Homeಕರ್ನಾಟಕಸಂವಿಧಾನಕ್ಕೆ ಅಗೌರವ ತೋರುವ ಧಾರ್ಮಿಕ ಸ್ವಾತಂತ್ರ ಹಕ್ಕು ಸಂರಕ್ಷಣಾ ವಿಧೇಯಕ

ಸಂವಿಧಾನಕ್ಕೆ ಅಗೌರವ ತೋರುವ ಧಾರ್ಮಿಕ ಸ್ವಾತಂತ್ರ ಹಕ್ಕು ಸಂರಕ್ಷಣಾ ವಿಧೇಯಕ

- Advertisement -
- Advertisement -

ಕರ್ನಾಟಕ ಧಾರ್ಮಿಕ ಸ್ವಾತಂತ್ರ ಹಕ್ಕು ಸಂರಕ್ಷಣಾ ವಿಧೇಯಕ, 2021 (ಕರ್ನಾಟಕ ಪ್ರೊಟೆಕ್ಷನ್ ಆಫ್ ರೈಟ್ ಟು ಫ್ರೀಡಮ್ ಆಫ್ ರಿಲಿಜನ್ ಬಿಲ್, 2021) ಎಂಬ ಈ ಹೆಸರೇ ವಿಪರ್ಯಾಸದಿಂದ ಕೂಡಿದೆ ಹಾಗೂ ಇದು ಸಂವಿಧಾನ ವಿರೋಧಿ ಪರಿಣಾಮಗಳನ್ನು ಬೀರುವ ಅಂಶಗಳಿಂದ ತುಂಬಿದೆ. ಈ ಮಸೂದೆ ಧಾರ್ಮಿಕ ಸ್ವಾತಂತ್ರವನ್ನು ರಕ್ಷಿಸಲು ಇರುವುದಲ್ಲ, ಅದರ ಬದಲಾಗಿ ಭಾರತದ ಸಂವಿಧಾನವನ್ನು ರಚಿಸಿದವರು ಊಹಿಸಿಕೊಳ್ಳದಂತಹ ರೀತಿಯಲ್ಲಿ ಧಾರ್ಮಿಕ ಸ್ವಾತಂತ್ರವನ್ನು ಹತ್ತಿಕ್ಕುವ ರೀತಿಯಲ್ಲಿ ಇದೆ. ಈ ಮಸೂದೆಯು ’ತಪ್ಪು ನಿರೂಪಣೆ, ಬಲವಂತದಿಂದ, ಮೋಸದಿಂದ, ಅನುಚಿತ ಪ್ರಭಾವ ಬಳಸಿ, ಆಮಿಷದಿಂದ ಮತ್ತು ಮದುವೆಯ ಭರವಸೆ ನೀಡಿ, ಯಾವುದೇ ವಂಚನೆಯ ವಿಧಾನಗಳು ಮೂಲಕ’ ಆಗುವ ಮತಾಂತರಗಳನ್ನು ಅಪರಾಧೀಕರಣಗೊಳಿಸುವ ಕೆಲಸ ಮಾಡುತ್ತದೆ.

