Homeಕರ್ನಾಟಕಮುಸ್ಲಾಪುರ ಮದ್ಯದಂಗಡಿ ಪ್ರಕರಣ; ಬಂಧನ ಭೀತಿಯಲ್ಲಿ ಊರು ತೊರೆದ ಗ್ರಾಮಸ್ಥರು!

ಮುಸ್ಲಾಪುರ ಮದ್ಯದಂಗಡಿ ಪ್ರಕರಣ; ಬಂಧನ ಭೀತಿಯಲ್ಲಿ ಊರು ತೊರೆದ ಗ್ರಾಮಸ್ಥರು!

ಗ್ರಾಮದಲ್ಲಿ ತೆರೆದ ಬಾರ್‌ ಮುಚ್ಚುವಂತೆ ಮಹಿಳೆಯರು ಪ್ರಶ್ನಿಸಿದಾಗ ಗಲಾಟೆ ನಡೆದಿದೆ. 41 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದೂ ಆರೋಪಿಸಲಾಗಿದೆ.

- Advertisement -
- Advertisement -

ಕಡೂರು ತಾಲ್ಲೂಕಿನ ಮುಸ್ಲಾಪುರ ಗ್ರಾಮದಲ್ಲಿ ಬಾರ್‌ ತೆರೆದಿದ್ದಕ್ಕೆ ಆಕ್ರೋಶಗೊಂಡ ಗ್ರಾಮದ ಮಹಿಳೆಯರು ನವೆಂಬರ್‌‌ 12ರಂದು ಬಾರ್‌ಗೆ ನುಗ್ಗಿ ಪೀಠೋಪಕರಣಗಳನ್ನೆಲ್ಲ ಮುರಿದುಹಾಕಿದ ಸುದ್ದಿ, ವೀಡಿಯೋ ಸಾಮಾಜಿಕ ಜಾಲತಾಣವೂ ಸೇರಿದಂತೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಮುಸ್ಲಾಪುರ ನಾಲ್ಕೈದು ಸಮುದಾಯಗಳ ಸುಮಾರು 150 ಮನೆಗಳಿರುವ ಪುಟ್ಟ ಗ್ರಾಮ. ಕೃಷಿ ಭೂಮಿಯಲ್ಲಿ ಕೂಲಿ ಮಾಡುವುದು ಇಲ್ಲಿನ ಬಹುತೇಕ ಜನರ ಬದುಕಾಗಿತ್ತು. ಹೀಗೆ ಕೂಲಿ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಊರಿನಲ್ಲಿ ಹೋಟೆಲ್‌ ಹೆಸರಿನಲ್ಲಿ ಬಾರ್‌ ಅಂಡ್‌ ರೆಸ್ಟೋರೆಂಟ್‌ ಒಂದನ್ನು ಆರಂಭ ಮಾಡಲಾಯಿತು.
ಆರಂಭದಿಂದಲೇ ಇದಕ್ಕೆ ಗ್ರಾಮಸ್ಥರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಬಾರ್‌ ಇರುವ ಸಮೀಪದಲ್ಲಿಯೇ ಹೈಸ್ಕೂಲ್‌ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ಗಳಿದ್ದು, ಹತ್ತಿರದಲ್ಲಿಯೇ ಮದಗದಕೆರೆ ಹಾಗೂ ಚಾನೆಲ್‌ ಇದೆ. ಗ್ರಾಮದಲ್ಲಿ ಬಾರ್‌ ತೆರೆದರೆ ಕೂಲಿ ಕಾರ್ಮಿಕರು ದುಡಿದ ಹಣವನ್ನು ಕುಡಿಯುವುದಕ್ಕೆ ವ್ಯಯಿಸುತ್ತಾರೆ ಎನ್ನುವ ಮಹಿಳೆಯರು, ನಮ್ಮೂರಿನ ಸ್ವಾಸ್ಥ್ಯಕ್ಕಾಗಿ ನಮ್ಮೂರಿನಲ್ಲಿ ಬಾರ್‌ ಬೇಡ ಎಂದು ಅಲವತ್ತುಕೊಂಡಿದ್ದರು.
ಎಮ್ಮೆದೊಡ್ಡಿ ಗ್ರಾಮ ಪಂಚಾಯಿತಿಯಿಂದಲೂ ಬಾರ್‌ ಅಂಡ್‌ ರೆಸ್ಟೋರೆಂಟ್‌ ತೆರೆಯದಂತೆ ನಿರ್ಣಯ ಹೊರಡಿಸಿದ್ದಾಗಲೂ ಕಳ್ಳದಾರಿಯಿಂದ ಬಾರ್‌ ತೆರೆಯಲು ಪ್ರಯತ್ನಿಸಲಾಗಿದೆ ಎಂದು ದೂರಲಾಗಿದೆ. ಹೋಟೆಲ್‌ ಮಾಡುತ್ತೇವೆ ಎಂದು ಪರವಾನಗಿ ಪಡೆದು ಅಕ್ರಮವಾಗಿ ಬಾರ್‌ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಕಳೆದ ಒಂದು ತಿಂಗಳಿನಿಂದ ಸತತ ಪ್ರತಿಭಟನೆ ನಡೆಸುತ್ತಾ ಬಂದಿದ್ದರು. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗೂ ಮನವಿ ಪತ್ರವನ್ನು ಸಲ್ಲಿಸಲಾಗಿತ್ತು.

