Homeಕರ್ನಾಟಕನುಡಿನಮನ| ಜನಪರ ಹೋರಾಟಗಳ ಅನಭಿಷಿಕ್ತ ದೊರೆ ‘ಪ.ಮಲ್ಲೇಶ್’

ನುಡಿನಮನ| ಜನಪರ ಹೋರಾಟಗಳ ಅನಭಿಷಿಕ್ತ ದೊರೆ ‘ಪ.ಮಲ್ಲೇಶ್’

ಬಹುಶಃ ಬ್ರೆಜಿಲ್‌ನ ಪೇಲೆ ಕಾಲ್ಚೆಂಡಿನಾಟಕ್ಕಾಗಿ ಜನಿಸಿದಂತೆ ಪ. ಮಲ್ಲೇಶ್ ಮನುಕುಲದ ಎಲ್ಲ ಅನಿಷ್ಟಗಳ ವಿರುದ್ಧ ಪ್ರತಿಭಟಿಸಲೆಂದೇ ಹುಟ್ಟಿದ್ದರು ಎಂದೆನಿಸುತ್ತದೆ...

- Advertisement -
- Advertisement -

ಸಮಾಜವಾದವನ್ನೇ ಉಸಿರಾಡುತ್ತಿದ್ದ ಬೃಹತ್ ಆಲದ ಮರವೊಂದು ದಿಢೀರನೆ ಧರೆಗೆ ಒರಗಿದೆ. ಸುಮಾರು ಆರು ದಶಕಗಳ ಅವಧಿಯಲ್ಲಿ ಈ ಮರ ಅನೇಕ ಹೋರಾಟಗಳ ಬಿಲಳುಗಳಿಗೆ ಬಲ ನೀಡಿ, ಬೆನ್ನು ಕಟ್ಟಿತ್ತು. ಆದರೀಗ ಬಿಳಲುಗಳಿಗೆ ಆಸರೆ ತಪ್ಪಿದ, ಮನೆಯ ಹಿರಿಯಾತನ ನಿರ್ಗಮನವಾದಂತೆ ಅನಿಸಿ, ನಿರ್ವಾತವೊಂದು ಸೃಷ್ಟಿಯಾಗಿ, ಮುಂದೆ ನಡೆಸುವಾತ ಯಾರು ಎಂಬ ಜಿಜ್ಞಾಸೆ ಮೂಡಿಸಿದೆ. ಹೀಗೆ ತಮ್ಮ ಅನುಪಸ್ಥಿತಿ ಕಾಡುವಂತೆ ಬಾಳಿ ತಟಕ್ಕನೆ ಕಣ್ಮರೆಯಾದವರು ಸಮಾಜವಾದಿ, ತೀವ್ರ ಮಾನವತವಾದಿ ಹೋರಾಟಗಾರರಾದ ಶ್ರೀ.ಪ. ಮಲ್ಲೇಶ್ ರವರು.

ಮೈಸೂರು ನಿಜಕ್ಕೂ ಪುಣ್ಯ ಮಾಡಿತ್ತು. ಮಲೆನಾಡು, ಗಂಡು ಮೆಟ್ಟಿದ ನಾಡು, ಗದಗ, ದಾವಣಗೆರೆ , ಕೋಲಾರ ಮತ್ತಿತರ ದಿಕ್ಕುಗಳಿಂದ ಬದಲಾವಣೆಯ ಗಾಳಿ ಅರಸರ ನಾಡನ್ನರಸಿ ಬಂದು ಇಲ್ಲೇ ತುಂಬಿಕೊಂಡಿತ್ತು. ಇಲ್ಲವಾದಲ್ಲಿ ಪ್ರವಾಸಿಗ ನೋಡಿ ಕಣ್ತುಂಬಿಕೊಳ್ಳುವ ಅರಮನೆಯ ಸುಂದರಿಯಾಗಿಯಷ್ಟೇ ಉಳಿಯಬಹುದಾದ ಈ ಪ್ರಾಂತ್ಯ ನೆಲ, ಜಲ, ಜನ, ಜನ ಸಂಸ್ಕೃತಿ ಹಾಗೂ ಭಾಷೆಯ ವಿಚಾರವಾಗಿ ವಿವಿಧ ಐತಿಹಾಸಿಕ ಚಳವಳಿಗಳನ್ನು ಹುಟ್ಟು ಹಾಕಿತು. ರಾಷ್ಟೀಯ ಹೋರಾಟಗಳಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ‘ಪ್ರತಿಭಟನಾ ಕಣಜ’ಗಳ ಕಣಜವಾಗಿ ಗುರುತಿಸಿಕೊಂಡ ಈ ಮಣ್ಣಿನಲ್ಲಿ ಸ್ವಾತಂತ್ರ್ಯೋತ್ತರದ ದೇಶೀಯ ರಾಜಕೀಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ತತ್ವ- ಸಿದ್ಧಾಂತಗಳು ಸತ್ವ ಪಡೆದು, ಒರತೆಗಳಾಗಿ ಜೀವ ತಳೆದು ನಾಡಿನಾದ್ಯಂತ ನದಿಗಳಾಗಿ ಹರಿದು, ಹಲವು ಕಡೆ ಭೋರ್ಗರೆಯುವ ಜಲಪಾತಗಳಾಗಿ ಮೆರೆದವು ಎಂಬುವುದು ಮೈಸೂರಿಗರ ಹೆಮ್ಮೆ.

