ ಆಫ್ ರಿಲಿಜನ್ ಬಿಲ್, 2021) ಎಂಬ ಈ ಹೆಸರೇ ವಿಪರ್ಯಾಸದಿಂದ ಕೂಡಿದೆ ಹಾಗೂ ಇದು ಸಂವಿಧಾನ ವಿರೋಧಿ ಪರಿಣಾಮಗಳನ್ನು ಬೀರುವ ಅಂಶಗಳಿಂದ ತುಂಬಿದೆ. ಈ ಮಸೂದೆ ಧಾರ್ಮಿಕ ಸ್ವಾತಂತ್ರವನ್ನು ರಕ್ಷಿಸಲು ಇರುವುದಲ್ಲ, ಅದರ ಬದಲಾಗಿ ಭಾರತದ ಸಂವಿಧಾನವನ್ನು ರಚಿಸಿದವರು ಊಹಿಸಿಕೊಳ್ಳದಂತಹ ರೀತಿಯಲ್ಲಿ ಧಾರ್ಮಿಕ ಸ್ವಾತಂತ್ರವನ್ನು ಹತ್ತಿಕ್ಕುವ ರೀತಿಯಲ್ಲಿ ಇದೆ. ಈ ಮಸೂದೆಯು ’ತಪ್ಪು ನಿರೂಪಣೆ, ಬಲವಂತದಿಂದ, ಮೋಸದಿಂದ, ಅನುಚಿತ ಪ್ರಭಾವ ಬಳಸಿ, ಆಮಿಷದಿಂದ ಮತ್ತು ಮದುವೆಯ ಭರವಸೆ ನೀಡಿ, ಯಾವುದೇ ವಂಚನೆಯ ವಿಧಾನಗಳು ಮೂಲಕ’ ಆಗುವ ಮತಾಂತರಗಳನ್ನು ಅಪರಾಧೀಕರಣಗೊಳಿಸುವ ಕೆಲಸ ಮಾಡುತ್ತದೆ.

ಬಲವಂತದಿಂದ, ಆಮಿಷದಿಂದ ಅಥವಾ ಮೋಸದಿಂದ ಮಾಡುವ ಮತಾಂತರವನ್ನು ನಿಷೇಧಿಸುವುದರಲ್ಲಿ ಇರುವ ಸಮಸ್ಯೆಯಾದರೂ ಏನು ಎಂದು ಯಾವುದೇ ಓದುಗ ಕೇಳಬಹುದು; ಅದನ್ನು ತಿಳಿಯಲು ಈ ಮಸೂದೆಯ ವಿವರಗಳನ್ನು ಕೂಲಂಕಷವಾಗಿ ನೋಡಬೇಕಿದೆ. ಇದನ್ನು ನೋಡಲು ನಾವು ಮಸೂದೆಯ ಇಂಗ್ಲಿಷ್ ಕರಡಿನಲ್ಲಿ ಇರುವ ಅಲ್ಯೂರ್‌ಮೆಂಟ್ ಎಂಬುದರ ಅರ್ಥ ತಿಳಿದುಕೊಳ್ಳುವ. ಕನ್ನಡದ ಕರಡಿನಲ್ಲಿ ಇದನ್ನು ಆಮಿಷ ಎಂದು ಕರೆಯಲಾಗಿದೆ. ಅತ್ಯಂತ ಸಮಸ್ಯಾತ್ಮಕ ವ್ಯಾಖ್ಯಾನಗಳನ್ನು ಒಳಗೊಂಡಿರುವ ಈ ಶಾಸನದಲ್ಲಿ ಎಲ್ಲಕ್ಕಿಂತ ಹೆಚ್ಚು ಸಮಸ್ಯೆ ಇರುವುದು ಈ ಪದದ ವ್ಯಾಖ್ಯಾನದಲ್ಲಿ.

