ಹೊಸದಿಲ್ಲಿ: ರಾಜ್ಯ ಸರಕಾರದ ಅಧೀನದಲ್ಲಿರುವ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳು ತೆಗೆದುಕೊಳ್ಳುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET) ಇತರ ಹಿಂದುಳಿದ ವರ್ಗಗಳಿಗೆ ಶೇ. 27ರಷ್ಟು ಮೀಸಲಾತಿ ನೀಡಬೇಕು ಎಂಬುದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಈ ಕುರಿತು ‘ಬಾರ್ ಮತ್ತು ಬೆಂಚ್’ ವರದಿ ಮಾಡಿದ್ದು, “ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿಯು ಮೆರಿಟ್ಗೆ ವಿರುದ್ಧವಾಗಿಲ್ಲ. ಆದರೆ ಇದು ವಿತರಣಾ ಪರಿಣಾಮಗಳನ್ನು ಹೆಚ್ಚಿಸುತ್ತದೆ” ಎಂದು ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎ.ಎಸ್.ಬೋಪಣ್ಣ ಅವರು ಜನವರಿ 7ರಂದು ಮಧ್ಯಂತರ ಆದೇಶ ನೀಡಿ, 2021-22ನೇ ಸಾಲಿನ NEET- ಸ್ನಾತಕೋತ್ತರ ಪ್ರವೇಶಕ್ಕಾಗಿ ವೈದ್ಯಕೀಯ ಕೌನ್ಸೆಲಿಂಗ್ ಪುನರಾರಂಭಿಸಲು ಅವಕಾಶ ಮಾಡಿಕೊಟ್ಟರು. ಒಬಿಸಿಗಳಿಗೆ ಶೇ. 27 ಮೀಸಲು ಮತ್ತು ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ ಶೇ. 10ರಷ್ಟು ಕೋಟಾದ ಮಾನ್ಯತೆಯನ್ನು ಕೋರ್ಟ್ ಎತ್ತಿ ಹಿಡಿದಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಪರೀಕ್ಷಾ ಮಂಡಳಿಯು NEET-PGಯನ್ನು ಹಮ್ಮಿಕೊಳ್ಳುತ್ತದೆ. ದೊಡ್ಡ ಪ್ರಮಾಣದಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕೌನ್ಸೆಲಿಂಗ್ ಆರಂಭಿಸುವಂತೆ ಭಾರತದಾದ್ಯಂತ ವೈದ್ಯರು ಪ್ರತಿಭಟನೆ ನಡೆಸಿದ್ದರು.
NEET ಆಧಾರಿತ ಪ್ರವೇಶಗಳಲ್ಲಿ OBC ಮತ್ತು EWS (ಆರ್ಥಿಕವಾಗಿ ದುರ್ಬಲ ವರ್ಗ) ಮೀಸಲಾತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರದ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿರುವುದರಿಂದ ಕೌನ್ಸೆಲಿಂಗ್ ಪ್ರಕ್ರಿಯೆ ವಿಳಂಬವಾಗಿದೆ.
ಸುಪ್ರೀಂ ಕೋರ್ಟ್ ಪೀಠವು ಗುರುವಾರ ಪ್ರತಿಕ್ರಿಯಿಸಿದ್ದು, “ಸ್ಪರ್ಧಾತ್ಮಕ ಪರೀಕ್ಷೆಗಳು ಕೆಲವು ವರ್ಗಗಳಿಗೆ ಆರ್ಥಿಕ ಸಾಮಾಜಿಕ ಪ್ರಯೋಜನವನ್ನು ಪ್ರತಿಬಿಂಬಿಸುವುದಿಲ್ಲ” ಎಂದಿದೆ.
“ಸಂವಿಧಾನದ 15(4) ಮತ್ತು 15(5) ವಿಧಿಗಳು ವಸ್ತುನಿಷ್ಠ ಸಮಾನತೆಗೆ ಸಂಬಂಧಿಸಿವೆ. ಸ್ಪರ್ಧಾತ್ಮಕ ಪರೀಕ್ಷೆಯು ಕೆಲವು ವರ್ಗಗಳಿಗೆ ಸೇರಿರುವ ಆರ್ಥಿಕ ಸಾಮಾಜಿಕ ಪ್ರಯೋಜನವನ್ನು ಪ್ರತಿಬಿಂಬಿಸುವುದಿಲ್ಲ. ಮೆರಿಟ್ ಸಾಮಾಜಿಕವಾಗಿ ಸಂದರ್ಭೋಚಿತವಾಗಿರಬೇಕು. ಮೀಸಲಾತಿಯು ಮೆರಿಟ್ಗೆ ವಿರುದ್ಧವಾಗಿಲ್ಲ. ಆದರೆ ಅದು ವಿತರಣಾ ಪರಿಣಾಮವನ್ನು ಹೆಚ್ಚಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಸರ್ಕಾರಿ ವೈದ್ಯಕೀಯ ಕಾಲೇಜು ಸೀಟುಗಳಲ್ಲಿ ಮೀಸಲಾತಿಗಾಗಿ ಅಖಿಲ ಭಾರತ ಕೋಟಾ (ಎಐಕ್ಯೂ) ವ್ಯವಸ್ಥೆಯನ್ನು ಏಕೆ ಮೊದಲ ಸ್ಥಾನದಲ್ಲಿ ರೂಪಿಸಲಾಗಿದೆ ಎಂಬುದರ ಹಿಂದಿನ ತಾರ್ಕಿಕತೆಯನ್ನು ಪೀಠವು ಒತ್ತಿಹೇಳಿದೆ.