ಈ ಎಲ್ಲಾ ಹೋರಾಟಗಳಿಗೆ ಸೈದ್ದಾಂತಿಕ ನೆಲೆಗಟ್ಟನ್ನು ದೊರಕಿಸಿದ ಸಮಾಜವಾದಿ ಚಿಂತನೆ ಭಾರತದಲ್ಲಿ ತೀವ್ರತೆಯನ್ನು ಪಡೆಯುತ್ತಿದ್ದ ಅರವತ್ತರ ದಶಕದಲ್ಲಿ ರಾಮ್ ಮನೋಹರ್ ಲೋಹಿಯಾ, ಜಯಪ್ರಕಾಶ್ ನಾರಾಯಣ್, ಆಚಾರ್ಯ ಕೃಪಾಲಾನಿ, ಜಾರ್ಜ್ ಫರ್ನಾಂಡಿಸ್, ಲಾರೆನ್ಸ್ ಫರ್ನಾಂಡಿಸ್‌‌ರಂತಹ ರಾಷ್ಟ್ರೀಯ ನಾಯಕರೊಂದಿಗೆ ಒಡನಾಟವಿಟ್ಟುಕೊಂಡಿದ್ದಂತಹ ಕರ್ನಾಟಕದ ಶಾಂತವೇರಿ ಗೋಪಾಲಗೌಡ, ಜೆ. ಹೆಚ್. ಪಟೇಲ್, ರೈತ ಸಂಘದ ರೂವಾರಿ ಪ್ರೊ. ನಂಜುಂಡಸ್ವಾಮಿ, ಸಾಹಿತಿಗಳಾದ ಯು.ಆರ್.ಅನಂತಮೂರ್ತಿ, ಲಂಕೇಶ್, ಪ್ರೊ.ರಾಮದಾಸ್, ತೇಜಸ್ವಿ ಮೊದಲಾದವರೊಡನೆ ಸಮ ಸಮಾಜದ ಕನಸುಗಳನ್ನು ಹೊತ್ತಿದ್ದ ಪ. ಮಲ್ಲೇಶ್ ರವರು ಕರ್ನಾಟಕದಲ್ಲಿ ಒಂದು ಸಮಾಜವಾದದ ಒಂದು ಅಲೆಯನ್ನೇ ಎಬ್ಬಿಸಿದ್ದರು. ಅಷ್ಟೇ ಅಲ್ಲ. ಅದೆಷ್ಟೋ ಮಂದಿ ಸಮಾಜವಾದಿಗಳು ಮಗ್ಗಲು ಬದಲಾಯಿಸಿ, ಪಕ್ಷ ರಾಜಕೀಯದಲ್ಲಿ ತೊಡಗಿಕೊಂಡು, ವೈಯಕ್ತಿಕ ತೃಪ್ತತೆಯನ್ನು ಕಂಡುಕೊಂಡು ಮೂಲ ಸಿದ್ಧಾಂತವನ್ನು ಮರೆತಂತೆ ನಟಿಸಿದರೂ ತಾವು ಮಾತ್ರ ನಂಬಿದ್ದ ತತ್ವವನ್ನು ಜೀವಂತವಾಗಿಟ್ಟು, ಕೊನೆಯವರೆಗೂ ಅದನ್ನೇ ಉಸಿರಾಡಿ, ಅದನ್ನೇ ಬಾಳಿದವರು ಪ.ಮಲ್ಲೇಶ್ ಎಂದರೆ ಅತಿಶಯೋಕ್ತಿಯಾಗಲಾರದು. ಅನೇಕ ಕೋನಗಳಿಂದ ನನಗವರು ಜ್ಯೋತಿ ಬಸುರವರಂತೆ ಕಾಣಿಸಿದ್ದರು.