ಅಲ್ಯೂರ್‌ಮೆಂಟ್ ಅಥವಾ ಆಮಿಷ ಎಂಬುದನ್ನು ತುಂಬಾ ವಿಶಾಲಾರ್ಥದಲ್ಲಿ ’ನಗದು ರೂಪದಲ್ಲಾಗಲಿ ಅಥವಾ ವಸ್ತುವಿನ ರೂಪದಲ್ಲಾಗಲಿ ನೀಡುವ ಯಾವುದೇ ಉಡುಗೊರೆ’ ಹಾಗೂ ಅದರೊಂದಿಗೆ ’ಉದ್ಯೋಗ ಅಥವಾ ಉಚಿತ ಶಿಕ್ಷಣ’ ಎಂಬುದನ್ನು ವ್ಯಾಖ್ಯಾನದಲ್ಲಿ ಸೇರಿಸಲಾಗಿದೆ. ಹಾಗಾಗಿ ಶಾಲೆಗಳನ್ನು ಅಥವಾ ಆಸ್ಪತ್ರೆಗಳನ್ನು ನಡೆಸುವ ಲೋಕೋಪಕಾರಿ ಕೆಲಸಗಳನ್ನು, ಮತಾಂತರದ ಉದ್ದೇಶದಿಂದ ಮಾಡಲಾಗುವ ಕಾನೂನುಬಾಹಿರ ಚಟುವಟಿಕೆಗಳು ಎಂದು ಹೇಳಿ ಎಷ್ಟು ಸುಲಭವಾಗಿ ಮಸಿ ಬಳಿಯಬಹುದೆಂದು ಅತ್ಯಂತ ಸುಲಭವಾಗಿ ಕಾಣಬಹುದಾಗಿದೆ. ಈ ಆಮಿಷದ ವ್ಯಾಖ್ಯಾನವು, ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕ್ರಿಶ್ಚಿಯನ್ನರು ನಡೆಸುವ ಶಾಲೆಗಳಿಗೆ ಬಲವಂತದಿಂದ ನುಗ್ಗಿ ಕ್ರಿಸ್‌ಮಸ್ ಆಚರಣೆಗಳನ್ನು ನಿಲಿಸುವಂತಹ ಬಲಪಂಥೀಯರು ನಡೆಸುವ ಆಘಾತಕಾರಿ ಘಟನೆಗಳನ್ನು ನ್ಯಾಯಬದ್ಧಗೊಳಿಸುವ ಕೆಲಸ ಮಾಡುತ್ತದೆ. ನಿನ್ನೆಯವರೆಗೆ, ಈ ವಿಜಿಲಾಂಟೆ (ಕಾನೂನನ್ನು ಕೈಗೆತ್ತಿಕೊಳ್ಳುವ ಕಾನೂನುಬಾಹಿರ) ಗುಂಪುಗಳು ಮಾಡುತ್ತಿದ್ದ ಆಧಾರವಿಲ್ಲದ ಹುಚ್ಚಾಟದ ಆರೋಪಗಳನ್ನು ಇಂದು ಈ ಕಾಯಿದೆಯ ಅಡಿಯಲ್ಲಿ ಕಾನೂನುಸಮ್ಮತಗೊಳಿಸಲಾಗುತ್ತಿದೆ ಹಾಗೂ ’ಮತಾಂತರವನ್ನು ಮಾಡಿದ ಅಥವಾ ಅದಕ್ಕೆ ನೆರವು ನೀಡಿದ ಅಥವಾ ಅದಕ್ಕೆ ದುಷ್ಪ್ರೇರಣೆ ನೀಡಿದ ವ್ಯಕ್ತಿಯ’ ಮೇಲೆ ಸಾಕ್ಷ್ಯದ ಹೊರೆಯನ್ನು ಹೇರುತ್ತದೆ. ಸರಳವಾಗಿ ಹೇಳಬೇಕೆಂದರೆ, ಒಬ್ಬ ವ್ಯಕ್ತಿ ಯಾವುದೇ ಒಂದು ಶಾಲೆಗೆ ನುಗ್ಗಿ ಅಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿದರೆ ಅವನನ್ನು ನಂಬಲೇಬೇಕು ಹಾಗೂ ಪೊಲೀಸರು ಎಫ್‌ಐಆರ್ ದರ್ಜು ಮಾಡಲೇಬೇಕು. ವಿಚಾರಣೆಯ ಸಮಯದಲ್ಲಿ ಯಾರ ವಿರುದ್ಧ ಆಮಿಷ ಒಡ್ಡಿ ಮತಾಂತರ ಮಾಡಿದ್ದಾರೆ ಎಂಬ ಆರೋಪ ಇದೆಯೋ, ಆ ವ್ಯಕ್ತಿಯೇ ತಾನು ಮತಾಂತರ ಮಾಡಿಲ್ಲ ಎಂದು ಸಾಬೀತುಪಡಿಸಬೇಕು. ’ರುಜುವಾತಿನ ಭಾರ’ವನ್ನು ಈ ರೀತಿ ತಿರುಚಿಸಿರುವುದು, ’ತಪ್ಪಿತಸ್ಥ ಎಂದು ಸಾಬೀತಾಗುವವರೆಗೆ ನಿರ್ದೋಷಿ’ ಎಂಬ ಕ್ರಿಮಿನಲ್ ಲಾನ ಮೂಲ ತತ್ವಕ್ಕೆ ವಿರುದ್ಧವಾಗಿದೆ. ’ಆಮಿಷ’ದ ವಿಶಾಲ ವ್ಯಾಖ್ಯಾನ ಮತ್ತು ಅದರೊಂದಿಗೆ ರುಜುವಾತಿನ ಹೊರೆಯನ್ನು ರಿವರ್ಸ್ ಮಾಡಿರುವುದು, ಇವೆರಡೂ ಜೊತೆಗೂಡುವುದರಿಂದ ಆಗುವುದೇನೆಂದರೆ, ಆಸ್ಪತ್ರೆ, ಶಾಲೆ ನಡೆಸುವ, ಸಮಾಜ ಸೇವೆ ಸಲ್ಲಿಸುವ ಪ್ರತಿಯೊಂದು ಕ್ರಿಶ್ಚಿಯನ್ ಸಂಸ್ಥೆಯೂ ಸುಳ್ಳು ಆರೋಪಗಳಿಗೆ ಮತ್ತು ಅದರಿಂದ ಕಿರುಕುಳಕ್ಕೆ ಬಲಿಯಾಗುವ ಸಾಧ್ಯತೆಗಳಿಗೆ ಒಡ್ಡಿಕೊಳ್ಳುವಂತಾಗಿದೆ.