“ಈ ನಡುವೆ ಬಾರ್‌ ಓಪನ್‌ ಮಾಡಿದ್ದನ್ನು ವಿರೋಧಿಸಿ ಮೂವರು ಮಹಿಳೆಯರು ಇದನ್ನು ಪ್ರಶ್ನಿಸಿ ಬಾರ್ ಒಳಗೆ ಹೋಗಿದ್ದರು. ಆ ಸಮಯದಲ್ಲಿ ಬಾರ್‌ನಲ್ಲಿದ್ದವರು ಕುಡಿದ ಅಮಲಿನಲ್ಲಿ ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ. ಮಹಿಳೆಯರನ್ನು ಅವಾಚ್ಯ ಪದಗಳಲ್ಲಿ ನಿಂದಿಸಿ, ಕಿರುಕುಳ ನೀಡಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮದ ಮಹಿಳೆಯರು ಹಾಗೂ ಪುರುಷರು ಬಾರ್‌ಗೆ ನುಗ್ಗಿ ಪೀಠೋಪಕರಣಗಳನ್ನು ಮುರಿದುಹಾಕಿದ್ದರು. ನಂತರದಲ್ಲಿ ಕಿರುಕುಳಕ್ಕೊಳಗಾಗಿದ್ದ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು” ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿರಿ: ಅಡಿ ಇಡದಿರಿ ಗುಡಿಯೊಳಗೆ…! ದೇವಸ್ಥಾನ ಪ್ರವೇಶ ನಿಷೇಧ ಮತ್ತು ವಿರೋಧ

“ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯರನ್ನು ವಿಚಾರಣೆಗಾಗಿ ಭಾನುವಾರ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿತ್ತು. ಮಾರನೇ ದಿನ ಆರು ಗಂಟೆಗೆ ಗ್ರಾಮಕ್ಕೆ ಬಂದ ಪಿಎಸ್‌ಐ ರಮ್ಯಾ ಹಾಗೂ ಸಿಬ್ಬಂದಿ ಗ್ರಾಮದಲ್ಲಿ ಮನೆಯೊಂದರ ಮೇಲಿನ ಹೆಂಚುಗಳನ್ನು ಒಡೆದುಹಾಕಿ, ಮನೆಯೊಳಗೆ ಬಾಗಿಲು ಮುರಿದು,  ನುಗ್ಗಿ ಮೂರು ಮಂದಿ ಮಹಿಳೆಯರು ಸೇರಿದಂತೆ ಐದು ಜನರನ್ನು ಪೊಲೀಸ್‌ ಠಾಣೆಗೆ ಎಳೆದೊಯ್ದರು” ಎಂದು ಗ್ರಾಮದ ಹಲವು ಮುಖಂಡರು ಆರೋಪಿಸಿದ್ದರು. ಈ ಕುರಿತಂತೆ ವಿಡಿಯೊ ಕೂಡ ವೈರಲ್‌ ಆಗಿತ್ತು. ಬಾಗಿಲು ಹಾಗೂ ಹೆಂಚು ದ್ವಂಸ ಆಗಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿತ್ತು.

