ದೇಶದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕ್ರೀಡೆ ಎಂದರೇ ಕ್ರಿಕೆಟ್ ಎನ್ನುವಂತಾಗಿದೆ. ಬೇರೆ ಕ್ರೀಡೆಗಳಿಗೆ, ಕ್ರೀಡಾಪಟುಗಳಿಗೆ ಸಿಗುತ್ತಿರುವ ಮಾನ್ಯತೆ ಕೂಡ ಅಷ್ಟಕ್ಕಷ್ಟೇ. ಇದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಜಾರ್ಖಾಂಡ್ನ ಈ ಕರಾಟೆ ಚಾಂಪಿಯನ್ ಬಡತನದಿಂದಾಗಿ ಮದ್ಯ ಮಾರಬೇಕಾದ ಪರಿಸ್ಥಿತಿ ತಲುಪಿದ್ದಾರೆ.
34ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಸೇರಿದಂತೆ, ಜಾರ್ಖಂಡ್ ರಾಜ್ಯಕ್ಕಾಗಿ ಡಜನ್ಗಟ್ಟಲೇ ಪದಕಗಳನ್ನು ಬಾಚಿಕೊಂಡಿದ್ದ ರಾಷ್ಟ್ರೀಯ ಕರಾಟೆ ಚಾಂಪಿಯನ್ ವಿಮಲಾ ಮುಂಡಾ, ಜೀವನೋಪಾಯಕ್ಕಾಗಿ ‘ಹಾಂಡಿಯಾ’ (ಅಕ್ಕಿಯಿಂದ ತಯಾರಿಸುವ ಮದ್ಯ) ಮಾರಾಟ ಮಾಡುವ ಸ್ಥಿತಿಗೆ ಬಂದಿದ್ದಾರೆ.
“ಕೆಟ್ಟ ಆರ್ಥಿಕ ಪರಿಸ್ಥಿತಿಗಳಿಂದಾಗಿ, ನನ್ನ ಕುಟುಂಬದ ತೀವ್ರ ಬಡತನಕ್ಕೆ ದೂಡಿದೆ. ಕುಟುಂಬದ ಜೀವನೋಪಾಯಕ್ಕಾಗಿ ಜೊತೆಗೆ ನನ್ನ ಕರಾಟೆ ಅಭ್ಯಾಸವನ್ನು ಮುಂದುವರೆಸಲು ಲಾಕ್ಡೌನ್ ಸಮಯದಲ್ಲಿ ಈ ವ್ಯವಹಾರವನ್ನು ಪ್ರಾರಂಭಿಸಬೇಕಾಯಿತು” ಎಂದು 26 ವರ್ಷದ ಕ್ರೀಡಾಪಟು ಹೇಳಿದ್ದಾರೆ.
ಇದನ್ನೂ ಓದಿ: ”ಬೇಟಿ ಬಚಾವೋ ಈಗ ಅಪರಾಧಿ ಬಚಾವೋ ಆಗಿದೆ”: ರಾಹುಲ್, ಪ್ರಿಯಾಂಕಾ ಕಿಡಿ
“ಈ ಆಟದಲ್ಲಿ, ಕ್ರೀಡಾಪಟುಗಳೇ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಮತ್ತು ಪ್ರತಿ ಪಂದ್ಯಾವಳಿಗಾಗಿ ಪ್ರಯಾಣ ವೆಚ್ಚ ತಾವೇ ಭರಿಸಬೇಕಾಗುತ್ತದೆ, ಇದಕ್ಕೆ ಸಾಕಷ್ಟು ಹಣ ಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ.
5ನೇ ತರಗತಿಯಿಂದಲೇ ಕರಾಟೆ ಕಲಿಯಲು ಪ್ರಾರಂಭಿಸಿ, ರಾಜ್ಯಕ್ಕಾಗಿ ಹಲವಾರು ಪದಕಗಳನ್ನು ತಂದಿರುವ ಈ ಜಾರ್ಖಂಡ್ ಯುವತಿ, ತನ್ನ ಬಳಿ ಹಲವಾರು ಪದಕಗಳು ಇವೆ. ಆದರೆ ಅವುಗಳನ್ನು ಸುರಕ್ಷಿತವಾಗಿಡಲು ಮನೆಯಲ್ಲಿ ಸರಿಯಾದ ಸ್ಥಳವಿಲ್ಲ ಹಾಗಾಗಿ ಅವುಗಳಲ್ಲಿ ಹೆಚ್ಚಿನವು ಮುರಿದುಹೋಗಿವೆ. ಕೆಲವೊಂದು ಬಣ್ಣ ಕಳೆದುಕೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿಮಲಾ ಮುಂಡಾ ಅವರ ತಾಯಿ ದಿನಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಆದರೆ ವೃದ್ಧಾಪ್ಯ ಮತ್ತು ಅನಾರೋಗ್ಯದ ಸಮಸ್ಯೆಯಿಂದಾಗಿ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದರು.
“2011 ರಲ್ಲಿ ಜಾರ್ಖಂಡ್ನಲ್ಲಿ ಆಯೋಜಿಸಿದ್ದ 34 ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಾನು ಬೆಳ್ಳಿ ಪದಕ ಗೆದ್ದಿದ್ದೇನೆ. 2014 ರಲ್ಲಿ ಅಕ್ಷಯ್ ಕುಮಾರ್ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ನಾನು ಎರಡು ಚಿನ್ನದ ಪದಕಗಳನ್ನು ಕೂಡ ಪಡೆದಿದ್ದೇನೆ” ಎಂದು ವಿಮಲಾ ಮುಂಡಾ ತಿಳಿಸಿದ್ದಾರೆ.