ಈ ಮಸೂದೆಯು, ಮಹಿಳೆಯರನ್ನು ಮತ್ತು ಪರಿಶಿಷ್ಟ ಜಾತಿ/ಪಂಗಡದ ವ್ಯಕ್ತಿಗಳನ್ನು ಅವಮಾನಿಸುತ್ತದೆ. ಹೇಗೆ ಎಂದರೆ, ಒಂದು ವೇಳೆ ಮತಾಂತರಕ್ಕೆ ಒಳಗಾದವರು ’ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಪ್ರಾಪ್ತ ವಯಸ್ಕ ಅಥವಾ ಅಸ್ವಸ್ಥಚಿತ್ತ ವ್ಯಕ್ತಿ’ಯ ಮತಾಂತರಕ್ಕೆ ಹೆಚ್ಚಿನ ಶಿಕ್ಷೆ ಇರುವುದು ಎಂದು ಈ ಮಸೂದೆ ಹೇಳುತ್ತದೆ. ಈ ಮಸೂದೆಯನ್ನು ರಚಿಸಿದವರ ಪ್ರಕಾರ, ಮಹಿಳೆಯರು ಮತ್ತು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದವರಿಗೆ ತಮ್ಮದೇ ಆದ ಸ್ವಂತ ಬುದ್ಧಿ ಇರುವುದಿಲ್ಲ ಹಾಗೂ ಅಸ್ವಸ್ಥಚಿತ್ತ ಮತ್ತು ಅಪ್ರಾಪ್ತರೊಂದಿಗೆ ಸಮೀಕರಿಸಲಾಗಿದೆ.