ಗ್ರಾಮಸ್ಥರೆಲ್ಲರೂ ಕೂಡಿ ಕಡೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಬಾರ್‌ ಮಾಲೀಕರು ಕೂಡ ಬಾರ್‌ನಲ್ಲಿ ನಡೆದಿದ್ದರ ಬಗ್ಗೆ ಪ್ರತಿದೂರು ನೀಡಿದ್ದರು. ಬಾರ್‌ ಮಾಲೀಕರ ದೂರಿನ ಆಧಾರದಲ್ಲಿ 41 ಜನರ ಮೇಲೆ ಎಫ್‌ಐಆರ್‌ ದಾಖಲಾಗಿದ್ದು ಐಪಿಸಿ ಸೆಕ್ಷನ್ 143, 144, 147, 148, 323, 324, 504, 506, 447, 427, 114, 149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆ ನಂತರ ಮುಸ್ಲಾಪುರ ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದ್ದು, ಪ್ರಕರಣದಲ್ಲಿ ಭಾಗಿಯಾದ 41 ಆರೋಪಿಗಳಲ್ಲಿ 17 ಮಹಿಳೆಯರಿದ್ದಾರೆ. ಐವರನ್ನು ಈಗಾಗಲೇ ಬಂಧಿಸಲಾಗಿದ್ದು, ಬಂಧನಕ್ಕೆ ಹೆದರಿ ಇನ್ನುಳಿದವರು ಊರು ತೊರೆದಿದ್ದಾರೆ ಎಂದು ‘ನಾನುಗೌರಿ.ಕಾಂ’ಗೆ ತಿಳಿದುಬಂದಿದೆ.

“ಕೃಷಿ ಚಟುವಟಿಕೆಗಳು ನಡೆಯಬೇಕಿದೆ. ಜನರು ಪೊಲೀಸರಿಗೆ ಹೆದರಿ ಊರು ಬಿಟ್ಟು ಹೋಗಿದ್ದಾರೆ. ಹೋರಾಟ ಹಿಂಸೆಗೆ ತಿರುಗಿದ್ದು ವಿಷಾದನೀಯ. ಸ್ಥಳೀಯ ಜನರ ಆಗ್ರಹಕ್ಕೆ ಬೆಲೆ ಇಲ್ಲದಿದ್ದಾಗ, ಈ ಘಟನೆ ನಡೆದಿದೆ” ಎನ್ನುತ್ತಾರೆ ಗ್ರಾಮದ ಕೆಲವು ಮುಖಂಡರು.