ಬಲವಂತದಿಂದ, ಆಮಿಷದಿಂದ ಅಥವಾ ಮೋಸದಿಂದ ಮಾಡುವ ಮತಾಂತರವನ್ನು ನಿಷೇಧಿಸುವುದರಲ್ಲಿ ಇರುವ ಸಮಸ್ಯೆಯಾದರೂ ಏನು ಎಂದು ಯಾವುದೇ ಓದುಗ ಕೇಳಬಹುದು; ಅದನ್ನು ತಿಳಿಯಲು ಈ ಮಸೂದೆಯ ವಿವರಗಳನ್ನು ಕೂಲಂಕಷವಾಗಿ ನೋಡಬೇಕಿದೆ. ಇದನ್ನು ನೋಡಲು ನಾವು ಮಸೂದೆಯ ಇಂಗ್ಲಿಷ್ ಕರಡಿನಲ್ಲಿ ಇರುವ ಅಲ್ಯೂರ್‌ಮೆಂಟ್ ಎಂಬುದರ ಅರ್ಥ ತಿಳಿದುಕೊಳ್ಳುವ. ಕನ್ನಡದ ಕರಡಿನಲ್ಲಿ ಇದನ್ನು ಆಮಿಷ ಎಂದು ಕರೆಯಲಾಗಿದೆ. ಅತ್ಯಂತ ಸಮಸ್ಯಾತ್ಮಕ ವ್ಯಾಖ್ಯಾನಗಳನ್ನು ಒಳಗೊಂಡಿರುವ ಈ ಶಾಸನದಲ್ಲಿ ಎಲ್ಲಕ್ಕಿಂತ ಹೆಚ್ಚು ಸಮಸ್ಯೆ ಇರುವುದು ಈ ಪದದ ವ್ಯಾಖ್ಯಾನದಲ್ಲಿ.

