ಈ ತಿಂಗಳ ಕೊನೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ದೂರಿನಲ್ಲಿ ಪ್ರಧಾನ ಮಂತ್ರಿಯು ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಯಂತ್ರೋಪಕರಣಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ವಿತರಿಸಿದ ವ್ಯಾಕ್ಸಿನೇಷನ್ ಪ್ರಮಾಣ ಪತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋಗಳನ್ನು ಬಳಸಿರುವುದಕ್ಕೆ ತೃಣಮೂಲ ಪಕ್ಷವು ಆಕ್ರೋಶ ವ್ಯಕ್ತಪಡಿಸಿದೆ. ಈ ಮೂಲಕ ವೈದ್ಯರು, ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಲ್ಲಬೇಕಾಗಿರುವ ಹೊಗಳಿಕೆಯನ್ನು ಯಾವುದೆ ಇರುಸುಮುರುಸು ಇಲ್ಲದೆ ಕದಿಯಲಾಗಿದೆ ಎಂದು ಪಕ್ಷವು ಆರೋಪಿಸಿದೆ.
ಇದನ್ನೂ ಓದು: ರೈತರು ದೇಶದ್ರೋಹಿಗಳಲ್ಲ, ಕೆಂಪು ಕೋಟೆ ಘರ್ಷಣೆಗೆ ಕೇಂದ್ರದ ಪಿತೂರಿಯೇ ಕಾರಣ: ಕೇಜ್ರಿವಾಲ್
ಆರೋಗ್ಯ ಸಚಿವಾಲಯ ನೀಡುವ ಪ್ರಮಾಣ ಪತ್ರದಲ್ಲಿ ಒಬ್ಬ ವ್ಯಕ್ತಿಯು ಲಸಿಕೆ ತೆಗೆದುಕೊಂಡಿದ್ದಾನೆ ಎಂದು ದೃಡಪಡಿಸುತ್ತದೆ. ಪ್ರಮಾಣ ಪತ್ರದಲ್ಲಿ ಪ್ರಧಾನಮಂತ್ರಿಯವರ ಫೋಟೋ ಮಾತ್ರವಲ್ಲದೆ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಅವರ ಸಂದೇಶವನ್ನು ಮುದ್ರಿಸಲಾಗಿದೆ.
“ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿದ ತಾತ್ಕಾಲಿಕ ಪ್ರಮಾಣಪತ್ರಗಳಲ್ಲಿ ಪ್ರಧಾನಿಯ ಛಾಯಾಚಿತ್ರ, ಹೆಸರು ಮತ್ತು ಸಂದೇಶವನ್ನು ಮುದ್ರಿಸುವ ಮೂಲಕ, ಅವರು ತಮ್ಮ ಹುದ್ದೆ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದಲ್ಲದೆ, ಕೊರೊನಾ ಲಸಿಕೆಗಳ ಉತ್ಪಾದಕರಿಗೆ ಸಲ್ಲಬೇಕಾಗಿರುವ ಶ್ಲಾಘನೆಯನ್ನು ಕೂಡಾ ಕದಿಯುತ್ತಿದ್ದಾರೆ. ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ದಾದಿಯರು ಮತ್ತು ಆರೋಗ್ಯ ಸೇವಾ ಕಾರ್ಯಕರ್ತರ ಪಡೆಗಳಿಗೆ ಹೋಗಬೇಕಾಗಿರುವ ಪ್ರಶಂಸೆ ಮತ್ತು ಹೊಗಳಿಕೆಯನ್ನು ಯಾವುದೆ ಇರುಸುಮುರುಸು ಇಲ್ಲದೆ ಇವರು ಪಡೆಯುತ್ತಿದ್ದಾರೆ”ಎಂದು ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ’ಬ್ರಿಯೆನ್ ಕೇಂದ್ರ ಚುನಾವಣ ಆಯೋಗಕ್ಕೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಪ್ರಧಾನಿಯ ಈ ನಡೆಯು ಚುನಾವಣಾ ಸಂಹಿತೆಯ ಉಲ್ಲಂಘನೆ ಎಂದು ಅವರು ಆರೋಪಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ತೆರಿಗೆದಾರರ ವೆಚ್ಚದಲ್ಲಿ ಅನಗತ್ಯ ಪ್ರಚಾರ ಪಡೆಯುವುದನ್ನು ಚುನಾವಣಾ ಆಯೋಗವು ತಡೆಯಬೇಕು. ಪ್ರಕರಣದಲ್ಲಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯು ಸ್ಪಷ್ಟವಾಗಿದ್ದು, ತಕ್ಷಣವೆ ಇದನ್ನು ನಿಲ್ಲಿಸಬೇಕು ಎಂದು ತೃಣಮೂಲ ಸಂಸದ ಒತ್ತಾಯಿಸಿದ್ದಾರೆ.
ಇದನ್ನೂ ಓದು: ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದರೆ ಗೃಹಿಣಿಯರಿಗೆ ತಿಂಗಳಿಗೆ ₹ 2,000 ಸಹಾಯ ಧನ- ಪ್ರಿಯಾಂಕ ಗಾಂಧಿ