ಬಹುಶಃ ಮುರುಘಾ ಮಠದ ಶ್ರೀಗಳ ಲೈಂಗಿಕ ಹಗರಣದ ವಿರುದ್ಧ ಒಡನಾಡಿ ಸಂಘಟಿಸಿದ್ದ ಪ್ರತಿಭಟನಾ ಮೆರವಣಿಗೆ ಪ.ಮಲ್ಲೇಶ್‌ರವರ ಕೊನೆಯ ಧಿಕ್ಕಾರವನ್ನು ದಾಖಲಿಸಿರಬೇಕು. ನಿಂತುಕೊಳ್ಳಲೂ ತ್ರಾಣವಿಲ್ಲದಷ್ಟು ಆರೋಗ್ಯ ಹದಗೆಟ್ಟಿದ್ದಾಗ್ಯೂ ಆ ಮೆರವಣಿಗೆಯಲ್ಲಿ ತಮ್ಮ ಪ್ರತಿಭಟನೆ ದಾಖಲಾಗಿರಬೇಕು ಎಂದು ಹಂಬಲಿಸಿ, ಬಿಸಿಲನ್ನೂ ಲೆಕ್ಕಿಸದೆ ಪಾಲ್ಗೊಂಡಿದ್ದರವರು. ಅಲ್ಲೂ ತಮ್ಮ ಆರೋಗ್ಯ ಸಮಸ್ಯೆಯ ಸುಳಿವು ನೀಡದೆ ಆರೋಪಿಗಳ ವಿರುದ್ಧ ಘರ್ಜಿಸಿದ್ದರು ಪ.ಮಲ್ಲೇಶ್.

ಸುಮಾರು 33 ವರ್ಷಗಳಿಂದ ನಾನು ಕಂಡಂತೆ ಪ.ಮಲ್ಲೇಶ್‌ರವರು ಹೋರಾಟದ ಹಾದಿಯಲ್ಲಿ ಯಾವುದೇ ರಾಜಿ ಸೂತ್ರ ಅನುಸರಿಸಿದವರಲ್ಲ. ತಮ್ಮ ನಡೆ ಹಾಗೂ ನುಡಿಗೆ ಬದ್ಧರಾಗಿ, ಎದುರಾಳಿ ಎಂತಹ ಭಲಾಡ್ಯನಾಗಿದ್ದರೂ, ಸ್ನೇಹಿತರೇ ಆಗಿದ್ದರೂ ಮುಲಾಜಿಲ್ಲದೆ ಹೇಳಬೇಕಾಗಿದ್ದನ್ನು ಹೇಳಿ, ಕೇಳಬೇಕಾಗಿದ್ದನ್ನು ಕೇಳಿ ಮುಗಿಸುತ್ತಿದ್ದ ಖಡಕ್ ವ್ಯಕ್ತಿ ಅವರಾಗಿದ್ದರು. “ನಮಗೇನ್ರಿ ಮುಲಾಜು? ಸಂವಿಧಾನದ ಕೆಳಗೆ ಎಲ್ಲರೂ ಒಂದೇ. ಕೇಳೋದು, ಹೇಳೋದು ನ್ಯಾಯಬದ್ಧವಾಗಿರಬೇಕು ಅಷ್ಟೇ!” ಎನ್ನುವುದು ಅವರ ನಿತ್ಯದ ನಿಷ್ಠುರ ಮಾತು.