ಅಲ್ಯೂರ್‌ಮೆಂಟ್ ಅಥವಾ ಆಮಿಷ ಎಂಬುದನ್ನು ತುಂಬಾ ವಿಶಾಲಾರ್ಥದಲ್ಲಿ ’ನಗದು ರೂಪದಲ್ಲಾಗಲಿ ಅಥವಾ ವಸ್ತುವಿನ ರೂಪದಲ್ಲಾಗಲಿ ನೀಡುವ ಯಾವುದೇ ಉಡುಗೊರೆ’ ಹಾಗೂ ಅದರೊಂದಿಗೆ ’ಉದ್ಯೋಗ ಅಥವಾ ಉಚಿತ ಶಿಕ್ಷಣ’ ಎಂಬುದನ್ನು ವ್ಯಾಖ್ಯಾನದಲ್ಲಿ ಸೇರಿಸಲಾಗಿದೆ. ಹಾಗಾಗಿ ಶಾಲೆಗಳನ್ನು ಅಥವಾ ಆಸ್ಪತ್ರೆಗಳನ್ನು ನಡೆಸುವ ಲೋಕೋಪಕಾರಿ ಕೆಲಸಗಳನ್ನು, ಮತಾಂತರದ ಉದ್ದೇಶದಿಂದ ಮಾಡಲಾಗುವ ಕಾನೂನುಬಾಹಿರ ಚಟುವಟಿಕೆಗಳು ಎಂದು ಹೇಳಿ ಎಷ್ಟು ಸುಲಭವಾಗಿ ಮಸಿ ಬಳಿಯಬಹುದೆಂದು ಅತ್ಯಂತ ಸುಲಭವಾಗಿ ಕಾಣಬಹುದಾಗಿದೆ. ಈ ಆಮಿಷದ ವ್ಯಾಖ್ಯಾನವು, ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕ್ರಿಶ್ಚಿಯನ್ನರು ನಡೆಸುವ ಶಾಲೆಗಳಿಗೆ ಬಲವಂತದಿಂದ ನುಗ್ಗಿ ಕ್ರಿಸ್‌ಮಸ್ ಆಚರಣೆಗಳನ್ನು ನಿಲಿಸುವಂತಹ ಬಲಪಂಥೀಯರು ನಡೆಸುವ ಆಘಾತಕಾರಿ ಘಟನೆಗಳನ್ನು ನ್ಯಾಯಬದ್ಧಗೊಳಿಸುವ ಕೆಲಸ ಮಾಡುತ್ತದೆ. ನಿನ್ನೆಯವರೆಗೆ, ಈ ವಿಜಿಲಾಂಟೆ (ಕಾನೂನನ್ನು ಕೈಗೆತ್ತಿಕೊಳ್ಳುವ ಕಾನೂನುಬಾಹಿರ) ಗುಂಪುಗಳು ಮಾಡುತ್ತಿದ್ದ ಆಧಾರವಿಲ್ಲದ ಹುಚ್ಚಾಟದ ಆರೋಪಗಳನ್ನು ಇಂದು ಈ ಕಾಯಿದೆಯ ಅಡಿಯಲ್ಲಿ ಕಾನೂನುಸಮ್ಮತಗೊಳಿಸಲಾಗುತ್ತಿದೆ ಹಾಗೂ ’ಮತಾಂತರವನ್ನು ಮಾಡಿದ ಅಥವಾ ಅದಕ್ಕೆ ನೆರವು ನೀಡಿದ ಅಥವಾ ಅದಕ್ಕೆ ದುಷ್ಪ್ರೇರಣೆ ನೀಡಿದ ವ್ಯಕ್ತಿಯ’ ಮೇಲೆ ಸಾಕ್ಷ್ಯದ ಹೊರೆಯನ್ನು ಹೇರುತ್ತದೆ. ಸರಳವಾಗಿ ಹೇಳಬೇಕೆಂದರೆ, ಒಬ್ಬ ವ್ಯಕ್ತಿ ಯಾವುದೇ ಒಂದು ಶಾಲೆಗೆ ನುಗ್ಗಿ ಅಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿದರೆ ಅವನನ್ನು ನಂಬಲೇಬೇಕು ಹಾಗೂ ಪೊಲೀಸರು ಎಫ್‌ಐಆರ್ ದರ್ಜು ಮಾಡಲೇಬೇಕು. ವಿಚಾರಣೆಯ ಸಮಯದಲ್ಲಿ ಯಾರ ವಿರುದ್ಧ ಆಮಿಷ ಒಡ್ಡಿ ಮತಾಂತರ ಮಾಡಿದ್ದಾರೆ ಎಂಬ ಆರೋಪ ಇದೆಯೋ, ಆ ವ್ಯಕ್ತಿಯೇ ತಾನು ಮತಾಂತರ ಮಾಡಿಲ್ಲ ಎಂದು ಸಾಬೀತುಪಡಿಸಬೇಕು. ’ರುಜುವಾತಿನ ಭಾರ’ವನ್ನು ಈ ರೀತಿ ತಿರುಚಿಸಿರುವುದು, ’ತಪ್ಪಿತಸ್ಥ ಎಂದು ಸಾಬೀತಾಗುವವರೆಗೆ ನಿರ್ದೋಷಿ’ ಎಂಬ ಕ್ರಿಮಿನಲ್ ಲಾನ ಮೂಲ ತತ್ವಕ್ಕೆ ವಿರುದ್ಧವಾಗಿದೆ. ’ಆಮಿಷ’ದ ವಿಶಾಲ ವ್ಯಾಖ್ಯಾನ ಮತ್ತು ಅದರೊಂದಿಗೆ ರುಜುವಾತಿನ ಹೊರೆಯನ್ನು ರಿವರ್ಸ್ ಮಾಡಿರುವುದು, ಇವೆರಡೂ ಜೊತೆಗೂಡುವುದರಿಂದ ಆಗುವುದೇನೆಂದರೆ, ಆಸ್ಪತ್ರೆ, ಶಾಲೆ ನಡೆಸುವ, ಸಮಾಜ ಸೇವೆ ಸಲ್ಲಿಸುವ ಪ್ರತಿಯೊಂದು ಕ್ರಿಶ್ಚಿಯನ್ ಸಂಸ್ಥೆಯೂ ಸುಳ್ಳು ಆರೋಪಗಳಿಗೆ ಮತ್ತು ಅದರಿಂದ ಕಿರುಕುಳಕ್ಕೆ ಬಲಿಯಾಗುವ ಸಾಧ್ಯತೆಗಳಿಗೆ ಒಡ್ಡಿಕೊಳ್ಳುವಂತಾಗಿದೆ.