ಜನರ ವಿರುದ್ಧವಾಗಿ ಹೋಟೆಲ್‌ ಪರವಾನಗಿ ಬಳಸಿಕೊಂಡು ತೆರೆಯಲಾಗಿರುವ ಬಾರ್‌ನಲ್ಲಿ ಐದು ಜನರ ಸಹಭಾಗಿತ್ವವಿದ್ದು, ಅದರಲ್ಲಿ ಒಬ್ಬರು ಸರ್ಕಾರಿ ಅಧಿಕಾರಿಯೊಬ್ಬರ ಪತ್ನಿಯು ಇದ್ದಾರೆ ಎಂಬ ಆರೋಪಗಳಿವೆ. ಇದೇನೇ ಇರಲಿ, ನಮ್ಮೂರಿಗೆ ಬಾರ್‌ ಬೇಡ, ಊರಿನಲ್ಲಿ ಬಾರ್‌ ತೆರೆದರೆ ಇಡೀ ಊರಿನ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ದುಡಿವ ಮಹಿಳೆಯರು ಸತತ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾಗಲೂ, ಈ ಮಹಿಳೆಯರ ಅಳಲನ್ನು ಕೇಳದ ಸರ್ಕಾರವು ಜನವಿರೋಧಿಯಾಗಿದೆ ಎಂಬುದು ಜನರ ಅಭಿಪ್ರಾಯ.

ಕುಡಿತದಿಂದಾಗಿ ಮುಂದಾಗಬಹುದಾದ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಅಪಾಯವನ್ನು ಲೆಕ್ಕಿಸದೇ ಗ್ರಾಮದ ಮಹಿಳೆಯರು ಇಟ್ಟಿರುವ ಹೆಜ್ಜೆಗೆ ಪರ ವಿರೋಧದ ಅಭಿಪ್ರಾಯಗಳು ಬಂದಿವೆ. ದಾಳಿಗೆ ಪ್ರತಿದಾಳಿ ಎಂದು ಕೆಲವರು ಸಮರ್ಥಿಸಿದ್ದಾರೆ. ಕಾನೂನು ವಿರೋಧಿಯಾಗಿ ದಾಳಿ ಮಾಡಬಾರದಿತ್ತು ಎಂಬ ಅಭಿಪ್ರಾಯಗಳನ್ನು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದಾರೆ. ಪೊಲೀಸರು ದಾಳಿ ಮಾಡಿ ಮನೆಯ ಬಾಗಿಲು, ಹೆಂಚು ಒಡೆದಿದ್ದಾರೆ ಎಂಬುದಕ್ಕೂ ಟೀಕೆಗಳು ವ್ಯಕ್ತವಾಗಿವೆ. ಆದರೆ ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿರಿ: ಬಾಗಲೂರು ಗ್ರಾಪಂ: ದಲಿತ ಅಧ್ಯಕ್ಷೆ ಕುಳಿತ ಕುರ್ಚಿ ಗೋಮೂತ್ರದಿಂದ ಶುದ್ಧೀಕರಣ: ಬಿಜೆಪಿ ದೂರು

ಪಿಎಸ್‌ಐ ರಮ್ಯಾ ಹೇಳುವುದೇನು?

ನಾನುಗೌರಿ.ಕಾಂ ಜೊತೆ ಮಾತನಾಡಿದ ಕಡೂರು ಪಿಎಸ್‌ಐ ರಮ್ಯಾ, “ಐದು ಜನರನ್ನು ಬಂಧಿಸಲಾಗಿದೆ. ಉಳಿದವರು ಸಿಕ್ಕಿಲ್ಲ. ಪೊಲೀಸರು ದೌರ್ಜನ್ಯ ಎಸಗಿಲ್ಲ. ಯಾರದೇ ಮನೆಯ ಬಾಗಿಲು, ಹೆಂಚನ್ನು ನಾವು ಒಡೆದಿಲ್ಲ. ಪೊಲೀಸರ ಮೇಲೆ ಆರೋಪ ಹೊರಿಸಲು ಮಾಡಿರುವ ಸಂಚಿನ ಕುರಿತು ಮಾತನಾಡಿರುವ ಆಡಿಯೊ ನಮಗೆ ಲಭ್ಯವಾಗಿದೆ” ಎಂದರು.