ಪ. ಮಲ್ಲೇಶರ ಜೀವನದಲ್ಲಿ ಗಾಂಧಿ, ಅಂಬೇಡ್ಕರ್, ಲೋಹಿಯಾ, ಬುದ್ಧ, ಬಸವಣ್ಣ, ಸದಾ ಜೀವಂತವಾಗಿದ್ದುದ್ದನ್ನು ನಾವು ಕಾಣುತಿದ್ದೆವು. ಅಂದ ಮಾತ್ರಕ್ಕೆ ಅವರು ಯಾರ ಆರಾಧಕನೂ ಆಗಿರಲಿಲ್ಲ. ಆ ಮಟ್ಟಕ್ಕೆ ದಿಗ್ದರ್ಶಕರೂ ಕೂಡ ಅವರ ಕಟು ವಾಸ್ತವದ ವಿಮರ್ಶೆಗೆ ಒಳಪಡುತ್ತಿದ್ದರು. ಹಾಗೆಯೇ ಅವರು ಯಾವುದೋ ಒಂದು ವಿಚಾರಕ್ಕೆ ಬ್ರಾಂಡ್ ಆಗಿರಲಿಲ್ಲ. ಅದೊಂದು ವಿರಳಾತಿವಿರಳವಾದ ವ್ಯಕ್ತಿತ್ವ. ಬಹುತ್ವವನ್ನು ಬಹುವಾಗಿ ಪ್ರೀತಿಸುತ್ತಿದ್ದ ಪ.ಮಲ್ಲೇಶ್‌ರವರಲ್ಲಿ ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾರವರನ್ನು ಸಮಾನವಾಗಿ ಕಾಣಬಹುದಾಗಿದೆ. ಸಮಷ್ಟಿ ಪ್ರಜ್ಞೆಯಲ್ಲಿ ಬಾಳುತ್ತಾ, ಪ್ರತಿಯೊಂದನ್ನೂ ಮಾನವೀಯ ಮಸೂರದಲ್ಲಿ ಕಾಣುತ್ತಾ, ಮನುಕುಲವನ್ನು, ಪ್ರಕೃತಿಯನ್ನು, ಬಹು ಸಂಸ್ಕೃತಿ, ಮಾತೃಭಾಷೆಯನ್ನು ಬಾಧಿಸುವ ಯಾವುದೇ ಸಮಸ್ಯೆಗಳಿಗೆ ಉತ್ತರ ಪಡೆಯಲು ಮುಂಚೂಣಿಯಲ್ಲಿ ನಿಲ್ಲುತ್ತಿದ್ದ
ಪ.ಮಲ್ಲೇಶ್‌ರದ್ದು ಸ್ಪಷ್ಟವಾದ ವ್ಯಕ್ತಿತ್ವ. ದಿಟ್ಟವಾದ, ನ್ಯಾಯಪರ ನಿಲುವು. ಪ್ರಾಮಾಣಿಕ ನಡೆ. ಅವರು ಧರಿಸುತ್ತಿದ್ದ ಶ್ವೇತ ವರ್ಣದ ಖಾದಿಯಷ್ಟೇ ಸ್ವಚ್ಛ ಬಾಳು. ಸ್ವಲ್ಪ ಹೆಚ್ಚು ಎನಿಸಬಹುದಾದ ಸಿಡುಕು ಇದ್ದರೂ ಅದು ಸಮಾಜದ ಬಗೆಗಿನ ಕಾಳಜಿ ಹಾಗೂ ಮಾನವ ಪ್ರೀತಿ ಪ್ರೇರಿತವಾದದ್ದು ಎಂಬುದನ್ನು ಮರೆಯುವಂತಿಲ್ಲ.