ಈ ಮಸೂದೆಯು, ಮಹಿಳೆಯರನ್ನು ಮತ್ತು ಪರಿಶಿಷ್ಟ ಜಾತಿ/ಪಂಗಡದ ವ್ಯಕ್ತಿಗಳನ್ನು ಅವಮಾನಿಸುತ್ತದೆ. ಹೇಗೆ ಎಂದರೆ, ಒಂದು ವೇಳೆ ಮತಾಂತರಕ್ಕೆ ಒಳಗಾದವರು ’ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಪ್ರಾಪ್ತ ವಯಸ್ಕ ಅಥವಾ ಅಸ್ವಸ್ಥಚಿತ್ತ ವ್ಯಕ್ತಿ’ಯ ಮತಾಂತರಕ್ಕೆ ಹೆಚ್ಚಿನ ಶಿಕ್ಷೆ ಇರುವುದು ಎಂದು ಈ ಮಸೂದೆ ಹೇಳುತ್ತದೆ. ಈ ಮಸೂದೆಯನ್ನು ರಚಿಸಿದವರ ಪ್ರಕಾರ, ಮಹಿಳೆಯರು ಮತ್ತು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದವರಿಗೆ ತಮ್ಮದೇ ಆದ ಸ್ವಂತ ಬುದ್ಧಿ ಇರುವುದಿಲ್ಲ ಹಾಗೂ ಅಸ್ವಸ್ಥಚಿತ್ತ ಮತ್ತು ಅಪ್ರಾಪ್ತರೊಂದಿಗೆ ಸಮೀಕರಿಸಲಾಗಿದೆ.

ಈ ಮಸೂದೆಯು ’ಆಮಿಷ, ಬಲವಂತ ಮತ್ತು ಮೋಸ’ದಿಂದ ಮಾಡಲಾಗುವ ಮತಾಂತರವನ್ನಷ್ಟೇ ಗುರಿ ಮಾಡಿಲ್ಲ, ಅದರೊಂದಿಗೆ ಮತಾಂತರವನ್ನೇ ನಿಯಂತ್ರಿಸುವುದಕ್ಕೆ ಮುಂದಾಗಿದೆ. ಸೆಕ್ಷನ್ 8ರ ಅಡಿಯಲ್ಲಿ, ಮತಾಂತರ ಮಾಡಿಕೊಳ್ಳುವ ಇಚ್ಛೆಯನ್ನು ಹೊಂದಿದ ವ್ಯಕ್ತಿ ಮತ್ತು ಮತಾಂತರವನ್ನು ಮಾಡುವ ವ್ಯಕ್ತಿಗಳಿಬ್ಬರೂ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಮೂವತ್ತು ದಿನ ಮುಂಗಡವಾಗಿ ಒಂದು ಅರ್ಜಿಯನ್ನು ಸಲ್ಲಿಸಬೇಕು. ಆಗ ಜಿಲ್ಲಾ ಮ್ಯಾಜಿಸ್ಟ್ರೇಟ್ ತಹಸೀಲ್ದಾರರ ಕಚೇರಿಯ ನೋಟಿಸ್ ಬೋರ್ಡಿನಲ್ಲಿ ಮುಂದೆ ಆಗುವ ಮತಾಂತರದ ಬಗ್ಗೆ ನೋಟಿಸ್ ಹಾಕಿ, ’ಆಕ್ಷೇಪಣೆ’ಗಳನ್ನು ಆಹ್ವಾನಿಸುತ್ತಾನೆ. ಹಾಗೂ ತದನಂತರ ಸಮಾಜ ಕಲ್ಯಾಣ ಅಧಿಕಾರಿಯ ಮೂಲಕ ಪ್ರಸ್ತಾಪಿತ ಮತಾಂತರದ ನೈಜ ಆಶಯ, ಉದ್ದೇಶ ಮತ್ತು ಕಾರಣದ ಬಗ್ಗೆ ವಿಚಾರಣೆ ನಡೆಸಬೇಕಾಗುತ್ತದೆ. ಈ ವಿಚಾರಣೆಯ ಆಧಾರದ ಮೇಲೆ ಮಸೂದೆಯ ಅಧಿನಿಯಮಗಳ ಅಡಿ ಅಪರಾಧ ಎಂದು ಕಂಡುಬಂದರೆ ಪ್ರಕರಣ ಪೊಲೀಸರಿಗೆ ವಹಿಸಿ, ಅವರು ಕ್ರಮ ಕೈಗೊಳ್ಳುತ್ತಾರೆ.