“AIQ ಸೀಟುಗಳಲ್ಲಿ ಮೀಸಲಾತಿ ನೀಡುವ ಮೊದಲು ಕೇಂದ್ರವು ಈ ನ್ಯಾಯಾಲಯದ ಅನುಮತಿಯನ್ನು ಪಡೆಯುವ ಅಗತ್ಯವಿಲ್ಲ. ಹೀಗಾಗಿ ಸರ್ಕಾರದ ನಿರ್ಧಾರ ಸರಿಯಾಗಿದೆ. ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್ಗಳಿಗೆ AIQನಲ್ಲಿ ಒಬಿಸಿಗೆ ಮೀಸಲಾತಿ ಸಾಂವಿಧಾನಿಕವಾಗಿ ಮಾನ್ಯವಾಗಿದೆ ಎಂದು ನಾವು ಭಾವಿಸುತ್ತೇವೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆರ್ಥಿಕವಾಗಿ ದುರ್ಬಲ ವರ್ಗದ ಕೋಟಾವನ್ನು ನಿರ್ಧರಿಸುವ ಮಾನದಂಡಗಳ ಸಿಂಧುತ್ವವನ್ನು ಈ ವರ್ಷದ ಮಾರ್ಚ್ನಲ್ಲಿ ಸುದೀರ್ಘವಾಗಿ ಆಲಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ಮೀಸಲಾತಿಯು ಮೆರಿಟ್ಗೆ ವಿರುದ್ಧವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
“ಪರೀಕ್ಷೆಯಲ್ಲಿನ ಅಂಕಗಳ ಆಧಾರದ ಮೇಲಿನ ಮೆರಿಟ್ ಕಲ್ಪನೆಯ ಕುರಿತ ಆಳವಾದ ಪರಿಶೀಲನೆ ಅಗತ್ಯವಿದೆ. ಪರೀಕ್ಷೆಗಳು ಶೈಕ್ಷಣಿಕ ಅವಕಾಶಗಳನ್ನು ವಿತರಿಸಲು ಅಗತ್ಯವಾದ ಮತ್ತು ಅನುಕೂಲಕರ ವಿಧಾನವಾಗಿದ್ದರೂ, ಅಂಕಗಳು ಯಾವಾಗಲೂ ವೈಯಕ್ತಿಕ ಅರ್ಹತೆಯ ಮಾಪನ ಆಗಿರುವುದಿಲ್ಲ” ಆಗಿರುವುದಿಲ್ಲ” ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
“ನಾವು ಅರ್ಹತೆಯನ್ನು ಅರ್ಥಮಾಡಿಕೊಳ್ಳುವ ವಿಧಾನವು ವೈಯಕ್ತಿಕ ಸಂಸ್ಥೆ ಅಥವಾ ಸಾಮರ್ಥ್ಯಕ್ಕೆ ಸೀಮಿತವಾಗಿರಬಾರದು. ಆದರೆ ಅದು ಸಮಾನತೆಯನ್ನು ಮುನ್ನಡೆಸುವ ಸಾಮಾಜಿಕ ಒಳಿತಾಗಿ ರೂಪಿಸಬೇಕು. ಏಕೆಂದರೆ ಅದು ನಮ್ಮ ಸಂವಿಧಾನ ಪ್ರತಿಪಾದಿಸುವ ಮೌಲ್ಯವಾಗಿದೆ” ಎಂದು ಕೋರ್ಟ್ ಹೇಳಿರುವುದಾಗಿ ಲೈವ್ ಲಾ ವರದಿ ಟ್ವೀಟ್ ಮಾಡಿದೆ.
ಸುಪ್ರೀಂ ಕೋರ್ಟ್: ಇವಿಎಂ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