ಬಹುತೇಕ ಹೋರಾಟಗಾರರಿಗೆ ಇದ್ದಿರಬಹುದಾದ ಯಾವೊಂದೂ ದೌರ್ಬಲ್ಯವೂ ಅವರಿಗೆ ಇದ್ದಂತಿರಲಿಲ್ಲ. ಇದ್ದರೂ ಸಮಾಜಕ್ಕೆ ಎಂದೂ ಕಾಣಿಸಲಿಲ್ಲ. ನ್ಯಾಯಕ್ಕೆ, ನೋವಿಗೆ ಸೋಲುವ ತಾಯಿ ಹೃದಯ ಅವರ ತಲೆ ತಗ್ಗಿಸದ ಗಡಸು ವ್ಯಕ್ತಿತ್ವದೊಳಗಿತ್ತು ಎಂಬುದು ಅವರನ್ನು ಹತ್ತಿರದಿಂದ ಅನುಭವಿಸಿದ ನನ್ನಂಥವರಿಗೆ ತಿಳಿದ ಸತ್ಯ. ಅವರಿಗಿದ್ದ ಒಂದೇ ಒಂದು ದೌರ್ಬಲ್ಯವೆಂದರೆ ನ್ಯಾಯಪರ ಹೋರಾಟ. ಹೋರಾಟಕ್ಕೆ ಇಳಿದೊಡನೆ ಅವರು ಇಪ್ಪತ್ತರ ಹರೆಯದ ಯುವಕನಾಗಿಬಿಡುತ್ತಿದ್ದರು. ಬದುಕಿನುದ್ದಕ್ಕೂ ಪಾಲ್ಗೊಂಡ ಚಳುವಳಿಗಳು ಅವರನ್ನು ಆರೋಗ್ಯವಂತನನ್ನಾಗಿ ಇರಿಸಿದ್ದವು ಎಂಬುದು ನನ್ನ ಭಾವನೆ. ಬಹುಶಃ ಬ್ರೆಜಿಲ್‌ನ ಪೇಲೆ ಕಾಲ್ಚೆಂಡಿನಾಟಕ್ಕಾಗಿ ಜನಿಸಿದಂತೆ ಪ. ಮಲ್ಲೇಶ್ ಮನುಕುಲದ ಎಲ್ಲ ಅನಿಷ್ಟಗಳ ವಿರುದ್ಧ ಪ್ರತಿಭಟಿಸಲೆಂದೇ ಹುಟ್ಟಿದ್ದರು ಎಂದೆನಿಸುತ್ತದೆ. ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದಾಗಲೆಲ್ಲ ಕಠೋರವಾಗಿ ಖಂಡಿಸುತ್ತಿದ್ದ ಪ.ಮಲ್ಲೇಶ್‌ರ ಮಾತುಗಳನ್ನು ಚಳವಳಿಕಾರರು ಹಾಗೂ ಸರ್ಕಾರದ ಪ್ರತಿನಿಧಿಗಳು ತೂಕವಾಗಿ ಪರಿಗಣಿಸುತ್ತಿದ್ದರು. ಅಷ್ಟೊಂದು ಪಕ್ವತೆ, ವೃತ್ತಿಪರತೆ ಹೋರಾಟದಲ್ಲಿ ಅವರಿಗಿತ್ತು.

ಅನುಸರಿಸಲು ಯೋಗ್ಯರಾದ, ಆದರೆ ಅನುಸರಿಸಲು ಸುಲಭವಲ್ಲದ ವ್ಯಕ್ತಿತ್ವ ಪ.ಮಲ್ಲೇಶ್. ಪ್ರೊ. ಡಿ. ಎಲ್.ನರಸಿಂಹಾಚಾರ್, ಪ್ರೊ.ತೀ.ನಂ.ಶ್ರೀಕಂಠಯ್ಯರಂತಹ ದಿಗ್ಗಜರ ಗರಡಿಯಲ್ಲಿ ಪಳಗಿದ್ದ ಪ.ಮಲ್ಲೇಶ್ ಅವರಿಗಿದ್ದ ಭಾಷಾ ಪ್ರೇಮ ಹಾಗೂ ಪಾಂಡಿತ್ಯ ಗಣನೆಗೆ ತೆಗೆದುಕೊಂಡರೆ, ಒಂದೊಮ್ಮೆ ಅವರೇನಾದರೂ ಬೀದಿ ಹೋರಾಟಗಳಲ್ಲಿ ದಣಿಯದೆ, ಕೋಣೆಯಲ್ಲಿ ಕುಳಿತು ಬರೆಯತೊಡಗಿದ್ದಿದ್ದರೆ ಬಹುಶಃ ಮುಂಚೂಣಿಯ ಸಾಹಿತಿಗಳಲ್ಲಿ ಒಬ್ಬರಾಗಿರುತ್ತಿದ್ದರೇನೋ! ಹಾಗೆಯೇ ರಾಜಕೀಯ ವಲಯದಲ್ಲಿ ಸುದೀರ್ಘ ಒಡನಾಟ ಇಟ್ಟುಕೊಂಡಿದ್ದಾಗ್ಯೂ, ಒಮ್ಮೆ ಚುನಾವಣಾ ಕಣಕ್ಕೆ ಇಳಿದರೂ ಮುಂದೆ ಹೋರಾಟಗಳಿಗಷ್ಟೇ ಸೀಮಿತರಾಗಿ ಉಳಿದುಬಿಟ್ಟರು. ಅವರ ಶಿಷ್ಯರುಗಳು, ಸ್ನೇಹಿತರು ಮುಖ್ಯಮಂತ್ರಿಯ ಗಾದಿಯವರೆಗೂ ಪಯಣಿಸಿದ್ದ ಉದಾಹರಣೆಗಳಿದ್ದರೂ ಯಾವುದೇ ಪ್ರಶಸ್ತಿ, ಪುರಸ್ಕಾರ ಅಥವಾ ರಾಜಕೀಯ ಅಧಿಕಾರದ ಫಲಾಪೇಕ್ಷೆ ಹೊಂದಿರಲಿಲ್ಲ ಎಂಬುದು ಅವರ ಗರಿಮೆಯಾಗಿ ಉಳಿಯಿತು.