ಮತಾಂತರಕ್ಕೆ ನೋಟಿಸನ್ನು ನೀಡುವುದು ಅಗತ್ಯ ಎಂಬ ಕ್ರಮವೇ ಸಂವಿಧಾನಬದ್ಧ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ; ಅದನ್ನು ಪುಟ್ಟಸ್ವಾಮಿ ವರ್ಸಸ್ ಯುನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಮ್ ಕೋರ್ಟಿನ ಒಂಬತ್ತು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದರು. ಆಗ ಸರ್ವೋಚ್ಚ ನ್ಯಾಯಾಲಯವು, ’ಖಾಸಗಿತನ ಎಂಬುದು ಒಬ್ಬ ವ್ಯಕ್ತಿಯ ಪವಿತ್ರತೆಯ ಸರ್ವೋಚ್ಚ ಅಭಿವ್ಯಕ್ತಿಯಾಗಿದೆ. ಇದೊಂದು ಸಂವಿಧಾನಾತ್ಮಕ ಮೌಲ್ಯವಾಗಿದ್ದು, ಇದು ಮೂಲಭೂತ ಹಕ್ಕುಗಳ ಇಡೀ ಸಮುಚ್ಛಯಕ್ಕೆ ಅನ್ವಯವಾಗುತ್ತದೆ ಹಾಗೂ ಒಬ್ಬ ವ್ಯಕ್ತಿಯ ಆಯ್ಕೆ ಮತ್ತು ಸ್ವಯಂ ನಿರ್ಧಾರದ ಒಂದು ವಲಯವನ್ನು ರಕ್ಷಿಸುತ್ತದೆ.’.

ಸರ್ವೋಚ್ಯ ನ್ಯಾಯಾಲಯ ಮುಂದೆ ಹೇಳುತ್ತ, ಇದನ್ನು ಆರ್ಟಿಕಲ್ 21ರ ಜೊತೆಗೆ ಓದಿದರೆ, ಸ್ವಾತಂತ್ರ್ಯವು ಒಬ್ಬ ವ್ಯಕ್ತಿಗೆ ಏನು ಮತ್ತು ಹೇಗೆ ತಿನ್ನಬೇಕೆಂಬ, ಯಾವ ರೀತಿಯಲ್ಲಿ ಬಟ್ಟೆ
ಧರಿಸಬೇಕೆಂಬ, ತಾನು ಒಪ್ಪಿಕೊಳ್ಳುವ ನಂಬಿಕೆ ಯಾವುದಿರಬೇಕೆಂಬ ಹಾಗೂ ಮನಸ್ಸಿನ ಖಾಸಗಿತನದ ಒಳಗೆ, ಸ್ವಾಯತ್ತತೆ ಹಾಗೂ ಸ್ವಯಂ ನಿರ್ಧಾರ ಬಯಸುವ ಆಯ್ಕೆಗಳನ್ನು ಸೇರಿಸಿ ಇನ್ನೂ ಹಲವಾರು ವಿಷಯಗಳನ್ನು ಒಳಗೊಂಡಂತೆ ಜೀವನದ ಹಲವು ಮುಖಗಳ ಆಯ್ಕೆಯ ಆದ್ಯತೆಗಳನ್ನು ಸಬಲೀಕರಿಸುತ್ತದೆ.