ಪಿಎಸ್‌ಐ ರಮ್ಯಾ

“ಬಾಗಿಲನ್ನು ಎತ್ತಿದರೆ ಅದಾಗಿಯೇ ತೆರೆದುಕೊಳ್ಳುತ್ತದೆ. ಇದರ ವಿಡಿಯೊವನ್ನು ಜೆಸಿಬಿ ಮಂಜ ಮಾಡಿ, ಎಂಟು ಹತ್ತು ಹೆಂಚು ಒಡೆದು ಹಾಕಿ ಘಟನೆಯನ್ನು ಪೊಲೀಸರ ಮೇಲೆ ರೂಪಿಸಲಾಗಿದೆ” ಎಂದು ಇಬ್ಬರು ವ್ಯಕ್ತಿಗಳು ಮಾತನಾಡಿರುವ ಆಡಿಯೊದಲ್ಲಿನ ಸಾರಾಂಶ. ಆದರೆ ಆ ಆಡಿಯೊದಲ್ಲಿ ಮಾತನಾಡಿದವರು ಯಾರೆಂಬ ಮಾಹಿತಿ ಸಿಕ್ಕಿಲ್ಲ. ಉದ್ದೇಶಪೂರ್ವಕವಾಗಿಯೇ ಈ ಆಡಿಯೊವನ್ನು ಮಾಡಿ ಹರಿಬಿಡಲಾಗಿದೆಯೇ, ಪೊಲೀಸರಿಂದ ದೌರ್ಜನ್ಯವಾಗಿಲ್ಲವೆ ಎಂಬುದು ತನಿಖೆಗಳಿಂದ ತಿಳಿಯಬೇಕಿದೆ.

“ಹೆಂಚು ತೆಗೆದು ಒಳಗೆ ನುಗ್ಗುವಷ್ಟು ಕ್ರೂರಿಗಳು ನಮ್ಮಲ್ಲಿ ಯಾರೂ ಇಲ್ಲ. ಬಾರ್ ಇರಬೇಕೋ, ಬೇಡವೋ ಎಂಬುದನ್ನು ಸಂಬಂಧಪಟ್ಟವರು ನಿರ್ಧರಿಸುತ್ತಾರೆ. ಹಲ್ಲೆ ನಡೆಸಿದ್ದಾರೆಂದು ದೂರು ಬಂದಿದೆ. ಸಾಕ್ಷ್ಯಾಧಾರಗಳಿವೆ. ಪ್ರಕರಣ ದಾಖಲಿಸಿದ್ದೇವೆ. ಬಾರ್‌ ಪರವಾಗಿ ಪೊಲೀಸರು ನಿಲ್ಲಲು ಆ ಬಾರ್‌‌ ನನ್ನದೂ ಅಲ್ಲ, ನಮ್ಮಪ್ಪನ್ನದ್ದೂ ಅಲ್ಲ. ಯಾವನೋ ಬಾರ್‌ ಮಾಡಿಕೊಂಡಿದ್ದಾನೆ. ಅದಕ್ಕೂ ನನಗೂ ಸಂಬಂಧವಿಲ್ಲ. ಜನರು ಬಾರ್‌ ವಿರುದ್ಧ ಹೋರಾಟ ಮಾಡಿದಾಗ ನಾವು ರಕ್ಷಣೆ ನೀಡಿದ್ದೇವೆ. ಒಂದು ವಾರ ಬಂದೋಬಸ್ತ್‌ ಮಾಡಿದ್ದೇವೆ. ಬಾರ್‌ ಪರವಾಗಿದ್ದರೆ ನಾವು ಅಂದೇ ಪ್ರಕರಣ ದಾಖಲು ಮಾಡಬಹುದಿಲ್ಲತ್ತ?” ಎಂದು ಕೇಳುತ್ತಾರೆ ಪಿಎಸ್‌ಐ ರಮ್ಯಾ.