ಈ ಮಸೂದೆಯು ’ಆಮಿಷ, ಬಲವಂತ ಮತ್ತು ಮೋಸ’ದಿಂದ ಮಾಡಲಾಗುವ ಮತಾಂತರವನ್ನಷ್ಟೇ ಗುರಿ ಮಾಡಿಲ್ಲ, ಅದರೊಂದಿಗೆ ಮತಾಂತರವನ್ನೇ ನಿಯಂತ್ರಿಸುವುದಕ್ಕೆ ಮುಂದಾಗಿದೆ. ಸೆಕ್ಷನ್ 8ರ ಅಡಿಯಲ್ಲಿ, ಮತಾಂತರ ಮಾಡಿಕೊಳ್ಳುವ ಇಚ್ಛೆಯನ್ನು ಹೊಂದಿದ ವ್ಯಕ್ತಿ ಮತ್ತು ಮತಾಂತರವನ್ನು ಮಾಡುವ ವ್ಯಕ್ತಿಗಳಿಬ್ಬರೂ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಮೂವತ್ತು ದಿನ ಮುಂಗಡವಾಗಿ ಒಂದು ಅರ್ಜಿಯನ್ನು ಸಲ್ಲಿಸಬೇಕು. ಆಗ ಜಿಲ್ಲಾ ಮ್ಯಾಜಿಸ್ಟ್ರೇಟ್ ತಹಸೀಲ್ದಾರರ ಕಚೇರಿಯ ನೋಟಿಸ್ ಬೋರ್ಡಿನಲ್ಲಿ ಮುಂದೆ ಆಗುವ ಮತಾಂತರದ ಬಗ್ಗೆ ನೋಟಿಸ್ ಹಾಕಿ, ’ಆಕ್ಷೇಪಣೆ’ಗಳನ್ನು ಆಹ್ವಾನಿಸುತ್ತಾನೆ. ಹಾಗೂ ತದನಂತರ ಸಮಾಜ ಕಲ್ಯಾಣ ಅಧಿಕಾರಿಯ ಮೂಲಕ ಪ್ರಸ್ತಾಪಿತ ಮತಾಂತರದ ನೈಜ ಆಶಯ, ಉದ್ದೇಶ ಮತ್ತು ಕಾರಣದ ಬಗ್ಗೆ ವಿಚಾರಣೆ ನಡೆಸಬೇಕಾಗುತ್ತದೆ. ಈ ವಿಚಾರಣೆಯ ಆಧಾರದ ಮೇಲೆ ಮಸೂದೆಯ ಅಧಿನಿಯಮಗಳ ಅಡಿ ಅಪರಾಧ ಎಂದು ಕಂಡುಬಂದರೆ ಪ್ರಕರಣ ಪೊಲೀಸರಿಗೆ ವಹಿಸಿ, ಅವರು ಕ್ರಮ ಕೈಗೊಳ್ಳುತ್ತಾರೆ.

ಮತಾಂತರಕ್ಕೆ ನೋಟಿಸನ್ನು ನೀಡುವುದು ಅಗತ್ಯ ಎಂಬ ಕ್ರಮವೇ ಸಂವಿಧಾನಬದ್ಧ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ; ಅದನ್ನು ಪುಟ್ಟಸ್ವಾಮಿ ವರ್ಸಸ್ ಯುನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಮ್ ಕೋರ್ಟಿನ ಒಂಬತ್ತು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದರು. ಆಗ ಸರ್ವೋಚ್ಚ ನ್ಯಾಯಾಲಯವು, ’ಖಾಸಗಿತನ ಎಂಬುದು ಒಬ್ಬ ವ್ಯಕ್ತಿಯ ಪವಿತ್ರತೆಯ ಸರ್ವೋಚ್ಚ ಅಭಿವ್ಯಕ್ತಿಯಾಗಿದೆ. ಇದೊಂದು ಸಂವಿಧಾನಾತ್ಮಕ ಮೌಲ್ಯವಾಗಿದ್ದು, ಇದು ಮೂಲಭೂತ ಹಕ್ಕುಗಳ ಇಡೀ ಸಮುಚ್ಛಯಕ್ಕೆ ಅನ್ವಯವಾಗುತ್ತದೆ ಹಾಗೂ ಒಬ್ಬ ವ್ಯಕ್ತಿಯ ಆಯ್ಕೆ ಮತ್ತು ಸ್ವಯಂ ನಿರ್ಧಾರದ ಒಂದು ವಲಯವನ್ನು ರಕ್ಷಿಸುತ್ತದೆ.’.