2018 ರಲ್ಲಿ ಶಫಿನ್ ಜಹಾನ್ ವರ್ಸಸ್ ಅಶೋಕನ್ ಕೆ.ಎಂ. ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು, ನಂಬಿಕೆಯ(ಧರ್ಮದ) ವಿಷಯಗಳು ತನ್ನ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನಷ್ಟೇ ಸಹಜವಾಗಿ ಅಂತರ್ಗತವಾದದ್ದು (ಇಂಟ್ರಿನ್ಸಿಕ್) ಎಂದು ಹೇಳಿದೆ ಹಾಗೂ “ಸಂವಿಧಾನವು ವ್ಯಕ್ತಿಗಳಿಗೆ ತಮ್ಮ ಸಂತೋಷದ ಹುಡುಕಾಟಕ್ಕೆ ಕೇಂದ್ರವಾಗಿರುವ ವಿಷಯಗಳಲ್ಲಿ ನಿರ್ಣಯ ತೆಗೆದುಕೊಳ್ಳುವುದನ್ನು ಖಾತ್ರಿಪಡಿಸುತ್ತದೆ. ನಂಬಿಕೆ ಮತ್ತು ಧರ್ಮದ ವಿಷಯಗಳಲ್ಲಿ, ಇವುಗಳಲ್ಲಿ ನಂಬಿಕೆಯಿಟ್ಟುಕೊಳ್ಳಬೇಕೋ ಬೇಡವೋ ಎಂಬುದನ್ನೂ ಒಳಗೊಂಡಂತೆ ಈ ವಿಷಯಗಳು ಸಂವಿಧಾನಾತ್ಮಕ ಸ್ವಾತಂತ್ರದ ಕೇಂದ್ರದಲ್ಲಿವೆ” ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತು.

ಮತಾಂತರದ ವಿಷಯವು ವೈಯಕ್ತಿಕ ನಂಬಿಕೆ, ದೃಢತೆ ಹಾಗೂ ಆತ್ಮಸಾಕ್ಷಿಯ ವಿಷಯವಾಗಿದೆ ಹಾಗೂ ಮತಾಂತರ ಹೊಂದಲು ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸುವ ಈ ಕ್ರಿಯೆ, ಆರ್ಟಿಕಲ್ 25ರಲ್ಲಿರುವ ತನ್ನ ಧರ್ಮವನ್ನು ಮುಕ್ತವಾಗಿ ಆಚರಿಸುವ, ಪ್ರತಿಪಾದಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ನಿರಾಕರಿಸುತ್ತದೆ.

ಈ ಮಸೂದೆಯು ಲವ್ ಮ್ಯಾರೇಜ್, ಪ್ರೀತಿಸಿ ಮದುವೆಯಾಗುವುದನ್ನು ಕೂಡ ನಿರ್ದಿಷ್ಟವಾಗಿ ಗುರಿ ಮಾಡುತ್ತದೆ ಅದರಲ್ಲೂ ವಿಶೇಷವಾಗಿ ಅವು ಅಂತರ್‌ಧರ್ಮೀಯ ವಿವಾಹಗಳಾಗಿದ್ದರೆ, ಅವನ್ನು ’ಮದುವೆಯ ಭರವಸೆ’ಯ ಕಾರಣದಿಂದ ಅಪರಾಧೀಕರಣಗೊಳಿಸುವ ಕೆಲಸ ಮಾಡುತ್ತದೆ. ಈ ಮಸೂದೆಯು ಬಲವಂತದ, ಮೋಸದಿಂದ ಆದ ಮತಾಂತರಗಳನ್ನಷ್ಟೇ ಅಪರಾಧೀಕರಿಸುವುದಿಲ್ಲ, ಅದರೊಂದಿಗೆ ’ಮದುವೆಯ ಭರವಸೆ’ಯೊಂದಿಗೆ ಆದ ಮತಾಂತರವನ್ನೂ ಅಪರಾಧೀಕರಿಸುತ್ತದೆ, ಇದು ಸಂವಿಧಾನದ ಮೂಲ ಆಶಯವನ್ನು ಉಲ್ಲಂಘಿಸುತ್ತದೆ; ಅದ್ಯಾವುಂದರೆ ತನಗಿಷ್ಟವಾದ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು ಹಾಗೂ ತನಗಿಷ್ಟವಾದ ಧರ್ಮದ ಹಕ್ಕು. ಇವೆರಡೂ ಸಂವಿಧಾನವು ರಕ್ಷಣೆ ನೀಡಿರುವ ವೈಯಕ್ತಿಕ ಆಯ್ಕೆಗಳಾಗಿವೆ ಹಾಗೂ ಅಂತರ್‌ಧರ್ಮೀಯ ವಿವಾಹಗಳನ್ನು ಅಪರಾಧೀಕರಣಗೊಳಿಸುವ ಯಾವ ಹಕ್ಕೂ ಸರಕಾರಕ್ಕೆ ಇಲ್ಲ.