“ಡಿಸಿಗೆ ಮನವಿ ಕೊಡಿ, ಅಲ್ಲಿ ಪರಿಹಾರ ಸಿಗುತ್ತೆ. ಇಲ್ಲಿ ಪ್ರತಿಭಟನೆ ನಡೆಸಿದರೆ ಪರಿಹಾರ ಆಗಲ್ಲ ಎಂದು ನಾವೇ ಸಲಹೆ ನೀಡಿದ್ದೇವೆ. ಜಿಲ್ಲಾ ಕೇಂದ್ರ ಚಿಕ್ಕಮಗಳೂರಿಗೆ ಹೋಗಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಬಾರ್‌ ಕಾನೂನಾತ್ಮಕವಾಗಿ ಇದೆ ಅನಿಸುತ್ತೆ. ಯಾವುದೇ ಕ್ರಮಗಳನ್ನು ಸಂಬಂಧಪಟ್ಟವರು ಜರುಗಿಸಿಲ್ಲ. ಈಗ‌ ಹೋಟೆಲ್ ತೆರೆದಿದ್ದಾರೆ. ಜನರು ದಾಳಿ ಮಾಡಿದ್ದಾರೆ. ಪೊಲೀಸ್‌ ಅರೆಸ್ಟ್‌ ಮಾಡಿದ್ದನ್ನೇ ದೌರ್ಜನ್ಯ ಎನ್ನಲು ಆಗುತ್ತದೆಯೇ? ಪ್ರಕರಣ ದಾಖಲಾದ ಮೇಲೆ ಬಂಧನದ ಭೀತಿಯಲ್ಲಿ ಕೆಲವರು ತಪ್ಪಿಸಿಕೊಂಡಿದ್ದಾರೆ. ಅಂದು ಬಂಧಿಸಲು ಹೋದಾಗ ಬಾಗಿಲು ಬಡಿದಿದ್ದೇವೆ. ಅವರೇ ಡೋರ್‌ ಓಪನ್‌ ಮಾಡಿದ್ದಾರೆ. ಮರು ಮಾತನಾಡದೆ ನಮ್ಮೊಂದಿಗೆ ಬಂದಿದ್ದಾರೆ. ಡೋರ್‌ ಆಗಲಿ, ಹೆಂಚು ಒಡೆದು, ಬಾಗಿಲು ಒಡೆದು ಒಳಗೆ ಹೋಗುವಷ್ಟು ನಾವು ಕ್ರೂರಿಗಳಲ್ಲ” ಎಂಬುದು ಪಿಎಸ್‌ಐ ಪ್ರತಿಕ್ರಿಯೆ.

“ಬಾರ್‌‌ನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಈ ರೀತಿಯ ಗಲಾಟೆಯಾಗಿದೆ ಎಂದು ದೂರು ನೀಡಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರನ್ನು ನೀವು ಬಂದಿಸಿದ್ದೀರಾ?” ಎಂದು ಪ್ರಶ್ನಿಸಿದಾಗ, “ದೌರ್ಜನ್ಯಕ್ಕೆ ಒಳಗಾಗಿದವರು ಬಾರ್‌ ಕೆಲಸಗಾರರು ಎಂಬುದಕ್ಕೆ ಸಾಕ್ಷಿಗಳಿವೆ. ಆದರೆ ಬಾರ್‌ನವರಿಂದ ಆಗಿದೆ ಎನ್ನಲಾದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಸಿಕ್ಕಿರುವ ಸಾಕ್ಷಿಗಳ ಮೇಲೆ ಕ್ರಮ ಜರುಗಿಸಲಾಗಿದೆ” ಎಂದು ಪಿಎಸ್‌ಐ ತಿಳಿಸಿದರು.


ಇದನ್ನೂ ಓದಿರಿ: ಮಂಗಳೂರಿನಲ್ಲಿ ಮತೀಯ ಗೂಂಡಾಗಿರಿ: ಅನ್ಯಧರ್ಮದ ಗೆಳತಿಯನ್ನು ಡ್ರಾಪ್ ಮಾಡುತ್ತಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...