ಸರ್ವೋಚ್ಯ ನ್ಯಾಯಾಲಯ ಮುಂದೆ ಹೇಳುತ್ತ, ಇದನ್ನು ಆರ್ಟಿಕಲ್ 21ರ ಜೊತೆಗೆ ಓದಿದರೆ, ಸ್ವಾತಂತ್ರ್ಯವು ಒಬ್ಬ ವ್ಯಕ್ತಿಗೆ ಏನು ಮತ್ತು ಹೇಗೆ ತಿನ್ನಬೇಕೆಂಬ, ಯಾವ ರೀತಿಯಲ್ಲಿ ಬಟ್ಟೆ
ಧರಿಸಬೇಕೆಂಬ, ತಾನು ಒಪ್ಪಿಕೊಳ್ಳುವ ನಂಬಿಕೆ ಯಾವುದಿರಬೇಕೆಂಬ ಹಾಗೂ ಮನಸ್ಸಿನ ಖಾಸಗಿತನದ ಒಳಗೆ, ಸ್ವಾಯತ್ತತೆ ಹಾಗೂ ಸ್ವಯಂ ನಿರ್ಧಾರ ಬಯಸುವ ಆಯ್ಕೆಗಳನ್ನು ಸೇರಿಸಿ ಇನ್ನೂ ಹಲವಾರು ವಿಷಯಗಳನ್ನು ಒಳಗೊಂಡಂತೆ ಜೀವನದ ಹಲವು ಮುಖಗಳ ಆಯ್ಕೆಯ ಆದ್ಯತೆಗಳನ್ನು ಸಬಲೀಕರಿಸುತ್ತದೆ.

2018 ರಲ್ಲಿ ಶಫಿನ್ ಜಹಾನ್ ವರ್ಸಸ್ ಅಶೋಕನ್ ಕೆ.ಎಂ. ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು, ನಂಬಿಕೆಯ(ಧರ್ಮದ) ವಿಷಯಗಳು ತನ್ನ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನಷ್ಟೇ ಸಹಜವಾಗಿ ಅಂತರ್ಗತವಾದದ್ದು (ಇಂಟ್ರಿನ್ಸಿಕ್) ಎಂದು ಹೇಳಿದೆ ಹಾಗೂ “ಸಂವಿಧಾನವು ವ್ಯಕ್ತಿಗಳಿಗೆ ತಮ್ಮ ಸಂತೋಷದ ಹುಡುಕಾಟಕ್ಕೆ ಕೇಂದ್ರವಾಗಿರುವ ವಿಷಯಗಳಲ್ಲಿ ನಿರ್ಣಯ ತೆಗೆದುಕೊಳ್ಳುವುದನ್ನು ಖಾತ್ರಿಪಡಿಸುತ್ತದೆ. ನಂಬಿಕೆ ಮತ್ತು ಧರ್ಮದ ವಿಷಯಗಳಲ್ಲಿ, ಇವುಗಳಲ್ಲಿ ನಂಬಿಕೆಯಿಟ್ಟುಕೊಳ್ಳಬೇಕೋ ಬೇಡವೋ ಎಂಬುದನ್ನೂ ಒಳಗೊಂಡಂತೆ ಈ ವಿಷಯಗಳು ಸಂವಿಧಾನಾತ್ಮಕ ಸ್ವಾತಂತ್ರದ ಕೇಂದ್ರದಲ್ಲಿವೆ” ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತು.

ಮತಾಂತರದ ವಿಷಯವು ವೈಯಕ್ತಿಕ ನಂಬಿಕೆ, ದೃಢತೆ ಹಾಗೂ ಆತ್ಮಸಾಕ್ಷಿಯ ವಿಷಯವಾಗಿದೆ ಹಾಗೂ ಮತಾಂತರ ಹೊಂದಲು ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸುವ ಈ ಕ್ರಿಯೆ, ಆರ್ಟಿಕಲ್ 25ರಲ್ಲಿರುವ ತನ್ನ ಧರ್ಮವನ್ನು ಮುಕ್ತವಾಗಿ ಆಚರಿಸುವ, ಪ್ರತಿಪಾದಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ನಿರಾಕರಿಸುತ್ತದೆ.