ವೈಯಕ್ತಿಕ ಹಕ್ಕಿಗೆ ಈ ಮಸೂದೆಯಲ್ಲಿರುವ ಇನ್ನೊಂದು ದೊಡ್ಡ ಪೆಟ್ಟು ಯಾವುದೆಂದರೆ, ಮೇಲೆ ಚರ್ಚಿಸಿದಂತಹ ಸಂದರ್ಭಗಳಲ್ಲಿ ’ಪೋಷಕರಿಗೆ, ಸಹೋದರರಿಗೆ, ಸಹೋದರಿಯರಿಗೆ ಅಥವಾ
ಸಹೋದ್ಯೋಗಿಗೆ’ ಆಗುತ್ತಿರುವ ಮತಾಂತರ ಕಾನೂನುಬಾಹಿರ ಎಂದು ದೂರು ನೀಡುವ ಅವಕಾಶ ನೀಡಿರುವುದು. ಈ ’ಕಾನೂನುಬಾಹಿರ ಮತಾಂತರ’ವು ವಿವಾಹದ ಮೊದಲು ಅಥವಾ
ನಂತರ ಆಗುವ ಮತಾಂತರ ಆಗಿರುವುದರಿಂದ ಇದರ ಪರಿಣಾಮವಾಗಿ ಕುಟುಂಬಕ್ಕೆ ಮತ್ತು ವಿಜಿಲಾಂಟೆ ಗುಂಪುಗಳಿಗೆ ಎಫ್‌ಐಆರ್ ದಾಖಲಿಸುವದನ್ನು ಸಬಲೀಕರಿಸುವ ಕೆಲಸ ಮಾಡಿದೆಯಷ್ಟೆ.

ಇದು ವೈಯಕ್ತಿಕ ಆಯ್ಕೆಯ ಪವಿತ್ರತೆಯ ಸಂವಿಧಾನಾತ್ಮಕ ಮಾನ್ಯತೆಯ ಉಲ್ಲಂಘನೆಯಾಗಿದೆ. ಶಫಿನ್ ಜಹಾನ್ ವರ್ಸಸ್ ಅಶೋಕನ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ’ಸಾಮಾಜಿಕ ಅನುಮೋದನೆ’ಯನ್ನು ಮೀರಿ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನೇ ಎತ್ತಿಹಿಡಿಯಿತು. ಯಾವುದೇ ಸರಕಾರ ಅಥವಾ ಕಾನೂನು ಒಬ್ಬ ವ್ಯಕ್ತಿಯ ಸಂಗಾತಿಯ ಆಯ್ಕೆಯನ್ನು ನಿರ್ದೇಶಿಸಲು ಸಾಧ್ಯವಿಲ್ಲ ಏಕೆಂದರೆ ಅದುವೆ ಸಂವಿಧಾನದ ಅಡಿಯಲ್ಲಿ ಬರುವ ವೈಯಕ್ತಿಕ ಸ್ವಾತಂತ್ರ್ಯದ ಹೂರಣವಾಗಿದೆ. ವೈಯಕ್ತಿಕ ಆಯ್ಕೆಗಳನ್ನು ಬಲವಾಗಿ ಪ್ರತಿಪಾದಿಸುತ್ತ ಜೆ. ಚಂದ್ರಚೂಡ್ ಅವರು ’ನಮ್ಮ ಆಯ್ಕೆಗಳನ್ನು ಗೌರವಿಸಲಾಗುತ್ತದೆ ಏಕೆಂದರೆ ಅವುಗಳು ನಮ್ಮವು. ನಿಕಟವಾದ ವೈಯಕ್ತಿಕ ನಿರ್ಣಯಗಳನ್ನು ಮಾನ್ಯ ಮಾಡಲು ಸಾಮಾಜಿಕ ಅನುಮೋದನೆಯು ಆಧಾರವಲ್ಲ. ನಿಜವಾಗಿಯೂ, ಅಸಮ್ಮತಿ ಸೂಚಿಸುವ ಪ್ರೇಕ್ಷಕರಿಂದ ವೈಯಕ್ತಿಕ ಸ್ವಾತಂತ್ರ್ಯವನ್ನು ಸಂವಿಧಾನವು ರಕ್ಷಿಸುತ್ತದೆ” ಎಂದಿದ್ದರು.