ಇದನ್ನೂ ಓದಿ: ಕೃಷಿ ಮಸೂದೆಗೆ ವಿರೋಧ: ಪಂಜಾಬ್ BJP ಪ್ರಧಾನ ಕಾರ್ಯದರ್ಶಿ ರಾಜೀನಾಮೆ!
ರಾಜ್ಯ ಸರ್ಕಾರದಿಂದ ಸ್ವಲ್ಪ ವಿದ್ಯಾರ್ಥಿವೇತನ ಅಥವಾ ಉದ್ಯೋಗ ಸಿಗುವ ಮುಂಡಾ ಅವರ ನಿರೀಕ್ಷೆ ಹುಸಿಯಾಗಿದೆ. ಬೇರೆ ದಾರಿಯಿಲ್ಲದ ಕಾರಣ, ಆಕೆ ತನ್ನ ತಾಯಿಯೊಂದಿಗೆ ಮದ್ಯ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ.
ಪದಕಗಳು ಮತ್ತು ಪ್ರಮಾಣಪತ್ರಗಳ ರಾಶಿಯನ್ನು ಕಂಡಾಗ ಮೊದಲು ತಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಪಡುತ್ತಿದ್ದ ಈಕೆ ಈಗ ಸಮಯ ಮತ್ತು ಕಠಿಣ ವಾಸ್ತವತೆ ತನ್ನನ್ನು ಬದಲಾಯಿಸಿದೆ ಎನ್ನುತ್ತಾರೆ.
ಮುಂಡಾ ಅವರು ರಾಜ್ಯ ಸರ್ಕಾರದಿಂದ ಯಾವುದೇ ಹಣಕಾಸಿನ ಸಹಾಯವನ್ನು ಬಯಸುವುದಿಲ್ಲ. ಆದರೆ 2019 ರಲ್ಲಿ ರಾಜ್ಯಕ್ಕೆ ಪದಕಗಳನ್ನು ಗೆದ್ದ 264 ಕ್ರೀಡಾಪಟುಗಳಲ್ಲಿ 33 ಜನರನ್ನು ಸರ್ಕಾರಿ ಉದ್ಯೋಗಗಳಲ್ಲಿ ನೇರ ನೇಮಕಾತಿಗೆ ಆಯ್ಕೆ ಮಾಡಲಾಗಿದೆ . ಅದರ ನೇಮಕಾತಿ ಪ್ರಕ್ರಿಯೆಯನ್ನು ಸರ್ಕಾರ ತ್ವರಿತಗೊಳಿಸಬೇಕು ಎಂದು ಬಯಸುತ್ತಾರೆ.
“ಹಿಂದಿನ ಸರ್ಕಾರವು ಪದಕಗಳನ್ನು ಪಡೆದ ಕ್ರೀಡಾಪಟುಗಳ ನೇರ ನೇಮಕಾತಿಯನ್ನು ಘೋಷಿಸಿದ ನಂತರ ನಾವು ಭರವಸೆ ಹೊಂದಿದ್ದೇವು. ಆದರೆ ಇಂದಿನ ಸರ್ಕಾರವು ಈ ವಿಷಯದಲ್ಲಿ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಆ ಭರವಸೆಯು ದಿನ ಕಳೆದಂತೆ ಕಡಿಮೆಯಾಯಿತು” ಎಂದರು.
ಕ್ರೀಡಾಪಟು ಬಗ್ಗೆ ಸ್ಥಳೀಯ ಪತ್ರಕರ್ತರ ಟ್ವೀಟ್ ಗಮನಿಸಿದ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿಮಲಾ ಮುಂಡಾಗೆ ಸಹಾಯ ಮಾಡಲು ಆದೇಶಿಸಿದ್ದಾರೆ.
.@DC_Ranchi अविलंब संज्ञान लें एवं खेल सचिव से समन्वय स्थापित कर बहन विमला को हर तरह की मदद पहुँचाते हुए सूचित करें।
साथ ही राज्यवासियों को बताना चाहूँगा की हमारी आगामी खेल नीति के क्रियान्वित होने पर खिलाड़ियों का भविष्य संवरेगा। https://t.co/1zLRrFKRjr
— Hemant Soren (घर में रहें – सुरक्षित रहें) (@HemantSorenJMM) October 18, 2020
ರಾಂಚಿ ಜಿಲ್ಲಾಧಿಕಾರಿಗಳಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸೊರೆನ್, ಇದನ್ನು ತಕ್ಷಣ ಗಮನಿಸಿ, ಕ್ರೀಡಾ ಕಾರ್ಯದರ್ಶಿಯೊಂದಿಗೆ ಮಾತಾನಾಡಿ ಸಹೋದರಿ ವಿಮಲಾಗೆ ಸಹಾಯ ಮಾಡಿ ಎಂದಿದ್ದಾರೆ. ಜೊತೆಗೆ ಮುಂಬರುವ ಕ್ರೀಡಾ ನೀತಿಯ ಅನುಷ್ಠಾನದ ನಂತರ ಆಟಗಾರರ ಭವಿಷ್ಯವು ಸುಧಾರಿಸುತ್ತದೆ ಎಂದು ನಾನು ಜನರಿಗೆ ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.