ಈ ಮಸೂದೆಯು ಲವ್ ಮ್ಯಾರೇಜ್, ಪ್ರೀತಿಸಿ ಮದುವೆಯಾಗುವುದನ್ನು ಕೂಡ ನಿರ್ದಿಷ್ಟವಾಗಿ ಗುರಿ ಮಾಡುತ್ತದೆ ಅದರಲ್ಲೂ ವಿಶೇಷವಾಗಿ ಅವು ಅಂತರ್‌ಧರ್ಮೀಯ ವಿವಾಹಗಳಾಗಿದ್ದರೆ, ಅವನ್ನು ’ಮದುವೆಯ ಭರವಸೆ’ಯ ಕಾರಣದಿಂದ ಅಪರಾಧೀಕರಣಗೊಳಿಸುವ ಕೆಲಸ ಮಾಡುತ್ತದೆ. ಈ ಮಸೂದೆಯು ಬಲವಂತದ, ಮೋಸದಿಂದ ಆದ ಮತಾಂತರಗಳನ್ನಷ್ಟೇ ಅಪರಾಧೀಕರಿಸುವುದಿಲ್ಲ, ಅದರೊಂದಿಗೆ ’ಮದುವೆಯ ಭರವಸೆ’ಯೊಂದಿಗೆ ಆದ ಮತಾಂತರವನ್ನೂ ಅಪರಾಧೀಕರಿಸುತ್ತದೆ, ಇದು ಸಂವಿಧಾನದ ಮೂಲ ಆಶಯವನ್ನು ಉಲ್ಲಂಘಿಸುತ್ತದೆ; ಅದ್ಯಾವುಂದರೆ ತನಗಿಷ್ಟವಾದ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು ಹಾಗೂ ತನಗಿಷ್ಟವಾದ ಧರ್ಮದ ಹಕ್ಕು. ಇವೆರಡೂ ಸಂವಿಧಾನವು ರಕ್ಷಣೆ ನೀಡಿರುವ ವೈಯಕ್ತಿಕ ಆಯ್ಕೆಗಳಾಗಿವೆ ಹಾಗೂ ಅಂತರ್‌ಧರ್ಮೀಯ ವಿವಾಹಗಳನ್ನು ಅಪರಾಧೀಕರಣಗೊಳಿಸುವ ಯಾವ ಹಕ್ಕೂ ಸರಕಾರಕ್ಕೆ ಇಲ್ಲ.

ವೈಯಕ್ತಿಕ ಹಕ್ಕಿಗೆ ಈ ಮಸೂದೆಯಲ್ಲಿರುವ ಇನ್ನೊಂದು ದೊಡ್ಡ ಪೆಟ್ಟು ಯಾವುದೆಂದರೆ, ಮೇಲೆ ಚರ್ಚಿಸಿದಂತಹ ಸಂದರ್ಭಗಳಲ್ಲಿ ’ಪೋಷಕರಿಗೆ, ಸಹೋದರರಿಗೆ, ಸಹೋದರಿಯರಿಗೆ ಅಥವಾ
ಸಹೋದ್ಯೋಗಿಗೆ’ ಆಗುತ್ತಿರುವ ಮತಾಂತರ ಕಾನೂನುಬಾಹಿರ ಎಂದು ದೂರು ನೀಡುವ ಅವಕಾಶ ನೀಡಿರುವುದು. ಈ ’ಕಾನೂನುಬಾಹಿರ ಮತಾಂತರ’ವು ವಿವಾಹದ ಮೊದಲು ಅಥವಾ
ನಂತರ ಆಗುವ ಮತಾಂತರ ಆಗಿರುವುದರಿಂದ ಇದರ ಪರಿಣಾಮವಾಗಿ ಕುಟುಂಬಕ್ಕೆ ಮತ್ತು ವಿಜಿಲಾಂಟೆ ಗುಂಪುಗಳಿಗೆ ಎಫ್‌ಐಆರ್ ದಾಖಲಿಸುವದನ್ನು ಸಬಲೀಕರಿಸುವ ಕೆಲಸ ಮಾಡಿದೆಯಷ್ಟೆ.