’ಸಾರ್ವಜನಿಕ ಸುವ್ಯವಸ್ಥೆ’ಯನ್ನು ಕಾಪಾಡಲು ಈ ಕಾನೂನಿನ ಅವಶ್ಯಕತೆ ಇದೆ ಎಂಬುದಕ್ಕೆ ಸರಕಾರದ ಬಳಿ ಯಾವ ಪುರಾವೆಗಳೂ ಇಲ್ಲ. ಈ ಕಾನೂನಿನ ಹಿಂದಿರುವ ತರ್ಕ ’ಸಾರ್ವಜನಿಕ ಸುವ್ಯವಸ್ಥೆ’ಯನ್ನು ಕಾಪಾಡುವುದು ಆಗಿರದೇ ಅದರ ಬದಲಿಗೆ ಅಲ್ಪಸಂಖ್ಯಾತ ಸಮುದಾಯಗಳು ತಮ್ಮ ಧಾರ್ಮಿಕ ನಂಬಿಕೆಗೆ ಇರುವ ಹಕ್ಕನ್ನು ಮತ್ತು ಸ್ವತಂತ್ರ ವ್ಯಕ್ತಿಗಳಿಗೆ ಇರುವ ಪ್ರೀತಿಸುವ ಹಕ್ಕನ್ನು ಗುರಿ ಮಾಡಿ ಈ ಮಸೂದೆಯನ್ನು ತರಲಾಗಿದೆ. ಧಾರ್ಮಿಕ ಸ್ವಾತಂತ್ರ್ಯ ಮತ್ತು ಪ್ರೀತಿಸುವ ಸ್ವಾತಂತ್ರ್ಯಕ್ಕಿರುವ ಸಂವಿಧಾನಾತ್ಮಕ ಭರವಸೆಯ ಪವಿತ್ರತೆಯಲ್ಲಿ ನಂಬಿಕೆ ಇರುವ ಎಲ್ಲರೂ ಈ ಮಸೂದೆಗೆ ಪ್ರತಿರೋಧ ತೋರಬೇಕಿದೆ.

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಆಲ್ಟರ್‌ನೇಟಿವ್ ಲಾ ಫೋರಂನ ಸ್ಥಾಪಕ ಸದಸ್ಯರು. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾನೂನು ಹೋರಾಟಗಳ ಹಿಂದಿರುವ ವ್ಯಕ್ತಿ. ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಕೋಮುಸಂಘರ್ಷಗಳ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನು ನೆರವು ಒದಗಿಸುತ್ತಾ ಬಂದಿದ್ದಾರೆ.


ಇದನ್ನೂ ಓದಿ: ಮತಾಂಧ ಸರ್ವಾಧಿಕಾರದತ್ತ ಕರ್ನಾಟಕ: ವಿಧಾನಸಭೆಯ ಮುಂದೆ ‘ಧಾರ್ಮಿಕ ಬಂದೀಖಾನೆಯ ವಿಧೇಯಕ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....