ಜೆಪಿ ಚಳವಳಿ, ಗೋಕಾಕ್ ಚಳವಳಿ, ಜಾತಿ ವಿನಾಶದ ಚಳವಳಿ, ಕರ್ನಾಟಕ ನವ ನಿರ್ಮಾಣ ಕ್ರಾಂತಿಯ ಚಳವಳಿ, ‘ಎನ್‌ಟಿಎಂಎಸ್ ಕನ್ನಡ ಶಾಲೆ ಉಳಿಸಿ’, ಕಾವೇರಿ ಉಳಿಸಿ, ರಂಗಾಯಣ ಉಳಿಸಿ, ದಲಿತ- ರೈತ- ಮಹಿಳಾಪರ ಚಳವಳಿಗಳಾದಿಯಾಗಿ ಚಾಮಲಾಪುರದ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣದ ವಿರುದ್ಧ ನಡೆದ ಹೋರಾಟ ಹಾಗೂ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿಯಿಂದ ನಡೆದ ಲೈಂಗಿಕ ಹಗರಣದ ವಿರುದ್ಧ ನಡೆದ ಪ್ರತಿಭಟನೆಯವರೆಗೂ ಪ.ಮಲ್ಲೇಶ್‌ರವರು ಮುಂಚೂಣಿಯಲ್ಲಿ ನಿಂತವರು. ಕನ್ನಡಕ್ಕಾಗಿ ‘ನೃಪತುಂಗ ಕನ್ನಡ ಶಾಲೆ’ಯನ್ನು ಪ್ರಾರಂಭಿಸಿ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮಾಧ್ಯಮ ವಿಜ್ಞಾನ ಕಾಲೇಜನ್ನೂ ಆರಂಭಿಸಿದ್ದರು. ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್, ಕರ್ನಾಟಕ ಬರಹಗಾರರ ಒಕ್ಕೂಟ, ಕರ್ನಾಟಕ ವಿಚಾರವಾದಿ ಒಕ್ಕೂಟ, ಗಾಂಧಿ ವಿಚಾರ ಪರಿಷತ್ ಮೊದಲಾದ ಸಂಸ್ಥೆಗಳ ಬೆಳವಣಿಗೆಯಲ್ಲಿ ಶ್ರೀಯುತರ ಪ್ರಮುಖ ಪಾತ್ರವಿದೆ. ಜೀವಿತಾವಧಿಯಲ್ಲಿ ಅನೇಕ ಚಳವಳಿಗಾರರಿಗೆ ಆಶ್ರಯ ನೀಡಿ ಪೋಷಿಸಿದ್ದ ಪ.ಮಲ್ಲೇಶ್‌ರವರು ಶ್ರೀ ರಾಜಶೇಖರ ಕೋಟಿಯವರ ಸಂಪಾದಕತ್ವದ ಆಂದೋಲನ ದಿನಪತ್ರಿಕೆಯ ಬೆಳವಣಿಗೆಗೆ ನೀಡಿದ ಮಾರ್ಗದರ್ಶನ ಮತ್ತು ಕೊಡುಗೆ ಗಣನೀಯವಾದದ್ದು.