ಇದು ವೈಯಕ್ತಿಕ ಆಯ್ಕೆಯ ಪವಿತ್ರತೆಯ ಸಂವಿಧಾನಾತ್ಮಕ ಮಾನ್ಯತೆಯ ಉಲ್ಲಂಘನೆಯಾಗಿದೆ. ಶಫಿನ್ ಜಹಾನ್ ವರ್ಸಸ್ ಅಶೋಕನ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ’ಸಾಮಾಜಿಕ ಅನುಮೋದನೆ’ಯನ್ನು ಮೀರಿ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನೇ ಎತ್ತಿಹಿಡಿಯಿತು. ಯಾವುದೇ ಸರಕಾರ ಅಥವಾ ಕಾನೂನು ಒಬ್ಬ ವ್ಯಕ್ತಿಯ ಸಂಗಾತಿಯ ಆಯ್ಕೆಯನ್ನು ನಿರ್ದೇಶಿಸಲು ಸಾಧ್ಯವಿಲ್ಲ ಏಕೆಂದರೆ ಅದುವೆ ಸಂವಿಧಾನದ ಅಡಿಯಲ್ಲಿ ಬರುವ ವೈಯಕ್ತಿಕ ಸ್ವಾತಂತ್ರ್ಯದ ಹೂರಣವಾಗಿದೆ. ವೈಯಕ್ತಿಕ ಆಯ್ಕೆಗಳನ್ನು ಬಲವಾಗಿ ಪ್ರತಿಪಾದಿಸುತ್ತ ಜೆ. ಚಂದ್ರಚೂಡ್ ಅವರು ’ನಮ್ಮ ಆಯ್ಕೆಗಳನ್ನು ಗೌರವಿಸಲಾಗುತ್ತದೆ ಏಕೆಂದರೆ ಅವುಗಳು ನಮ್ಮವು. ನಿಕಟವಾದ ವೈಯಕ್ತಿಕ ನಿರ್ಣಯಗಳನ್ನು ಮಾನ್ಯ ಮಾಡಲು ಸಾಮಾಜಿಕ ಅನುಮೋದನೆಯು ಆಧಾರವಲ್ಲ. ನಿಜವಾಗಿಯೂ, ಅಸಮ್ಮತಿ ಸೂಚಿಸುವ ಪ್ರೇಕ್ಷಕರಿಂದ ವೈಯಕ್ತಿಕ ಸ್ವಾತಂತ್ರ್ಯವನ್ನು ಸಂವಿಧಾನವು ರಕ್ಷಿಸುತ್ತದೆ” ಎಂದಿದ್ದರು.

’ಸಾರ್ವಜನಿಕ ಸುವ್ಯವಸ್ಥೆ’ಯನ್ನು ಕಾಪಾಡಲು ಈ ಕಾನೂನಿನ ಅವಶ್ಯಕತೆ ಇದೆ ಎಂಬುದಕ್ಕೆ ಸರಕಾರದ ಬಳಿ ಯಾವ ಪುರಾವೆಗಳೂ ಇಲ್ಲ. ಈ ಕಾನೂನಿನ ಹಿಂದಿರುವ ತರ್ಕ ’ಸಾರ್ವಜನಿಕ ಸುವ್ಯವಸ್ಥೆ’ಯನ್ನು ಕಾಪಾಡುವುದು ಆಗಿರದೇ ಅದರ ಬದಲಿಗೆ ಅಲ್ಪಸಂಖ್ಯಾತ ಸಮುದಾಯಗಳು ತಮ್ಮ ಧಾರ್ಮಿಕ ನಂಬಿಕೆಗೆ ಇರುವ ಹಕ್ಕನ್ನು ಮತ್ತು ಸ್ವತಂತ್ರ ವ್ಯಕ್ತಿಗಳಿಗೆ ಇರುವ ಪ್ರೀತಿಸುವ ಹಕ್ಕನ್ನು ಗುರಿ ಮಾಡಿ ಈ ಮಸೂದೆಯನ್ನು ತರಲಾಗಿದೆ. ಧಾರ್ಮಿಕ ಸ್ವಾತಂತ್ರ್ಯ ಮತ್ತು ಪ್ರೀತಿಸುವ ಸ್ವಾತಂತ್ರ್ಯಕ್ಕಿರುವ ಸಂವಿಧಾನಾತ್ಮಕ ಭರವಸೆಯ ಪವಿತ್ರತೆಯಲ್ಲಿ ನಂಬಿಕೆ ಇರುವ ಎಲ್ಲರೂ ಈ ಮಸೂದೆಗೆ ಪ್ರತಿರೋಧ ತೋರಬೇಕಿದೆ.

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಆಲ್ಟರ್‌ನೇಟಿವ್ ಲಾ ಫೋರಂನ ಸ್ಥಾಪಕ ಸದಸ್ಯರು. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾನೂನು ಹೋರಾಟಗಳ ಹಿಂದಿರುವ ವ್ಯಕ್ತಿ. ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಕೋಮುಸಂಘರ್ಷಗಳ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನು ನೆರವು ಒದಗಿಸುತ್ತಾ ಬಂದಿದ್ದಾರೆ.


ಇದನ್ನೂ ಓದಿ: ಮತಾಂಧ ಸರ್ವಾಧಿಕಾರದತ್ತ ಕರ್ನಾಟಕ: ವಿಧಾನಸಭೆಯ ಮುಂದೆ ‘ಧಾರ್ಮಿಕ ಬಂದೀಖಾನೆಯ ವಿಧೇಯಕ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...