ಕೊನೆಕೊನೆಯಲ್ಲಿ ಪ.ಮಲ್ಲೇಶ್‌ರವರು ಅತೀವ ಚಿಂತಾಕ್ರಾಂತರಾದಂತೆ ಕಂಡುಬಂದಿದ್ದರು. ಅದಕ್ಕೆ ಅವರ ಮಾಗಿದ ಜೀವನ, ಜೀವನ ಸಂಗಾತಿಯ ನಿರ್ಗಮನ ಎಷ್ಟು ಕಾರಣವೋ, ಜೀವಪರ ಕಾರಣಗಳಿಗಾಗಿ ಜನರು ಒಗ್ಗೂಡುತ್ತಿಲ್ಲ ಎಂಬ ಕೊರತೆಯೂ ಕಾಡತೊಡಗಿತ್ತು. ವಿದ್ಯಾರ್ಥಿ ಚಳವಳಿಗಳು ಮಕಾಡೆ ಮಲಗಿರುವುದರ ಬಗ್ಗೆ ಅವರಿಗೆ ಬೇಸರವಿತ್ತು. ರಾಜಿ ಸಂಧಾನಗಳಲ್ಲಿ ಮುಕ್ತಾಯವಾಗುವ ಹೋರಾಟಗಳ ಬಗ್ಗೆ ಸಾತ್ವಿಕ ಸಿಟ್ಟು ಹೊರಹಾಕುತ್ತಿದ್ದರು. ಆದರೂ ಪ್ರಾಮಾಣಿಕ ಹೋರಾಟಗಳು ಹುಟ್ಟಿಕೊಂಡಾಗ ಕೆಲವು ಬಾರಿ ಗಾಂಧಿಯಂತೆ ಮುಂಚೂಣಿಯಲ್ಲಿ ನಿಂತು, ಹಲವು ಬಾರಿ ಮಾವೋನಂತೆ ಮುನ್ನುಗ್ಗುವ ಜನಸಾಗರದ ಬೆನ್ನಿಗೆ ನಿಂತು ಸಂಭ್ರಮಿಸಿದ್ದನ್ನು ಕಂಡಿದ್ದೇನೆ. ಇಂದು ಹೋರಾಟದ ಬಾನಿನಂಗಳದಲ್ಲಿ ಸದಾ ಪ್ರಜ್ವಲಿಸುತ್ತಿದ್ದ ಪ.ಮಲ್ಲೇಶ್ ಎಂಬ ಶುಭ್ರ ಶ್ವೇತ ಬೆಳಕಿನ ಪಂಜು ಉರಿದುರಿದು ತಟ್ಟನೆ ನಂದಿದೆ! ಬೆಳಕಿಗಾಗಿ ಹಾತೊರೆದ ಕಂಗಳಿಗೆ ಮಬ್ಬುಗತ್ತಲು ಆವರಿಸಿದೆ. ಪ.ಮಲ್ಲೇಶ್‌ರ ಹೋರಾಟದ ಕಿಡಿ ಮುಂದೆಯಾದರೂ ಯುವ ಎದೆಗಳಲ್ಲಿ ಹೊತ್ತಿ ಉರಿದಲ್ಲಿ ಸಮಾಜವಾದದ ಹಾಗೂ ಸಂವಿಧಾನದ ಆಶಯಗಳನ್ನು ಜೀವಂತವಾಗಿ ಇರಿಸಿಕೊಳ್ಳಬಹುದಾಗಿದೆ. ಜೊತೆಗೂಡಿ ಹೋರಾಡಲು ಬಹಳಷ್ಟು ಜನ ತಯಾರಿದ್ದರೂ ಅವರಿಗೆ ದಿಗ್ದರ್ಶನ ಮಾಡುವ, ಕಠೋರ ನಿಲುವು, ಗರುಡನ ದೃಷ್ಟಿ ಹಾಗೂ ಪಾರಿವಾಳದಂತಹ ಕೋಮಲ ಹೃದಯದ ಹಿರಿಯನೊಬ್ಬನ ಅಗತ್ಯತೆಯನ್ನು ಪ.ಮಲ್ಲೇಶ್‌ರ ನಿರ್ಗಮನ ಸೃಷ್ಟಿಸಿದೆ. ಈ ನಿರ್ವಾತವನ್ನು ಕಳೆದು, ಮುಂದಿನ ಹೋರಾಟಗಳಲ್ಲಿ ನೀವು ತೊಟ್ಟಿದ್ದ ಖಾದಿಗೆ ಘನತೆ ತಂದು, ಮನೆ ಹಿರಿಯನ ಸ್ಥಾನವನ್ನು ತುಂಬಿಕೊಡಬಲ್ಲ ಪ್ರೇರಣಾ ಶಕ್ತಿಯ ನಿರೀಕ್ಷೆಯಲ್ಲಿದ್ದೇನೆ ಪ್ರೀತಿಯ ಪ. ಮಲ್ಲೇಶ್ ಸರ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...